Tuesday, March 10, 2026
Google search engine
Home Blog

ನಾಯಕತ್ವದ ಯಶಸ್ಸಿನ ಸೂತ್ರಗಳ ಕೈಪಿಡಿ

ಪುಸ್ತಕದ ಲೇಖಕರು :ಡಾ.  ಎಸ್ ಎನ್ ಶ್ರೀಧರ

ಪುಸ್ತಕ ಪರಿಚಯ :ಡಿ. ಮಲ್ಲಾರೆಡ್ಡಿ ( ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು)

ಕವಿ ಪರಿಚಯ : ಕರ್ನಲ್ ಎಸ್.ಎನ್. ಶ್ರೀಧರ – ರವರು ಬೆಂಗಳೂರಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾದ IISc ಸಂಸ್ಥೆಯಿಂದ ಏರೋ ಸ್ಪೇಸ್ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಪಿ. ಎಚ್. ಡಿ. ಪದವಿ ಪಡೆದಿದ್ದು, ಪ್ರಸ್ತುತ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. N.C.C. – ಗೆ ಅವರು ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಭಾರತ ಸರ್ಕಾರವು ಅವರಿಗೆ ಕರ್ನಲ್ ಹುದ್ದೆಯನ್ನು ಪ್ರಧಾನ ಮಾಡಿದೆ.

ಅತ್ಯುತ್ತಮ ಲೇಖಕರೂ ಆಗಿರುವ ಡಾ.ಎಸ್. ಎನ್. ಶ್ರೀಧರ್ ರವರು ಪ್ರೊಫೆಸರ್, ಡೀನ್, ಪ್ರಿನ್ಸಿಪಾಲ್, ಡೈರೆಕ್ಟರ್ ಹಾಗೂ ಕುಲಪತಿ…..ಗಳಂತಹ ಉನ್ನತ ಸ್ಥಾನಗಳೂ ಸೇರಿದಂತೆ, ಅನೇಕ ಪ್ರಮುಖ ಹುದ್ದೆಗಳಲ್ಲಿ ನಾಲ್ಕು ದಶಕಗಳ ಅನುಭವ ಹೊಂದಿದ್ದು, ಪ್ರಸಿದ್ಧ ಶಿಕ್ಷಕರಾಗಿರುವಂತೆಯೇ ಪ್ರೇರಣಾದಾಯಕ ನಾಯಕತ್ವ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿ ಅನೇಕ ಶಿಕ್ಷಕರಿಗೆ, ವೃತ್ತಿಪರರಿಗೆ ಮತ್ತು ಕಾರ್ಪೊರೇಟ್ ತಂಡಗಳಿಗೆ ತರಬೇತಿ ನೀಡಿದ್ದಾರೆ.

ಅರ್ಥಪೂರ್ಣ ಮುಖಪುಟವಿರುವ ‘ನಿಮ್ಮ ನಾಯಕತ್ವಕ್ಕೆ ನೀವೇಶಿಲ್ಪಿ’ (ನಾಯಕತ್ವದ ಯಶಸ್ಸಿನ ಸೂತ್ರಗಳ ಕೈಪಿಡಿ ) ಎಂಬ ಈ ವಿಶಿಷ್ಟ ಕೃತಿಯಲ್ಲಿ 32 ಲೇಖನಗಳಿದ್ದು, ಒಬ್ಬ ಸಾಮಾನ್ಯ ಮಾನವನು ಹೇಗೆ ಧನಾತ್ಮಕ ಮನೋಭಾವವನ್ನು ಹೊಂದಬೇಕು ಮತ್ತು ಹೇಗೆ ತಾನೊಬ್ಬ ಯಶಸ್ವಿ ನಾಯಕನಾಗಬಹುದು. 

ಎಂಬುದನ್ನು ಚಿಂತಿಸಿ ಬರೆದಿರುವ ಲೇಖನಗಳಲ್ಲಿ ಲೇಖಕರು ತಮ್ಮ ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ನಾಯಕತ್ವದಲ್ಲಿ ಪಡೆದ ವಿಸ್ತಾರವಾದ ಅನುಭವವನ್ನೇ ಸಾರದ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ.

“ಪ್ರತಿಯೊಬ್ಬ ವ್ಯಕ್ತಿಯಲ್ಲೂ ನಾಯಕತ್ವದ ಗುಣಗಳ ಆಗರವಿದೆ. ನಾಯಕನಾದವನು ತನ್ನ ಉತ್ತಮ ನಾಯಕತ್ವದ ವರ್ಚಸ್ಸಿನಿಂದ ಇತರರನ್ನು ಸಂಮೋಹನ ಗೊಳಿಸುವಷ್ಟು ಪ್ರಭಾವ ಬೀರಬಲ್ಲನು. ನಾಯಕತ್ವ ವೆನ್ನುವುದು ತಾಯ್ತನ ವಿದ್ದಂತೆ. ತಾಯಿಯು ತನ್ನ ಮಕ್ಕಳನ್ನು ಅವರು ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳುವಂತೆ ತನ್ನ ಸ್ವಾರ್ಥ ಮರೆತು ಪ್ರೀತಿಯಿಂದ ಸಲಹುತ್ತಾಳೆ. ಮಕ್ಕಳು ತಮ್ಮ ತಾಯಿಯಿಂದ ಅತ್ಯಂತ ಪ್ರಭಾವಿತರಾಗುತ್ತಾರೆ. ತಾಯಿಯಂತೆ ಶ್ರೇಷ್ಠ ನಾಯಕನೂ ಸಹ ತನ್ನ ತಂಡದ ಸದಸ್ಯರ ಸರ್ವೋತ್ತಮ ಬೆಳವಣಿಗೆಗಾಗಿ ಕಾಯಾ, ವಾಚಾ ಮತ್ತು ಮನಸಾ ತನ್ನನ್ನು ತೊಡಗಿಸಿಕೊಳ್ಳಬೇಕು ” ಎಂದು ಲೇಖಕರು ಹೇಳುವುದರ ಮೂಲಕ ಒಬ್ಬ ಶ್ರೇಷ್ಠ ನಾಯಕನನ್ನು ತಾಯಿಯಂತಹ ಶ್ರೇಷ್ಠ ಹಾಗೂ ಪೂಜನೀಯ ವ್ಯಕ್ತಿಗೆ ಹೋಲಿಸುತ್ತಾ ನಾಯಕನಾದವನ ಜವಾಬ್ದಾರಿಯನ್ನು ನೆನಪಿಸುತ್ತಾರೆ . ತಮ್ಮ ವೃತ್ತಿಯ ಪಯಣದಲ್ಲಿ ಹಂತ ಹಂತವಾಗಿ ಉನ್ನತ ಹುದ್ದೆಗೇರಿರುವ ಲೇಖಕರಿಗೆ ಇದೆಲ್ಲ ಸಾಧ್ಯವಾಗಿದ್ದು ತಮ್ಮ ಪ್ರಾಮಾಣಿಕವಾದ ಹಾಗೂ ತಮ್ಮ ಸಮರ್ಥವಾದ ನಾಯಕತ್ವ ಗುಣಗಳಿಂದಲೇ ಎಂಬುದು ವೇದ್ಯವಾಗುತ್ತದೆ. ಲೇಖಕರಿಂದ ಈಗಾಗಲೇ ವೃತ್ತಿಗೆ ಸಂಬಂಧಿಸಿದಂತೆ ಕೃತಿಗಳು ಪ್ರಕಟವಾಗಿರುವುದಲ್ಲದೆ, ಕನ್ನಡದಲ್ಲಿ ‘ಬಿಂಬ – ಅರಿಬೊಮ್ಮನ ಸ್ವಗತ’ ( ವಚನಗಳು) ಎಂಬ ಕೃತಿ ಈಗಾಗಲೇ ಪ್ರಕಟಗೊಂಡಿದ್ದು,ಇದು ಲೇಖಕರ ಎರಡನೇ ಕೃತಿಯಾಗಿದೆ.

ತಮ್ಮ ಪೂಜ್ಯ ತಂದೆ- ತಾಯಿಗಳಿಗೆ ಈ ಕೃತಿಯನ್ನು ಅರ್ಪಿಸಿರುವ ಲೇಖಕರು, ಪ್ರಾರಂಭದಲ್ಲಿ ರಥಾರೂಢರಾಗಿರುವ ಶ್ರೀ ಕೃಷ್ಣಾರ್ಜುನರ ಚಿತ್ರವನ್ನು ನೀಡಿದ್ದು, ಅಂದು ಕುರುಕ್ಷೇತ್ರ ಯುದ್ಧದ ಪ್ರಾರಂಭದ ದಿನವೇ ಕರ್ತವ್ಯದಿಂದ ವಿಮುಖನಾದ ಅರ್ಜುನನನ್ನು ಸಾರಥಿಯಾಗಿದ್ದ ಶ್ರೀ ಕೃಷ್ಣ ಒಬ್ಬ ಶ್ರೇಷ್ಠ ನಾಯಕನಾಗಿ ಹಾಗೂ ಯುದ್ಧದಲ್ಲಿ ಜಯಶಾಲಿಯಾಗುವಂತೆ ಮಾಡಲು ತಾಯಿಯಂತೆ ಪೊರೆದ — ಎಂಬುದನ್ನು ಜ್ಞಾಪಿಸುವಂತಿದೆ. ಅನೇಕ ಜ್ಞಾನಿಗಳು, ವಾಗ್ಮಿಗಳು, ಆಧ್ಯಾತ್ಮಿಕ ಚಿಂತಕರು ಹೇಳುವಂತೆ, ‘ಭಗವದ್ಗೀತೆ ‘ ಎಂಬುದು ‘ವ್ಯಕ್ತಿತ್ವ ನಿರ್ಮಾಣ ಮಾಡುವ’ ‘ (Personality development) ಪ್ರಪ್ರಥಮ ಕೃತಿಯಾಗಿದೆ ಹಾಗೂ ಶ್ರೀ ಕೃಷ್ಣ ಒಬ್ಬ ಸಮರ್ಥ ನಾಯಕ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡಿದ ಪ್ರಥಮ ಮಾರ್ಗದರ್ಶಕನೂ ಹೌದು…. ಎಂಬ ಮಾತುಗಳು ನಿಜವೆನಿಸುತ್ತದೆ.

“Most creative person is one, who has many options to perform” -ಎಂಬ ಮಾತು ಶ್ರೀ ಕೃಷ್ಣನ ಶ್ರೇಷ್ಠ ನಾಯಕತ್ವ ಗುಣವನ್ನು ಕುರಿತೇ ಹೇಳಿದ ಮಾತುಗಳಾಗಿವೆ. ಇದಕ್ಕೊಂದು ಉದಾಹರಣೆ ನೀಡಬಹುದಾದರೆ, ” ಶ್ರೀ ಕೃಷ್ಣನು ಪಾಂಡವರ ಇಚ್ಚೆಯಂತೆ ಕೌರವರ ಬಳಿ ರಾಜೀ ಸಂಧಾನಕ್ಕೆ ಹೊರಡಲು ಸಿದ್ದನಾಗುತ್ತಾನೆ. ತನ್ನ ಸಾರಥಿಯನ್ನು ಕರೆದು ನನ್ನ ರಥದಲ್ಲಿ ಆಯುಧ, ಬಿಲ್ಲು, ಬಾಣ, ಗದೆ, ಚಕ್ರ, ಶಸ್ತ್ರ…..ಗಳೆಲ್ಲವನ್ನು ಇಟ್ಟುಕೋ . ಏಕೆಂದರೆ ಕೌರವರು ಹೇಗೆ ನಡೆದುಕೊಳ್ಳುವರೋ ತಿಳಿಯದು. ಯುದ್ಧಕ್ಕೂ ಬರಬಹುದು ಅಥವ ಬಂಧಿಸಲೂಬಹುದು. ಅವರನ್ನು ನಂಬಲು ಸಾಧ್ಯವಿಲ್ಲ. ರಾಜಿಯಾದರೆ ಸಂತೋಷ. ಯುದ್ಧವಾದರೂ ಸಿದ್ದರಾಗಬೇಕು…… ” ಎಂದು ಹೇಳುವುದರ ಮೂಲಕ, Most Succesful man- ಆದವನು ಅಥವಾ ಒಬ್ಬ ಶ್ರೇಷ್ಠ ನಾಯಕನಾದವನು
‘Multiple options’ ಇಟ್ಟುಕೊಂಡಿರಬೇಕು ಎಂದು ಹೇಳುವುದರ ಮೂಲಕ ನಾಯಕನಾದವನು ಹೇಗಿರಬೇಕು ಎಂಬುದನ್ನು ವಿವರಿಸುವಂತಿದ್ದು, ಇದೇ ರೀತಿ ನಮ್ಮ ನಿತ್ಯದ ಲೌಕಿಕ ಜೀವನದಲ್ಲೂ ನಾಯಕರಾದವರು ತಮ್ಮ ತಮ್ಮ ತಂಡದ ಯಶಸ್ವಿಗಾಗಿ ಪ್ರಾಮಾಣಿಕವಾಗಿ ದುಡಿಯಬೇಕು ಎನ್ನುವಂತಿದೆ.

