Thursday, February 26, 2026
Google search engine
Home Blog Page 254

ಸಂಕ್ರಮಣ

ದೇವರಹಳ್ಳಿ ಧನಂಜಯ


ವಸ್ತಿಲಲಿ ಹೊಂಚಿ ಕುಂತಿದೆ ಅಪಾಯ!
ವಾಸ್ತವ ತಿಳಿಯದ ಮುಗ್ಧ
ಕೊನೇಕಾರ ರಂಗಯ್ಯ ರೋಟಿ ಕಟ್ಟಿದ್ದಾನೆ.
ಅವನ ಮಗ
ನಕ್ಷತ್ರಗಳ ಕೀಳಲು ಜಾವಣಿಗೆ ಎತ್ತಿದ್ದಾನೆ.

“ಮಗನ ಚೆನ್ನಾಗಿ ಓದಿಸಿ ಆಫೀಸರ್ ಮಾಡ್ತೀನಿ
ಎಷ್ಟೇ ಕರ್ಚ್ ಆಗಲಿ”
ಹೇಳಿದ ಮಾತಲ್ಲಿ ವಿಶ್ವಾಸ ಕಾಣಲಿಲ್ಲ
ಎದೆ ಜಾತ್ರೆಯಲಿ
ಕನಸುಗಳು ಮದಾಸಿ ನಿಂತಿಲ್ಲ

ಸಂಕ್ರಾಂತಿ ಬಂತು ಬೆಟ್ಟ ಹತ್ತಬೇಕು
ಹೊನ್ನ ಮರಡಿ ಪರಿಷೆ
ಬಂದೇಬಿಡ್ತು ಹರಕೆ ತೀರಿಸಬೇಕು
ನನ್ನ ಮಗನಿಗೆ
ದೇವರು ಒಳ್ಳೆಯದು ಮಾಡಬೇಕು

ಗೊತ್ತಿಲ್ವಾ ಬಂದೈತೆ ಕೂರೋನ ಶಕ್ತಿ ಎಲ್ಲೈತೆ
ದೇವರಿಗೆ ಅಂದೆ
“ಪಾಪಿಗಳು ಉಲ್ಡೋಗ್ಲಿ, ಪಾಪ ದೇವರು!”
ಜಾವಣಿಗೆ ಎಳೆದ ರಂಗಯ್ಯ
ಚರಕ್!ಗೊನೆ ಬಿತ್ತು.ಪಾಪ-ಪುಣ್ಯದ ಮಾತು.

ಸಂಕ್ರಮಣದ ಸೂರ್ಯನಿಗೆ
ಗ್ರಹಣ ಬಡಿದಿದೆ.
ಬಿಸಿಲ ಚಾಟಿಯ ಸರದಾರನಿಗೆ
ಏನೋ ಅಳುಕು.
ಒಳಒಳಗೆ ಎದೆಯ ಚಳುಕು.

ನೊಗ ಕಳಚಿವೆ ಸಪ್ತಾಶ್ವಗಳು;
ಕಡಗೀಲು ಕಳಚಿ,
ಸಪ್ತಮಿ ರಥ ಮುರಿದುಬಿದ್ದಿದೆ.
ಪಥಭ್ರಾಂತವಾಗಿದೆ
ಹೊತ್ತಿನ ತುತ್ತಿಗೆ ದುಡಿವವರ ಬದುಕು.

ಕತ್ತರಿ ಮತ್ತು ಬೈಂಡು

0
ಜಿ.ಎನ್.ಮೋಹನ್
ರಾಜೇಶ್ವರಿ ತೇಜಸ್ವಿ ತಮ್ಮ ಬ್ಯಾಗು ಮುಟ್ಟಿ ನೋಡಿಕೊಳ್ಳುತ್ತಾ ಇದ್ದರು. ಇದು ಸುಮಾರು ಸಲ ನಡೆದಿತ್ತು.

ಅದು ತೇಜಸ್ವಿಯವರ ‘ಕರ್ವಾಲೋ’ ಕೃತಿಯ ಜರ್ಮನ್ ಅನುವಾದದ ಬಿಡುಗಡೆ ಸಮಾರಂಭದ ದಿನ. ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿತ್ತು. ಕೃತಿಯ ಇಬ್ಬರು ಅನುವಾದಕರಾದ ಪ್ರೊ ಬಿ ಎ ವಿವೇಕ ರೈ, ಕತ್ರಿನಾ ಬಿಂದರ್ ಜೊತೆ ಪ್ರೊ ಸಿ ಎನ್ ರಾಮಚಂದ್ರನ್, ಎನ್ ಆರ್ ವಿಶುಕುಮಾರ್, ಕೆ ಪಿ ಈಶಾನ್ಯೆ, ಎಚ್ ಆರ್ ಸುಜಾತಾ ಹಾಗೂ ನಾನು ವಿಶು ಚೇಂಬರ್ ನಲ್ಲಿ ಕುಳಿತು ಹರಟೆ ಹೊಡೆಯುತ್ತಾ ಇದ್ದೆವು.

ಆಗಲೇ ಇದನ್ನು ನಾನು ಗಮನಿಸಿದ್ದು.ನಾನು ತಕ್ಷಣ ‘ಮೇಡಂ ಅದೇನು ಇಟ್ಟಿದ್ದೀರಿ ಬ್ಯಾಗ್ ನಲ್ಲಿ?’ ಎಂದು ಕೇಳಿಯೇಬಿಟ್ಟೆ.

ಆಗ ರಾಜೇಶ್ವರಿ ತೇಜಸ್ವಿ ಹಾಗೂ ಈಶಾನ್ಯೆ ಮುಖದಲ್ಲಿ ಮುಗುಳ್ನಗೆ ರಾಜೇಶ್ವರಿ ಒಂದು ಶತಮಾನದ ಗುಟ್ಟು ಬಿಟ್ಟುಕೊಟ್ಟರು. ಯಾವುದೇ ಪುಸ್ತಕ ಬಿಡುಗಡೆಗೆ ಹೋದರೂ ಒಂದು ಸಮಸ್ಯೆ ಇರುತ್ತೆ. ಈಗ ಅದು ಹೇಗೆ ಪ್ಯಾಕ್ ಮಾಡುತ್ತಾರೋ ಏನೋ.. ಪುಸ್ತಕ ಬಿಡುಗಡೆ ಮಾಡುವಾಗ ಪ್ಯಾಕ್ ಮಾಡಿದ ಕವರ್ ತೆಗೆಯಲು ಹರಸಾಹಸ ಪಡಬೇಕು. ಮೊದಲೇ ಪ್ಲಾಸ್ಟಿಕ್ ರೀತಿಯ ಕವರ್ ಅದಕ್ಕೆ ಎಷ್ಟು ಸೆಲೋ ಟೇಪ್ ಮೆತ್ತಿರುತ್ತಾರೆ ಎಂದರೆ ಪುಸ್ತಕಕ್ಕೆ ವಿಮೋಚನೆ ಕೊಡುವಷ್ಟರಲ್ಲಿ ಸಾಕು ಸಾಕಾಗಿ ಬಿಡುತ್ತದೆ. ನೋಡುಗರಿಗೂ ಬೇಜಾರು.. ಎಂದವರೇ ಹಾಗಾಗಿ ನಾನು ಒಂದು ಪ್ಲಾನ್ ಮಾಡಿದ್ದೇನೆ.


ನನ್ನನ್ನು ಯಾವುದೇ ಪುಸ್ತಕ ಬಿಡುಗಡೆಗೆ ಕರೆದರೂ ಬ್ಯಾಗ್ ನಲ್ಲಿ ಒಂದು ಕತ್ತರಿ ಇಟ್ಟುಕೊಂಡೇ ಹೊರಡುತ್ತೇನೆ. ಬೈಂಡ್ ಮಾಡಿರುವ ರೀತಿ ನೋಡಿ ಬ್ಯಾಗ್ ನಿಂದ ಕತ್ತರಿ ಹೊರಬರುತ್ತದೆ. ಕಟ್ ಮಾಡಿ ಸಮಸ್ಯೆಯನ್ನು ಚಿಟಕಿ ಹೊಡೆಯುವುದರಲ್ಲಿ ಮುಗಿಸುತ್ತೇನೆ ಎಂದರು.

