Saturday, May 9, 2026
Google search engine
Home Blog Page 213

ಸಿಂಹರಾಶಿಯವರಿಗೆ ಹೇಗಿದೆ ಗೊತ್ತಾ?

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ರಾಶಿ ಭವಿಷ್ಯ

ಮೇಷ ರಾಶಿ
ಸಂತೋಷದಿಂದಿರಲು ನಿಮ್ಮ ಆಕಾಂಕ್ಷೆಗಳನ್ನು ಪರಿಶೀಲಿಸಿ. ಯೋಗದ ಸಹಾಯ ತೆಗೆದುಕೊಳ್ಳಿ – ಇದು ನಿಮಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿಮ್ಮ ಮನೋಧರ್ಮವನ್ನು ಸುಧಾರಿಸುವ ಆರೋಗ್ಯಕರ ಜೀವನ ಕಲೆ ಕಲಿಸುತ್ತದೆ. ನೀವು ಉಳಿಸಿರುವ ಹಣ ಇಂದು ನಿಮ್ಮ ಕೆಲಸಕ್ಕೆ ಬರಬಹುದು. ಇದರೊಂದಿಗೆ ಇದರ ಹೋಗುವ ದುಃಖವು ನಿಮಗೆ ಆಗುತ್ತದೆ. ಇಂದು ನೀವು ಸಲಹೆ ಕೊಟ್ಟರೆ ಅದನ್ನು ಸ್ವೀಕರಿಸಲೂ ಸಿದ್ಧವಾಗಿರಿ. ಅದೃಷ್ಟ ಸಂಖ್ಯೆ: 1

ವೃಷಭ ರಾಶಿ
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ ಹಾಗೂ ಅದು ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ಇಂದು ಹಣ ನಿಮ್ಮ ಕೈಯಲ್ಲಿ ಉಳಿಯುದಿಲ್ಲ. ಇಂದು ನೀವು ಹಣವನ್ನು ಉಳಿಸುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ಅದೃಷ್ಟ ಸಂಖ್ಯೆ: 9

ಮಿಥುನ ರಾಶಿ
ಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ- ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ಅದೃಷ್ಟ ಸಂಖ್ಯೆ: 7

ಕರ್ಕ ರಾಶಿ
ಅನಾವಶ್ಯಕವಾಗಿ ವಾದ ಮಾಡಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನೀವು ಒಂದು ವಾದದಿಂದ ಏನನ್ನೂ ಪಡೆಯದಿದ್ದರೂ ಏನಾದರೂ ಕಳೆದುಕೊಳ್ಳುತ್ತೀರೆಂದು ನೆನಪಿಟ್ಟುಕೊಳ್ಳಿ. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಜನರು ಮತ್ತು ಅವರ ಉದ್ದೇಶಗಳ ಬಗ್ಗೆ ಅವಸರದ ತೀರ್ಮಾನ ಕೈಗೊಳ್ಳಬೇಡಿ -ಅವರು ಒತ್ತಡದಲ್ಲಿರಬಹುದು ಮತ್ತು ಅವರಿಗೆ ನಿಮ್ಮ ಸಹಾನುಭೂತಿ ಮತ್ತು ತಿಳುವಳಿಕೆಯ ಅಗತ್ಯವಿರುತ್ತದೆ. ಅದೃಷ್ಟ ಸಂಖ್ಯೆ: 1

ಸಿಂಹ ರಾಶಿ
ಧ್ಯಾನ ಮತ್ತು ಯೋಗವನ್ನು ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳಿಗಾಗಿ ಆಚರಿಸಬೇಕು. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಮಕ್ಕಳು ನೀವು ಅವರೆಡೆಗೆ ಗಮನ ಹರಿಸಬೇಕೆಂಬ ಬೇಡಿಕೆಯಿಟ್ಟರೂ ಅವರು ನಿಮಗೆ ಸಂತೋಷ ತರುತ್ತಾರೆ. ಪ್ರೇಮಿಗಳು ಕುಟುಂಬದ ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತಾರೆ. ಅದೃಷ್ಟ ಸಂಖ್ಯೆ: 9

ಕನ್ಯಾ ರಾಶಿ
ನಿಮ್ಮ ಮುಂಗೋಪ ನಿಮ್ಮನ್ನು ಇನ್ನೂ ಹೆಚ್ಚು ತೊಂದರೆಯಲ್ಲಿ ಸಿಲುಕಿಸಬಹುದು. ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ಮನೆಯ ಸಮಸ್ಯೆಗಳಿಗೆ ತಕ್ಷಣ ಗಮನ ನೀಡುವ ಅಗತ್ಯವಿರುತ್ತದೆ. ನೀವು ಹಂಚಿಕೊಂಡ ಉತ್ತಮ ಸಮಯವನ್ನು ನೆನಪಿಸಲು ನಿಮ್ಮ ಸ್ನೇಹವನ್ನು ನೆನಪು ಮಾಡಿಕೊಳ್ಳುವ ಸಮಯ. ನೀವು ಯಾವುದೇ ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. ಅದೃಷ್ಟ ಸಂಖ್ಯೆ: 7

ತುಲಾ ರಾಶಿ
ನಿಮ್ಮ ಬಲವಾದ ಧೃಢತೆ ಮತ್ತು ನಿರ್ಭಯತೆ ನಿಮ್ಮ ಮಾನಸಿಕ ಶಕ್ತಿ ವರ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದು ನಿಮಗೆ ಯಾವುದೇ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಉತ್ತೇಜಿಸುವುದರಿಂದ ಇದನ್ನು ಕಾಯ್ದುಕೊಳ್ಳಿ. ಹೆಚ್ಚು ಖರೀದಿಸಲು ಧಾವಿಸುವ ಮೊದಲು ನೀವು ಈಗಾಗಲೇ ಹೊಂದಿರುವುದನ್ನು ಬಳಸಿ. ಮಕ್ಕಳಿಂದ ಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ. ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ ಇಂದು ನೀವು ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ ಮತ್ತು ಆನಂದಿಸಲು ಸೂಕ್ತ ಮನೋಭಾವದಲ್ಲಿರುತ್ತೀರಿ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ವೈಯಕ್ತಿಕ ಜೀವನದ ಜೊತೆಗೆ ಕೆಲವು ಧರ್ಮಾರ್ಥ ಕಾರ್ಯಗಳಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ವೈಯಕ್ತಿಕ ಜೀವನವನ್ನು ಘಾಸಿಗೊಳಿಸದೇ ನಿಮಗೆ ಮಾನಸಿಕ ಶಾಂತಿ ನೀಡುತ್ತದೆ. ಅದೃಷ್ಟ ಸಂಖ್ಯೆ: 2

ಧನು ರಾಶಿ
ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗಿನ ಸಂತಸದ ಪ್ರಯಾಣ ನಿಮಗೆ ಸಮಾಧಾನ ನೀಡುತ್ತದೆ. ಯಾವುದೇ ಅಪರಿಚಿತ ವ್ಯಕ್ತಿಯ ಸಲಹೆಯಿಂದ ಎಲ್ಲಾದರೂ ಹೂಡಿಕೆ ಮಾಡಿರುವ ಜನರಿಗೆ, ಇಂದು ಆ ಹೂಡಿಕೆಯಿಂದ ಪ್ರಯೋಜನವನ್ನು ಪಡೆಯುವ ಪೂರ್ತಿಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ. ನಿಮ್ಮ ಕರೆಯನ್ನು ಮುಂದುವರಿಸುವ ಮೂಲಕ ನಿಮ್ಮ ಪ್ರಣಯದ ಸಂಗಾತಿಯನ್ನು ಚುಡಾಯಿಸುತ್ತೀರಿ. ಅದೃಷ್ಟ ಸಂಖ್ಯೆ: 8

