Saturday, December 6, 2025
Google search engine
Home Blog Page 10

ಜಾಮಿಯಾ ಆರೋಗ್ಯ ತಪಾಸಣಾ ಶಿಬಿರ

0

ಚಿಕ್ಕನಾಯಕನಹಳ್ಳಿ : ಪಟ್ಟಣದ ಜಾಮಿಯಾ ಮಸ್ಜಿದ್ ಕಮಿಟಿ ವತಿಯಿಂದ ನವಾಜ಼್ ಆಪ್ಟಿಕಲ್ಸ್ ಹಾಗೂ ಸಾಯಿಗಂಗಾ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಬೆಳಗ್ಗೆ 10.30’ರಿಂದ ಸಂಜೆ 5.00 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.

ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಎದುರಿನ ಜಾಮಿಯಾ ಮಸೀದೆಯಲ್ಲಿ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ, ನೇತ್ರ ತಪಾಸಣೆ ಹಾಗೂ ರಕ್ತದೊತ್ತಡ ಮತ್ತು ಸಕ್ಕರೆ ಸಂಬಂಧಿತ ರೋಗಿಗಳಿಗೆ ಉಚಿತ ತಪಾಸಣೆ ನಡೆಸಿದ ನುರಿತ ವೈದ್ಯರು, ರೋಗಿಗಳ ಜೊತೆ ಸಂವಾದ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಪಟ್ಟಣ ಮತ್ತು ಸುತ್ತಮುತ್ತಲಿನ ಸುಮಾರು ಐನೂರಕ್ಕೂ ಹೆಚ್ಚು ಮಂದಿ ಜಾಮಿಯಾ ಮಸೀದೆಯ ಈ ಉಚಿತ ತಪಾಸಣಾ ಶಿಬಿರಕ್ಕೆ ಭೇಟಿಕೊಟ್ಟು ಸೂಕ್ತ ಪರಿಹಾರೋಪಾಯಗಳನ್ನು ಪಡೆದುಕೊಂಡರು.

ನೇತ್ರ ತಜ್ಞ ಡಾ.ನವಾಜ಼್ ಖಾನ್, ಸಾಯಿಗಂಗಾ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀಮತಿ ರಾಧಾ, ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಇಮ್ರಾನ್, ಚಿಕ್ಕನಾಯಕನಹಳ್ಳಿ ಜಾಮಿಯಾ ಮಸ್ಜಿದ್ ಕಮಿಟಿಯ ಮಹಬೂಬ್ ಆಲಂ, ತನ್ವೀರ್ ಅಹ್ಮದ್, ನಾಸಿರ್ ಪಾಷಾ, ಜಲೀಲ್, ಫಯಾಜ಼್, ಸ್ಟೇಷನರಿ ಬಾಬು, ರಫಿ ಆಲಂ ಸೇರಿದಂತೆ ಹಲವು ಸದಸ್ಯರು ಹಾಗೂ ಸಾಯಿಗಂಗಾ ಆಸ್ಪತ್ರೆಯ ವೈದ್ಯರು ಮತ್ತು ತುರುವೇಕೆರೆಯ ನವಾಜ಼್ ಆಪ್ಟಿಕಲ್ಸ್’ನ ನೇತ್ರ ತಜ್ಞರು ಉಪಸ್ಥಿತರಿದ್ದರು.

ರಂಗನಹಟ್ಟಿ ಗಣಪತಿ ವಿಸರ್ಜನೆ ವೇಳೆ ದುರ್ಘಟನೆ, ಮೃತರ ಕುಟುಂಬಕ್ಕೆ ಮುರಳೀಧರ ಹಾಲಪ್ಪ ನೆರವು

0

ತುರುವೇಕೆರೆ: ಗಣೇಶ ವಿಸರ್ಜನೆ ವೇಳೆ ಇಂತಹ ದುರ್ಘಟನೆಗಳು ನಡೆಯದಂತೆ ಗ್ರಾಮೀಣ ಭಾಗದಲ್ಲಿನ ಜನರು ಬಹಳ ಎಚ್ಚರಿಕೆ ವಹಿಸಬೇಕು ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮನವಿ ಮಾಡಿದರು.
ತಾಲ್ಲೂಕಿನ ಮಾರಸಂದ್ರ ರಂಗನಹಟ್ಟಿ ಗ್ರಾಮದಲ್ಲಿ ಈಚೆಗೆ ಗಣೇಶ ವಿಸರ್ಜನೆಗೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಮನೆಗೆ ದಾಬಸ್ ಪೇಟೆ ಒಳಕಲ್ ಮಠದ ಬಸವರಮಾನಂದ ಸ್ವಾಮೀಜಿ ಜೊತೆ ಬೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಂತಾನ್ವ, ಧೈರ್ಯ ತುಂಬಿ ಮಾತನಾಡಿದ ಅವರು
ಜಿಲ್ಲಾ ಹಾಗು ತಾಲ್ಲೂಕು ಆಡಳಿತ ಬಹಳ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರೂ ಸಹ. ಗ್ರಾಮೀಣ ಪ್ರದೇಶದಲ್ಲಿ ಅರಿವಿನ ಕೊರತೆ ಕಾಣುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕಾರ್ಯ ಕ್ರಮ ಸ್ಥಳೀಯ ಮಟ್ಟದ ಅಧಿಕಾರಿಗಳು ಮಾಡಬೇಕು ಎಂದರು.
ಮೃತರ ಎರಡು ಕುಟುಂಬದ ಸದಸ್ಯರ ಜೊತೆ ಮಾತನಾಡಿದ್ದು ಜಿಲ್ಲಾ ಸಚಿವರ ಆದೇಶದಂತೆ ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು. ಮೃತ ರೇವಣ್ಣನ ಇನ್ನೊಬ್ಬ ಮಗ ಐಟಿಐ ಮಾಡಿದ್ದು ಕೌಶಲ್ಯ ಅಭಿವೃದ್ಧಿ ಯಲ್ಲಿ ತರಬೇತಿ ನೀಡಿ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದು ಮತ್ತು ದಯಾನಂದ್ ಪತ್ನಿಗೆ ಪದವೀಧರೆಯಾಗಿದ್ದು ಸರ್ಕಾರದಿಂದ ಸಿಗುವಂತಹ ಉದ್ಯೋಗ ದೊರಕಿಸಿಕೊಡುವ ಬಗ್ಗೆ ಭರವಸೆ ನೀಡಿದರು.
ದಾಬಸ್ ಪೇಟೆ ಒಳಕಲ್ ಮಠದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಈ ದುರ್ಘಟನೆ ಅತ್ಯಂತ ನೋವಿನ ಸಂಗತಿ. ಎರಡು ಕುಟುಂಬಕ್ಕೆ ಸಂತಾನ್ವ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದು. ಕಾಂಗ್ರೆಸ್ ಮುಖಂಡ ಮುರಳಿಧರಹಾಲಪ್ಪ ಜಿಲ್ಲಾ ಸಚಿವರ ಮಾರ್ಗದರ್ಶನದಂತೆ ಸರ್ಕಾರದಿಂದ ಸಿಗುವಂತಹ ಪರಿಹಾರ ಕೊಡಿಸಲು ಗ್ರಾಮಕ್ಕೆ ಆಗಮಿಸಿ ನೊಂದ ಕುಟುಂಬಕ್ಕೆ ಸಿಗುವ ಸವಲತ್ತು ಪರಿಹಾರ ಕೊಡಿಸಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎರಡೂ ಕುಟುಂಬಕ್ಕೆ ಧನ ಸಹಾಯ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಗ್ರಾಮ ಪಂಚಾಯತಿ ಸದಸ್ಯ ಯೋಗೀಶ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ತ್ರೈಲೋಕಿನಾಥ್, ಜಯಣ್ಣ, ಮಂಜುನಾಥ್ ಹಲವು ಮುಖಡರು ಇದ್ದರು.

