Saturday, June 14, 2025
Google search engine
Home Blog Page 2

ತಲಾತಲಾಂತರಗಳಿಂದ ನಿನಾದಿಸುವ ನಾದ – ಶಹನಾಯಿ, ಕಣಿವಾದ್ಯ

0

ತುಳಸಿತನಯ ಚಿದು..✍️

ನಾನು ಈಚೆಗೆ ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ಜೊತೆಯಲ್ಲಿ ಹೂವಿನಹಡಗಲಿ ತಾಲ್ಲೂಕು, ಇಟಗಿ ಹೋಬಳಿ ವ್ಯಾಪ್ತಿಯ ಸೋಗಿ ಗ್ರಾಮಕ್ಕೆ ನನ್ನ ಒಡನಾಡಿಯೊಬ್ಬರ ವಿವಾಹಕ್ಕೆಂದು ಹೋಗಿದ್ದೆ. ಅಲ್ಲಿ ನನಗೆ ಕಂಡಿದ್ದು ಎಲ್ಲ ವೈಶಿಷ್ಯ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗಕ್ಕೆ ಹೋಗಿದ್ದಕ್ಕೇನೋ ಅಲ್ಲಿನ ಜನಜೀವನ ಅತ್ಯಂತ ಕುತೂಹಲ ಹುಟ್ಟಿಸಿತು. ಅಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಮದುವೆ ದಿಬ್ಬಣ ಕರೆದೊಯ್ಯುವಾಗ ನುಡಿಸುತ್ತಿದ್ದ ಶಹನಾಯಿ ಹಾಗೂ ಕಣಿವಾದ್ಯ. ಅವರು ನುಡಿಸುತ್ತಿದ್ದ ಮಂಗಳವಾದ್ಯ ನನ್ನ ಕರ್ಣಗಳನ್ನು ಅತಿಯಾಗಿ ಆಮಂತ್ರಿಸಿತು. ಈ ಮಧ್ಯೆ ಅವರು ವಾದ್ಯ ನುಡಿಸುವುದನ್ನ ನಿಲ್ಲಿಸಿದಾಗ ಅದೇಕೋ ಏನೋ ನಾನು ಆಗ ಅವರನ್ನು ಮಾತನಾಡಿಸಬೇಕು ಅಂತ ತುಂಬಾ ಅನಿಸತೊಡಗಿತು. ಆಗ ಅವರನ್ನ ಒಂದಿಷ್ಟು ಮಾತಿಗೆಳೆದು ಅವರ ಹಿನ್ನೆಲೆಯನ್ನ ಕೆದಕಿದೆ. ಆಗ ಅವರಿಂದ ತಿಳಿದ ಒಂದಷ್ಟು ವಿಚಾರಗಳನ್ನ ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಈ ವಾದ್ಯವೃಂದದ ಮೇಟಿ ಮಲ್ಲಪ್ಪನನ್ನು ಮಾತಿಗೆ ಎಳೆದಾಗ ಅವರು ನನ್ನೊಂದಿಗೆ ಅತ್ಯಂತ ವಿನಯ ಹಾಗೂ ಗೌರವದಿಂದಲೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಛಲವಾದಿ ಸಮುದಾಯದವರಾದ ಮಲ್ಲಪ್ಪ ಹಾಗೂ ಅವರ ಅಣ್ಣತಮ್ಮಂದಿರದ್ದು ಹಿಟ್ಟಿನಿಂದಲೂ ಇದೇ ಕಾಯಕ. ಸುತ್ತ ಹತ್ತೂರಿನಲ್ಲಿ ಎಲ್ಲೇ ಮಂಗಳ ಕಾರ್ಯ ಹಾಗೂ ಮರಣದ ಅಂತ್ಯಕ್ರಿಯೆಯಲ್ಲೂ ಇವರದ್ದೇ ನಾದ ಸ್ವರ. ಹತ್ತೂರಿನಲ್ಲೂ ಶಹನಾಯಿ ಮಲ್ಲಪ್ಪ ಅಂತನೇ ಅವರನ್ನ ಕರಿತಾರೆ. ಅವರೊಂದಿಗೆ ಅವರ ಅಣ್ಣತಮ್ಮಂದಿರಾದ ಶೃತಿ ವಾದಕರಾದ ನಾಗಪ್ಪ, ಸೋಗಿ ಮಲ್ಲಪ್ಪ, ಸಮ್ಮಾಳ ವಾದಕ ಕೊಟ್ರೇಶ್ ಇಟಗಿ, ದಿಮ್ಮ ಬಾರಿಸುವ ಸೋಗಿ ಕೊಟ್ರೇಶ್, ಮಲ್ಲಪ್ಪನಿಗೆ ಶಹನಾಯಿ ಜೊತೆಯಾಗುವ ಪರಸಪ್ಪ ಗುಡಾಳ್, ಇವರೆಲ್ಲರೂ ತಮ್ಮ ಹುಟ್ಟಿನಿಂದಲೂ ಇದೇ ಕಾಯಕ ಮಾಡಿಕೊಂಡು ಬಂದಿದ್ದಾರೆ. ಇದು ಅವರ ಹಿರಿಕರು ಕೊಟ್ಟ ಬಳುವಳಿ ಎನ್ನುವುದು ಅವರ ಆಂಬೋಣ. ಅದನ್ನು ಅತ್ಯಂತ ಗೌರವದಿಂದಲೇ ಇಂದಿಗೂ ಮುಂದುವರೆಸುತ್ತಿದ್ದಾರೆ.

ಭಾರತೀಯ ಸಂಗೀತ ಪರಂಪರೆ ಅನೇಕ ವಿಶಿಷ್ಟವಾದ ವಾದ್ಯವೃಂದಗಳಿಂದ ಸಮೃದ್ಧವಾಗಿದೆ. ಈ ಪೈಕಿ ಶಹನಾಯಿ ಮತ್ತು ಕಣಿವಾದ್ಯಗಳು ಶ್ರವಣಸುಖದ ನಾದಮಯ ಅನುಭವವನ್ನು ಕೊಡುವುದಲ್ಲದೆ, ಸಂಸ್ಕೃತಿ, ಭಕ್ತಿ ಸಂವೇದನೆಗಳಿಗೂ ಜೀವಂತ ಸಾಕ್ಷಿಯಂತೆ ಇವೆ. ಇವುಗಳನ್ನು ತಲಾತಲಾಂತರದಿಂದ ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಇಲ್ಲಿನ ಕೆಲವು ಕುಟುಂಬಗಳು ಇವತ್ತಿಗೂ ಅದರ ನಾದಪಾರಂಪರ್ಯವನ್ನು ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ.

ವಿಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಹನಾಯಿ ಎಂಬ ಶಬ್ದವೇ ತನ್ನಲ್ಲಿ ಒಂದು ರಾಜಸಂಪತ್ತಿಯ ಛಾಯೆಯನ್ನು ಹೊಂದಿದೆ. ಈ ವಾದ್ಯವು ಮೂಲತಃ ಮಿಥಿಲಾ ಮತ್ತು ಉತ್ತರ ಭಾರತದ ರಾಜದರ್ಬಾರಿಗಳಲ್ಲಿ ನಿನಾದಿಸುತ್ತಿದ್ದ ಶ್ರೇಷ್ಠ ವಾದ್ಯವಾಗಿದ್ದು, ಮುಂದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಮದುವೆಗಳಲ್ಲಿ, ವಿಶೇಷ ಪೂಜೆಗಳಲ್ಲಿ ಪ್ರಮುಖವಾಗಿಬಿಟ್ಟಿತು. ಶಹನಾಯಿಯ ನಾದ ಶಾಂತ, ಭಕ್ತಿಯ ಶ್ರಾವಣಾನುಭವವನ್ನು ನೀಡುತ್ತದೆ.

ಇಂತಹ ಶಹನಾಯಿಯನ್ನು ವಂಶಪಾರಂಪರ್ಯವಾಗಿ ತಂದು, ಅದನ್ನು ಕೇವಲ ವಾದ್ಯವಲ್ಲದೆ ಜೀವನದ ಭಾಗವನ್ನಾಗಿ ಮಾಡಿಕೊಂಡು ಬಂದಿರುವ ಇಲ್ಲಿನ ಕುಟುಂಬಗಳ ಕತೆ ಎದ್ದೇಳಿಸುವಂತಹದು. ಪಿತಾಮಹರಿಂದ ಮೊಮ್ಮಕ್ಕಳವರೆಗೆ ಸಾಗಿದ ಈ ಪಾರಂಪರ್ಯ ಶಕ್ತಿ ಕೇವಲ ಕಲೆಯ ಪೋಷಣೆಗಲ್ಲದೆ, ಒಂದು ಜೀವಮಾನದ ಸನ್ನಿವೇಶವನ್ನೂ ಹೊತ್ತಿದೆ.

ಅದು ಒಬ್ಬ ಪಿತೃ ಶ್ರೀಮಂತವಾಗಿ ಉಳಿದಿದ್ದರೂ, ತನ್ನ ಮುದ್ದಿನ ಮಕ್ಕಳಿಗೆ ಶಹನಾಯಿ ಕಲಿಸುವಾಗ ಬಳಸುತ್ತಿದ್ದ ಧೂಳಿನಿಂದ ಮುರಿದ ಹಳೆಯ ಶಹನಾಯಿ ಇನ್ನೂ ಮನೆಯ ಕೋಣೆಯಲ್ಲಿ ಇರಿಸಿಕೊಂಡಿರುವ ನಂಬಿಕೆಯ ಕಥೆಗಳಿವೆ. ಪುರೋಹಿತ ಕರ್ಮದ ಜೊತೆಗೆ ಶಹನಾಯಿ ನಾದವೂ ಸಂಪೂರ್ಣವಾದ ಪೂಜೆಯ ಭಾಗವಾಗಿ ನೆಲೆನಿಂತಿರುವ ಈ ರೀತಿಯ ಕುಟುಂಬಗಳ ಸಾಧನೆಯ ಹಿಂದೆ ಶ್ರಮ, ಭಕ್ತಿ, ಹಾಗೂ ನಾದಪ್ರೀತಿಯ ಶ್ರೇಷ್ಠ ಸಂಕಲನ ಇದೆ.

ಕಣಿವಾದ್ಯಗಳು ದೇಹದ ಭಾಗಗಳಂತೆ ಬದುಕನ್ನು ಬಿಡುತ್ತವೆ. ತಮಟೆ, ಕಣಿವಾದ್ಯ ನಾದಸ್ವರ, ಜಾನಪದ ತಾಳವೃದಂಗಳು, ಶೃಂಗಾರದ ಹಾಡುಗಳಿಗೆ ತಾನಾಗಿ ಜೀವ ತುಂಬುವಂತಹ ಈ ವಾದ್ಯಗಳು ಗ್ರಾಮೀಣ ಹಾಗೂ ಜಾನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಕೆಲವೊಂದು ಕುಟುಂಬಗಳು ಈ ಕಣಿವಾದ್ಯಗಳನ್ನು ತಾವು ಅಜ್ಜಿಯವರಿಂದ, ತಾತಂದಿರಿಂದ ಕಲಿತಂತೆ ಮುಂದಿನ ತಲೆಮಾರಿಗೆ ಸೇರಿಸುತ್ತ ಬಂದಿದ್ದಾರೆ.

ಮದುವೆ, ಜಾತ್ರೆ, ಹೊರಟಾಗ, ಮಂಗಳ ಕಾರ್ಯ ಎಲ್ಲವೂ ಈ ನಾದವಿಲ್ಲದೆ ಅಪೂರ್ಣವೆನಿಸುತ್ತವೆ. ಕೆಲವು ಕುಟುಂಬಗಳ ಗೃಹದೇವತೆಗಳಿಗೆ ಪ್ರಸಾದಕ್ಕಿಂತ ಮುಂಚೆ ತಮಟೆಯ ಒರಟಾದ ಧ್ವನಿಯಲ್ಲಿ ಒಂದು ಸಾರಿ ಕಿವಿಕೊಟ್ಟು ತರುವ ಮರ್ಯಾದೆಯಿದೆ. ಅವರು ಕಲೆಯನ್ನೇ ಪೂಜೆಯಾಗಿ ಪರಿಗಣಿಸುತ್ತಾರೆ.

ಈ ಕುಟುಂಬಗಳು ಶಹನಾಯಿ, ಕಣಿವಾದ್ಯಗಳನ್ನು ಕಲೆಗೆ ಮೀರಿ ತಾವು ತಾಳಿದ ಜೀವಶಕ್ತಿ ಎಂದು ಭಾವಿಸುತ್ತವೆ. ವಾದ್ಯದ ತಯಾರಿಕೆಯಿಂದ ಹಿಡಿದು ಅದರ ನಿರಂತರ ಅಭ್ಯಾಸ, ಪುನರ್ ಸಂಸ್ಕರಣೆ ಮತ್ತು ಕಾರ್ಯಕ್ರಮಗಳಲ್ಲಿ ನಿಭಾಯಿಸುವ ಶಿಸ್ತು — ಈ ಎಲ್ಲವೂ ತಲಾ ತಲೆ ಪೋಷಿತವಾಗಿದೆ.