ಮಕರ ರಾಶಿ
ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ವ್ಯಾಪಾರಿಗಳಿಗೆ ಇಂದು ವ್ಯಾಪಾರದಲ್ಲಿ ಹಾನಿ ಉಂಟಾಗಬಹುದು ಮತ್ತು ತಮ್ಮ ವ್ಯಾಪಾರವನ್ನು ಉತ್ತಮಗೊಳಿಸಲು ನೀವು ಹಣವನ್ನು ಖಾರುಚು ಮಾಡಬೇಕಾಗುತ್ತದೆ. ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಗಳ ಭೇಟಿ ಸಾಧ್ಯವಿದೆ. ಅದೃಷ್ಟ ಸಂಖ್ಯೆ: 8

ಕುಂಭ ರಾಶಿ
ನಿಮ್ಮ ಕುಟುಂಬದ ನೀವು ಕಿರಿಕಿರಿ ಸಾಧ್ಯವಾಯಿತು ಇದು ನಿಮ್ಮಿಂದ ಸಾಕಷ್ಟು ನಿರೀಕ್ಷಿಸುತ್ತದೆ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ನಿಮ್ಮ ಪ್ರೀತಿ ಸಂಗಾತಿಯ ಸಾಮಾಜಿಕ ಮಾಧ್ಯಮದ ಕಳೆದ ಕೆಲವು ಸ್ಟೇಟಸ್‌ಗಳನ್ನು ಪರಿಶೀಲಿಸಿ, ನೀವು ಒಂದು ಸುಂದರ ಅಚ್ಚರಿಯನ್ನು ಪಡೆಯುತ್ತೀರಿ. ನಿಮ್ಮ ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ. ಅದೃಷ್ಟ ಸಂಖ್ಯೆ: 6

ಮೀನ ರಾಶಿ
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಇಂದು, ಒಂದು ಪಾರ್ಟಿಯಲ್ಲಿ ನೀವು ಆರ್ಥಿಕ ಭಾಗವನ್ನು ಬಲಪಡಿಸಲು ಪ್ರಮುಖ ಸಲಹೆಯನ್ನು ನೀಡುವ ವ್ಯಕ್ತಿಯನ್ನು ಭೇಟಿ ಮಾಡಬಹುದು. ಅದೃಷ್ಟ ಸಂಖ್ಯೆ: 4

ಕಿಟ್ ವಿತರಣೆಯಲ್ಲಿ ರಾಜಕೀಯ ಬೇಡ

ಪಾವಗಡ: ಬಡವರಿಗೆ ಆಹಾರ, ಕಿಟ್ ವಿತರಿಸುವಾಗ ಯಾರೊಬ್ಬರೂ ರಾಜಕೀಯ ಮಾಡಬಾರದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.

ಪಟ್ಟಣದ   19 ನೇ ವಾರ್ಡ್ ನಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಪಡಿತರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಮಂತರು, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವರು ಪರಿಹಾರ, ಆಹಾರ, ಇತರೆ ಕಿಟ್ ಗಳನ್ನು ಸ್ವ ಇಚ್ಚೆಯಿಂದ ನೊರಾಕರಿಸಬೇಕು. ಸವಲತ್ತುಗಳನ್ನು ಅಕ್ಕ ಪಕ್ಕದಲ್ಲಿರುವ ನಿರ್ಗತಿಕರು, ಬಡವರಿಗೆ  ತಲುಪಿಸಲು ಸಹಕರಿಸಬೇಕು.  ಪಕ್ಷದ ವತಿಯಿಂದ 5 ಸಾವಿರ ಕುಟುಂಬಗಳಿಗೆ ಪಡಿತರ ವಿತರಿಸಲಾಗಿದೆ. ಹೆಚ್ಚುವರಿಯಾಗಿ ಮತ್ತೆ 1 ಸಾವಿರ ಕಿಟ್ ವಿತರಿಸಲಾಗುವುದು ಎಂದರು.

ಕೊರೊನಾ ನಿಯಂತ್ರಿಸಲು ಎಲ್ಲರೂ ಕೈ ಜೋಡಿಸಬೇಕು. ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸಿ ಜಾಗ್ರತೆಯಿಂದಿರಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ಮನು, ಮುಖಂಡ ಯೂನಸ್, ಷಾಕೀರ್, ರಫೀಕ್, ಶಾಂತಣ್ಣ, ಮನು, ಸುಬ್ಬರಾಯಪ್ಪ, ಬಷೀರ್, ಷಕೀಲ್, ಅಂಜು, ಸುಹೇಲ್, ಅರೂನ್ ರಷೀದ್ ಉಪಸ್ಥಿತರಿದ್ದರು.

ಪಾವಗಡದಲ್ಲಿ ತುಂಬಿ ಹರಿಯುತ್ತಿದೆ ಉತ್ತರ ಪಿನಾಕಿನಿ ನದಿ

Publicstory. in


Pavagada: ಪಾವಗಡ ತಾಲ್ಲೂಕಿನ ನಾಗಲಮಡಿಕೆ ಬಳಿ ಉತ್ತರಪಿನಾಕಿನಿ ನದಿ ಸೋಮವಾರ ಮೈದುಂಬಿ ಹರಿಯಿತು. ಹರಿಯುವ ನದಿ ನೀರಿನಲ್ಲಿ ತಾಲ್ಲೂಕಿನ ಜನತೆ ಆಟವಾಡುತ್ತಾ ಖುಷಿ ಹಂಚಿಕೊಂಡರು.

ಸತತ ಎರಡು ದಿನಗಳಿಂದ ಬೀಳುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಆಂಧ್ರ ಸರ್ಕಾರ ಪೇರೂರಿನ ಡ್ಯಾಂ ಗೆ ನೀರು ಹರಿಸುವ ಸಲುವಾಗಿ ಉತ್ತರ ಪಿನಾಕಿನಿ ಮೂಲಕ ಕೃಷ್ಣ ನದಿಯ ನೀರನ್ನು ಹರಿಸುತ್ತಿದೆ.

ನಾಗಲಮಡಿಕೆ ಚೆಕ್ ಡ್ಯಾಂ ತುಂಬುವ ಹಂತದಲ್ಲಿತ್ತು. ಮಳೆಯಿಂದಾಗಿ ಚೆಕ್ ಡ್ಯಾಂ ತುಂಬಿ ನೀರು ಹರಿಯುವ ವೇಗವೂ ಹೆಚ್ಚಿದೆ. ಇದು ತಾಲ್ಲೂಕು ಹಾಗೂ ಆಂಧ್ರ ಜನತೆಗೆ ವರವಾಗಿ ಪರಿಣಮಿಸಿದೆ.

ಪಾವಗಡ ಜನತೆ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಹೋದಾಗ ಮಾತ್ರ ನದಿ ತುಂಬಿ ಹರಿಯುವುದನ್ನು ನೋಡಬೇಕಿತ್ತು. ಇದೀಗ ಇಲ್ಲಿನ ಏಕ ಮಾತ್ರ ನದಿ ಪಿನಾಕಿನಿ ಹರಿಯುವುದನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ನದಿ ಹರಿಯುವುದನ್ನು ನೋಡಲು ಹೆಚ್ಚಿನ ಜನತೆ ಇತ್ತ ಆಗಮಿಸುತ್ತಿದ್ದಾರೆ.

ನಿವೃತ್ತಿ ಮುಂದೂಡಿಕೆ: ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ

Publicstory.in


ತುಮಕೂರು: ಆರೋಗ್ಯ ಇಲಾಖೆಯಲ್ಲಿ 60 ವರ್ಷ ತುಂಬಿ ನಿವೃತ್ತಿಯಲ್ಲಿದ್ದವರನ್ನು ಕೊರೊನಾ ಹೆಸರಿನಲ್ಲಿ ನಿವೃತ್ತಿಯನ್ನು ಮುಂದೂಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವೈದ್ಯಕೀಯ ಇಲಾಖೆಯಲ್ಲೇ ಅಸಮಾಧಾನ ಉಂಟಾಗಿದೆ.