ಮಿಂಚಿದ ಪ್ರೌಢಶಾಲಾ ಕ್ರೀಡಾಕೂಟ

0

ತಾಲ್ಲೂಕು ಕ್ರೀಡಾಂಗಣದ ಕೇರ್ ಟೇಕರ್ ಹಾಗೂ ಮಾರ್ಕರ್‌ ರಮೇಶ್‘ರವರನ್ನು ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ,
ಪುರ-ಪ್ರಥಮ ಸಿ ಹೆಚ್ ದಯಾನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ
ಆರ್ ಪರಶಿವಮೂರ್ತಿ ಮತ್ತು ಜನಪ್ರಿಯ ಕ್ಷೇತ್ರ-ಶಿಕ್ಷಣಾಧಿಕಾರಿ
ಸಿ ಎಸ್ ಕಾಂತರಾಜು ಹಾಗೂ ದೈಹಿಕ ಶಿಕ್ಷಕ-ಶಿಕ್ಷಕಿಯರ ವೃಂದದ ವತಿಯಿಂದ ಸನ್ಮಾನಿಸಿದ ಸಂದರ್ಭ.

ಚಿಕ್ಕನಾಯಕನಹಳ್ಳಿ : ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಪುರಸಭಾ ಅಧ್ಯಕ್ಷ ಸಿ ಹೆಚ್ ದಯಾನಂದ್ ಉದ್ಘಾಟಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ದೈಹಿಕ ಶಿಕ್ಷಕರ ಸಂಘದ ಸಹಭಾಗಿತ್ವದೊಂದಿಗೆ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವನ್ನು ಮಂಗಳವಾರ ಮತ್ತು ಬುಧವಾರದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು, ವಿದ್ಯಾಭ್ಯಾಸದ ಜೊತೆ ಸಾಂಸ್ಕೃತಿಕ ಕಲಾ ಪ್ರಕಾರಗಳ ಅಭ್ಯಾಸ ಮತ್ತು ಕ್ರೀಡಾಸ್ಪರ್ಧೆಯ ಅಭ್ಯಾಸವೂ ಬಹಳ ಮುಖ್ಯವಾದುದು. ಉತ್ತಮವಾದ ಓದು ಮತ್ತು ಶಾಲಾ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತರುತ್ತಿರುವ ಸಾಕಷ್ಟು ಮಕ್ಕಳು ಕ್ರೀಡೆಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಗಮನಕ್ಕೆ ಬಂದಿದೆ.

ಹಾಗಾಗಿ, ಅಂತಹ ಎಲ್ಲ ಮಕ್ಕಳ ಅನುಕೂಲಕ್ಕಾಗಿ ಈ ಬಾರಿಯ ಹೋಬಳಿ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಇಲಾಖೆ ಬೇಗನೇ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬರಲಿರುವ ಪರೀಕ್ಷೆಗಳಿಗೆ ಮಕ್ಕಳು ಸಾಕಷ್ಟು ತಯಾರಿ ನಡೆಸಬೇಕಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಈ ತೀರ್ಮಾನಕ್ಕೆ ತಲುಪಿತ್ತು. ಒಟ್ಟಾರೆಯಾಗಿ ಮಕ್ಕಳ ಬೌದ್ಧಿಕ ವಿಕಾಸ ಹಾಗೂ ಮನೋದೈಹಿಕ ವಿಕಾಸದ ಹಿತದೃಷ್ಟಿಯಿಂದ ಏನೆಲ್ಲ ಮುನ್ನೆಚ್ಚರಿಕೆ ಅಥವಾ ಕಟ್ಟೆಚ್ಚರಿಕೆಗಳನ್ನು ವಹಿಸಬೇಕೋ ಅದನ್ನೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಹಿಸುತ್ತಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಆರ್ ಪರಶಿವಮೂರ್ತಿಯವರು ಮಾತನಾಡಿ, ಶಾಲಾ-ಪ್ರಾರಂಭೋತ್ಸವ ಸಮಯದಿಂದಲೇ, ಶಾಲಾ ಕ್ರೀಡಾಕೂಟ ಹಾಗೂ ಶಾಲಾ ಪರೀಕ್ಷೆಗಳಿಗೆ ತೊಡಕಾಗದಂತೆ ಮಕ್ಕಳ ಎಲ್ಲ ಕಾರ್ಯಕ್ರಮಗಳನ್ನು ಮಯತುವರ್ಜಿ ವಹಿಸಿ ಯೋಜಿಸಲಾಗಿದೆ.

ಈ ಬಗೆಯ ಎಲ್ಲ ವ್ಯವಸ್ಥಿತ ಕಾರ್ಯಕೆಲಸಗಳು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಸ್ತುವಾರಿಯಲ್ಲಿ ಶಿಸ್ತುಬದ್ಧವಾಗಿ ನಡೆಯುತ್ತಿವೆ. ಅದೇರೀತಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಹೇಳಿ, ಹೋಬಳಿ ಮಟ್ಟ ದಾಟಿ ತಾಲ್ಲೂಕು ಮಟ್ಟದವರೆಗೆ ತಲುಪಿರುವ ಎಲ್ಲ ಮಕ್ಕಳಿಗೂ ಶುಭಾಶಯಗಳನ್ನು ಕೋರಿದರು.

ಕ್ರೀಡಾ ಜ್ಯೋತಿಯನ್ನು ಎತ್ತಿಹಿಡಿದು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಹಲವು ಕ್ರೂಡೆಗಳಲ್ಲಿ ಸೆಣಸಾಡಲಿದ್ದ ಮಕ್ಕಳಿಗೆ ಕ್ರೀಡಾ-ಪ್ರತಿಜ್ಞೆಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ, ದೈಹಿಕ ಶಿಕ್ಷಕರ ಸಂಘದ ಸುರೇಶ್, ಅಂಜಿನಪ್ಪ, ಗವಿರಂಗಯ್ಯ, ಶಿವಕುಮಾರ್, ಗಂಗಾಧರ್, ಜಗದಾಂಬಾ ಹಾಗೂ ಹತ್ತಾರು ಶಾಲೆಗಳ ನೂರಾರು ಮಕ್ಕಳು, ಶಿಕ್ಷಕ-ಶಿಕ್ಷಕಿಯರು ಮತ್ತಿತರರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ನಾಯಕರ ಜಯಂತಿ: ಕೆ ಪುರಂದರ್ ಸಲಹೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಚಿತ್ರಪಟಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ತಹಸೀಲ್ದಾರ್ ಕೆ ಪುರಂದರ್’ರವರು ವಿಶ್ವಕರ್ಮ ಜಯಂತಿಯನ್ನು ಆಚರಿಸಿದರು.

