Publicstory. in


Tumkuru: ಮಾಜಿ ಶಾಸಕ ಸುರೇಶ್ ಗೌಡ ಅವರ ಕೆಲಸಕ್ಕೆ ಜಿಲ್ಲೆಯ ಜನರು ಫಿದಾ ಆಗ ತೊಡಗಿದ್ದಾರೆ.ಕೊರೊನಾ, ಲಾಕ್ ಡೌನ್ ಬಳಿಕ ಜಿಲ್ಲೆಯ ಬಹುತೇಕ ಶಾಸಕರು, ಮಾಜಿ ಶಾಸಕರು ಪ್ರತಿ ದಿನ ಮನೆಯಿಂದ ಈಚೆ ಬರುತ್ತಿಲ್ಲ.‌ ಕೆಲವರು ಬಂದರೂ ಒಂದೆರಡು ದಿ‌ನ ಕ್ಷೇತ್ರದ ಜನರ ನಡುವೆ ಕಾಣಿಸಿಕೊಂಡು ಮತ್ತೇ ಪಟ್ಟಣ ಸೇರಿದ್ದಾರೆ. ಕೆಲವು ಸಮಾಜ ಸೇವಕರು ನಿಧಾನವಾಗಿ ಮರೆಯಾದರು. ಕೆಲವು ಜನಪ್ರತಿನಿಧಿಗಳ ತಮ್ಮ. ಕಾರ್ಯಕರ್ತರನ್ನು ಮುಂದೆ ಬಿಟ್ಟು ಅವರು ಮನೆಯಲ್ಲಿದ್ದಾರೆ.ಒಂದಿಷ್ಟು ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಸುರೇಶಗೌಡರ ಕೆಲಸ ಮಾತ್ರ ಇವರೆಲ್ಲರಿಗಿಂತ ಭಿನ್ನವಾಗಿದೆ.ಕಳೆದ ಒಂದು ತಿಂಗಳಿಂದ ಅವರು ಕ್ಷೇತ್ರ ಬಿಟ್ಟು ಕದಲಿಲ್ಲ. ಒಂದಿಷ್ಟು ಆಹಾರ ಕಿಟ್ ಹಂಚುವ, ಮಾಸ್ಕ್ ಹಂಚುವ ಕೆಲಸವನ್ನು ಎಲ್ಲ ಶಾಸಕರು, ಮಾಜಿ ಶಾಸಕರು ಒಂದಿಷ್ಟು‌ ಮಾಡಿದ್ದಾರೆ. ಆದರೆ ಸುರೇಶ್ ಗೌಡ ಅವರ ಕೆಲಸ ಇಡೀ ಜಿಲ್ಲೆಯ ಜನರು ತಲೆದೂಗುವಂತೆ ಮಾಡಿದೆ.ಪ್ರತಿ ಗ್ರಾಮ ಗ್ರಾಮಗಳಿಗೆ ಭೇಟಿ ನೀಡ್ತಿದ್ದಾರೆ. ಬಡವರು, ಪಡಿತರ ಚೀಟಿ ಇಲ್ಲದವರನ್ನು ಹುಡುಕಿ ಹುಡುಕಿ ಆಹಾರ ಧಾನ್ಯದ ಕಿಟ್ ಹಂಚುವ ಕೆಲಸ ಮಾಡುತ್ತಿದ್ದಾರೆ.