ರೂಮ್ ನಲ್ಲಿದ್ದವರೆಲ್ಲರೂ ಸೂರು ಹಾರಿಹೋಗುವಂತೆ ನಕ್ಕೆವು. ಇನ್ನೂ ನಗು ಮುಗಿದಿರಲಿಲ್ಲ. ಆಗ ಪ್ರೊ ಸಿ ಎನ್ ಆರ್ ‘ಆದರೆ… ಇವತ್ತು ಅದು ತರೋದು ಬೇಕಿರಲಿಲ್ಲವೇನೋ’ ಎಂದು ದನಿ ತೆಗೆದರು. ಮಾತು ಇಲ್ಲವೇ ಇಲ್ಲ ಎನ್ನುವಂತೆ ಯಾವಾಗಲೂ ಇರುವ ಸಿ ಎನ್ ಆರ್ ಹಾಗೆ ಅಂದದ್ದು ಎಲ್ಲರಿಗೂ ಆಶ್ಚರ್ಯ ತಂದಿತ್ತು.ರಾಜೇಶ್ವರಿಯವರೂ ಸೇರಿದಂತೆ ಎಲ್ಲರೂ ‘ಅದ್ಯಾಕೆ..ಯಾಕೆ’ ಎಂದು ಕೇಳಿದರು. ಸಿ ಎನ್ ಆರ್ ಮುಗುಳ್ನಗುತ್ತಾ ‘ಇವತ್ತು ಕತ್ತರಿಯನ್ನು ನಾವೇ ಕರೆದುಕೊಂಡು ಬಂದಿದ್ದೇವೆ’ ಎಂದರು.ಎಲ್ಲರೂ ಇದೇನಪ್ಪಾ ಎಂದು ಆವಾಕ್ಕಾದರು.

ಆಗ ಸಿ ಎನ್ ಆರ್ ತೋರಿಸಿದ್ದು ಈ ಪುಸ್ತಕ ಬಿಡುಗಡೆಗಾಗಿಯೇ ಜರ್ಮನಿಯಿಂದ ಹಾರಿಬಂದಿದ್ದ ‘ಕತ್ರಿನಾ’ ಕಡೆಗೆ.

ತಕ್ಷಣ ಎಲ್ಲರಿಗೂ ಬಲ್ಬ್ ಹತ್ತಿದಂತಾಗಿ ಮತ್ತೊಮ್ಮೆ ಜೋರಾಗಿ ನಕ್ಕೆವು.

ಇನ್ನೂ ನಗೆ ಅಡರಿರಲಿಲ್ಲ. ಆಗ ಸಿ ಎನ್ ಆರ್ ಮತ್ತೆ ‘ಬರೀ ಕತ್ತರಿ ಅಲ್ಲ.. ಅವರು ಬೈಂಡೂ ಮಾಡ್ತಾರೆ’ ಎಂದು ನಗು ನಿಲ್ಲದೆ ಮತ್ತೆ ಮುಂದುವರಿಯಲು ಕಾರಣರಾದರು.

ಯಾಕೆಂದರೆ ನಮ್ಮೆದುರು ಇದ್ದ ಆಕೆಯ ಸಂಪೂರ್ಣ ಹೆಸರು ‘ಕತ್ರಿನಾ ಬಿಂದರ್’

ದೋಣಿ ಮುಳುಗುವ ಭಯದಲ್ಲೇ ಸಾಗುತ್ತಿದೆ ನನ್ನ ಪತ್ರಿಕಾ ಪಯಣ

4

ಹುಳಿಯಾರು ಮಹೇಶ್


1998 ಗ್ರಾಮೀಣ ಪ್ರದೇಶಗಳ ಸುದ್ದಿಗಳು ಪತ್ರಿಕೆಗಳಲ್ಲಿ ಆಗೊಮ್ಮೆಹೀಗೊಮ್ಮೆ ಪ್ರಕಟಣೆಯಾಗುತ್ತಿದ್ದವು. ಇಂದು ಕಳುಹಿಸಿದ ಸುದ್ದಿಗಳು ವಾರಕ್ಕೆ ಪ್ರಸಾರ ಮಾಡಲಾಗುತ್ತಿತ್ತು.

ಅಂಚೆ ಮೂಲಕ ಕಳುಹಿಸಿದ ಸುದ್ದಿಗಳು ಡಿಟಿಪಿಗಳಿಗೆ ಒಳಪಟ್ಟು ಪ್ರಸಾರಕ್ಕೆ ಯೋಗ್ಯವೆನಿಸಿದ ಸುದ್ದಿಗಳು ಮಾತ್ರ ಪ್ರಕಟಗೊಳ್ಳುತ್ತಿದ್ದವು. ಈ ವೇಳೆಗೆ ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಸಹ ಅಗಮನವಾಗಿತ್ತು.

ಇಂತಹ ಸಂದರ್ಭದಲ್ಲಿ ಅನಿವಾರ್ಯ ಸ್ಥಿತಿಯಲ್ಲಿ ನಾನು ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟೆ. ಆರಂಭದಲ್ಲಿ ಚಿ.ನಾ.ಹಳ್ಳಿ ಸುದ್ಧಿ ವಾರಪತ್ರಿಕೆಯಲ್ಲಿ ಸುದ್ದಿ ಬರೆಯುವ ಮೂಲಕ ನನ್ನ ಪತ್ರಿಕಾ ಜೀವನ ಆರಂಭಗೊಂಡಿತು.

ಒಂದೆರಡು ವರ್ಷ ಅದೇ ಪತ್ರಿಕೆಯಲ್ಲಿ ಕೆಲಸ ನಡೆಯುತ್ತಿತ್ತು. ಯಾವುದೇ ಪಗಾರ ಬರದಿದ್ದರೂ ಪತ್ರಿಕೆಯಲ್ಲಿ ಸುದ್ದಿ ಬರುತ್ತದೆ ಎಂಬು ಜೋಶ್ ಮಾತ್ರ ಇತ್ತು.

ರಾಜ್ಯ ಮಟ್ಟದ ಪತ್ರಿಕೆಗೆ ಸುದ್ದಿ ಬರೆಯಬೇಕು ಎಂಬ ತುಡಿತ ಒಂದೇ ಸಮನೇ ಮನಸ್ಸನ್ನು ಕಾಡುತ್ತಿತ್ತು. ಆಗ ತಾನೇ ವಿಜಯ ಕರ್ನಾಟಕ ಪತ್ರಿಕೆ ಆರಂಭ ಆಗಿತ್ತು. ಈ ವೇಳೆಗೆ ವಿಜಯ ಕರ್ನಾಟಕ ಪತ್ರಿಕೆಯ ಚಿಕ್ಕನಾಯಕನಹಳ್ಳಿ ಏಜೆನ್ಸಿ ಹಾಗೂ ಸುದ್ದಿಗಾರರು ಆದ ಹಿರಿಯರಾದ ಮೇರುನಾಥ್ ಅವರು ಅಂದಿನ ವಿಜಯ ಕರ್ನಾಟಕ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿಸಿ ಪತ್ರಿಕೆಗೆ ಹುಳಿಯಾರು ಭಾಗದಿಂದ ಸುದ್ಧಿ ಕಳುಹಿಸುತ್ತಾನೆ ಎಂದು ಪರಿಚಯಿಸಿದರು.

ಆದ್ರೆ ಭಟ್ಟರು 6 ತಿಂಗಳು ಸುದ್ದಿ ಕಳುಹಿಸಿ ಆಮೇಲೆ ಯಾವುದನ್ನು ತೀರ್ಮಾನ ಮಾಡುತ್ತೇವೆ ಅಂದು ಬಿಟ್ಟರು. ಆದ್ರೂ ಛಲ ಬಿಡದ ತ್ರಿವಿಕ್ರಮನಂತೆ 2 ವರ್ಷಗಳ ಕಾಲ ಯಾವುದೇ ಪಗಾರವಿಲ್ಲದೆ ನನ್ನದೇ ಅಂಚೆ, ಕೊರಿಯರ್, ಹಾಗೂ ಪ್ಯಾಕ್ಸ್ ವೆಚ್ಚಗಳನ್ನು ಭರಿಸಿ ಸುದ್ದಿ ಕಳುಹಿಸಿದೆ.

