Saturday, April 20, 2024
Google search engine
Homeಜನಮನನೀನು ಓದು ಬರಹ ಕಲಿತಿದ್ದರೆ ಇವರಿಗೆ ಋಣಿಯಾಗಿರಲೇ ಬೇಕು...

ನೀನು ಓದು ಬರಹ ಕಲಿತಿದ್ದರೆ ಇವರಿಗೆ ಋಣಿಯಾಗಿರಲೇ ಬೇಕು…

ರಾಧಾ ರಮೇಶ್


ನೀನು ಓದು ಬರಹ ಕಲಿತಿದ್ದರೆ ,ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದಾರೆ , ನೀನುಶಾಲಾ ಬಾಲಕಿ ಆಗಿದ್ದರೆ ,ನೀನು ಇಂಗ್ಲಿಷಿನಲ್ಲಿ ಓದುತ್ತಿದ್ದರೆ ಆಕೆಗೆ ಋಣಿಯಾಗಿರಲೇಬೇಕು ಎಂದು ತಾಮ್ ವು ಲ್ಸ್ ಮತ್ತು ಸುಜನ್ ಆ್ಯಂಡ್ರ್ಯೂ ಬರೆಯುತ್ತಾರೆ .

ಈ ಮಾತುಗಳು ಮೊಟ್ಟಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರನ್ನು ಕುರಿತು ಬರೆದಿರುವುದು. ಭಾರತೀಯ ಮೊಟ್ಟಮೊದಲ ಶಿಕ್ಷಕಿ, ಕವಿಯಿತ್ರಿ, ಚಿಂತಕಿ savitri bai ಇವರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳುವ ಹೊತ್ತು. ಹಾಗೂ ಪ್ರಸ್ತುತ ಸಮಸ್ಯೆಗಳಿಗೆ ಎಳೆ ಏನಾದರೂ ಸಿಕ್ಕಿತೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯವಿದಾಗಿದೆ.

ಒಂಭತ್ತನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಾವಿತ್ರಿಬಾಯಿ ಪುಲೆ ಇವರ ಕನಸಿನ ವಿಸ್ತಾರ ಸಾಮಾಜಿಕ ಹೊಣೆ ಮತ್ತು ಬದ್ಧತೆ ಯಾಗಿದ್ದವು.ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮಹಿಳೆಯರಿಗೆ, ಶಿಕ್ಷಣವನ್ನು ಮತ್ತು ಸಾರ್ವತ್ರಿಕ ಜೀವನವನ್ನು ನಿರಾಕರಿಸಲಾಗಿತ್ತು.

ಶಿಕ್ಷಣದ ಬಗ್ಗೆ ಮಹಿಳೆಯರು ,ತಳ ಸಮುದಾಯದವರು ಶಿಕ್ಷಣದ ಕುರಿತು ಯೋಚಿಸಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದ್ದಾಗ, ಶೈಕ್ಷಣಿಕ ದೀವಟಿಗೆ ಹಿಡಿದು ಬಂದವರು ಸಾವಿತ್ರಿಬಾಯಿ ಪುಲೆ.ನಮ್ಮಂತಹ ಲಕ್ಷಾಂತರ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಹಕ್ಕನ್ನು ನೈಜವಾಗಿ, ನಿಸರ್ಗ ಸಹಜವಾಗಿಸಿದ ಸಾವಿತ್ರಿಬಾಯಿ ಪುಲೆಯವರ ಶ್ರಮ ಮತ್ತು ಚಿಂತನೆ ಅವಿಸ್ಮರಣೀಯ.ಇವರು ಮೊದಲ ಬಾಲಕಿಯರ ಶಾಲೆ ಪ್ರಾರಂಭಿಸಿದ್ದು ಹದಿನೆಂಟು ನೂರ ನಲವತ್ತ ಎಂಟರಲ್ಲಿ.

ಇದು ಸಾವಿತ್ರಿಬಾಯಿಯವರ ಅತ್ಯುನ್ನತ ಕೊಡುಗೆಯಾಗಿತ್ತು. ಮಹಿಳೆಯರಿಗಾಗಿ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ,ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳವಳಿ ಮಾಡಿದರು.

ವಿದ್ಯಾಭ್ಯಾಸ ನಿರಂತರವಾಗಿ ಅಡೆತಡೆಯಿಲ್ಲದೆ ನಡೆಯಲು ಆಗಿನ ಕಾಲಕ್ಕೆ ಸ್ಟೈಫೆಂಡ್ ವ್ಯವಸ್ಥೆ ಮಾಡಿದರು.ಶಿಕ್ಷಣದಲ್ಲಿ ವೈವಿಧ್ಯತೆ ತರಲು ಪಠ್ಯೇತರ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು.

ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು, ಜಾಗತಿಕವಾಗಿ ಲಭ್ಯವಿರುವ ಆಧುನಿಕ ಶಿಕ್ಷಣವನ್ನು ಪಠ್ಯವನ್ನು ಅಳವಡಿಸಿಕೊಳ್ಳುವುದು .

