ದೇವರಹಳ್ಳಿ ಧನಂಜಯ
ಮಲೆಕಾನು ತಬ್ಬಿರುವ
ಕಾಡು ಮಲ್ಲಿಗೆ ಘಮವೆ
ಕಾಡು ದಾಟಿ ಭಾವ ಮೀಟಿ
ಜಗದಗಲ ಹಬ್ಬಿದೆ ಪರಿಮಳವೆ
ಪರ್ಫ್ಯ್ಂ ಹಾಕಲಾಗುತ್ತಿದೆ
ನಿನ್ನ ಘಮಲು ಮಾಸಲೆಂದು
ಫಲಿಸದ ಪ್ರಯತ್ನ
ಕತ್ತಲಾದಂತೆ ಕಗಗಾನದೊಟ್ಟಿಗೆ
ನಿನ್ನ ಪುನುಗು ಗಾಳಿಗಂಧ
ಕುಪ್ಪಳಿಯ ವನರಾಶಿ ನಡುವೆ
ಬಂಡೆ ಇಬ್ಬನಿಯ ಪುಳಕಕ್ಕೆ
ಕಡೆದು ರಸರುಷಿ ಕಣ್ಣಿನ ದಿವ್ಯ ದೃಷ್ಠಿ
ಕೊಟ್ಟ ನವ ನೋಟದ ಕಣ್ಣು ಕೀಳಲು ಹೆಣಗಾಟ ನಡೆದಿದೆ
ಎಚ್ಚೆತ್ತ ಚಿತ್ತದಲಿ ಕಾಣಿರಿ ಸಚ್ಚಿದಾನಂದ
ಎಂದ ನಿನ್ನ ನಾಲಗೆಗೆ ನೊಸಲು ಕಟ್ಟಿ
ನಿನ್ನ ವಿವೇಕದ ಯುವಪಡೆ ನಿನ್ನ ವಿರುದ್ಧವೇ ಸಿದ್ದವಾಗಿ
ಭಾರತ ಜನನಿಗೆ ಶುರುವಾಗಿದೆ ಧರ್ಮಸಂಕಟ
ಕೋಟ್ಯಾನು ಕಣ್ಣುಗಳಿಗೆ
ನಿನ್ನರಿವ ಚಸ್ಮ ಬೇಕಿದೆ
ಕಾಯುತ್ತಿದ್ದೇವೆ ಅರಿವಾಗಿ ಗುರುವಾಗಿ ಮತ್ತೆ ಬಾ ಯುಗದ ಕವಿಯೆ.
Comment here