ತುಮಕೂರು ಲೈವ್

ರೈತರು ಸಾಲ ಸಹಾಯಧನವನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡು ಉನ್ನತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ಹೇಳಿದರು

ಪಾವಗಡ: ಸಾಲ, ಸಹಾಯಧನವನ್ನು ರೈತರು ಕೃಷಿ ಚಟುವಟಿಕೆಗಳಿಗಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಉನ್ನತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಸೋಮವಾರ ಶೇ 3 ರ ಬಡ್ಡಿ ಧರದಲ್ಲಿ ರೈತರಿಗೆ ಟ್ರಾಕ್ಟರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತ್ಯಂತ ಕಡಿಮೆ ಧರದಲ್ಲಿ ಟ್ರಾಕ್ಟರ್, ಕೃಷಿ ಅಭಿವೃದ್ಧಿ ಗಾಗಿ ಬ್ಯಾಂಕ್ ರೈತರಿಗೆ ಸಾಲ ನೀಡುತ್ತಿದೆ. ಸಾಲ ಪಡೆದ ನಂತರ ಕೃಷಿಅಭಿವೃದ್ಧಿಗಾಗಿ ಸಾಲದ ಹಣ ಬಳಸಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ರೈತರ ಶ್ರೇಯಸ್ಸಿಗಾಗಿ ಶ್ರಮಿಸುವ ಬ್ಯಾಂಕ್ ಗಳಿಗೆ ರೈತರು ಸಾಲದ ಕಂತನ್ನು ಪ್ರಾಮಾಣಿಕವಾಗಿ ಮರುಪಾವತಿಸಬೇಕು. ಇದರಿಂದ ಇತರೆ ರೈತರಿಗೆ ಹೆಚ್ಚಿನ ಸಾಲ ನೀಡಲು ಅನುಕೂಲವಾಗುತ್ತದೆ. ಸಾಲ ಮರುಪಾವತಿಸದಿದ್ದಲ್ಲಿ ಬ್ಯಾಂಕ್ ನಷ್ಟದತ್ತ ಸಾಗುತ್ತದೆ ರೈತರಿಗೂ ಸಮಸ್ಯೆಯಾಗುತ್ತದೆ. ಸಾಲ ಸೌಲಭ್ಯ ಸಿಗದೆ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಬ್ಯಾಂಕ್ ಕಟ್ಟಡ ಅಭಿವೃದ್ಧಿಗೆ ಶಾಸಕರ ನಿಧಿಯಲ್ಲಿ ಈಗಾಗಲೆ 5 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ಅಧ್ಯಕ್ಷ ಸೀತಾರಾಮು, ಶೇ 55 ರಷ್ಟು ಸಾಲ ವಸೂಲಾತಿಯಾಗಿದೆ. ಹೆಚ್ಚಿನ ಸಾಲ ವಸೂಲಾತಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಬ್ಯಾಂಕ್ ಅಭಿವೃದ್ಧಿಗೆ ರೈತರು ಕೈ ಜೋಡಿಸಬೇಕು ಎಂದರು.
ಜಿಲ್ಲಾ ವ್ಯವಸ್ಥಾಪಕ ವಿ.ವೇಣುಗೋಪಾಲನಾಯ್ಕ, ವ್ಯವಸ್ಥಾಪಕ ಮಂಜುನಾಥ್, ನಿರ್ದೇಶಕ ಎನ್.ಆರ್.ಅಶ್ವಥಕುಮಾರ್, ಶೇಷಗಿರಿ, ಎಂ.ಎಲ್.ಗೋಪಿ, ಪೆದ್ದಾರೆಡ್ಡಿ, ಮಹಲಿಂಗಪ್ಪ, ಶಾಂತಕುಮಾರ್, ಓಬಳೇಶಪ್ಪ, ಗುಟ್ಟಹಳ್ಳಿ ಅಂಜಿನಪ್ಪ, ಹನುಮಂತರಾಯಪ್ಪ, ನಾಗರಾಜು ಉಪಸ್ಥಿತರಿದ್ದರು.

Comment here