ಮಕ್ಕಳ ಸೂಕ್ಷ್ಮತೆ ಯನ್ನು ಆಧರಿಸಿ ಬೋಧನಾಕ್ರಮ ರೂಪಿಸುವುದು. ಬೌದ್ಧಿಕವಾಗಿ ವಿಮರ್ಶಾತ್ಮಕವಾದ ವಸ್ತುನಿಷ್ಠವಾದ ಕಲಿಕೆಯನ್ನು ಬೆಂಬಲಿಸುವುದು. ಸಾಮಾಜಿಕ ಸುಧಾರಣೆಗಳನ್ನು ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಆದ್ಯತೆ ಮೇರೆಗೆ ಶಿಕ್ಷಣದಲ್ಲಿ ಪಠ್ಯದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಿಕ್ಷಣ ನೀತಿಯನ್ನು ಹೊಸ ಚಿಂತನೆಯ ಪ್ರತಿಮೆಯಾಗಿಸಿದರು.

ದಲಿತರಿಗೆ ಹಾಗೂ ಮಹಿಳೆಯರಿಗಾಗಿ ಶಾಲೆ ತೆರೆದಾಗ, ಸಮಾಜ ಅವರಿಗೆ ಬಹಿಷ್ಕಾರ ಹಾಕಿತು. ಪ್ರತಿದಿನ ಶಾಲೆಗೆ ಹೋಗುವಾಗ ಸಾವಿತ್ರಿಬಾಯಿಯವರು ಅವಮಾನಕ್ಕೆ, ನಿಂದನೆಗೆ ಒಳಗಾಗುತ್ತಿದರು. ಅವರ ಮೇಲೆ ಹೊಲಸು ,ಕೆಸರು, ಕಲ್ಲುಗಳನ್ನು ಎಸೆಯಲಾಗುತ್ತಿತ್ತು. ಇಷ್ಟೆಲ್ಲಾ ಆದರೂ ಅವರು ಎದೆಗುಂದಲಿಲ್ಲ .

ಸಂಬಳವನ್ನು ಪಡೆಯದೆ, ಬಾಲಕಿಯರ ಶಿಕ್ಷಣಕ್ಕಾಗಿ ದುಡಿದರು. ಇವರ ಮಾನವೀಯ ಮೌಲ್ಯಗಳು, ಒಳಗೊಳ್ಳುವಿಕೆಯು, ಇಷ್ಟಕ್ಕೆ ಸೀಮಿತವಾಗದೆ, ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿಯನ್ನು ಸಂಘಟಿಸಿದರು.

ವರದಕ್ಷಿಣೆ ಪಿಡುಗಿಗೆ ಸಾಮೂಹಿಕ ಮದುವೆಗಳ ಏರ್ಪಾಡು ಮಾಡುವ ಮೂಲಕ ಉತ್ತರಿಸಿದರು. ಮಾನವ ಹಕ್ಕುಗಳು, ಜಾತಿ ಆಧಾರದ ಮೇಲೆ ನಿರ್ಧರಿಸಲ್ಪಡುತ್ತವೆ ಎಂಬುದನ್ನು ಮನಗಂಡಿದ್ದ ಅವರು ವಿವಾಹ ಬಾಹಿರವಾಗಿ ಗರ್ಭಿಣಿಯಾದ ಮಹಿಳೆಯರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿದರು ಹಾಗೂ ವಿವಾಹ ಬಾಹಿರವಾಗಿ ಜನಿಸಿದ ಮಕ್ಕಳಿಗೆ ಶಿಶು ಕೇಂದ್ರಗಳನ್ನು ಸ್ಥಾಪಿಸಿದರು..

ಕ್ಷೌರಿಕರ ಪ್ರತಿಭಟನೆಯನ್ನು ಸಂಘಟಿಸುವುದರ ಮೂಲಕ ,ವಿಧವೆಯರ ಕೇಶ ಮಂಡನೆಯನ್ನು ವಿರೋಧಿಸಿದ್ದರು. ಇದಕ್ಕಾಗಿ ಅನೇಕ ಆಪಾದನೆಗಳಿಗೆ, ಅವಮಾನಗಳಿಗೆ, ಗುರಿಯಾದರು.ತಮ್ಮ ಮನೆಯ ತೊಟ್ಟಿಯ ನೀರನ್ನು ಸಾರ್ವತ್ರಿಕವಾಗಿ, ದಮನಿತರಿಗೆ ಉಪಯೋಗಿಸಲು ಬಿಟ್ಟಿದ್ದರು.

ಬರಗಾಲ ಸಂತ್ರಸ್ತರಿಗೆ ನೆರವು ನೀಡುವುದು ಇವರ ಸಾಮಾಜಿಕ ಬದ್ಧತೆಗೆ ಮತ್ತೊಂದು ಉದಾಹರಣೆ. ಹದಿನೆಂಟು ನೂರ ಐವತ್ತ ರಲ್ಲಿ ಪುಣೆಯಲ್ಲಿ ಮಹಿಳಾ ಮಂಡಳಿಯನ್ನು ಸ್ಥಾಪಿಸಿದರು .