ಈ ಕೃತಿಯಲ್ಲಿರುವ 32 ಲೇಖನಗಳಿದ್ದು ಯಶಸ್ವಿ ನಾಯಕನೊಬ್ಬ ಬೆಳೆಸಿಕೊಳ್ಳಬೇಕಾದ 32 ಗುಣಗಳೇ ಆಗಿದ್ದು, ಪ್ರತಿಯೊಂದು ಲೇಖನವು ಮೂರು ಭಾಗಗಳನ್ನು ಹೊಂದಿದೆ. ಮೊದಲ ಭಾಗದಲ್ಲಿ ನಾಯಕನೊಬ್ಬ ಬೆಳೆಸಿಕೊಳ್ಳಬೇಕಾದ ನಿರ್ದಿಷ್ಟ ಗುಣದ ಬಗ್ಗೆ ಲೇಖಕರು ಚಿಂತಿಸಿ ಬರೆದಿರುವ ವಿಚಾರಗಳು ಕಂಡು ಬಂದರೆ, ಎರಡನೆಯ ಭಾಗದಲ್ಲಿ ಇದನ್ನು ಸಮರ್ಥಿಸುವ ಒಂದು ಸುಂದರವಾದ ಹಾಗು ರಂಜನೀಯ ಕಥೆ ಇದ್ದು, ಓದುಗರಿಗುಂಟಾಗುವ ಏಕತಾನತೆಯಿಂದ ದೂರ ಮಾಡುತ್ತವೆ. ‘ಉಪಸಂಹಾರ’ದಲ್ಲಿ ನಾಯಕತ್ವದ ಒಂದು ನಿರ್ದಿಷ್ಟ ಗುಣವನ್ನು ಕಥೆಯಿಂದ ತಿಳಿದು ಬಂದ ನೀತಿಯೊಂದಿಗೆ ಸಮನ್ವಯಗೊಳಿಸಿ ನಾಯಕತ್ವ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದೆಂದು …. ತುಂಬಾ ಚೆನ್ನಾಗಿ ವಿವರಿಸಿದ್ದಾರೆ.

ಚಿಂತನಾರ್ಹ ವಿಚಾರಗಳು ನೇರವಾಗಿ ‘ಮಿದುಳ’ನ್ನು (Brain) ಮುಟ್ಟುವುದರಿಂದ ಸಹಜವಾಗಿ ಸ್ವಲ್ಪ ಮಟ್ಟಿನ ಬೇಸರ, ಶುಷ್ಕತೆ, ಏಕತಾನತೆ ಉಂಟಾಗುವುದರಿಂದ, ಅದನ್ನೇ ಒಂದು ಸುಂದರ ಕಥೆಯ ಮೂಲಕ ಹೇಳುವ ಪರಿಪಾಠ ಬಹಳ ಹಿಂದಿನಿಂದಲೂ (ದುರ್ಗಸಿಂಹನ ಪಂಚತಂತ್ರ ಕಥೆಗಳು ) ಬಂದಿದೆ.

ಕಥೆಗಳಂತಹ ರಂಜನೀಯ ವಿಚಾರಗಳು ಮೊದಲು ಹೃದಯವನ್ನು ಮುಟ್ಟಿ ನಂತರ ಮಿದುಳಿನ ಕಡೆ ಸಾಗುವುದರಿಂದ ಬಹಳ ಕಾಲ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಇದೇ ತತ್ವ ಇಲ್ಲಿಯ ಲೇಖನಗಳಲ್ಲಿದ್ದು ಲೇಖಕರು ಪ್ರತಿ ಲೇಖನಕ್ಕೂ ಒಂದು ಸುಂದರವಾದ ಚಿತ್ರದೊಡನೆ ರಂಜನೀಯವೆನಿಸುವ ಅರ್ಥಪೂರ್ಣ ಕಥೆಯನ್ನು ನೀಡಿದ್ದು ಲೇಖಕರ ಪರಿಶ್ರಮವನ್ನು ಮೆಚ್ಚಲೇಬೇಕೆನಿಸುತ್ತದೆ. ಈ ಮೂಲಕವೂ ಲೇಖಕರು ಒಬ್ಬ ಶ್ರೇಷ್ಠ ನಾಯಕರಾಗಿ ಕಾಣುತ್ತಾರೆ.

  1. ಯಶಸ್ವಿ ನಾಯಕನಾದವನು ಬೆಳೆಸಿಕೊಳ್ಳಲೇ ಬೇಕಾದ ಒಂದು ಪ್ರಮುಖ ಗುಣವೆಂದರೆ ಆತನಿಗೆ ‘ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರ ವಿರಬೇಕಲ್ಲದೆ – ಸ್ವ ಸಾಮರ್ಥ್ಯ ಬಗ್ಗೆ ಅನಗತ್ಯವಾಗಿ ಅನುಮಾನ ಪಡುತ್ತಾ ತನ್ನ ಬಗ್ಗೆ ತಾನೇ ಅನುಭವಿಸುವ ‘ಕೀಳರಿಮೆ’ ಯನ್ನು ಮೊದಲು ಕಿತ್ತೊಗೆಯಬೇಕು ಎನ್ನುವ ಲೇಖಕರು, ಇದನ್ನು ರಾಮಾಯಣದಲ್ಲಿ ಬರುವ ಒಂದು ಪ್ರಸಂಗವನ್ನು ತುಂಬಾ ಸುಂದರವಾಗಿ ಕಟ್ಟಿಕೊಡುತ್ತಾರೆ.

” ರಾವಣ ಸೀತಾಮಾತೆಯನ್ನು ಅಪಹರಿಸಿ ಸಮುದ್ರದಾಚೆ ಇರುವ ಲಂಕಾ ರಾಜ್ಯದಲ್ಲಿ ಬಂಧಿಸಿಟ್ಟಿರುತ್ತಾನೆ. ಆಗ ಸಮುದ್ರದ ಮೇಲೆ ಹಾರಿ ಹೋಗುವ ಸಾಮರ್ಥ್ಯವಿದ್ದದ್ದು ಆಂಜನೇಯನಿಗೆ ಮಾತ್ರ. ಆತನಿಗೆ ತನ್ನ ದೇಹದ ಗಾತ್ರದಲ್ಲಿ ಕುಗ್ಗಿಸಿಕೊಳ್ಳುವ (ಲಘಿಮಾ ) ಹಾಗೂ ನೂರಕ್ಕೂ ಹೆಚ್ಚು ಪಟ್ಟು ಹಿಗ್ಗಿಸಿಕೊಳ್ಳುವ (ಗರಿಮಾ ) ಶಕ್ತಿಗಳಿದ್ದರೂ ಬೇರೆಯವರು ತಿಳಿಸಿ ಹೇಳಿದರೆ ಮಾತ್ರ ಆತನಿಗೆ ತನ್ನ ಸ್ವ ಸಾಮರ್ಥ್ಯದ ಅರಿವು ಉಂಟಾಗುವ ದೋಷವಿರುತ್ತದೆ. ಸಮುದ್ರದ ಮುಂದೆ ನಿಂತ ಹನುಮನಿಗೆ ಸಮುದ್ರ ದಾಟುವ ಬಗ್ಗೆ ಅನುಮಾನ ಹಾಗೂ ಕೀಳಿರಿಮೆ ಕಾಡುತ್ತದೆ. ಈ ದೋಷವನ್ನು ಅರಿತಿದ್ದ ಶ್ರೀರಾಮನ ಗೆಳೆಯ ‘ಜಾಂಬವಂತ’ ಸಕಾಲದಲ್ಲಿ ಬಂದು ಹನುಮಂತನಗಿದ್ದ ಶಕ್ತಿ ಸಾಮರ್ಥ್ಯವನ್ನು ಕುರಿತು ಸ್ತುತಿಸುತ್ತಾನೆ. ಈ ಉತ್ತೇಜನದ ಮಾತುಗಳನ್ನು ಕೇಳಿದ ಹನುಮಂತ ತನ್ನ ದೇಹದ ಗಾತ್ರವನ್ನು ಹೆಚ್ಚಾಗಿ ಬೆಳೆಸಿಕೊಂಡು ಲಂಕಾ ತಲುಪುತ್ತಾನೆ. ತನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತಾನೆ.

‘ಉಪ ಸಂಹಾರ’ದ ಮೂಲಕ ಲೇಖಕರು, ಹನುಮಂತನಿಗೆ ಅಗಾಧ ಸಾಮರ್ಥ್ಯವಿದ್ದರೂ ಅದರ ಅರಿವಿಲ್ಲದ ಸ್ಥಿತಿಯಲ್ಲಿದ್ದಾಗ ಜಾಂಬವಂತ ನಂತಹ ಗೆಳೆಯ ಆತನನ್ನು ಉತ್ತೇಜಿಸಿದಂತೆ, ನಮ್ಮ ನಮ್ಮ ವೃತ್ತಿ ಜೀವನದಲ್ಲಿ ನಮ್ಮನ್ನು ಉತ್ತೇಜಿಸಲು ಉತ್ತಮ ಮಾರ್ಗದರ್ಶಕರ ಅವಶ್ಯಕತೆ ಇರುತ್ತದೆ. ಹೊಸ ಜವಾಬ್ದಾರಿಯ ಹೊರುವ ಮುನ್ನ ಉತ್ತಮ ಸ್ನೇಹಿತರ ಅಥವ ಯಶಸ್ವಿ ನಾಯಕರಾಗಿರುವವರ ಸಲಹೆ, ಅಭಿಪ್ರಾಯ ಪಡೆದು ಸೋಲಿನ ಭೀತಿಯಿಂದ ಹೊರ ಬರಬಹುದು. ಇಂತಹ ನಾಯಕರು ಮಾತ್ರ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

  1. ‘ವ್ಯಕ್ತಿಗತ ಕೌಶಲಗಳು ‘ ( Interpersonal skills)- ಎಂಬ ಲೇಖನದ ಮೂಲಕ ನಾಯಕನಾಗ ಬಯಸುವವರು ಬೆಳೆಸಿಕೊಳ್ಳಲೇ ಬೇಕಾದ ‘ಸಂವಹನಾ ಕಲೆ’ (Communication skills) ಮತ್ತು ಜನರೊಂದಿಗಿನ ಉತ್ತಮ ನಡವಳಿಕೆಗಳು ಬಹಳ ಮುಖ್ಯವಾದ ಗುಣಗಳಾಗಿವೆ ಎನ್ನುತ್ತಾರೆ. ನಾಯಕನಾದವನು ತನ್ನ ತಂಡಕ್ಕೆ ಹೇಳಬೇಕಾದ ವಿಷಯಗಳ ಬಗ್ಗೆ ಯಾವುದೇ ಅನುಮಾನವಿಲ್ಲದಂತೆ ಸ್ಪಷ್ಟವಾಗಿ ತಿಳಿದಿರಬೇಕು, ಅದನ್ನು ಸರಳ ಪದಗಳಲ್ಲಿ ವಿವರಿಸಬೇಕಲ್ಲದೆ ತನ್ನ ತಂಡದ ಪ್ರತಿಯೊಬ್ಬ ರೊಡನೆಯೂ ಉತ್ತಮ ಬಾಂಧವ್ಯವನ್ನು ಹೊಂದಿದಾಗ ಮಾತ್ರ ಆತ ಸಮರ್ಥನಾಯಕ ನಾಗಬಲ್ಲ ಎನ್ನುತ್ತಾರೆ. ಇದನ್ನೇ ಒಂದು ಸುಂದರ ಕಥೆ ಹೀಗೆ ವಿವರಿಸುತ್ತದೆ.

“ಒಂದು ಕಾಡಿನಲ್ಲಿ ರಾಜನಾಗಿ ಸಿಂಹ ಆಳುತ್ತಿತ್ತು. ತುಂಬಾ ಗಂಭೀರ ವದನದ ಸಿಂಹದ ಆಡಳಿತ ಚೆನ್ನಾಗಿಯೇ ನಡೆಯುತ್ತಿತ್ತು. ಸಿಂಹವನ್ನು ಕಂಡರೆ ಎಲ್ಲ ಇತರ ಪ್ರಾಣಿಗಳು ಗೌರವದಿಂದ ನಡೆದುಕೊಳ್ಳುತ್ತಿದ್ದವು. ಸ್ವಲ್ಪ ಕಾಲಾನಂತರ ಕೆಲವು ಪ್ರಾಣಿಗಳಿಗೆ ನೀರಸ ವೆನಿಸಿ ತಾವೇಕೆ ಇತರರು ಹೇಳಿದಂತೆ ಕಾರ್ಯನಿರ್ವಹಿಸಬೇಕೆನಿಸಿದ್ದಲ್ಲದೆ, ಸ್ವತಂತ್ರವಾಗಿ ಬದುಕುವ ಇಚ್ಛೆ ವ್ಯಕ್ತಪಡಿಸಿದಾಗ, ತಕ್ಷಣವೇ ಸಿಂಹರಾಜ ಎಲ್ಲ ಪ್ರಾಣಿಗಳ ಸಭೆ ಕರೆದು, ಅವುಗಳಲ್ಲಿ ತುಂಬಾ ಅಸಂತುಷ್ಟವಾಗಿದ್ದ ಕೋತಿಗಳಿಗೆ ಮಾತನಾಡಲು ಅವಕಾಶ ನೀಡಿ, ಅವುಗಳ ಅಭಿಪ್ರಾಯ ತಿಳಿದುಕೊಳ್ಳುತ್ತದೆ. ಈ ಮೊದಲೇ ಉತ್ತಮ ಸ೦ವಹನಕಲೆ ಯನ್ನು ಮೈಗೂಡಿಸಿಕೊಂಡಿದ್ದ ಸಿಂಹ ತನ್ನ ಎಂದಿನ ಗಂಭೀರ ವದನದಿಂದ, ಮುಂದೆ ಕಾಡಿಗೆ ಬರಬಹುದಾದ ಅನೇಕ ತೊಂದರೆಗಳ ಬಗ್ಗೆ ಅದರಲ್ಲೂ ಮಾನವರಿಂದಾಗ ಬಹುದಾದ ಎಲ್ಲ ತೊಂದರೆಗಳನ್ನು ಮನಃ ಮುಟ್ಟುವಂತೆ ವಿವರಿಸುವುದರ ಮೂಲಕ ಬುದ್ಧಿವಾದ ಹೇಳುತ್ತದೆ. ತಮಗೆ ಉತ್ತಮ ಮಾರ್ಗದರ್ಶನ ಮಾಡಿದ ಸಿಂಹರಾಜನಿಗೆ ವಂದಿಸಿ ಪ್ರಾಣಿಗಳು ಅಲ್ಲಿಂದ ತೆರಳುತ್ತವೆ. ಹೀಗೆ ನಾಯಕನಾದವನು ಉತ್ತಮ ಸಂವಹನಾ ಕೌಶಲ್ಯ ಬೆಳೆಸಿಕೊಳ್ಳಬೇಕಲ್ಲದೆ, ಕಪಟವಿಲ್ಲದ ನೇರ ನುಡಿ, ಪ್ರಾಮಾಣಿಕತೆ ಸ್ಪಷ್ಟವಾಗಿ ಹಾಗೂ ಉತ್ತಮವಾಗಿ ಮಾತನಾಡುವ ಕಲೆಯನ್ನಲ್ಲದೆ ತಂಡದ ಸದಸ್ಯರೊಡನೆ ಸ್ನೇಹ ಭಾವ ತೋರಬೇಕು ಎಂಬುದನ್ನು ಚೆನ್ನಾಗಿ ವಿವರಿಸುತ್ತಾರೆ. ಸಂತಸ ಹಾಗೂ ಉತ್ಸಾಹ ತುಂಬಿದ ನಿಮ್ಮ ತಂಡವು ನಿಮ್ಮ ಆಸ್ತಿ- ಎಂದು ಹೇಳುವುದನ್ನು ಮರೆಯುವುದಿಲ್ಲ.

