Tuesday, January 20, 2026
Google search engine
Home Blog Page 6

ಬಹುಜನ-ಪ್ರಜಾಪ್ರಭುತ್ವದ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ!!

0

(15 ವರ್ಷಗಳ ತರುವಾಯ ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ)

ಚಿಕ್ಕನಾಯಕನಹಳ್ಳಿ : ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ಸಂಜೆಯವರೆಗೂ ನಡೆಯಿತು.

ಚುನಾವಣಾಧಿಕಾರಿ ಹರೀಶ್ ಕುಮಾರ್ ಘೋಷಿಸಿದ ಫಲಿತಾಂಶದ ಪ್ರಕಾರ, ಚಲಾವಣೆಯಾಗಿರುವ ಒಟ್ಟು ಮತಗಳಲ್ಲಿ 12 ಮತಗಳು ತಿರಸ್ಕೃತಗೊಂಡಿವೆ. ಮಿಕ್ಕಂತೆ, ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳಲ್ಲಿ,
ರಮೇಶ್ ಬಾಬು 360 ಮತಗಳು, ಸಿಎಂ ರಂಗಸ್ವಾಮಿ 308 ಮತಗಳು, ಬೀರಪ್ಪ 304 ಮತಗಳು, ಸಿ ಎಸ್ ರಮೇಶ್ 284 ಮತಗಳು, ಮಂಜುನಾಥ್ 282 ಮತಗಳು, ಮಹಮ್ಮದ್ ಕಲಂದರ್ 280 ಮತಗಳು, ಸಿಬಿ ರೇಣುಕಸ್ವಾಮಿ 278 ಮತಗಳು, ಸಿ ಎಲ್ ದೊಡ್ಡಯ್ಯ 265 ಮತಗಳನ್ನು ಪಡೆಯುವ ಮೂಲಕ ಕೋ-ಆಪರೇಟಿವ್ ಬ್ಯಾಂಕ್’ನ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

*ರಾಜಕೀಯ ನವ ಚೈತನ್ಯ ; ರಮೇಶ್ ಬಾಬು*

ಅತಿಹೆಚ್ಚು ಮತಗಳನ್ನು ಪಡೆದು ಜಯ ಗಳಿಸಿರುವ ರಮೇಶ್ ಬಾಬು ಫಲಿತಾಂಶ ಹೊರಬಿದ್ದ ನಂತರ ಮಾತನಾಡಿ, ಶತಮಾನದ ಇತಿಹಾಸವಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಕಟ್ಟುವಲ್ಲಿ ಕೆ ಆರ್ ತಿಮ್ಮದಾಸಪ್ಪನವರು, ಪಟ್ಟಾಭಿರಾಮಶೆಟ್ಟರು, ರಾಜೇಶಶೆಟ್ಟರು ಮತ್ತು ಲಿಂಗದೇವರು ಮೊದಲಾದವರ ಶ್ರಮ ಅಗಣಿತವಾದುದು. ಹಿಂದೆ ದಿ-ಕೋ ಆಪರೇಟಿವ್ ಬ್ಯಾಂಕ್ ಎಂದು ಹೆಸರಿದ್ದ ಈ ಬ್ಯಾಂಕಿಗೆ ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ ‘ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ ಎಂದು ಮರುನಾಮಕರಣ ಮಾಡಿದ್ದೆವು.

ಅದೇ ತರಹ ಈ ಬ್ಯಾಂಕಿನ ಪ್ರಗತಿ ಹಾಗೂ ಬ್ಯಾಂಕ್ ಮೂಲಕ ಬಡವ ಬಲ್ಲಿದರ ಸೇವೆಗೆ ನಾನು ಮತ್ತು ನನ್ನ ತಂಡ ಕಟಿಬದ್ಧವಾಗಿದೆ. ರಾಜ್ಯಮಟ್ಟದ ರಾಜಕಾರಣದಲ್ಲಿ ವ್ಯಸ್ತಗೊಂಡಿದ್ದ ನನಗೆ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಕಾರಣದತ್ತ ಹೊರಳಲು ಈ ಗೆಲುವು ನವ ಚೈತನ್ಯ ತಂದಿದೆ ಎಂದು ಹರ್ಷಿಸಿದರು.

*ಪ್ರಾಮುಖ್ಯತೆ*
ಕಳೆದೆರಡು ಮೂರು ಬಾರಿಯಿಂದ ಆಡಳಿತ ಮಂಡಳಿಯ ಚುನಾವಣೆ ನಡೆಯದೆ ಸದಸ್ಯ-ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯುತ್ತಿತ್ತು. 15 ವರ್ಷಗಳ ನಂತರ ಈಗ ಮತ್ತೆ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆಗೆ ತೆರೆದುಕೊಂಡಿದೆ. ಇದರ ಪರಿಣಾಮ, ಷೇರುದಾರ ಮತದಾರರಲ್ಲೂ ಉತ್ಸುಕತೆ ಕಾಣುತ್ತಿದೆ. ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಇತಿಹಾಸದಲ್ಲೇ ಶೇಕಡಾ 95’ರಷ್ಟು ಮತ ಚಲಾಯಿಸುವ ಮೂಲಕ ಬ್ಯಾಂಕಿನ ಷೇರುದಾರ-ಮತದಾರರು, ಪ್ರಜಾಪ್ರಭುತ್ವೀಯ ಪ್ರಕ್ರಿಯೆಯೇ ಅತ್ಯುತ್ತಮ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.

ಒಟ್ಟು 582 ಷೇರುದಾರ ಮತಗಳಿದ್ದು, ಸಂಜೆಯ ಹೊತ್ತಿಗಾಗಲೇ 532 ಮತ ಚಲಾಯಿಸುವ ಮೂಲಕ ಶೇಕಡಾ 95% ಮತ ಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ, ಸಹಕಾರ ಸಂಘಗಳ ಸಹಕಾರನಿಬಂಧಕ ಹರೀಶ್ ಕುಮಾರ್ ತಿಳಿಸಿದರು. ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮತ ಎಣಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಫಲಿತಾಂಶ‌ ಹೊರಬಿದ್ದಿದೆ.

*ಕಣದಲ್ಲಿ,,,,*
ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ ಎ’ಯಿಂದ ಶಶಿಧರ್, ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ ಬಿ’ಯಿಂದ ಸಿ ಜಿ ಮಂಜುನಾಥ್, ಪರಿಶಿಷ್ಟ ಪಂಗಡ (ಮೀಸಲು) ಸಿ ಎಚ್ ಲವಕುಮಾರ್, ಪರಿಶಿಷ್ಟ ಜಾತಿಯಿಂದ ಸಿ ಹೆಚ್ ಪ್ರಕಾಶ್, ಮಹಿಳಾ(ಮೀಸಲು) ಪುಷ್ಪಲತಾ ಹಾಗೂ ಸಿ ಎಸ್ ಶಿಲ್ಪ ಧರಣೇಶ್’ರವರುಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ 9 ಸ್ಥಾನಗಳಿಗೆ ಕೃಷ್ಣಯ್ಯ, ಖ್ವಾಜಾ ಅಹಮದ್, ಸಿ ಎಂ ಗಂಗಾಧರಯ್ಯ, ಸಿ ವಿ ಚಂದ್ರಶೇಖರಯ್ಯ, ಚಿದಾನಂದ ಬಾಬು, ಸಿ ಎ ಜಾವೆದ್ ಪಾಷಾ, ಸಿ ಎಲ್ ದೊಡ್ಡಯ್ಯ, ಸಿ ಎಚ್ ದೊರೆಮುದ್ದಯ್ಯ, ಬೀರಲಿಂಗಯ್ಯ ಸಿ ಎಂ, ಮಹಮ್ಮದ್ ಖಲಂದರ್, ಮಂಜುನಾಥ್, ಸಿ ಎಸ್ ರಮೇಶ್, ರಮೇಶ್ ಬಾಬು, ಸಿ ಬಿ ರೇಣುಕಸ್ವಾಮಿ, ಸಿ ಎಂ ರಂಗಸ್ವಾಮಯ್ಯ, ಸಿ ಜಿ ಸೋಮಶೇಖರ್, ಶ್ರೀನಿವಾಸಾಚಾರ್ಯ’ರವರುಗಳು ಅಂತಿಮ ಕಣದಲ್ಲಿ ಉಳಿದಿದ್ದರು. ಆದರೆ, ಭಾನುವಾರ ನಡೆದ ಚುನಾವಣೆಯಲ್ಲಿ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಮೇಲೆ ಹೆಸರಿಸಿದ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ.

*ಇತಿಹಾಸ ::*
ಸುಮಾರು ಆರು ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕು, ಯಾವುದೇ ವಹಿವಾಟು ಮತ್ತು ವಾರ್ಷಿಕ ಸಭೆಗಳಿಗೆ ಹಾಜರಾಗದ ಷೇರುದಾರರ ನಿರಾಸಕ್ತಿಯ ಕಾರಣ, ಈಗ ಕೇವಲ 583 ಮಂದಿ ಷೇರುದಾರರನ್ನಷ್ಟೇ ಹೊಂದಿದೆ. ಷೇರುದಾರರ ಸಂಖ್ಯೆ ನಿರಂತರ ಘಟಿಸಿದ್ದು ಕೋ-ಆಪರೇಟಿವ್ ಬ್ಯಾಂಕ್’ನ ಭವಿಷ್ಯದ ಚಿಂತೆಯನ್ನು ತಂದೊಡ್ಡಿದೆ. ನೂರು ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿರುವ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಹಿಂದಿನಿಂದಲೂ ಸ್ಥಳೀಯ ಶಾಸಕರ ಹಿಡಿತದಲ್ಲೇ ಉಳಿದಿದೆ. ಹೀಗಾಗಿ, ಸ್ಥಳೀಯ ಶಾಸಕರ ರಾಜಕೀಯ ಗೆಲುವು ಮತ್ತು ಒಲವನ್ನು ಆಧರಿಸಿಯೇ ಬ್ಯಾಂಕಿನ ಏಳ್ಗೆ ಮತ್ತು ಅಭಿವೃದ್ಧಿಯ ಗತಿ ನಿರ್ಧಾರಗೊಳ್ಳುತ್ತಿದೆ.

5,723’ರಷ್ಟು ಷೇರುಸದಸ್ಯತ್ವ ಹೊಂದಿದ್ದರೂ, ನಿಯಮಿತವಾಗಿ ಸಾಲ ವಸೂಲಿ ಮಾಡದ ಕಾರಣ, ಬ್ಯಾಂಕಿನ ನಿವ್ವಳ ಲಾಭ ಶೂನ್ಯವಾಗುತ್ತಾ ಬಂದಿತ್ತು. ಹೂಡಿಕೆ ಠೇವಣಾತಿಗಳು, ಆಪದ್ಧನ ಮತ್ತು ಇತರೇ ನಿಧಿಗಳು ದುಡಿಯುವ ಬಂಡವಾಳ‌ ಮತ್ತು ವಾರ್ಷಿಕ ವಹಿವಾಟಿನ ಮೌಲ್ಯ ಎಲ್ಲವೂ ನಿರಂತರ ಕುಸಿತ ಕಂಡ ಪರಿಣಾಮ ಬ್ಯಾಂಕಿಗೆ ತೀವ್ರ ಹಿನ್ನಡೆ ಉಂಟಾಗಿತ್ತು.