ಕಳೆದ ಮೂರು ತಿಂಗಳಿಂದ ಹೊಸ ಹೊಸ ಆದೇಶಗಳನ್ನು ಹೊರಡಿಸುವ ಮೂಲಕ ಕ್ಲಿನಿಕಲ್, ನಾನ್ ಕ್ಲಿನಿಕಲ್ ಸಿಬ್ಬಂದಿ ನಿವೃತ್ತಿಯನ್ನು ಮುಂದೂಡಿದೆ.

ಕೊರೊನಾ ತುರ್ತು ಪರಿಸ್ಥಿತಿ ಕಾರಣ ನಿವೃತ್ತರ ನಿವೃತ್ತಕಯನ್ನು ಒಂದು ತಿಂಗಳ ಕಾಲ ಮುಂದೂಡಿ ಮೊನ್ನೆ, ಮೊನ್ನೆ ಸರ್ಕಾರ ಆದೇಶಿಸಿದೆ. ಇದಕ್ಕೂ ಹಿಂದೆ, ಎರಡು ತಿಂಗಳ ಕಾಲ ನಿವೃತ್ತಿ ಮುಂದೂಡಿ ಆದೇಶಿಸಿತ್ತು.

ವಯಸ್ಸಾದವರಿಗೆ ಕೊರೊನಾ ಸೋಂಕು ತಗುಲುವ ಅಪಾಯ ಹೆಚ್ಚಿರುವುದರಿಂದ‌ ಮನೆಯಿಂದ ಹೊರಗೆ ಬರಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ವಯಸ್ಸಾದವರಲ್ಲಿ ಕಡಿಮೆ. ಬೇಗ ಸೋಂಕಿಗೂ ಗುರಿಯಾಗುತ್ತಾರೆ. ಆದರೆ ಆರೋಗ್ಯ ಇಲಾಖೆ ನಿವೃತ್ತಿ ನಂತರವೂ ಸಿಬ್ಬಂದಿ ದುಡಿಸಿಕೊಳ್ಳುವ ತುಡಿತದ ಹಿಂದೆ ಏನಿರಬಹುದೋ ಗೊತ್ತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಯುವಕರಿಗೆ ಅವಕಾಶ ನೀಡಬೇಕು. ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಬದಲು ಏಕೆ ಈ ರೀತಿ ನಡೆದುಕೊಳ್ಳುತ್ತಿದೆ ಎಂಬುದೇ ಪ್ರಶ್ನೆಯಾಗಿದೆ.

ಆರೋಗ್ಯ ಸಚಿವ ಶ್ರೀರಾಮಲು ಅವರನ್ನು ಅಧಿಕಾರಿಗಳು, ಕೆಲವರು ದಾರಿ ತಪ್ಪಿಸಿರಬಹುದು.‌ ಮುಂದೂಡಿಕೆಯಿಂದೆ ಯಾವುದೊ‌ ಗೊತ್ತಾಗದ ರಾಜಕೀಯ ಇರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದರು.


ಯುಗದ ಕವಿ

0

ದೇವರಹಳ್ಳಿ ಧನಂಜಯ


ಮಲೆಕಾನು ತಬ್ಬಿರುವ
ಕಾಡು ಮಲ್ಲಿಗೆ ಘಮವೆ
ಕಾಡು ದಾಟಿ ಭಾವ ಮೀಟಿ
ಜಗದಗಲ ಹಬ್ಬಿದೆ ಪರಿಮಳವೆ

ಪರ್ಫ್ಯ್ಂ ಹಾಕಲಾಗುತ್ತಿದೆ
ನಿನ್ನ ಘಮಲು ಮಾಸಲೆಂದು
ಫಲಿಸದ ಪ್ರಯತ್ನ
ಕತ್ತಲಾದಂತೆ ಕಗಗಾನದೊಟ್ಟಿಗೆ
ನಿನ್ನ ಪುನುಗು ಗಾಳಿಗಂಧ

ಕುಪ್ಪಳಿಯ ವನರಾಶಿ ನಡುವೆ
ಬಂಡೆ ಇಬ್ಬನಿಯ ಪುಳಕಕ್ಕೆ
ಕಡೆದು ರಸರುಷಿ ಕಣ್ಣಿನ ದಿವ್ಯ ದೃಷ್ಠಿ
ಕೊಟ್ಟ ನವ ನೋಟದ ಕಣ್ಣು ಕೀಳಲು ಹೆಣಗಾಟ ನಡೆದಿದೆ

ಎಚ್ಚೆತ್ತ ಚಿತ್ತದಲಿ ಕಾಣಿರಿ ಸಚ್ಚಿದಾನಂದ
ಎಂದ ನಿನ್ನ ನಾಲಗೆಗೆ ನೊಸಲು ಕಟ್ಟಿ
ನಿನ್ನ ವಿವೇಕದ ಯುವಪಡೆ ನಿನ್ನ ವಿರುದ್ಧವೇ ಸಿದ್ದವಾಗಿ
ಭಾರತ ಜನನಿಗೆ ಶುರುವಾಗಿದೆ ಧರ್ಮಸಂಕಟ

ಕೋಟ್ಯಾನು ಕಣ್ಣುಗಳಿಗೆ
ನಿನ್ನರಿವ ಚಸ್ಮ ಬೇಕಿದೆ
ಕಾಯುತ್ತಿದ್ದೇವೆ ಅರಿವಾಗಿ ಗುರುವಾಗಿ ಮತ್ತೆ ಬಾ ಯುಗದ ಕವಿಯೆ.

ಒಂದು ಹೋಮ್ ವರ್ಕ್ ನಿಂದಾಗಿ ಏನೆಲ್ಲಾ..

ಜಿ ಎನ್ ಮೋಹನ್


‘ಪಪ್ಪಾ ಹೋಮ್ ವರ್ಕ್ ಗೆ ಹೆಲ್ಪ್ ಮಾಡ್ತೀಯಾ..’ ಅಂತ ಆ ಪುಟ್ಟ ಹುಡುಗಿ ಓಡಿಬಂದಾಗ ನನ್ನ ಕಣ್ಣಲ್ಲಿ ಮಿಂಚು

ಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ ಹಾಳೆ ತಿರುವುತ್ತಾ ಹೋದೆ.

ಅವಳು ಒಂದು ಬದುಕಿನ ಕಥೆ ಹೆಕ್ಕಬೇಕಿತ್ತು. ಶಾಲೆಯ ಪುಸ್ತಕದಲ್ಲಿದ್ದ ಒಂದು ಪಾಠವನ್ನು ತನ್ನ ಕಣ್ಣುಗಳ ಮೂಲಕ ಕಟ್ಟಿಕೊಡಬೇಕಿತ್ತು.

ಸರಿ ದೋಸೆಮುಗುಚಿ ಹಾಕುವ ಕೆಲಸ ಅಷ್ಟೇತಾನೇ. ಅವರು ಹಾಗೆ ಬರೆದದ್ದನ್ನು ಹೀಗೆ ಬರೆದರೆ ಅವಳ ಹೋಮ್ ವರ್ಕ್ ರೆಡಿ ಅಂದುಕೊಂಡವನೇ ಆ ಪಾಠ ಓದತೊಡಗಿದೆ.

ಒಹ್! ನಿಜಕ್ಕೂ ಅದು ಪಾಠ. ಬದುಕಿನ ಪಾಠ. ನನ್ನೊಳಗೆ ಇದ್ದ ಕತ್ತಲೆಯನ್ನು ಒಂದಿಷ್ಟು ಸರಿಸಿ ಹಾಕಿದ ಪಾಠ.