ಮುಂದೆ, ಮಾನವನಲ್ಲಿರುವ ‘ಅಷ್ಟಮದ ‘ಗಳಲ್ಲೊಂದಾದ ‘ಅಧಿಕಾರದ ಅಮಲು ‘ ಇರಬಾರದೆಂದು ಹೇಳುತ್ತಾ, ನೈತಿಕತೆ, ಭಾವನಾತ್ಮಕ ಸಮತೋಲನ, ಹೊಗಳು ಪ್ರಿಯನಾಗದಿರಿ, ದೈಹಿಕ ಮತ್ತು ಮಾನಸಿಕ ಆರೋಗ್ಯ, ಸ್ವಪ್ರತಿಷ್ಠೆ ಮತ್ತು ಸ್ವಾರ್ಥ ಬಿಡಿ, ಸ್ವಸಾಮರ್ಥ್ಯದ ಅರಿವು, ಸರ್ವಾಂಗೀಣ ಬುದ್ಧಿಮತ್ತೆ, ವಾಚಾಳಿತನ ಸಲ್ಲದು, ನಿರಂತರ ಅಧ್ಯಯನ ಮತ್ತು ಸಿದ್ಧತೆ, ನೈಜ ಪ್ರತಿಭೆಯನ್ನು ಗುರುತಿಸುವ ಕಲೆ ಹಾಗು ನಿಮ್ಮ ಸೀಮಿತ ಅರಿವಿನ ಸುರಕ್ಷಾ ವಲಯದಿಂದ ಹೊರಬನ್ನಿ …. ನಂತಹ ಲೇಖನಗಳು ಇಲ್ಲಿದ್ದು, ಈ ಎಲ್ಲ ಲೇಖನಗಳು ಶ್ರೇಷ್ಠ ನಾಯಕನನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುವಂತಿವೆ.

Responsibility builds the leader.Leader builds the nation – ಎಂಬ ಮಾತಿದ್ದು ಒಂದು ಉದ್ದಿಮೆ – ಸಂಸ್ಥೆ – ಕಾರ್ಪೋರೇಟ್ – ಗಳಂತಹ ಜವಾಬ್ದಾರಿಯುತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಯಕತ್ವವನ್ನು ರೂಪಿಸಿಕೊಳ್ಳ ಬೇಕೆನ್ನುವವರಿಗೆ ಮತ್ತು ಈಗಾಗಲೇ ಅನೇಕ ನಾಯಕತ್ವದ ಹುದ್ದೆಗಳಲ್ಲಿದ್ದು ಆಡಳಿತ ನಡೆಸಿ ಮುಂದೆ ಶ್ರೇಷ್ಠ ನಾಯಕತ್ವವನ್ನು ರೂಪಿಸಿಕೊಳ್ಳಲು ಬಯಸುವವರೆಗೂ ಸಹ ಈ ಕೃತಿ ತುಂಬಾ ಉಪಯುಕ್ತವಾಗುವಂತಿದೆ.

ಮ್ಯಾನೇಜ್ಮೆಂಟ್ ಕೌಶಲ್ಯಗಳನ್ನು ಕನ್ನಡದಲ್ಲಿ ಸರಳವಾಗಿ ವಿವರಿಸಿರುವ ಈ ವಿಶಿಷ್ಟ ಕೃತಿ ಎಲ್ಲರ ಮನ:ದಲ್ಲಿ ಹಾಗೂ ಮನೆಯ ಕಪಾಟಿನಲ್ಲಿರ ಬೇಕಾದ ಕೃತಿ ಎನಿಸಿತು.

ನೀವೂ ಓದಿ……

ಕೃತಿ: ನಿಮ್ಮ ನಾಯಕತ್ವಕ್ಕೆ ನೀವೇ ಶಿಲ್ಪಿ.(ನಾಯಕತ್ವದ ಯಶಸ್ಸಿನ ಸೂತ್ರಗಳ ಕೈಪಿಡಿ)
ಲೇಖಕರು: ಕರ್ನಲ್ ಡಾ. ಎಸ್. ಎನ್. ಶ್ರೀಧರ
ಪುಟಗಳು :144
ಬೆಲೆ:₹ 150/-
ಪ್ರಥಮ ಮುದ್ರಣ: 2025
ಪ್ರಕಾಶಕರು: ಎಚ್.ಎಸ್.ಆರ್‌.ಎ. ಪ್ರಕಾಶನ, ಬೆಂಗಳೂರು.

ಪ್ರತಿಗಳಿಗಾಗಿ ಸಂಪರ್ಕಿಸಿ:94485 07428

ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ರಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಎರಡು ದಿನಗಳ ಕಾರ್ಯಾಗಾರ


ಬಿ.ಜಿ.ನಗರ


ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಬೆಂಗಳೂರು (RSC) ಸಹಯೋಗದಲ್ಲಿ “ಸುಸ್ಥಿರ ರಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅಭಿವೃದ್ಧಿ” ಎಂಬ ವಿಷಯದ ಮೇಲೆ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ (ಭಾರತ ಮತ್ತು ದಕ್ಷಿಣ ಏಷ್ಯಾ)ಯ ಇನೊವೇಶನ್, ತಂತ್ರಯೋಜನೆ ಹಾಗೂ ಸರ್ಕಾರಿ ವ್ಯವಹಾರಗಳ ಮುಖ್ಯಸ್ಥರಾದ ಡಾ. ಶ್ವೇತಾ ರಾಘವನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು “ಸ್ಪಷ್ಟವಾಗಿ, ಜವಬ್ದಾರಿಯುತವಾಗಿ, ವಿಶಿಷ್ಠವಾಗಿ ವಿದ್ಯಾರ್ಥಿಗಳ ಚಿಂತನೆ ರೂಪುಗೊಳ್ಳಲು ಅಗತ್ಯವಾದ ಸಾಧನಗಳನ್ನು ಹೊಂದಿರಬೇಕು ಎಂಬ ಆಲೋಚನೆಯಿಂದ ಈ ಕಾರ್ಯಗಾರವನ್ನು ರೂಪಿಸಲಾಗಿದೆ. ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ತಾಂತ್ರಿಕ ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.


ಸೆನ್ಸ್‌ ನ ಹಿರಿಯ ವಿಜ್ಞಾನಿಗಳಾದ ಪ್ರೊ. ಸಿ. ವಿ. ಯೆಳಮಗದ್ ಅವರು, ಜಾಗತಿಕ ಮಟ್ಟದಲ್ಲಿ ರಸಾಯನಿಕ ವಿಜ್ಞಾನಗಳ ಬೆಳವಣಿಗೆಗೆ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ನೀಡುತ್ತಿರುವ ಕೊಡುಗೆ ಹಾಗೂ ಸಂಶೋಧನಾ ಸಹಕಾರಗಳ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಡೀನ್ ಪ್ರೊ. ಪ್ರಶಾಂತ ಕಾಳಪ್ಪ ಅವರು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ನಿರಂತರ ಕಲಿಕೆ ಹಾಗೂ ಸಾಮರ್ಥ್ಯ ವೃದ್ಧಿಯ ಅಗತ್ಯತೆಯನ್ನು ಒತ್ತಿಹೇಳಿದರು.
ವಿವಿಧ ಕ್ಷೇತ್ರದ ವಿಜ್ಞಾನಿಗಳಾದ ಡಾ. ರವಿಕುಮಾರ್.‌, ಡಾ ಟಿ ಆರ್‌ ಗಿರೀಶ್‌, ಡಾ. ಬೆಟ್ಟದಯ್ಯ, , ಡಾ ರೇವಯ್ಯ, ಪ್ರೋ ಎಂ ಎನ್‌ ಚಂದ್ರಪ್ರಭ. ಶ್ರಿಯುತ ಶಶಿಕಿರಣ್‌ ಇವರುಗಳು ಎರಡು ದಿನದ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ನಂತರ ನಡೆದ ತಾಂತ್ರಿಕ ಅಧಿವೇಶನಗಳಲ್ಲಿ ಡಾ. ಶೋಭಿತ್ ರಂಗಪ್ಪ, ಡಾ. ಗಿರೀಶ್ ವೈ. ಆರ್., ಡಾ. ಎಸ್. ಎಂ. ಅನುಷ್, ಡಾ. ಕೆ. ಎನ್. ನಂದೀಶ್ ಇವರುಗಳು ರಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಂತೆ ಉಪನ್ಯಾಸ ನೀಡಿದರು. ನೈಸರ್ಗಿಕ ವಿಜ್ಞಾನ ವಿಭಾಗದ ಪ್ರಾಂಶುಪಾಲರಾದ ಡಾ. ಶ್ವೇತಾ ಎಚ್. ಎನ್. ಅವರು ಸ್ವಾಗತಿಸಿದರು. ಡಾ ಶೋಭಿತ್‌ ರಂಗಪ್ಪ ಅವರು ವಂದಿಸಿದರು.ರಸಾಯನಶಾಸ್ತ್ರ ವಿಭಾಗದ ಅಧ್ಯಾಪಕರು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಡಾ. ಶ್ವೇತಾರಾಘವನ್

ತುಮಕೂರಿನಲ್ಲಿ ದಿನದಮಟ್ಟಿಗೆ ವಿಧಾನಭಾ ಅಧಿವೇಶನ: ಸಿದ್ಧತೆ


…….

ತುಮಕೂರು:: ಹೌದು, ತುಮಕೂರಿನಲ್ಲಿ ಇದೇ ತಿಂಗಳು  ಒಂದು ದಿನದ ಮಟ್ಟಿಗೆ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಲಾಗುವುದು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈ ವಿಶೇಷ ಅಧಿವೇಶನ ನಡೆಸಲು ಸಿದ್ಧತೆಗಳನ್ನೆಲ್ಲ ಮಾಡಲಾಗಿದೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಓಹ್, ಹೌಹಾರದಿರಿ. ಆದರೆ ಇದು ಕಾನೂನು ವಿದ್ಯಾರ್ಥಿಗಳು ನಡೆಸುವ ವಿಧಾನಸಭ ಅಧಿವೇಶನ, ರಾಜ್ಯ ಸರ್ಕಾರದ ಅಧಿವೇ಼ಶನ ಅಲ್ಲ. ಆದರೆ ಅಧಿವೇಶನದಲ್ಲಿ ಭಾಗವಹಿಸುವ ಕಾನೂನು ವಿದ್ಯಾರ್ಥಿಗಳು, ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತನಾಡುತ್ತಾರೆ ಎಂಬ ಕುತೂಹಲ ಮೂಡಿದೆ.  ಈ ಮಾದರಿ ವಿಧಾನಸಭಾ ಸ್ಪರ್ಧೆಯನ್ನು ನಗರದ  ಸುಫಿಯಾ ಕಾನೂನು ಕಾಲೇಜು ಆಯೋಜಿಸಿದೆ.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಹಾಗೂ ನಗರದ ಸುಫಿಯ ಕಾನೂನು ಮಹಾವಿದ್ಯಾಲಯ ಸಹಯೋಗದಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ನ.10 ರ ಸೋಮವಾರ ಬೆಳಗ್ಗೆ 10ಗಂಟೆಗೆ ನಗರದ ಜಿಪಂ ಸಭಾಂಗಣದಲ್ಲಿ ತುಮಕೂರು ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.ಸಿ ಎಸ್ ಪಾಟೀಲ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯ‌ನ್ನು ಮಾಜಿ ಶಾಸಕ ಷಫೀ ಅಹಮದ್ ವಹಿಸಲಿದ್ದಾರೆ. ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಗೃಹ ಸಚಿವ ಜಿ.‌ಪರಮೇಶ್ವರ್ , ಶಾಸಕರುಗಳಾದ ಟಿಬಿ ಜಯಚಂದ್ರ
ಕೆ ಎನ್ ರಾಜಣ್ಣ, ಜಿಬಿ ಜ್ಯೋತಿ ಗಣೇಶ್, ಮಾಜಿ ಶಾಸಕ ರಫೀಕ್ ಅಹಮದ್  ಅವರು ಭಾಗವಹಿಸಲಿದ್ದಾರೆ.