ತಾಲ್ಲೂಕು ಆಡಳಿತದ ಅಧಿಕಾರಿಗಳು, ವಿಶ್ವಕರ್ಮ ಸಮಾಜದವರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಮಾಜದ ಎಲ್ಲರಿಗೂ ಶುಭಾಶಯಗಳನ್ನು ಕೋರಿ ಮಾತನಾಡಿದ ತಹಸೀಲ್ದಾರ್ ಕೆ ಪುರಂದರ್, ಆಯಾಯಾ ಸಮಾಜದ ಸಾಂಸ್ಕೃತಿಕ ನಾಯಕರುಗಳ ಜಯಂತಿ ಆಚರಣೆಯಲ್ಲಿ ಕೇವಲ ಆಯಾಯಾ ಸಮುದಾಯದವರು ಮಾತ್ರವೇ ಭಾಗವಹಿಸುವುದು ಶೋಭೆಯಲ್ಲ . ಎಲ್ಲ ಸಮಾಜ, ಸಮುದಾಯದ ಜನರೂ ಇಂತಹ ಸಾಂಸ್ಕೃತಿಕ ನಾಯಕರುಗಳ ಜಯಂತಿಗಳಲ್ಲಿ ಭಾಗವಹಿಸುವಂತಾಗಬೇಕು. ಆಗ ಮಾತ್ರ ನಾವು ನಮ್ಮ ರಾಷ್ಟ್ರಕವಿಗಳ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಪರಿಕಲ್ಪನೆಯನ್ನು ಪಾಲಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಜಾತಿ-ಮತದ ಹಂಗು ತೊರೆದು ಎಲ್ಲ ಸಮಾಜದವರು ಇಂತಹ ಸಾಂಸ್ಕೃತಿಕ ನಾಯಕರ ಜಯಂತಿಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಬಯಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ, ದೇವರಾಜು ವಿಶ್ವಕರ್ಮ ಇಡೀ ಜಗತ್ತಿನ ಸೃಷ್ಟಿಕರ್ತ. ವಿಶ್ವಕರ್ಮನಿಗೆ ಐದು ಬಗೆಯ ವಿವಿಧ ವೃತ್ತಿಗಳಲ್ಲಿ ಪಾರಂಗತರಾದ ಐವರು ಮಕ್ಕಳಿದ್ದರು. ಅದರಲ್ಲಿ ಕಬ್ಬಿಣದ ಕುಲುಮೆ ಕೆಲಸ ಬಲ್ಲ ಒಬ್ಬ ಮಗ, ಮರಗೆಲಸ ಅಥವಾ ಬಡಗಿ ಕಸುಬುದಾರಿಕೆ ಬಲ್ಲ ಒಬ್ಬ ಮಗ, ತಾಮ್ರ ಮತ್ತು ಹಿತ್ತಾಳೆ ಕೆಲಸವನ್ನು ಬಲ್ಲ ಒಬ್ಬ ಮಗ, ಚಿನ್ನ-ಬೆಳ್ಳಿ ಕೆಲಸ ಬಲ್ಲಂಥ ಒಬ್ಬ ಮಗ, ಮಣ್ಣಿನ ಕೆಲಸ ಅಥವಾ ಕುಂಬಾರಿಕೆ ಕೆಲಸ ಬಲ್ಲಂಥ ಐದನೆಯ ಮಗನೂ ವಿಶ್ವಕರ್ಮನಿಗಿದ್ದರು.

ಹೀಗೆ, ಒಂದು ಸಮಾಜ ನಿರ್ಮಾಣಕ್ಕೆ ಪೂರಕವಾದ ಕಸುಬುದಾರಿಕೆಗಳನ್ನು ಬಲ್ಲ ಐವರು ಮಕ್ಕಳನ್ನು ಹೊಂದಿದ್ದ ವಿಶ್ವಕರ್ಮ ಇಡೀ ವಿಶ್ವಸಂಸಾರದ ಸೃಷ್ಟಿಕರ್ತ ಎಂದು ನಾವು ಗೌರವದಿಂದ ಕಾಣುತ್ತೇವೆ ಎಂದರು.

ಸಮಾಜದ ಮುಖಂಡ ಹಾಗೂ ನಿವೃತ್ತ ಶಿಕ್ಷಕ ಶ್ರೀಕಂಠಾಚಾರ್ ಮಾತನಾಡಿ, ಈ ಜಗತ್ತು ಪಂಚಭೂತಗಳಿಂದ ಕೂಡಿದೆ. ಅದೇರೀತಿ ಪಂಚ-ಪುತ್ರರತ್ನರನ್ನು ಹೊಂದಿದ್ದ ವಿಶ್ವಕರ್ಮ, ಪಂಚಲೋಹಗಳನ್ನು ಜನಕಲ್ಯಾಣಕ್ಕಾಗಿ ಬಾಗಿಸುವ ಕಸುಬುದಾರಿಕೆಗಳನ್ನು ತನ್ನ ಪುತ್ರರಿಗೆ ದಯಪಾಲಿಸಿ ಹರಸುವುದರ ಮೂಲಕ ವಿಶ್ವಸಂಸಾರದ ಸೃಷ್ಟಿಗೆ ಕಾರಣರಾದರು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಸಮಾಜದ ಸದಸ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಸಾಲಭಾದೆ ತಾಳದೆ ವಿಧವೆಮಹಿಳೆ ಆತ್ಮಹತ್ಯೆ

0

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಗ್ರಾಮದ ವಿಧವೆ ಮಂಜುಳಾ ಎಚ್.ಡಿ(50) ಸಾಲಬಾಧೆ ತಾಳಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಮೃತ ವಿಧವೆ ಮಂಜುಳಾ ಎಚ್.ಡಿಯವರು ಮಗಳ ಮದುವೆಗೆಂದು ಕಳೆದು ಮೂರು ತಿಂಗಳ ಹಿಂದೆ ವಿವಿಧ ಸ್ವ ಸಹಾಯ ಸಂಘಗಳು ಹಾಗು ಫೈನಾನ್ಸ್ ಗಳಿಂದ ಸುಮಾರು ‌ಮೂರ್ನಾಲ್ಕು ಲಕ್ಷ ರೂಪಾಯಿಗಳನ್ನು ಬಡ್ಡಿಗೆ ಸಾಲವನ್ನು ಪಡೆದು ಇದ್ದ ಒಬ್ಬಳೇ ಮಗಳ ಮದುವೆ ಮಾಡಿದ್ದಳು.

ದಿನ ಕಳೆದಂತೆ ಸಾಲ ಪಡೆದವರು ಬಡ್ಡಿ ಅಥವಾ ಅಸಲು ಕಟ್ಟುವಂತೆ ಪದೇಪದೇ ಪೀಡಿಸುತ್ತಿದ್ದರಿಂದ ಸಾಲ ತೀರಿಸಲು ಆಕೆಯ ಬಳಿ ಯಾವುದೇ ಆದಾಯವಿಲ್ಲದ ಕಾರಣ ಮನನೊಂದು ಮನೆಯ ಜಂತಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಪಿಐ ಲೋಹಿತ್, ದಂಡಿನಶಿವರ ಪಿಎಸ್ಐ ಚಿತ್ತರಂಜ ಅವರುಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಭೂಪಟದ ಜತೆ ಮಕ್ಕಳ ಈದ್-ಮಿಲಾದ್

ಚಿತ್ರ ಶೀರ್ಷಿಕೆ: ಇಸ್ಲಾಮಿಕ್ ಪವಿತ್ರ ಇಮಾರತ್ತುಗಳ ಪುಟ್ಟಪುಟ್ಟ ಪ್ರತಿಕೃತಿಗಳನ್ನು ಮಾಡಿಟ್ಟುಕೊಂಡು ಈದ್-ಮಿಲಾದ್ ಆಚರಿಸುತ್ತಿರುವ ಚಿಕ್ಕನಾಯಕನಹಳ್ಳಿ ಪಟ್ಟಣದ ನಾಲಬಂದ್ ವಾಡಿಯ ಮಕ್ಕಳು

(ಸದ್ದಿಲ್ಲದೆ ಎಲ್ಲೆಡೆ ಆಚರಣೆಯಾದ ಈದ್-ಮಿಲಾದ್)

ಚಿಕ್ಕನಾಯಕನಹಳ್ಳಿ : ಪಟ್ಟಣದಲ್ಲಿ ಸೋಮವಾರದಂದು ಮುಸ್ಲಿಮ್ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಗಣೇಶೋತ್ಸವಗಳು ಇರುವುದರಿಂದ ಯಾವುದೇ ಬಗೆಯ ಮೆರವಣಿಗೆ, ಸದ್ದು-ಗದ್ದಲ ಇಲ್ಲದೆ ಶಾಂತಿಯುತವಾಗಿ ‘ಮಿಲಾದ್-ಉನ್-ನಬಿ’ ಆಚರಿಸಲಾಗಿದೆ.