*ಇತ್ತೀಚೆಗೆ ಬಂದ ಅಧ್ಯಕ್ಷರುಗಳ ಸಾಧನೆ ::*
ಆಡಳಿತ ಮಂಡಳಿಗೆ ಈಚೀಚೆಗೆ ಅಧ್ಯಕ್ಷರಾಗಿ ಬಂದ ಸಿ ಎಸ್ ರಮೇಶ್, ಸಿ ಎಲ್ ದೊಡ್ಡಯ್ಯ, ಸಿ ಎಚ್ ದೊರೆಮುದ್ದಯ್ಯ, ರಮೇಶ್ ಬಾಬು, ಸಿ ಎಂ ರಂಗಸ್ವಾಮಯ್ಯ, ಸಿ ಬಿ ರೇಣುಕಸ್ವಾಮಿ, ಬೀರಲಿಂಗಯ್ಯ,
ಸಿ ಎಚ್ ಲವಕುಮಾರ್ ಮೊದಲಾದವರ ಪರಿಶ್ರಮದಿಂದಾಗಿ ಸಿ’ಗ್ರೇಡ್ ನಲ್ಲಿದ್ದ ಕೋ-ಆಪರೇಟಿವ್ ಬ್ಯಾಂಕನ್ನು ಎ’ಗ್ರೇಡ್’ನವರೆಗೆ ತರುವಲ್ಲಿ ಸಫಲತೆ ಲಭಿಸಿತ್ತು.

*ಕಳೆದ ಒಂದು ದಶಕದಿಂದ ಮತ್ತೆ ಪ್ರಗತಿ ಸಾಧಿಸಿದ ಬ್ಯಾಂಕು ::*
ಶೇಕಡಾ 72ರಷ್ಟು ಎನ್ ಪಿ ಎ ಏರಿಕೆಯಿದ್ದ ಸಮಯದಲ್ಲಿ ಸತತ ಪರಿಶ್ರಮ ವಹಿಸಿ 2018-19’ರ ಹೊತ್ತಿಗೆ ಅದು, ಶೇಕಡ 26.97ಕ್ಕೆ ಕುಸಿಯುವಷ್ಟರ ಮಟ್ಟಿಗೆ ವಸೂಲಾತಿ ಮಾಡಿ ನಿಧಿ ಸಂಗ್ರಹಿಸಲಾಯಿತು. 2020-21’ರ ಹೊತ್ತಿಗೆ ಶೇಕಡಾ -2.46’ರಷ್ಟಕ್ಕೆ ಎನ್‌ ಪಿ ಎ ಇಳಿಯುವಂತೆ ಮಾಡಿ, 2023-24’ರ ಹೊತ್ತಿಗೆ -10.84’ರಷ್ಟು ಎನ್ ಪಿ ಎ ಇಳಿಯುವಂತೆ ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಲ ಮರುಪಾವತಿ, ವಸೂಲಾತಿಯ ಆಕರ್ಷಕವಾದ ಹೊಸ ಹೊಸ ಯೋಜನೆಗಳ ಮೂಲಕ ಗಳಿಸಿದ ಸಾಧನೆ-ಸಂಪಾದನೆಯಲ್ಲಿ ತನ್ನ ಷೇರುದಾರರಿಗೆ ಶೇಕಡಾ 15’ರಷ್ಟು ಡಿವಿಡೆಂಟ್ ನೀಡುತ್ತಿರುವುದು ಬ್ಯಾಂಕಿನ ಹೆಮ್ಮೆಯಾಗಿದೆ. ಈ ಶೇಕಡಾ 15’ರ ಡಿವಿಡೆಂಟನ್ನು ಕಳೆದ ಮೂರು ವರ್ಷದಿಂದ ಷೇರುದಾರರಿಗೆ ನೀಡಲಾಗುತ್ತಿದೆ. ಈಗ ಎ’ಗ್ರೇಡ್ ತಲುಪಿರುವ ಕಲ್ಪವೃಕ್ಷ ಕೋಪರೇಟಿವ್ ಬ್ಯಾಂಕ್’ನ ಷೇರು ಬಂಡವಾಳ ಠೇವಣಾತಿಗಳು ಮತ್ತು ಹೂಡಿಕೆಗಳು ದುಡಿಯುವ ಬಂಡವಾಳದ ಮೌಲ್ಯವನ್ನು ಹೆಚ್ಚಿಸುವ ಮೂಲಕ, ಬ್ಯಾಂಕು ಎ-ಪ್ಲಸ್’ ಗ್ರೇಡ್ ಏರುವಂತೆ ಮಾಡುವ ಸಂಕಲ್ಪವನ್ನು ಈಗಿನ ಆಡಳಿತ ಮಂಡಳಿ ಹೊಂದಿದೆ. ಜೊತೆಗೆ, ಬ್ಯಾಂಕಿನ ಏಳ್ಗೆಯನ್ನು ಕಾಣುತ್ತಿರುವ ಷೇರುದಾರ ಮತದಾರರೂ ಹೂಡಿಕೆಗೆ ಈಗ ಉತ್ಸುಕರಾಗಿದ್ದಾರೆ. ತಾಲ್ಲೂಕಿನ ಇತರೆ ಭಾಗಗಳಲ್ಲಿ ಕೂಡ ಬ್ಯಾಂಕಿನ ಶಾಖೆಗಳನ್ನು ತೆರೆಯುವ ಮಹತ್ವಾಕಾಂಕ್ಷೆಯನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ನ ಆಡಳಿತ ಮಂಡಳಿ ಹೊಂದಿದೆ.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಸಮಾಜದ ಢೋಂಗಿ ರಾಜಕಾರಣಿಗಳಿಂದಾಗಿ ಅಂಬೇಡ್ಕರರಿಗೆ ಅವಮಾನ ; ಮುಖಂಡ ಹೆಸ್ರಳ್ಳಿ ಗೋಪಾಲ್

0

(ಅಮಿತ್ ಶಾ ವಜಾಗೊಳಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ)

ಚಿಕ್ಕನಾಯಕನಹಳ್ಳಿ : ಕರ್ನಾಟಕ ಮಾದಿಗ ದಂಡೋರ ಸಮಿತಿ,
ಜೈಭೀಮ್ ಛಲವಾದಿ ಮಹಾಸಭಾ, ಕರ್ನಾಟಕ ಛಲವಾದಿ ಮಹಾಸಭಾ, ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ಪಟ್ಟಣದ ನೆಹರೂ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಲೋಕಸಭೆಯಲ್ಲಿ ಅಮಿತ್ ಶಾ ಮಾತನಾಡುತ್ತಾ, ಕೇವಲವಾಗಿ ವ್ಯಂಗ್ಯ ಮಾಡುತ್ತಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈಯೆಲ್ಲ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ನೆಹರೂ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿಯನ್ನು ದಹನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತಪರ ಹೋರಾಟಗಾರ ಹೆಸ್ರಳ್ಳಿ ಗೋಪಾಲ್, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ನಾರಾಯಣಸ್ವಾಮಿ ಹೆಸರಿನ ದಲಿತ ಸಮಾಜದ ಮುಖಂಡರಿಬ್ಬರು ಅಮಿತ್ ಶಾ ಪಕ್ಷದಲ್ಲೇ ಇದ್ದೂ ಕೂಡ, ಅಮಿತ್ ಶಾ’ರವರು ಬಾಬಾಸಾಹೇಬರ ಬಗ್ಗೆ ಆಡಿದ ಮಾತಿಗೆ ಕ್ಷಮೆ ಕೋರುವಂತೆ ಒತ್ತಾಯಿಸಲಿಲ್ಲ. ಅಮಿತ್ ಶಾ ಹೇಳಿಕೆಯನ್ನು ವಿರೋಧಿಸಿ ಅದನ್ನು ಖಂಡಿಸಲಿಲ್ಲ. ಬಾಬಾಸಾಹೇಬರ ಬಗ್ಗೆ ಅವರಿಗೆ ಸರಿಯಾದ ತಿಳುವಳಿಕೆ ಹೇಳಿಕೊಡಲಿಲ್ಲ. ಪದೇ ಪದೇ ಹೀಗೆ ಬಾಬಾ ಸಾಹೇಬರಿಗೇ ಅವಮಾನ ಮಾಡುತ್ತಿದ್ದರೂ ಇವರುಗಳು ಕನಿಷ್ಠ ತುಟಿಪಿಟಿಕ್ ಎನ್ನುತ್ತಿಲ್ಲ. ಮಹಾರಾಷ್ಟ್ರದ ಆ ರಾಮದಾಸ್ ಅಠಾವಳೆ, ಬಿಹಾರದ ಆ ಪಾಸ್ವಾನ್’ಗಳು, ಕರ್ನಾಟಕದ ಈ ನಾರಾಯಣಸ್ವಾಮಿಗಳು ಈ ಇಂಥ ಢೋಂಗಿ ಮತ್ತು ಅವಕಾಶವಾದಿ ಬಕೀಟು ರಾಜಕಾರಣಿಗಳಿಂದಲೇ ಈಗ ಅಂಬೇಡ್ಕರರನ್ನು ಯಾರು ಬೇಕಾದರೂ ಎಲ್ಲೆಂದರಲ್ಲಿ ಅವಮಾನಿಸುವ ಸ್ಥಿತಿ ಬಂದೊದಗಿದೆ. ಇಂತಹ ಢೋಂಗಿ ರಾಜಕಾರಣಿಗಳನ್ನು ತಮ್ಮ ನಾಯಕರು ಎಂದು ಒಪ್ಪಿಕೊಂಡು, ಅವರನ್ನು ಪೋಷಿಸುತ್ತಿರುವ ದೇಶದ ದಲಿತ ಸಮಾಜ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಹಿಂದುತ್ವದ ವಿರಾಟ್ ವಾತಾಪಿ ಗರ್ಭದಲ್ಲಿ ಅಂಬೇಡ್ಕರರನ್ನೂ ಜೀರ್ಣಿಸಿಕೊಂಡುಬಿಡಲು ಇವರು ಹವಣಿಸುತ್ತಾರೆ. ಇಲ್ಲೇ ಈಗಲೇ ಇವರ ದುಷ್ಟ ಹುನ್ನಾರಗಳಿಗೆ ನಿರ್ಬಂಧ ‌ಹಾಕಿ ನಿಲ್ಲಿಸಿ, ಶಾಶ್ವತವಾದ ತಡೆಗೋಡೆ ಹಾಕಿಬಿಡಬೇಕು ಎಂದು ಅಮಿತ್ ಶಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಮಾದಿಗ ದಂಡೋರ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ, ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್, ಜೈಭೀಮ್ ಛಲವಾದಿ ಮಹಾಸಭಾದ ಆನಂದ್ ಆಶ್ರಿಹಾಲ್, ಮುಖಂಡರ ಅಗಸರಹಳ್ಳಿ ನರಸಿಂಹಮೂರ್ತಿ, ಮುಖಂಡ ಚಿದಾನಂದ್ ಮತ್ತಿತರ ಮಾತನಾಡಿ, ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದರು.

