ಬೆಂಗಳೂರು:
ಎಸ್.ಎಂ ಕೃಷ್ಣ ಅವರ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಅವರು, ‘ನನ್ನ ಹಾಗೂ ಕೃಷ್ಣ ಅವರ ಸಂಬಂಧ ಎಲ್ಲರಿಗೂ ತಳಿದೆ ಇದೆ. ಮಕರ ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಶುಭ ಕೋರಿ, ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅಷ್ಟು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.
ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ದಿನೇಶ್ ಗುಂಡೂರಾವ್ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಹೈ ಕಮಾಂಡ್ ಬಳಿ ಮಾತನಾಡಲಿ. ನನ್ನ ಪ್ರಕಾರ ಅವರ ಸ್ಥಾನ ಇನ್ನು ಖಾಲಿ ಇಲ್ಲ. ಅವರ ರಾಜೀನಾಮೆ ವಿಚಾರವಾಗಿ ಪಕ್ಷದವರು ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಪಕ್ಷದಲ್ಲಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ಹಾಗೂ ಮಠಾಧೀಶರ ನಡುವಣ ಮಾತುಕತೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಅದೇ ಕಾರ್ಯಕ್ರಮಕ್ಕಾಗಿ ಹರಿಹರಕ್ಕೆ ಹೋಗುತ್ತಿದ್ದೇನೆ. ಅವರ ನಡುವೆ ಏನು ಮಾತುಕತೆ ಆಗಿದೆಯೋ ಗೊತ್ತಿಲ್ಲ.
ಯಡಿಯೂರಪ್ಪ ಅವರು ಮಠಾಧೀಶರಿಗೆ ಏನು ಮಾತು ಕೊಟ್ಟಿದ್ದರೋ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರಿಗೆ, ಮಠಾಧೀಶರಿಗೆ ಮಾತು ಕೊಟ್ಟಿರಬಹುದು. ಯಾರು ಯಾವಾಗ ಏನು ಮಾತು ಕೊಟ್ಟಿರುತ್ತಾರೆ ಎಂದು ಗೊತ್ತಿಲ್ಲ. ಆ ವಿಚಾರದಲ್ಲಿ ನಾವ್ಯಾಕೆ ಮಧ್ಯ ಪ್ರವೇಶಿಸಬೇಕು? ಆಂತರಿಕವಾಗಿ ಅವರು ಏನು ಮಾತನಾಡಿಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ಅವರ ನಡುವಿನ ಸಮಸ್ಯೆ ಅವರು ಬಗೆಹರಿಸಿಕೊಳ್ಳುತ್ತಾರೆ. ಹೀಗಾಗಿ ಅದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ಅದರ ಅವಶ್ಯಕತೆ ನನಗೆ ಇಲ್ಲ ಎಂದರು.
Comment here