ಗಣೇಶೋತ್ಸವಗಳ ಮೆರವಣಿಗೆ, ಗಣೇಶ ಆರ್ಕೆಸ್ಟ್ರಾ, ಗಣೇಶ ರಸಸಂಜೆ ಇತ್ಯಾದಿ ಎಲ್ಲವೂ ಮುಗಿದ ನಂತರದ ದಿನಗಳಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡುವಂತೆ ಪಟ್ಟಣದ ಮಸೀದಿ ಜಮಾತ್ ಕಮಿಟಿಯವರು ಅರ್ಜಿ ಕೊಟ್ಟಿದ್ದಾರೆ. ಹಾಗಾಗಿ, ನಂತರದ ದಿನಗಳಲ್ಲಿ ಮಿಲಾದ್-ಮೆರವಣಿಗೆಗೆ ಅನುಕೂಲ ಕಲ್ಪಿಸಿರುವುದಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಯತೀಶ್ ಹೇಳುತ್ತಾರೆ.

ಸಾಂದರ್ಬಿಕ ಚಿತ್ರ

ಈದ್ ಮಿಲಾದ್ ಸಾಮರಸ್ಯ-ಸೌಹಾರ್ದತೆಯ ಮಹತ್ವದ ಹಬ್ಬವಾಗಿರುವುದರಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ತಾಲ್ಲೂಕಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಡಚಣೆಯಿಲ್ಲದೆ ಎಲ್ಲರ ಹಬ್ಬಗಳು ಆಚರಣೆಗೊಳ್ಳಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ತಿಳಿಸಿದರು.

ಮಿಲಾದ್ ಮಹತ್ವ,

ಈದ್ ಮಿಲಾದ್ ಹಬ್ಬವನ್ನು ಸುನ್ನಿ ಮುಸ್ಲಿಮರು ಇಸ್ಲಾಮ್ ಧಾರ್ಮಿಕ ಪಂಚಾಂಗದ 12 ನೇ ದಿನದಂದು ಆಚರಿಸಿದರೆ, ಶಿಯಾ ಮುಸ್ಲಿಮರು ‘ರಬಿ ಉಲ್ ಅವ್ವಲ್’ನ 17’ನೇ ದಿನದಂದು ಆಚರಿಸಿಕೊಳ್ಳುತ್ತಾರೆ. ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ಮೆಯಂತಹ ಪ್ರವಾದಿಯವರು ನೀಡಿರುವ ವಿಶ್ವ-ಮಾನವೀಯ ಮಹತ್ವದ ಸಂದೇಶಗಳನ್ನು ಪಾಲಿಸುವುದರ ದ್ಯೋತಕವಾಗಿ ಈದ್ ಮಿಲಾದ್’ನ್ನು ಆಚರಿಸಲಾಗುತ್ತದೆ.

ಪ್ರವಾದಿ-ಪೈಗಂಬರ್ ಮೊಹಮ್ಮದರ ಜನ್ಮದಿನವನ್ನು ಈದ್-ಎ-ಮಿಲಾದ್ ಹೆಸರಿನಲ್ಲಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ನಬಿದ್, ಮಿಲಿದ್ ಮತ್ತು ಮಿಲಾದ್-ಅನ್-ನಬಿ ಎಂದೂ ಹೆಸರಿಸಲಾಗಿದೆ. ಒಂದೇ ಅರ್ಥವನ್ನೇ ಕೇಂದ್ರೀಕರಿಸಿ ಎಲ್ಲ ಹೆಸರುಗಳನ್ನು ಸೂಚಿಸಲಾಗಿದೆ. ಮಧ್ಯಪ್ರಾಚ್ಯದ ಅರೇಬಿಕ್ ರಾಷ್ಟ್ರಗಳು ಹಾಗೂ ಹಲವು ಯುರೋಪಿಯನ್ ದೇಶಗಳಲ್ಲಿ ಈ ದಿನ ರಾಷ್ಟ್ರೀಯ ಸಾರ್ವಜನಿಕ ರಜೆ ಆಗಿರುತ್ತದೆ.

ಇಸ್ಲಾಮಿಕ್ ಕ್ಯಾಲೆಂಡರಿನ 3 ನೇ ತಿಂಗಳ 12 ನೇ ತಾರೀಕಿನ ದಿನ ಪ್ರವಾದಿ ಮಹಮದ್ ಪೈಗಂಬರ್ ಜನಿಸಿದರು ಎಂದು ನಂಬಲಾಗಿದೆ. ಈ ನಂಬಿಕೆಯ ಪ್ರಕಾರ ಕ್ರಿಸ್ತಶಕ 517 ರಲ್ಲಿ ಪ್ರವಾದಿ ಮೊಹಮ್ಮದ್ ಜನಿಸಿದರು. ಪ್ರವಾದಿಯವರ ಈ ಜನ್ಮದಿನವನ್ನು ಮೊದಲಿಗೆ ಈಜಿಫ್ತಿನಲ್ಲಿ ಆಚರಿಸಲಾಗಿತ್ತಂತೆ. ನಂತರದ 11 ನೇ ಶತಮಾನದ ಶುರುವಾತಿನಿಂದ ಇದು ವಿಶ್ವದಾದ್ಯಂತ ಹಬ್ಬಿದೆ. ಪ್ರವಾದಿ ಮೊಹಮ್ಮದ್ ಪೈಗಂಬರರು ಸೌದಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದ್ದರು. ಕ್ರಿಸ್ತಶಕ 540 ರಲ್ಲಿ ಮಕ್ಕಾದ ಹಿರಾ ಗುಹೆಯಲ್ಲಿ ಅವರು ಜ್ಞಾನೋದಯವನ್ನು ಪಡೆದರು. ನಂತರದ ತಮ್ಮ ಜೀವಿತಾವಧಿಯ ಅಷ್ಟೂ ಕಾಲವನ್ನು ಅವರು ಇಸ್ಲಾಮ್ ಧರ್ಮದ ಸ್ಥಾಪನೆ ಮತ್ತು ಅದರ ವಿಸ್ತರಣೆಗಾಗಿ ಮೀಸಲಿಟ್ಟರು. ಇದರ ಪರಿಣಾಮ ಇಡೀ ಸೌದಿ ಅರೇಬಿಯಾ ದೇವರ ಆರಾಧನೆಗೆಂದೇ ಮೀಸಲಾದ ರಾಜ್ಯವಾಯಿತು. ಕ್ರಿಸ್ತಶಕ 632 ರಲ್ಲಿ ಮೊಹಮ್ಮದ್ ಪೈಗಂಬರರು ಇಹಲೋಕ ತ್ಯಜಿಸಿ ದೇವರ ರಾಜ್ಯ ಸೇರಿಕೊಂಡರು. ಅದಾದ ಬಳಿಕ ಅವರ ಜೀವನ ಮತ್ತು ಬೋಧನೆಗಳನ್ನು ಅನುಸರಿಸಿ ಅವರ ಅನುಯಾಯಿಗಳು ಅನೇಕ ಹಬ್ಬಗಳನ್ನು ಧಾರ್ಮಿಕ ಪದ್ಧತಿಯ ಅಂಗದಂತೆ ಆಚರಿಸಲು ತೊಡಗಿಕೊಂಡರು.