ನಂತರ ತಾಲ್ಲೂಕು ಆಡಳಿತ ಸೌಧದವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಮಿತ್ ಶಾ’ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂಬ ಮನವಿ ಪತ್ರವನ್ನು ತಹಸೀಲ್ದಾರ್’ರವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಮುಂದಿನ ಕ್ರಮ ವಹಿಸುವುದಾಗಿ ತಹಸೀಲ್ದಾರ್ ಕೆ ಪುರಂದರ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

*ಸಂಚಲನ*
ಚಿಕ್ಕನಾಯಕನಹಳ್ಳಿ

ಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ

0

‘ವಿಧಾನ್ ಸೆ ಸಮಾಧಾನ್’ ಕಾನೂನು ಅರಿವು ಕಾರ್ಯಕ್ರಮ

(ಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಪ್ರಧಾನ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ)

(ವಿಶಾಖಾ ಗೈಡ್’ಲೈನ್ಸ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು ; ಪ್ರಧಾನ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ)

ಚಿಕ್ಕನಾಯಕನಹಳ್ಳಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನುಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ವಕೀಲರ ಸಂಘದ ಸಹಯೋಗದೊಂದಿಗೆ, ಶುಕ್ರವಾರ ಬೆಳಗ್ಗೆ ಪಟ್ಟಣದ ತೀನಂಶ್ರೀ ಭವನದಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವ ಸಲುವಾಗಿ ‌’ವಿಧಾನ್ ಸೆ ಸಮಾಧಾನ್’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದಂತಹ ಶ್ರೀಮತಿ ನೂರುನ್ನೀಸ’ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ನಿತ್ಯ ಆಗುತ್ತಿರುವ ದಾಳಿ-ದೌರ್ಜನ್ಯಗಳನ್ನು ಪುರಾಣದ ಪಾತ್ರ, ಪ್ರಸಂಗ ಮತ್ತು ಕಥನಗಳನ್ನು ಉದಾಹರಿಸುತ್ತಾ ವಿವರಿಸಿದ ಶ್ರೀಮತಿ ನೂರುನ್ನೀಸಾ’ರವರು, ರಾವಣನ ಸೀತಾಪಹರಣ ಪ್ರಸಂಗವನ್ನು ಸಭೆಗೆ ನೆನಪಿಸಿ, ಅದರ ಮೂಲಕ ಕೆಡುಕು ಹೇಗೆ ಕೇಡಿನಲ್ಲೇ ಕೊನೆಯಾಗುತ್ತದೆ ಎಂದು ವಿವರಿಸಿದರು.

ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಪ್ರಸಂಗಗಳನ್ನು ಸೋದಾಹರಿಸಿ, ಪ್ರಸ್ತುತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಇರುವ ಸಾಮ್ಯತೆಯನ್ನು ಅವರು ಬಿಡಿಸಿ ತಿಳಿಸಿದರು.

ದಿಟ್ಟೆ ಭಂವರಿದೇವಿ ಮತ್ತು ವಿಶಾಖಾ ಗೈಡ್’ಲೈನ್ಸ್ ::

2013’ರಲ್ಲಿ ಜಾರಿಗೆ ಬಂದ ‘ಕೆಲಸದ ವೇಳೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ’ಯ ಬಗ್ಗೆ ಮತ್ತು ಅಂಥದೊಂದು ಚಾರಿತ್ರಿಕ ಕಾಯ್ದೆ (Sexual haraasment of Women at work place) ಬಗ್ಗೆ ಶ್ರೀಮತಿ ನೂರುನ್ನೀಸಾ’ರವರು ವಿವರಿಸಿದರು. ಮತ್ತೆ ಇಂತಹ ಈ ಚಾರಿತ್ರಿಕವಾದ ಕಾಯ್ದೆ ಜಾರಿಗೆ ಬರಲು ಕಾರಣಳಾದ ರಾಜಸ್ಥಾನದ ಭಂವರಿದೇವಿಯವರ ಹೋರಾಟ ಮತ್ತು ಹುತಾತ್ಮತೆಯ ಬಗ್ಗೆ ವಿಸ್ತಾರವಾಗಿ ಸಭೆಗೆ ತಿಳಿಸಿದರು.

70’ರ ದಶಕದಲ್ಲಿ ರಾಜಸ್ಥಾನದ ಗುಜ್ಜರರಲ್ಲಿ ಇದ್ದ ಬಾಲ್ಯವಿವಾಹ ಪದ್ಧತಿ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಅಲ್ಲಿನ ಸಾಮಾಜಿಕ ಕಾರ್ಯಕರ್ತೆ ಮತ್ತು ದಿಟ್ಟ ಹೋರಾಟಗಾರ್ತಿ ಭಂವರಿದೇವಿ ತನ್ನ ಸ್ನೇಹಿತೆರೊಡನೆ ಸೇರಿಕೊಂಡು ಹಳ್ಳಳ್ಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹಗಳನ್ನು ತಡರಯುತ್ತಿದ್ದಳು. ಬಾಲ್ಯ ವಿವಾಹಗಳನ್ನು ತಡೆಯಲಿಕ್ಕಾಗಿಯೇ ‘ವಿಶಾಕಾ ಹೆಸರಿನ ಸಂಘಟನೆ’ಯನ್ನೇ ಕಟ್ಟಿಕೊಂಡು ಪುರುಷಪ್ರಧಾನ ಶೋಷಣೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟ ನಡೆಸಿದ್ದಳು. ಆಕೆಯ ಹೋರಾಟವನ್ನು ಹತ್ತಿಕ್ಕಲಾಗದ ಪ್ರಭಾವಿ ಗುಜ್ಜರರು, ಕಡೆಗೊಂದು ದಿನ ಆಕೆಯ ಗಂಡನನ್ನು ಕಟ್ಟಿಹಾಕಿ ಆತನ ಎದುರಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಿಂಸಿಸಿದ್ದರು. ನಂತರ, ಹೋರಾಟಗಾರ್ತಿ ಭಂವರಿದೇವಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ದಾಖಲಾಯಿತು. ಆದರೆ, ಸಮರ್ಪಕವಾದ ತನಿಖೆ ನಡೆಸದ ಪೊಲೀಸ್ ವ್ಯವಸ್ಥೆ ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ಪ್ರತಿಕೂಲ ಸಾಕ್ಷ್ಯಾಧಾರಗಳ ಕಾರಣದಿಂದಾಗಿ ಆಪಾದಿತರೆಲ್ಲರೂ ಆರೋಪಮುಕ್ತರಾಗಿ ಹೊರಬಂದರು. ಆಗ, ಭಂವರಿದೇವಿ ಕಟ್ಟಿಕೊಂಡಿದ್ದ ವಿಶಾಖಾ ಸಂಘದ ಸ್ನೇಹಿತೆಯರು ಮತ್ತು ದೇಶದ ಇತರ ಭಾಗಗಳ ಸಾಮಾಜಿಕ ಹೋರಾಟಗಾರರ ಬೆಂಬಲದಿಂದ ಪ್ರಕರಣದ ಸೂಕ್ತ ಮತ್ತು ಸಮಗ್ರ ತನಿಖೆಗಾಗಿ ಸುಪ್ರೀಂ ಕೋರ್ಟ್’ನಲ್ಲಿ ಮನವಿ ಸಲ್ಲಿಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮತ್ತೆ ತನಿಖೆ ನಡೆಸಿ, ಕಡೆಗೆ ಆಪಾದಿತರೆಲ್ಲರ ಅಪರಾಧ ಸಾಬೀತಾದ ಕಾರಣದಿಂದ ಅವರೆಲ್ಲರಿಗೂ ಶಿಕ್ಷೆಯಾಯಿತು. ಈ ತೀರ್ಪಿನಲ್ಲಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು, ಸುಪ್ರೀಂ ಕೋರ್ಟ್ ವಿಶಾಖಾ ಗೈಡ್’ಲೈನ್ಸ್ ನಿರ್ದೇಶನಗಳನ್ನು ನೀಡಿತ್ತು. ಅದು 2013’ರಲ್ಲಿ ಕಾಯ್ದೆಯಾಗಿ ಜಾರಿಯಾಯಿತು.

ಸುಪ್ರೀಂಕೋರ್ಟ್ ನಿರ್ದೇಶಿಸಿದ ‘ವಿಶಾಖಾ ಗೈಡ್’ಲೈನ್ಸ್’ 2013’ರ ಕಾಯ್ದೆ ಪ್ರಕಾರ, 10 ಮಂದಿ’ಗಿಂತ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿರುವ ಯಾವುದೇ ಸ್ಥಳದಲ್ಲಿ,
ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರನ್ನು ಲೈಂಗಿಕ ಕಿರುಕುಳದಿಂದ ಪಾರುಮಾಡಲು ಆಂತರಿಕ ಕಮಿಟಿ ಹಾಗೂ ಭಯಾ ಕಮಿಟಿಗಳನ್ನು ಅಲ್ಲಿನ ಮಾಲೀಕ ಅಥವಾ ಮೇಲಿನ ಅಧಿಕಾರಿ ನೇಮಿಸಿಕೊಳ್ಳಬೇಕು.

ಯಾವುದೇ ಸಾರ್ವಜನಿಕ ಕೆಲಸದ ಜಾಗದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ವಿಶಾಖಾ ಗೈಡ್’ಲೈನ್ಸ್ ಪ್ರಬಲವಾದ ರಕ್ಷಾಕವಚದಂತಿದೆ. ಮಹಿಳೆಯರು ಇದರ ಬಗ್ಗೆ ತಿಳಿದುಕೊಂಡು, ಪ್ರಶ್ನಿಸುವಂತಾಗಬೇಕು ಎಂದರು.

