Friday, March 29, 2024
Google search engine
Homeಜನಮನಅಲ್ಲಿ ಸೀತಕ್ಕ...ಇಲ್ಲಿ ಐಶ್ವರ್ಯ...

ಅಲ್ಲಿ ಸೀತಕ್ಕ…ಇಲ್ಲಿ ಐಶ್ವರ್ಯ…

ಮೇಲಿನ ಚಿತ್ರ: ಅಜ್ಜಿಯೊಬ್ಬರಿಗೆ ಮಾಸ್ಕ್ ಕಟ್ಟುತ್ತಿರುವ ಐಶ್ವರ್ಯ. ಕೆಳಗಿನ ಚಿತ್ರ; ಸಾಮಾಗ್ರಿ ಹೊತ್ತು ನಡೆದು ಹೋಗುತ್ತಿರುವ ಶಾಸಕಿ ಸೀತಕ್ಕ.

Publicstory.in


ತುಮಕೂರು: ಅವರು ಸೀತಕ್ಕ. ಸಂಕಷ್ಟದಲ್ಲಿರುವ ಜನರಿಗಾಗಿ ತಮ್ಮ ಪಿಎಚ್.ಡಿ. ಅಧ್ಯಯನ ಮೊಟುಕುಗೊಳಿಸಿದರು.

ಇಲ್ಲಿ ಈ ಹುಡುಗ, ಹುಡುಗಿಯರು ಯುಪಿಎಸ್ಸಿ ( ಐಎಎಸ್) ಪರೀಕ್ಷೆಯ ತಯಾರಿಯನ್ನೇ ಮೊಟಕುಗೊಳಿಸಿದರು.

ಕೊರೊನಾ, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಈಡಾದ ಜನರಿಗೆ ಸಹಾಯ ಮಾಡುವ ಸಲುವಾಗಿ ತಮ್ಮ ಕನಸುಗಳನ್ನೇ ಪಕ್ಕಕ್ಕಿಟ್ಟು ನಡೆದಿದ್ದಾರೆ ಈ ಹುಡುಗಿಯರು.

ಸೀತಕ್ಕ ಆಂಧ್ರಪ್ರದೇಶದಲ್ಲಿ ಈಗ ಮನೆ ಮಾತು. ಅವರು ಅಲ್ಲಿನ ಶಾಸಕಿ ಸಹ ಹೌದು. ಅವರ ಕ್ಷೇತ್ರದಲ್ಲಿ ಕಾಡಿನಲ್ಲಿ ವಾಸವಿರುವ ಬುಡಕಟ್ಟು ಜನರಿಗೆ ಹತ್ತು-ಹನ್ನೆರಡು ಕಿಲೋ ಮೀಟರ್ ದೂರ ತಲೆಯ ಮೇಲೆ ಸಾಮಾಗ್ರಿ ಹೊತ್ತುಕೊಂಡು ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದಾರೆ.

ಇ‌ನ್ನೂ, ತುಮಕೂರಿನಲ್ಲಿ ಈ ಹುಡುಗಿಯರಿಗೆ ಈ ಪ್ರಶ್ನೆ ಕೇಳಿದ ತಕ್ಷಣವೇ, ವೈ ವಿ ಆರ್ ಕಮ್ ಔಟ್ ಎಂದು ಹೇಳಿ ಕ್ಷಣ ಸುಮ್ಮನಾದರು.