ಈದ್ ಮಿಲಾದ್’ನಂದು ಪ್ರವಾದಿ ಮೊಹಮ್ಮದರ ಜೀವನ ಮತ್ತು ಬೋಧನೆಗಳ ಕುರಿತಾಗಿ ವಿಶೇಷ ಉಪನ್ಯಾಸಗಳು, ಚರ್ಚೆ-ಪರಾಮರ್ಶೆಗಳು ನಡೆಯುತ್ತವೆ. ಮುಸ್ಲಿಮ್ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಧರ್ಮ ಮತ್ತು ಜೀವನ ಎರಡರ ಆತ್ಮಾವಲೋಕನ ಹಾಗೂ ಆತ್ಮಸಾಕ್ಷಾತ್ಕಾರದ ರೂಪಕದಂತೆಯೂ ಈದ್ ಮಿಲಾದ್ ಆಚರಣೆ ಗೋಚರಿಸುತ್ತದೆ. ಇನ್ನು ಶಿಯಾ ಮುಸ್ಲಿಮರು ಈ ದಿನದಂದು ಪ್ರವಾದಿ ಮೊಹಮ್ಮದರು ಹಜ಼ರತ್ ಅಲಿ’ಯವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ ದಿನ ಎಂದು ನಂಬಿ ಆಚರಿಸುತ್ತಾರೆ. ಒಂದೆಡೆ ಸಾವಿನ ಸೂತಕ ಮತ್ತು ದುಃಖವಿದ್ದರೆ, ಇನ್ನೊಂದೆಡೆ ಉತ್ತರಾಧಿಕಾರತ್ವದ ಹಕ್ಕುದಾರಿಕೆಯನ್ನು ಮಂಡಿಸಲಾಗುತ್ತದೆ. ಸುನ್ನಿ ಮತ್ತು ಶಿಯಾ ಪಂಗಡಗಳು ತಂತಮ್ಮ ನಂಬಿಕೆಯನುಸಾರ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತವೆ.

ಈ ದಿನದಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪವಿತ್ರ ಖುರಾನ್ ಪಠಣ, ವಿಶೇಷ ಉಪನ್ಯಾಸ, ಪ್ರವಾದಿಯವರ ಜೀವನ ದರ್ಶನ ಮತ್ತು ಮೌಲ್ಯಯುತ ಆದರ್ಶಗಳ ಕುರಿತು ಗೋಷ್ಠಿಗಳನ್ನು ನಡೆಸಲಾಗುತ್ತದೆ. ಮೆರವಣಿಗೆ, ಜುಲೂಸ್, ಮುಶಾಯೆರಾ, ಘಜ಼ಲ್ ಸಂಗೀತ್ ಕಾರ್ಯಕ್ರಮಗಳೂ ಕೆಲವೆಡೆ ಜರುಗುತ್ತವೆ. ಎಲ್ಲ ಎಲ್ಲದರಲ್ಲೂ ಪ್ರವಾದಿಯವರ ಮೇಲಿನ ಗೌರವ ಮತ್ತು ಪ್ರೇಮ ಕಂಡುಬರುತ್ತದೆ.

__ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಫಿಲಿಪ್ಫೀನ್ಸಿನ ಪೀಪಲ್ ಪವರ್ ರೆವಲ್ಯೂಷನ್ ಮತ್ತು ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

0

ಚಿಕ್ಕನಾಯಕನಹಳ್ಳಿ : ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ ಬೆಳಗ್ಗೆ ಪಟ್ಟಣದ ನೆಹರೂ ಸರ್ಕಲ್’ನಿಂದ ಅಂಬೇಡ್ಕರ್ ಪುತ್ಥಳಿವರೆಗೆ ಸರಿಸುಮಾರು 1.5 ಕಿ.ಮೀ.ವರೆಗೆ ಮಾನವ ಸರಪಳಿ ರಚಿಸಲಾಗಿತ್ತು.

ಶಾಸಕ ಸಿ ಬಿ ಸುರೇಶ್ ಬಾಬು, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಹಾಗೂ ಹಲವು ಶಾಲೆಗಳ ವಿದ್ಯಾರ್ಥಿಗಳು ಮತ್ತು ತಾಲ್ಲೂಕಿನ ವಸತಿ ಶಾಲೆಗಳ ಮಕ್ಕಳು , ಸಾರ್ವಜನಿಕರು ಸೇರಿ ಮಾನವ ಸರಪಳಿಯನ್ನು ರಚಿಸಲಾಗಿತ್ತು. ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಿ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ ಬಿ ಸುರೇಶ್ ಬಾಬು, ಉತ್ಸಾಹ ಹಾಗೂ ಶಾಂತಿಯುತ ಮಾನವ ಸರಪಳಿಯ ಮೂಲಕ ನಮ್ಮೂರಿನಲ್ಲಿ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ನಾವು ಆಚರಿಸಿದ್ದೇವೆ.

ಸರ್ಕಾರದ ಉದ್ದೇಶ ಬೀದರ್’ನಿಂದ ಚಾಮರಾಜನಗರದವರೆಗಿನ 25 ಲಕ್ಷ ಜನ ಸೇರಿ ಐತಿಹಾಸಿಕ ಮಾನವ ಸರಪಳಿ ರಚಿಸಬೇಕು ಎಂಬುದಾಗಿತ್ತು.

ಅದರ ಮಾರ್ಗಮಧ್ಯದಲ್ಲಿ ಬರುವ ನಮ್ಮ ತಾಲ್ಲೂಕಿನ ಎಲ್ಲ ಭಾಗಗಳಲ್ಲೂ ಸಂವಿಧಾನದ ಪೀಠಿಕೆ ಓದುವುದರ ಮೂಲಕ ನಾವು ಪ್ರಜಾಪ್ರಭುತ್ವ ದಿನಾಚರಣೆಯನ್ನು ಉತ್ತಮವಾಗಿ ಆಚರಿಸಿದ್ದೇವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ನಮ್ಮದು. ನಮ್ಮ ಈ ಪ್ರಜಾಪ್ರಭುತ್ವದ ಅಡಿಯಲ್ಲಿ ಇದೂವರೆಗೂ ಇರುವ ವಂಚಿತ ಮತ್ತು ಅಲಕ್ಷಿತ ವರ್ಗಗಳಿಗೂ ಸಲ್ಲಬೇಕಾದ ಪಾಲು ಸಲ್ಲಬೇಕು. ಎಲ್ಲರಿಗೂ ಸಮಾನತೆ ಮತ್ತು ಸಮಾನ ನ್ಯಾಯ ಸಿಗುವಂತಾಗಬೇಕು ಎಂದು ಈ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ನಾನು ಆಶಿಸುತ್ತೇನೆ ಎಂದು ಅವರು ಹೇಳಿದರು.

ಭೀಮಬಂಧು ಗೌತಮ್ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ನಾವಿಂದು ಸಂಭ್ರಮಿಸುತ್ತಿದ್ದೇವೆ. ಈ ನಮ್ಮ ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿರುವ ಬಹಳಷ್ಟು ಪ್ರಯೋಜನಗಳನ್ನು ನಾವಿನ್ನೂ ಸಂಪೂರ್ಣವಾಗಿ ಪಡೆದುಕೊಳ್ಳಲಾಗಿಲ್ಲ.