ಹೆಣ್ಣುಮಕ್ಕಳ ಬಟ್ಟೆ-ಬರೆ, ಕತ್ತಲಾಗುವ ಮೊದಲು ಮನೆ ಸೇರಿಬಿಡುವ ಕಟ್ಟಳೆ, ಆಕೆಯ ಸಾರ್ವಜನಿಕ ವರ್ತನೆಗಳಿಗೆ ಸಂಬಂಧಿಸಿದ ನಿರ್ಬಂಧನೆಗಳು ಸೇರಿದಂತೆ ಹೆಣ್ಣುಮಕ್ಕಳಿಗೆ ಮಾತ್ರ ಇರುವ ಇತ್ಯಾದಿ ಕಟ್ಟುಕಟ್ಟಳೆಗಳನ್ನು ಪ್ರಶ್ನಿಸಿದ ಶ್ರೀಮತಿ ನೂರುನ್ನೀಸಾ’ರವರು, ಮನೆಯ ಗಂಡುಮಕ್ಕಳಿಗೂ ಈ ತರಹದ ನಿರ್ಬಂಧಗಳು ಮತ್ತು ಕಟ್ಟುಕಟ್ಟಳೆಗಳನ್ನು ಹಾಕಿ, ಅವರಿಗೆ ಇದರ ಬಗ್ಗೆ ಅರಿವು ಮೂಡಿಸಿದಾಗ ಸಮಾಜ ಇನ್ನಷ್ಟು ಸ್ವಸ್ಥಗೊಳ್ಳುತ್ತದೆ. ನಮ್ಮ ಮಗ, ನಮ್ಮ ತಮ್ಮ, ನಮ್ಮ ಮೊಮ್ಮಗ ಅಥವಾ ನಮ್ಮ ಗಂಡ ಹೊರಗೆ ಇದ್ದಾಗ ಆತ ಪರಸ್ತ್ರೀಯರನ್ನು ಕಾಣುವ ದೃಷ್ಟಿ ಬದಲಾಗುತ್ತದೆ. ಹೀಗಾದಾಗ ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ, ಲೈಂಗಿಕ ಶೋಷಣೆ, ಕೌಟುಂಬಿಕ ದೌರ್ಜನ್ಯ, ಕಳ್ಳ ಸಾಗಾಣಿಕೆ, ಅಪ್ರಾಪ್ತ ವಿವಾಹ ಇತ್ಯಾದಿ ಪಿಡುಗುಗಳು ತಂತಾನೆ ಕಳೆದುಹೋಗುತ್ತವೆ ಎಂದು ಅವರು ತಮ್ಮ ಮನೆಯ ಗಂಡುಮಕ್ಕಳನ್ನು ನಿಯಂತ್ರಿಸಿ ಎಂದು ಎಲ್ಲ ತಾಯಂದಿರಿಗೂ ಆಗ್ರಹಿಸಿದರು.

ಕಾಡುಗೊಲ್ಲರ ಹಟ್ಟಿಗಳಲ್ಲಿ ಆಚರಿಸಲ್ಪಡುವ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿಯ ಆಚರಣೆಯ ಬಗ್ಗೆ ನಿಷ್ಠುರವಾಗಿ ಮಾತನಾಡಿದ ನೂರುನ್ನೀಸಾ’ರವರು, ಸಮೀಪದ ಗೋಡೆಕೆರೆ ಗೊಲ್ಲರಹಟ್ಟಿಗೆ ಖುದ್ದಾಗಿ ಭೇಟಿ ನೀಡಿ, ಗ್ರಾಮದ ಪುರುಷರು ಮತ್ತು ಮಹಿಳೆಯರ ಜೊತೆ ಮಾತುಕತೆ ನಡೆಸಿದರು.

ದೇವರ ಹೆಸರಲ್ಲಿ ಮತ್ತು ಮಡಿ-ನೇಮ’ದ ಹೆಸರಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಸಲಾಗುವ ಅನಿಷ್ಟ ಪದ್ಧತಿಗಳ ಶೋಷಣೆಯ ಬಗ್ಗೆ ಆ ಹಟ್ಟಿಯ ಹೆಣ್ಣುಮಕ್ಕಳ ‌ಜೊತೆ ಮಾತನಾಡಿ ಅವರಲ್ಲಿ ಕಾನೂನು-ಸಂರಕ್ಷಣೆಯ ಸ್ಪಷ್ಟ ಅರಿವು ಮೂಡಿಸಿದರು. ಅಂತಹ ಆಚರಣೆಗಳನ್ನು ನೀವೇ ಮುಂದೆ ನಿಂತು ತಡೆಯಬೇಕು ಎಂದು ಗ್ರಾಮದ ಪುರುಷರಿಗೆ ತಾಕೀತು ಮಾಡಿದರು. ನಂತರ, ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು

. ಆಟಿಕೆಗಳನ್ನು ಅಂಗನವಾಡಿ ಮಕ್ಕಳು ಮುರಿದುಹಾಕಿದರೂ ಅಥವಾ ಚೆಲ್ಲಾಪಿಲ್ಲಿ ಮಾಡಿಟ್ಟರೂ ಸರಿ, ಮಕ್ಕಳಿಗೆ ಆಟಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಡಿ. ಅವರ ಕೈಗೆ ಮೊದಲು ಆಟಿಕೆಗಳನ್ನು ಕೊಡಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಿ ಒತ್ತಿ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ವಿಚ್ಛೇದನ, ಫೋಕ್ಸೋ, ಸಮಾನ ವೇತನ, ಕಾರ್ಮಿಕ ಹಕ್ಕು, ಆಸಿಡ್ ದಾಳಿ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಶೋಷಣೆ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಇನ್ನೂ ಹಲವು ಪ್ರಮುಖ ಕಾಯ್ದೆ-ಕಾನೂನುಗಳ ಬಗ್ಗೆ ಕಿರಿಯ ವಕೀಲ ಪ್ರತಾಪ್, ಪ್ಯಾನೆಲ್ ವಕೀಲರಾದ ನೇತ್ರಾವತಿ ಮತ್ತು ವೈ ಜಿ ಲೋಕೇಶ್ವರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ, ಚಿಕ್ಕನಾಯಕನಹಳ್ಳಿ ಜೆ ಎಮ್ ಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್ ಎ, ಅಧಿಕ ಸಿವಿಲ್ ನ್ಯಾಯಾಧೀಶರಾದ ಅಪರ್ಣ ಆರ್, ಸಹಾಯಕ ಸರ್ಕಾರಿ ಅಭಿಯೋಜಕರುಗಳಾದ ರಂಗನಾಥಪ್ಪ, ಬಸವರಾಜ ಕಾಂತಿಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಅಂಗನವಾಡಿ ಮೇಲ್ವಿಚಾರಣಾಧಿಕಾರಿ ಬಿ ರೇಖಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ ಕೆ ಸದಾಶಿವಯ್ಯ ಹಾಗೂ ತಾಲ್ಲೂಕಿನ ನೂರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಸರ್ಕಾರಿ ಶಾಲೆ ಮಕ್ಕಳಿಗೆ ವೇದಿಕೆಯಾದ ಆದಿಚುಂಚಗಿರಿ ವಿಶ್ವವಿದ್ಯಾನಿಲಯ

ರಸಾಯಶಾಸ್ತ್ರದ ಪ್ರಯೋಗಗಳಿಗೆ ಸಾಥ್ ನೀಡಿದ ಹಳ್ಳಿ ಮಕ್ಕಳು

 

 ಬಾಲಗಂಗಾಧರನಾಥ ಸ್ವಾಮೀಜಿ ನಗರ:  ಇಲ್ಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು(ACU) ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ (RSC) ಭಾರತ  ಘಟಕದ ಸಹಯೋಗದೊಂದಿಗೆ  ಆಯೋಜಿಸಿದ್ದ ಯೂಸೂಫ್  ಹಮೀದ್ ರಸಾಯನಶಾಸ್ತ್ರ ಶಿಬಿರ ಸರ್ಕಾರಿ ಶಾಲೆಯ ಮಕ್ಕಳಿಗೆ ರಸಾಯನಶಾಸ್ತ್ರದ ಹೊಸಲೋಕವನ್ನೇ ತೆರೆದಿಟ್ಟಿತು.

ಮಂಡ್ಯ, ಹಾಸನ, ತುಮಕೂರಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಸಾಯನಶಾಸ್ತ್ರದ ಪ್ರಯೋಗಗಳಿಗೆ ತೆರೆದುಕೊಂಡು ಬೆರಗುಮೂಡಿಸಿದರು. ಮಕ್ಕಳಲ್ಲಿನ ರಸಾಯನಶಾಸ್ತ್ರದ ಕುತೂಹಲ ತಣಿಸಿದ ಶಿಬಿರವು,  ಅವರಲ್ಲಿನ ರಸಾಯನಶಾಸ್ತ್ರದ ಕಡೆಗಿನ ಆಸಕ್ತಿಗೆ ಬೆಳಕಿಂಡಿಯಾಯಿತು. ಡಿ.4ರಿಂದ 6ರವರೆಗೆ ಶಿಬಿರ ನಡೆಯಿತು. 
 
 ಶಿಬಿರದಲ್ಲಿ  ಮೂರು ಜಿಲ್ಲೆಗಳ 9ನೆ ತರಗತಿಯ 83 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಗೆ  ವಿಷಯದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ರಸಾಯನಶಾಸ್ತ್ರದ ಕಲಿಕೆಯನ್ನುಆನಂದದಿಂದ ಆಸ್ವಾದಿಸುವುದು ಹೇಗೆಂದು ವಿವಿಧ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ರಸಾಯನಶಾಸ್ತ್ರವನ್ನು ಅನ್ವೇಷಿಸಲು ಶಿಬಿರ ಅವಕಾಶ ಒದಗಿಸಿತು. ವಿಶ್ವವಿದ್ಯಾಲಯದ ಮಟ್ಟದಲ್ಲಿ ಮತ್ತು ಅದರಾಚೆಗೆ ರಸಾಯನಶಾಸ್ತ್ರವನ್ನು ಮುಂದುವರಿಸಲು ಮಕ್ಕಳನ್ನು  ಪ್ರೇರೇಪಿಸಿತು.
ಇದು ಯೂಸುಫ್ ಹಮೀದ್ 66ನೇ ರಸಾಯನಶಾಸ್ತ್ರ ಶಿಬಿರವಾಗಿತ್ತು.  ಯೂಸುಫ್ ಹಮೀದ್ ಸ್ಪೂರ್ತಿದಾಯಕ ವಿಜ್ಞಾನ ಕಾರ್ಯಕ್ರಮದ ಭಾಗವಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಈ ಶಿಬಿರ ಆಯೋಜಿಸಲಾಗಿತ್ತು.
 
