Friday, March 29, 2024
Google search engine
Homeಪೊಲಿಟಿಕಲ್ಮಾಜಿ ಶಾಸಕರಿಗೆ ಶಾಸಕ ಗೌರಿಶಂಕರ್ ಪತ್ರ, ಕೇಳಿದ್ದಾರೆ ಹಲವು ಪ್ರಶ್ನೆ

ಮಾಜಿ ಶಾಸಕರಿಗೆ ಶಾಸಕ ಗೌರಿಶಂಕರ್ ಪತ್ರ, ಕೇಳಿದ್ದಾರೆ ಹಲವು ಪ್ರಶ್ನೆ

ತುಮಕೂರು ತಾಲ್ಲೂಕಿನಲ್ಲಿ ಹೊನ್ನೇನಹಳ್ಳಿಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಹೊಡೆದಾಟ ಈಗ ಅಪ್ಪಟ ರಾಜಕೀಯ ಬಣ್ಣ ಬಳಿದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಬಿ.ಸುರೇಶಗೌಡ ಎರಡು ಪತ್ರಗಳನ್ನು ಬರೆದಿದ್ದಾರೆ. ಈ ಪತ್ರಗಳಿಗೆ ಅಷ್ಟೇ ಗಟ್ಟಿಯಾಗಿ ಉತ್ತರಿಸಿರುವ ಶಾಸಕ ಬಿ.ಸಿ‌.ಗೌರಿಶಂಕರ್, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ರ ಕೆಳಗಿನಂತಿದೆ.

ಸನ್ಮಾನ್ಯ ಮಾಜಿ ಶಾಸಕರಾದ ಬಿ. ಸುರೇಶ್ ಗೌಡರಿಗೆ ನಾನು ಮೊದಲನೆಯದಾಗಿ ಗೌರವಪೂರ್ವಕ ವಾದಂತಹ ವಂದನೆಗಳನ್ನು ಹೇಳುತ್ತೇನೆ. ಯಾಕೆಂದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮಾಡಿ ಕೊನೆಯಲ್ಲಿ ನನ್ನನ್ನು ಕೆಲ ವಿಷಯಗಳಿಗೆ ವಿನಂತಿಸಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದಗಳು. ಈಗಲಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ & ಸೌಜನ್ಯ ಬಂದಿರುವುದಕ್ಕೆ ಸಂತೋಷವಾಗುತ್ತಿದೆ.

ನನ್ನ ಮೇಲೆ ಆಧಾರರಹಿತ ಆರೋಪ ಮಾಡುವ ನೀವು ಮೊದಲು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ.
ಕಾರಣವಿಷ್ಟೇ ನಿಮ್ಮನ್ನು ಕೂಡಾ ಈ ಕ್ಷೇತ್ರದ ಜನ ಆಯ್ಕೆ ಮಾಡಿ ಶಾಸಕರನ್ನಾಗಿ ಮಾಡಿ ಅಧಿಕಾರ ನೀಡಿದ್ದು ಬರೋಬ್ಬರಿ 10 ವರ್ಷಗಳ ಕಾಲ.

ಒಬ್ಬ ತತ್ವಜ್ಞಾನಿ ಹೇಳುತ್ತಾರೆ “ದುರುದ್ದೇಶದ ರಾಜಕಾರಣಿ ಕೊನೆ ಹಂತದಲ್ಲಿ ಶರಣಾಗತಿಯಾಗುತ್ತಾನೆ”. ಎಂದು
ಈಗ ಅದು ನಿಮ್ಮ ವಿಷಯದಲ್ಲಿ ಸಾಭೀತಾಗಿದೆ.