ನಮ್ಮಲ್ಲಿ ಇನ್ನೂ ಮಾಹಿತಿ ಕೊರತೆಯಿದೆ. ಅರಿವಿನ ಅಭಾವ ಇದೆ.‌ ಪ್ರಜೆಗಳ ಎಲ್ಲ ಪ್ರಸ್ತಾವನೆಗಳು ಸಮರ್ಪಕವಾಗಿ ಜಾರಿ ಆಗಬೇಕಿದ್ದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ತಿಳಿವಳಿಕೆ ಬಹಳ ಮುಖ್ಯ. ಹಾಗಾಗಿ, ನಾವೆಲ್ಲ ಸೇರಿ ಪ್ರಬುದ್ಧ ಭಾರತದ ಆಶಯದಡಿ ಐತಿಹಾಸಿಕ ಮಾನವ ಸರಪಳಿ ರಚಿಸಿ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು, ಶಾಲಾ-ಕಾಲೇಜು ಮಕ್ಕಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ::

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ವಿಶ್ವದಾದ್ಯಂತ ಧ್ವಸ್ಥಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಆಶಯ ಮತ್ತು ಮೌಲ್ಯಗಳನ್ನು ಮತ್ತೆ ಮತ್ತೆ ಎತ್ತಿಹಿಡಿಯುವ ಸಲುವಾಗಿ ಸೆಪ್ಟೆಂಬರ್ 15’ರಂದು ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸುವ ಅನುಮೋದನೆ ಮಾಡಿತು.

ಇದಾಗಿ 2008’ರಿಂದ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಆರಂಭಿಸಿದ ಇಂಟರ್ ಪಾರ್ಲಿಮೆಂಟರಿ ಯೂನಿಯನ್(IPU) ಜಾಗತಿಕವಾಗಿ ಪ್ರಜಾಪ್ರಭುತ್ವ ದಿನಾಚರಣೆಗೆ ನಾಂದಿ ಹಾಡಿತು.

ಸತತವಾಗಿ 20 ವರ್ಷಗಳ ಕಾಲ ಫಿಲಿಪ್ಪೀನ್ಸ್ ದೇಶದಲ್ಲಿ ಸರ್ವಾಧಿಕಾರವನ್ನು ನಡೆಸುತ್ತಿದ್ದ ಫರ್ಡಿನಾಂಡ್ ಮಾರ್ಕೋಸ್’ನ ವಿರುದ್ಧ ‘ಕೊರೊಜನ್ ಸಿ ಅಕ್ವಿನೊ’ ಎಂಬ ಜನಪರ ಹೋರಾಟಗಾರ್ತಿ “ಪೀಪಲ್ ಪವರ್ ರೆವಲ್ಯೂಷನ್” ಸಂಘಟಿಸಿ, ನಿರಂತರ ಹೋರಾಡಿ, ಮಾರ್ಕೋಸ್’ನ ನಿಕುಶ ಪ್ರಭುತ್ವವನ್ನು ಮಣಿಸಿ, 1986’ರ ಸೆಪ್ಟೆಂಬರ್ 15’ರಂದು ತನ್ನ ತಾಯ್ನಾಡು ಫಿಲಿಪ್ಫೀನ್ಸ್’ನಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸುತ್ತಾಳೆ.

ಈಕೆಯ ಈ ಅಪ್ರತಿಮ ಸಾಧನೆ ಸಾಕಾರಗೊಂಡದ್ದು ಸೆಪ್ಟೆಂಬರ್ 15’ರಂದು. ಹೀಗಾಗಿ, ಜಗತ್ತಿನ ಚರಿತ್ರೆಯಲ್ಲಿ ಅತಿಮಹತ್ವದ ದಿನವಾದ ಈ ಸೆಪ್ಟೆಂಬರ್ 15’ನ್ನೇ ಪ್ರಜಾಪ್ರಭುತ್ವದ ದಿನವನ್ನಾಗಿ ಆಚರಿಸಲು ಆಯ್ಕೆ ಮಾಡಲಾಯಿತು.

ಜನಮತದ ಮೂಲಕ ಚುನಾಯಿತರಾದ ಜನನಾಯಕರೇ ಕ್ರಮೇಣ ಸರ್ವಾಧಿಕಾರಿಗಳಾಗಿ ಬದಲಾಗುತ್ತಿರುವ ಆತಂಕಕಾರಿ ಕಾಲಘಟ್ಟದಲ್ಲಿ ಈ 2024’ರ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. ಈ ಬಾರಿಯ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ಯೇಯಘೋಷ, ಪ್ರಜಾಪ್ರಭುತ್ವದ ಕಾರ್ಯಕಲಾಪಗಳಲ್ಲಿ ನಾಗರಿಕರ ವ್ಯಾಪಕ ಒಳಗೊಳ್ಳುವಿಕೆ ಹಾಗೂ ಆಡಳಿತ ಸುಧಾರಣೆಯ ನಿರಂತರ ಪ್ರಕ್ರಿಯೆಗೆ ತೊಡಕಾಗಬಲ್ಲ
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲೆಜೆನ್ಸ್)ಯನ್ನು ಸಂಪೂರ್ಣ ಹೊರಗಿಡುವುದು. ಅತ್ಯಾಧುನಿಕವಾದ ಈ ಕ್ರಾಂತಿಕಾರಕ AI ತಂತ್ರಜ್ಞಾನ ಪ್ರಜಾಪ್ರಭುತ್ವದ ಬಹುಪಾಲು ಎಲ್ಲ ಆಶಯಗಳಿಗೂ ಆತಂಕಕಾರಿ ಅಪಾಯಗಳನ್ನು ತಂದೊಡ್ಡಬಹುದು. ಇದರ ಎಚ್ಚರಿಕೆಯ ಕರೆಘಂಟೆ ಈ ಬಾರಿಯ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಧ್ಯೇಯಘೋಷದಲ್ಲಿದೆ.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಗಣಪತಿ ವಿರ್ಜನೆ ಮಾಡಲು ಹೋಗಿ ಅಪ್ಪ ಮಗ,ಯುವಕ  ಸಾವು

ತುರುವೇಕೆರೆ: ಗಣಪತಿವಿಸರ್ಜನೆ ಮಾಡಲು ಹೋಗಿ ಅಪ್ಪ, ಮಗ ಮತ್ತು ಒರ್ವ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ಭಾನುವಾರ ನಡೆದಿದೆ.

ರಂಗನಹಟ್ಟಿ ಗ್ರಾಮದ ನಿವಾಸಿಗಳಾದ ರೇವಣ್ಣ(50) ಆತನ ಮಗ ಶರತ್(26), ದಯಾನಂದ್(22), ಮೃತರು. ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶನನ್ನು ಊರಿನ ಯುವಕರು ಬೆಳಗಿನಿಂದ ಮೆರವಣಿಗೆ, ಉತ್ಸವ ನಡೆಸಿ 3 ಗಂಟೆಯ ನಂತರ ರಂಗನಕಟ್ಟೆಯಲ್ಲಿ ಗಣೇಶನ ವಿಸರ್ಜನೆ ಮಾಡಲು ಬಂದಿದ್ದಾರೆ. ನಂತರ ಗಣೇಶನನ್ನು ಹಿಡಿದು ಶರತ್ ಮತ್ತು ದಯಾನಂದ್ ನೀರಿಗೆ ಇಳಿದಿದ್ದಾರೆ.

ಈ ವೇಳೆ ಕಟ್ಟೆಯಲ್ಲಿನ ಕೆಸರಿನಿಂದ ಕಾಲುಗಳು ಹೂತುಕೊಂಡು ಈಜಲು ಸಾದ್ಯವಾಗದೆ ಕಟ್ಟೆಯ ದಡದಲ್ಲಿದ್ದವರ ಸಹಾಯಕ್ಕೆ ಕೂಗಿಕೊಂಡಿದ್ದಾರೆ. ತಕ್ಷಣ ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಶರತ್ ಅವರ ತಂದೆ ರೇವಣ್ಣನೂ ನೀರಿಗೆ ದುಮಿಕಿದ್ದಾನೆ. ಆತನೂ ಈಜಲು ಆಗದೆ ನೀರಿನಲ್ಲಿ ಮುಳುಗಿದ್ದಾನೆ.