ಐಎಎಸ್ ಆಗಬೇಕೆಂಬ ಕನಸಿಗೆ ಇದು ಅಡ್ಡಿಯಾಗುವುದಿಲ್ಲವೇ? ಇದಕ್ಕಾಗಿ ತಯಾರಿ ನಡೆಸುವವರು ಒಂದು ಗಂಟೆ ಸಮಯ ಸಹ ಓದುವುದನ್ನು ಬಿಟ್ಟು ಬೇರೆಯದಕ್ಕೆ ಮೀಸಲಿಡುವುದಿಲ್ಲ. ಕೊರೊನಾ ಕಾರಣ ಪ್ರಾಣದ ಭಯದಲ್ಲಿ ಒಬ್ಬರೂ ಈಚೆ ಬರುತ್ತಿಲ್ಲ. ಅಂಥದರಲ್ಲಿ ಐಎಎಸ್ ಪರೀಕ್ಷೆ ತಯಾರಿ ಬಿಟ್ಟು, ಪ್ರಾಣ ಭಯ ಬಿಟ್ಟು ಹಳ್ಳಿ-ಹಳ್ಳಿ, ವಾರ್ಡ್ ವಾರ್ಡ್ ಸುತ್ತುತ್ತೀದಿರಲ್ಲ ?ಈ ಪ್ರಶ್ನೆಗಳಿಗೆ, ‘ಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ಹೋಗಿ ಒಂದಿಷ್ಟು ಸಹಾಯ ಮಾಡುವುದಕ್ಕಿಂತಲೂ ಐಎಎಸ್ ಹುದ್ದೆ ದೊಡ್ಡದಲ್ಲ’ ಎಂದವರು ಐಶ್ವರ್ಯ.

ತುಂಬಾ ಚಿಕ್ಕವಯಸ್ಸಿಗೆ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆಯಾಗಿರುವ ಐಶ್ವರ್ಯ ಅವರು ಅಮೆರಿಕದಲ್ಲಿ ಪ್ರತಿಷ್ಠಿತ ಜನರಲ್ ಮೋಟಾರ್ಸ್ ಕಂಪೆನಿಯಲ್ಲಿ ಉನ್ನತ ಉದ್ಯೋಗಿನಿಯಾಗಿದ್ದರು.

ಭಾರತೀಯ ಆಡಳಿತ ಸೇವೆಗೆ ಸೇರಬೇಕೆಂಬ ಆಸೆ ಹೊತ್ತು ಬೆಂಗಳೂರಿಗೆ ಮರುಳಿ, ಈಗ ಪರೀಕ್ಷಾ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಯುಪಿಎಸ್ ಸಿ ಪರೀಕ್ಷೆಯಲ್ಲಿ ತೊಡಗಿರುವ ನಮ್ಮ ತಂಡ ಲಾಕ್ ಡೌನ್ ನಿಂದ ಜನರು ಕಷ್ಟದಲ್ಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ಅವರಿಗೆ ಸಹಾಯ ಮಾಡಲು ನಿರ್ಧಾರ ಮಾಡಿದೆವು. ಕೊರೊನಾ ವಾರಿಯರ್ಸ್ ಆಗಲು ಮುಂದಾದೆವು ಎನ್ನುತ್ತಾರೆ ಅವರು.

ಏಶ್ವರ್ಯ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರ ಒಬ್ಬಳೇ ಮಗಳು. ಕೊರೊನಾ ಭಯದಿಂದ ಹಲವು ಜನಪ್ರತಿನಿಧಿಗಳು ಮನೆ ಬಿಟ್ಟು ಈಚೆ ಬರುತ್ತಿಲ್ಲ. ಅನಿವಾರ್ಯವೆಂಬಂತೆ ಬಂದರೂ ಎರಡು ದಿನ ಮುಖ ತೋರಿಸಿ ಮನೆಯೊಳಗೆ ಸೇರಿದ್ದಾರೆ. ಅಂಥದರಲ್ಲಿ ಪ್ರತಿ ದಿನ ಊರೂರಿಗೆ ಹೋಗಿ ಬಡವರಿಗೆ ಆಹಾರ, ಮಾಸ್ಕ್, ತರಕಾರಿ ಹಂಚಲು ಭಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ನಸು ನಕ್ಕರು.