ಮಾಜಿ ಶಾಸಕರೇ, ಈಗಾಗಲೇ ನಾನು ಅಧಿಕಾರ ವಹಿಸಿಕೊಂಡು ಎರಡು ವರ್ಷ ಮುಗಿದಿದೆ. ಇಲ್ಲಿಯವರೆವಿಗೂ ಪದೇಪದೇ ಪ್ರತಿ ವಿಷಯದಲ್ಲೂ ಆರೋಗ್ಯಕರ ಚರ್ಚೆ ಮಾಡದೆ, ಅಭಿವೃದ್ಧಿ ಚರ್ಚೆ ಮಾಡದೇ, ಸಲಹೆ ನೀಡದೇ ಯಾವಾಗಲೂ ನನ್ನ ಮೇಲೆ ಇಲ್ಲಸಲ್ಲದ ಆಧಾರರಹಿತ ಆರೋಪ ಮಾಡುತ್ತಾ, ನಿಮ್ಮ ಅಧಿಕಾರದ ದಾಹಕ್ಕೆ ಜನಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯವೇ ಆಗಿದೆ. ನೀವು ಮಾಡಿರುವ ಷಡ್ಯಂತ್ರ ಒಂದೋ ಎರಡೋ ..?

ನಾನು ಮೊದಲನೆಯದಾಗಿ ಸನ್ಮಾನ್ಯ ಮಾಜಿ ಶಾಸಕರಿಗೆ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ಹೇಳಿ ಕೊಡಬೇಕಾಗಿದೆ. ಇಲ್ಲಿವರೆಗೂ ತಿಳಿದುಕೊಂಡಿರುವುದು ಪ್ರಜಾಪ್ರಭುತ್ವವೆಂದರೆ “ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ” ಎಂಬುದು ಇದು ಕೇವಲ ಚುನಾವಣಾ ಆಯ್ಕೆ ಸಂಧರ್ಭದಲ್ಲಷ್ಚೇ, ಆದರೆ ನಿಜವಾಗಿಯೂ ಪ್ರಜಾಪ್ರಭುತ್ವವೆಂದರೆ “ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್” ಅವರ ದೃಷ್ಟಿಯಲ್ಲಿ “ರಕ್ತರಹಿತ ವಾದಂತಹ ಸಾಮಾಜಿಕ ಕ್ರಾಂತಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ” ನಿಮಗೆ ಈ ಪದಗಳು ಅರ್ಥವಾಗೊಲ್ಲಾ ಯಾಕೆಂದರೇ, ನೀವು ಮಾಡಿದ್ದೆಲ್ಲಾ ರಕ್ತಸಹಿತ ರಾಜಕಾರಣವನ್ನೇ.. ನೀವು ಬಯಸಿದ್ದು ಮುಗ್ದ ಜನಗಳ ರಕ್ತವನ್ನೆ, ಅದಕ್ಕೆ ಉದಾಹರಣೆ ಹೊನ್ನೇನಳ್ಳಿ ಘಟನೆ ಇನ್ನೂ ಅನೇಕ ಇದೆ ಸಮಯ ಬಂದಾಗ ಹೇಳುತ್ತೇನೆ.

ನಿಮ್ಮ ಪ್ರತಿಯೊಂದು ಹೆಜ್ಜೆಯೂ ಕೂಡಾ ದ್ವೇಷ, ಪ್ರಚೋದನೆಗೆ ಕುಮ್ಮಕ್ಕೂ ನೀಡುವುದೇ ಆಗಿದೆ. ಕ್ಷೇತ್ರದ ಸ್ವಾಸ್ಥ್ಯ ಕೆಡಿಸುವುದೇ ಆಗಿದೆ. ಪಟ್ಟಿ ಮಾಡುತ್ತಾ ಹೋಗುತ್ತೇನೆ ನೀವೇ ನಿಮ್ಮ ವಿಡಿಯೋದಲ್ಲಿ ಹೇಳಿರುವಂತೆ ರಾಜಕಾರಣದಿಂದ ದೂರ ಉಳಿಯಲು ಸಿದ್ಧರಾಗಿ..