ವಿಷಯ ತಿಳಿದು ರಂಗನಹಟ್ಟಿ ಸುತ್ತಮುತ್ತಲಿನ ಜನ ಧಾವಿಸಿ, ಜಮಾಯಿಸಿದ್ದರು. ಮೃತರ ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಿಪಿಐ ಲೋಹಿತ್, ದಂಡಿನಶಿವರ ಪಿಎಸ್.ಐ ಚಿತ್ತರಂಜನ್, ಎಸ್ಪಿ ಅವರು ಸ್ಥಳಕ್ಕೆ ಬೇಟಿ ನೀಡಿ ತುರುವೇಕೆರೆ ಪಟ್ಟಣದ ಅಗ್ನಿ ಶಾಮಕ ದಳದ ಸಿಬ್ಬಂದಿಗಳನ್ನು ಶವ ಪತ್ತೆ ಕಾರ್ಯಕ್ಕೆ ಕರೆಯಿಸಿಕೊಂಡಿದ್ದಾರೆ.

‘ಐದಾರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಟ್ಟಿಗೆ ಇಳಿದು ಹಗ್ಗ, ಕಬ್ಬಣಿದ ಕೊಕ್ಕೆ, ಬಲೂನ್ ಬಳಸಿ ಶವಗಳ ಶೋಧ ನಡೆಸುತ್ತಿದ್ದು ಆಗಲೂ ಪತ್ತೆಯಾಗದಿದ್ದರೆ ಬೋಟ್ ಬಳಸಿ ಶೋಧ ಕಾರ್ಯ ನಡೆಸಲಾಗುವುದು ಜೊತೆಗೆ ಕತ್ತಲೆಯಾಗುತ್ತಿರುವುದರಿಂದ ಶವ ಹುಡುಕುವ ಕೆಲಸವೂ ವಿಳಂಭವಾಗುವ ಸಾದ್ಯತೆ ಇದೆ ಎನ್ನುತ್ತಾರೆ ಅಗ್ನಿ ಶಾಮಕ ಠಾಣಾಧಿಕಾರಿ ಚನ್ನಾಚಾರಿ.’

ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.

ಪೋಷಕರಿಲ್ಲದ‌ ಮಕ್ಕಳಿಗೆ 24 ಸಾವಿರ: ಇದನ್ನೊಮ್ಮೆ‌ ಓದಿ

0

ವಾಟ್ಸಪ್ ಸಂದೇಶ ಅಸಂಬದ್ಧ ; ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸ್ಪಷ್ಟನೆ

ಚಿಕ್ಕನಾಯಕನಹಳ್ಳಿ : ‘ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂಪಾಯಿಗಳ ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಈ ಮಾಹಿತಿ ಸಾರ್ವಜನಿಕರಿಗೆ ತಿಳಿದೇ ಇಲ್ಲ’ ಎಂಬ ವಾಟ್ಸಪ್ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ  ಜಿಲ್ಲಾ ಮಕ್ಕಳ ಘಟಕದ ಬಳಿ ವಿಚಾರಿಸಿದಾಗ ಇದು ಮಾಹಿತಿಯ ಅಭಾವ ಹಾಗೂ ದೋಷಯುಕ್ತ ಸಂದೇಶ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸ್ಪಷ್ಟಪಡಿಸಿದೆ.

ಇದಕ್ಕೆ ಅರ್ಜಿ ಸಲ್ಲಿಸಲು ಬಯಸಿ ಪ್ರತಿದಿನ ಹತ್ತಾರು ಮಂದಿ ಜಿಲ್ಲಾಧಿಕಾರಿಗಳ ಕಚೇರಿಗೆ, ತಹಸೀಲ್ದಾರರ ಕಚೇರಿಗೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಗೆ ಫೋನ್ ಕರೆ ಮಾಡಿ ಯೋಜನೆಯ ಕುರಿತು ವಿಚಾರಿಸುತ್ತಿದ್ದಾರೆ. ಇನ್ನು ಕೆಲವು ಕಡೆ ಕೆಲಮಂದಿ ಮಧ್ಯವರ್ತಿಗಳು ಈ ಯೋಜನೆಗೆ ಅರ್ಜಿ ಹಾಕಿಸುತ್ತೇವೆ ಎಂದು ನಂಬಿಸಿ ಜನರಿಂದ ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಬಯಸುವ ಅರ್ಹ ಆಕಾಂಕ್ಷಿಗಳಿಂದ ಸುಲಭದಲ್ಲಿ ಹಣ ಪೀಕುವ ತಂತ್ರವನ್ನೂ ಕೆಲಮಂದಿ ಮಧ್ಯವರ್ತಿಗಳು ರೂಪಿಸಿಕೊಂಡು ಜನರನ್ನು ಮರುಳು ಮಾಡುತ್ತಿದ್ದಾರೆ. ಇದೊಂದು ವದಂತಿಯಾಗಿದ್ದು, ಇಂಥ ಸಂದೇಶ ಜನರ ಫೋನಿಗೆ ಬಂದಿದ್ದರೆ, ಯಾರೂ ಅದನ್ನು ಮುಂದೆ ಫಾರ್ವರ್ಡ್‌ ಮಾಡದೆ ಡಿಲೀಟ್ ಮಾಡಿಬಿಡಲು ಸೂಚಿಸಲಾಗಿದೆ.

ಹಾಗಾದರೆ, ಲಭ್ಯವಿರುವ ಸೌಲಭ್ಯವೇನು ಎಂದು ಪರಿಶೀಲಿಸಿದರೆ, ಈ ಯೋಜನೆಯಲ್ಲಿರುವ ಸೌಲಭ್ಯಗಳ ವಾಸ್ತವತೆಯೇ ಬೇರೆ ಇದೆ. ಮಕ್ಕಳ ಪಾಲನೆ ಮತ್ತು ರಕ್ಷಣೆಯ ಮಕ್ಕಳ ನ್ಯಾಯ ಕಾಯ್ದೆ 2015, ತಿದ್ದುಪಡಿ 2021 ಕಲಂ 2(58) ರ ಪ್ರಕಾರ, ಕುಟುಂಬದೊಂದಿಗೆ ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಮಗುಬಿನ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಬೇಕಾಗಿರುವ ಪೂರಕ ಬೆಂಬಲ, ಹಣಕಾಸು ಮತ್ತು ಇತ್ಯಾದಿ ಸಹಕಾರ ನೀಡಲು ಲಭ್ಯವಿರುವ “ಪ್ರಾಯೋಜಕತ್ವ ಕಾರ್ಯಕ್ರಮ” ಎಂದು ವ್ಯಾಖ್ಯಾನಿಸಲಾಗಿರುವ ಕಾರ್ಯಕ್ರಮವನ್ನು ಹೀಗೆ ಮಾಹಿತಿ ಅಭಾವ ಮತ್ತು ದೋಷಯುತ ವದಂತಿಯನ್ನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ.