ಇಂದಿನ ತಂತ್ರಜ್ಞಾನ ಕಾಲದಲ್ಲಿಯೂ, ಈ ವಂಶಪಾರಂಪರ್ಯವನ್ನು ಮೀರಿ ಉಳಿಸಿಕೊಂಡಿರುವ ಮನೆಗಳು ತಮ್ಮ ಮನೆ ಮಕ್ಕಳಿಗೆ ಮೊದಲು ಶಹನಾಯಿ ಅಥವಾ ಕಣಿವಾದ್ಯ ತೋರಿಸುತ್ತಾರೆ – ಮೊಬೈಲ್ ಫೋನ್ ಅಲ್ಲ. ಇದು ನಾದದ ಕಲೆ, ಶಿಸ್ತಿನ ಪಾಠ ಹಾಗೂ ಸಂಸ್ಕೃತಿಯ ಗೌರವವನ್ನೂ ಕಲಿಸುತ್ತದೆ.

ಇಂದಿನ ಪೀಳಿಗೆ ತಂತ್ರಜ್ಞಾನದತ್ತ ಮುಖ ಮಾಡಿದರೂ, ಇಂತಹ ವಂಶಪಾರಂಪರ್ಯ ಕುಟುಂಬಗಳು ತಮ್ಮ ನಾದಪಾಠವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುತ್ತಿದ್ದಾರೆ. ಇದೇ ನಾದಪೂಜೆಯ ಮುಂದಿನ ತಲೆಮಾರಿಗೆ ಹೊಸ ರೂಪ.

ಶಹನಾಯಿ ಮತ್ತು ಕಣಿವಾದ್ಯಗಳ ಪಾರಂಪರ್ಯವನ್ನು ತಲಾತಲಾಂತರದಿಂದ ಸಾಗಿಸುತ್ತಿರುವ ಕುಟುಂಬಗಳು ನಾಡು-ನುಡಿಗೆ ಜೀವ ತುಂಬಿದವರು. ಇವರು ಕೇವಲ ಕಲಾವಿದರು ಅಲ್ಲ, ನಾದಯೋಗಿಗಳೂ ಹೌದು. ಇಂತಹ ಕುಟುಂಬಗಳ ಕಥೆಗಳನ್ನು ದಾಖಲಿಸುವುದು, ಪೋಷಿಸುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

ನಾನು ಬಾಲ್ಯದಲ್ಲಿ ಶಹನಾಯಿ ಹಿಡಿಯುವುದು ನನ್ನ ದಿನಚರಿಯಾದ್ದು. ಪ್ರಾರಂಭದಲ್ಲಿ ಅಜ್ಜ ಗದರಿಸುತ್ತಿದ್ದರು – ಶ್ರುತಿ ತಪ್ಪುತ್ತಿತ್ತು, ಉಸಿರಾಟ ಸರಿಯಾಗಿರಲಿಲ್ಲ. ಆದರೆ ಅವರು ಬಿಡಲಿಲ್ಲ. ಪ್ರತಿದಿನವೂ ಮುಂಜಾನೆ 5 ಗಂಟೆಗೆ ಎದ್ದು ನಾದಾಭ್ಯಾಸ ಮಾಡುವುದು ಮನೆಯ ನಿಯಮವಾಗಿತ್ತು. ಅವರಿಗೆ ಸಂಗೀತವೆಂದರೆ ಪೂಜೆ – ಪ್ರತಿದಿನವೂ ಕಸರತ್ತಾಗಿ ನಡೆಯಬೇಕಾದ ಚಟುವಟಿಕೆ.

ನಲವತ್ತು ವರ್ಷಗಳ ಹಿಂದೆ ನನ್ನ ಮೊಟ್ಟ ಮೊದಲ ಕಾರ್ಯಕ್ರಮ ನನ್ನ ಊರಿನ ದೇವಸ್ಥಾನದ ಪೂಜೆ. ಅಜ್ಜನು ಶಹನಾಯಿ ಹಿಡಿದು ನನಗೆ ಮೊದಲ ತಾಳ ಕೊಟ್ಟ ದಿನ. ನನ್ನ ಕೈ ನಡುಗುತ್ತಿತ್ತು. ಆದರೆ ಮೊದಲ ನೋಟದಲ್ಲೇ ಅವರ ಕಣ್ಣಲ್ಲಿ ನಂಬಿಕೆಯ ಮೂಡಿದರೆನಿಸಿತು. ಅವರ ನಗು ನನ್ನ ಮೊದಲ ಪ್ರಶಸ್ತಿ.

ಇಂದಿಗೂ ಅಜ್ಜನ ಹಳೆಯ ಶಹನಾಯಿ ನಾನು ಆರಾಧಿಸುವ ದೇವರೊಡನೆ ಇರುತ್ತದೆ. ಅದನ್ನು ಸ್ಪರ್ಶಿಸುವ ಮೊದಲು ನಾನು ಕೈತೊಳೆದುಕೊಳ್ಳುತ್ತೇನೆ – ಅದು ನನಗೆ ಒಂದು ನಾದದ ದರ್ಶನ, ಆಪ್ತ ಸಂಬಂಧ ಎನ್ನುವಾಗ ಮಲ್ಲಪ್ಪ ಭಾವುಕರಾದರು.

ಸಾಂಸ್ಕೃತಿಕ ಲೋಕದಲ್ಲಿ ಕಾರ್ಪೊರೇಟ್ ಸಂಸ್ಕೃತಿ: ಜಿ ಎನ್ ಮೋಹನ್ ಆತಂಕ

ಕರ್ನಾಟಕ ನಾಟಕ ಅಕಾಡೆಮಿ ತಿಂಗಳ ನಾಟಕ ಸಂಭ್ರಮ

ಬೆಂಗಳೂರು- ಸಾಂಸ್ಕೃತಿಕ ಲೋಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಪೊರೇಟ್ ಲೋಕ ಯತ್ನಿಸುತ್ತಿದೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಹಿರಿಯ ಪತ್ರಕರ್ತ, ಸಾಹಿತಿ ಜಿ ಎನ್ ಮೋಹನ್ ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ನಾಲ್ಕು ಗೋಡೆಗಳ ಮಧ್ಯೆ ಇದ್ದ ರಂಗಭೂಮಿಯನ್ನು ಅಲ್ಲಿಂದ ಬಿಡುಗಡೆ ಮಾಡಿ ಜನರ ಬಳಿಗೆ ಕೊಂಡೊಯ್ಯಲು ದೊಡ್ಡ ಚಳವಳಿ ನಡೆಯಿತು. ಜನರ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ನಡೆಯಿತು. ಆದರೆ ಈಗ ಕಾರ್ಪೊರೇಟ್ ಜಗತ್ತು ಜನರ ಬಳಿಯಿಂದ ಕಿತ್ತು ಮತ್ತೆ ಅದನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಲು ಯತ್ನಿಸುತ್ತಿದೆ ಎಂದರು.

ರಂಗಭೂಮಿ ಜನರ ಒಡನಾಡಿ. ಅದು ಪ್ರಶ್ನಿಸಲು ಪ್ರೇರೇಪಿಸುತ್ತದೆ. ಸಮಾಜ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಆದ ಕಾರಣಕ್ಕಾಗಿಯೇ ರಂಗಭೂಮಿಯ ಮನಸ್ಥಿತಿಯನ್ನು ಬದಲಿಸುವ ತುರ್ತು ಪ್ರಭುತ್ವಕ್ಕೆ ಇದೆ. ಸಾಹಿತ್ಯ ಹಾಗೂ ರಂಗಭೂಮಿಯ ಮೇಲೆ ಭಯದ ಪರದೆಯನ್ನು ಸೃಷ್ಟಿಸಿ ಅವು ಸ್ವಯಂ ಸೆನ್ಸಾರ್ ಶಿಪ್ ಹೇರಿಕೊಳ್ಳುವಂತೆ ಪ್ರಭುತ್ವ ಒತ್ತಾಯಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರ ವಿರುದ್ಧ ರಂಗ ಲೋಕ ಎಚ್ಚೆತ್ತುಕೊಳ್ಳಬೇಕು ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ವಿ ನಾಗರಾಜಮೂರ್ತಿ ಅವರು ಮಾತನಾಡಿ ನಾಟಕ ಅಕಾಡೆಮಿ ಬೆಂಗಳೂರಿನ ಹೊರಗಿನ ತಂಡಗಳನ್ನು ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮೂಲಕ ನಗರ ಹಾಗೂ ಗ್ರಾಮೀಣ ತಂಡಗಳ ನಡುವೆ ಸಂವಾದ ಸಾಧ್ಯವಾಗಿದೆ. ಇದು ಆಶಾದಾಯಕ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಂಗವಾಗಿ ಸಂತೋಷ ನಾಯಕ ಪಟ್ಲ ಅವರು ನಿರ್ದೇಶಿಸಿದ ‘ದಿ ಫೈಯರ್’ ನಾಟಕವನ್ನು ಪ್ರದರ್ಶಿಸಲಾಯಿತು. ಉಡುಪಿಯ ಭೂಮಿಗೀತ ಸಾಂಸ್ಕೃತಿಕ ವೇದಿಕೆ ನಾಟಕವನ್ನು ಪ್ರದರ್ಶಿಸಿತು. ನಾಟಕ ಅಕಾಡೆಮಿ ಸದಸ್ಯರಾದ ಜಗದೀಶ್ ಜಾಲ ಹಾಗೂ ಲವಕುಮಾರ್ ಉಪಸ್ಥಿತರಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ತಿಂಗಳ ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು. ಚಿತ್ರದಲ್ಲಿ ಜಗದೀಶ ಜಾಲ, ಕೆ ವಿ ನಾಗರಾಜ ಮೂರ್ತಿ ಹಾಗೂ ಲವಕುಮಾರ್ ಇದ್ದಾರೆ.

“ಎಸ್‌ಎಫ್‌ಐ ಹೋರಾಟದ ಧ್ವಜಧಾರಿ ತಿಮ್ಮೇಗೌಡ ಇನ್ನಿಲ್ಲ”


ಸಂಚಲನ


ತುಮಕೂರು:
ಹಿರಿಯ ಕಾರ್ಮಿಕ ಹೋರಾಟಗಾರ, ಜನಪರ ವಕೀಲ ಹಾಗೂ ಎಸ್‌ಎಫ್‌ಐ ಪ್ರಬಲ ಸಂಗಾತಿ ತಿಮ್ಮೇಗೌಡ (65) ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ. ಅವರು ತಮ್ಮ ಇಡೀ ಜೀವನವನ್ನೂ ಸಾಮಾಜಿಕ ನ್ಯಾಯ, ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಮೀಸಲಿಟ್ಟಿದ್ದರು.

1970ರ ದಶಕದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕುಗ್ರಾಮ ಆಲೇನಹಳ್ಳಿ-ಗೊಲ್ಲರಹಟ್ಟಿಯಲ್ಲಿ ಜನಿಸಿದ ತಿಮ್ಮೇಗೌಡ ಅವರು, ವಿದ್ಯಾರ್ಥಿ ಜೀವನದಲ್ಲೇ ಎಸ್‌ಎಫ್‌ಐನಲ್ಲಿ ಸೇರ್ಪಡೆಯಾಗಿ ವಿದ್ಯಾರ್ಥಿ ಚಳವಳಿಗಳನ್ನು ಮುನ್ನಡೆಸಿದವರು. ಬಳಿಕ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ವಿವಿಧ ಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದರು.

ಹಿರಿಯ ಸಾಹಿತಿ ಹೆಚ್.ಎಸ್. ಶಿವಪ್ರಕಾಶ್, ಲೋಹಿತಾಶ್ವ, ಸಿ.ಯತಿರಾಜು, ಡಾ. ಹೆಚ್.ಎಸ್. ನಿರಂಜನಾರಾಧ್ಯ ಮತ್ತು ಸೂರಿ ಅವರ ಜೊತೆಗೂಡಿ ಸಾಮಾಜಿಕ ಬದಲಾವಣೆಗಳ ಬಲವಾದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ, ಕಾರ್ಮಿಕ ನಾಯಕರಾದ ಕೆ.ಆರ್. ನಾಯಕ್, ಹಾಗಲವಾಡಿ ಚನ್ನಪ್ಪ, ಮಹಮದ್ ದಸ್ತಗೀರ್, ಬಿ.ಡಿ. ರಾಮಯ್ಯರೊಂದಿಗೆ ಕೈಜೋಡಿಸಿ ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ್ದಾರೆ.