ಎಸ್ ಐ ಆರ್ ಮೂಲಕಹಿಂಬಾಗಿಲಿಂದ ಮತಾಧಿಕಾರ ನಿರಾಕರಣೆಯ ಯತ್ನ ; ಕಾಂ.ಪ್ರಕಾಶ್

0

ತುಮಕೂರು : ನಗರದ ಕನ್ನಡಭವನದಲ್ಲಿ (17.10.2025)’ರ ಶುಕ್ರವಾರ ಸಂಜೆ ಎಸ್ ಐ ಆರ್ ಜಾರಿ ಕುರಿತು ಸಮಾನ-ವಿರೋಧ ಹೊಂದಿರುವ ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ವೆಲ್’ಫೇರ್ ಪಾರ್ಟಿ ಇಂಡಿಯಾ, ಆಮ್ ಎಸ್ ಐ ಆರ್ ಮೂಲಕಆದ್ಮಿ ಪಾರ್ಟಿ, ಬಹುಜನ ಸಮಾಜವಾದಿ ಪಕ್ಷ, ಸರ್ವೋದಯ ಪಕ್ಷ ಹಾಗೂ ರೈತಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳೆಲ್ಲ ಒಗ್ಗೂಡಿ ದುಂಡುಮೇಜಿನ ಸಭೆ ನಡೆಸಿವೆ.

ಸಭೆಯಲ್ಲಿ,
ಜನಪರ ಹೋರಾಟಗಾರರು, ರಾಜಕೀಯ ಮುಖಂಡರು, ಪಕ್ಷ-ಪ್ರಮುಖರು, ಮಹಿಳಾಪರ, ದಲಿತಪರ, ರೈತಪರ, ಕಾರ್ಮಿಕಪರ ಚಳವಳಿಗಾರರು, ಪ್ರಗತಿಪರರು, ಚಿಂತಕರು, ಬರಹಗಾರ-ಲೇಖಕರು ಮತ್ತು ಪತ್ರಕರ್ತರು ಭಾಗವಹಿಸಿದ್ದರು.

ಎಸ್ ಐ ಆರ್ ವಿರೋಧ ಯಾಕೆ…. ಎಂಬುದನ್ನು ವಿವರವಾಗಿ ವಿಶ್ಲೇಷಿಸುತ್ತಾ ಮಾತನಾಡಿದ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪ್ರಕಾಶ್,
ಎಸ್ ಐ ಆರ್ ಮೂಲಕ ಭಾರತ ಚುನಾವಣಾ ಆಯೋಗ ಪರೋಕ್ಷವಾಗಿ ಭಾರತೀಯರ ಪೌರತ್ವದ-ಹಕ್ಕನ್ನು ಪ್ರಶ್ನಿಸುತ್ತಿದೆ. ಆ ಅಧಿಕಾರ ಭಾರತ ಚುನಾವಣಾ ಆಯೋಗಕ್ಕಿಲ್ಲ. ಇದನ್ನು ಸುಪ್ರೀಂಕೋರ್ಟ್ ಕೂಡ ಚುನಾವಣಾ ಆಯೋಗಕ್ಕೆ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದೆ.
ಆದರೂ,
ಬಿಹಾರದಲ್ಲಿ ಕಳೆದ ಎರಡು-ಮೂರು ತಿಂಗಳುಗಳ ಹಿಂದೆ ಚುನಾವಣಾ ಆಯೋಗದ ವತಿಯಿಂದ ಪ್ರಾರಂಭಿಸಲಾದ ಈ ಎಸ್ ಐ ಆರ್ ಪ್ರಕ್ರಿಯೆಯನ್ನು ಈಗ ದೇಶದಾದ್ಯಂತ ಪ್ರಾರಂಭಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದರ ಅರ್ಥ ಏನೆಂದರೆ, ಈ ದೇಶದ ಯಾವುದೇ ಒಬ್ಬ ನಾಗರಿಕ ತಾನು ಮತದಾನ’ಕ್ಕೆ ಅರ್ಹನಾಗಿದ್ದರೂ ಕೂಡ, ತನ್ನ ಪೌರತ್ವವನ್ನು ಸಿದ್ಧಪಡಿಸದ ಹೊರತು ಮತ ಚಲಾಯಿಸಲು ಹಕ್ಕುದಾರನಾಗಿರುವುದಿಲ್ಲ ಎಂಬುದಾಗಿದೆ.
ಅಂದರೆ,
ಪೌರತ್ವ-ಹಕ್ಕಿನ ಕಾಯ್ದೆಯನ್ವಯ ಸಲ್ಲಿಸಬೇಕಾದ ದಸ್ತಾವೇಜುಗಳನ್ನು ಈಗ ಈ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಲ್ಲಿಸಿ ಮತ್ತೆ ಹೊಸದಾಗಿ ಮತದಾನದ ಹಕ್ಕನ್ನು ಪಡೆಯಬೇಕಾದ ತುರ್ತು ಈಗ ಒದಗಿಬಂದಿದೆ.

ಬಡವರು, ಹಿಂದುಳಿದವರು, ದಲಿತರು, ಆದಿವಾಸಿ-ಅಲೆಮಾರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ‌ ಬಹುಪಾಲು ಬಡವರು ಮತ್ತು ಅನಕ್ಷರಸ್ಥರೇ ತುಂಬಿರುವಾಗ ತಮ್ಮ ತಾತ-ಮುತ್ತಾತಂದಿರ ಕಾಲದ ದಸ್ತಾವೇಜುಗಳನ್ನು ಹೊಂದಿರಲು ಅವರಿಂದ ಸಾಧ್ಯವೇ ಇಲ್ಲ. ಮತ್ತದನ್ನು ಈಗ ತಂದು ಚುನಾವಣಾ ಆಯೋಗದ ಈ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಪ್ರಸ್ತುತಪಡಿಸುವುದು ದೂರದ ಮಾತೇ ಸರಿ. ಈ ವಾಸ್ತವಾಂಶಗಳ ಬಗ್ಗೆ ಅರಿವಿದ್ದೂ ಕೂಡ ಭಾರತ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಜಾರಿ ಮಾಡುತ್ತಿರುವುದರ ಹಿಂದಿನ ಹುನ್ನಾರವೇನು ಎಂದು ಪರಿಶೀಲಿಸಿದರೆ, ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವ ಚುನಾವಣಾ ಆಯೋಗವು
ಆದಿವಾಸಿ-ಅಲೆಮಾರಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಮತದಾನದಿಂದ ಹೊರಗಿಡುವ ಬಿಜೆಪಿ ಪಕ್ಷದ ಹಿಡನ್-ಅಜೆಂಡಾವನ್ನೇ ಜಾರಿ ಮಾಡುತ್ತಿದೆ ಎಂಬ ಅನುಮಾನ ಬರುತ್ತಿದೆ.

ಇಲ್ಲಿ ಮತದಾರ-ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಮತದಾರ-ಪಟ್ಟಿಯಿಂದ ಹೆಸರುಗಳನ್ನು ಕೈ-ಬಿಡುವುದೇ ಮುಖ್ಯವಾಗಿದೆ. ಒದಗಿಸಲಾಗದ ದಸ್ತಾವೇಜುಗಳನ್ನು ಅಪೇಕ್ಷಿಸುತ್ತಿರುವ ಚುನಾವಣಾ ಆಯೋಗವು, ಬಡವರು ಮತ್ತು ಅಂಚಿನ ಜನರ ಮತದಾನದ-ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಹತ್ತಿದೆ.‌ ಇದು ಬಿಜೆಪಿ ಪಕ್ಷದ ಹಿಡನ್-ಅಹೆಂಡಾ ಜಾರಿಯಷ್ಟೇ ಹೊರತು, ಜನಪರವಾದ ಕೆಲಸವಲ್ಲ.

ಬಡವರು ಮತ್ತು ಅಲಕ್ಷಿತರನ್ನು ಹೀಗೆ ಮೂಲೆಗುಂಪು ಮಾಡುವ ತಂತ್ರ ನಮ್ಮ ದೇಶಕ್ಕೆ ಅಪಾಯಕಾರಿ. ಪ್ರಜಾಪ್ರಭುತ್ವಕ್ಕೆ ಮಾರಕ. ಸಾಂವಿಧಾನಿಕ ಆಶಯಗಳಿಗೆ ಹಾನಿಕಾರಕ‌. ಹಾಗಾಗಿ ಎಸ್ ಐ ಆರ್ ಜಾರಿಗೆ ನಮ್ಮ ತೀವ್ರ ವಿರೋಧವಿದೆ. ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಚುನಾವಣಾ ಆಯೋಗದ ಎಸ್ ಐ ಆರ್-ಪ್ರಕ್ರಿಯೆ ನಡೆಸುವುದಿಲ್ಲ‌ ಎಂದು ವಿಧಾನಸಭೆಯಲ್ಲಿ ಅಂಗೀಕಾರ ನಿರ್ಣಯಿಸಿ ಕೇರಳದಲ್ಲಿ ಎಸ್ ಐ ಆರ್ ಜಾರಿಯನ್ನು ತಡೆದಿದೆ. ಇದೇ ನೀತಿಯನ್ನನುಸರಿಸಿ, ಕರ್ನಾಟಕ ಸರ್ಕಾರವು ಕೂಡ ತನ್ನ ವಿಧಾನಸಭೆಯಲ್ಲಿ ಎಸ್ ಐ ಆರ್ ಅಂಗೀಕಾರ ನಿರ್ಣಯಿಸಿ, ಕರ್ನಾಟಕದಲ್ಲಿಯೂ ಎಸ್ ಐ ಆರ್ ಜಾರಿಯಾಗದಂತೆ ತಡೆಯಬೇಕು ಎಂಬುದು ನಮ್ಮ ಆಗ್ರಹ ಎಂದು ಕಾಮ್ರೇಡ್ ಪ್ರಕಾಶ್ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಒತ್ತಾಯಿಸಿದರು.

ಪ್ರಗತಿಪರ ಚಿಂತಕ ಕೆ ದೊರೈರಾಜು ಮಾತನಾಡಿ,
ಬಲಹೀನರು ಮತ್ತು ಬಡವರ ಪರವಾಗಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇವಲ ಉಳ್ಳವರ ಪರ ಮಾಡಿಡುವ ಕುತಂತ್ರ ಕಳೆದ ಒಂದು ದಶಕದಿಂದಲೂ ನಡೆಯುತ್ತಲೇ ಇದೆ. ಇದರ ಮುಂದುವರಿಕೆಯ ಭಾಗವಾಗಿ ಈಗ ಈ ಎಸ್ ಐ ಆರ್-ಜಾರಿ ಮಾಡಲಾಗುತ್ತಿದೆ. ಇದು, ಬಡವರು ಮತ್ತು ಬಲಹೀನರ ಮತದಾನದ-ಹಕ್ಕನ್ನು ಕಸಿಯಲು ನೇರವಾಗಿ ಹೂಡಿರುವ ಹುನ್ನಾರವಾಗಿದೆ. ಇದು ಆಗಕೂಡದು ಎಂದಾದರೆ, ನಮ್ಮ ಕರ್ನಾಟಕ ಸರ್ಕಾರ ಇದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿ ಕರ್ನಾಟಕದಲ್ಲಿ ಇದು ಜಾರಿಯಾಗದಂತೆ ಇದನ್ನು ತಡೆಯಬೇಕು. ಹಾಗೂ ಜಾತ್ಯತೀತ-ಪಕ್ಷಗಳು ಎಂದು ಹೇಳಿಕೊಳ್ಳುವ ಸಾಫ್ಟ್-ಕೋಮುವಾದಿಗಳು ಮೈ-ಚಳಿಬಿಟ್ಟು ಬಹಿರಂಗದಲ್ಲಿ ಬಂದು ಇದರ ವಿರುದ್ಧ ಮಾತನಾಡಬೇಕು ಎಂದು ಹೇಳಿದರು.

ದುಂಡುಮೇಜಿನ ಸಭೆಯಲ್ಲಿ,
ಕೆ ದೊರೈರಾಜು, ಯತಿರಾಜು, ನಟರಾಜಪ್ಪ, ಜವಾಹರ್, ಅನುಪಮಾ, ಸಮೀಉಲ್ಲಾ, ಅಲ್ಲಾಬಕ್ಷ್, ಅಶ್ವತಯ್ಯ, ಕಲ್ಪನಾ, ತಿರುಮಲಯ್ಯ, ತಹಸೀನ್ ಮೈಸೂರಿ, ನಯಾಜ಼್ ಅಹಮದ್, ರಾಮಾಂಜಿನಪ್ಪ, ಶಂಬಣ್ಣ, ಮೂರ್ತಿ, ಬಿ ಉಮೇಶ್, ಷಣ್ಮುಗಪ್ಪ, ಕಮಲ, ಬಾಬು ಮನಸೇ, ಕಿಶೋರ್, ವಸೀಮ್, ರಾಜಮ್ಮ, ಭೋಜರಾಜು, ಅಜ್ಜಪ್ಪ, ಅಪ್ಸರ್, ರಾಘವೇಂದ್ರ, ಲಕ್ಷ್ಮಿಕಾಂತು ಮುಂತಾದವರು ಉಪಸ್ಥಿತರಿದ್ದರು.