ಆಕೆ-ರೋಸಾ ಪಾರ್ಕ್ಸ್. ಅಮೆರಿಕಾದ ಅಲಬಾಮಾದ ಮಹಿಳೆ

ಒಂದು ದಿನ ಹೀಗಾಯ್ತು. ಕರಿಯ ಮತ್ತು ಬಿಳಿಯ ಬಣ್ಣ ತನ್ನ ಆಟವನ್ನು ಆಡುತ್ತಿದ್ದ ಕಾಲ. ಜಗತ್ತು ಕಪ್ಪು ಎನ್ನುವ ಯಾವುದನ್ನೂ ಒಪ್ಪಿಕೊಳ್ಳಲುಸಿದ್ಧವಿರಲಿಲ್ಲ. ಕಪ್ಪು ಜನರಿಗೆ ಜೀವ ಒಂದು ಇದೆ ಎಂದೇ ಗೊತ್ತಿಲ್ಲದ ಕಾಲ. ಕಪ್ಪು ಜನರಿಗೆ ಜೀವ ಇದೆ ಎಂದರೆ ಅದೇ ಅಪರಾಧ ಎನ್ನುವಂತೆ ನೋಡುತ್ತಿದ್ದಕಾಲ.

ಬಸ್ ನಲ್ಲಿ ಬಹುಪಾಲು ಸೀಟುಗಳು ಬಿಳಿಯರಿಗೆ ಮಾತ್ರ. ಕಪ್ಪು ಜನರೇ ಬಸ್ ನಲ್ಲಿ ತುಂಬಿದ್ದರೂ ಬಿಳಿಯರ ಮೀಸಲು ಸೀಟುಗಳು ಖಾಲಿ ಇದ್ದರೂ ಅವರು ಕುಳಿತುಕೊಳ್ಳುವಂತಿಲ್ಲ.

ಅಂತಹ ಒಂದು ಬಸ್ ನಲ್ಲಿ ರೋಸಾ ಪಾರ್ಕ್ ಹತ್ತಿದಳು. ಇಡೀ ದಿನದ ದುಡಿಮೆ ಸಾಕಾಗಿ ಹೋಗಿತ್ತು. ಬಳಲಿ ಬೆಂಡಾಗಿದ್ದ ರೋಸಾ ಕುಳಿತದ್ದು ಕಪ್ಪುಜನರಿಗಾಗಿಯೇ ಇದ್ದ ಸೀಟ್ ನಲ್ಲೇ

ಆದರೆ ಆಗಿದ್ದು ಬೇರೆ. ಒಬ್ಬ ಬಿಳಿಯ ಬಂದವನೇ ಎದ್ದೇಳು ಅಂದ. ಬಿಳಿಯರಿಗಿದ್ದ ಸೀಟ್ ತುಂಬಿತ್ತು. ಆದರೆ ಬಿಳಿಯ ಎಂದರೆ ಬಿಳಿಯನೇ ಅಲ್ಲವೇ. ಕರಿಯರ ಸೀಟ್ ಆದರೇನು. ನಾನೇರುವತ್ತರಕ್ಕೆ ನೀನೇರಬಲ್ಲೆಯಾ ಎಂಬ ಸೊಕ್ಕು.

ರೋಸಾ ಪಾರ್ಕ್ಸ್ ಅವನತ್ತ ನೋಡಿದಳು. ಸುಸ್ತಾಗಿ ಹೋಗಿದ್ದ ಜೀವಕ್ಕೆ ನಿಲ್ಲಲ್ಲು ಸಾಧ್ಯವೇ ಇಲ್ಲ ಅನಿಸಿತು. ನಿಲ್ಲಲಿಲ್ಲ ಅಷ್ಟೇ. ಬಿಳಿಯ ಕೂಗಾಡಿದ. ಬಸ್ ಡ್ರೈವರ್, ಕಂಡಕ್ಟರ್ ಕೂಗಾಡಿದರು. ಬಸ್ ನಲ್ಲಿದ್ದ ಬಿಳಿಯರೆಲ್ಲಾ ಒಟ್ಟಾಗಿ ಕೂಗಿದರು.

ರೋಸಾ ಒಂದಿನಿತೂ ಅಲುಗಲಿಲ್ಲ. ಕುಳಿತೇಬಿಟ್ಟಳು. ಅಷ್ಟೇ ಆದದ್ದು.

ಆದರೆ ಅದು ಬಿಳಿಯರ ಕಣ್ಣಿಗೆಮಾತ್ರ ‘ಅಷ್ಟೇ’ ಆಗಿರಲಿಲ್ಲ. ಪೊಲೀಸರನ್ನು ಕರೆಸಿದರು. ಎಲ್ಲರ ಕಣ್ಣೆದುರಿಗೆ ರೋಸಾಗೆ ಕೈಕೋಳ ತೊಡಿಸಿ ಜೈಲಿಗೆ ದೂಕಿದರು.

ದೂಕಿದ್ದು ಕತ್ತಲ ಕೋಣೆಗೆ. ಆದರೆ ಅದೇ ಬೆಳಕಿಗೆ ದಾರಿಯಾಗಿ ಹೋಯಿತು.

ಯಾವಾಗ ರೋಸಾ ಕೂತಲ್ಲೇ ಕೂತುಬಿಟ್ಟಳೋ. ಅದೇ ಮಹಾಪರಾಧವಾಗಿಹೋಯಿತೋ, ಇಡೀ ದೇಶದ ಕರಿಯರು ಒಂದಾದರು. ಮನುಷ್ಯರಾಗಿದ್ದವರೆಲ್ಲರೂ ಅವರ ಜೊತೆಗೂಡಿದರು. ನಾಗರಿಕ ಹಕ್ಕುಗಳ ಚಳವಳಿ ಆರಂಭವಾಗಿಹೋಯಿತು.

ನೋಡ ನೋಡುತ್ತಿದ್ದಂತೆಯೇ ಒಂದು ಪುಟ್ಟ, ಹೆಸರೇ ಕೇಳಿರದಿದ್ದ ಊರಿನಲ್ಲಿ ನಡೆದ ಘಟನೆ ದೇಶದ ಗಡಿ ದಾಟಿ ಸುದ್ದಿ ಮಾಡುತ್ತಾ ಹೋಯಿತು.

ಜಗತ್ತಿಗೆ ಜಗತ್ತೇ ಈ ಹೋರಾಟದ ಬೆನ್ನಿಗೆ ನಿಂತುಬಿಟ್ಟಿತು.

ಚರಿತ್ರೆಯ ಪುಟಗಳಲ್ಲಿ ಏನು ಬರೆದಿದ್ದಾರೋ ಗೊತ್ತಿಲ್ಲ. ಏಕೆಂದರೆ ಚರಿತ್ರೆಯ ಪುಟಗಳು ಸೃಷ್ಟಿಯಾಗಿರುವುದು ಬೇಟೆ ಆಡಿದವನ ಕಣ್ಣುಗಳಿಂದ ಮಾತ್ರಅಲ್ಲವೇ?. ಆದರೆ ಹೀಗಾಗಿ ಹೋಯಿತು-

ಆಕೆ ಕುಳಿತಳು.. ಇಡೀ ಜಗತ್ತು ಎದ್ದು ನಿಂತಿತು.

ಇದಾಗಿ ಒಂದೆರಡು ವರ್ಷವಾಗಿತ್ತು. ನಾನು ವಾಷಿಂಗ್ಟನ್ ನ ಪ್ರೆಸಿಡೆಂಟ್ ಕಚೇರಿಯ ಎದುರು ಇದ್ದೆ.