ಸಿಪಿಐಎಂ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳಲ್ಲಿ decades‌ಗಳ ಅನುಭವ ಹೊಂದಿದ ತಿಮ್ಮೇಗೌಡ ಅವರ ಪಾರ್ಥಿವ ಶರೀರಕ್ಕೆ ನೂರಾರು ಮಂದಿ ಸಂಗಾತಿಗಳು ಅಂತಿಮ ವಂದನೆ ಸಲ್ಲಿಸಿದರು. ಅಂತ್ಯಸಂಸ್ಕಾರವನ್ನು ತಿಪಟೂರು ಬಳಿಯ ಆಲೇನಹಳ್ಳಿ-ಗೊಲ್ಲರಹಟ್ಟಿಯಲ್ಲಿ ನೆರವೇರಿಸಲಾಯಿತು.


ನಶಿಸುತ್ತಿರುವ ಮಾನವೀಯ ಸಂಬಂಧಗಳು: ಗಿರೀಶ್ ಕಾಸರವಳ್ಳಿ ವಿಷಾದ

ಕಡಿದಾಳ್ ಪ್ರಕಾಶ್ ಅವರ ಎರಡು ಕೃತಿಗಳ ಬಿಡುಗಡೆ

ತೀರ್ಥಹಳ್ಳಿ, ಮೇ 05- ಮಾನವ ಸಂಬಂಧಗಳನ್ನು ಜಾಗತೀಕರಣ ನುಂಗಿ ಹಾಕುತ್ತಿದೆ. ಸಾಮಾಜಿಕ ಚಿಂತನೆ ದೂರ ಸರಿದು ಏಕವ್ಯಕ್ತಿ ಚಿಂತನೆ ಮುನ್ನೆಲೆಗೆ ಬರುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕಡಿದಾಳ್ ಪ್ರಕಾಶ್ ಅವರು ತಾವು ಕಂಡ ವಿಶ್ವ ಮಾನವರನ್ನು ನಮಗೆ ಪರಿಚಯಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು.

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಕೃತಿ ‘ನನ್ನೂರಿನ ಶ್ರೀಸಾಮಾನ್ಯರು’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಮಾನ್ಯರ ಅಸಾಮಾನ್ಯ ಬುದ್ದಿವಂತಿಕೆ, ಪ್ರಾಮಾಣಿಕತೆ, ಚಾಕಚಕ್ಯತೆಗಳ ವ್ಯಕ್ತಿತ್ವದ ಅನಾವರಣ ಕೃತಿಯಲ್ಲಿ ಬಿಂಬಿತವಾಗಿವೆ. ಗತವು ಪ್ರಸ್ತುತವಾಗುವ ಪಠ್ಯದ ಚಿತ್ರಣವನ್ನು ಕಾಣಬಹುದು. ಗತದ ನಡೆಯೊಂದಿಗೆ ಮೌಲ್ಯವನ್ನು ಬಿಚ್ಚಿಡುವ ಪ್ರಯತ್ನ ಹಾಗೂ ಸಂವಾದಕ್ಕೆ ಆಹ್ವಾನಿಸುವ ಬರವಣಿಗೆ ಕೃತಿಯಲ್ಲಿದೆ. ಸಾಂಸ್ಕೃತಿಕ ನೆಲೆಯು ಗತದ ವೈಭವೀಕರಣವಿಲ್ಲದೆ ದಾಖಲಾಗಿದೆ ಎಂದು ತಿಳಿಸಿದರು.

‘ನಾ ಕಂಡಂತೆ ತೇಜಸ್ವಿ-ಶಾಮಣ್ಣ’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಕೃತಿಯ ಕನ್ನಡಿಯಲ್ಲಿ ತೇಜಸ್ವಿ, ಶ್ಯಾಮಣ್ಣ ಮತ್ತು ಪ್ರಕಾಶ್ ಅವರ ಪ್ರತಿಬಿಂಬವಿದೆ. ಸಂಬಂಧಗಳ ಗ್ರಹಿಸುವಿಕೆಯೊಂದಿಗೆ ಜನರ ಮೆರವಣಿಗೆ ಕಾಣಬಹುದು. ಇದೊಂದು ಜುಗಲ್‌ಬಂದಿ ಕೃತಿ. ಸಾಮಾನ್ಯ ಮತ್ತು ಅಸಾಮಾನ್ಯರ ನಡುವಿನ ಪಾತ್ರಗಳು ಚಿತ್ತಾರ ಮೂಡಿಸಿವೆ. ಓದುಗರನ್ನು ಆಕರ್ಷಿಸುವ ಗುಣ ಹೊಂದಿದೆ ಎಂದರು.

‘ಕಟ್ಟುವ ಹಾದಿಯಲ್ಲಿ ಕುವೆಂಪು ಪ್ರತಿಷ್ಠಾನದ ಉಗಮ-ವಿಕಾಸ’ ಕೃತಿ ಕುರಿತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ ಕುವೆಂಪು ಅವರ ಕವಿಮನೆ ಸೇರಿದಂತೆ ಕುಪ್ಪಳಿಯಲ್ಲಿ ಜರುಗಿದ ಎಲ್ಲಾ ಮಹತ್ವದ ಕೆಲಸಗಳ ಹಿಂದೆ ಕಡಿದಾಳ್ ಪ್ರಕಾಶ್ ಅವರ ಮುನ್ನೋಟವಿದೆ. ಹೀಗಾಗಿ ಕವಿ ರವೀಂದ್ರರ ಶಾಂತಿ ನಿಕೇತನವನ್ನೂ ಮೀರಿ ಕುಪ್ಪಳಿ ಅಭಿವೃದ್ಧಿಗೊಂಡಿದೆ ಎಂದರು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಕಡಿದಾಳ್ ಪ್ರಕಾಶ್, ಅಭಿರುಚಿ ಗಣೇಶ್ ಉಪಸ್ಥಿತರಿದ್ದರು. ಲೇಖಕ ಬಿ.ಆರ್. ಸತ್ಯನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು.

ಕೃತಿ ವಿವರ: ನನ್ನೂರಿನ ಶ್ರೀಸಾಮಾನ್ಯರು
ಪುಟ: 160
ಬೆಲೆ: ರೂ 175
ಪ್ರ: ಅಭಿರುಚಿ

ಕೃತಿ: ನಾ ಕಂಡಂತೆ ತೇಜಸ್ವಿ ಶಾಮಣ್ಣ
ಪುಟ: 176
ಬೆಲೆ: ರೂ 175
ಪ್ರ: ಅಭಿರುಚಿ

ಕಾಯಕ-ಗುರುವಿನ ಜಯಂತಿ

0

ತುಮಕೂರು : ನಗರದ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್(ರಿ) ವತಿಯಿಂದ ಮೇ-1’ರ ಗುರುವಾರದಂದು ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಬಸವ-ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚುಮಂದಿ ವಿಶೇಷಚೇತನ-ಅಂಗವಿಕಲರು ಹಾಗೂ ಹತ್ತಾರು ಮಂದಿ ಪರಿತ್ಯಕ್ತ ವಯೋವೃದ್ಧರು ಉಪಸ್ಥಿತರಿದ್ದರು.

ಗಿಡಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ ಸಿ ಶೈಲಾ ನಾಗರಾಜ್’ರವರು, ವಿಶೇಷಚೇತನರ ಕ್ಷೇಮಾಭಿವೃದ್ಧಿಗಾಗಿ ಟ್ರಸ್ಟೊಂದನ್ನು ಸ್ಥಾಪಿಸಿ, ಸ್ವತಃ ಅಂಗವಿಕಲರಾಗಿದ್ದರೂ ಪರಿತ್ಯಕ್ತ ವಯೋವೃದ್ಧರು ಹಾಗೂ ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ಸಾಹಿ ಯುವಕವಿ ಮತ್ತು ಸಂಘಟಕ ಬಾಬುಟ ಮನಸೇ’ರವರ ಮಾನವೀಯ ಕಳಕಳಿಯನ್ನು ಮನಸಾರೆ ಶ್ಲಾಘಿಸಿದರು. ಬಾಬು ಮನಸೇ ತರಹದ ಯುವಕರ ಬದ್ಧತೆ ಮತ್ತು ಕಳಕಳಿಯಲ್ಲಿ ನಾವು ಬಸವ-ಸ್ಫೂರ್ತಿಯನ್ನು ಇಂದು ಕಾಣಬೇಕಾಗಿದೆ ಎಂದು ಹಾರೈಸಿದರು.

ಶೋಷಿತ ಹಾಗೂ ದುಃಖಿತ ಸಮಾಜದಲ್ಲಿ ಮಾನವೀಯ-ಚೈತನ್ಯದ ಅಪೂರ್ವ ಶಕ್ತಿಯಂತೆ ಹನ್ನೆರಡನೇ ಶತಮಾನದಲ್ಲಿ ಸಂಭವಿಸಿದ ಬಸವಣ್ಣ ಹಾಗೂ ಶರಣ ಚಳವಳಿಯ ಮಹತ್ತತೆಯನ್ನು ಅವರು ವಿವರಿಸಿದರು. ಮೇಲು-ಕೀಳು, ಪುರುಷ-ಮಹಿಳೆ, ಶ್ರೇಷ್ಠ-ಕನಿಷ್ಠ, ಜಾತಿ-ಧರ್ಮ ಎಲ್ಲದರ ಆಚೆಗೆ ಚಾಚಿಕೊಂಡು ಹಬ್ಬಿದ ಬಸವಣ್ಣನವರ ಜಾತ್ಯತೀತ ಜನಪರ ಆಂದೋಲನವನ್ನು ಅವರು ಸ್ಮರಿಸಿದರು. ಅದೇರೀತಿ, ಕಾಯಕಯೋಗಿಗಳ ಕುರಿತು ತತ್ವ ರೂಪಿಸಿದ ಬಸವಣ್ಣನವರ ಜಯಂತಿ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಎರಡನ್ನೂ ಒಟ್ಟಿಗೇ ಆಚರಿಸುತ್ತಿರುವುದರ ಪ್ರಸ್ತುತತೆಯನ್ನು ಅವರು ಮೆಚ್ಚಿ, ಬಾಬು ಮನಸೇ’ರವರ ಉತ್ಸಾಹವನ್ನು ಪ್ರಶಂಸಿಸಿದರು. ಕಡೆಯಲ್ಲಿ, ಕಾರ್ಮಿಕರ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಬಸವಣ್ಣನವರ ವಚನವನ್ನು ವಾಚಿಸಿದರು.

ಸಿಐಟಿಯು-ತುಮಕೂರು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಬೇಡುವುದು ಮತ್ತು ನೀಡುವುದು ಎಂಬುದಷ್ಟೇ ಮಾನವ-ಕಳಕಳಿಯ ಮಾನದಂಡವಾಗಬಾರದು. ಜೊತೆಗೆ ನಿಲ್ಲುವುದು ಮತ್ತು ಜೀವಂತ ಇರುವನಕ ಜೊತೆ ನಡೆಯುವುದು ಬದ್ಧತೆಯಾಗಬೇಕು. ನೀಡಿದ್ದನ್ನು ಫೋಟೊ-ವಿಡಿಯೋ ಮಾಡಿ ದಾಖಲಿಸಿಕೊಳ್ಳುವುದಷ್ಟೇ ಸೇವೆ ಆಗಬಾರದು. ದಾನ, ಸೇವೆ, ಸಹಾಯ ಎಂಬುದು ದಾಸ್ತಾನು ಮಾಡಿಡಬಹುದಾದ ಸರಕಲ್ಲ. ಅದು, ಎಂದಿಗೂ ಸಶೇಷ. ಹಾಗಾಗಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ನಿಲ್ಲುವುದೇ ನಿಜವಾದ ಮಾನವಸೇವೆ. ಬಸವಣ್ಣನವರು ನಿರೂಪಿಸಿ ಹೋದಂತೆ ‘ಕಾಯಕದಿಂದಲೇ ಕೈಲಾಸ’ದ ಅವಕಾಶಗಳು ತೆರೆದುಕೊಳ್ಳುವಂತಹ ಸಾಧ್ಯತೆಗಳಿಗೆ ಹೆಗಲೆಣೆಯಾಗಿ ನಿಲ್ಲಬೇಕು. ಕಾಯಕ-ಗುರುವಿನ ಜಯಂತಿ ಮತ್ತು ಕಾರ್ಮಿಕರ ದಿನ ಎರಡನ್ನೂ ಒಟ್ಟಿಗೇ ಆಚರಿಸುವ ಅಪರೂಪದ ಆಶಯಗಳನ್ನು ಹೊಂದಿರುವ ಬಾಬು ಮನಸೇ ಮತ್ತು ಪ್ರೇರಣಾ ಸಂಸ್ಥೆಯ ಜೊತೆ ತಾನಿರುವವರೆಗೂ ಸದಾಕಾಲ ನಿಲ್ಲುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಶ್ರೀಮತಿ ಶಮಂತ ಶ್ರೀಗಣೇಶ್’ರವರು ಮಾತನಾಡುತ್ತಾ, ಇಂದು ನಾವೆಲ್ಲರೂ ಇಲ್ಲಿ ಹೀಗೆ ಸೇರಲು ಬಸವಣ್ಣನವರೇ ಆದ್ಯಪುರುಷರು. ಮಹಿಳೆಯೂ ಜನರನ್ನು ಉದ್ದೇಶಿಸಿ ಮಾತನಾಡುವಷ್ಟು ಸಮಾನತೆಯನ್ನು ಸಮಾಜಕ್ಕೆ ಕಲ್ಪಿಸಿಕೊಟ್ಟ ಮಹಾನುಭಾವರು ಬಸವಣ್ಣ. ಅಂತಹ ಮಹಾನುಭಾವರ ಜಯಂತಿಯನ್ನು ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಜೊತೆಗೆ ಆಚರಿಸಿಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ ಎಂದರು. ಕಡೆಯಲ್ಲಿ, ಅವರು ವಚನವೊಂದನ್ನು ಹಾಡಿ ಸಭಿಕರನ್ನು ಗದ್ಗದಗೊಳಿಸಿದರು.

ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್’ನ ಸಂಸ್ಥಾಪಕ ಬಾಬು ಮನಸೇ ಮಾತನಾಡಿ, ತಮ್ಮ ಸಂಸ್ಥೆಯಲ್ಲಿರುವ ವಯೋವೃದ್ಧರು ಹಾಗೂ ವಿಕಲಚೇತನರಿಗೆ ಶ್ರೀಮತಿ ಶಮಂತ ಶ್ರೀಗಣೇಶ್’ರವರು ಬಟ್ಟೆಗಳನ್ನು ತಂದು ವಿತರಿಸುತ್ತಿರುವುದನ್ನು ಕೃತಙ್ಞತೆಯಿಂದ ನೆನೆದರು. ಶ್ರೀಮತಿ ಬಿ ಸಿ ಶೈಲಾ ನಾಗರಾಜ್ ಹಾಗೂ ಸೈಯದ್ ಮುಜೀಬ್’ರವರ ಸಹಾಯ-ಸಹಕಾರಗಳನ್ನು ನೆನೆದ ಅವರು, ಅಂಗವಿಕಲರ ಸ್ವಾವಲಂಬಿ ಬದುಕಿಗಾಗಿ ಕೂತಲ್ಲೇ ನಿರ್ವಹಿಸಬಹುದಾದ ಬಗೆಬಗೆಯ ಕೆಲಸ-ಕಾರ್ಯಗಳ ಕೌಶಲ್ಯ-ತರಬೇತಿ ಕೊಡಿಸುವ ಕಾರ್ಯಾಗಾರ ರೂಪಿಸಿಕೊಡುವ ಬಗ್ಗೆ ಕೇಳಿಕೊಂಡರು. ಹಾಗೂ ಸರ್ಕಾರಿ ಕಚೇರಿಗಳಲ್ಲಿ ನೇಮಕವಾಗುತ್ತಿರುವ ಡೇಟಾ-ಆಪರೇಟರ್ ತರಹದ ಕೆಲಸ-ಕಾರ್ಯಗಳಿಗೆ ನಮ್ಮ ವಿಕಲಚೇತನರನ್ನು ನೇಮಿಸಿಕೊಳ್ಳುವಂತಹ ಪ್ರಾತಿನಿಧ್ಯತೆ ಸಾಧ್ಯವಾಗಬೇಕಿದೆ, ಈ ದಿಸೆಯಲ್ಲಿ ನಮಗೆ ಸಹಾಯ ಮಾಡಿ ಎಂದು ಎಲ್ಲರಲ್ಲಿ ಕೇಳಿಕೊಂಡರು.

ಕಡೆಯಲ್ಲಿ, ಶ್ರೀಮತಿ ಶಮಂತ ಶ್ರೀಗಣೇಶ್’ರವರು ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ತಾವು ತಂದಿದ್ದ ಬಟ್ಟೆಗಳನ್ನು ವಿತರಿಸಿದರು. ಪ್ರೇರಣಾ ಸಂಸ್ಥೆಯ ವತಿಯಿಂದ ಎಲ್ಲರಿಗೂ ಸಿಹಿ ಹಂಚಲಾಯಿತು.

ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ಸಂಸ್ಥೆಯ ಇಂತಹ ಸತ್ಕಾರ್ಯಕ್ಕೆ
ಸಹಾಯ-ಸಹಕಾರಗಳನ್ನು ನೀಡಬಯಸುವವರು ನೇರವಾಗಿ ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದು. ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಬಿಸಿಎಂ ವುಮೆನ್ಸ್ ಹಾಸ್ಟೆಲ್ ಎದುರಿನ ಆಂತೋಣಿ-ಚರ್ಚ್ ಪಕ್ಕದ ಕಟ್ಟಡದಲ್ಲಿ ‘ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್(ರಿ) ಕಚೇರಿ ಹಾಗೂ ಆಶ್ರಮ’ ಎರಡೂ ಇವೆ. ಜೊತೆಗೆ, ಪ್ರೇರಣಾ ಬಾಬು(ಮನಸೇ) ರವರ +91 86601 78143 ಮೊಬೈಲ್ ಸಂಖ್ಯೆಯನ್ನೂ ಸಂಪರ್ಕಿಸಬಹುದು.

ಸಂಚಲನ

ಕಾರ್ಮಿಕರೆಲ್ಲರೂ ಓದಲೇಬೇಕಾದ ಸುದ್ದಿ: ಚಿತ್ರನಟನ ಕಣ್ಣಲ್ಲಿ ಕಾರ್ಮಿಕರು

ಅಂತಃಕರಣವಿಲ್ಲದ ವ್ಯವಸ್ಥೆಯ ಕರಣ ಹಾಗೂ ಕಾರಣಗಳು ;ಚಿತ್ರ ನಟ ಬಿ.ಸುರೇಶ್

ತುಮಕೂರು : ದೇಶದ ಆರ್ಥಿಕ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಉತ್ತೇಜನ ನೀಡಲು ಪ್ರಾರಂಭವಾದಾಗಿನಿಂದ ಸಾರ್ವಜನಿಕ ಉದ್ದಿಮೆಗಳು ಹಾಗೂ ಸಾರ್ವಜನಿಕ ಆಸ್ತಿಗಳ ಮೇಲೆ ಆಡಳಿತ ನಡೆಸಿದ‌ ಎಲ್ಲ ಪಕ್ಷಗಳವರೂ ಮೊಳೆಗಳನ್ನು ಹೊಡೆಯಲು ಪ್ರಾರಂಭಿಸಿದರು. 1983ರಲ್ಲಿ ಮಾಡಿಕೊಳ್ಳಲಾದ ಗ್ಯಾಟ್ ಒಪ್ಪಂದ ನಂತರದ ಡೆಂಕಲ್ ಒಪ್ಪಂದಕ್ಕೆ‌ ಭಾರತ ಸಹಿ ಹಾಕಿದಾಗಿನಿಂದ, ಆರಂಭವಾದ ಖಾಸಗೀಕರಣ, ಜಾಗತೀಕರಣ, ಉದಾರೀಕರಣದಂತಹ ಅತಂಕರಣಗಳಿಲ್ಲದ ಕರಣ-ಕರಣಗಳು ಬಲಗೊಂಡ ಕಾರಣ ಉದ್ಯೋಗ, ಸಾಮಾಜಿಕ ಭದ್ರತೆಯಂತಹ ಅವಕಾಶಗಳನ್ನು ಜನರಿಂದ ಕಿತ್ತುಕೊಳ್ಳುವ ಹುನ್ನಾರಗಳು ನಡೆಯುತ್ತಿವೆ. ಸಾಮಾಜಿಕ ಭದ್ರತೆಗೆ ತೊಡಕುಂಟು ಮಾಡಿರುವ ಈ ನೀತಿಗಳ ವಿರುದ್ದ ಕಾರ್ಮಿಕ ಸಂಘಗಳು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿವೆ. ನಡೆಸುತ್ತಲೇ ಇವೆ ಎಂದು ಬರಹಗಾರ, ರಂಗಕರ್ಮಿ, ಚಲನಚಿತ್ರ ನಟ ಹಾಗೂ ನಿರ್ದೇಶಕ-ನಿರ್ಮಾಪಕ ಮತ್ತು ಸಾಮಾಜಿಕ ಚಿಂತಕ ಬಿ. ಸುರೇಶ್ ಅಭಿಪ್ರಾಯಪಟ್ಟರು.

ಅವರು ವಿಶ್ವಕಾರ್ಮಿಕರ ದಿನಾಚರಣೆಯ (ಮೇ 1) ಅಂಗವಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ತುಮಕೂರು, ಗುರುವಾರ ಬೆಳಗ್ಗೆ ನಗರದ ಟೌನ್‌ಹಾಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಕಾಲದಲ್ಲಿ ಕಾರ್ಮಿಕರನ್ನು ನಿಶ್ಶಸ್ತ್ರಗೊಳಿಸುತ್ತಿರುವುದರ ವಿರುದ್ಧ ಬಿ ಸುರೇಶ್ ನಿಷ್ಟುರವಾಗಿ ಮಾತನಾಡುತ್ತಾ, ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಬಂಡವಾಳಗಾರರ ವ್ಯವಸ್ಥೆಯ ವಿರುದ್ದ ದಿನಕ್ಕೆ 8 ಗಂಟೆಯ ಕೆಲಸಕ್ಕೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ತಮಗೆ ದಕ್ಕಬೇಕಾದ ಪ್ರಸ್ತುತ ಸವಲತ್ತುಗಳ ಬಗ್ಗೆ ಕಾರ್ಮಿಕರು ಮಾತನಾಡದ ರೀತಿಯಲ್ಲಿ ಹಲವು ರೀತಿಯ ಬಾಯಿ-ಬೀಗಗಳನ್ನು ಹಾಕಲಾಗುತ್ತಿದೆ. ಕಾನೂನಿನ ಬೀಗ, ಭಯದ ಬೀಗ, ಸಬಂಳದ ಬೀಗ, ವಜಾಗೊಳಿಸುವ ಭೀತಿಯ ಬೀಗಗಳನ್ನು ಹಾಕುತ್ತಿರುವ ಈ ಸಂದರ್ಭದಲ್ಲಿ, ಕಾರ್ಮಿಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಬಲ್ಲ ಕಾರ್ಮಿಕ ದಿನಾಚರಣೆಗಳ ಮೂಲಕ ಜಾಗೃತಗೊಳಿಸುವ ಕೆಲಸಗಳನ್ನು ತುಮಕೂರಿನ ಕಾರ್ಮಿಕ ಸಂಘಟನೆಗಳು ಇಂದು ಮಾಡುತ್ತಿವೆ ಎಂದರು.

ತುಮಕೂರಲ್ಲಿ ಮೇ ಡೇ ಕಲರವ

ಇದೇ ತುಮಕೂರು ನಗರದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿಗೆ ಉದ್ಯೋಗ ನೀಡಿದ್ದ ಹೆಚ್.ಎಂ.ಟಿ. ಕೈ-ಗಡಿಯಾರ ಕಾರ್ಖಾನೆ ಇಂದು ಖಾಸಗೀಕರಣದ ಉತ್ತೇಜನದಿಂದಾಗಿ ನಾಶವಾಗಿದೆ. ಇದರಿಂದ ಸಾವಿರಾರು ಮಂದಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಕನಿಷ್ಠ ವೇತನವಿಲ್ಲದೆ ದುಡಿಯುತ್ತಿದ್ದ ಪೌರಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಕಾರ್ಮಿಕ-ಸಂಘಟನೆಗಳ ಎರಡು-ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ಪೌರಕಾರ್ಮಿಕರಿಗೆ 18 ಸಾವಿರ ಕನಿಷ್ಠ ಕೂಲಿ ಜಾರಿಗೆ ಕೋರ್ಟ್ ಆದೇಶ ನೀಡಿದೆ. ಆದರೆ, ಆಡಳಿತ ವ್ಯವಸ್ಥೆ ಗುತ್ತಿಗೆ ಆಧಾರದಲ್ಲಿ ಅವರನ್ನು ದುಡಿಸಿಕೊಳ್ಳುವ ಅತಂತ್ರ-ವ್ಯವಸ್ಥೆಗೆ ದೂಡುತ್ತಿದೆ. ಜಿಡಿಪಿಯಲ್ಲಿ ಸಾಮಾಜಿಕ ಕಲ್ಯಾಣಕ್ಕಾಗಿ ಮೀಸಲಿಡುತ್ತಿದ್ದ ಶೇ. 8 ರಷ್ಟು ಹಣ ಈಗ ಕೇವಲ ಶೇ.2 ಕ್ಕೆ ಬಂದುನಿಂತಿದೆ. ಇದರಿಂದ ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವು ವಿಭಾಗಗಳು ಸಾಮಾನ್ಯ ಜನರ ಕೈಗೆ ಸಿಗದಂತಾಗಿದೆ ಎಂದರು.