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಸುರಕ್ಷತಾ ಪರಿಕರಗಳು ಮತ್ತು ಸಲಕರಣೆಗಳನ್ನು ಪರಿಚಯಿಸಲಾಯಿತು.  ಬಣ್ಣ ರಚನೆ, ಸ್ಫಟಿಕೀಕರಣ, ಫೋರೆನ್ಸಿಕ್ ಚಾಲೆಂಜ್, ಗಡಿಯಾರ ಪ್ರತಿಕ್ರಿಯೆಗಳು, ಲೋಳೆ ಪ್ರತಿಕ್ರಿಯೆ, ಜಾಗತಿಕ ಕಾಯಿನ್ ಬ್ಯಾಟರಿ ಪ್ರಯೋಗ ಮತ್ತು ಇತರ ಕಿರು ಪ್ರಯೋಗಗಳು ಸೇರಿದಂತೆ ವಿವಿಧ ಪ್ರಯೋಗಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಹಲವು ಪ್ರಯೋಗಗಳನ್ನು ಅವರಿಗೆ ಹೇಳಿಕೊಡಲಾಯಿತು,
ಕುಲಪತಿಗಳಾದ ಡಾ. ಎಂ ಎ ಶೇಖರ್
 ಎಸಿಯುನ ಉಪಕುಲಪತಿಗಳಾದ ಪ್ರೊ.ಎಂ.ಎ.ಶೇಖರ್ ಮಾತನಾಡಿ, “ರಸಾಯನಶಾಸ್ತ್ರವು ನಮ್ಮ ಸುತ್ತಲೂ ಇದೆ, ಮತ್ತು ಅದನ್ನು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಹಲವು ವಿಧಗಳಲ್ಲಿ ಬಳಸಿಕೊಳ್ಳ ಬಹುದು. ಇದು ಔಷಧಿಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ರಾಸಾಯನಿಕ ಜೀವಶಾಸ್ತ್ರದ ಪ್ರಗತಿಯೊಂದಿಗೆ, ವಿದ್ಯಾರ್ಥಿಗಳು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುವ ಮೂಲಕ ರಾಷ್ಟ್ರ-ನಿರ್ಮಾಣಕ್ಕೆ ಕೊಡುಗೆ ನೀಡಬಹುದು’ ಎಂದು ಹೇಳಿದರು.
ಕುಲಸಚಿವರಾದ ಡಾ. ಸಿ ಕೆ ಸುಬ್ರಾಯ
ಎಸಿಯುನ ಕುಲಸಚಿವರಾದ ಪ್ರೊ. ಸಿ.ಕೆ.ಸುಬ್ಬರಾಯ ಅವರು ಮಾತನಾಡಿ,  "ವಿಶ್ವವಿದ್ಯಾನಿಲಯ ಪ್ರಾರಂಭವಾದಗಿನಿಂದಲೂ  ನೆರೆಹೊರೆಯ ಶಾಲೆಗಳು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕ ಕಾರ್ಯಕ್ರಮಗಳ ಆಯೋಜಿಸುತ್ತಾ ಅಲ್ಲಿನ ಮಕ್ಕಳ  ಶಿಕ್ಷಣದ ಬೆಳವಣಿಗೆಗೂ ಒತ್ತು ನೀಡುತ್ತಿದೆ.  ಗ್ರಾಮೀಣ  ವಿದ್ಯಾರ್ಥಿಗಳಲ್ಲಿ ವಿಜ್ಞಾನ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಿ ಅವರು ವಿಜ್ಞಾನ ಶಿಕ್ಷಣ  ಅಧ್ಯಯನಕ್ಕೆ  ಪ್ರರೇಪಿಸುವುದು ವಿ.ವಿಯ ಗುರಿಯಾಗಿದೆ ಎಂದರು.

ಎಸಿಯುನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಡಾ. ಕೆ. ಪ್ರಶಾಂತ ಕಾಳಪ್ಪ ಅಚರ ಮಾತನಾಡಿ,  ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಭಾರದ ಘಟಕದ ಸಹದ್ಯೋಗಿಗಳು ದೇಶದಲ್ಲಿ ರಸಾಯನಶಾಸ್ತ್ರ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾರತದ ಶಿಕ್ಷಣ ಸಮುದಾಯದೊಂದಿಗೆ ಕೆಲಸ ಮಾಡುತ್ತಿದೆ. ಕೆಮಿಸ್ಟ್ರಿಯ ಅಧ್ಯಯನ ಬೆಂಬಲಿಸುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ರಾಸಾಯನಿಕ ವಿಜ್ಞಾನಗಳ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಪ್ರಯೋಜನ ದಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಎಸಿಯು ಪ್ರಾಧ್ಯಾಪಕರು ಪ್ರಯೋಗಾಲಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳಿಗೆ ಮಕ್ಕಳು ಭೇಟಿ ನೀಡಿದರು.  
ಹಿರೀಸಾವೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತಾ  ಶಿಬಿರದ ಕುರಿತು ತನ್ನ  ಅನುಭವ ಹಂಚಿಕೊಳ್ಳುತ್ತಾ, 
‘ಶಿಬಿರದ ದಿನಕ್ಕಾಗಿ ನಾನು ಕಾತುರಗಳಾಗಿದ್ದೆ, ಇಲ್ಲಿ ನಾವು   ರಾಸಾಯನಿಕಗಳ ಬಗ್ಗೆ ಅನೇಕ ಹೊಸ ವಿಷಯಗಳನ್ನು ಕಲಿತೆ. ಹೇಗೆ ವಿವಿಧ ಬಣ್ಣಗಳನ್ನು ಉತ್ಪಾದಿಸಬಹುದು ಎಂದು ನಾನು ಕಲಿತೆ.  ಸ್ಫಟಿಕೀಕರಣ ಪ್ರಕ್ರಿಯೆ ನನ್ನಲ್ಲಿ ಖುಷಿ ತರಿಸಿತು. ಇದೆಲ್ಲವನ್ನು ಹೇಳಿಕೊಳ್ಳಲು ನನ್ನ ಶಾಲೆಗೆ ಯಾವಾಗ ಹೋಗುತ್ತೇನೋ ಎಂದು ಕಾಯುತ್ತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.
 
  ‘ಕದಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ  ಚೈತ್ರ ಮಾತನಾಡಿ, ಇಂಥ ಪ್ರಯೋಗಗಳನ್ನು ನಾನು ಮಾಡಿರಲೇ ಇಲ್ಲ.  ಬ್ಯಾಟರಿ ತಂತ್ರಜ್ಞಾನ ನನ್ನಲ್ಲಿ ಅಚ್ಚರಿ ಮೂಡಿಸಿತು. ಇದನ್ನು ನನ್ನ ಶಾಲೆಯ ನನ್ನ ಸ್ನೇಹಿತೆಯರಿಗೂ ಹೇಳಿಕೊಡುವೆ.   ಹತ್ತನೇ ತರಗತಿ ನಂತರ ಕೆಮಿಸ್ಟ್ರಿ ಅಧ್ಯಯನವನ್ನೇ ಮಾಡುತ್ತೇನೆ’ ಎಂದರು. 
 
ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಹಿರಿಯ ವಿಜ್ಞಾನಿಯಾ್ದ ಪ್ರೊ.ಕೆ.ಪ್ರಶಾಂತ್ ಕಾಳಪ್ಪ ಕಾರ್ಯನಿರ್ವಹಿಸಿದ್ದರು. ಡಾ.ವೈ.ಆರ್.ಗಿರೀಶ್, ಡಾ.ಎಸ್.ಎಂ.ಅನುಷ್, ಡಾ.ಅವಿನಾಶ್, ಡಾ.ಕೆ.ಎನ್.ನಂದೀಶ್ ಸಹ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ  ಮೆಲಿಸ್ಸಾ ಮೆಂಡೋಜಾ  ಕಾರ್ಯಕ್ರಮದ ಕಾರ್ಯನಿರ್ವಾಹಕರಾಗಿ  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
 ಪ್ರಯೋಗಾಲಯದ ಪ್ರಯೋಗಗಳು ಹಾಗೂ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು   ಆದಿಚುಂಚನಗಿರಿ ವಿ ವಿಯ ಪ್ರಾಧ್ಯಾಪಕರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಅವರು ACU ಪರಿಸರವನ್ನು ಆನಂದಿಸಿದರು ಮತ್ತು ಭವಿಷ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಆಸಕ್ತಿಯನ್ನು ವ್ಯಕ್ತಪಡಿಸಿದರು.

 

 ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಡಿ.7ರಿಂದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪಾದಯಾತ್ರೆ

0

ತುರುವೇಕೆರೆ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಡಿ.7ರಂದು ಪಾದಯಾತ್ರೆ ಹಮ್ಮಿಕೊಂಡಿದ್ದು ಕ್ಷೇತ್ರದ ಎಲ್ಲ ರೈತರು ಪಕ್ಷಾತೀತವಾಗಿ ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗು ಮಾಜಿ ಶಾಸಕ ಮಸಾಲೆ ಜಯರಾಮ್ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಂಟಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಸಿ.ಎಸ್.ಪುರ, ತುರುವೇಕೆರೆ ಕ್ಷೇತ್ರದ ರೈತರು ಹಾಗು ಕಾಂಗ್ರೆಸ್ ರೈತರೂ ಪಕ್ಷಬೇಧ ಮರೆತು ಹೇಮಾವತಿ ನಾಲೆ ಡಿ.206ನ ಸಾಗರನಹಳ್ಳಿ ಗೇಟ್ ನಿಂದ ಶನಿವಾರ 10:30 ಗಂಟೆಗೆ ಪಾದಯಾತ್ರೆ ಪ್ರಾರಂಭಗೊಂಡು ಭಾನುವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಸೇರಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಎನ್.ಡಿ.ಎ ಹೋರಾಟ ನಿಲ್ಲದು. ಯಾವುದೇ ಕಾರಣಕ್ಕೂ ಸರ್ಕಾರದೊಂದಿಗೆ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಮಗಾರಿ ನಿಲ್ಲಸಿದರೆ ಮಾತ್ರ ಸರ್ಕಾರದ ನಡೆಯನ್ನು ಗೌರವಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಯ ರೈತರ ಪಾಲಿಗೆ ರೈತ ವಿರೋಧಿಯಾಗಿದೆ.

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರುದ್ದ ಕಳೆದ ಆರೇಳು ತಿಂಗಳುಗಳಿಂದ ಮೈತ್ರಿ ಪಕ್ಷಗಳು ಸತತ ಹೋರಾಟ ಮಾಡಿ ನಿಲ್ಲಿಸಿದ್ದೆವು. ಆದರೆ ಈಗ ಪುನಃ ಕಾಮಗಾರಿ ಪ್ರಾರಂಭಿಸಿರುವುದು ಖಂಡನೀಯ. ಈ ಕಾಮಗಾರಿ ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಲಿದೆ.