ಆದರೆ ಕಳುಹಿಸಿದ ನಾಲ್ಕೈದು ಸುದ್ದಿಗಳಲ್ಲಿ 1 ಸುದ್ದಿ ಬಂದ್ರೆ ಬಂತು ಇಲ್ಲವಾದರೆ ಅದು ಇಲ್ಲ. ಸುದ್ದಿ ಬರೆಯುವುದು ಸಹ ಆಗ ಸವಾಲಿನ ಕೆಲಸ ಆಗಿತ್ತು. ಪತ್ರಿಕೆಯೊಂದಿಗಿನ ನಡಿಗೆ ಮುಳ್ಳಿನ ಹಲಗೆಯಾಗಿತ್ತು. ಸ್ವಲ್ಪ ಎಚ್ಚರ ತಪ್ಪಿದರೆ ದೊಡ್ಡ ವಿರೋಧವನ್ನು ಎದುರಿಸಬೇಕಾಗಿತ್ತು.

ನಮ್ಮದೇ ಹಣದಲ್ಲಿ ಫೋಟೋಗಳನ್ನು ಪ್ರಿಂಟ್ ಹಾಕಿಸಿ ಕೊರಿಯರ್ ಮೂಲಕ ಸುದ್ದಿ ಕಳುಹಿಸಿ ದಿನಕ್ಕೆ 100 ರೂ ಹಣ ನಮ್ಮದೇ ಖರ್ಚು. ಆದ್ರೂ ರಂಗ ಬಿಡುವ ಮನಸ್ಸಿಲ್ಲ. ಹಾಗೂ ಹೀಗೂ 2 ವರ್ಷ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಯಾವುದೇ ಪಗಾರವಿಲ್ಲದೆ ದುಡಿದೆ.

ಈ ವೇಳೆಗೆ ಪ್ರತಿಷ್ಠಿತ ಪ್ರಜಾವಾಣಿ ಹುಳಿಯಾರು ಹೋಬಳಿಗೆ ಸುದ್ದಿ ಕಳುಹಿಸಲು ಅರೆಕಾಲಿಕ ವರದಿಗಾರ ಹುದ್ದೆಯನ್ನು ಸೃಷ್ಟಿಸಿ ಪ್ರಕಟಣೆ ಹೊರಡಿಸಿತ್ತು. ಕೂಡಲೇ ಅರ್ಜಿ ಸಲ್ಲಿಸಿಯೇ ಬಿಟ್ಟೆ. 15 ದಿನದಲ್ಲಿಯೇ ನನ್ನ ಮನೆ ದೂರವಾಣಿಗೆ ಬೆಂಗಳೂರು ಪ್ರಜಾವಾಣಿ ಕಚೇರಿಯಿಂದ ಕರೆ ಬಂದಿತ್ತು. ತಾವು ಬೆಂಗಳೂರು ಕಚೇರಿಯಲ್ಲಿ ನಡೆಯುವ ಇಂಟರ್ ವ್ಯೂ ನಲ್ಲಿ ಭಾಗವಹಿಸಬೇಕು.

ಇಂಟರ್ ವ್ಯೂ ನಲ್ಲಿ ನಾನೇ ಸೆಲೆಕ್ಟ್ ಆಗಿ ಬಿಟ್ಟೆ. 2002ರಲ್ಲಿ ಪ್ರಜಾವಾಣಿಗೆ ಸೇರಿದ್ದೆ ತಡ ಸುದ್ದಿಗಳ ಸರಮಾಲೆಯನ್ನೇ ಆರಂಭಿಸಿದೆ. ನನ್ನ ಸುಮಾರು 18 ವರ್ಷದ ಅವಧಿಯಲ್ಲಿ ಪ್ರಜಾವಾಣಿ ಸಾಕಷ್ಟು ಜ್ಞಾನ ಮತ್ತು ಹೆಸರು ತಂದು ಕೊಟ್ಟಿದೆ.

ಎಂದಿಗೂ ಪ್ರಜಾವಾಣಿ ಹಾಗೂ ನನಗೆ ಪತ್ರಿಕಾ ಕ್ಷೇತ್ರದ ಅ ಆ ಇ ಈ ಹೇಳಿಕೊಟ್ಟ ಚಿ.ನಾ.ಹಳ್ಳಿ ಸುದ್ದಿ, ವಿಜಯ ಕರ್ನಾಟಕ, ಪ್ರಜಾ ಪ್ರಗತಿ ಪತ್ರಿಕೆಗಳಿಗೆ ಚಿರಋಣಿ.

ನನ್ನ 22 ವರ್ಷಗಳ ಪತ್ರಿಕಾ ಕ್ಷೇತ್ರದಲ್ಲಿ ಕಷ್ಟ ನಷ್ಟ , ಹೊಗಳಿಕೆ ತೆಗಳಿಕೆ ಎಲ್ಲವನ್ನೂ ಕಂಡಿದ್ದೇನೆ. ಹಲವಾರು ಬದಲಾವಣಿ ಕಂಡಿದ್ದೇನೆ. ಅಂಚೆಯಿಂದ ಹಿಡಿದು ಮಿಂಚಂಚೆಯವರಿಗೂ ಜ್ಞಾನ ಬೆಳೆಸಿಕೊಂದಿದ್ದೇನೆ.

ಇಷ್ಟೆಲ್ಲ ಆರ್ಭಟದಿಂದ ನಡೆದ ಮುದ್ರಣ ಮಾಧ್ಯಮ ಇಂದು ಅನೇಕ ಕಷ್ಟಗಳನ್ನು ಎದುರಿಸುತ್ತಿದೆ. ಇಂದಿನ ಮುದ್ರಣ ಮಾಧ್ಯಮದ ಸ್ಥಿತಿ ನೋಡಿದರೆ ಮುಳುಗಿ ಹೋಗಿಯೇ ಬಿಡುತ್ತದಯೇ ಎಂಬ ಅನುಮಾನ ಕಾಡುತ್ತಿದೆ.

ನಾನು ಪತ್ರಿಕಾ ಕ್ಷೇತ್ರಕ್ಕೆ ಬಂದ ಹೊಸದರಲ್ಲಿ ನಮ್ಮ ಹಿರಿಯರು ಮುದ್ರಣ ಮಾಧ್ಯಮ ಮುಳುಗುತ್ತಿರುವ ದೋಣಿ ಎಂದು ಹೇಳುತ್ತಿದ್ದರು. ಆದರೆ ಸುಮಾರು 20 ವರ್ಷಗಳಿಂದ ದೋಣಿ ಮುಳುಗುತ್ತದೆ ಎಂಬ ಭಯದಲ್ಲೆ ಪ್ರಯಾಣ ಮಾಡಿದ್ದೇನೆ, ಮಾಡುತ್ತಲೂ ಇದ್ದೇನೆ.

ಹಲವಾರು ಕಾರಣಗಳಿಂದ ಮುದ್ರಣ ಮಾಧ್ಯಮ ಇಂದು ಸಂಕಷ್ಟದಲ್ಲಿ ಸಿಲುಕಿದೆ ಎಂಬ ಭಾವನೆ ಮೂಡುತ್ತದೆ. ಇಂದು ಪತ್ರಿಕೆಗಳ ಪುಟ ಕಡಿಮೆ ಆಗುತ್ತಿರುವುದರ ಜತೆ ಹಲವಾರು ಬದಲಾವಣೆ ಕಾಣುತ್ತಿರುವುದು ನನ್ನನ್ನು ಇಂತಹ ಭಯದ ಕೂಪಕ್ಕೆ ತಳ್ಳಿದೆ.