ವರದಿ,
ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ತುಮಕೂರು ಜಿಲ್ಲೆಯ ಆಶಾಕಿರಣ

ಒಂದು ಕಾಲದಲ್ಲಿ ತುಮಕೂರು ಜಿಲ್ಲೆಯ ರಾಜಕಾರಣಿಗಳು ರಾಜ್ಯ ರಾಜಕಾರಣ ಮೇಲೆ ಛಾಪು ಮೂಡಿಸುತಿದ್ದರು.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಟಿಕೆಟ್ ಗಾಗಿ ಬಾಣಸಂದ್ರದ ಹುಚ್ಚೇ ಗೌಡ ರ ಮನೆ ಬಾಗಿಲಿಗೆ ಹುಡುಕಿ ಬಂದಿದ್ದರು.
ಆದ್ರೆ ಈಗ ಅಂತಹ ರಾಜಕಾರಣಿಗಳ ಕೊರತೆ ಕಲ್ಪತರು ನಾಡನ್ನು ಕಾಡುತಿದೆ. ಇದನ್ನು ನೀಗಿಸುವ ನಾಯಕರ ಯಾರಿದ್ದಾರೆ ಎಂದು ನೋಡಿದರೆ ಇಬ್ಬರ ಹೆಸರನ್ನು ಹೇಳಬಹುದು.

ಒಂದು, ಗೃಹ ಸಚಿವರಾದ Dr. G. ಪರಮೇಶ್ವರ್, ಇನ್ನೊಂದು ಹೆಸರು ಶಾಸಕರಾದ B.ಸುರೇಶಗೌಡ.
ವ್ಯವಸಾಯ ಮೂಲದ ಸುರೇಶ ಗೌಡರು ತಮ್ಮ ಕೆಲಸ, ಶ್ರಮದ ಮೂಲಕ ರಾಜ್ಯದ ಗಮನ ಸೆಳೆದ ರಾಜಕಾರಣಿ.
ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಜಿಲ್ಲೆಯ ಒಂದು ಬಣ ನಡೆಸಿದ ಎಲ್ಲ ತಂತ್ರ, ಕುಂತಂತ್ರ ಗಳನ್ನು ಮೆಟ್ಟಿ ತುಮಕೂರು ಗ್ರಾಮಾಂತರ ಕ್ಷೇತ್ರ ದಲ್ಲಿ ಗಟ್ಟಿಯಾಗಿ ನೆಲೆನಿಂತು ಎಲ್ಲರಿಗೂ ಸವಾಲು ಹಾಕಿದ ಚತುರ ರಾಜಕೀಯ ಮುತ್ಸದಿ.


ಗ್ರಾಮಾಂತರ ಕ್ಷೇತ್ರದಿಂದ ಅವರನ್ನು ಆಚೆ ಸರಿಸಲು ಎಲ್ಲ ಪಕ್ಷಗಳ ಕೆಲವು ನಾಯಕರು ಪಟ್ಟ ಶ್ರಮ ಅಷ್ಟಿಷ್ಟಲ್ಲ.  ಈ ಕಾರಣದಿಂದಲೇ ಕೆಲವೊಮ್ಮೆ ಅವ್ರು ಪಕ್ಷದ ಸ್ಥಳೀಯ ನಾಯಕರ ವಿರುದ್ಧವೇ ಸಿಟ್ಟಾಗಿದ್ದು ಉಂಟು.

ಬಿಜೆಪಿ ಗೆ ಜಿಲ್ಲೆಯಲ್ಲಿ ಒಂದು ಗಟ್ಟಿ ನೆಲೆ ತಂದುಕೊಟ್ಟ ಗಟ್ಟಿ ರಾಜಕಾರಣಿ ಅವರು. ಇದಕ್ಕಾಗಿ ಅವರು ಕೆಲವು ರಾಜಕೀಯ ವ್ಯೆರಿ ಗಳನ್ನು ಹುಟ್ಟಿಹಾಕಿಕೊಂಡರು. ಮಾಜಿ ಪ್ರಧಾನಿ ದೇವೇಗೌಡರ ರೀತಿ ಹಗಲು ರಾತ್ರಿ ರಾಜಕಾರಣ ಮಾಡುವ ಜಿಲ್ಲೆಯ ಏಕ ಮಾತ್ರ ರಾಜಕಾರಣಿ ಎಂದರೆ ಅದು ಸುರೇಶ ಗೌಡರು ಮಾತ್ರ.


ಜನರ ನಡುವೆ ನಿಂತು ಕೆಲಸ ಮಾಡುವ ಶಾಸಕ ಯಾರಾದರೂ ಇದ್ದರೆ ಅದು ಸುರೇಶ ಗೌಡರು ಮಾತ್ರ. ಇದಕ್ಕೆ ಇವನ್ನು ಉದಾಹರಿಸಬಹುದು.

ತಮ್ಮ ಕ್ಷೇತ್ರದ ಶಾಲೆಗಳಲ್ಲಿ ಕಸವನ್ನು ಸಹ ಅವರು ಗುಡಿಸಿದ್ದಾರೆ. ಬೇರೆ ಯಾವುದೇ ರಾಜಕಾರಣಿ, ಶಾಸಕರು ಗಾಂಧಿ ಜಯಂತಿ ದಿನ ಮಾತ್ರ ಕಸ ಗುಡಿಸುವ ಚಿತ್ರಕ್ಕೆ ಫೋಸು ಕೊಡುತಾರೆ. ಆದ್ರೆ ಸುರೇಶ ಗೌಡ್ರು ಆಗಲ್ಲ. ದೇಶ, ರಾಜ್ಯ ಮಟ್ಟದಲ್ಲಿ ಪ್ರಚಾರಕ್ಕೆ ಬರಬೇಕಾದ ಅನೇಕ ವಿಚಾರಗಳಲ್ಲಿ ಅವರು ದೂರವೇ ಇದ್ದಾರೆ. ಜನರ ಹೃದಯದಲ್ಲಿ ನೆಲೆ ನಿಲ್ಲಬೇಕು ಎಂದು ಪದೇಪದೇ ಅವರು ಹೇಳಿಕೊಳ್ಳುತ್ತಾರೆ.

ರಸ್ತೆಗಳನ್ನ ಹೇಗೆ ಗುಣಮಟ್ಟದಲ್ಲಿ ಮಾಡಬೇಕು ಎಂಬುದಕ್ಕೆ ಅವರು ಇಂದಿಗೂ ರಾಜ್ಯದ ಆದರ್ಶಪ್ರಾಯ ರಾಜಕಾರಣಿ.
ಸರಕಾರಿ ಶಾಲೆಗಳಲ್ಲಿ ಕ್ರಾಂತಿ ತಂದವರು. ಅವರ ಕ್ಷೇತ್ರದ ದೇವಸ್ಥಾನ ಗಳ ಅಭಿವೃದ್ಧಿ ಯಲ್ಲಿ ಅವರು ಒಂದು model creat ಮಾಡಿದ್ದಾರೆ. ಅವರ ಕ್ಷೇತ್ರದ ಪ್ರತಿ ಕೃಷಿಕನ ಬೋರೆವೆಲ್ ಗೆ ಉಚಿತ ಟ್ರಾನ್ಸ ಫಾರ್ಮ್ ರ್ ಕೊಟ್ಟ  ದೇಶದ ಮೊದಲ ಶಾಸಕ ಇವರು. ಆದರೆ ಇದನ್ನೆಲ್ಲ ಅವರು ಪ್ರಚಾರಕ್ಕೆ ಮುಂದು ಮಾಡಲಿಲ್ಲ.

ತಮ್ಮ ಕೆಲಸಗಳಿಗಾಗಿ ಸುರೇಶ್ ಗೌಡರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಅವರ ಸರಕಾರ ಬರುತ್ತೆ ಎಂದು ಗೊತ್ತಾಗುತಲೇ ಇಲ್ಲಿಯ ಅವರ ಪಕ್ಷದವರು ಕೆಲವರ ಜತೆ ಸೇರಿ ಅವರನ್ನು ಸೋಲಿಸಿದರು. ಆದರೂ ಅವರು ಎದೆಗುಂದಲಿಲ್ಲ. ಮಾಜಿ ಶಾಸಕರಾದರೂ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಂದ ಕೋಟ್ಯಂತರ ರೂಪಾಯಿ ಅನುದಾನ ತರುವ ಮೂಲಕ ಶಾಸಕರುಗಳು ಹುಬ್ಬೇರುವಂತೆ ಮಾಡಿದ್ದರು.

ಅವರು ಏನು ತಪ್ಪು ಮಾಡದಿದ್ದರೂ ಅವರ ವಿರುದ್ಧದ ಅಪಪ್ರಚಾರಕ್ಕೇನು ಕೊರತೆ ಇಲ್ಲ. ಸ್ವಲ್ಪ ಸಿಟ್ಟನ್ನು ಈಗ ಕಡಿಮೆ ಮಾಡಿಕೊಂಡಿದ್ದಾರೆ.

ತುಮಕೂರಿಗೆ ಹೇಮಾವತಿ ನೀರು ಬರಲು ಕಾರಣ ಮಾಜಿ ಸಚಿವ ಹುಚ್ಚಮಾಸ್ತಿಗೌಡರು. ದೇವರಾಜ್ ಅರಸು ಕಾಲದಲ್ಲಿ ಮಂತ್ರಿ ಸ್ಥಾನವನ್ನೇ ದಿಕ್ಕರಿಸುವ ಬೆದರಿಕೆ ಹಾಕಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಕಾರಣರಾದರು. ಅದೇ ರೀತಿ ಪರಿಸರ, ಹೇಮಾವತಿ ನೀರಿನ ಬಗ್ಗೆ ಕಾಳಜಿಯಳ್ಳ ರಾಜಕಾರಣಿ ವೈ.ಕೆ.ರಾಮಯ್ಯ, ಕುವೆಂಪು ಅವರ ವಿಚಾರಧಾರೆ ಅಳವಡಿಸಿಕೊಂಡಿದ್ದ ವೈ.ಕೆ.ಆರ್. ದೇವೇಗೌಡರನ್ನು ಎದುರು ಹಾಕಿಕೊಳ್ಳುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಹೆಸರಾದವರು.
ಇವರಿಬ್ಬರ ಗುಣವನ್ನು ಮೇಳೈವಿಸಿಕೊಂಡಿರುವ ರಾಜಕಾರಣಿಯಾಗಿ ಸುರೇಶ ಗೌಡರನ್ನು ಈಗ ಜಿಲ್ಲೆ ನೋಡಬಹುದಾಗಿದೆ.


ಕುಣಿಗಲ್ ನಲ್ಲಿ ನೀರಿನ ರಾಜಕಾರಣದ ಮೂಲಕ ಜೈಲು ಸೇರಿ ಹೆಸರು ಮಾಡಿದ ಸುರೇಶಗೌಡರು ನಂತರ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ತಮ್ಮ ನಲೆಯಾಗಿ ರೂಪಿಸಿಕೊಂಡರು. ಈ ಹಿಂದೆ ಕುಣಿಗಲ್ ಗೆ ಸೇರಿದ್ದ ಅನೇಕ ಗ್ರಾಮಗಳು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದ ಕಾರಣ ಅವರು ತುಮಕೂರು ಗ್ರಾಮಾಂತರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ. ಪರಿಸರದ ಮೇಲೆ ವಿಶೇಷ ಪ್ರೀತಿಯೂ ಇರುವ ಸುರೇಶಗೌಡರು ಮರಳು ಗಣಿಗಾರಿಕೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಮುಂದಾಗಿ ಒಂದು ವರ್ಗದ ಕೋಪಕ್ಕೆ ತುತ್ತಾದರು. ಇದು ರಾಜಕೀಯವಾಗಿ ಅವರಿಗೆ ತುಂಬಾ ನಷ್ಟದ ಬಾಬತ್ತು ಆಗಿತ್ತು.


ನಿನ್ನೆಯಷ್ಟೇ 60 ವರ್ಷಕ್ಕೆ ಪದಾರ್ಪಣೆ ಮಾಡಿರುವ ಸುರೇಶಗೌಡರು ತುಮಕೂರು ರಾಜಕಾರಣದಲ್ಲಿ, ರಾಜ್ಯ ರಾಜ್ಯಕಾರಣದಲ್ಲಿ ಆಗಾಗ ‘ಹಾಹಾಕಾರ’ ಉಂಟು ಮಾಡುತ್ತಲೇ ಸಾಗಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಮೂಲಕವೇ ಹೆಸರು ಗಳಿಸಿದವರು. ಜಿಲ್ಲೆಯ ಏಕೈಕ ಧೈರ್ಯವಂತ, ಚತುರ ರಾಜಕಾರಣಿ. ಅವರಿಗೆ ಸರಿ ಅನ್ನಿಸದಿದ್ದರೆ ಯಾರನ್ನು ಬಿಡುವುದಿಲ್ಲ. ರಾಜಕೀಯದಲ್ಲಿ ಅಷ್ಟೇನು ಒಳ್ಳೆಯದು ಅಲ್ಲದ ಎಲ್ಲರನ್ನು ಎದುರುಹಾಕಿಕೊಂಡು ಈಜುವ ಛಲ ಅವರ ರಕ್ತದಲ್ಲೇ ಇರುವಂತಿದೆ. ಇದನ್ನು ಅವರದೇ ಪಕ್ಷದ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯ ವಿಷಯದಲ್ಲಿ ನಾವು ನೋಡಬಹುದಾಗಿದೆ.


ಹಣ, ಹೆಂಡ ರಾಜಕಾರಣಕ್ಕೆ ಸೋಕಬಾರದು ಎಂದು ನಂಬುವ ಅವರು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರುವವರು ವಿರುದ್ಧ ಸಿಡಿದೆದಿದ್ದರು. ಸರಿಯಾಗಿ ಆಸ್ಪತ್ರೆಗೆ ಬಾರದ ವೈದ್ಯರ ವಿರುದ್ಧ, ಪಾಠ ಮಾಡದ ಶಿಕ್ಷಕರ ವಿರುದ್ಧವೂ ಕೋಪಗೊಂಡರು. ಇದರಿಂದಾಗಿಯೇ ಗ್ರಾಮಾಂತರ ಸುಶಿಕ್ಷಿತರ ಕ್ಷೇತ್ರವಾಗಿ, ಅಭಿವೃದ್ಧಿಯ ಕ್ಷೇತ್ರವಾಗಿ ಈಗ ಗಮನ ಸೆಳೆಯುವಂತಾಗಿದೆ.