1. ಈ ಹಿಂದೆ ಮಂಚಕಲ್ ಕುಪ್ಪೆಯ ಆನಂದ ಬಿಹಾರಿ ಹೋಟೆಲ್ ನಲ್ಲಿ ತಿಂದ ಊಟದ ಹಣವನ್ನ ನೀಡಲಾರದೇ ಮಾಲಿಕನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಗಳನ್ನು ಆ ಕೇಸ್ ನಿಂದ ಬಿಡಿಸಿ ನಿಮ್ಮ ಜೊತೆ ಇಟ್ಟಕೊಂಡು ರೌಡಿಸಂ & ಜೂಜಿನ ಹಡ್ಡೆ ನಡೆಸುತ್ತಿರುವವರು ಯಾರು…?

2. ಭಾರತ ದೇಶ ಕಂಡಂತಹ ಶ್ರೇಷ್ಠ ರಾಜಕೀಯ ಮುತ್ಸದಿ ಮತ್ತು ಮಾಜಿ ಪ್ರಧಾನಿಗಳು ಆದಂತಹ ದೇವೇಗೌಡರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೀವು ಹಳ್ಳಿಯಲ್ಲಿ ಭಾಷಣ ಮಾಡುತ್ತಾ, ಮಾಜಿ ಪ್ರಧಾನಿಯ ಕೊರಳ ಪಟ್ಟಿಗೆ ಕೈಹಾಕಿ, ದೊಣ್ಣೆ ಹಿಡಿದು ಊರ ಒಳಗೆ ಬರದಂತೆ ನೋಡಿಕೊಳ್ಳಿ, ಎಂದು ಮಾಡಿದ ಭಾಷಣದ ತುಣುಕು ನಿಮ್ಮ ಸಂಸ್ಕೃತಿ ಮತ್ತು ನಿಮ್ಮ ಮನಸ್ಥಿತಿಯನ್ನು ಹೇಳುತ್ತದೆ.
ಇನ್ನೂ ಹ್ಯಾಂಡ್ ಪೋಸ್ಟ್ ವಡ್ಡರಹಳ್ಳಿ ಜಾತ್ರೆಯಲ್ಲಿ ನೀವು ವೇದಿಕೆ ಮೇಲೆ ನನ್ನ ಬಗ್ಗೆ ಮಾತನಾಡುವಾಗ ಶಾಸಕರನ್ನ ಪ್ರಶ್ನೆ ಮಾಡುವಾಗ ಯಾವ ರೀತಿ ಪದಬಳಕೆ ಮಾಡಬೇಕೆಂಬ ಅರಿವು, ಕನಿಷ್ಟ ಜ್ಞಾನ ನಿಮಗಿರಲಿಲ್ಲವೇ….?

3. ನನಗೆ ರಾಜಕಾರಣ ಮತ್ತು ಅಧಿಕಾರಿ ವರ್ಗಗಳಲ್ಲಿ ಹೀಗೆ ನಡೆದುಕೊಳ್ಳಬೇಕೆಂದು ಪಾಠ ಮಾಡುವ ಮೊದಲು, ನಿಮ್ಮಯ ಹೀನ ಸಂಸ್ಕೃತಿಯನ್ನು, ಹೀನ ಭಾಷೆಯನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಈ ಹಿಂದೆ ಒಬ್ಬ ಪೊಲೀಸ್ ಪೇದೆಯನ್ನು ಅವರ ಜಾತಿಯ ಹೆಸರನ್ನಿಡಿದು ಕುರುಬ ಪೊಲೀಸ್ ಎಂದಿದ್ದು ನೆನಪಿದೆಯಾ..? ಒಂದು ಸಮುದಾಯಕ್ಕೆ ನೀವು ತೋರಿದ ಅಗೌರವವನ್ನ ಆ ಸಮುದಾಯ ಜೀರ್ಣಿಸಿ ಕೊಳ್ಳಲಾಗಲಿಲ್ಲ. ಹೆತ್ತೇನಹಳ್ಳಿ ಜಾತ್ರಾ ಸಂಧರ್ಭದಲ್ಲಿ ಒಬ್ಬ ಮಹಿಳಾ AC ಅಧಿಕಾರಿಯ ಜೊತೆ ಹೇಗೆ ವರ್ತಿಸಿದ್ದೀರಿ ಹೇಳಿ.? ಆದರೆ ನಾ ಅಧಿಕಾರಿಗೆ ತಾಕೀತು ಮಾಡಿದ್ದು ಧ್ವನಿ ಇಲ್ಲದ ಮಹಿಳೆ & ದಲಿತ ಸಮಾಜದ ನ್ಯಾಯಕ್ಕಾಗಿ ಎಂಬುದು ನೆನಪಿರಲಿ.