ಎದ್ದೇನೋ ಬಿದ್ದೆನೋ ಎಂದು ಅಲ್ಲಿಗೆ ಓಡಿ ಬರುವವೇಳೆಗೆ ಜನಸಾಗರ. ದೊಡ್ಡ ಕ್ಯೂ.. ಕಣ್ಣು ಆಯಾಸಗೊಳ್ಳುವವರೆಗೂ ಸಾಗಿ ಹೋಗಿತ್ತು.

ನನಗೋ ಆತಂಕ. ಇನ್ನಿದ್ದದ್ದು ಒಂದು ಗಂಟೆಯಷ್ಟು ಸಮಯಮಾತ್ರ. ಈ ‘ಕ್ಯೂ’ನಲ್ಲಿ ನಿಂತರೆ ಶತಾಯ ಗತಾಯ ನಾನು ಅಧ್ಯಕ್ಷರ ಸಭಾಂಗಣ ಸೇರುವುದು ಸಾಧ್ಯವೇ ಇರಲಿಲ್ಲ.

ತಕ್ಷಣ ನೆನೆಪಿಗೆ ಬಂತು. ಸೀದಾ ಮುಖ್ಯ ಗೇಟಿಗೆ ಹೋದವನೇ ನನ್ನ ‘ಐ ಡಿ’ ಝಳಪಿಸಿದೆ. ನಾನು ಆಗ ‘ಸಿ ಎನ್ ಎನ್’ ಚಾನಲ್ ನಲ್ಲಿದ್ದೆ.

‘ಸಿ ಎನ್ ಎನ್’ ಎಂದರೇನು ಸುಮ್ಮನೆಯೇ?. ಅದು ಇಡೀ ಅಮೆರಿಕಾದ ಕಣ್ಣು ಕಿವಿ ನಾಲಿಗೆ ಎಲ್ಲಾ.. ಹಾಗಾಗಿ ಗೇಟು ತನ್ನಿಂದತಾನೇ ತೆರೆದುಕೊಡುಬಿಟ್ಟಿತ್ತು.

ಅಕಸ್ಮಾತ್ ತೆರೆಯದಿದ್ದರೆ ನೇರಾ ಜಾರ್ಜ್ ಬುಷ್ ಬಳಿಗೆ ಕರೆದೊಯ್ಯಿರಿ ಎಂದು ಹೇಳುವಷ್ಟು ಧೈರ್ಯವನ್ನು ಆ ಒಂದು ಪುಟ್ಟ ಐ ಡಿ ಕಾರ್ಡ್ ನನಗೆ ಕೊಟ್ಟುಬಿಟ್ಟಿತ್ತು.

ಹಾಗೆ ನಾನು ಒಳಗೆ ನುಗ್ಗಿದ್ದು ಇನ್ನಾರಿಗೂ ಅಲ್ಲ. ಅದೇ ಆ ನಾಲ್ಕನೇ ಕ್ಲಾಸಿನ ಪಠ್ಯ ಪುಸ್ತಕದಲ್ಲಿ ಒಂದು ಪಾಠವಾಗಿದ್ದ, ನಾಲ್ಕು ದಿನಗಳ ಕಾಲ ನಾನೂ ನನ್ನ ಮಗಳೂ ಗೂಗಲ್ ಎಲ್ಲಾ ತಡಕಾಡಿ ಸಂಗ್ರಹಿಸಿದ್ದ ಫೋಟೋ, ಚಿತ್ರಗಳನ್ನೆಲ್ಲಾ ಕತ್ತರಿಸಿ ಹೊಸ ಸ್ಕೆಚ್ ಪೆನ್ ತಂದು ಡ್ರಾಯಿಂಗ್ ಹಾಳೆಯ ಮೇಲೆ ನೀಟಾಗಿ ಕತ್ತರಿಸಿ ಒಂದು ಬದುಕು ಕಟ್ಟಿ ಕೊಟ್ಟಿದ್ದೆವಲ್ಲಾ ಅದೇ ‘ರೋಸಾ ಪಾರ್ಕ್ಸ್’ಗಾಗಿ

ರೋಸಾ ತಮ್ಮ೯೨ ವಯಸ್ಸಿನಲ್ಲಿ ಕಣ್ಣು ಮುಚ್ಚಿದ್ದರು. ಮೈಲುಗಟ್ಟಲೆ ದೂರದಲ್ಲಿದ್ದ ನನಗೇ, ಖಂಡಗಳ ಆಚೆ ಇದ್ದ ನನಗೇ, ದೇಶ ಗೊತ್ತಿರದಿದ್ದ, ಭಾಷೆ ಗೊತ್ತಿರದಿದ್ದ ನನಗೇ, ಒಮ್ಮೆಯೂ ನೋಡಿರದ ನನಗೇ ಆ ಘಟನೆ ನಡೆದಾಗ ಹುಟ್ಟಿಯೂ ಇರದ ನನಗೇ.. ರೋಸಾ ಅಷ್ಟು ದೊಡ್ಡದಾಗಿ ಕಾಡಿದ್ದಾಗ.. ಇನ್ನುಅಮೆರಿಕಾಗೆ..!!

ರೋಸಾ ಪಾರ್ಕ್ಸ್ ಎನ್ನುವುದು ತಮ್ಮ ಬದುಕಿಗೆ ಏನು ಎನ್ನುವುದು ಎಲ್ಲರಿಗೂ ಗೊತ್ತಿತ್ತು.. ಅಂತೆಯೇ ಸರ್ಕಾರಕ್ಕೂ.. ಹಾಗಾಗಿಯೇ ಮೊಟ್ಟಮೊದಲ ಬಾರಿಗೆ ಅಧ್ಯಕ್ಷರ ಕಚೇರಿಯಲ್ಲಿ ಅಧ್ಯಕ್ಷರಲ್ಲದವರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಯಾಕೆಂದರೆ ರೋಸಾ ಪಾರ್ಕ್ಸ್ ಅಧ್ಯಕ್ಷರಿಗಿಂತಲೂ ಒಂದು ಸಾಸಿವೆ ಕಾಳು ಹೆಚ್ಚು ತೂಗಿದವರೇ..

ನಾನು ಕ್ಯಾಮೆರಾ ಕೈಗೆತ್ತಿಕೊಂಡವನೇ ಕ್ಲಿಕ್ಕಿಸುತ್ತಾ ಹೋದೆ. ಒಳಗೆ, ಹೊರಗೆ.. ರೋಸಾ ಎಂಬ ಬೆಳಕು ನನ್ನ ಕ್ಯಾಮೆರಾದೊಳಗೆ ಅಡಗಿದ್ದ ಕತ್ತಲನ್ನೂ ಹೊರಗೆ ತಳ್ಳುತ್ತಾ ಕುಳಿತಿತ್ತು

ಇದಾಗಿ ಸ್ವಲ್ಪ ದಿನ ಹಿಂದಷ್ಟೇ.. ನನ್ನೊಡನೆ ಸಿ ಎನ್ ಎನ್ ನಲ್ಲಿದ್ದ ಕೆನ್ಯಾದ ಮಾರ್ಕ್ ‘ಬರ್ತೀಯಾ ನನ್ನ ಜೊತೆ’ ಎಂದ. ‘ಎಲ್ಲಿಗೆ’ ಎಂದೆ ‘ಅಲಬಾಮಾ’ಅಂದ.

ಅಲಬಾಮಾ…. ತಕ್ಷಣ ನನ್ನ ಕಿವಿ, ಬುದ್ದಿ ಎರಡೂ ಚುರುಕಾದವು. ಮತ್ತೆ ಅದೇ ಪುಟ್ಟ ಹುಡುಗಿಯ ಜೊತೆ ಮಾಡಿದ ಹೋಮ್ ವರ್ಕ್ ನೆನಪಿಗೆ ಬಂತು.