ಆದರೆ ನೂರಾರು ವರ್ಷಗಳ ಇತಿಹಾಸವಿರುವ ಮುದ್ರಣ ಮಾಧ್ಯಮ ಮುಳುಗಿಸದೆ ಉಳಿಸುವ ಭಾರ ಓದುಗರ ಮೇಲಿದೆ…ಕಾಲವೇ ಎಲ್ಲವನ್ನೂ ನಿರ್ಣಯಿಸುವುದರಿಂದ ಭಯಪಡದೇ ಮುದ್ರಣ ಮಾಧ್ಯಮದಲ್ಲಿ ಇನ್ನಷ್ಟು ದಿನ ಸೇವೆ ಸಲ್ಲಿಸುವ ಇರಾದೆ ಇದೆ. ನೋಡೋಣ…


ಹುಳಿಯಾರು ಮಹೇಶ್ ಒಳ್ಳೆಯ ಕೃಷಿಕರು. ಹಾಗೆಯೇ ಉತ್ತಮ ಪತ್ರಕರ್ತರು ಹೌದು. ಅನೇಕ ವರದಿಗಳಿಗೆ ಅವರು ಹೆಸರುಗಳಿಸಿದ್ದಾರೆ. ಅನೇಕ ಪ್ರಶಸ್ತಿ, ಗೌರ‌ವಗಳು ಸಂದಿವೆ. ಸದ್ಯ, ಅವರು ಪ್ರಜಾವಾಣಿಯ ಹುಳಿಯಾರು ವರದಿಗಾರರು.

ಅಂಕಿ ಅಂಶ ಕೇಳಿದರೆ ತಡಬಡಾಯಿಸುತ್ತೀರಾ….

ತುಮಕೂರು: ಕೋವಿಡ್-19 ಹರಡುವ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ಲಾಕ್ ಡೌನ್ ಇರುವ ಕಾರಣ ಕ್ಷೇತ್ರದಲ್ಲಿ ಯಾರೂ ಊಟ ವಿಲ್ಲದೆ ನರಳಬಾರದು. ಅಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.


ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ., ರಿಪ್ಪನ್ ಪೇಟೆ


ಲಾಕ್ ಡೌನ್ ಹಿನ್ನೆಲೆ ಕೊರಟಗೆರೆ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡ ಅವರು ಕೇತ್ರದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳು 5 ಸಾವಿರ ಮಾಸ್ಕ್ ವಿತರಣೆ ಮಾಡಿ ಕೊರೊನಾ ಹರಡದಂತೆ ಮುಂಜಾಗೃತಾ ಕ್ರಮ ವಹಿಸುವಂತೆ ಅಧಿಕಾರಿಗಳಿ ಸೂಚನೆ ನೀಡಿದರು.

ಇಲ್ಲಿವರೆಗೂ ತಾಲ್ಲೂಕಿಗೆ ಹೊರಗಿನಿಂದ ಯಾರ್ಯಾರು ಬಂದಿದ್ದಾರೆ ಎಂಬ ಅಂಕಿಅಂಶ ನೀಡಲು ತಡವರಿಸಿದ ತಹಶೀಲ್ದಾರ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು ಬೇಜವಾಬ್ದಾರಿಯನ್ನು ಸಹಿಸುವುದಿಲ್ಲ. ಇಲ್ಲಿವರೆಗೆ 9 ಸಾವಿರ ಜನ ತಾಲ್ಲೂಕಿಗೆ ಬಂದಿದ್ದಾರೆ ಎಂದು ಮಾತ್ರ ಹೇಳುತ್ತಿದ್ದೀರಾ ಆದರೆ ಅವರ ಸಂಪೂರ್ಣ ಮಾಹಿತಿ ಕೇಳಿದರೆ ತಡಬಡಾಯಿಸುತ್ತೀರಾ ಯೂಸ್ ಲೆಸ್ ಫೆಲೋ ಎಂದು ತರಾಟೆಗೆ ತೆಗೆದುಕೊಂಡರು.

ಲಾಕ್ ಡೌನ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಯಾರೂ ಕೂಡ ಊಟ ವಿಲ್ಲದೆ ಹಸಿವಿನಿಂದ ನರಳಬಾರದು. ಅಂತವರು ಕಂಡು ಬಂದರೆ ತಕ್ಷಣ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು.ಸ್ಥಳೀಯ ಫ್ರೆಂಡ್ಸ್ ಗ್ರೂಪ್ ವತಿಯಿಂದ ದಿನ ನಿತ್ಯ ನಿರ್ಗತಿಕರಿಗೆ ಊಟ ನೀಡುತ್ತಿರುವುದನ್ನು ಶ್ಲಾಘಿಸಿದ ಅವರು ಊಟ ಕೊಡುವುದನ್ನು ನಿಲ್ಲಿಸುವಂತೆ ಕಟ್ಟಪ್ಪಣೆ ಮಾಡಿದ್ದ ತಹಶೀಲ್ದಾರ್ ಬಿ.ಎಂ ಗೋವಿಂದರಾಜು ಅವರನ್ನು ಯಾರೋ ಊಟ ಕೊಟ್ಟರೆ ನೀವು ಏಕೆ ಕೊಡಬೇಡಿ ಅಂತೀರಾ? ಎಂದು ತರಾಟೆಗೆ ತೆಗೆದುಕೊಂಡರು.

ನಿರ್ಗತಿಕರ ಪಟ್ಟಿ ತಯಾರಿಸಿ ಕೂಡಲೇ ಅವರಿಗೆ ದವಸ, ಧಾನ್ಯದ ವ್ಯವಸ್ಥೆ ಮಾಡಿ. ಖಾಸಗಿಯವರು ಮಾನವೀಯತೆಯಿಂದ ನಿರ್ಗತಿಕರಿಗೆ ಊಟ ನೀಡುವ ಕೆಲಸ ಮಾಡುತ್ತಿರುವುದನ್ನು ತಡೆಯಬಾರದು. ಅವರಿಗೆ ತಮ್ಮ ಸಹಕಾರ ನೀಡುವಂತೆ ತಹಶೀಲ್ದಾರ್ ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಕೊರಟಗೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಣಣಕುಮಾರ, ಆರೋಗ್ಯ ನಿರೀಕ್ಷಕ ರೈಸ್ ಅಹಮದ್, ಟಿಎಚ್ಓ ಡಾ. ವಿಜಯಕುಮಾರ್, ಸಿಪಿಐ ಎಫ್.ಕೆ. ನದಾಪ್, ಪಿಎಸೈ ಎಚ್.ಮುತ್ತರಾಜು, ಪಟ್ಟಣ ಪಂಚಾಯಿತಿ ಸದ್ಯರಾದ ಕೆ.ಆರ್.ಓಬಳರಾಜು, ಎ.ಡಿ.ಬಲರಾಮಯ್ಯ, ನರಸಿಂಹಪ್ಪ, ಪುಟ್ಟನರಸಪ್ಪ, ಲಕ್ಷ್ಮಿನಾರಾಯಣ್, ನಟರಾಜು, ಮುಖಂಡರಾದ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಕರಿಚಿಕ್ಕನಹಳ್ಳಿ ಆನಂದ್, ಕೆ.ವಿ.ಮಂಜುನಾಥ್, ರಮೇಶ್, ಗಣೇಶ್, ಕಲೀಂ, ತುಂಗಾ ಮಂಜುನಾಥ ಇತರರು ಇದ್ದರು.

ಅಮ್ಮ ಅಂಬೇಡ್ಕರ್ ಹಾಗೆ…ಅಂಬೇಡ್ಕರ್ ಅಮ್ಮನ ಹಾಗೆ..

0

ಜಿ ಎನ್ ಮೋಹನ್


ಹೀಗೇ ಮನೆಯ ಮಕ್ಕಳೆಲ್ಲರೂ ಒಟ್ಟಿಗೆ ಸೇರಿದ್ದಾಗ ಅಮ್ಮನ ಹುಟ್ಟಿದ ಹಬ್ಬ ಯಾವಾಗ ಎನ್ನುವ ಚರ್ಚೆ ಬಂತು.