ಅವರು ಕಟ್ಟಿರುವ ಸರ್ಕಾರಿ ಶಾಲೆಗಳು ಸಾರ್ವಕಾಲಕ್ಕೂ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತವೆ.


ತುಮಕೂರು ರಾಜಕಾರಣದ ಮೇಲೆ ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಅವರ ಪ್ರಭಾವ ಹೆಚ್ಚು. ಗೆಲ್ಲುವವರನ್ನು ಸೋಲಿಸಲು, ಸೋಲುವವರನ್ನು ಗೆಲ್ಲಿಸಲು ಅವರ ಪಕ್ಷಾತೀತ ತಂತ್ರಗಾರಿಕೆ ಹೆಸರುವಾಸಿಯಾಗಿದೆ. ಆದರೆ ಸುರೇಶಗೌಡರು ಇದಕ್ಕೆ ವಿರುದ್ಧದ ರಾಜಕಾರಣಿ. ಅವರು ಪಕ್ಷನಿಷ್ಠೆಯ ರಾಜಕಾರಣಿ. ಇದಕ್ಕಾಗಿ ಯಾವುದೇ ಬೆಲೆ ತೆರಲು ಸಹ ಸಿದ್ಧ. ಹೀಗಾಗಿಯೇ ಅವರು ಪಕ್ಷಕಟ್ಟಲು ಅನೇಕರನ್ನು ಎದುರುಹಾಕಿಕೊಂಡು ತಮ್ಮ ಅಭಿವೃದ್ಧಿಯ ಕ್ಷೇತ್ರದಲ್ಲಿ ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಾಯಿತು ಎನ್ನುವುದು ಈಗ ಇತಿಹಾಸ.

ಸ್ವಲ್ಪ ಮಾಗಿದಂತೆ ಕಾಣುವ ಸುರೇಶಗೌಡರು, ರಾಜ್ಯ ರಾಜಕಾರಣದ ಮೇಲೆ ಕಣ್ಣು ನೆಟ್ಟಿದ್ದಾರೆ ಎಂಬುದನ್ನು ಅವರ ಮಾತುಗಳೇ ಹೇಳುತ್ತವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ ಆಗಿರುವ ಸುರೇಶಗೌಡರು ಈಗಲೂ ಯಡಿಯೂರಪ್ಪ ಮಾತಿಗೆ ಎದುರಾಡುವುದಿಲ್ಲ. ಈ ಹಿಂದೆ ಲೋಕಸಭಾ ಕ್ಷೇತ್ರವೊಂದರ ಟಿಕೆಟ್ ಸಿಕ್ಕರೂ ಯಡಿಯೂರಪ್ಪ ಅವರು ಬೇಡ ಎಂದಿದ್ದಕ್ಕೆ ಸುಮ್ಮನೇ ಹಿಂದೆ ಸರಿದವರು.


ಮುಖ್ಯಮಂತ್ರಿಯಾಗುವ ಯಾದಿಯಲ್ಲಿರುವ ಡಾ.ಜಿ.ಪರಮೇಶ್ವರ್ ಅವರನ್ನೂ ಸಹ ಟೀಕಿಸದೇ ಬಿಡಲಾರರು ಸುರೇಶಗೌಡರು. ಅದೇ ರೀತಿ ಅವರೊಂದಿಗೆ ಸ್ನೇಹವನ್ನೂ ಉಳಿಸಿಕೊಳ್ಳಬಲ್ಲರು ಎಂಬುದಕ್ಕೆ ಅವರ ಈಗಿನ ಕೆಲ ನಡೆಗಳಲ್ಲಿ ಕಾಣಬಹುದು.


ಜಿಲ್ಲೆಯಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಹೋರಾಟದಲ್ಲಿ ಜಿಲ್ಲೆಯ ಕೇಂದ್ರಬಿಂದುವಾಗಿದ್ದು ಸಣ್ಣ ಮಾತೇನಲ್ಲ. ಸುರೇಶಗೌಡರನ್ನು ಜಿಲ್ಲೆಯ ಜನರು ಈಗ ದಿವಂಗತರಾದ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಅವರ ಸರಿಸಮಾನ ಸ್ಥಾನಕ್ಕೇರಿಸಿದ್ದಾರೆ. ಹೀಗಾಗಿಯೇ ನೀರಾವರಿ ವಿಚಾರದಲ್ಲಿ ಅವರು ಕರೇ ಕೊಟ್ಟರೆ ಸಾವಿರಾರು ಜನರು ಜಿಲ್ಲೆಯಲ್ಲಿ ಜಾತಿ ಅತೀತರಾಗಿ,  ಪಕ್ಷಾತೀತವಾಗಿ ಸೇರುತ್ತಿದ್ದಾರೆ.

ತುಮಕೂರಿನಾದ್ಯಂತ ಪಕ್ಷಾತೀತವಾಗಿ ಅವರನ್ನು ಪ್ರೀತಿಸುವ ಸಾಮಾನ್ಯ ಜನರು ಇದ್ದಾರೆ. ಸುರೇಶಗೌಡರಂಥ ಶಾಸಕರು ನಮಗೂ ಬರಲಿ ಎಂದು ಹಂಬಲಿಸುವ ಲಕ್ಷಾಂತರ ಜನರು ತುಮಕೂರು ಜಿಲ್ಲೆಯಲ್ಲಿ ಇದ್ದಾರೆ. ಇದು ಅವರು ಶಾಸಕರಾಗಿ ನಡೆದಿರುವ ಹಾದಿಗೆ ಸಾಕ್ಷಿಯಾಗಿದೆ.


ಜಿಲ್ಲೆಯ ರಾಜಕಾರಣ ಈಗ ಸೊರಗಿದಂತಿದೆ. ಡಾ.ಜಿ.ಪರಮೇಶ್ವರ್ ಹೆಚ್ಚು ಗಟ್ಟಿಯಾಗಿ ಮಾತನಾಡದ ಪ್ರಚಾರದ ಕೇಂದ್ರಬಿಂದುವಾಗಿ ಕಾಣಿಸಿಕೊಳ್ಳಲು ಇಷ್ಟಪಡದ ರಾಜಕಾರಣಿಯಾಗಿ ಗುರುತಿಸಿಕೊಂಡರೆ, ಸುರೇಶಗೌಡರು ಇದಕ್ಕೆ ತದ್ವಿರುದ್ದ. ಯಾವಾಗಲೂ ಬಿರುಸು ಮಾತುಗಳಿಂದ, ಗಟ್ಟಿ ದನಿಯಿಂದಲೇ ಜಿಲ್ಲೆ, ರಾಜ್ಯದಗಮನ ಸೆಳೆದವರು.


ಈಗಿನ ಬಂದ  ವಿಧಾನಸಭೆಯ ಅಧಿವೇಶನದಲ್ಲೂ ಗಮನ ಸೆಳೆಯುವಂತ ಮಾತುಗಳನ್ನು ಆಡಿದ್ದಾರೆ. ಸದನದಲ್ಲಿ ಅವರ ಭಾಗವಹಿಸುವಿಕೆ, ಅವರು ಎತ್ತುವ ಪ್ರಶ್ನೆಗಳು ರಾಜ್ಯದ ಗಮನ ಸೆಳೆದಿವೆ.


ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಸಖ್ಯ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುರೇಶಗೌಡರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ. ಅನೇಕ ವಿಚಾರಗಳಲ್ಲಿ ಅವರು ಕುಮಾರಸ್ವಾಮಿ ಜತೆ ಗಟ್ಟಿಯಾಗಿ ನಿಂತಿರುವುದು ಸಹ ಇದೆ. ಇದು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ರಾಜಕೀಯ ನಂಟಿಗೆ ಕಾರಣವಾಗಿದೆ.


ಮುಂದೆ ಏನಾದರೂ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಬಂದರೆ ಸುರೇಶಗೌಡರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದೇ ಆ ಎರಡೂ ಪಕ್ಷಗಳ ಕಾರ್ಯಕರ್ತರು ನಂಬಿದ್ದಾರೆ. ಮಾಗಿದ ರಾಜಕಾರಣಿಯಾಗಿ ಸುರೇಶಗೌಡರ ವಿಚಾರಧಾರೆಗಳು, ಅಭಿವೃದ್ಧಿಯ ದೃಷ್ಠಿಕೋನ ರಾಜ್ಯಕ್ಕೂ ಬೇಕಾಗಿದೆ. ಈ ಸರ್ಕಾರದಲ್ಲಿ ಡಾ.ಜಿ. ಪರಮೇಶ್ವರ್ ಅವರು ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ಇಂಥ ಸಾಧ್ಯತೆಯನ್ನು ಸುರೇಶಗೌಡರು ಸಚಿವರಾದರೆ ತುಮಕೂರು ಮತ್ತೊಮ್ಮೆ ಕಾಣಬಹುದಾಗಿದೆ.

ಯುವ ವಕೀಲರಲ್ಲಿ ಶಿಸ್ತು, ಅಧ್ಯಯನದ ಕೊರತೆ: ನ್ಯಾಯಾದೀಶ ಜಯಂತ್ ಕುಮಾರ್

0

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸತೀಶ್ ಗೌಡ ಬಿ. ಅವರನ್ನು ಸನ್ಮಾನಿಸಲಾಯಿತು.

ತುಮಕೂರು: ಯುವ ವಕೀಲರಲ್ಲಿ ಶಿಸ್ತು, ಅಧ್ಯಯನ ಕೊರತೆ ಹೆಚ್ಚಾಗುತ್ತಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಯಂತ ಕುಮಾರ್ ಕಳವಳ ವ್ಯಕ್ತಪಡಿಸಿದರು.
ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.


ಹಿರಿಯ ವಕೀಲರು ಬಂದಾಗ ಅವರಿಗೆ ನ್ಯಾಯಾಲಯದಲ್ಲಿ ಸೀಟು ಬಿಟ್ಟು ಕೊಡುವುದು ಮೊದಲಿನಿಂದಲೂ ಬೆಳೆದುಬಂದ ವಾಡಿಕೆ. ಆದರೆ ಈಗಿನ ಯುವ ವಕೀಲರಲ್ಲಿ ಇದು ಕಾಣುತ್ತಿಲ್ಲ. ಹಿರಿಯ ಅನುಭವಿ ವಕೀಲರಿಂದ ಕಲಿಯುವುದು ಸಾಕಷ್ಟಿದೆ. ಅವರಿಗೆ ಗೌರವ ಕೊಡುವುದನ್ನು, ಅವರೊಂದಿಗೆ ಸೌಜನ್ಯದ ವರ್ತನೆ ತೋರುವುದು ಮುಖ್ಯ ಎಂದರು.


ಕ್ರಿಮಿನಲ್ ಪ್ರಕರಣಗಳಲ್ಲಿ ಯುವ ವಕೀಲರು ತೋರುತ್ತಿರುವ ನಡೆ ನಿಜಕ್ಕೂ ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತಿದೆ. ವಕೀಲರನ್ನು ನಂಬಿ ಕಕ್ಷಿದಾರರು ಬಂದಿರುತ್ತಾರೆ. ಕೇಸಿನ ಬಗ್ಗೆ ಅಧ್ಯಯನವೇ ಇಲ್ಲದೇ ಕೇಸು ನಡೆಸುವುದರ ಪರಿಣಾಮವನ್ನು ನ್ಯಾಯಾಧೀಶರ ಮೇಲೆ ಹಾಕುವ ಮನಸ್ಥಿತಿ ಹೆಚ್ಚುತ್ತಿದೆ. ಇದು ಸರಿಯಲ್ಲ ಎಂದು ತಿಳಿ ಹೇಳಿದರು.


ಓದಿ ಕಲಿಯುವುದಕ್ಕಿಂತಲೂ ಅನುಭವದಿಂದ ಕಲಿಯುವುದು ಹೆಚ್ಚು. ವಕೀಲ ವೃತ್ತಿಯಲ್ಲಿ ಓದಿಗಿಂತಲೂ ಅನುಭವದಿಂದ ಬಂದ ಕಲಿಕೆ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.


ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಸತೀಶ್ ಗೌಡ ಬಿ ಮಾತನಾಡಿ, ಹಳ್ಳಿಯಿಂದ ಬಂದಿದ್ದೇವೆ, ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಎಂಬ ಕೀಳರಿಮೆ ಬಿಡಬೇಕು. ಸಾಧಕರ ಪಟ್ಟಿ ನೋಡಿದರೆ ಹಳ್ಳಿಯವರೇ ಹೆಚ್ಚಿರುತ್ತಾರೆ. ಹಳ್ಳಿಯಲ್ಲಿ ಹುಟ್ಟುವುದು, ಬಡವರಾಗಿ ಹುಟ್ಟುವುದು ಶಾಪ ಅಲ್ಲ, ಸಾಧನೆ ಮಾಡಲು ಇರುವ ಅವಕಾಶ ಎಂದು ವಿದ್ಯಾರ್ಥಿಗಳು ಅಂದುಕೊಳ್ಳಬೇಕು ಎಂದು ಹೇಳಿದರು.