ಅಲಬಾಮಾ-ಅಲ್ಲಿಯೇ ಆ ಘಟನೆ ನಡೆದದ್ದು. ರೋಸಾ ಬಸ್ ನಲ್ಲಿ ‘ಜಗ್ಗದೆಯೆ, ಕುಗ್ಗದೆಯೆ’ ಕುಳಿತದ್ದು.

ಸರಿ ಎಂದು ನಾನು ಅವನ ಜೊತೆಯಾಗಿ ನಡೆದೆ. ಟ್ರೇನ್ ಹಿಡಿಯಲು ಸ್ಟೇಷನ್ ತಲುಪಿದೆವು. ಒಳಗೆ ಹೋಗಬೇಕು ಎನ್ನುವಾಗ ನನ್ನಮುಖ ಅವನೂ, ಅವನ ಮುಖ ನಾನೂ ಇಬ್ಬರೂ ನೋಡಿಕೊಂಡೆವು.

ಮನಸ್ಸುಗಳೇ ಮಾತಾಡಿಬಿಟ್ಟಿತ್ತು. ಯಾವ ಬಸ್ ಘಟನೆಯಿಂದಾಗಿ ಜಗತ್ತು ಎಚ್ಛೆತ್ತುಕೊಂಡಿತೋ, ಯಾವ ಬಸ್ ಘಟನೆಯಿಂದಾಗಿ ವರ್ಣಬೇಧದ ಬಗ್ಗೆ ಆಕ್ರೋಶ ಭುಗಿಲೆದ್ದಿತ್ತೋ, ಯಾವ ಬಸ್ ಘಟನೆಯಿಂದಾಗಿ ಮನಸ್ಸುಗಳು ನರಳಿ ಹೋಗಿದ್ದವೋ, ಯಾವ ಬಸ್ ಘಟನೆಯಿಂದಾಗಿ ಹೋರಾಟಗಳು ಅರಳಿ ನಿಂತವೋ.. ಅಂತಹ ಆ ಊರಿಗೆ ಟ್ರೇನ್ ನಲ್ಲಿ..!

‘ಉಹ್ಞೂ’ ಎಂದುಕೊಂಡವರೇ ನಾವಿಬ್ಬರೂ ಬಸ್ ಹತ್ತಿದೆವು

ಹಾಗೇ ಅನಿಸಿತೇನೋ ಆ ಒಬಾಮನಿಗೂ.. ಥೇಟ್ ನಮ್ಮಂತೆಯೇ.. ಅಧ್ಯಕ್ಷನಾದರೇನು, ತನ್ನದೇ ವಿಮಾನ ಇದ್ದರೇನು. ಆಳುಕಾಳು ಜೊತೆಗಿದ್ದರೇನು ಅಂತ ಒಂದು ದಿನ ಸೀದಾ ಹೆನ್ರಿ ಫೋರ್ಡ್ ಮ್ಯೂಸಿಯಂ ಬಾಗಿಲು ತಲುಪಿಕೊಂಡವರೇ ಅಲ್ಲಿ ಇರಿಸಿದ್ದ, ರೋಸಾ ಪಾರ್ಕ್ಸ್ ಸಂಚರಿಸಿದ್ದ ಅದೇ ಬಸ್ ಅನ್ನು ಹುಡುಕಿದರು. ಬಸ್ ಏರಿದವರೇ ಅದೇ ಸೀಟನ್ನು ಹುಡುಕಿದರು. ಅಲ್ಲಿ ಅದೇ ಸೀಟ್ ನಲ್ಲಿ ಕುಳಿತು ಹೊರ ಜಗತ್ತು ನೋಡಿದರು. ಬೆಳಕಿನ ಕಿರಣಗಳು ಅವರಿಗೂ ಕಂಡಿರಬೇಕು. ಎದ್ದು ನಡೆದರು..

ಇದು ಕುಳಿತ ಕಥೆ ಆಯಿತು.. ಆದರೆ ಅವರು ನಿಂತರು.

ಇಡೀ ಬಿಳಿಯ ಜಗತ್ತು ನುಂಗಿಹಾಕುವಂತೆ ನೋಡುತ್ತಿದ್ದಾಗಲೂ ಅವರು ನಿಂತೇ ನಿಂತರು. ಕಪ್ಪು ಬಿಳಿ ಎನ್ನುವ ನೀಚ ಮನಸ್ಸನ್ನು ಬಯಲಿಗಿಟ್ಟುಬಿಡಬೇಕು ಎಂದುಕೊಂಡವರೇ ಹಲ್ಲುಕಚ್ಚಿ ನಿಂತರು.

ಇದು ಆಗಿದ್ದು ಬಸ್ ನಲ್ಲಿ ಅಲ್ಲ, ಕ್ರೀಡಾಂಗಣದಲ್ಲಿ. ಅಂತಿಂತ ಕ್ರೀಡಾಂಗಣದಲ್ಲಿ ಅಲ್ಲ. ಒಲಂಪಿಕ್ಸ್ ನ ಕ್ರೀಡಾಂಗಣದಲ್ಲಿ

೧೯೬೮ ಮೆಕ್ಸಿಕೋದಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟ ಒಂದು ಇತಿಹಾಸಕ್ಕೆ ನಾಂದಿ ಹಾಡಿತು. ಒಲಂಪಿಕ್ಸ್ ನ ಇತರೆ ಎಲ್ಲಾ ಕ್ರೀಡಾಕೂಟಗಳದ್ದೇ ಒಂದು ತೂಕವಾದರೆ ಈ ಕ್ರೀಡಾಕೂಟದ್ದೇ ಇನ್ನೊಂದು ತೂಕ.

ಈ ಕ್ರೀಡಾಕೂಟ ಅಂದಿಗೂ ಇಂದಿಗೂ ‘ಬ್ಲಾಕ್ ಸಲ್ಯೂಟ್’ ಕ್ರೀಡಾ ಕೂಟ ಎಂದೇ ಹೆಸರುವಾಸಿ.

ಆ ಕೂಟದ ೨೦೦ ಮೀಟರ್ ಓಟದಲ್ಲಿ ಮೊದಲನೆಯ ಹಾಗೂ ಮೂರನೆಯ ಸ್ಥಾನ ಗೆದ್ದಿದ್ದು ಇಬ್ಬರು ಅಮೆರಿಕನ್ನರು. ಎರಡನೆಯ ಸ್ಥಾನ ಆಸ್ಟ್ರೇಲಿಯಾದ ಪಾಲು.

ಇನ್ನೇನು ಪದಕ ಸ್ವೀಕಾರಕ್ಕೆ ಕೊರಳು ಒಡ್ಡಲು ಹೋಗಬೇಕು ಆಗ ಅಮೆರಿಕಾದ ಕಪ್ಪು ವರ್ಣೀಯ ಇಬ್ಬರು ಆಟಗಾರರಿಗೂ ತಮ್ಮ ಬದುಕಿನ ನೋವಿನ ಗಾಥೆ ಬಿಚ್ಚಿಟ್ಟುಬಿಡಬೇಕು ಅನಿಸಿತು. ಇಬ್ಬರೂ ತೀರ್ಮಾನಿಸಿದರು. ರಾಷ್ಟ್ರಗೀತೆ ಮೊಳಗುವಾಗ ನಾವು ಕಪ್ಪು ಪಟ್ಟಿ ಧರಿಸಿ ತಲೆ ಬಾಗಿಸಿ ನಿಂತುಬಿಡಬೇಕು ಎಂದು.

ಇದು ಆಸ್ಟ್ರೇ ಲಿಯಾದ ಬಿಳಿಯ ಜನಾಂಗದ ಪೀಟರ್ ನಾರ್ಮನ್ ಗೂ ಗೊತ್ತಾಗಿ ಹೋಯಿತು. ಆತ ಹೇಳಿದ- ‘ಬರೀ ನೀವೇನು, ನಾನೂ ಹಾಗೆ ಮಾಡಲು ಸಿದ್ಧ’. ಕಪ್ಪು ಜನಾಂಗದ ಆ ಇಬ್ಬರಲ್ಲೂ ಸಂತೋಷದ ಕಣ್ಣೀರು.