4. ಮೊನ್ನೆ ಮೊನ್ನೆ ತಾನೆ ನೀವು ಕೊರೋನಾ ಸೋಂಕಿತ ತುಮಕೂರು ವ್ಯಕ್ತಿಯನ್ನು ನನ್ನ ಅಧಿಕಾರ ಬಳಸಿ ನಾಗವಲ್ಲಿ ಕುಂಬಿಪಾಳ್ಯದಲ್ಲಿ ಶವಸಂಸ್ಕಾರ ಮಾಡಿಸಿದ್ದೇನೆಂದು ಆರೋಪಿಸಿ ಅದರಲ್ಲೂ ವಿಫಲರಾಗಿದ್ದೀರಿ. ನಿಮ್ಮ ಪಕ್ಷದ ಉಸ್ತುವಾರಿ ಸಚಿವರೇ ನಿಮಗೆ ಛೀಮಾರಿ ಹಾಕಿದ್ದನ್ನ ಮರೆತಿದ್ದೀರಾ..?
ನಿಮಗೆ ಅಧಿಕಾರದ ಹಪಾಪಿತನ ಇದ್ದರೆ ಬಹಿರಂಗವಾಗಿ ಹೇಳಿ..?
“ನಾನು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ ನನಗೆ ನನ್ನ ಭವಿಷ್ಯ ಮುಖ್ಯ ನನ್ನ ಕಾರ್ಯಕರ್ತರೇನಾದರೇನು.? ಜನಗಳೇನಾದರೇನು.? ಎಂದು” ನಾನೆ ಅಧಿಕಾರ ಬಿಟ್ಟುಕೊಡುತ್ತೇನೆ.

5. ನೀವೇ ಮಾಡಿಸಿಕೊಂಡ ಟಿವಿ ಸಂದರ್ಶನದಲ್ಲಿ ಅಧಿಕಾರಕ್ಕೆ ಅಂದುಕೊಂಡವನಲ್ಲಾ ಎಂದು ದೊಡ್ಡದಾಗಿ ಹೇಳುತ್ತೀರಲ್ಲಾ ನಿಮಗೆ ಈ ಮಾತು ಹೇಳುವುದಕ್ಕೆ ನೈತಿಕತೆ ಇದೇಯಾ.? ಅಧಿಕಾರದ ಹುಚ್ಚು ನಿಮಗೆ, ಹಾಗಾಗಿ ನಿಮ್ಮ ಹುಚ್ಚು ಹೆಚ್ಚಾಗಿ ಈ ರೀತಿ ವರ್ತನೆ ಮಾಡುತ್ತಿದ್ದೀರಾ..? ಹೊನ್ನೇನಳ್ಳಿ ಘಟನೆಯಲ್ಲಿ ಸೌಜನ್ಯಕ್ಕಾದರೂ ಹೆಣ್ಣುಮಗಳ ಪರವಾಗಿ ಒಂದು ವಾಕ್ಯವನ್ನು ಹೇಳಿಲಿಲ್ಲಾ. ದಲಿತರ ಪರವಾಗಿ ಒಂದು ಮಾತಿರಲಿಲ್ಲಾ. ನಿಮಗೆ ನಿಮ್ಮ ಸ್ವಾರ್ಥ ಮುಖ್ಯ. ನೀವು ಹಸುವಿನ ಮುಖವಾಡ ತೊಟ್ಟು ಹುಲಿಯ ಕ್ರೌರ್ಯವನ್ನು ಪ್ರದರ್ಶಿಸುತ್ತಿದ್ದೀರಾ. ಇದರಲ್ಲೇ ಗೊತ್ತಾಗುತ್ತದೆ ನೀವೂ ಮಹಿಳಾ ವಿರೋಧಿ, ದಲಿತ ವಿರೋಧಿ & ಸಮಯಸಾಧಕ ರಾಜಕಾರಣಿ ಎಂದು.

6. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಒಂದು ಸೋತಂತಹ ಕ್ಷೇತ್ರದಲ್ಲಿ ಯಾವ ರಾಜಕಾರಣಿಗಳು ಕೂಡಾ ನಿಮ್ಮಷ್ಟು ಹೀನ ಮಟ್ಟಕ್ಕೆ ಇಳಿದಿಲ್ಲಾ. ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಒಂದು ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದಿಂದ ಹಣ ತರುವುದೇ ದೊಡ್ಡ ಕಾರ್ಯ, ನಾನು ತಂದ ಹಣವನ್ನು ನೀವು ನಿಮ್ಮ ಸರ್ಕಾರದ ಮೇಲೆ ಒತ್ತಡ ತಂದು ಏನು ಮಾಡಿದ್ದೀರಾ ಎಂದು ನಿಮಗೆ ನೆನಪಾಗುತ್ತಿಲ್ಲವೇ..? ನೀವೂ ಪ್ರಜಾಪ್ರಭುತ್ವದ ವ್ಯಾಖ್ಯಾನದ ಪಾಠ ನನಗೆ ಹೇಳುತ್ತಿರಲ್ಲಾ ನಿಮಗೆ ಮಾನವೀಯತೆಯೇ ಇಲ್ಲವೇ..?

7. ಜಾತಿ-ಜಾತಿ ಮಧ್ಯೆ ವ್ಯಕ್ತಿಗಳ ಮಧ್ಯೆ ಸಂಘರ್ಷವನ್ನು ಸೃಷ್ಟಿಸಿ ರಾಜಕಾರಣ ಮಾಡುವ ನೀವು ನನ್ನ ಮೇಲೆ ಆರೋಪ ಮಾಡುತ್ತೀರಾ..? ನಿಮ್ಮ ಕಾಲದಲ್ಲಿ ಎಷ್ಟು ಜನ ಅಮಾಯಕರ ಮೇಲೆ & ಹೋರಾಟಗಾರರ ಮೇಲೆ ಪೊಲೀಸ್ ಇಲಾಖೆ ಮೇಲೆ ಒತ್ತಡ ತಂದು ರೌಡಿಶೀಟರ್ ಮಾಡಿಸಿದ್ದೀರಾ ನೆನಪಿಲ್ಲವೇ..? ಏನೂ ಕಾಣದ ಮಂಗನ ರೀತಿ ವರ್ತಿಸಿ ನಮ್ಮನ್ನು ಮಂಗ ಮಾಡಬೇಡಿ ನಿಮ್ಮ ಕಾಲದಲ್ಲಿ ಮಾಡಿದ್ದೆ ದ್ವೇಷದ ರಾಜಕಾರಣ. ನಿಮಗೆ ವ್ಯಕ್ತಿಗೌರವ ಇದೆಯಾ ಸಮುದಾಯ ಗೌರವ ಇದೇಯಾ..? ಇದ್ಯಾವುದೂ ಇಲ್ಲಾ.