ಪ್ರಾಣ ಭಯ ಯಾರಿಗೆ ತಾನೇ ಇರುವುದಿಲ್ಲ. ಹಣ ಇರುವವರಿಗೆ ಲಾಕ್ ಡೌನ್ ಸಮಸ್ಯೆಯೇ ಅಲ್ಲ. ಆದರೆ ಬಡವರಿಗೆ. ಬಡವರ ಎಲ್ಲ ಸಮಸ್ಯೆಯನ್ನು ನಾವು ಬಗೆಹರಿಸಿ ಬಿಡುತ್ತೇವೆ ಎಂದಲ್ಲ. ನಾವು ಕೊಡುವ ಏಳೆಂಟು ನೂರು ರೂಪಾಯಿಗಳ ಸಹಾಯ ಸಹಾಯವೇ ಅಲ್ಲ. ಆದರೆ ಇಡೀ ಜಗತ್ತು ಭಯದಿಂದ ಓಡುವಾಗ, ಆಹಾರವೂ ಇಲ್ಲದೇ ಪರಿತಪಿಸುವ ಮನೆಯವರ ಮುಂದೆ ನಾವು ಹೋಗಿ ನಿಲ್ಲುವುದೇ ಅವರಿಗೊಂದು ಧೈರ್ಯ.

ನಮ್ಮ ಜೊತೆ ಯಾರೂ ಇಲ್ಲ ಎಂದು ಅವರು ಪರಿತಪಿಸುತ್ತಿದ್ದಾರೆ. ಅಂಥವರಿಗೆ ನಾವು ಇದ್ದೇವೆ ಎಂದು ಹೇಳಲಿಕ್ಕಾದರೂ ನಾವುಗಳು ಅವರ ಮನೆಯ ಕದ ಬಡಿಯಬೇಕಾಗಿದೆ ಎಂದರು.

ಮನೆಯಿಂದ ಹೊರಗೆ ಕಳುಹಿಸಲು ಅಮ್ಮನಿಗೆ ಸುತರಾಂ ಇಷ್ಟ ಇರಲಿಲ್ಲ. ಆದರೆ ಅಪ್ಪನ ಮುಂದೆ ನನ್ನ ನಿರ್ಧಾರವನ್ನು ಗಟ್ಟಿಯಾಗಿ ಹೇಳಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಬದಲು ಅಪ್ಪನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದೆ. ಅವರು ಅನುಮತಿ ನೀಡಿದರು.

ನಮ್ಮ ರಕ್ಷಣೆ, ಮುಂಜಾಗ್ರತಾ ಕ್ರಮ ತೆಗೆದುಕೊಂಡೇ ಕೆಲಸ ಮಾಡಬೇಕಾಗಿದೆ. ಆದರೆ, ಮಾನಸಿಕವಾಗಿ ಧೈರ್ಯವಾಗಿರಬೇಕು ಅಷ್ಟೇ. ಇಬ್ಬರು ಕುರುಡ ಮಹಿಳೆಯರ ಗುಡಿಸಲಿಗೆ ಹೋಗಿ ಅವರಿಗೆ ಆಹಾರ ಧ್ಯಾನ್ಯದ ಕಿಟ್ ವಿತರಿಸಿದಾಗ ಅವರ ಮುಖದಲ್ಲಿ ಕಂಡ ಭಾವ ನನ್ನ ಜೀವಮಾನದಲ್ಲಿ ಎಂದೂ ಮರೆಯುವುದಿಲ್ಲ.

ಬಡ ಜನರು ನಕ್ಕಾಗ ಅದನ್ನು ನೋಡುವ ಸುಖಕ್ಕಿಂತ ಬೇರೆ ಸುಖ, ಸಂತಸ ಇಲ್ಲ ಅಲ್ಲವೇ ಎಂದು ಹೇಳಿದಾಗ ಅವರ ಕಣ್ಣಾಲಿಗಳು ತುಂಬಿ ಬಂದವು.

ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಲೀಡರ್ ಶಿಫ್ ಯಾರೂ ಕೊಡುವುದಿಲ್ಲ. ಅವರಿಗೆ ಪ್ರೋತ್ಸಾಹ ಕೂಡ ಕಡಿಮೆ. ಹೆಣ್ಣು ಮಕ್ಕಳ ಕಷ್ಟ ಆಲಿಸಲು ಹೆಣ್ಣು ಮಕ್ಕಳೇ ಇರಬೇಕು. ಐಎಎಸ್ ತಯಾರಿ ಬಿಟ್ಟು ಇಡೀ ಕ್ಷೇತ್ರದಲ್ಲಿ ಸುತ್ತಾಡಿದ, ಜನರೊಂದಿಗೆ ಬೆರೆತ ಕ್ಷಣಗಳು ಐಎಎಸ್ ಆಗುವ ಖುಷಿಗಿಂತಲೂ ದೊಡ್ಡ ಖುಷಿ ಎಂಬುದು ನನ್ನ ಭಾವನೆ ಎಂದಾಗ ಅವರ ಮುಖದಲ್ಲಿ ನಗುವಿನ ಭಾವ.