ಇಂದು ಪ್ರತಿಯೊಂದು ಕೆಲಸಕ್ಕೂ, ಪ್ರತಿಯೊಂದು ಯೋಜನೆಗೂ ಸ್ಮಾರ್ಟ್ ಪೋನ್ ಅಗತ್ಯವಾಗಿ ಬೇಕಾಗಿದೆ. ಆದರೆ ಇದೇ ಸ್ಮಾರ್ಟ್ ಪೋನ್ ಹೊಂದಿದ್ದರೆ ಬಡವನ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ. ಒಂದು ಕಾಲದಲ್ಲಿ ಹಲವು ಜನರಿಗೆ ಉದ್ಯೋಗ ನೀಡಿದ್ದ ಬಿಪಿಎಲ್ ಟಿವಿ ಇಂದು ಹೇಳಲು ಹೆಸರಿಲ್ಲದಂತಾಗಿದೆ. ಬೇರೆ ದೇಶದ ವಸ್ತುಗಳಿಗೆ ಭಾರತದ ಲೇಬಲ್ ಹಾಕಲಾಗುತ್ತಿದೆ. ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಉಳಿವಿಗಾಗಿ ಇಂದು ಹೋರಾಟ ಅನಿವಾರ್ಯವಾಗಿದೆ ಎಂದು ಕಾರ್ಮಿಕರಿಗೆ ಅವರು ಕರೆ ನೀಡಿದರು.

ಮುಜೀಬ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್, ಜನರನ್ನು ಭಾವನಾತ್ಮಕವಗಿ ವಿಭಜಿಸುವ ಮೂಲಕ ದ್ವೇಷ ಬೆಳೆಸಿ, ಜನರಲ್ಲಿ ಮೂಲಭೂತವಾದ ಬೆಳೆಸುತ್ತಾ ಉದ್ಯೋಗ, ಬಡತನ, ಅಪೌಷ್ಠಿಕತೆ, ವಸತಿ, ಮಹಿಳೆಯರ ಮತ್ತು ದಲಿತರ ಮೇಲಿನ ದೌರ್ಜನ್ಯ, ಬೆಲೆ ಏರಿಕೆ ಸೇರಿದಂತೆ ಮುಂತಾದ ಅನೇಕ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಶ್ರಮ ಶಕ್ತಿಯನ್ನು ನಿರಂತರವಾಗಿ ಅಪಮಾನಿಸಲಾಗುತ್ತಿದ್ದು, ದುಡಿಯುವ ಜನರು ಇದರ ವಿರುದ್ಧ ಸಂಘಟಿತರಾಗಬೇಕಾಗಿದೆ. ಮೇ 20’ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಕಾರ್ಮಿಕರೆಲ್ಲ ಒಗ್ಗಟ್ಟಿನಿಂದ ಯಶಸ್ವಿಗೊಳಿಸಲು ಅವರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಿ.ಕಮಲ, ಎ. ಲೋಕೇಶ್, ಹೆಚ್.ಡಿ.ನಾಗೇಶ್, ಬಿ.ಉಮೇಶ್, ಗುಲ್ಜಾರ್‌ ಬಾನು, ನಾಗರಾಜು, ಅನಸೂಯ ಮಹಿಳಾ ಸಂಘಟನೆಯ ಮುಖಂಡರಾದ ಕಲ್ಪನ, ಶಿವಕುಮಾರಸ್ವಾಮಿ, ಕೊಳಗೇರಿ ಸಂಘಟನೆಯ ಎ. ನರಸಿಂಹಮೂರ್ತಿ, ಸ್ಟ್ಯಾನ್ಲಿ ಸುಕುಮಾರ್, ಮಧುಸೂದನ್, ವಸೀಂ ಅಕ್ರಂ, ಇಂತು, ಗಣಪತಿ, ಮಂಜುನಾಥ್, ಶ್ರೀನಿವಾಸ್, ಖಲೀಲ್, ಸುಬ್ರಹ್ಮಣ್ಯ, ರಾಘವೇಂದ್ರ, ಮಹೇಶ್, ಗಂಗಮ್ಮ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಐಟಿಯು’ನ ಪುಷ್ಪ ಮತ್ತು ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು. ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ಕಾರ್ಮಿಕ-ಕ್ರೀಡಾಳುಗಳಿಗೆ ಬಹುಮಾನ ವಿತರಿಸಲಾಯಿತು.


ವರದಿ,
ಸಂಚಲನ


ಕಾರ್ಮಿಕರಿಗೆ ಅಂಬೇಡ್ಕರ್ ಮಾಡಿದ್ದೇನು?: ಇವು ಎಲ್ಲ ಕಾರ್ಮಿಕರಿಗೂ ತಿಳಿದಿರಬೇಕಾದ ವಿಷಯ…

0

ಲೇಖನ: ಹೆತ್ತೇನಹಳ್ಳಿ ಮಂಜುನಾಥ್

ಅಂಬೇಡ್ಕರ್

ಮೇ 1 ರಂದು ವಿಶ್ವದೆಲ್ಲೆಡೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿರಿ ಎಂಬುದು ಈ ದಿನದ ಘೋಷ ವಾಕ್ಯ. ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಮಿಕರ ಪಾತ್ರವು ಮಹತ್ತರವಾದದ್ದು. ಸಾವಿರಾರು ವರ್ಷಗಳ ಕಾರ್ಮಿಕ ವರ್ಗವು ಜಗತ್ತಿನ ಕಲ್ಯಾಣಕ್ಕಾಗಿ ತ್ಯಾಗ ಮಾಡಿದೆ ಮಾಡುತ್ತಲೆ ಬಂದಿದೆ ಆದರೆ ಆ ವರ್ಗದ ಹಿತ ಕಾಯುವಲ್ಲಿ ಬಹುತೇಕ ರಾಷ್ಟ್ರಗಳು ಸೋತಿವೆ & ಹಿಂದಿವೆ.

ಭಾರತದಂತಹ ಬಹುತ್ವದ ರಾಷ್ಟ್ರದಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಎತ್ತಿ ಹಿಡಿದು ಕಾರ್ಮಿಕರ ಸುಭದ್ರತೆಗೆ ಭದ್ರ ಬುನಾದಿಯಾಕಿ ಸಂರಕ್ಷಿಸಿದ್ದು ಬಾಬಾ ಸಾಹೇಬರೆನ್ನುವುದನ್ನು ಈ ದೇಶ ಎಂದು ಮರೆಯುವಂತಿಲ್ಲಾ.

ಶೋಷಿತರ ಜೀವನವನ್ನು ಗುಲಾಮಗಿರಿಗೆ ತಳ್ಳಿದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಹೋರಾಡುವುದರೊಂದಿಗೆ ದೇಶದ ಬಹುದೊಡ್ಡ ಭಾಗವಾದ ಮಹಿಳೆಯರು, ಮಾನವ ಹಕ್ಕುಗಳು & ಕಾರ್ಮಿಕರ ಕಲ್ಯಾಣಕ್ಕೂ ಹೋರಾಡಿದ್ದು ಅವರಲ್ಲಿದ್ದ ಬದ್ಧತೆ & ದೇಶಪ್ರೇಮ ನಮ್ಮನ್ನು ಮತ್ತೆ ಮತ್ತೆ ಬಾಬಾ ಸಾಹೇಬರನ್ನ ಚಿಂತನೆಗಳತ್ತ ಕೊಂಡೊಯ್ಯಲು ಪ್ರೇರಿಪಿಸುತ್ತದೆ.

ಅನೇಕ ಕಾರ್ಮಿಕ ಹೋರಾಟಗಳು ಅನೇಕ ನಾಯಕರುಗಳ ನೇತೃತ್ವದಲ್ಲಿ ಇತಿಹಾಸದುದ್ದಕ್ಕೂ ನಡೆದಿವೆ, ಭಾರತದ ಕಾರ್ಮಿಕರ ವಿಚಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿರ್ವಹಿಸಿದ ಕಾರ್ಯ ಮಾತ್ರ ಅವಿಸ್ಮರಣೀಯವಾದದ್ದು. ದುಂಡು ಮೇಜಿನ ಸಮ್ಮೇಳನದಲ್ಲಿ ಶೋಷಿತ ವರ್ಗಗಳ ಪ್ರತಿನಿಧಿಯಾಗಿದ್ದ ಬಾಬಾ ಸಾಹೇಬರು ಕಾರ್ಮಿಕರ ಜೀವನ, ವೇತನ, ಕೆಲಸದ ಪರಿಸ್ಥಿತಿಗಳು & ಕ್ರೂರ ಭೂ-ಮಾಲೀಕರ ಹಿಡಿತದಿಂದ ರೈತರ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದರು.

ಬಾಬಾ ಸಾಹೇಬರು ಭೂರಹಿತ ಬಡ ಗೇಣಿದಾರರು, ಕೃಷಿಕರು, ಕಾರ್ಮಿಕರ ಅಗತ್ಯತೆಗಳು & ಕುಂದುಕೊರತೆಗಳನ್ನು ಪೂರೈಸುವ ಸಮಗ್ರ ಪ್ರಣಾಳಿಕೆಯೊಂದಿಗೆ/ಕಾರ್ಯಸೂಚಿಯೊಂದಿಗೆ 1936 ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷವನ್ನು) ಸ್ಥಾಪಿಸಿದರು. ಕಾರ್ಮಿಕರ ಹಿತಕ್ಕಾಗಿ & ರಾಜಕೀಯ ಅಧಿಕಾರಕ್ಕಾಗಿ ಸ್ಥಾಪಿಸಲ್ಪಟ್ಟ ಮೊದಲ ಮತ್ತು ಏಕೈಕ ರಾಜಕೀಯ ಪಕ್ಷ ಇದಾಗಿದೆ.
1937 ರಲ್ಲಿ ನಡೆದ ಚುನಾವಣೆಯಲ್ಲಿ ಈ ಪಕ್ಷವು ಬಾಂಬೆ ವಿಧಾನಸಭೆಗೆ ಸ್ಪರ್ಧಿಸಿದ್ದ 17 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಯಶಸ್ಸನ್ನು ಗಳಿಸಿತು. ಜಾತಿ ಧರ್ಮಾದಾರಿತ ಚುನಾವಣೆಗಳ ಮಧ್ಯೆ ಶ್ರಮಿಕ ಆಧಾರಿತ ಪಕ್ಷವನ್ನು ಕಟ್ಟಿ ಯಶಸ್ಸನ್ನು ಕಂಡವರು ಬಾಬಾ ಸಾಹೇಬರು..

ಬಾಬಾಸಾಹೇಬರು 1937 ರಲ್ಲಿ ಬಾಂಬೆ ಅಸೆಂಬ್ಲಿಯಲ್ಲಿ ಜಮೀನುದಾರಿ ಪದ್ಧತಿಯ ರದ್ದತಿ ಮಸೂದೆಯನ್ನು ಮಂಡಿಸಿದರು. ಕಾರ್ಮಿಕರ ಮುಷ್ಕರ ಹಕ್ಕನ್ನು ನಿರಾಕರಿಸುವ ಕೈಗಾರಿಕಾ ವಿವಾದಗಳ ಮಸೂದೆಯನ್ನು ಅವರು ವಿರೋಧಿಸಿದರು. 1942 ರಿಂದ 1946 ರವರೆಗೆ ವೈಸ್ರಾಯ್ ರವರ ಕಾರ್ಯನಿರ್ವಾಹಕ ಮಂಡಳಿಯ ಕಾರ್ಮಿಕ ಸದಸ್ಯರಾಗಿದ್ದ ಅವಧಿಯಲ್ಲಿ ಕಾರ್ಮಿಕ ವಿಷಯಗಳ ಬಗ್ಗೆ ಬಾಬಾ ಸಾಹೇಬರ ಅವರು ಹೊಂದಿದ್ದ ಆಳವಾದ ಜ್ಞಾನವನ್ನು ಒಮ್ಮತವಾಗಿ ಅಂಗೀಕರಿಸಲಾಯಿತು. ಸರ್ಕಾರದ ಕಾರ್ಮಿಕ ನೀತಿಯ ಮೂಲ ರಚನೆಗೆ ಅಡಿಪಾಯ ಹಾಕುವ ಮೂಲಕ ಕಾರ್ಮಿಕ ಕಲ್ಯಾಣಕ್ಕಾಗಿ ಹತ್ತು ಹಲವಾರು ಶಾಸನ ರೂಪಿಸಿದರು..