ನಾನೂ ಸಹ ಹಳ್ಳಿಯಿಂದ ಬಂದವನೇ. ನನ್ನಂತ ನೂರಾರು ಸಾಧಕರು ಹಳ್ಳಿಯಿಂದ ಬಂದವರೇ ಆಗಿರುತ್ತಾರೆ. ಪ್ರೊಫೆಸರ್ ಮಗ ಐಎಎಸ್ ಆಗುವುದನ್ನು ಸಾಧನೆ ಎಂದೂ ಯಾರು ಹೇಳಲಾರರು. ಆದರೆ ಹಳ್ಳಿಯ ಕೃಷಿಕರ ಮಗ, ಚಪ್ಪಲಿ ಹೊಲೆಯವವರ ಮಗ ಐಎಎಸ್ ಮಾಡಿದಾಗ ಅದು ಸಾಧನೆಯಾಗುತ್ತದೆ. ಇಂಥ ಸಾಧನೆ ಎಲ್ಲರೂ ಮಾಡಬಹುದು ಎಂದರು.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶರಾದ ನೂರುನ್ನೀಸಾ ಅವರು ಮಾತನಾಡಿ, ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸಬೇಕು. ಧರ್ಮ, ಜಾತಿಯ ಬಗ್ಗೆ ದ್ವೇಷ,  ಅಸೂಸೆ ಬರಬಾರದು. ಎಲ್ಲ ಧರ್ಮಗಳು ನೆರೆಹೊರೆಯವರನ್ನು ಪ್ರೀತಿಸಿ ಎಂದು ಹೇಳಿವೆ ಹೊರತು ದ್ವೇಷಿಸಿ ಎಂದು ಹೇಳಿಲ್ಲ ಎಂದರು.


ಪ್ರಾಂಶುಪಾಲರದ ಡಾ. ಎಸ್.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಓಬಯ್ಯ, ಪಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಶ್ರೀನಿವಾಸ್, ಗೌರಿಶಂಕರ್, ಖಾಷಿಪ್, ಅಶ್ವತ್ಥನಾರಾಯಣ, ನರೇಶ್, ಕಾಲೇಜಿನ ಗ್ರಂಥಪಾಲಕ ಸುಬ್ರಹ್ಮಣ್ಯ, ಮೇಲ್ವಿಚಾರಕರಾದ ಜಗದೀಶ್ ಇದ್ದರು.

ಬೆಂಗಳೂರು ರಿಂಗ್ ರಸ್ತೆ ಭೂ ಸ್ವಾಧೀನ ಕೈಬಿಡಲು ಸಿದ್ದಗಂಗಾ ಶ್ರೀ ಒತ್ತಾಯ

0


ತುಮಕೂರು: ಬೆಂಗಳೂರು ರಿಂಗ್ ರಸ್ತೆಯ (ಬಿಆರ್ ಆರ್) ಭೂ ಸ್ವಾಧೀನವನ್ನು ಕೈ ಬಿಡುವಂತೆ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕೇಂದ್ರ ಸಚಿವ ಸೋಮಣ್ಣ ಅವರ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ಶನಿವಾರ ಸಿದ್ದಗಂಗಾ ಮಠದಲ್ಲಿ ನೂರಾರು ರೈತರ ಸಮ್ಮುಖದಲ್ಲಿ ಅವರು ರೈತರು ನೀಡಿದ ಈ ಒತ್ತಾಯದ ಮನವಿ ಪತ್ರವನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದರು.


ಭಾರತ ಮಾಲಾ ಯೋಜನೆಯಲ್ಲಿ ಈ ರಸ್ತೆಗಾಗಿ 2019ರಲ್ಲಿ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಕನಪುರ- ಅನೇಕಲ್, ರಾಮನಗರ-ಮಾಗಡಿ-ಶಿವಗಂಗೆ ಮಾರ್ಗವಾಗಿ ದಾಬಸಪೇಟೆ ಗೆ ಸೇರುವ ಬೆಂಗಳೂರು ರಿಂಗ್ ರಸ್ತೆಗೆ (ಬಿಆರ್ ಆರ್) ಈಗಾಗಲೇ ಭೂ ಸ್ವಾಧೀನವನ್ನು ಮಾಡಿಕೊಳ್ಳಲಾಗಿದೆ. ಕೆಲವೇ ಮಂದಿಗೆ ಮಾತ್ರ ಪರಿಹಾರ ನೀಡಿ ಉಳಿದ ರೈತರಿಗೆ ಪರಿಹಾರವನ್ನು ನೀಡಿಲ್ಲ. ಅಧಿಕಾರಿಗಳು ಯೋಜನೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ. ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರೈತರಿಗೆ ಭೂಮಿಯೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ, ಪರಿಹಾರ ಕೊಡಬೇಕು ಇಲ್ಲವೇ ರೈತರಿಗೆ ಭೂಮಿಯನ್ನಾದರೂ ವಾಪಸ್ ನೀಡಲಿ. ಈ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡಬೇಕು ಎಂದರು.


ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀಗಳಾದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂ ಸ್ವಾಧೀನದ ಹಣ ಬರಲಿದೆ ಎಂದು ಅನೇಕ ರೈತರು ಸಾಲ ಮಾಡಿ ಮನೆ ಕಟ್ಟಿದ್ದಾರೆ, ಮದುವೆ ಮಾಡಿದ್ದಾರೆ. ಸಾಲಕ್ಕೆ ಬಡ್ಡಿಕಟ್ಟಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಯ ಭೂಮಿಯನ್ನ ಕೆಲವೇ ಲಕ್ಷ ನೀಡಿ ಸ್ವಾಧೀನದ ನೋಟಿಸ್ ನೀಡಿ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. ಪರಿಹಾರ ಬೇಡ, ಸ್ವಾಧೀನವನ್ನೇ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


ವಕೀಲರಾದ ಸಿ.ಕೆ. ಮಹೇಂದ್ರ ಅವರು ರೈತರ ನಿಯೋಗದ ನೇತೃತ್ವವಹಿಸಿದ್ದರು. ಅಧಿಕಾರಿಗಳು ಯೋಜನೆ ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಪತ್ರ ನೀಡಿದ್ದಾರೆ. ಹೀಗಾಗಿ ಭೂ ಸ್ವಾಧೀನ ರದ್ದುಗೊಳಿಸಬೇಕು. ಭಾರತ ಮಾಲಾ ಯೋಜನೆ ಕೂಡ ಬದಲಾಗಿರುವುದರಿಂದ ಜಾಗ ಬೇಕಿದ್ದರೆ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮನವರಿಕೆ ಮಾಡಿಕೊಟ್ಟರೆ ರೈತರಿಗೂ ಹೆಚ್ಚು ಪರಿಹಾರ ಸಿಗಲಿದೆ, ಇಲ್ಲದಿದ್ದರೆ ಅನ್ಯಾಯವಾಗಲದೆ ಎಂದು ಸಚಿವರಿಗೆ ತಿಳಿಸಿದರು.


ಸಭೆಯಲ್ಲಿ ರೈತ ಮುಖಂಡರಾದ ಉಮೇಶ್ ಕಂಬಾಳು, ಕರಿಮಣ್ಣೆಯ ದೇವಕುಮಾರ್, ಡಾಬಸಪೇಟೆಯ ಗಟ್ಟಿಬೈರಪ್ಪ, ಶಿವಗಂಗೆಯ ಸುರೇಶ್, ಬೆಳಗುಂಬ ನಾಗೇಂದ್ರಕುಮಾರ್, ಪ್ರಕಾಶ್ ರಂಗೇನಹಳ್ಳಿ, ಗುಡೇಮಾರನಹಳ್ಳಿ ಶಿವರುದ್ರಪ್ಪ, ಗುರುಪ್ರಸಾದ್ ಡಾಬಸಪೇಟೆ, ರಮೇಶ್ ಡಾಬಸಪೇಟೆ, ಮಾಗಡಿಯ ಬೋರಯ್ಯ, ಬೀರಗೊಂಡನಹಳ್ಳಿ ನಾರಾಯಣ ಗೌಡ, ಬಿಡದಿಯ ಶ್ರೀಧರ್, ರಾಮನಗರ ಹೇಮಂತಕುಮಾರ್ ಇತರರು ಇದ್ದರು.


ಕರ್ನಾಟಕದ ಮಾನ ಮಾರ್ಯಾದೆ ಕಳೆದಿದ್ದಾರೆ: ಸೋಮಣ್ಣ
ತುಮಕೂರು: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮುಂದೆ ಮುಖ ಇಟ್ಟು ಮಾತನಾಡದಂತೆ ಕರ್ನಾಟಕದ ಮಾರ್ಯದೆಯನ್ನು ಕಳೆಯಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಬೇಸರ ವ್ಯಕ್ತಪಡಿಸಿದರು.
ಸಿದ್ದಗಂಗಾ ಶ್ರೀಗಳೊಂದಿಗೆ ತುಂಬಾ ಬೇಸರಿಕೊಂಡೇ ಮಾತನಾಡಿದ  ಸಚಿವರು, ರಾಜ್ಯದ ಹೆದ್ದಾರಿಗಳ ಇಂಚಿಂಚು ಮಾಹಿತಿ ಸಚಿವರಾಧ ಗಡ್ಕರಿಯವರ ಬಳಿ ಇದೆ. ಯಾವ ರೈತರ ಜಾಗ ಎಷ್ಟಿದೆ, ಮಧ್ಯವರ್ತಿಗಳು ಎಷ್ಟು ಜಾಗ ಖರೀದಿಸಿದ್ದಾರೆ ಎಂಬ ಎಲ್ಲಾ ಮಾಹಿತಿ ಅವರಲ್ಲಿದೆ. ಇಲ್ಲಿ ಮಧ್ಯವರ್ತಿಗಳು ರೈತರ ಭೂಮಿಯನ್ನು ಕೆಲವೇ ಲಕ್ಷ ನೀಡಿ ಪತ್ರ ಹಾಕಿಸಿಕೊಂಡಿರುತ್ತಾರೆ. ಖರೀದಿ ಮಾಡಿರುತ್ತಾರೆ. ಹೀಗಾಗಿಯೇ ಹೆದ್ದಾರಿಯ ಬಗ್ಗೆ ಮಾತನಾಡುವುದೆಂದರೆ ದಳ್ಳಾಳಿಗಳ ಪರ ಮಾತನಾಡಿದಂತೆ ಆಗುತ್ತದೆ. ಇದರಿಂದಾಗಿ ಅಲ್ಲಿ ಕರ್ನಾಟಕದವರು  ಮುಖಎತ್ತದಂತೆ ಆಗಿದೆ. ಆದರೂ ಶ್ರೀಗಳು ಹೇಳಿರುವುದರಿಂದ ಯೋಜನೆಯ ಬಗ್ಗೆ ಮಾತನಾಡಲು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಾಧೀಶರ ಭೇಟಿ ಮಾಡಿದ ತುಮಕೂರು ವಕೀಲರ ಸಂಘದ ಪದಾಧಿಕಾರಿಗಳು

ಬೆಂಗಳೂರು; ತುಮಕೂರು ವಕೀಲರ ಸಂಘದ ಪದಾಧಿಕಾರಿಗಳು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ತುಮಕೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿ.ಎಂ. ಶ್ಯಾಮ್ ಪ್ರಸಾದ್ ಅವರನ್ನು  ಇಲ್ಲಿ ಭೇಟಿ ಮಾಡಿ ಚರ್ಚಿಸಿದರು.

ತುಮಕೂರು ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್‌. ಕೆಂಪರಾಜಯ್ಯ ಉಪಾಧ್ಯಕ್ಷರಾದ ಎಂಎಲ್ ರವಿಗೌಡ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ಹೀರೆಹಳ್ಳಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಬೇಟಿ ಮಾಡಿದರು.

  ತುಮಕೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಶುಭಾಶಯ ಅರ್ಪಿಸಲು ಭೇಟಿ ನೀಡಿದ್ದರು, ಹಾಗೂ ಇತ್ತೀಚಿಗೆ ತುಮಕೂರು ಜಿಲ್ಲೆಯ ನ್ಯಾಯಾಂಗ ಇಲಾಖೆ ಹೊಸದಾಗಿ ಜಾಗ ಪಡೆಯುವ ಸಲುವಾಗಿ ನಡೆಯುತ್ತಿರುವ ಹೋರಾಟದ ಬಗ್ಗೆಯೂ ಮಾಹಿತಿ ನೀಡಿದರು. ಈ ಬಗ್ಗೆ ನ್ಯಾಯಮೂರ್ತಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ತಿಳಿಸಿದರು .

ಸಂಘದ ಪ್ರತಿನಿಧಿಗಳು ನ್ಯಾಯಮೂರ್ತಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಉಪಾಧ್ಯಕ್ಷ ಎಂ.ಎಲ್‌. ರವಿಗೌಡ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ, ಜಂಟಿ ಕಾರ್ಯದರ್ಶಿ ಟಿ.ಎಂ. ಧನಂಜಯ, ಖಜಾಂಚಿ ಸಿಂಧು ಬಿ.ಎಂ. ಸೇರಿದಂತೆ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗೋವಿಂದರಾಜು ಪಿ, ಡಿ.ಎ. ಜಗದೀಶ್, ಶ್ರೀನಿವಾಸಮೂರ್ತಿ ಕೆ.ವಿ., ಶ್ರೀನಿವಾಸಮೂರ್ತಿ ವಿ.ಕೆ., ಸುರೇಶ್ ಎಸ್., ಪದ್ಮಶ್ರೀ ಸಿ.ಆ‌ರ್., ಸೇವಾಪ್ರಿಯ ಜೆ.ಎಸ್. ಮತ್ತು ಇತರರು ಭಾಗವಹಿಸಿದ್ದರು.