ಪದಕ ಸಮಾರಂಭಕ್ಕೆ ವೇದಿಕೆ ಸಜ್ಜಾಯಿತು. ಮೊದಲ ಸ್ಥಾನ ಪಡೆದಿದ್ದ ಟಾಮಿ ಸ್ಮಿಥ್ ಕಪ್ಪು ಗ್ಲೋವ್ ಹಾಕಿದ್ದ ಬಲಗೈ ಎತ್ತಿ ಹಿಡಿದ. ಮೂರನೆಯ ಸ್ಥಾನ ಪಡೆದ ಜಾನ್ ಕಾರ್ಲೋಸ್ ಕಪ್ಪು ಪಟ್ಟಿ ಹಾಕಿದ್ದ ಎಡಗೈ ಎತ್ತಿ ಹಿಡಿದ.

ಎರಡನೆಯ ಸ್ಥಾನ ಪಡೆದಿದ್ದ ಬಿಳಿಯ ಪೀಟರ್ ನಾರ್ಮನ್ ಎದೆಗೆ ಪ್ರತಿಭಟನೆಯ ಪದಕ ಸಿಕ್ಕಿಸಿಕೊಂಡಿದ್ದ. ಪದಕ ನೀಡಲು ಹೋದ ಗಣ್ಯರಿರಲಿ, ಇಡೀ ಒಲಂಪಿಕ್ ಕ್ರೀಡಾಂಗಣ ಬೆಚ್ಚಿ ಬಿತ್ತು.

ಇಡೀ ಕ್ರೀಡಾಂಗಣವಿರಲಿ ದೇಶಕ್ಕೆ ದೇಶವೇ ಬೆಚ್ಚಿಬಿತ್ತು. ಇಡೀ ದೇಶವಿರಲಿ ಜಗತ್ತೇ ನಿಬ್ಬೆರಗಾಗಿ ನಿಂತಿತು.

ಅಮೆರಿಕಾದಲ್ಲಿ ಜನಾಂಗ ನಿಂದನೆ, ತಾರತಮ್ಯ ಮಿತಿ ಮೀರಿತ್ತು. ಈಗಲ್ಲದೆ ಯಾವಾಗ? ಎಂದು ನಿರ್ಧರಿಸಿದ ಅಮೆರಿಕಾದ ಕ್ರೀಡಾಳುಗಳಿಗೆ ಇದೇ ಸಮಯ ಜಗತ್ತು ತಮ್ಮ ನೋವು ಕೇಳಲು ಅನಿಸಿತು.

ಆದರೆ ಹಾಗೆ ನಿರ್ಧಾರ ಮಾಡುವಾಗ ಅವರ ಬಳಿ ಇದ್ದದ್ದು ಒಂದೇ ಜೊತೆ ಕೈಗವುಸು. ಹಾಗಾಗಿ ಅದನ್ನೇ ಇಬ್ಬರೂ ಹಂಚಿಕೊಂಡರು.

ಹಾಗಾಗಿಯೇ ಇಬ್ಬರೂ ಬಲಗೈ ಎತ್ತಿ ಹಿಡಿಯಲು ಆಗಲಿಲ್ಲ. ಮೂರನೆಯ ಕ್ರೀಡಾಳುವಿಗೆ ಕೈ ಗವುಸು ಇಲ್ಲದ ಕಾರಣ ಆತ ಕೈ ಎತ್ತಲು ಆಗಲಿಲ್ಲ. ಆದರೆ ಪ್ರತಿಭಟನೆಯ ಪದಕ ಹೊತ್ತಿದ್ದ.

ಈ ಮೂವರೂ ಕ್ರೀಡಾಂಗಣದಿಂದ ಹೊರ ಬರುತ್ತಿದ್ದಂತೆಯೇ ಬಿಳಿ ಜಗತ್ತು ಅವರ ವಿರುದ್ಧ ಮುಗಿಬಿದ್ದಿತು. ಇನ್ನೆಂದೂ ಒಲಂಪಿಕ್ ಬೆಳಕು ಕಾಣಲಿಲ್ಲ. ಅವರ ಕ್ರೀಡಾ ಬದುಕನ್ನು ಹೊಸಕಿಹಾಕಲಾಯಿತು.

ಟಾಮಿ ಸ್ಮಿಥ್ ಹೇಳಿದ- ನಾವು ಪದಕ ಗೆದ್ದರೆ ಅಮೇರಿಕನ್, ಅಲ್ಲದೆ ಹೋದರೆ ಕಪ್ಪು ಅಮೇರಿಕನ್ ಇದ್ಯಾವ ನ್ಯಾಯ?. ಜಗತ್ತು ಮತ್ತೆ ವರ್ಣಭೇದವನ್ನು ಚರ್ಚೆಗೆತ್ತಿಕೊಂಡಿತು. ನೋಡನೋಡುತ್ತಿದ್ದಂತೆಯೇ ಹಲವು ದೇಶಗಳು ಈ ಕ್ರೀಡಾಳುಗಳ ಬೆನ್ನಿಗೆ ನಿಂತರು.

ಇದೆಲ್ಲಾ ನೆನಪಾಗಿದ್ದು ಯಾಕೆಂದರೆ –
—–
ಇಂದು ಅಮೆರಿಕಾದಲ್ಲಿ ಪುಟ್ಟ ಮಗಳ ಎದುರೇ ಕಪ್ಪು ಜನಾಂಗದ ಪ್ಲಾಯ್ಡ್ ನನ್ನು ಬಿಳಿಯ ಪೊಲೀಸ್ ಅಧಿಕಾರಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕುತ್ತಿಗೆಯ ಮೇಲೆ ಮೊಣಕಾಲಿನಿಂದ ಒತ್ತಿ ಆತ ಉಸಿರಿಗಾಗಿ ಗೋಗರೆಯುತ್ತಿದ್ದರೂ ಕೊಂದು ಹಾಕಿದ್ದಾನೆ.

ಇಡೀ ಅಮೆರಿಕಾ ಈ ನೀಚ ಘಟನೆಯ ವಿರುದ್ಧ ಎದ್ದು ನಿಂತಿದೆ. ಅಮೆರಿಕಾ ದಾಟಿ ಈ ಪ್ರತಿಭಟನೆ ಎಲ್ಲಾ ದೇಶಗಳಲ್ಲೂ ಕಾವು ಪಡೆದುಕೊಳ್ಳುತ್ತಿದೆ.

ಅತ್ಯಂತ ನೋವಿನಿಂದ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಸರ್ಕಾರ ಉಳಿಸಿಕೊಳ್ಳಲು ಮೂವರು ಸಚಿವರಿಗೆ ಕೊಕ್ ನೀಡಲಿದ್ದಾರೆಯೇ ಯಡಿಯೂರಪ್ಪ?

ಸಿದ್ದೇಶ ತ್ಯಾಗಟೂರು


ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಶಾಸಕರ ಬಂಡಾಯದಿಂದ ಬಿಜೆಪಿಯಲ್ಲಿ ಭಾರಿ ಸಂಚಲನವೇ ಸೃಷ್ಟಿಯಾಗಿದೆ.

