Friday, March 29, 2024
Google search engine
Homeಜನಮನಮುಕ್ಕಾಲು ಎಕೆರೆಯಲ್ಲಿ ಏನ್ನೆಲ್ಲ‌ ಮಾಡಬಹುದು: ನೋಡಲು ದಂಜ್ಯಾನಾಯ್ಕರ ತೋಟಕ್ಕೆ ಬನ್ನಿ

ಮುಕ್ಕಾಲು ಎಕೆರೆಯಲ್ಲಿ ಏನ್ನೆಲ್ಲ‌ ಮಾಡಬಹುದು: ನೋಡಲು ದಂಜ್ಯಾನಾಯ್ಕರ ತೋಟಕ್ಕೆ ಬನ್ನಿ

ರಂಗನಕೆರೆ ಮಹೇಶ್


ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಯಾರಿಗೂ ಬೇಡವಾದ ಕೆಲಸ. ಕೃಷಿಯೆಂದರೆ ಧೂಳನ್ನು ತಲೆ ಮೇಲೆ ಸುರಿದು ಕೊಳ್ಳಬೇಕು.

ಕಷ್ಟಪಟ್ಟು ಬೆಳೆ ಬೆಳೆದರೆ ಬೆಲೆ ಸಮಸ್ಯೆ.ಇವೆಲ್ಲಾ ಕಂಡು ಇಂದಿನ ಯುವಕರು ಕೃಷಿಯಿಂದ ವಿಮುಕ್ತಿ ಪಡೆದು ಪಟ್ಟಣದತ್ತ ಹೋಗುತ್ತಿದ್ದಾರೆ.

ಇಂತಹ ಕೃಷಿಯ ಸಂಕಷ್ಟಗಳ ನಡುವೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೋಮನಹಳ್ಳಿ ಗ್ರಾಮದ ದಂಜ್ಯಾನಾಯ್ಕ ವಯಸ್ಸು 70 ದಾಟಿದ್ದರೂ ಕೃಷಿಯಲ್ಲಿ ಉತ್ತಮ ಭವಿಷ್ಯವಿದೆ ಎಂಬುದನ್ನು ತೋರಿಸಿ ಇಂದಿನ ಯುವಕರಿಗೆ ಮಾದರಿಯಾಗಿರುವುದರ ಜತೆ ಕೃಷಿ ಕಷ್ಟದ ಜೀವನವಲ್ಲ ಅದೊಂದು ಬದುಕುವ ಕಲೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಅದರಲ್ಲೇನಿದೆ ವಿಶೇಷ ಇದೆ ಬಿಡಿ ಎಂದು ಕೆಲವರು ಹೇಳಬಹುದು. ದಂಜ್ಯಾನಾಯ್ಕ ಹುಟ್ಟು ಕೃಷಿಕನಲ್ಲ. ಈತ ತಂದೆಯ ಐದಾರು ಮಂದಿ ಮಕ್ಕಳಲ್ಲಿ ಇವರು ಒಬ್ಬರು.ಬಹು ಮಂದಿ ಗ್ರಾಮೀಣ ಭಾಗದ ಜನರು ಕೆಲಸಕ್ಕೆ ಬೆಂಗಳೂರಿಗೆ ಹೋಗುವಂತೆ ಇವರೂ ಬದುಕು ಹರಸಿ ಬೆಂಗಳೂರು ನಗರಕ್ಕೆ ಹೋಗಿ ಕೃಷಿ ಬದುಕನ್ನು ಅರಿತು ಯಶಸ್ವಿ ರೈತನಾಗಿರುವುದು ಮಾತ್ರ ವಿಶೇಷ.

ನಗರದ ಹೊರವಲಯದಲ್ಲಿ ಕೃಷಿ ಭೂಮಿ ಹೊಂದಿರುವ ರೈತರ ಬಳಿ ಹಲವಾರು ವರ್ಷ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಮತ್ತೆ ಹಿಂದಿರುಗಿ ತನ್ನ ಗ್ರಾಮಕ್ಕೆ ಬಂದು ಕೃಷಿಯಲ್ಲೂ ವರಮಾನವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದಂಜ್ಯಾನಾಯ್ಕ ಅವರಿಗೆ ತಂದೆಯಿಂದ ಬಂದ ಮುಕ್ಕಾಲು ಎಕರೆ ಜಮೀನು ಇದೆ. ಮುಕ್ಕಾಲು ಎಕರೆ ಜಮೀನಿನಲ್ಲಿ ಕೃಷಿ ಮಾಡಿದರೆ ಜೀವನ ನಡೆಸಬಹುದು ಎಂಬುದನ್ನು ತೋರಿಸಿದ್ದಾರೆ.