8 ನವೆಂಬರ್ 1943 ರಂದು ಅಂಬೇಡ್ಕರ್ ಮಂಡಿಸಿದ ಭಾರತೀಯ ಟ್ರೇಡ್ ಯೂನಿಯನ್ ತಿದ್ದುಪಡಿ ಮಸೂದೆ, ಕಾರ್ಮಿಕ ಸಂಘಗಳನ್ನು ಅಂಗೀಕರಿಸುವಂತೆ ಒತ್ತಾಯಿಸಿತು. 8 ಫೆಬ್ರವರಿ 1944 ರಂದು ಕಲ್ಲಿದ್ದಲು ಗಣಿಗಳಲ್ಲಿ ಮಹಿಳೆಯರ ಉದ್ಯೋಗದ ಮೇಲಿನ ನಿಷೇಧವನ್ನು ತೆಗೆದು ಹಾಕುವ ಚರ್ಚೆಯ ಸಂದರ್ಭದಲ್ಲಿ ಶಾಸಕಾಂಗ ಸಭೆಯಲ್ಲಿ ಅಂಬೇಡ್ಕರ್ ರವರು “ಲಿಂಗತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು” ಎಂದು ವಾದಿಸಿದರು.
ಇದು ಒಂದು ಐತಿಹಾಸಿಕ ಕ್ಷಣ. ಗಣಿ ಹೆರಿಗೆ ಪ್ರಯೋಜನ ಮಸೂದೆ ಮಂಡಿಸುವ ಮೂಲಕ ಅವರು ಮಹಿಳಾ ಕಾರ್ಮಿಕರಿಗೆ ಗೌರವ ಮಾತೃತ್ವ ಸೌಲಭ್ಯಗಳೊಂದಿಗೆ ಭದ್ರತೆ ನೀಡಿದರು.

26 ನವೆಂಬರ್ 1945 ರಂದು ನವದೆಹಲಿಯಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್, ಪ್ರಗತಿಪರ ಕಾರ್ಮಿಕ ಕಲ್ಯಾಣ ಶಾಸನವನ್ನು ತರುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು: “ಸರಿಯಾದ ಕಾರ್ಮಿಕ ಶಾಸನ ಸಂಹಿತೆಯನ್ನು ಹೊಂದಲು ಬ್ರಿಟಿಷರು 100 ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಬಹುದು. ನಾವು ಭಾರತದಲ್ಲಿಯೂ 100 ವರ್ಷಗಳನ್ನು ತೆಗೆದುಕೊಳ್ಳಬೇಕು ಎಂಬ ವಾದವಿಲ್ಲ. ಇತಿಹಾಸ ಯಾವಾಗಲೂ ಒಂದು ಉದಾಹರಣೆಯಲ್ಲ. ಹೆಚ್ಚಾಗಿ ಇದು ಒಂದು ಎಚ್ಚರಿಕೆ” ಎಂದು ಹೇಳಿದರು. ಖಾಸಗಿ ಆಸ್ತಿಯನ್ನು ರದ್ದುಪಡಿಸುವುದರಿಂದ ಬಡತನ ಮತ್ತು ಸಂಕಟಗಳು ಅಂತ್ಯವಾಗಲಿದೆ ಎಂಬ ಮಾರ್ಕ್ಸ್ ನಿಲುವನ್ನು ಡಾ. ಅಂಬೇಡ್ಕರ್ ಒಪ್ಪಲಿಲ್ಲ. ಭಗವಾನ್ ಬುದ್ಧರ ಆರ್ಥಿಕ ನೀತಿಯನ್ನು ಎತ್ತಿ ಹಿಡಿದು ಬಹುತ್ವದ ಭಾರತದಲ್ಲಿ ಬುದ್ಧನ ಚಿಂತನೆಗಳೆ ಅಂತಿಮವೆಂದು ಪ್ರತಿಪಾದಿಸಿದರು.

  1. 1942 ರಲ್ಲಿ ವೈಸ್ ರಾಯ್ ಕೌನ್ಸಿಲ್ ನಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕೆಲಸದ ಸಮಯವನ್ನು 12 ಗಂಟೆಗಳಿಂದ 8 ಗಂಟೆಗಳ ವರೆಗೆ ಇಳಿಸಲು ಹೋರಾಡಿ ಯಶಸ್ಸು ಕಂಡರು.
  2. ಆರೋಗ್ಯ ವಿಮೆ ಯೋಜನೆ, ಕಾರ್ಮಿಕರ ರಾಜ್ಯ ವಿಮಾ, ತುಟ್ಟಿಭತ್ಯೆ, ಭವಿಷ್ಯ ನಿಧಿ, ಕನಿಷ್ಠ ವೇತನ ಸೌಲಭ್ಯ. ಕಾರ್ಮಿಕರಿಗೆ ವೈದ್ಯಕೀಯ ಆರೈಕೆ & ವೈದ್ಯಕೀಯ ರಜೆ ಸೌಲಭ್ಯ.
  3. ಮಹಿಳಾ ಮತ್ತು ಮಕ್ಕಳ ಕಾರ್ಮಿಕ ರಕ್ಷಣೆ ಕಾಯ್ದೆ ಮತ್ತು ಭಾರತೀಯ ಕಾರ್ಖಾನೆ ಕಾಯಿದೆ ಜಾರಿ ತಂದರು.
  4. ಗಣಿ ಹೆರಿಗೆ ಪ್ರಯೋಜನ ಕಾಯ್ದೆ, ಮಹಿಳಾ ಕಾರ್ಮಿಕ ಕಲ್ಯಾಣ ನಿಧಿ, ಮಹಿಳೆಯರು ಮತ್ತು ಮಕ್ಕಳ ಕಾರ್ಮಿಕ ಸಂರಕ್ಷಣಾ ಕಾಯ್ದೆ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ
  5. ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಸದಸ್ಯರಾಗಿದ್ದಾಗ ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆಯಲ್ಲಿ ಬಾಬಾಸಾಹೇಬರು ಪ್ರಮುಖ ಪಾತ್ರವಹಿಸಿದರು.
  6. 1942 ರಲ್ಲಿ ಭಾರತೀಯ ಕಾರ್ಮಿಕರ ಅಂಕಿ-ಅಂಶಗಳ ಕಾನೂನು ಜಾರಿಗೆ ತಂದರು.
  7. 31 ಜನವರಿ 1944 ರಲ್ಲಿ “ಕಲ್ಲಿದ್ದಲು ಗಣಿಗಾರಿಕೆ ಸುರಕ್ಷತೆ ತಿದ್ದುಪಡಿ ಬಿಲ್” ಜಾರಿಗೆ ತಂದರು.
  8. ಕೆಲಸದ ಸಮಯದಲ್ಲಿ ದೈಹಿಕವಾಗಿ ಅಂಗವಿಕಲರಾದರೆ ಅದಕ್ಕೆ ಪರಿಹಾರವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪನೆ. ಕಾರ್ಮಿಕ ಕಲ್ಯಾಣದ ವಿಷಯಗಳ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿಯ ರಚನೆಗೆ ಒತ್ತು ನೀಡಿದರು.
  9. 8 ಏಪ್ರಿಲ್ 1946 ರಂದು ಅಭ್ರಕ ಗಣಿ ಕಾರ್ಮಿಕ ಕಲ್ಯಾಣ ನಿಧಿಯನ್ನು ತಂದರು ಇದರಿಂದ ಕಾರ್ಮಿಕರಿಗೆ ವಸತಿ, ನೀರು ಸರಬರಾಜು, ಶಿಕ್ಷಣ, ಸಹಕಾರಿ ವ್ಯವಸ್ಥೆಗಳು ದೊರೆಯಿತು.
  10. 8 ನವೆಂಬರ್ 1943 ರಂದು ನೋಂದಣಿಯಾದ ಕಾರ್ಮಿಕ ಸಂಘಟನೆಗಳನ್ನು ಕಡ್ಡಾಯ ಗುರುತಿಸುವಿಕೆಗಾಗಿ ಭಾರತೀಯ ಟ್ರೇಡ್ ಯೂನಿಯನ್ಸ್ (ತಿದ್ದುಪಡಿ) ಜಾರಿಗೆ ತಂದರು.
  11. ಮಾರ್ಚ್ 1944 ರಲ್ಲಿ ಭಾರತದ ಅಭಿವೃದ್ಧಿಗೆ ಪ್ರಬಲ ತಾಂತ್ರಿಕ ಸಂಸ್ಥೆಯಾದ “ಸೆಂಟ್ರಲ್ ವಾಟರ್ ವೇ ಅಂಡ್ ಇರ್ರೀಗೇಷನ್ ಕಮಿಷನ್” ಅನುವೋದಿಸಿದರು. ಇಂದು ಕೃಷಿ ಪ್ರಧಾನವಾದ ನಮ್ಮ ರೈತ ಕುಟುಂಬದಲ್ಲಿ ಸಂತೋಷವಿರಲು ಮತ್ತು ನಮ್ಮ ಜಮೀನುಗಳು ಹಸಿರಿನಿಂದ ಕೂಡಿದ್ದರೆ ಅದಕ್ಕೆಲ್ಲ ಕಾರಣ ನೀರಾವರಿ, ವಿದ್ಯುತ್ ಯೋಜನೆಯಲ್ಲಿ ಬಾಬಾ ಸಾಹೇಬರು ತಗೆದುಕೊಂಡ ನಿರ್ಧಾರಗಳು..
  12. ಬಾಬಾ ಸಾಹೇಬರ ನೀರು ನಿರ್ವಹಣೆ ಪರಿಕಲ್ಪನೆ ಅತ್ಯದ್ಭುತವಾದದ್ದು. ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಸಮಥ೯ವಾಗಿ & ಸಮವಾಗಿ ಬಳಸಿಕೊಳ್ಳುವುದರಿಂದಷ್ಟೆ ದೇಶದ ಪ್ರಗತಿ ಸಾಧ್ಯವೆಂಬ ಪ್ರತಿಪಾದನೆ ಬಾಬಾ ಸಾಹೇಬರದ್ದಾಗಿತ್ತು.

ಬಂಡವಾಳಶಾಹಿ ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ಭಾರತಕ್ಕೆ ಬಾಬಾ ಸಾಹೇಬರ ಕಾರ್ಮಿಕ ವರ್ಗಗಳ ಚಿಂತನೆಗಳ ಮುಲಾಮಿನ ಮೂಲಕ ಮತ್ತೆ ಬೆವರಿನ ಭಾರತದ ಮರು ನಿರ್ಮಾಣ ಮಾಡಬೇಕಾಗಿರುವುದು ಇಂದಿನ ಸವಾಲಾಗಿದೆ… ರಾಷ್ಟ್ರ ನಿರ್ಮಾಣದಲ್ಲಿ ಅಸಂಖ್ಯಾತ ಅಸಂಘಟಿತ ಕಾರ್ಮಿಕರಿಗೆ, ಸಂಘಟಿತ ರೂಪದಲ್ಲಿ ಹಲವಾರು ಕೊಡುಗೆಯನ್ನು ನೀಡಿದ ಭಾರತದ ಕಾರ್ಮಿಕ ನಾಯಕರು, ಕಾರ್ಮಿಕ ಕಲ್ಯಾಣದ ಚಿಂತಕರು, ಕಾರ್ಮಿಕ ವರ್ಗದ ವಿಮೋಚಕರಾದ ಬಾಬಾ ಸಾಹೇಬರ ಚಿಂತನೆಗಳನ್ನು ಮರೆಮಾಚುತ್ತ ಇಂದು ಕಾರ್ಮಿಕರಿಗೆ ತಮ್ಮ ಹಕ್ಕುಗಳಿವೆಯೆಂಬ ಕನಿಷ್ಟ ಅರಿವಿಲ್ಲದಂತೆ ಸತ್ಯವನ್ನು ಮುಚ್ಚಿಟ್ಟು ಇರುವ ಕಾನೂನು & ಹಕ್ಕುಗಳನ್ನು ಮುಗಿಸಲೊರಟ ಸರ್ಕಾರಗಳಿಗೆ ಹೋರಾಟದ ಬಿಸಿ ಮುಟ್ಟಿಸುವುದಿರಲಿ, ಸರ್ಕಾರಗಳಿಗೆ ಕನಿಷ್ಟ ಪ್ರಶ್ನೆ ಮಾಡದೇ ಇರೋ ಪರಿಸ್ಥಿತಿಗೆ ಕಾರ್ಮಿಕರ ತಲೆದಂಡ ಮಾಡಲೊರಟಿರುವ ಬಂಡವಾಳಶಾಹಿವಾದಿಗಳ, ಯಥಾಸ್ಥಿತಿವಾದಿಗಳ ಮತ್ತು ಜಾತಿಗ್ರಸ್ಥ ಮನಸ್ಥಿತಿಗಳು ಭಾರತಕ್ಕೆ ವಿಶ್ವ ಜ್ಞಾನದ ಕಿರೀಟ ತೊಡಿಸಿದ ಬಾಬಾ ಸಾಹೇಬರನ್ನು ಜಾತಿ ಕನ್ನಡಕದಲ್ಲಿ ನೊಡುವಂತೆ ಮಾಡುವಲ್ಲಿ ಯಶಸ್ಸನ್ನ ಕಂಡು ವಿಕೃತಿ ಮೆರೆದು ಭವ್ಯ ಭಾರತವಾಗಬೇಕಿದ್ದ ದೇಶವನ್ನು ವಿನಾಶದತ್ತ ಕೊಂಡೊಯ್ಯುತಿವೆ.