ಈ ಕೆಲಸಕ್ಕಿಂತಲೂ ಅವರು ಗಮನ ಸೆಳೆದಿರುವುದು ಕೊರೊನಾ ಕುರಿತು ಮೂಡಿಸುತ್ತಿರುವ ಜಾಗೃತಿ ಕೆಲಸಕ್ಕಾಗಿ.ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಏನು ಮಾಡಬೇಕು, ಹೇಗಿರಬೇಕು ಎಂಬುದನ್ನು ಪ್ರತಿ ಗ್ರಾಮ, ಗ್ರಾಮಕ್ಕೆ ತೆರಳಿ ಹೇಳುತ್ತಿದ್ದಾರೆ.ಇದಕ್ಕಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಹ ಕ್ಷೇತ್ರಕ್ಕೆ ಕರೆಸಿಕೊಂಡಿದ್ದರು. ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಗೋಪಾಲಯ್ಯ ಹೀಗ ಅನೇಕರ ದಂಡು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದು ಹೋಗಿದೆ.ಲಾಕ್ ಡೌನ್ ಬಳಿಕ ತುಮಕೂರು ಜಿಲ್ಲೆಯ ಯಾವ ಕ್ಷೇತ್ರಕ್ಕೂ ಇಷ್ಟು ದೊಡ್ಡ ಸಂಖ್ಯೆಯ ಮುಖಂಡರು, ಸಚಿವರು ಭೇಟಿ ನೀಡಿಲ್ಲ. ಆದರೆ ಈ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡತೊಡಗಿದ್ದಾರೆ.‌ ಇದಕ್ಕೆ ಸುರೇಶಗೌಡ ‌ಕಾರಣ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.ನಾವು ನೀಡುತ್ತಿರುವ ಸಹಾಯ ಸಹಾಯವೇ ಅಲ್ಲ. ಆರುನೂರು ರಿಂದ ಏಳು ರೂಪಾಯಿ ವೆಚ್ಚದ ಆಹಾರದ ಕಿಟ್ಟನ್ನು ನೀಡುತ್ತಿದ್ದೇವೆ. ಇದನ್ನು ಯಾರೂ ಸಹ ಸಹಾಯ ಎಂದು ಭಾವಿಸಬಾರದು ಎನ್ನುತ್ತಾರೆ ಅವರು.ಉಳ್ಳವರು ಸಹಾಯ ಮಾಡಬೇಕು ಹಾಗೂ ಉಳ್ಳವರು ಯಾವುದೇ ಕಾರಣಕ್ಕೂ ನೆರವನ್ನು ತೆಗೆದುಕೊಳ್ಳಬಾರದು ಎಂದು ನಿರ್ಭಿಡೆಯಿಂದ ಹೇಳುತ್ತಿರುವ ಅವರು ಜನರು ರಕ್ಷಣೆ ಪಡೆಯುವುದು ಹೇಗೆಂಬ ಬಗ್ಗೆಯೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.ಕ್ಷೇತ್ರದ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವ ಕೆಲಸವನ್ನು ಮಾಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಬಳಸಿ ಕೊರೊನಾದಿಂದ ದೂರ ಇರಬೇಕು. ಆದಷ್ಟು ಮನೆಯಲ್ಲಿ ಆಚೆ ಬರಬಾರದು ಎಂದು ಧೈರ್ಯ ತುಂಬುತ್ತಿದ್ದಾರೆ.ಗ್ರಾಮ ಗ್ರಾಮಗಳಲ್ಲೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೆಲಸವನ್ನು ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸುಲಭವಾಗಿ ತೆಗೆದುಕೊಳ್ಳಬಾರದು ಎಂದು ಮನವೊಲಿಸುತ್ತಿದ್ದಾರೆ.ರೈತರು ಬೆಳೆದಿರುವ ತರಕಾರಿ ಹಣ್ಣು ಮತ್ತಿತರ ಸಾಮಗ್ರಿಗಳನ್ನು ಖರೀದಿಸುವ ಕೆಲಸವನ್ನು ಸಹ ಅವರು ಮಾಡುತ್ತಿದ್ದಾರೆ. ಹಾಗೆ ಖರೀದಿ ಮಾಡಿದ ಸಾಮಗ್ರಿಗಳನ್ನು ಕ್ಷೇತ್ರದ ಬಡ ಜನರಿಗೆ ವಿತರಿಸುತ್ತಿದ್ದಾರೆ.ಈ ಕೆಲಸವೇ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮ ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಸಂಸದರು ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆಗಳನ್ನು ಆಯಾ ಕ್ಷೇತ್ರದ ಜನರು ಸಾಮಾಜಿಕ ಮಾಧ್ಯಗಳಲ್ಲಿ ಕೇಳತೊಡಗಿದ್ದಾರೆ.ಈ ಸಂಕಷ್ಟ ಕಾಲದಲ್ಲಿ ಜನಪ್ರತಿನಿಧಿಗಳು ಮನೆ ಮನಕ್ಕೆ ಬರಬೇಕು. ಗ್ರಾಮಗಳಲ್ಲಿ ಬಿಡಾರ ಹೊಡಬೇಕು.ಆ ಮೂಲಕ ಗ್ರಾಮದ ಸಂಕಷ್ಟವನ್ನು ಅರಿಯಬೇಕು ಎಂಬುದು ಜನರ ಮಾತಾಗಿದೆ.