ನಮ್ಮ ಮನೆಯಲ್ಲಿ ದಾಖಲೆಗಳು ಪರ್ಫೆಕ್ಟ್
ಹಾಗಾಗಿ ಅಮ್ಮನ ಹುಟ್ಟಿದ ದಿನದ ಬಗ್ಗೆ ಯಾವುದಾದರೂ ದಾಖಲೆ ಇದೆಯಾ ಎಂದು ಹುಡುಕಿದೆವು. ಸಿಗಲಿಲ್ಲ.

ಕೊನೆಗೆ ಅಮ್ಮ ಓದಿದ ಶಾಲೆಯತ್ತ ನಮ್ಮ ಓಟ. ಅಲ್ಲಿಯೂ ದಶಕಗಳ ಹಿಂದಿನ ದಾಖಲೆ ಎಲ್ಲ ತಿರುವಿದ್ದಾಯ್ತು.
ಅಮ್ಮನ ಹುಟ್ಟು ಹಬ್ಬ ಯಾವತ್ತು ಎಂದು ಕಂಡು ಹಿಡಿಯಲಾಗಲಿಲ್ಲ

ಆದರೆ ನಾವಂತೂ ಅಮ್ಮನ ಹುಟ್ಟುಹಬ್ಬ ಮಾಡದೆ ಸುಮ್ಮನಿರುವುದಿಲ್ಲ ಎನ್ನುವ ಸ್ಥಿತಿ ತಲುಪಿದ್ದೆವು.
ಅಮ್ಮನಿಗೂ ನಮ್ಮ ಸಂಭ್ರಮ ನೋಡಿ ಹುಟ್ಟುಹಬ್ಬ ಬೇಕು ಎನ್ನುವಂತಾಗಿ ಹೋಗಿತ್ತು.

ಕೊನೆಗೆ ನಾವು ಏಪ್ರಿಲ್ 14 ಅಂಬೇಡ್ಕರ್ ಹುಟ್ಟಿದ ದಿನವೇ ಅಮ್ಮ ಹುಟ್ಟಿದ ದಿನ ಕೂಡಾ ಎಂದು ನಿರ್ಧರಿಸಿಬಿಟ್ಟೆವು.

ಅಂಬೇಡ್ಕರ್ ದೇಶಕ್ಕೆ ಸಂವಿಧಾನ ರಚಿಸಿಕೊಟ್ಟರು.
ಅಮ್ಮ ತನ್ನದೇ ರೀತಿಯಲ್ಲಿ ನಮ್ಮ ಮನೆಗೆ ಸಂವಿಧಾನ ರಚಿಸಿಕೊಟ್ಟಿದ್ದರು.

ನಮಗೆ ಈಗ ಅಮ್ಮ ಮತ್ತು ಅಂಬೇಡ್ಕರ್ ನಡುವಿನ ಗೆರೆ ಕಲಸಿಹೋಗಿದೆ.
ಅಮ್ಮ ಅಂಬೇಡ್ಕರ್ ರಂತೆಯೂ, ಅಂಬೇಡ್ಕರ್ ಅಮ್ಮನಂತೆಯೂ ಕಾಣುತ್ತಾರೆ

ಆ ಅಂಬೇಡ್ಕರ್ ಗೆ ತಾಯ್ತನದ ಗುಣ ಇದ್ದದ್ದರಿಂದ ದೇಶ ಸಾಕಷ್ಟು ವರ್ಷ ಸರಿಯಾಗಿ ಬಾಳಿ ಬದುಕಲು ಆಯಿತು.
ಅಮ್ಮನಿಗೆ ಅಂಬೇಡ್ಕರ್ ಗುಣವಿದ್ದದ್ದರಿಂದ ಎಂತಹ ನೋವನ್ನೂ ಹಲ್ಲು ಕಚ್ಚಿ ಸಹಿಸಲು ಸಾಧ್ಯವಾಯಿತು.
ಅದರ ವಿರುದ್ಧ ಗೆದ್ದು ನಿಲ್ಲಲು ಆಯಿತು.

ನಮ್ಮ ಮನೆಯ ಎಲ್ಲರ ಡೈರಿಗಳಲ್ಲಿ ಹಬ್ಬ ಹರಿದಿನ ನಮೂದಾಗಿರುವುದಿಲ್ಲ
ಆದರೆ ಏಪ್ರಿಲ್ 14 ತಪ್ಪದೇ ಗುರುತು ಹಾಕಿಕೊಂಡಿರುತ್ತದೆ.

ನಮ್ಮ ಮನೆಯ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಎಲ್ಲರೂ..
ಎಲ್ಲಿದ್ದರೂ, ಯಾವುದೇ ದೇಶದಲ್ಲಿದ್ದರೂ, ಯಾವುದೇ ಘನ ಕಾರ್ಯದಲ್ಲಿದ್ದರೂ ಅದನ್ನೆಲ್ಲಾ ಬಿಟ್ಟು ಅಮ್ಮನ ಮುಂದೆ ಸೇರುತ್ತಾರೆ.

ಅಮ್ಮನ ಹಿಂದೆ ಮುಂದೆ ಸುತ್ತುತ್ತಾ ಗೌಜಿಯೊಳಗೊಂದು ಬೆಳಕು ಮೂಡಿಸುತ್ತಾರೆ.

ಈಗ ಅಮ್ಮ ಇಲ್ಲ, 10 ತಿಂಗಳಾಯಿತು
ಅಮ್ಮ ಇಲ್ಲದ ಮೊದಲ ಅಮ್ಮನ ಹುಟ್ಟುಹಬ್ಬ ಇಂದು.

ಅವರವರ ಮನೆಗಳಲ್ಲಿ ಒಂದು ದೀಪ ಉರಿಸಿದ್ದೇವೆ..

ಅಮ್ಮ ಹಚ್ಚಿದೊಂದು ಹಣತೆ.. ಹಾಡು ಆವರಿಸಿಕೊಂಡಿದೆ.


ಜಿ.ಎನ್. ಮೋಹನ್

ಜರ್ಮನಿಯಿಂದ ಬಂದ ತೇಜಸ್ವಿ

ಜಿ ಎನ್ ಮೋಹನ್

ತೇಜಸ್ವಿ ಎಂದ ತಕ್ಷಣ ನಾನು ಆ ಪುಸ್ತಕವನ್ನು ಒಂದೇ ಏಟಿಗೆ ಬಾಚಿಕೊಂಡೆ

ಆದರೆ ನೀವು ನಂಬಬೇಕು ಮೊದಲ ಬಾರಿಗೆ, ಮೊತ್ತ ಮೊದಲ ಬಾರಿಗೆ ತೇಜಸ್ವಿ ಬರೆದ ಒಂದಕ್ಷರವೂ ಅರ್ಥವಾಗಲಿಲ್ಲ
ಆಶ್ಚರ್ಯ ಆದರೂ ನಿಜ
ಅದಕ್ಕೆ ಕಾರಣವಿತ್ತು- ತೇಜಸ್ವಿಯವರ ಬಹು ಜನಪ್ರಿಯ ಕೃತಿ ‘ಕರ್ವಾಲೋ’ ಜರ್ಮನ್ ಭಾಷೆಯಲ್ಲಿತ್ತು.

ತೇಜಸ್ವಿ ಹೇಗೆ ಜಗತ್ತಿನ ನಾನಾ ಕಡೆ ಓದುಗರ ಮನ ಗೆದ್ದಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಹಾ ಒಂದು ಸಾಕ್ಷಿಯಾಗಿ ಹೋಯಿತು.

ಕತ್ರಿನಾ ಬಿಂದರ್ ಹಾಗೂ ಪ್ರೊ ಬಿ ಎ ವಿವೇಕ ರೈ ಅವರು ತಿಂಗಳುಗಟ್ಟಲೆ ಜರ್ಮನಿಯಲ್ಲಿ ಕುಳಿತು ತೇಜಸ್ವಿಯವರನ್ನು ಜರ್ಮನ್ ಅಂಗಳಕ್ಕೆ ನಡೆಸಿಕೊಂಡು ಹೋಗಿದ್ದರು.