ನ್ಯಾಯಾಲಯಕ್ಕೆ ಜಾಗ:  ಪ್ರತಿಭಟನೆಗೆ ವಕೀಲರ ನಿರ್ಧಾರ

ತುಮಕೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅಮಲಾಪುರದಲ್ಲಿ 20 ಎಕರೆ ಜಾಗದ ಬದಲು 10 ಎಕರೆ ಜಾಗ ನೀಡಲು ಸರ್ಕಾರಕ್ಜೆ ಜಿಲ್ಲಾಧಿಕಾರಿ ಬರೆದಿರುವ ಪತ್ರಕ್ಕೆ ಮಂಗಳವಾರ ನಡೆದ ಸಭೆಯಲ್ಲಿ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಗೆ ಜಿಲ್ಲಾಧಿಕಾರಿ ಗೈರು ಆಗಿದ್ದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾದೀಶರಾದ ಜಯಂತ ಕುಮಾರ್ ಅವರನ್ನು ಕೆರಳಿಸಿತು. ಪ್ರತಿ ಸಲ ಸಭೆ ಕರೆದಾಗಲೂ ಜಿಲ್ಲಾಧಿಕಾರಿ ಅವರ ಸಮಯವನ್ನು ನಿಗದಿಪಡಿಸಿಕೊಂಡೇ ಕರೆಯಲಾಗುತ್ತಿದೆ. ಅವರು ನ್ಯಾಯಾಂಗಕ್ಕೆ ಸುಳ್ಳು ಹೇಳುತ್ತಿದ್ದಾರೆ. ನ್ಯಾಯಾಂಗದ ಬಗ್ಗೆ ಇಷ್ಟೊಂದು ಅಸಡ್ಡೆ ಸರಿ ಅಲ್ಲ ಎಂದರು.

ಉಪ ಲೋಕಾಯುಕ್ತರ ನಿರ್ದೇಶನವಿದೆ. ಕನಿಷ್ಠ 20 ಎಕರೆ ಇಲ್ಲದಿದ್ದರೆ 18 ಎಕರೆಯಷ್ಟಾದರೂ ಭೂಮಿ ಬೇಕು. ಇಲ್ಲದಿದ್ದರೆ ಏನು ಪ್ರಯೋಜನವಾಗದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಂದಿದ್ದ ಹತ್ತು ಎಕರೆ ಜಾಗ ನೀಡಲು ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದರು.

ಜಾಗ ನೀಡಿದರೆ, ಈಗಿರುವ ಕೋರ್ಟ್ ಜಾಗ, ಕಟ್ಟಡಗಳನ್ನು ಕಂದಾಯ ಇಲಾಖೆಗೆ ನೀಡಲಾಗುವುದು. ಇದರಿಂದ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬಹುದು. ನಗರದ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಮುಖ್ಯವಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಮಾತನಾಡಿ, ಜಿಲ್ಲಾಧಿಕಾರಿ ಅವರಿಗೆ ಜಾಗ ನೀಡಲು ಏನು ಸಮಸ್ಯೆ ಎಂದರು

ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ ಮಾತನಾಡಿ, ಜಿಲ್ಲಾಧಿಕಾರಿ ಅವರು ನ್ಯಾಯಾಂಗದ ಜತೆ ಚೆಲ್ಲಾಟವಾಡುತ್ತಿದ್ದಾರೆ‌. ಎಂ ಎಸ್ ಎಂ ಇ ಗೆ ನೀಡಿದ್ದ ಹದಿನೈದು ಎಕರೆ ಜಾಗದಲ್ಲಿ ಹತ್ತು ಎಕರೆ ನೀಡಿ, ಐದು ಎಕರೆ ಆಗೇ ಉಳಿಸಿಕೊಳ್ಳಲು ಕಾರಣವೇನು. ಇದರ ಹಿಂದೆ ಏನು ಉದ್ದೇಶ ಅಡಗಿದೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಧೋರಣೆ ಬಗ್ಗೆ ಕೆಂಡಾಮಂಡಲವಾದ ಅವರು, ನಾಳೆಯಿಂದಲೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ಕೋರ್ಟ್ ಕಲಾಪ ಬಹಿಷ್ಕರಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸುತ್ತೇವೆ. ಕಾನೂನು ಸಂಘರ್ಷ ಎದುರಾದರೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಎಂ.ಎಲ್.ರವಿಗೌಡ ಮಾತನಾಡಿ, ಜಿಲ್ಲಾಡಳಿತದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಹತ್ತು ಎಕರೆ ಜಾಗ ಸ್ವೀಕರಿಸಬಾರದು. ಜಾಗ ಕೊಡದಿದ್ದರೆ ವಕೀಲರ ಶಕ್ತಿ ಏನೆಂಬುದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಎಚ್ಚರಿಸಿದರು.

ಕೈಗಾರಿಕೆ, ಐಟಿ, ಬಿಟಿ ಅವರಿಗೆ ಓಡೋಡಿ ಬನ್ನಿ ಜಾಗ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ, ಬಡವರಿಗೆ ನ್ಯಾಯ ಕೊಡುವ ನ್ಯಾಯಾಂಗಕ್ಕೆ ಆದರೆ ಜಾಗ ಇಲ್ಲವೇ ಎಂದು ಪ್ರಶ್ನಿಸಿದರು.

ಹಿರಿಯ ವಕೀಲರಾದ ಎಂ.ಬಿ.ನವೀನ್ ಕುಮಾರ್ ಮಾತನಾಡಿ, ಜೆಲ್ಲಿ ಕ್ರಷರ್ ಗಳ ಒತ್ತಡಕ್ಕೆ ಜಿಲ್ಲಾಡಳಿತ ಮಣಿದಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಒಳ್ಳೆಯ ಸತ್ ಸಂಪ್ರದಾಯವಿದೆ. ಜಿಲ್ಲಾಧಿಕಾರಿ ಅದನ್ನು ಹಾಳು ಮಾಡಬಾರದು. ಇದು, ನಮ್ಮ ಜಿಲ್ಲೆ. ನಮ್ಮ ಜಿಲ್ಲೆ ಅಭಿವೃದ್ಧಿ ನಮಗೆ ಬೇಕಾಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಹಿರಿಯ ವಕೀಲರಾದ ಜಿ.ನಾಗರಾಜ್, ಶಿವಕುಮಾರ್, ಸಿ.ಕೆ.ಮಹೇಂದ್ರ ಅವರುಗಳು ಮಾತನಾಡಿ, ಜಿಲ್ಲಾಧಿಕಾರಿ ನಡೆ ಖಂಡಿಸಿದರು.

ಬುಧವಾರ ಸಂಜೆಯೊಳಗೆ ಜಿಲ್ಲಾಧಿಕಾರಿ ಅವರು ತಮ್ಮ ನಿರ್ಧಾರ ಬದಲಿಸಿ 20 ಎಕರೆ ಜಾಗ ನೀಡದಿದ್ದರೆ ಗುರುವಾರದಿಂದಲೇ ಪ್ರತಿಭಟನೆ ನಡೆಸುವುದಾಗಿ ಅಧ್ಯಕ್ಷ ಕೆಂಪರಾಜಯ್ಯ ಪ್ರಕಟಿಸಿದರು.

ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಿಂಧು, ಸೇವಪ್ರಿಯ, ಗೋವಿಂದರಾಜು, ವಕೀಲರಾದ ಮಧು, ಚಂದ್ರಶೇಖರ್ ಇತರರು ಇದ್ದರು.

ನ್ಯಾಯಾಲಯಕ್ಕೆ ಜಾಗ: ವಾರದ ಗಡವು

0



ತುಮಕೂರು: ನಗರದ ಹೊರವಲಯದ ಅಮಲಾಪುರದಲ್ಲಿ ನ್ಯಾಯಾಲಯಕ್ಕೆ ಭೂಮಿ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ಇನ್ನೂ, ಒಂದು ವಾರದ ಗಡವು ನೀಡಲು ಇಲ್ಲಿ ನಡೆದ ಸಭೆಯಲ್ಲಿ ವಕೀಲರು ನಿರ್ಧರಿಸಿದರು.


ಮಂಗಳವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಕೀಲರು ಈ ನಿರ್ಧಾರ ಕೈಗೊಂಡರು.

‘ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಭೆ ನಡೆಸಿ ಹೋದ ಬಳಿಕ ಜಾಗ ನೀಡುವ ಸಂಬಂಧ ಒಂದಿಷ್ಟು ಪ್ರಕ್ರಿಯೆಗಳು ಮುಗಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಇನ್ನೂ ಸ್ವಲ್ಪದಿನ ಕಾಲಾವಕಾಶ ನೀಡೋಣ’ ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ ಸಭೆಗೆ ತಿಳಿಸಿದರು.


ನ್ಯಾಯಾಲಯ ಸಂಕೀರ್ಣಕ್ಕಾಗಿ ಕನಿಷ್ಠ 20 ಎಕರೆ ಜಾಗ ನೀಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಆದರೆ ಈ ಸಂಬಂಧ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಜಾಗದ ಸಂಬಂಧ ಹದಿನೈದು ದಿನ ಕಾಲಾವಕಾಶ ನೀಡುವಂತೆ ಈ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕೋರಿದ್ದರು. ಕಾಲಾವಕಾಶ ಮುಗಿದಿದೆ. ಆದರೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.


ಒಟ್ಟು 20 ಎಕರೆ ಜಾಗ ನೀಡಬೇಕು. ಇಲ್ಲದಿದ್ದರೆ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಷ್ಟವಾಗಬಹುದು. ಈಗಿರುವ ನ್ಯಾಯಾಲಯದಲ್ಲಿ ಕಲಾಪ ನಡೆಸುವುದೇ ಕಷ್ಟವಾಗಿದೆ. ಕಕ್ಷಿದಾರರು, ವಕೀಲರು, ನ್ಯಾಯಾಂಗ ಸಿಬ್ಬಂದಿ ಸರಿಯಾದ ಜಾಗ ಇಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಹೇಳಿದರು.


ಸಭೆಯಲ್ಲಿ ಹಿರಿಯ ವಕೀಲರಾದ ಮಂಜುನಾಥ್ ಮಾತನಾಡಿ, ಜಾಗಕ್ಕಾಗಿ ಪ್ರತಿಭಟನೆ ಮಾಡದೇ ನಮಗೆ ಬೇರೆ ಮಾರ್ಗ ಇಲ್ಲ ಎಂದರು. ವಕೀಲರಾದ ಶಿವಕುಮಾರ್, ನವೀನ್ ಕುಮಾರ್ ಎಂ.ಬಿ., ಸಿ.ಕೆ.ಮಹೇಂದ್ರ, ಓಬಣ್ಣ, ಬಿ.ಜಿ.ನಾಗರಾಜ್ ಅವರುಗಳ ಮಾತನಾಡಿ, ಜಿಲ್ಲಾಡಳಿತಕ್ಕೆ ಇನ್ನೊಂದು ವಾರ ಸಮಯ ನೀಡೋಣ. ಅಷ್ಟರಲ್ಲಿ ಜಾಗ ನೀಡದಿದ್ದರೆ ಪ್ರತಿಭಟನೆ ಮಾಡುವ ನಿರ್ಧಾರ ತೆಗೆದುಕೊಳ್ಳೋಣ’ ಎಂದು ಸಲಹೆ ನೀಡಿದರು.


ಇದೇ ತಿಂಗಳು 15 ರಂದು ಸಭೆ ವಕೀಲರ ಸಭೆ ಕರೆಯುವುದಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಜಯಂತ್ ಕುಮಾರ್ ಪ್ರಕಟಿಸಿದರು. ಸಂಘದ ಅಧ್ಯಕ್ಷರಾದ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ ಅನ್ಯ ಕಾರ್ಯ ನಿಮಿತ್ತ ಸಭೆಗೆ ಹಾಜರಾಗಲಿಲ್ಲ.  ಎಂ.ಬಿ, ಸಂಘದ ಸಹ ಕಾರ್ಯದರ್ಶಿ ಧನಂಜಯ್, ಪದಾಧಿಕಾರಿಗಳಾದ ಸಿಂಧೂ, ಗೋವಿಂದರಾಜು, ವಕೀಲರಾದ ನಿರಂಜನ್ ಇತರರು ಇದ್ದರು.


ಅಮಲಾಪುರದಲ್ಲಿ ಎಂಎಸ್ಎಂಇಗೆ ಗುರುತಿಸಲಾಗಿದ್ದ ಜಾಗದಲ್ಲಿ ಮೊದಲ ಕಂತಿನಲ್ಲಿ 10 ಎಕರೆ ಜಾಗ ನೀಡುವ ಸಂಬಂಧ ಜಿಲ್ಲಾಧಿಕಾರಿ ಅವರು ಎನ್.ಒ.ಸಿ. (ನಿರಪ್ರೇಕ್ಷಣಾ ಪ್ರಮಾಣ ಪತ್ರ) ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಅಲ್ಲದೇ ಜಾಗದ ಸರ್ವೆ  ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಈ ನಡುವೆ, ರಾಜ್ಯ ಕಂದಾಯ ಆಯುಕ್ತರು ವಿಶೇಷ ತನಿಖಾ ತಂಡ ರಚಿಸಿದ್ದು, ಅಮಲಾಪುರದಲ್ಲಿರುವ ಸರ್ಕಾರಿ ಜಾಗ, ಅರಣ್ಯ ಇಲಾಖೆ ಜಾಗದ ಒತ್ತುವರಿ ಬಗ್ಗೆ ತನಿಖೆಗೆ ಆದೇಶಿಸಿರುವುದು ಕುತೂಹಲ ಮೂಡಿಸಿದೆ.