ಗೊರೂರು ಡ್ಯಾಮ್ ನಿಂದ ಮಾಗಡಿಗೆ ನೇರ ಪೈಪ್ ಲೈನ್ ಮಾಡಿಕೊಂಡು ನೀರು ತೆಗೆದುಕೊಂಡು ಹೋಗಲಿ ಅದಕ್ಕೆ ಅಭ್ಯಂತರವಿಲ್ಲ. 24 ಟಿಎಂಸಿ ನೀರನ್ನು ಕುಣಿಗಲ್, ಮಾಗಡಿ ಸೇರಿಯೇ ನಾಲಾ ನೀರು ಹಂಚಿಕೆ ಮಾಡಲಾಗಿದೆ. 12 ಅಡಿ ವಿನ್ಯಾಸವುಳ್ಳ ಪೈಪ್ ನಲ್ಲಿ ಸುಮಾರು 70 ಕಿ.ಮೀ ನೀರು ತೆಗೆದುಕೊಂಡು ಹೋದರೆ ಗ್ರಾವಿಟಿ ಮೂಲಕ ಎಲ್ಲಾ ನೀರು ಮಾಗಡಿ ಸೇರಿದರೆ ಇಲ್ಲಿನ ಎರಡು ತಾಲ್ಲೂಕಿನ ರೈತರ ಗತಿ ಏನು? ಜೊತೆಗೆ ಇಡೀ ಕಾಮಗಾರಿಯೇ ಅವೈಜ್ಞಾನಿಕವಾದದ್ದು.

ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಅವಧಿಯಲ್ಲೇ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೈಜ್ಞಾನಿಕವಾದುದಲ್ಲ ಎಂದು ಹೇಳಿದರು. ನಂತರ ಬಂದ ಬಿ.ಎಸ್.ಯಡಿಯೂರಪ್ಪನವರು ಕೂಡ ಈ ಕಾಮಗಾರಿ ರದ್ದುಮಾಡಿದರು. ಈ ನಡುವೆ ಕಾಮಗಾರಿ ತಾಂತ್ರಿಕ ಅಧಿಕಾರಿಗಳು ಜಿಲ್ಲೆಯ ಶಾಸಕರನ್ನು ಕರೆದಿದ್ದರು ನಾವು ತಿರಸ್ಕರಿಸಿದ್ದೇವೆ.

ಈ ಸರ್ಕಾರ ಈ ಭಾಗದ ರೈತರ ಶವಗಳ ಮೇಲೆ ನೀರು ತೆಗೆದುಕೊಂಡು ಹೋಗುಬೇಕಷ್ಟೇ. ಪ್ರಾಣಬಿಟ್ಟರೂ ನೀರು ಬಿಡೆವು. ಕುಣಿಗಲ್ ತಾಲ್ಲೂಕಿಗೆ ನಾಲುವೆ ಮಾಡಿಕೊಂಡು ನೀರು ತೆಗೆದುಕೊಂಡು ಹೋಗಲು ಯಾವ ಶಾಸಕರ ವಿರೋಧವೂ ಇಲ್ಲ. ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳು ಸೇರಿಕೊಂಡು ಬೆಂಗಳೂರು ವಿಧಾಸಭೆ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದೆಂದು ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ಒಕ್ಕೊರಲಿನಿಂದ ಸರ್ಕಾರಕ್ಕೆ ಎಚ್ಚರಿಗೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮೃತ್ಯುಂಜಯ ಮತ್ತು ಮೈತ್ರಿ ಕಾರ್ಯಕರ್ತರು ಇದ್ದರು.

ಆದಿಚುಂಚನಗಿರಿ ವಿ.ವಿ.ಗೆ ಕೃಷಿ ವಿಜ್ಞಾನ ಕಾಲೇಜು: ಆದಿಚುಂಚನಗಿರಿ ಶ್ರೀ

0

ಮಾಯಸಂದ್ರ (ತುರುವೇಕೆರೆ): ಇಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ವತಿಯಿಂದ ಆರಂಭಿಸಿರುವ ಕೃಷಿ ವಿಜ್ಞಾನ ಕಾಲೇಜಿನ ಉದ್ಘಾಟನೆ ಗುರುವಾರ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಮ್ಮದು ಇನ್ನೂ ಕೃಷಿ ಆಧಾರಿತ ದೇಶವಾಗಿದೆ. ಕೃಷಿಕರು ಹೆಚ್ಚಾಗಿ ಆಧುನಿಕ ಉಪಕರಣಗಳನ್ನು ಉಪಯೋಗಿಸಬೇಕು. ಆಧುನಿಕತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದ ಶೇ.60 ರಷ್ಟು ಜನರು ಹಳ್ಳಿಗಳಲ್ಲಿದ್ದು ಅದರಲ್ಲಿ ಶೇ.50ರಷ್ಟು ಜನರು ವ್ಯವಸಾಯ ಮಾಡಿ ದುಡಿಮೆ ಮಾಡುತ್ತಾರೆ. ಕೃಷಿಯಿಂದ ಶೇ.18 ರಷ್ಟು ಮಾತ್ರ ದೇಶಕ್ಕೆ ಜಿ.ಡಿ.ಪಿ ಆದಾಯ ಬರುತ್ತಿದೆ. ನಮ್ಮ ದೇಶದ ಕೃಷಿ ವಿಜ್ಞಾನವಾಗಿ ಮಾರ್ಪಟಿಲ್ಲ. ಕೃಷಿ ಕೃಷಿಯಾಗಿಯೇ ಉಳಿದಿದೆ. ಬೇರೆ ದೇಶದ ರೈತರು ಉತ್ಪಾದನೆ ಮಾಡುವಷ್ಟು ನಮ್ಮ ರೈತರು ಮಾಡಲು ಸಾದ್ಯವಾಗುತ್ತಿಲ್ಲ. ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಬೇಕಿದೆ. ಕೃಷಿ ಸಚಿವರು ಹೆಚ್ಚು ಮುತುವರ್ಜಿ ವಹಿಸಿ ನಮ್ಮ ಶಿಕ್ಷಣ ಸಂಸ್ಥೆಗೆ ಕೃಷಿ ವಿಜ್ಞಾನ ಕಾಲೇಜು ನೀಡಿದ್ದಾರೆ. ಅವರಿಗೆ ಮಠದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಾಂಪ್ರದಾಯಿಕ ಕೃಷಿಗಿಂತ ಆಧುನಿಕ ಕೃಷಿ ಪದ್ಧತಿಯಲ್ಲಿ ಸಮಗ್ರ ಬೆಳೆ ಬೆಳೆಯುವುದನ್ನು ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಕಡೆಗೆ ಹೆಜ್ಜೆ ಇಡಬೇಕು ಎಂದು ಕಾಲೇಜು ಉದ್ಘಾಟಿಸಿ ಮಾತನಾಡಿದ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳು ಆಯೋಜಿಸಿದ್ದ ಮಕ್ಕಳ ಸಂತೆಗೆ, ಕೃಷಿ ಸಚಿವರು ಭೇಟಿ ನೀಡಿ ಮಕ್ಕಳ ವ್ಯಾಪಾರವನ್ನು ಪರಿಶೀಲಿಸಿದರು.

ಮಠದ ಪರವಾಗಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಸಿರು ಶಾಲು ಹೊದಿಸಿ ಸಚಿವ ಚಲುವರಾಯಸ್ವಾಮಿಯವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಿವಿಧ ಶಾಖಾ ಮಠದ ಸ್ವಾಮೀಜಿಗಳಾದ ಸೋಮನಾಥ ಸ್ವಾಮೀಜಿ, ಮಂಗಳಾನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ. ಎಸ್.ವಿ.ಸುರೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎ.ಶೇಖರ್, ಆದಿಚುಂಚನಗಿರಿ ಮಠದ ಸಿಇಓ ಎನ್.ಎಸ್. ರಾಮೇಗೌಡ, ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಿವಲಿಂಗೇಗೌಡರು, ಪ್ರೊ.ಪುಟ್ಟರಂಗಪ್ಪ ಇತರರು ಇದ್ದರು.

ಸಂವಿಧಾನದ ರಕ್ಷಣೆ: ಕೋರ್ಟ್ ಗಳ ಪಾತ್ರ ಹಿರಿದು- ನ್ಯಾಯಾಧೀಶ ರಾಮಲಿಂಗೇಗೌಡ

ತುಮಕೂರು: ಎಪ್ಪತ್ತೈದು ವರ್ಷಗಳ ಇತಿಹಾಸ ನೋಡಿದಾಗ ಸಂವಿಧಾನ ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳು ನಿರ್ವಹಿಸಿದ ಪಾತ್ರ ಅಗಾಧವಾದುದ್ದಾಗಿದೆ ಎಂದು ತುಮಕೂರು ಏಳನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆರ್ಟಿಕಲ್ 14, 15, 16 ಹಾಗೂ ಆರ್ಟಿಕಲ್ 21ರ ಮಹತ್ವದ ಬಗ್ಗೆ ಒತ್ತಿ ಹೇಳಿದ ಅವರು, ದೇಶದ ಜನರು ಘನತೆಯಿಂದ ಜೀವಿಸುವ, ಮುಕ್ತ ಸ್ವಾತಂತ್ರ್ಯ ಇದು ಸಂವಿಧಾನ ನೀಡಿದ ರಕ್ಷಣೆಯ ಕಾರಣದಿಂದ ನಮಗೆ ಸಿಗುತ್ತಿದೆ ಎಂದರು.
ಜನರ ಹಿತಾಸಕ್ತಿಗೆ ವಿರುದ್ಧವಾದ, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಅನೇಕ ಕಾನೂನುಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದನ್ನು ಸ್ಮರಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರದ ಗೆರೆಯನ್ನು ಸಹ ಸಂವಿಧಾನ ಹಂಚಿದೆ. ನಮ್ಮದು ಒಕ್ಕೂಟದ ಸರ್ಕಾರ ಎಂದು ಹೇಳಿದರು.
ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳಷ್ಟೇ ಅಲ್ಲ, ಸಾಮಾಜಿಕ ಸಬಲತೆ, ಆರ್ಥಿಕ ಸಬಲತೆ, ರಾಜಕೀಯ ಸ್ವಾತಂತ್ರ್ಯ ಇವು ಸಂವಿಧಾನದ ಮುಖ್ಯ ಆಶಯವಾಗಿದೆ ಎಂದರು.
ಸಂವಿಧಾನದ ಕರಡು ರಚನಾ ಸಮಿತಿ ಸಭೆಯ ಚರ್ಚೆಗಳನ್ನು ಓದುವುದರಿಂದ ಸಂವಿಧಾನದ ಆಶಯದ ಬಗ್ಗೆ ಗೊತ್ತಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ. ಜಯಂತಕುಮಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂವಿಧಾನದ ಕರಡುವರಚನಾ ಸಮಿತಿಯ ಎಲ್ಲಾ ಪ್ರಮುಖರನ್ನು ನೆನೆಯಬೇಕು ಎಂದರು.
ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಕೋರ್ಟ್ ಗಳಿಗೆ ಬರುವುದರಿಂದ ನ್ಯಾಯಾಲಯಗಳ ಕಲಾಪಗಳ ಬಗ್ಗೆ ತಿಳುವಳಿಕೆ ಬರಲಿದೆ. ಇದು, ಮುಂದೆ ವಕೀಲಿಕೆ ಅಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಹಿರಿಯ ವಕೀಲರಿಗೆ ಗೌರವ ಕೊಡುವುದನ್ನು ಕಿರಿಯ ವಕೀಲರು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಪ್ರಾಂಶುಪಾಲರಾದ ಡಾ. ರಮೇಶ್, ಪ್ರಾಧ್ಯಾಪಕರಾದ ಓಬಣ್ಣ, ಮಮತಾ ಇತರರು ಇದ್ದರು.