ಕಾರ್ಮಿಕ ಕಾನೂನುಗಳು ಸಡಿಲಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ಮತ್ತೊಮ್ಮೆ ಬೆವರಿನ ಭಾರತ ಕಟ್ಟಲು ಶಾಲಾ-ಕಾಲೇಜುಗಳಲ್ಲಿ, ಯುವ ಜನರಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ ಬಾಬಾ ಸಾಹೇಬರು ಕಾರ್ಮಿಕರಿಗೆ & ಕಾರ್ಮಿಕ ಇಲಾಖೆಗೆ ನೀಡಿದ ಅನನ್ಯ ಕೊಡುಗೆಗಳ ಬಗ್ಗೆ ತಿಳಿಸಿ ಮತ್ತಷ್ಟು ಕಾರ್ಮಿಕ ಕಾನೂನುಗಳು ಗಟ್ಟಿಗೊಳ್ಳಲು ಹೋರಾಟಕ್ಕೆ ಪ್ರೇರೇಪಿಸಬೇಕಾಗಿರುವುದು ಕೂಡಾ ನಾಗರೀಕ ಸಮಾಜದ ಜವಬ್ದಾರಿಯೆಂದರಿತು ಈ ಲೇಖನವನ್ನು ತಮಗರ್ಪಿಸುತ್ತಿದ್ದೇನೆ.

ಜೈ ಭೀಮ್.. ನಮೋ ಬುದ್ಧಾಯಃ..

ಹೆತ್ತೇನಹಳ್ಳಿ ಮಂಜುನಾಥ್

ಜನ ಮೆಚ್ಚಿದ‌ ಶಿಕ್ಷಕ ಹುಚ್ಚ ಪ್ಪ ಇನ್ನಿಲ್ಲ

ತುಮಕೂರು: ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದ, ನಿವೃತ್ತ ಶಿಕ್ಷಕ ಕೆ.ಹುಚ್ಚಪ್ಪ ಅವರು ಬುಧವಾರ ಬೆಳಿಗ್ಗೆ 10ಕ್ಕೆ ಹೆಬ್ಬೂರು ಹೋಬಳಿ, ಕಂಬಾಳಪುರದ ಅವರ ಸ್ವಗ್ರಾಮದಲ್ಲಿ ನಿಧನರಾದರು.

ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು ಅವರ ಪುತ್ರ ಶಿವಕುಮಾರ್ ತಿಳಿಸಿದ್ದಾರೆ.

ಹುಚ್ಚಪ್ಪ ಅವರು 1948ರಲ್ಲಿ ರೈಪಾಪಿ ಕುಟುಂಬದಲ್ಲಿ ಹುಟ್ಟಿ ಹೆಬ್ಬೂರಿನಲ್ಲಿ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣ ಪಡೆದು ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ದೇವಲಾಪುರ, ಚಿಕ್ಕತೊಟ್ಲುಕೆರೆ, ದಾಸರಹಳ್ಳಿ ಶಿಕ್ಷಕರಾಗಿದ್ದರು. ನಿಡವಳಲು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಅವರು ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಇದರಿಂದಾಗಿ ಅವರು ಜನಮೆಚ್ಚಿದ ಶಿಕ್ಷಣ ಪಶಸ್ತಿ ನೀಡಿ ಗೌರವಿಸಲಾಗಿತ್ತು.

ಮಾರುತಿ ಕೃಪಾ ಪೋಷಕ ನಾಟಕ ಮಂಡಳಿ ನೀಡುವ ಸನ್ಮಾನಕ್ಕೂ ಪಾತ್ರರಾಗಿದ್ದರು.
ಅವರ ಧರ್ಮಪತ್ನಿ ಲಿಂಗಮ್ಮ ಅವರ ಸಹಕಾರವನ್ನು ಯಾವಾಗಲೂ ನೆನೆಯುತ್ತಿದ್ದರು. ಲಿಂಗಮ್ಮ ಅವರ ಕಳೆದ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು.
ಶಿಕ್ಷಕ ವೃತ್ತಿಯಿಂದ ನಿವೃತ್ತಿ ಬಳಿಕ ತುಮಕೂರಿನ ಸದಾಶಿವನಗರದಲ್ಲಿ ತಮ್ಮ ಪುತ್ರ ಶಿವಕುಮಾರ್ ಅವರೊಂದಿಗೆ ವಾಸವಿದ್ದರು.
ಎರಡನೇ ಪುತ್ರ ಕರುಣಾಕರ್, ರಾಜ್ಯ ಸರ್ಕಾರದ ಅಧಿಕಾರಿಯೂ ಆಗಿರುವ ಪುತ್ರಿ ನೇತ್ರಾವತಿ ಅವರನ್ನು ಮೃತರು ಅಗಲಿದ್ದಾರೆ.
ಸಂತಾಪ: ಮೃತರ ನಿಧನಕ್ಕೆ ಬೈರವೇಶ್ವರ ಬ್ಯಾಂಕ್ ಅಧ್ಯಕ್ಷರಾದ ಚಿಕ್ಕರಂಗೇಗೌಡ, ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ, ವಕೀಲರಾದ ಸಿ.ಕೆ.ಮಹೇಂದ್ರ, ಬೆಳ್ಳಿ ಬ್ಲಡ್ ಬ್ಯಾಂಕ್ ನ ಬೆಳ್ಳಿ ಲೋಕೇಶ್ ಸಂತಾಪ‌ಸೂಚಿಸಿದ್ದಾರೆ.

ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಿದ ಕೆ ಎಸ್‌ ಆರ್‌ ಟಿ ಸಿ ನಿಗಮದ ಅಧ್ಯಕ್ಷರು & ಶಾಸಕರಾದ ಎಸ್.ಆರ್ ಶ್ರೀನಿವಾಸ್

ತುಮಕೂರು
ಮನವಿಗೆ ಸ್ಪಂದಿಸಿದ ಶಾಸಕರು ತುಮಕೂರು- ಕುಣಿಗಲ್‌- ಎಡೆಯೂರು ಮಾರ್ಗವಾಗಿ ಬಿ ಜಿ ನಗರಕ್ಕೆ ಬಸ್‌ ಓಡಾಡಲು ಹಸಿರು ನಿಶಾನೆ ತೋರಿದರು.

ಹತ್ತಾರು ವರ್ಷಗಳ ವಿದ್ಯಾರ್ಥಿಗಳ, ಭಕ್ತರ & ರೋಗಿಗಳ ಬೇಡಿಕೆಯಾಗಿದ್ದ ತುಮಕೂರು-ಹೆಬ್ಬೂರು-ಕುಣಿಗಲ್ ಮಾರ್ಗವಾಗಿ ಶ್ರೀಕ್ಷೆೇತ್ರ ಆದಿಚುಂಚನಗಿರಿ ಹೋಗಲು ಅನುಕೂಲವಾಗುವಂತೆ ಆದಿಚುಂಚನಗಿರಿ ವಿಶ್ವವಿದ್ಯಾನಿಲಯಕ್ಕೆ ಕೆ ಎಸ್‌ ಆರ್‌ ಟಿ ಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ ಎಸ್‌ ಆರ್‌ ಟಿ ಸಿ ನಿಗಮದ ಅಧ್ಯಕ್ಷರು & ಶಾಸಕರಾದ ಎಸ್.ಆರ್ ಶ್ರೀನಿವಾಸ್ ರವರಿಗೆ ಬೈರವೇಶ್ವರ ಬ್ಯಾಂಕ್ ಅಧ್ನಕ್ಷ ಚಿಕ್ಕರಂಗೇಗೌಡ, ತುಮಕೂರು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ರವಿ ಗೌಡ, ಕಾಂಗ್ರೆಸ್ ಮುಖಂಡರಾದ ಹೆತ್ತೆನಹಳ್ಳಿ ಮಂಜುನಾಥ್, ವಕೀಲ ಸಿ. ಕೆ. ಮಹೇಂದ್ರ ನಿಯೋಗ ಅವರನ್ನೊಳಗೊಂಡ ಶುಕ್ರವಾರ ತುಮಕೂರಿನ ಅವರ ನಿವಾಸದಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿತು.
ಶ್ರೀ ಆದಿಚುಂಚನಗಿರಿ ಧಾರ್ಮಿಕ ಕ್ಷೇತ್ರವು ಜಿಲ್ಲೆಯಲ್ಲಿ ಅಸಂಖ್ಯಾತ ಭಕ್ತವೃಂದವನ್ನು ಹೊಂದಿದ್ದು ಜೊತೆಗೆ ವಿದ್ಯಾರ್ಜನೆಯಲ್ಲಿ ಇಂದು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಉತ್ತಮ ಶಿಕ್ಷಣ ಕಲ್ಪಿಸುತ್ತಿದೆ. ಬಿ ಜಿ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ 9 ಶಾಲಾ ಕಾಲೇಜುಗಳು ಭಿನ್ನ ಭಿನ್ನ ಕೋರ್ಸ್‌ ಗಳನ್ನು ಆಭ್ಯಸಿಸಲು ಅವಕಾಶವಿದೆ. ಇಲ್ಲಿನ ವಿವಿಧ ಕೋರ್ಸ್‌ ಗಳನ್ನು ಅಭ್ಯಾಸ ಮಾಡಲು ತುಮಕೂರು, ಕುಣಿಗಲ್‌ ಮಾರ್ಗದಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನ ನಿತ್ಯ ಓಡಾಡುತ್ತಾರೆ.

ಅಲ್ಲದೇ ಆದಿಚುಂಚನಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜಧಾನಿಯ ಯಾವ ಹೈ ಟೆಕ್ ಆಸ್ಪತ್ರೆಗಳಿಗೂ ಕಡಿಮೆ ಇಲ್ಲದಂತೆ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದೆ. ನರರೋಗ ವಿಭಾಗವು ಅತ್ಯಂತ ಸುಧಾರಿತ ವೈಶಿಷ್ಟ್ಯಗಳನ್ನೊಳಗೊಂಡಿದೆ. ಈ ಕಾರಣಕ್ಕೂ ದಿನಂಪ್ರತಿ ಕನಿಷ್ಟ 50-100 ಜನ ರೈತರು, ಬಡವರು ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಗೂಳೂರು, ನಾಗವಲ್ಲಿ, ಹೆಬ್ಬುರು ಕಡೆಯಿಂದ ವಿದ್ಯಾರ್ಥಿಗಳು, ರೋಗಿಗಳು, ಭಕ್ತರು ಪ್ರತಿದಿನ ಬಿ. ಜಿ. ನಗರದ ಆಸ್ಪತ್ರೆ ಗೆ ತೆರಳಲು ಪರದಾಡುತ್ತಾರೆ.
ಬಸ್ ಕಲ್ಪಿಸಿಕೊಡುವುದರಿಂದ ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತಲುಪಲು ಅನುಕೂಲ ಆಗಲಿದೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಕಡಿಮೆ ವೆಚ್ಚದ ಚಿಕಿತ್ಸೆ ಪಡೆಯಲು ಬಡವರಿಗೆ ಅನುಕೂಲವಾಗಲಿದೆ ಎಂದು ಭೈರವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಚಿಕ್ಕ ರಂಗಣ್ಣ ಅವರು ಶಾಸಕರಿಗೆ ವಿದ್ಯಾರ್ಥಿಗಳ ಕಷ್ಟವನ್ನು ಮನವರಿಕೆ ಮಾಡಿಕೊಟ್ಟರು.
ವಿದ್ಯಾರ್ಥಿಗಳು ದಿನನಿತ್ಯ ಈ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದು ಬಸ್ ನಲ್ಲಿ ಒಂದು ಗಂಟೆ ತೆಗೆದುಕೊಳ್ಳುವ ಪ್ರಯಾಣ ಎರಡು ಮೂರು ಬಸ್‌ ಹತ್ತಿ ಇಳಿದು ಅಲ್ಲಿಗೆ 3 ಗಂಟೆಯಾಗುತ್ತಿದೆ. ತುಮಕೂರಿನಿಂದ ನೇರವಾಗಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ, ಭಕ್ತರಿಗೆ, ರೋಗಿಗಳಿಗೆ, ಅನುಕೂಲವಾಗುತ್ತದೆಂಬ ನಿಯೋಗದ ಮನವಿಗೆ ಸ್ಪಂದಿಸಿದ ಶಾಸಕ ಎಸ್.ಆರ್ ಶ್ರೀನಿವಾಸ್ ರವರು ಒಂದು ವಾರದೊಳಗೆ ಶಾಲಾ ಕಾಲೇಜಿನ ಸಮಯಕ್ಕೆ ಅನುಕೂಲ ವಾಗುವಂತೆ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಮಕೂರಿನಿಂದ ಬೆಳಗ್ಗೆ 7.10 ಕ್ಕೆ ಹೊರಡುವ ಈ ಬಸ್‌ ಕುಣಿಗಲ್‌ ಹಾಗೂ ಎಡೆಯೂರು ಮಾರ್ಗವಾಗಿ 8.50ಕ್ಕೆ ಬಿ ಜಿ ನಗರದ ವಿಶ್ವವಿದ್ಯಾನಿಲಯದ ಆವರಣ ತಲುಪಲಿದೆ. ಸಂಜೆ 4.10ಕ್ಕೆ ಅಲ್ಲಿಂದ ಹೊರಡಲಿದೆ. ರೋಗಿಗಳು, ವಿದ್ಯಾರ್ಥಿಗಳು ಮತ್ತು ಎಡೆಯೂರು ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಭಕ್ತಾಧಿಗಳಿಗೂ ಅನುಕೂಲವಾಗಲಿದೆ.