ನಿಮಗೆ ಗೊತ್ತಿರಲಿ- ವಿವೇಕ ರೈ ಅವರು ಸುಮಾರು ಒಂದು ದಶಕದಿಂದ ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕನ್ನಡದ ಮಹತ್ ಕೃತಿಗಳು, ಚಲನಚಿತ್ರಗಳು, ಗೀತೆಗಳು ಅಲ್ಲಿನ ವಿವಿಗಳಲ್ಲಿ ಸಾಕಷ್ಟು ಜನಪ್ರಿಯ.

ಹಾಗೆ ಅವರು ಮನದುಂಬಿ ಕರ್ವಾಲೋ ಬಗ್ಗೆ ಮಾತಾಡಿದ್ದರ ಪರಿಣಾಮವೇ ಆ ಕೃತಿ ಜರ್ಮನ್ ಭಾಷೆಯಲ್ಲಿ ಸಿಗಬೇಕು ಎನ್ನುವ ಹುಕಿ ಅಲ್ಲಿನ ಡೀನ್ ಹೈಡ್ರೂನ್ ಬ್ರೂಕ್ನರ್ ಅವರಿಗೆ ಬಂತು.

ಒಂದು ದಿನ ಇದ್ದಕ್ಕಿದ್ದಂತೆ ಜರ್ಮನಿಯಿಂದ ಫೋನ್ ಮಾಡಿದ ವಿವೇಕ ರೈ ಅವರು ಮೋಹನ್ ತುರ್ತಾಗಿ ನನಗೆ ತೇಜಸ್ವಿಯವರ ಒಳ್ಳೆಯ ಫೋಟೋಗಳು ಬೇಕು ಎಂದರು.

ಅವರು ನನಗೆ ಕೊಟ್ಟ ಸಮಯ ಕೆಲವು ಗಂಟೆಗಳು ಮಾತ್ರ.

ತಕ್ಷಣ ನನಗೆ ನೆನಪಾದದ್ದು ನನ್ನಂತೆಯೇ ತೇಜಸ್ವಿಯನ್ನು ಇನ್ನಿಲ್ಲದಂತೆ ಹಚ್ಚಿಕೊಂಡ ಹಾಗೂ ತೇಜಸ್ವಿಯವರ ಅನೇಕ ಕಾರ್ಯಕ್ರಮಗಳಿಗೆ ಹೋಗಿ, ಅವರ ಮನೆಗೆ ಭೇಟಿ ಕೊಟ್ಟು ಅವರನ್ನು ತಮ್ಮ ಕ್ಯಾಮೆರಾದೊಳಗೆ ಕೂರಿಸಿಕೊಂಡಿದ್ದ ಡಿ ಜಿ ಮಲ್ಲಿಕಾರ್ಜುನ್.

ತೇಜಸ್ವಿ ಕೆಲಸ ಎಂದರೆ ಹತ್ತು ಜನರ ಉತ್ಸಾಹ ತುಂಬಿಕೊಳ್ಳುವ ಮಲ್ಲಿ ಕೆಲವೇ ನಿಮಿಷಗಳಲ್ಲಿ ಫೋಟೋಗಳನ್ನು ನನ್ನ ಮೇಲ್ ಗೆ ಕಳಿಸಿದರು. ಅದು ಅಲ್ಲಿಂದ ಜರ್ಮನಿಗೆ ಹೋಯಿತು.

ಇನ್ನೊಂದು ವರ್ಷಕ್ಕಾದರೂ ಈ ಕೃತಿ ಬರುತ್ತದೆ ಎಂದುಕೊಂಡಿದ್ದಾಗ ಒಂದು ತಿಂಗಳೊಳಗೆ ಮತ್ತೆ ವಿವೇಕ ರೈ ಫೋನು.
ಪುಸ್ತಕ ಎಲ್ಲಿಗೆ ಕಳಿಸಲಿ?
ಅರೆ! ಅನಿಸಿತು.

ಈ ಮಧ್ಯೆ ತೇಜಸ್ವಿ ಜರ್ಮನ್ ಭಾಷಿಕರ ಮನ ಹೊಕ್ಕ ಸಂಗತಿಯನ್ನು ಕನ್ನಡಿಗರಿಗೂ ತಿಳಿಸಬೇಕು ಎನ್ನುವ ಹಂಬಲ
ಎನ್ ಆರ್ ವಿಶುಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದರು.
ಅವರ ತೇಜಸ್ವಿ ಪ್ರೀತಿಯನ್ನೂ ಬಳಸಿಕೊಂಡು ಬೆಂಗಳೂರಿನ ‘ನಯನ’ದಲ್ಲಿ ಜರ್ಮನ್ ಕರ್ವಾಲೋ ಬಿಡುಗಡೆಯಾಯಿತು.

ರಾಜೇಶ್ವರಿ ತೇಜಸ್ವಿ, ಬಿ ಎಲ್ ಶಂಕರ್, ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಂದು ತುಂಬಾ ಆತ್ಮೀಯವಾಗಿ ನಮಗೆ ಗೊತ್ತಿಲ್ಲದ ತೇಜಸ್ವಿಯನ್ನು ಕಟ್ಟಿಕೊಟ್ಟರು

ನಾನು ತೇಜಸ್ವಿ ಮಗಳು ಈಶಾನ್ಯೆಯೊಂದಿಗೆ ಕುಳಿತು ಇನ್ನೂ ವಿಭಿನ್ನ ತೇಜಸ್ವಿಯನ್ನು ನನ್ನೊಳಗೆ ಕರೆದುಕೊಂಡೆ.

ಹಾಗೆ ಬರೆಯುತ್ತಾ ಈ ಪುಸ್ತಕದ ಪ್ರಕಾಶಕರು ಯಾರು ಎಂದು ನೋಡಿದೆ- ಆಶ್ಚರ್ಯವಾಯಿತು
‘ದ್ರೌಪದಿ ವೆರ್ಲಾಗ್’
ಜರ್ಮನ್ನರು ದ್ರೌಪದಿಯನ್ನೂ ಹಾರಿಸಿಕೊಂಡು ಹೋಗಿದ್ದರು.

ಲಾಕ್ ಡೌನ್ ಸಂಕಷ್ಟ: ಬಾಳೆಗೊನೆ ಖರೀದಿಸಿ ಬಡವರಿಗೆ ಹಂಚಿದ ಗೌರಿಶಂಕರ್

ಮಂಜುನಾಥ್


ಕರೋನ ವೈರಸ್ ನಿಂದ ರೈತ ಬಾಂದವರಿಗೆ ನಷ್ಟ ವಾಗಬಾರದೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಬುಧವಾರ ಬಾಳೆ ಬೆಳೆದು ನಷ್ಟದಲ್ಲಿದ್ದ ರೈತರ ತೋಟಕ್ಕೆ ಭೇಟಿ ನೀಡಿ ಬಾಳೆಗೊನೆಗಳನ್ನು ಖರೀದಿ ಮಾಡಿ ಗ್ರಾಮಾಂತರ ಕ್ಷೇತ್ರದ ಬಡಜನರಿಗೆ ವಿತರಣೆ ಮಾಡಿದರು.

ಲಾಕ್ ಡೌನ್ ಪ್ರಾರಂಭವಾದ ದಿನದಿಂದಲೇ, ಖುದ್ದು ತಾವೇ ನಿಂತು ದಿನನಿತ್ಯ ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ, ರೈತರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇದಲ್ಲದೇ ಮನೆಮನೆಗೂ ತರಕಾರಿ ಪಡಿತರ ತಲುಪಿಸುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ಇಲಾಖೆ ಸೇರಿದಂತೆ ಸೇವೆ ನೀಡುತ್ತಿರುವ ಇಲಾಖೆಗಳಿಗೆ ದಿನ ನಿತ್ಯ ಊಟ, ಮೆಡಿಕಲ್ ಕಿಟ್ ನೀಡುತ್ತಿದ್ದಾರೆ.