ಅಲೆಮಾರಿ ವಸತಿ ಪ್ರದೇಶಕ್ಕೆ ಮತ್ತೆ ರಸ್ತೆ ನಿರ್ಮಾಣ‌ ಕಾಮಗಾರಿ ಪ್ರಾರಂಭ

0

(*ಪಬ್ಲಿಕ್ ಸ್ಟೋರಿ ಫಲಶೃತಿ*)

ಚಿಕ್ಕನಾಯಕನಹಳ್ಳಿ : ಕಸಬಾ ಹೋಬಳಿ ಹೊನ್ನೆಬಾಗಿ ಗ್ರಾಮ ಪಂಚಾಯತಿಯ ದಬ್ಬೇಘಟ್ಟ ಗ್ರಾಮದ ಸರ್ವೆ ನಂಬರ್-122’ರಲ್ಲಿ ಸುಡುಗಾಡು ಸಿದ್ಧ ಜನಾಂಗದ ಅಲೆಮಾರಿ ಸಮುದಾಯದವರಿಗೆ ನಿವೇಶನ ಹಂಚಿಕೆ ಮಾಡಿ ಆರೇಳು ವರ್ಷಗಳೇ ಕಳೆದುಹೋಗಿವೆ. ಆದರೆ, ಅಲ್ಲಿಗೆ ಸಮರ್ಪಕವಾದ ಒಂದು ಸುರಕ್ಷಿತ ರಸ್ತೆಯನ್ನು ಇದುವರೆಗೂ ಕಲ್ಪಿಸಲಾಗಿರಲಿಲ್ಲ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಗ್ರಾಮ ಪಂಚಾಯತಿ ಇತ್ಯಾದಿ ಇಲಾಖೆಗಳ ಹಗ್ಗ-ಜಗ್ಗಾಟದಿಂದ ರಸ್ತೆ ನಿರ್ಮಾಣ ಕಾರ್ಯ ಕೇವಲ ಪತ್ರ ವ್ಯವಹಾರದಲ್ಲೇ ಏದುಸಿರು ಬಿಡುತ್ತಾ ಕುಂತಿತ್ತು.

ಕಳೆದ ಅಕ್ಟೋಬರ್‌ 20’ನೇ ತಾರೀಕಿನಲ್ಲಿ ಪಬ್ಲಿಕ್ ಸ್ಟೋರಿ (ಸುಡುಗಾಡಿಗೆ ರಸ್ತೆ ಯಾವುದಯ್ಯಾ ಸರ್ಕಾರವೇ….!? ಶೀರ್ಷಿಕೆಯಲ್ಲಿ) ಇಲ್ಲಿನ ಈಯೆಲ್ಲ ಕುಂದು-ಕೊರತೆಗಳ ಬಗ್ಗೆ ವಿವರವಾದ ವರದಿ ಪ್ರಕಟಿಸಿತ್ತು. ಕೂಡಲೇ ಕಾರ್ಯಪ್ರವೃತ್ತಗೊಂಡ ತಾಲ್ಲೂಕು ಆಡಳಿತ, ಅಕ್ಟೋಬರ್ 21’ನೇ ತಾರೀಕಿನಂದೇ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಿಕೊಡಲು ಕಾಮಗಾರಿ ಪ್ರಾರಂಭಿಸಿತ್ತು.

ಆದರೆ, ಅಕ್ಕಪಕ್ಕದ ಜಮೀನಿನವರು ರಸ್ತೆಗೆ ಜಾಗ ಬಿಟ್ಟುಕೊಡಲು ತಕರಾರು ತೆಗೆದು ಅಂದಿನ ಕಾಮಗಾರಿಯನ್ನು ತಡೆದು, ಅಧಿಕಾರಿಗಳು ಹಾಗೂ ನಿರ್ಮಾಣ ಕಾರ್ಮಿಕರನ್ನು ವಾಪಸ್ಸು ಕಳಿಸಿದ್ದರು.

ಜಮೀನಿನ ಮೂಲ ದಾಖಲೆ, ಜಮೀನಿನ ಸರ್ವೆ, ರಸ್ತೆ ಯೋಜನೆ, ವಸತಿ ಪ್ರದೇಶ ಬಡಾವಣೆಯ ನಕ್ಷೆ, ಲೇಔಟ್ ಪ್ಲಾನಿಂಗ್ ಮತ್ತಿತ್ಯಾದಿ ಮೂಲ ದಾಖಲೆಗಳನ್ನು ಪರಿಶೀಲಿಸಿ, ಮತ್ತೊಮ್ಮೆ ಖಾತ್ರಿ ಮಾಡಿಕೊಂಡಿರುವ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಹೊನ್ನೆಬಾಗಿ ಗ್ರಾಮ ಪಂಚಾಯತಿಯ ಅಧಿಕಾರಿಗಳು, ಈ ಬಾರಿ ಸೂಕ್ತ ತಯಾರಿ ಹಾಗೂ ಭದ್ರತೆಯ ಜೊತೆಗೆ ದಿನಾಂಕ.27.11.2024’ನೇ ಬುಧವಾರದಂದು ಮತ್ತೆ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದಾರೆ.

ಅಕ್ಕಪಕ್ಕದ ಜಮೀನು ಮಾಲೀಕರು ದಾಖಲೆ ಪತ್ರಗಳನ್ನು ಪರಿಶೀಲಿಸಿ, ಬೇರಿನ್ನೇನೂ ತಕರಾರು ತೆಗೆಯಲಾಗದೆ ಸುಮ್ಮನಾಗಿದ್ದಾರೆ. ಬಹುತೇಕ ಇನ್ನೊಂದೆರಡು ವಾರಗಳಲ್ಲಿ ಸುಡುಗಾಡು ಸಿದ್ಧರ ಅಲೆಮಾರಿ ವಸತಿ ಪ್ರದೇಶಕ್ಕೆ ಸಮರ್ಪಕವಾದ ಸುರಕ್ಷಿತ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಪ್ರತಿಬಾರಿ ಒಂದಿಲ್ಲೊಂದು ಕಾರಣದಿಂದ ಸ್ಥಗಿತಗೊಳ್ಳುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯಿಂದ ಬೇಸತ್ತಿದ್ದ ಸುಡುಗಾಡು ಸಿದ್ಧರ ಪಾಲಿಗೆ ಸಮರ್ಪಕವಾದ ಒಂದು ಸುರಕ್ಷಿತ ರಸ್ತೆ ಎಂಬುದು, ದೂರದ ಕನಸಿನಂತೆ ಭಾಸವಾಗಿತ್ತು.

ಆದರೀಗ,
ರಸ್ತೆ ನಿರ್ಮಾಣಗೊಳ್ಳುತ್ತಿದೆ….!


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಕನ್ನಡ ಉಳಿಯ ಬೇಕಾದರೆ ಅನ್ನದ ಭಾಷೆಯಾಗಲಿ: ಚ.ಹ. ರಘುನಾಥ್

ತುಮಕೂರು: ಕನ್ನಡ ಬಳಸಿದರೆ ಕನ್ನಡ ಉಳಿಯಲಿದೆ. ಹಾಗೆಯೇ, ಕನ್ನಡ ಅನ್ನ ಕೊಡುವ  ಭಾಷೆಯಾದರೆ ಮಾತ್ರ ಉಳಿಯಲು ಸಾಧ್ಯ ಎಂದು ಸುಧಾ ವಾರಪತ್ರಿಕೆ, ಮಯೂರ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ್ ಹೇಳಿದರು.

ಅವರು ಇಲ್ಲಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

 ಜಗತ್ತಿನಲ್ಲಿ ಶೇಕಡಾ 50 ರಷ್ಟು ಭಾಷೆ ನಾಶವಾಗುತ್ತವೆ ಎಂದು ಭಾಷಾ ವಿಜ಼್ಞಾನಿಗಳು ಹೇಳುತ್ತಾರೆ. ಆದರೆ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾದಾಗ ಮಾತ್ರ ಭಾಷೆ ಮೃತವಾಗುತ್ತವೆ. ಬಳಕೆಯಲ್ಲಿರುವ ಯಾವ ಭಾಷೆಯೂ ಮೃತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕನ್ನಡದ ವಿದ್ಯಾರ್ಥಿಗಳೆಲ್ಲ ಕನ್ನಡದ ದೀಪದ ಹಾಗೆ ಕಾಣುತ್ತೀರಿ. ಭಾಷೆಯನ್ನು ನಾವು ಉಳಿಸುವುದಲ್ಲ, ನಮ್ಮ ಉಳಿವಿಗಾಗಿ ಭಾಷೆಯನ್ನು ಉಳಿಸಬೇಕು ಎಂದರು.

ಕನ್ನಡ ಅನ್ನದ ಭಾಷೆ ಕೂಡ ಆಗಬೇಕು. ಹೆಚ್ಚು ಹೆಚ್ಚು ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ಸೃಷ್ಟಿಯಾಗಬೇಕು.

ಭಾಷೆಯನ್ನ ಬಳಸುವುದರ ಜೊತೆಗೆ ಭಾಷೆಯಲ್ಲಿಯೇ ತಂತ್ರಜ್ಞಾನವನ್ನು ಸೃಷ್ಟಿಸಿ ಅದೇ ತಂತ್ರಜ್ಞಾನ ವನ್ನು ಬಳಸುವಂತಹ ಸ್ವಾವಲಂಬಿಗಳಾಗಬೇಕು ಎಂದರು.

ಗೆದ್ದರೆ ಗೆಲ್ಲಬೇಕು, ಬಾಹುಬಲಿಯಂತೆ, ಬಿಟ್ಟುಕೊಡುವುದರಿಂದ. ನಮ್ಮ ಬಲ ಪ್ರದರ್ಶನ, ಅಧಿಕಾರ ಪ್ರದರ್ಶನದಿಂದ ಅಲ್ಲ. ತ್ಯಾಗ ಮಾಡುವುದರಿಂದ ಗೆಲ್ಲಬೇಕು. ಏನಾದರೂ ಆಗಿ ಮೊದಲು ಒಳ್ಳೆಯ ಓದುಗರಾಗಿ ಎಂದರು. ಒಳ್ಳೆಯ ಓದುಗರಾದರೆ ಒಳ್ಳೆಯ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಜಿ ಟಿ ಅವರು ” ನಮ್ಮ ಮಾತೃ ಭಾಷೆಗೆ ಘನತೆ ತರುವಂತೆ ನಾವೆಲ್ಲರೂ ಭಾಷೆಯಲ್ಲಿರುವ ಒಳ್ಳೆಯ ಪದಗಳನ್ನು ಮಾತನಾಡಬೇಕು. ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು. ಅಂದು ನಿಜವಾಗಿ ಭಾಷೆಗೆ ಗೌರವ ಸಲ್ಲುತ್ತದೆ ಎಂದರು.

ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ. ಶ್ವೇತಾರಾಣಿ ಹೆಚ್ ಅವರು ” ಕನ್ನಡನಾಡಿನಲ್ಲಿ ನಾವಿದ್ದರೆ ಸಾಲದು ಕನ್ನಡ ನಮ್ಮೊಳಗೆ ಇದ್ದಾಗ ಮಾತ್ರ ನಮ್ಮ ಜೀವನ ಸಾರ್ಥಕವೆನಿಸುತ್ತದೆ ಎಂದರು. ಉಪನ್ಯಾಸಕಿರಾದ ಕಿಮ್ ಶುಖ,  ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಮನುವಾದ’ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ: ಸಿ.ಡಿ. ಚಂದ್ರಶೇಖರ್

0

ಚಿಕ್ಕನಾಯಕನಹಳ್ಳಿ : ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಬೆಳಗ್ಗೆ 75’ನೆಯ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.

ಸಂವಿಧಾನ ಗ್ರಂಥ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದ ನಂತರ ತಹಸೀಲ್ದಾರ್ ಕೆ ಪುರಂದರ್’ರವರು,‌ ಸಭಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದ ಅಧ್ಯಾಪಕ ಪ್ರಕಾಶ್, ಸಂವಿಧಾನ ರಚನೆಯಾದ ಸಂದರ್ಭ ಹಾಗೂ ಅದರ ರಚನೆಯಲ್ಲಿ ಸಮೀಕ್ಷಿಸಲಾದ ಮುಖ್ಯ ಸಂಗತಿಗಳು, ಸಮಕಾಲೀನ ಪ್ರಸ್ತುತೆ, ಮೂಲಭೂತ ಹಕ್ಕು ಮತ್ತು ಧರ್ಮನಿರಪೇಕ್ಷ ಆದ್ಯತೆ ತರಹದ‌ ಬಹಳಷ್ಟು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿಡಿಸಿ ಹೇಳಿದರು.

ನಂತರ ಮಾತನಾಡಿದ ಮಾದಿಗ ದಂಡೋರ ಚಂದ್ರು, ಸಂವಿಧಾನ ಸಮರ್ಪಿಸಿಕೊಂಡು ಎಪ್ಪತ್ತೈದು ವರ್ಷ ಕಳೆದರೂ ಸಂವಿಧಾನದ ಆಶಯಗಳನ್ನು ಈಡೇರಿಸಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಸಮಾಜದಲ್ಲಿ ಇಂದಿಗೂ ಮೇಲು-ಕೀಳು, ತಾರತಮ್ಯ, ಸ್ವಜನ ಪಕ್ಷಪಾತ, ಅಸಮಾನತೆ ನಿರ್ಮೂಲನೆಯಾಗಿಲ್ಲ. ಅವು ಈಗಲೂ ನಮ್ಮ ಸುತ್ತ ತಾಂಡವವಾಡುತ್ತಿವೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗುವ ಕಾರಣದಿಂದ ಸಂವಿಧಾನದ ಆಶಯಗಳು ವಾಸ್ತವವಾಗಿ ಸಮಾಜದಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮನುವಾದ’ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ ::

ಸರ್ಕಾರದ ಗ್ಯಾರಂಟಿಭಾಗ್ಯ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಸಿ ಡಿ ಚಂದ್ರಶೇಖರ್ ಮಾತನಾಡಿ, ಡಾ.ಅಂಬೇಡ್ಕರರು ರಚಿಸಿಕೊಟ್ಟ ಸಂವಿಧಾನದ ಕಾರಣದಿಂದ ಮನುವಾದದ ಚಾತುರ್ವರ್ಣ ವ್ಯವಸ್ಥೆಯ ದಾಸ್ಯಕ್ಕೆ ಈಡಾಗಿದ್ದ ನಮ್ಮ ವಂಚಿತ, ಅಲಕ್ಷಿತ, ಆದಿವಾಸಿ, ದಲಿತ-ಶೂದ್ರ ವರ್ಗಗಳು ಬಿಡುಗಡೆಯ ಭಾಗ್ಯ ಪಡೆದುಕೊಂಡವು. ಸಂವಿಧಾನ ಒಂದಿಲ್ಲದಿದ್ದರೆ, ಈಯೆಲ್ಲ ದಲಿತ-ಶೂದ್ರ ವರ್ಗಗಳು ಶಾಶ್ವತವಾಗಿ ಮನುವಾದದ ದಾಸ್ಯದಡಿಯಲ್ಲೇ ಇರಬೇಕಾಗುತ್ತಿತ್ತು. ಸಂವಿಧಾನ ಯಾಕೆ ಬೇಕು ಎಂದು ಕೇಳಿಕೊಂಡರೆ, ರಾಜಪ್ರಭುತ್ವ ಅಳಿದು ಪ್ರಜೆಗಳೇ ರಾಜ್ಯ ಆಳುವ ಪ್ರಜಾಪ್ರಭುತ್ವ ಜಾರಿಯಾಗುವುದಕ್ಕಾಗಿ ಬೇಕು. ಪುರೋಹಿತಶಾಹಿ ದಾಸ್ಯದಿಂದ ವಿಮೋಚನೆ ಪಡೆದು ಸಮಾನತೆಯ ಕಡೆಗೆ ವ್ಯವಸ್ಥೆಯನ್ನು ಬದಲಾಯಿಸುವುದಕ್ಕಾಗಿ ಬೇಕು. ಸರ್ವ ಜನಾಂಗದ ಶಾಂತಿಯ ತೋಟ’ದಂತಿರುವ ನಾಡು-ನುಡಿ-ನೆಲದ ಜೊತೆ ಬಾಳುವ ಎಲ್ಲ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲಿಕ್ಕಾಗಿ ಬೇಕು. ಪ್ರಜೆಗಳ ಅಭಿವ್ಯಕ್ತಿಯ ಹಕ್ಕುಗಳ ಸಂರಕ್ಷಣೆಗಾಗಿ, ನ್ಯಾಯಾಂಗದ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ಯಾವುದೇ ರಾಷ್ಟ್ರ ಅಥವಾ ರಾಜ್ಯವೊಂದರ ಸುವ್ಯವಸ್ಥಿತ ಆಡಳಿತ ನಡೆಸಲು ಸಂವಿಧಾನ ಬೇಕು ಎಂದು ಅವರು ಹೇಳಿದರು.

ಚಾತುರ್ವರ್ಣ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ, ಎಲ್ಲರಿಗೂ ಲಭಿಸುವ ಸಮಾನ ಅಧಿಕಾರದ ಅವಕಾಶಗಳಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿಕೊಂಡು ಜನಸಮೂಹಗಳನ್ನು ಮುನ್ನಡೆಸಲು ಸಂವಿಧಾನ ಬೇಕು. ಇಲ್ಲದಿದ್ದರೆ, ಶಿಕ್ಷಣ ವಂಚಿತರಾಗಿ, ಭೂ-ರಹಿತರಾಗಿ ಎಲ್ಲ ಬಹುಜನ ಸಮುದಾಯಗಳು ಬದುಕಿರಬೇಕಾಗಿತ್ತು. ಈ ಸಂದರ್ಭದಲ್ಲಿ ಅವರು, ಏಕಲವ್ಯ-ದ್ರೋಣಾಚಾರ್ಯರ ಪ್ರಸಂಗವನ್ನು ನೆನಪಿಸುವ ಮೂಲಕ ಸಂವಿಧಾನದ ರಕ್ಷಣೆ ಮಾಡಿಕೊಳ್ಳದಿದ್ದರೆ, ಭವಿಷ್ಯದಲ್ಲಿ ಮತ್ತೆ ಬಂದೆರಗಲಿರುವ ಮನುವಾದ ಮತ್ತು ಚಾತುರ್ವರ್ಣ ವ್ಯವಸ್ಥೆಯ ಅಪಾಯಗಳನ್ನು ವಿವರಿಸಿದರು. ಹಾಗಾಗಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಉಪಾಯಗಾರರಿಂದ ಸಂವಿಧಾನ ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ, ಸಂವಿಧಾನ ರಚಿಸಿದ ಡಾ.ಅಂಬೇಡ್ಕರರ ಜೀವನ ಮತ್ತು ವಿದ್ಯಾಭ್ಯಾಸದ ಸಂದರ್ಭದಲ್ಲಿ ಶಾಹು ಮಹಾರಾಜರು ಅವರಿಗೆ ಚಾಚಿದ ಸಹಾಯಹಸ್ತದ ಕುರಿತು ಪ್ರಸ್ತಾಪಿಸಿದರು. ಸಂವಿಧಾನದ ಅಡಿಯಲ್ಲಿ ಅಧಿಕಾರದ ಅವಕಾಶಗಳನ್ನು ಪಡೆದಿರುವ ಯಾರೇ ಆದರೂ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಮಹಾಓದುಗ ಅಂಬೇಡ್ಕರ್’ರವರು ಅವರ ವಿದ್ಯಾಭ್ಯಾಸಕ್ಕಾಗಿ ಅನುಭವಿಸಿದ ನೋವುಗಳನ್ನು ಕುರಿತು ಸೂಚ್ಯವಾಗಿ ಪ್ರಸ್ತಾಪಿಸಿದರು. ಇಷ್ಟೆಲ್ಲಾ ಆದರೂ ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲ ರೀತಿಯ ಹಕ್ಕು-ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿರುವಂತಹ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಅವರು ಎಂದು ಅಂಬೇಡ್ಕರ್’ರವರನ್ನು ಸ್ಮರಿಸಿದರು.

ಸಮಾಜ ಕಲ್ಯಾಣಾಧಿಕಾರಿ ಶ್ರೀಧರಮೂರ್ತಿಯವರು, ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ನಿರೂಪಿಸಿದರು. ತಹಸೀಲ್ದಾರ್ ಕೆ ಪುರಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಮುಖಂಡ ಮಹಬೂಬ್ ಆಲಮ್, ಮುಖಂಡ ಲಿಂಗದೇವರು, ಮಾದಿಗ ದಂಡೋರದ ಚಂದ್ರಶೇಖರ್, ಮುಖಂಡ ಕೆ ಜಿ ಕೃಷ್ಣೇಗೌಡ, ಕನ್ನಡ ಸಂಘದ ಸಿ ಬಿ ರೇಣುಕಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಚಂದ್ರಶೇಖರ್, ಅಧ್ಯಾಪಕ ಪ್ರಕಾಶ್ ಸೇರಿದಂತೆ, ಸುನೀಲ್, ಇಮ್ರಾನ್, ಪಾಂಡು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


ಸಂಚಲನ

ಚಿಕ್ಕನಾಯಕನ ಸೀಮೆಯಿಂದ