ಇದು ‘ಪೊಲೀಸರ ಕುರುಕ್ಷೇತ್ರ’: ತುಮಕೂರಿನಲ್ಲೊಂದು ಹೊಸ ಪ್ರಯೋಗ ಇಂದು

ದುರ್ಯೋದನನ ಪಾತ್ರದಲ್ಲಿ ಡಿವೈಎಸ್ಪಿ ಚಂದ್ರಶೇಖರ್

ಬಹುಶಃ ಈ ವ್ಯಕ್ತಿತ್ವವೇ ಹಾಗೆ. ಎಲ್ಲರನ್ನು ಒಗ್ಗೂಡಿಸುವ ಮನಸ್ಸು, ಎಲ್ಲರೊಳಗೊಂದಾಗುವ ಮನುಷ್ಯ. ಕಠಿಣ ಶಿಸ್ತಿನ ಇಲಾಖೆಯ ಕಟ್ಟುನಿಟ್ಟಿನ‌ ಅಧಿಕಾರಿಯಾದರೂ ಮಾತೃ ಹೃದಯ ಶ್ರೀಮಂತಿಕೆ.

ಹೆಸರು ಚಂದ್ರಶೇಖರ. ಬಹುಶಃ ಅದಕ್ಕೆ ಇರಬೇಕು ಚಂದ್ರನಂತ ಆಕರ್ಷಣೆ ಉಳ್ಳ ಸಹೃದಯತೆಯಿಂದ ಎಂತವರನ್ನು ಸೆಳೆಯುವ ವ್ಯಕ್ತಿತ್ವ.

ತಾನೆಲ್ಲೇ ಕೆಲಸ ನಿರ್ವಹಿಸಿದರೂ, ಅಲ್ಲೊಂದು ನೆನಪಿನ ಬುತ್ತಿ ತುಂಬಿಡುವ, ತನ್ನದೇ ಆದ ಅಸ್ತಿತ್ವದ ಕುರುಹು ಉಳಿಸಿ ಬರುವ ಸಾಂಘಿಕ.

ಅವಮಾನಿಸಿದವರ ಎದುರು ಅವಿರತವಾಗಿ ಸಾಧಿಸಿ, ನಿಬ್ಬೆರಗಿನಿಂದ ಒಮ್ಮೆ ತನ್ನತ್ತ ತಿರುಗಿ ನೋಡುವಂತೆ ನಡೆವ ಛಲದಂಕ.

ಪ್ರಾಯಶಃ ಇದೇ ಅಸ್ಮಿತೆಯಿಂದಲೇ ಇರಬಹುದು ತನ್ನ ನೇತೃತ್ವದಲ್ಲಿ ಕಲೆಗೊಂದು ಬೆಲೆ ಕಟ್ಟುವ ನಿಟ್ಟಿನಲ್ಲಿ ಪೌರಾಣಿಕ ನಾಟಕ ಆಯೋಜಿಸಿ, ತನ್ನವರೊಂದಿಗೆ ಕಲೆಗೊಂದಿಷ್ಟು ಬೆಳಕು ಚೆಲ್ಲುವ ಹೊಸ ಅಡಿಗೆ ಮುನ್ನುಡಿಯಾಗಿದ್ದಾರೆ.

ಪ್ರಸ್ತುತ ತುಮಕೂರು ಪೊಲೀಸ್ ಉಪವಿಭಾಗದ ಉಪಾಧೀಕ್ಷಕ ಕೆ.ಆರ್. ಚಂದ್ರಶೇಖರ ಮೂಲತಃ ಗಂಡು ಮೆಟ್ಟಿದ ನಾಡು ಮಂಡ್ಯ ಜಿಲ್ಲೆಯ ಕೋಣಸಾಲೆ‌ಯ ಮಗ. ಆದರೂ ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದ ವ್ಯಕ್ತಿ, ವ್ಯಕ್ತಿತ್ವ ರೂಪಿಸಿಕೊಂಡು, ತನ್ನ ಅಪ್ಪಿ ಬರುವವರಿಗೆ ಸಹೋದರ, ಸ್ನೇಹಿತ, ಪ್ರೀತಿ ಪಾತ್ರನಾಗಿ, ಧ್ವೇಷಿಸಿ ದೂರ ತಳ್ಳುವವರಿಗೆ ತೊಡೆ ತಟ್ಟಿ ನಿಲ್ಲುವ ಅಂತರ್ಮುಖಿ.
ಅವರ ಸಾರಥ್ಯದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನವನ್ನು ಅವರ ಸಹೋದ್ಯೋಗಿ ಮಿತ್ರರೊಂದಿಗೆ ಏರ್ಪಡಿಸಲಾಗಿದೆ.

ಪೊಲೀಸ್ ಎಂದಾಕ್ಷಣ ಜನರ ಮಸ್ತಕದಲ್ಲಿ ನಾನಾ ಬಗೆಯ ಆಲೋಚನೆಗಳು ಎದುರಾಗುವುದುಂಟು. ಅದಕ್ಕೆ ಕಾರಣಗಳು ನೂರೆಂಟಿರಬಹುದು. ಆದರೆ ಯಾರೋ ಒಂದಿಬ್ಬರ ವಿಕೃತತೆಗೆ ಎಲ್ಲರನ್ನೂ ಹಾಗೆ ಎಂದು ಸಂಭಾವಿಸುವಂತಿಲ್ಲ. ಶಿಸ್ತಿನ ಇಲಾಖೆಯಲ್ಲಿ ಕೆಲವೊಮ್ಮೆ ಕಠಿಣ ನಿರ್ಧಾಗಳು‌ ಅನಿವಾರ್ಯ. ಆಗೆಂದ ಮಾತ್ರಕ್ಕೆ ಪೊಲೀಸರಿಗೆ ಮನುಷ್ಯತ್ವ, ಮಾನವೀಯ ಮೌಲ್ಯಗಳಿಲ್ಲ ಎಂಬಂತಿಲ್ಲ. ಅಂತಃಕರಣದ ಹೃದಯ ಇಲಾಖೆಯ ಎಲ್ಲರಲ್ಲೂ ಇರದ್ದಿದ್ದರೆ ಇಂದು ಇಷ್ಟು ಅಭಿರಾಮವಾಗಿ ನಾವು ಉಳಿಯುತ್ತಿರಲಿಲ್ಲ ಎಂದೆನಿಸುತ್ತದೆ.

ಚಂದ್ರಶೇಖರ ಅವರಂತ ಹೃದಯ ಶ್ರೀಮಂತಿಕೆ ವ್ಯಕ್ತಿಗಳು ಪೊಲೀಸ್ ಇಲಾಖೆಯಲ್ಲಿ ಇನ್ನೂ ಉಳಿದಿರುವ ಕಾರಣದಿಂದಾಗಿಯೇ ಮಾನವೀಯ ಮೌಲ್ಯಗಳು ಇನ್ನೂ ಜೀವಂತಿಕೆ ಪಡೆದಿವೆ. ಇಲಾಖೆಯ ಗೌರವವು ಶಿಖರ ಮುಖವಾಗಿದೆ.

ಇಂತಹ ಮೇರು ವ್ಯಕ್ತಿಯ ಸಾರಥ್ಯದಲ್ಲಿ ಇಲಾಖೆಯ ಸಮಾನ ಚಿತ್ತದ ಸಿಬ್ಬಂದಿ ಒಟ್ಟುಗೂಡಿ ಜಂಜಾಟದ ಬದುಕಿಗೊಂದಿಷ್ಟು ವಿರಾಮ ನೀಡಿ, ವೀರಾಜಮಾನವಾಗಿ ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲು ಮುಂದಾಗಿದ್ದಾರೆ.

ನಮ್ಮ ಕಲೆಗೆ ಒಂದಿಷ್ಟು ಬೆಲೆ ತರುವ, ನಾಡಿನ ಭಾಷೆಗೆ ಹೊಸ ಭಾಷ್ಯ ಬರೆಯುವ, ನಮಗೂ ಅವಕಾಶ ಸಿಕ್ಕರೆ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನ ತೋರ್ಪಡಿಸುವ ನಿಟ್ಟಿನಲ್ಲಿ “ಕುರುಕ್ಷೇತ್ರ” ಎಂಬ ಪೌರಾಣಿಕ ನಾಟಕ ಅಭಿನಯಕ್ಕೆ ಕ್ಷಣ ಗಣನೆ ಎಣಿಸುತ್ತಿದ್ದಾರೆ.

ಇದೇ ಮಾರ್ಚ್ 11 ರಂದು ಸಂಜೆ 4 ಗಂಟೆಗೆ
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಮೀಪದ ಮೈಧಾನದಲ್ಲಿ ಖಾಕಿ ಧಾರಣಿಗಳು ತಮ್ಮ ದೈನಂದಿನ ಸಮವಸ್ತ್ರವನ್ನು ಬದಿಗಿರಿಸಿ ಕುರುಕ್ಷೇತ್ರ ನಾಟಕದ ಭೀಮಾರ್ಜುನ, ಧರ್ಮರಾಯ ನಕುಲ-ಸಹದೇವರಾದಿಯಾಗಿ, ದುರ್ಯೋಧನ, ದುಶ್ಯಾಸನಾಧಿಗಳ ವೇಷದಲ್ಲಿ ತಮ್ಮ ಪಾತ್ರಗಳನ್ನ ಅಭಿವ್ಯಕ್ತಿ ಪಡಿಸುವ‌ ಮೂಲಕ ಪ್ರತಿಭೆಯನ್ನ ಅನಾವರಣ ಮಾಡಲಿದ್ದಾರೆ.

ಸದಾ ಕಾಲ ಸಾರ್ವಜನಿಕ ಸೇವೆಗಾಗಿ ಪಿಸ್ತೂಲ್, ಲಾಟಿ ಹಿಡಿದು ರಕ್ಷಣೆಗಾಗಿ ನಿಲ್ಲುತ್ತಿದ್ದ ಕೈಗಳು ಈಗ ಗದೆ, ಕತ್ತಿ ಹಿಡಿದು ನಮ್ಮ ಸಾಂಸ್ಕೃತಿಕ ಪ್ರತೀಕವೆನಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕ ಅಭಿನಯಿಸುವ ಮೂಲಕ ಕಲೆಗೆ ಹೊತ್ತು ನೀಡಿ ಒಂದಿಷ್ಟು ಮನೋಲ್ಲಾಸ ಪಡಿಸಲು ಸಿದ್ದರಾಗಿದ್ದಾರೆ. ಜನರ ಹಿತಕ್ಕಾಗಿ ಸ್ವಹಿತ ಲೆಕ್ಕಿಸದೆ ಒಂದಲ್ಲಾ ಒಂದು ಜಂಜಾಟದ ಬದುಕಿನಲ್ಲಿ ತೊಡಗುವ ಆರಕ್ಷಕ ಜೀವಗಳ ಈ ಕೌತುಕ ಅಭಿನಯವನ್ನು ಕಣ್ತುಂಬಿಕೊಂಡು ನಾವೂ ಆನಂದಿಸಿ, ಬೆನ್ನುತಟ್ಟಿ ಅವರನ್ನೂ ಪ್ರೋತ್ಸಾಹಿಸುವ ಮುಖೇನ ನಮಗಾಗಿ ತುಡಿವ ಮನಸುಗಳಿಗೊಂದಿಷ್ಟು ಮುದ ನೀಡುವ ಬನ್ನಿ…

✍️

ಲೇಖನ: ತುಳಸೀತನಯ ಚಿದು