ಸದರಿ ಪ್ರಾಯೋಜಕತ್ವ ಕಾರ್ಯಕ್ರಮದ ಅಡಿಯಲ್ಲಿ ಪುನರ್ವಸತಿ ಮತ್ತು ತಡೆಗಟ್ಟುವಿಕೆ ಎಂಬ ಎರಡು ಮಾದರಿಗಳಿವೆ. 18 ವರ್ಷ ವಯಸ್ಸಿನ ಒಳಗಿರುವ ಮಕ್ಕಳನ್ನು ಮಕ್ಕಳ ಪಾಲನಾ ಸಂಸ್ಥೆಯ ವಾತಾವರಣದಿಂದ ಬಿಡುಗಡೆಗೊಳಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸಲು ಪ್ರಾಯೋಜಕತ್ವ ಬೆಂಬಲ ಒದಗಿಸುವ ಅವಕಾಶ ಪುನರ್ವಸತಿ ಮಾದರಿಯಲ್ಲಿದೆ. ಅದೇ ರೀತಿ ವಿವಿಧ ಕಾರಣಗಳಿಗಾಗಿ ಪೋಷಕರಿಂದ ಬೇರ್ಪಟ್ಟು ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಕುಟುಂಬದ ವಾತಾವರಣದಲ್ಲಿ ಮಕ್ಕಳು ಬೆಳೆಯುವ ಅನುಕೂಲವನ್ನು ಒದಗಿಸಲು ತಡೆಗಟ್ಟುವಿಕೆ ಮಾದರಿಯ ಪ್ರಾಯೋಜಕತ್ವ ಬೆಂಬಲ ಒದಗಿಸಲು ಅವಕಾಶವಿದೆ.

ಇದು, ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ ಮಕ್ಕಳು, ಬಾಲ ನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡುವ ಮಕ್ಕಳು, ಮಕ್ಕಳ ಕಾಯ್ದೆ 2015’ರ ಪ್ರಕಾರ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು, ವಸತಿರಹಿತ ಮಕ್ಕಳು, ನೈಸರ್ಗಿಕ ವಿಕೋಪಗಳಿಗೆ ಒಳಗಾದ ಸಂತ್ರಸ್ತ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು, ಬಾಲ್ಯವಿವಾಹಕ್ಕೆ ಬಲಿಯಾದ ಸಂತ್ರಸ್ತರು, ಮಾನವ ಕಳ್ಳಸಾಗಾಣಿಕೆಗೆ ಒಳಗಾದ ಸಂತ್ರಸ್ತ ಮಕ್ಕಳು, ಹೆಚ್ಐವಿ ಅಥವಾ ಇನ್ನಿತರೆ ಮಾರಣಾಂತಿಕ ರೋಗಗಳಿಗೆ ಒಳಗಾದ ಸಂತ್ರಸ್ತ ಮಕ್ಕಳು, ವಿಶೇಷ ಚೇತನ ಮಕ್ಕಳು, ತಪ್ಪಿಸಿಕೊಂಡಿರುವ ಅಥವಾ ಮನೆಬಿಟ್ಟು ಓಡಿ ಬಂದಿರುವ ಮಕ್ಕಳು, ಬಾಲ ಭಿಕ್ಷುಕ ಮಕ್ಕಳು, ಬೀದಿ ವಾಸಿ ಮಕ್ಕಳು, ಹಿಂಸೆಗೆ ಒಳಪಟ್ಟ ಅಥವಾ ನಿಂದನೆಗೆ ಒಳಪಟ್ಟ ಮಕ್ಕಳು, ಇತರೆ ಶೋಷಿತ ಮಕ್ಕಳು ಹಾಗೂ ತಾಯಿ ವಿಧವೆ ಅಥವಾ ವಿಚ್ಛೇದಿತೆ ಅಥವಾ ಕುಟುಂಬದಿಂದ ಪರಿತ್ಯಜಿಸಲ್ಪಟ್ಟಿದ್ದರೆ ಅಂತಹವರ ಅರ್ಹ ಮಕ್ಕಳು, ಲೈಂಗಿಕವಾಗಿ ದುರ್ಬಳಕೆಗೆ ಒಳಗಾದ ಸಂತ್ರಸ್ತ ಮಕ್ಕಳು, ವಿಸ್ತೃತ ಕುಟುಂಬದಲ್ಲಿರುವ ಅನಾಥ ಮಕ್ಕಳು, ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಅರ್ಹ ಮಕ್ಕಳು, ಜೈಲು ಸೇರಿರುವ ಪೋಷಕರ ಮಕ್ಕಳು ತರಹದ ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಮಾತ್ರ ಪ್ರಾಯೋಜಕತ್ವ ಬೆಂಬಲ ಯೋಜನೆಯಡಿ ಅನುಕೂಲ ಒದಗಿಸಿಕೊಡಲು ಅವಕಾಶಗಳಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.


______ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಕ್ರೀಡಾಕೂಟ ಝಲಕ್

1

ತುರುವೇಕೆರೆ: ಪಟ್ಟಣದ ಸರ್ಕಾರಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲಾ ವತಿಯಿಂದ 2024 -25 ನೇ ಸಾಲಿನ ತಾಲ್ಲೂಕು ಕಸಬಾ ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟವನ್ನು ಇಲ್ಲಿನ ಜಿಜೆಸಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾ ಅಧಿಕಾರಿ ಮೆಹಬೂಬಿ ಜಿ.ಆರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳ ದೈಹಿಕ ಮತ್ತು ಮಾನಸಿಕ ಸಮತೋಲವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯಮೂಲ್ಯವಾದ ಸಾಧನ. ಪಠ್ಯ ವಿಷಯಗಳ ಕಲಿಕೆಯ ಜೊತೆಗೆ ಕ್ರೀಡಾ ಶಿಕ್ಷಣವೂ ಅತ್ಯಗತ್ಯ. ಪ್ರಪಂಚದ ಮುಂದುವೆರೆ ದೇಶಗಳಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ಕೊಡುತ್ತಾರೆ ಅದೇ ರೀತಿ ನಮ್ಮ ದೇಶದಲ್ಲಿಯೂ ಕ್ರೀಡೆಗೆ ವಿಶೇವಾದ ಸ್ಥಾನ ಮಾನ ನೀಡಲಾಗುತ್ತಿದೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಸಾಧಕರ ಜೀವನ ಯಶೋಗಾತೆಯನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು ಎಂದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿದ್ದಪ್ಪ ನಾಗಪ್ಪ ವಾಲೇಕರ್ ರವರು ಧ್ವಜಾರೋಹಣ ಮಾತನಾಡುತ್ತಾ ಹಳ್ಳಿಗಾಡಿನ ಮಕ್ಕಳು ಕ್ರೀಡಾಸಕ್ತಿಯಲ್ಲಿ ಸದೃಢರಾಗಿದ್ದು ಅವರಿಗೆ ಸೂಕ್ತ, ಮಾರ್ಗದರ್ಶನ ಹಾಗು ಪ್ರೋತ್ಸಾಹ ನೀಡಿದರೆ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ ಎಂದರು.

ಕಸಬಾ ಹೋಬಳಿ ವ್ಯಾಪ್ತಿಯ 25 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಹುಮಾನ ಗೆದ್ದರು. ಹೋಬಳಿ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷರಾದ ನಜೀರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಭಾರತಿ, ನಿರ್ದೇಶಕ ಕಂಚಿರಾಯಪ್ಪ, ಕ್ಲಸ್ಟರ್ ಸಿ.ಆರ್.ಪಿಗಳಾದ ವಾಸ್ ಕೋಟ್ ರಾಜು, ಸುರೇಶ, ಮೌಲಾನಾ ಆಜಾದ್ ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ್ ಡಿ.ಎಸ್ ಅಲ್ಪಸಂಖ್ಯಾರ ಇಲಾಖೆಯ ಸಿಬ್ಬಂದಿ ಅಸ್ಲಾಂಪಾಷಾ, ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.