ಇಲ್ಲಿ ಎಲ್ಲ ಜಾತಿಯ ಮಹಿಳೆಯರು ಸೇರುತ್ತಿದ್ದರು. ಇಲ್ಲಿ ಸ್ತ್ರೀಯರ ಸ್ಥಿತಿಗತಿ ಹಾಗೂ ಸ್ತ್ರೀ ವಿಮೋಚನೆಯ ಕುರಿತಾಗಿ ಚರ್ಚೆ ನಡೆಯುತ್ತಿತ್ತು.ಬರಗಾಲದ ಸಂದರ್ಭದಲ್ಲಿ ಪ್ಲೇಗ್ ಮಾರಿಗೆ ತುತ್ತಾಗಿದ್ದ ಮಕ್ಕಳಿಗೆ ಆರೈಕೆ ಮಾಡುತ್ತಾ ಸ್ವತಃ ಕಾಯಿಲೆ ಸೋಂಕು ತಗುಲಿ ನಿಧನರಾದರು.

ಎಲ್ಲಾ ಬಗೆಯ ಒತ್ತಡ ವಿರೋಧ ಅಪಮಾನಗಳನ್ನು ಎದುರಿಸಿ ಸಮುದಾಯ ಶಿಕ್ಷಣ ಒಂದೇ ವಿಮೋಚನೆಗೆ ದಾರಿ ಎಂದರಿತು ಅದಕ್ಕಾಗಿ ಜೀವನ ಮುಡಿಪಿಟ್ಟ ಅವರ ಆದರ್ಶ ನಮ್ಮಲ್ಲಿ ಎಚ್ಚರಿಕೆಯನ್ನು ಉಂಟು ಮಾಡಲಿ ಎಂದು ಆಶಿಸುತ್ತಾ ಅವರ ಹೋರಾಟದ ಬದುಕು, ತೆಗೆದುಕೊಂಡ ನಿರ್ಧಾರಗಳು, ಎದುರಿಸಿದ ಸವಾಲುಗಳು, ದೃಢನಿಶ್ಚಯ, ಮೌಲ್ಯಗಳು, ಸ್ತ್ರೀ ವಿಮೋಚನಾ ಹೋರಾಟಗಾರ್ತಿಯಾಗಿ ,ಕವಿಯಿತ್ರಿಯಾಗಿ, ಸಮಾಜ ಸುಧಾರಕಿಯಾಗಿ , ಲೇಖಕಿಯಾಗಿ, ಶಿಕ್ಷಕಿಯಾಗಿ, ಚಿಂತಕಿಯಾಗಿ, ನಮ್ಮೆಲ್ಲರಲ್ಲೂ ನಿರಂತರ ಜ್ಯೋತಿಯಾಗಿ ಬೆಳಗಲಿ . (ಕ್ರಾಂತಿ ಮಾಡಲು ಅತೃಪ್ತಿ ತಳಮಳಗಳು ಸಾಲದು ನ್ಯಾಯಪರ ಹೋರಾಟಕ್ಕಾಗಿ ಅಗಾಧ ಪ್ರಜ್ಞೆ ಗಾಢ ಚಿಂತನೆ ಒಳಗೊಂಡಂಥ ಬದ್ಧತೆ ಜೊತೆಗೆ ರಾಜಕೀಯ ಸಾಮಾಜಿಕ ಹಕ್ಕುಗಳ ಮಹತ್ವ ಹಾಗೂ ಅವಶ್ಯಕತೆಯ ಅಷ್ಟೇ ಮುಖ್ಯ ಅಂಬೇಡ್ಕರ್).


‐ತುಮಕೂರಿನಲ್ಲಿ ನೆಲೆಸಿರುವ ರಾಧ ರಮೇಶ್ ಅವರು ಕವಿಯತ್ರಿ ಹಾಗೂ ಲೇಖಕಿ. ಹಲವು ಪತ್ರಿಕೆಗಳಲ್ಲಿ ಅವರ ಮಹತ್ವ, ಅಧ್ಯಯನ ಪೂರ್ಣ ಲೇಖನಗಳು ಪ್ರಕಟಗೊಂಡಿವೆ.ಎಲ್ಲ ಸಮಾಜದ ದಮನಿತರನ್ನು ಬರಹಗಳಲ್ಲಿ ಪ್ರತಿನಿಧಿಸುವ ಮೂಲಕ ಈ ಕಾಲದ ಒಂದು ಗಟ್ಟಿ ಮಹಿಳಾ ದನಿಯಾಗಿದ್ದಾರೆ.
RELATED ARTICLES

3 COMMENTS

  1. ತುಂಬಾ ಸಾಂದರ್ಭಿಕ ಹಾಗೂ ಮಹತ್ವದ ಬರವಣಿಗೆ. ಲೇಖಕಿಗೆ ಅಭಿನಂದನೆಗಳು.

Leave a Reply to manjula(roopa babu) Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?