ಈತನ ಕೃಷಿಯ ವಿಧಾನ ಹೇಗಿದೆಯೆಂದರೆ ಮುಕ್ಕಾಲು ಎಕೆರೆ ಜಮೀನಿನಲ್ಲಿ ಯಾವುದೇ ಸ್ಥಳವನ್ನು ವ್ಯರ್ಥ ಮಾಡಿಲ್ಲ.24 ತೆಂಗಿನ ಮರಗಳು, 200 ಅಡಿಕೆ ಗಿಡಗಳು(ಇನ್ನೂ ಫಸಲಿಗೆ ಬಂದಿಲ್ಲ), 100 ಬಾಳೆ ದೀರ್ಘಾವಧಿ ಲಾಭ ಪಡೆಯುವ ಬೆಳೆಗಳು ಇನ್ನೂ ತಕ್ಷಣವೇ ಹಣ ನೋಡಲು ತರಕಾರಿ ಸೊಪ್ಪು ಬೆಳೆಗಳನ್ನಾಗಿ ಮಾರ್ಪಡಿಸಿ ಕೊಂಡಿದ್ದಾರೆ.

ಕೃಷಿ ಕೆಲಸಕ್ಕೆ ತೊಡಗಿದರೆ ಹಗಲು ರಾತ್ರಿ ಯಾವುದನ್ನು ಲೆಕ್ಕಿಸುವುದಿಲ್ಲ.

ಗುದ್ದಲಿ ಹಿಡಿದು ನಿಂತರೆ ತೆಂಗಿನ ಮರಗಳಿಗೆ ಪಾತಿ, ಬದನೆ, ಟೊಮೊಟೂ, ಹುರುಳಿಕಾಯಿ, ಬೆಂಡೆ, ಮೆಣಸಿನಕಾಯಿ ಗಿಡಗಳ ನಾಟಿಯಿಂದ ಹಿಡಿದು ಗಿಡಕ್ಕೆ ಸಾಲು ಏರುವವರೆಗೆ ತನ್ನ ಅಗೆತದಿಂದಲೇ ನಡೆಯುತ್ತದೆ. ಬೇರೆ ಬೇರೆ ರೀತಿಯ ಸೊಪ್ಪು ಬೆಳೆಯಲು ವಿಭಾಗಗಳನ್ನಾಗಿ ತಾನು ಅಗೆತದಿಂದಲೇ ಮಾಡುತ್ತಾರೆ.

ಹನಿ ನೀರಾವರಿ ಅಳವಡಿಸಿಕೊಳ್ಳದೆ ಜಮೀನು ಪೂರಾ ನೀರು ಹಾಯಿಸುವ ಇವರು ಎಲ್ಲಾ ಬೆಳೆಗಳ ಮಧ್ಯೆ ತೆಂಗಿನ ಗರಿ ಸೇರಿದಂತೆ ಇತರ ತ್ಯಾಜ್ಯ ಹಾಕಿ ಭೂಮಿಯ ತೇವಾಂಶ ಕಾಪಾಡುತ್ತಾರೆ.

ಹೊಲದಲ್ಲಿ ಸೂರ್ಯನ ಬಿಸಿಲು ಹೆಚ್ಚು ಬೀಳದಂತೆ ಬದುಗಳಲ್ಲಿ ತೆಂಗು,ಬಾಳೆ, ಅಡಿಕೆ ಸೇರಿದಂತೆ ಇತರ ಕಾಡು ಜಾತಿಯ ಮರ ನೆಟ್ಟಿದ್ದಾರೆ.ಎಂತಹ ಕಡು ಬೇಸಿಗೆಯಲ್ಲಿ ತೋಟ ಹೊಕ್ಕರೆ ತಂಪು ನೀಡುತ್ತದೆ. ಹೊಲ ಪೂರಾ ಮುಚ್ಚಳಿಕೆ ಹಾಕಿರುವುದರಿಂದ ತೇವಾಂಶ ಬತ್ತಿ ಹೋಗದಂತೆ ನೋಡಿಕೊಳ್ಳುತ್ತಾರೆ.