ನಾನು ಕವಿತೆ

ದೇವರಹಳ್ಳಿ ಧನಂಜಯ


ನಾನು ಕವಿತೆ .
ಕಾಯುತ್ತಿದ್ದೇನೆ.
ಅಕ್ಷರದಾಚೆಗೆ ಚಾಚಿಕೊಳ್ಳಲು.
ಜಗದ ಪ್ರೀತಿಯ ಬಾಚಿಕೊಳ್ಳಲು.

ಮುಟ್ಟಲಾಗದ ಭಾವವಾ ಮುಟ್ಟಿ
ಹೊಸ ಹುಟ್ಟಿಗೆ
ಮುಟ್ಟಾಗಲು.
ಮುಟ್ಟ ಸಂಕಟಕೆ ರಟ್ಟಾಗಲು.

ಹುಣಸೆಹಣ್ಣಿಗೆ ಬೀಸಿದ ಕೋಲು
ಗುಬ್ಬಿ ಗೂಡಿಗೆ ತಾಕಿ,
ಹೊಡೆದ ತತ್ತಿಯ ಮುಂದೆ
ತಾಯ ಎದೆ ತತ್ತರಿಸಿದೆ.

ಮರೆಯಲ್ಲಿ ನಿಂತು,
ಹುಳಿ ಮಾವಿಗೆ ಬೀಸಿದ
ಕವಣೆ ಕಲ್ಲು,ಕೊಲ್ಲುತ್ತಿದೆ
ಜಗದ ಜೀವತಂತು.

ತಳವಿಲ್ಲದ ತುತ್ತಿನ ಚೀಲ
ತುಂಬಲು ಶಹರು ಸೇರಿ
ಕಳೆದು ಹೋದವರು
ನೆಲೆ ಕಳೆದುಕೊಂಡಿದ್ದಾರೆ.

ಅಲೆಮಾರಿ ದೊಂಬರ ಮಗಳು
ಗಾಳಿಯಲ್ಲಿ ಕಟ್ಟಿದ
ಅಗ್ಗದ ಗುಂಟ
ಆಕಾಶಕ್ಕೆ ಹೆಜ್ಜೆ ಹಾಕುತ್ತಿದ್ದಾಳೆ

ಮೇರೆ ಮೀರಿದ
ಉಳ್ಳವರ ದೊಂಬರಾಟ
ಪುಟ್ಟ ಮಗುವಿನ ತುತ್ತಿನ ಕನಸ
ಕಸಿದು,ಕೆಕೆ ಹಾಕಿದೆ.

ನಾನು ಕವಿತೆ.
ಕಾಯುತ್ತಿದ್ದೇನೆ.
ಅಕ್ಷರದ ಆಚೆಗೆ ಚಾಚಿಕೊಳ್ಳಲು.
ಜಗದ ಪ್ರೀತಿಯ ಬಾಚಿಕೊಳ್ಳಲು.

ತುಮಕೂರು ಗ್ರಾಮಾಂತರದಲ್ಲಿ ಸದ್ದಿಲ್ಲದೆ‌‌ ನಡೆದಿದೆ ನೆರವಿನ ಕೆಲಸ…

0

Publicstory.in


ತುಮಕೂರು: ಕರೊನಾ,‌ಲಾಕ್ ಡೌನ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವಲ್ಲಿ ಇಲ್ಲಿನ ಮಾಜಿ ಶಾಸಕ ಬಿ.ಸುರೇಶ ಗೌಡ ಕಾರಣದಿಂದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಮಾದರಿಯಾಗಿ ಗಮನ ಸೆಳೆಯುತ್ತಿದೆ.

ಮಾಜಿ ಶಾಸಕ, ಬಿಜೆಪಿ ಬಿ.ಸುರೇಶ್ ಗೌಡ ಹಲವು ಕಾರ್ಯಕ್ರಮಗಳ ಮೂಲಕ ಇಲ್ಲಿನ ಜನರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.‌ ನೆರವಷ್ಟೆ ಅಲ್ಲ ಕರೊನಾದಿಂದ ರಕ್ಷಣೆ ಪಡೆಯುವ ಕುರಿತೂ ಅಲ್ಲಲ್ಲಿ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

https://youtu.be/24fPgZn4gUk

ಲಾಕ್ ಡೌನ್ ಘೋಷಣೆಯಾದಾಗಿ‌ನಿಂದಲೂ ಕ್ಷೇತ್ರದ ಜನರೊಟ್ಟಿಗೆ ಸಂಪರ್ಕದಲ್ಲಿದ್ದೇನೆ. ಗ್ರಾ‌ಮಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸುತ್ತಿದ್ದೇ‌ನೆ ಎಂದು ಮಾಜಿ ಶಾಸಕರಾದ ಸುರೇಶ ಗೌಡ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.

ಕ್ಷೇತ್ರದ ಎಲ್ಲ ಜನರಿಗೂ ಮಾಸ್ಕ್ ಹಂಚುವ ಕೆಲಸವನ್ನು ಸದ್ದಿಲ್ಲದೇ ಮಾಡತೊಡಗಿದ್ದಾರೆ. ಒಟ್ಟು ಒಂದು ಲಕ್ಷ ಮಾಸ್ಕ್ ಹಂಚುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳತ್ತ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಇವರು ಮಾತ್ರ ನಗರ, ಗ್ರಾಮ ಎಲ್ಲರಿಗೂ ಆರೋಗ್ಯದ ಕಾಳಜಿ ವಹಿಸಿದ್ದಾರೆ.

ಸುರೇಶ ಗೌಡ ಅವರ ಜತೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸೇರಿಕೊಂಡಿದ್ದ ಈ ಇಬ್ಬರೂ ಮುಖಂಡರು ಹಲವಾರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಸಹಾಯ ಹಸ್ತ ಚಾಚ ತೊಡಗಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಒಟ್ಟು ಗೂಡಿಸಿಕೊಂಡು ಅಲ್ಲಲ್ಲಿ ನಾಲ್ಕೈದು ಕಾರ್ಯಕರ್ತರ ಕರೆದು ಸಭೆಗಳನ್ನು ನಡೆಸುತ್ತಾ ಸಂಕಷ್ಟದಲ್ಲಿರುವ ಜನರ ಪಟ್ಟಿ ತಯಾರಿಸಿ ನೆರವಾಗಲು ಸೂಚನೆಗಳನ್ನು ನೀಡ ತೊಡಗಿದ್ದಾರೆ.

ಪ್ರತಿ ಗ್ರಾಮವಾರು ಪಡಿತರ ಚೀಟಿಗಳನ್ನು ಹೊಂದಿರದ ಜನರ ಪಟ್ಟಿ ತಯಾರಿಸಿ ಅವರಗಳಿಗೆ ಅಕ್ಕಿ, ಅಡುಗೆ ಎಣ್ಣೆ, ಈರುಳ್ಳಿ ಮತ್ತಿತರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ.

ಯಾರೂ ಉಪವಾಸ ಇರಬಾರದು


ಕ್ಷೇತ್ರದಲ್ಲಿ ಯಾರೂ ಉಪವಾಸ ಇರಬಾರದು. ಹೊರಗೆ ಹೋಗಬೇಕಾದರೆ ಕನಿಷ್ಠ ಮಾಸ್ಕ್ ಧರಿಸಿಯೇ ಹೋಗಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಕರೊನಾ ಸೋಂಕದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಕ್ಷ ಬೇಧ ಮಾಡಬಾರದು. ಎಲ್ಲರಿಗೂ ಸೌಲಭ್ಯ ತಲುಪುವಂತಾಗಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಸುರೇಶ ಗೌಡರು ನೀಡಿದ್ದಾರೆ. ಅದರಂತೆ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತ ರಾಜೇಶ್ ತಿಳಿಸಿದರು.