ಜನಗಳ ಮಧ್ಯೆ ರಾಜಕಾರಣದ ವಿಷಬೀಜ ಬಿತ್ತಿ ಆದರಿಂದ ಫಲ ನಿರೀಕ್ಷಿಸಬೇಡಿ, ನಿಮ್ಮ ಬಲ ಪ್ರದರ್ಶನ, ಬುದ್ಧಿ ಪ್ರದರ್ಶನ ನನ್ನ ವಿರುದ್ಧ ಮಾಡಿ. ಅದು ಬಿಟ್ಟು ಜನಸಾಮಾನ್ಯರ ಮೇಲೆ ಬೇಡಾ ನೀವು ಮಾಡುತ್ತಿರುವುದೇ ಹೇಸಿಗೆ ಹುಟ್ಟಿಸೋ ಕೆಲಸ ಗೌಡ್ರೇ. ನಾನು ಈ ಕ್ಷೇತ್ರದ ಶಾಸಕ ಎನ್ನುವುದಕ್ಕಿಂತ ಹೆಚ್ಚಾಗಿ ಮನೆಮಗ ಎನ್ನುವುದರಲ್ಲಿ ಹೆಮ್ಮೆ ಇದೆ .. ನೀವು ಮಾಡುವುದೆಲ್ಲಾ ಮಾಡಿ ಎಲ್ಲದಕ್ಕೂ ಸಿದ್ಧ ನಾನು. ನನ್ನ ಜನಗಳಿಗೆ ತೊಂದರೆಯಾದರೇ ಜನಗಳೇ ಉತ್ತರಿಸುತ್ತಾರೆ. ಕೊನೆಯದಾಗಿ ಮಾಜಿಯವರೇ ಕ್ಷೇತ್ರ ನೆಮ್ಮದಿಯಾಗಿರಲು ಬಿಡಿ. ಇದು ನಿಮಗೆ ಶೋಭೆಯಲ್ಲಾ.

ವಂದನೆಗಳೊಂದಿಗೆ,

ಇಂತಿ,
ಡಿ. ಸಿ. ಗೌರಿಶಂಕರ್
ಶಾಸಕರು
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ.

RELATED ARTICLES

2 COMMENTS

  1. ರಾಜಕೀಯ ಪಕ್ಕಕಿಟ್ಟು ಜಿಲ್ಲೆಯ ಅಭಿವೃದ್ಧಿ ಮಾಡಿ, ನಿಮ್ಮಗಳ ಸ್ವಾರ್ಥಕೋಸ್ಕರ ಜಿಲ್ಲೆಯ ಜನರನ್ನು ಬಲಿಕೊಡಬೇಡಿ

  2. ನೂರನೋದಿ ನೂರಕೇರಿದರೇನು ಫಲ, ಆಸೆ ಅರಿಯದು ರೋಷ ಬಿಡದು, ಮಜ್ಜನಕ್ಕೆರೆದು ಫಲವೇನು..? ಮಾತಿನಂತೆ ಮನವಿಲ್ಲದವರ ಜಾತಿ ಡೊಂಬರವ ನೋಡಿ ನಗುವ ನಮ್ಮ ಕೂಡಲ ಸಂಗಮದೇವಾ..

    ಆಡೋ ಮಾತು ಒಂದು ಮಾಡೋ ಕೆಲಸ ಇನ್ನೊಂದು ಇರುವ ಮನಸ್ಥಿತಿ ಕೆಲವರದ್ದು ಅವರೇ ಬುದ್ದಿವಂತರೆಂದು ಕೊಂಡಾಗ, ಇಂತಹ ಉತ್ತರಗಳು ಎಚ್ಚರಿಕೆಯಾಗುತ್ತವೆ.
    “ನಾನು ಶ್ರೇಷ್ಟ ಇದು ಒಳ್ಳೆಯದು ನಾನೊಬ್ಬನೇ ಶ್ರೇಷ್ಟ ಎಂಬ ಮನಸ್ಸುಗಳು ಸಮಾಜಕ್ಕೆ ಆಘಾತಕಾರಿ” ಎಂಬ ನುಡಿ ನೆನಪಲ್ಲಿದ್ದರೆ ಒಳಿತು.

Leave a Reply to ಮಂಜುನಾಥ್ Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?