ಬಹುಮುಖ್ಯವಾಗಿ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಮಾರಾಟ ಮಾಡುವುದಕ್ಕಿಂತ ಹೆಚ್ಚಾಗಿ ಸುತ್ತಮುತ್ತಲ ಗ್ರಾಮಗಳಲ್ಲಿಯೇ ಮಾರಾಟ ಮಾಡುವ ಮೂಲಕ ಹೆಚ್ಚು ಲಾಭಗಳಿಸುವ ತಂತ್ರ ಇವರಿಗೆ ಫಲಿಸಿದೆ.ಕಳೆದ 25 ವರ್ಷಗಳ ಹಿಂದೆ ಕೆಲಸ ಹರಸಿ ಬೆಂಗಳೂರಿಗೆ ಹೋದಾಗ ಶಿಕ್ಷಣ ಪಡೆಯದ ನಾನು ರೈತರೊಬ್ಬರ ಜಮೀನಿನಲ್ಲಿ ಕೂಲಿಗಾಗಿ ಸೇರಿಕೊಂಡೆ.

ಬಹು ವರ್ಷಗಳ ಕಾಲ ಅವರ ಹೊಲದಲ್ಲಿ ಕೃಷಿ ಕೆಲಸ ಮಾಡಿದ ಪರಿಣಾಮ ಕೃಷಿಯ ಬದುಕು ಅರ್ಥವಾಯಿತು. ತರಕಾರಿ ಬೆಳೆಯುವುದು, ಮಾರಾಟ ಮಾಡುವುದನ್ನು ಕಲಿತದ್ದು ಈಗ ಪ್ರಯೋಜನಕ್ಕೆ ಬಂದಿದೆ.

ಭೂಮಿ ಎಂದೂ ಬಂಜೆಯಲ್ಲ ಕಷ್ಟಪಟ್ಟು ಭೂಮಿತಾಯಿಯ ಸೇವೆ ಮಾಡಿದರೆ ಫಲ ಸಿಕ್ಕೆ ಸಿಗುತ್ತದೆ ಎಂಬುದು ದಂಜ್ಯಾನಾಯ್ಕ ಅವರ ಮನದಾಳದ ಮಾತು.

ಇವರ ಬಗ್ಗೆ ಬರೆಯಲು ಕಾರಣ ಇಷ್ಟೆ…ನಮ್ಮಲ್ಲಿ 50 ವರ್ಷ ದಾಟಿದರೆ ಸಾಕು ಮುಗೀತು ಬಿಡಪ್ಪ ನನ್ನ ಜೀವನ ಎಂದು ಗೊಣಗುವ, ಕೃಷಿ ಜೀವನ ಕಷ್ಟ ಎನ್ನುವವರು ದಂಜ್ಯಾನಾಯ್ಕ ಅವರಿಂದ ಪಾಠ ಕಲಿಯಬಹುದು..

RELATED ARTICLES

2 COMMENTS

  1. ಕೃಷಿಯ ಮೌಲ್ಯವನ್ನು
    ಅರಿತ ರೈತ
    ತನಗೆ ಅನ್ನ ಕೊಟ್ಟಿದ್ದ
    ಭೂಮಿಯನ್ನು ಮರೆತು
    ಕಾಂಕ್ರೀಟ್ ಕಾಡಿನಲ್ಲಿ ವಾಸಿಸಲು
    ಪಟ್ಟಣಕ್ಕೆ ಓಡಿ ಬಂದಿದ್ದಾನೆ.
    (ನನ್ನನ್ನೂ ಸೇರಿಕೊಂಡೇ)

    ದುಡಿಯುವ ರೈತ ಶೋಕಿ
    ಮಾಡಲು ಹೋರಾಟ ಪರಿಣಾಮ
    ಅನ್ನ ನೀಡುವ ಭೂತಾಯಿ ಬಂಜೆಯಾಗಿದ್ದಾಳೆ.

Leave a Reply to ಮಹೇಶ್ Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?