ಹಳ್ಳಿಗಳಲ್ಲಿ ಮಾಸ್ಕ್ ಖರೀದಿಸಲು ಸಹ ಸಿಗುವುದಿಲ್ಲ. ಸುರೇಶ ಗೌಡರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದು ಅಗತ್ಯವಾಗಿತ್ತು ಎಂದು ಗೋವಿಂದಯ್ಯ ತಿಳಿಸಿದರು.

ಹೊಳಕಲ್, ಮಸ್ಕಲ್, ನಾಗವಲ್ಲಿ ಪಂಚಾಯತ್ ಗೆ ಸೇರಿರುವ ಹಲವು ಗ್ರಾಮಗಳಿಗೆ ಮಾಸ್ಕ್ ಹಂಚಿಕೆ ಮಾಡಲಾಗಿದೆ. ಆಹಾರ ಹಂಚುವ ಕೆಲಸವೂ ನಡೆದಿದೆ.

ಪ್ರಾಣಿಗಳಿಗೂ ರಕ್ಷಣೆ


ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಲ್ಲಲ್ಲಿ ಅರಣ್ಯವೂ ಸೇರಿಕೊಂಡಿದೆ. ವಿಶೇಷವಾಗಿ ಕೋತಿಗಳು, ಬೀದಿ ನಾಯಿಗಳ‌ ಹಸಿವು ನೀಗಿಸಲು ಕ್ರಮ ಕೈಗೊಂಡಿದ್ದಾರೆ.

ದೇವರಾಯನ ದುರ್ಗ ಕಾಡಿನಲ್ಲಿ ಅಲ್ಲಲ್ಲಿ ಬಾಳೆ ಗೊನೆಗಳನ್ನು ಕಟ್ಟಲು ನಿರ್ಧರಿಸಿ ಅಲ್ಲಿಗೆ ಬಾಳೆಗೊನೆಗಳ ಸಮೇತ‌ ಹೋಗಿದ್ದವು. ಆದರೆ ಆ ಭಾಗದ ಜನರೇ ನೂರಾರು ಗೊನೆಗಳನ್ನು ಮರಗಳಿಗೆ ಕಟ್ಟಿ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ನನಿರ್ಧರಿಸಿ ಅಲ್ಲಿಗೆ ಬಾಳೆಗೊನೆಗಳ ಸಮೇತ‌ ಹೋಗಿದ್ದವು. ಆದರೆ ಆ ಭಾಗದ ಜನರೇ ನೂರಾರು ಗೊನೆಗಳನ್ನು ಮರಗಳಿಗೆ ಕಟ್ಟಿ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ನಮ್ಮ ಅಗತ್ಯ ಇಲ್ಲವಾಗಿದೆ. ಗ್ರಾಮಾಂತರ ಕ್ಷೇತ್ರದ ಜನರಲ್ಲಿ ಧರ್ಮ ಉಳಿದಿದೆ ಎಂಬುದರ ದ್ಯೋತಕ ಇದಾಗಿದೆ. ನನ್ನ ಕ್ಷೇತ್ರದ ಜನರ ಬಗ್ಗೆ ಹೆಮ್ಮೆ ಮೂಡಿಸಿತು ಎಂದು ಸುರೇಶ ಗೌಡ ತಿಳಿಸಿದರು.

ತರಕಾರಿಕೊಳ್ಳಲು ಯೋಜನೆ


ರೈತರು ಬೆಳೆದಿರುವ ತರಕಾರಿಯನ್ನು ಕೊಂಡು ಅದನ್ನು ಗ್ರಾಮಾಂತರದಲ್ಲಿ ಹಂಚಲು ಸಹ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಸುರೇಶ ಗೌಡರು.

ರೈತರಿಗೆ ಆದಷ್ಟು ನೆರವಾಗಬೇಕು. ಇನ್ನೊಂದೆಡೆ ಹಸಿದವರ ಹೊಟ್ಟೆಯೂ ತುಂಬಬೇಕು. ಅದಕ್ಕಾಗಿ ಈ ಚಿಂತನೆ ಎಂದರು.

ತುಮಕೂರು ನಗರಕ್ಕೆ ಕರಳು ಬಳ್ಳಿಯಂತೆ ಸುತ್ತಿಕೊಂಡಿರುವ ಗ್ರಾಮಾಂತರ ಕ್ಷೇತ್ರದಲ್ಲಿ ಸಾವಿರಾರು ದಿನಗೂಲಿ ಕೆಲಸಗಾರರು ಇದ್ದಾರೆ. ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರ ಪಡಿತರ ವಿತಸುತ್ತಿರುವುದರಿಂದ ಪಡಿತರದ ಸಮಸ್ಯೆ ಬಂದಿಲ್ಲ. ಪಡಿತರ ಕಾರ್ಡ್ ಇಲ್ಲದ ಕಡುಬಡವರು, ದಿನಗೂಲಿ ಕೆಲಸಗಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು. ಇಂಥವರಿಗೆ ಪಡಿತರ ವಿತರಣೆ ಮಾಡುತ್ತಿರುವುದು ನಮಗೂ ಹೆಮ್ಮೆ ಎನಿಸುತ್ತಿದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

ಅರಿವ ಸೂರ್ಯ

ದೇವರಹಳ್ಳಿ ಧನಂಜಯ


ಬೆಳಗೂ ಬೆೃಗು
ಸೂರ್ಯನ ಓಕಳಿಯಾಟ
ನಿಲ್ಲುವುದಿಲ್ಲ.

ಕಾಲ ದೇಶವ
ಮೀರಿದ ಎಚ್ಚರದ
ಧ್ವನಿ ನಿನ್ನದು.

ತರತಮದ
ಕತ್ತಲೆಯ ಆಟಕ್ಕೆ
ಉಳಿವು ಇಲ್ಲ

ಕಪಟ ಶಾಸ್ತ್ರ
ನಡೆಯದು ದಲಿತ
ಸೂರ್ಯನೆದುರು

ಒಳ-ಹೊರಗು
ಸಂಚಯ ವಾಗುತ್ತಿದೆ
ನೀ ಕೊಟ್ಟ ಸ್ಪೂರ್ತಿ

ಅಪಮಾನದ
ಕುಲುಮೆಯಲ್ಲಿ ಬೆಂದು
ಹದಗೊಂಡವ

‌ನೀ ಧಮನಿತ
ಬಂಧು ಬಾಬಾಸಾಹೇಬ
ನಮಿಪೆವಿಂದು

ಕ್ಷಣಕ್ಷಣವೂ
ಪಿತೂರಿ ನಡೆದಿದೆ
ನಿನ್ನ ನಾಶಕೆ

ಕ್ರಾಂತಿ ಚಿಲುಮೆ
ಅರಿವ ಸೂರ್ಯನಿಗೆ
ಸಾವೆಂಬುದಿಲ್ಲ

ನಿನ್ನ ಅದಮ್ಯ
ಶಕ್ತಿಗೆ ತಡೆಯಲ್ಲ
ಜಾತಿ ಸೂತಕ.

ಬೂದಿಯಾಯಿತು
ಪೊಳ್ಳು ಪುರಾಣ ನಿನ್ನ
ಪ್ರಖರತೆಗೆ

ಮನುವಾದವ
ಪುಡಿಗಟ್ಟಿ ಕಟ್ಟಿದೆ
ನವಭಾರತ

ಪ್ರಜಾಪ್ರಭುತ್ವ
ಸಮಾನತೆ ಭ್ರಾತೃತ್ವ
ಬಾಳಿನ ತತ್ವ

ಎಂದು ಸಾರಿದೆ
ನೀ ಕೊಟ್ಟ ಸಂವಿಧಾನ
ಬೆಳಕ ದೊಂದಿ

ನಡೆಯುತ್ತೇವೆ
ನಿನ್ನ ಅರಿವ ದೀಪ
ಹಿಡಿದು ಮುಂದೆ.

ಮೊಳಗುತ್ತಿದೆ
ಧಮ ಧಮನಿಯಲಿ
ಕ್ರಾಂತಿಯ ಗೀತೆ