ತೋರಿಕೆಗಾಗಿ, ರಾಜಕಾರಣಕ್ಕಾಗಿ ಈ ಕೆಲಸವನ್ನು ಯಾರೂ ಮಾಡಬಾರದು. ಇದು ರಾಜಕಾರಣದ ಅಥವಾ ವೋಟ್ ಬ್ಯಾಂಕ್ ಕೆಲಸವಲ್ಲ. ಜನರಿಗೆ ನಾವು ಮಾಡಬೇಕಾದ ಕರ್ತವ್ಯ ಎಂದು ಸುರೇಶ್ ಗೌಡ ತಿಳಿಸಿದರು.


ಗ್ರಾಮೀಣ ಭಾಗದ ಜನರು ರೋಗವನ್ನು ನಿರ್ಲಕ್ಷಿಸುವುದು ಹೆಚ್ಚು. ಇದರಿಂದ ಮುಂದೆ ಅಪಾಯಕ್ಕೆ ಸಿಗ್ತಾರೆ. ಈ ಕಾರಣದಿಂದಲೇ ಅವರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎನ್ನುತ್ತಾರೆ ಅವರು.ಕೆಲವರು ಸುರೇಶ್ ಗೌಡ ಇದನ್ನು ರಾಜಕಾರಣಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಆದರೆ ಇದು ರಾಜಕಾರಣಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಇಂಥ ಕೆಲಸಗಳು ಪ್ರತಿ ಕ್ಷೇತ್ರಗಳಲ್ಲಿ ಆಗಬೇಕು ಹಾಗಾದಾಗ ಮಾತ್ರ ಜಿಲ್ಲೆಯ ಜನರು ಸಂಕಷ್ಟದಿಂದ ಪಾರಾಗಬಹುದು ಎಂದರು.ನಾನು ಶಾಸಕನಾಗಿದ್ದಾಗ ಕ್ಷೇತ್ರದ‌ ನಲವತ್ತು ಸಾವಿರ ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮ್ ಒದಗಿಸಿದ್ದೇನೆ. ಹೀಗಾಗಿ ತೋಟಗಾರಿಕೆ ಹುಲುಸಾಗಿದೆ. ಎಲ್ಲ ಹೋಬಳಿಗಳಲ್ಲಿ ಕೋಟ್ಯಂತರ ವೆಚ್ಚ ಮಾಡಿ ಶಾಲೆಗಳನ್ನು ಕಟ್ಟಿಸಿದ್ದೇನೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿದೆ. ನನಗೆ ಜನರ ಹಿತ ಮುಖ್ಯ ಹೊರತು, ಬೇರೇನೂ ಇಲ್ಲ ಎಂದು ಅವರು ಹೇಳಿದರು.ನಮ್ಮ ಕೆಲಸವನ್ನು ನಾವು ಮಾಡಬೇಕು. ಜನರ ಕೆಲಸ ಎಂದರೆ ಜನಾರ್ದನ ಕೆಲಸ ಅಲ್ಲವೇ ಎಂದು ಮಾತಿಗೆ ವಿರಾಮ ಹಾಕಿ‌ ಮತ್ತೊಂದು‌ ಗ್ರಾಮದತ್ತ ಹೊರಟರು.

Comment here