ಈ ನನ್ನ ಕೆಲಸ ದೊಡ್ಡದು ಅಲ್ಲವೇ ಅಲ್ಲ. ನನ್ನಸ್ನೇಹಿತೆಯ ಹೆಸರು ಬೇಡ. ಬೆಂಗಳೂರಿನ ಹಾಲಿ ಶಾಸಕರೊಬ್ಬರ ಮಗಳು. ಅವಳು ಸಹ ನನ್ನೊಂದಿಗೆ ಯುಪಿಎಸ್ ಪರೀಕ್ಷೆಗಾಗಿ ಅಧ್ಯಯನ ನಡೆಸುತ್ತಿದ್ದಾಳೆ. ಅವಳು ಸಹ ಬೆಂಗಳೂರಿನಲ್ಲಿ ಕೊಳೆಗೇರಿಗಳಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಬೆಳಿಗ್ಗೆ ಮನೆ ಬಿಟ್ಟರೆ ರಾತ್ರಿಯೇ ಮನೆ ಸೇರುವುದು.

ಬೆಂಗಳೂರು ಎಂದರೇ ಎಲ್ಲರೂ ಭಯ ಬೀಳುತ್ತಿದ್ದಾರೆ. ತಂದೆ ಶಾಸಕರು ಎಂಬ ಪ್ರಶ್ನೆಯೇ ಆಕೆಯಲ್ಲಿ ಬಂದಿಲ್ಲ. ಕಷ್ಟದಲ್ಲಿ ಜನರ ಕೆಲಸ ಮಾಡಬೇಕು ಎಂಬುದೇ ನಮ್ಮ ಉದ್ದೇಶ. ನಾವುಗಳು ಬರಬೇಕೆಂದು ಯಾರೂ ಕೇಳಿರಲಿಲ್ಲ. ಎಲ್ಲ ಶಾಸಕರು. ಮಾಜಿ ಶಾಸಕರು, ಉದ್ಯಮಿಗಳ ಮಕ್ಕಳಂತೆ ಮನೆಯಲ್ಲೇ ಇರಬಹುದಿತ್ತು. ಆದರೆ ಜೀವನದಲ್ಲಿ ನಾವು ಯಾರಿಗಾಗಿ ಕೆಲಸ ಮಾಡಬೇಕಾಗಿದೆ ಎಂಬುದಷ್ಟೇ ಮನುಷ್ಯನ ಬದುಕನ್ನು ಸಾರ್ಥಕಗೊಳಿಸುತ್ತದೆ ಎಂದು‌ ಹೇಳಿದರು.

ಪ್ರತೀಕ್ಷಾ ಎಸ್, ಸುಶ್ಮಿತಾ ಎಸ್, ನಿಖಿತಾ ಶೆಟ್ಟಿ, ಮನೋಜ್ ಕುಮಾರ್ ಇವರೆಲ್ಲರೂ ನನ್ನ ಜೊತೆಗಾರರೇ. ನಾವೆಲ್ಲರೂ ಒಂದು ತಂಡವಾಗಿ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿಸಿ ನಡೆಸುತ್ತಿದ್ದೇವೆ.ಈಗ ಲಾಕ್ ಡೌನ್ ಸಡಿಲಗೊಂಡಿದೆ. ಜನರ ನಡುವಿನ ನಮ್ಮ ಕೆಲಸ ಮುಗಿದಿದೆ. ಯುಪಿಎಸ್ಸಿ ಎಂಬ ಕನಸಿನ ದೋಣಿಯಲ್ಲಿ ಪಯಣ ಮುಂದುವರೆಸುತ್ತೇವೆ ಎಂದೇಳುತ್ತಾ ಐಶ್ವರ್ಯ ಪುಸ್ತಕಗಳ ಕಡೆ ನೋಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?