ಈ ಬೆಳವಣಿಗೆಯಿಂದ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕೊಂಚ ಗೊಂದಲಕ್ಕೆ ಬಿದ್ದಿದ್ದಾರೆ… 2008ರಲ್ಲಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿ ಅವರ ಆಪ್ತರೇ ಬಂಡಾಯದ ಬಾವುಟ ಹಾರಿಸಿದ್ದರು… ಹೀಗಾಗಿ ಈ ಬಾರಿ ಯಡಿಯೂರಪ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಅವರ ಆಪ್ತರ ಸಲಹೆ ಪಡೆದು ಡ್ಯಾಮೇಜ್ ಕಂಟ್ರೋಲ್ ಫಾರ್ಮುಲಾ ಸಿದ್ಧಪಡಿಸಿದ್ದಾರೆ. ಅತೃಪ್ತರ ಜೊತೆ ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಏನದು ಯಡಿಯೂರಪ್ಪ ಡ್ಯಾಮೇಜ್ ಕಂಟ್ರೋಲ್ ಫಾರ್ಮುಲಾ..!

ಬಂಡಾಯ ಶಾಸಕರ ಅಸಮಾಧಾನ ಬಗೆಹರಿಸಲು ಕೆಲವರಿಗೆ ಮಂತ್ರಿಭಾಗ್ಯ ನೀಡಲು BSY ಸಿದ್ಧತೆ ನಡೆಸಿದ್ದಾರೆ…

ಮಾರ್ಗ ನಂ.1


ಫಾರ್ಮುಲಾ ಪ್ರಕಾರ ಶಶಿಕಲಾ ಜೊಲ್ಲೆಯವರನ್ನ ಸಚಿವ ಸ್ಥಾನದಿಂದ ಕೆಳಗಿಳಿಸಿ ಬಂಡಾಯ ಶಾಸಕ ಉಮೇಶ್ ಕತ್ತಿ ಅವರನ್ನ ಮಂತ್ರಿ ಮಾಡಲು ಚಿಂತನೆ ನಡೆದಿದೆ…

ಮಾರ್ಗ -2


ಎರಡನೆಯದಾಗಿ ಸಿ.ಸಿ. ಪಾಟೀಲ್ ಅವರನ್ನ ಸಂಪುಟದಿಂದ ಕೈಬಿಟ್ಟು ಆ ಸ್ಥಾನದಲ್ಲಿ ಮುರುಗೇಶ್ ನಿರಾಣಿಯವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ..

ಮಾರ್ಗ-3


ಇನ್ನು ಪ್ರಭು ಚೌಹಾಣ್ ಅವರಿಗೂ ಕೂಡ ಸಂಪುಟದಿಂದ ಕೊಕ್ ಕೊಟ್ಟು ಅರವಿಂದ ಲಿಂಬಾವಳಿ ಅವರನ್ನ ಮಂತ್ರಿ ಮಾಡಲು ನಿರ್ಧರಿಸಲಾಗಿದೆ…

ಮಾರ್ಗ-4


ಇನ್ನೊಂದು ಇಂಪಾರ್ಟೆಂಟ್ ಸಂಗತಿ ಏನಂದ್ರೆ ಈಗಾಗಲೇ ಸಿಎಂ ರೇಸ್ ನಲ್ಲಿರುವ ಹಾಗೂ ಹೈಕಮಾಂಡ್ ಜೊತೆ ಉತ್ತಮ ಸಂಬಂಧ ಹೊಂದಿರುವ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರಿಗೂ ಪ್ರಬಲ ಮಂತ್ರಿ ಸ್ಥಾನ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸದ್ಯಕ್ಕೆ ಸುಲಭದ ಕೆಲಸವಲ್ಲ… ಯಾಕಂದ್ರೆ ಯಡಿಯೂರಪ್ಪ ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆ. ಅವರಷ್ಟು ಎತ್ತರಕ್ಕೆ ಬೆಳೆದಿರುವ ಮತ್ತೋರ್ವ ನಾಯಕ ಸಮುದಾಯದಲ್ಲಿ ಇಲ್ಲ… ಅಕಸ್ಮಾತ್ BSY ಅವರನ್ನ ಅಧಿಕಾರದಿಂದ ಕೆಳಗಿಳಿಸಿದರೆ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ಒತ್ತಾಯದಿಂದ ಕೆಳಗಿಳಿಸಿದರೆ ಸರ್ಕಾರ ಬಿದ್ದರೂ ಅಚ್ಚರಿ ಇಲ್ಲ. ಇನ್ನೊಂದೆಡೆ ಇರುವ ಅಧಿಕಾರವನ್ನು ಕಳೆದುಕೊಳ್ಳುವ ಯಾವುದೇ ಯೋಚನೆ ಹೈ ಕಮಾಂಡ್ ಗೂ ಇಲ್ಲ… ಹೀಗಾಗಿ ಸದ್ಯದ ಬಂಡಾಯವನ್ನ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಹೈ ಕಮಾಂಡ್ ಯಡಿಯೂರಪ್ಪನವರಿಗೆ ಸೂಚನೆ ಕೊಟ್ಟಿದೆ.

ಹೀಗಾಗಿ ಬಿಎಸ್ ವೈ ಕೂಡ ಹೊಸ ಫಾರ್ಮುಲಾ ರೆಡಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಸೂಪರ್ ಸಿಎಂ ಹಾಗೂ ಪುತ್ರ ವಿಜಯೇಂದ್ರ ಅವರನ್ನ ಸರ್ಕಾರದಿಂದ ಕೊಂಚ ದೂರ ಇರುವಂತೆ ಸ್ವತಃ ಯಡಿಯೂರಪ್ಪನವರೇ ಸೂಚನೆ ಕೊಡಲಿದ್ದಾರೆ. ಇಷ್ಟೆಲ್ಲಾ ಆದರೂ, ಸದ್ಯದ ಬಂಡಾಯ ಜಸ್ಟ್ ಟ್ರೈಲರ್ ಮಾತ್ರ… ಪಿಕ್ಚರ್ ಅಬಿ ಬಾಕಿ ಹೈ….

ಅವರನ್ನು ಸನ್ಮಾನಿಸುವುದು ನಮ್ಮ‌ ಪುಣ್ಯ: ಸುರೇಶ್

ವರದಿ: B.N.ವೀರಭದ್ರೇಗೌಡ


ಬೆಲವತ್ತ: ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿರುವ ಎಲ್ಲರನ್ನು ಅಭಿನಂದಿಸುತ್ತಿರುವುದು ನಮ್ಮ ಪುಣ್ಯ ಎಂದ ಕೆಂಗಲ್ ಸ್ನೇಹ ಸಮಿತಿ ರಾಜ್ಯ ಅಧ್ಯಕ್ಷರಾದ ಬಿ.ಹೆಚ್.ಸುರೇಶ್
ಹೇಳಿದರು.

ತಾಲೂಕಿನ ಬೆಲವತ್ತ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಡೆದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಡೀ ದೇಶವೇ ಕರೊನಾ ಮಹಾಮಾರಿಗೆ ಹೆದರಿ ಮನೆ ಸೇರಿರುವಾಗ ಪ್ರತಿಯೊಬ್ಬರ ಮನೆಮನೆಗೆ ಭೇಟಿ ನೀಡಿ ತಮ್ಮ ಜೀವದ ಹಂಗು ತೊರೆದು ಜನರ ಆರೋಗ್ಯದ ಮಾಹಿತಿ ಪಡೆದು ತಲುಪಿಸುವ ಕೆಲಸ ಮಾಡಿದ್ದಾರೆ. ಇಂತಹ ಆಶಾ ಕಾರ್ಯಕರ್ತೆಯರು ಬಹಳ ಸಂಕಷ್ಟದಲ್ಲಿ ಇದ್ದರೆ ಅವರಿಗೆ ಸರ್ಕಾರ ಸರಿಯಾದ ಸಂಬಳ ನಿಗದಿಮಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷರಾದ ಬಿ.ಹೆಚ್.ನಂಜೇಗೌಡ, ಕಾರ್ಯದರ್ಶಿ ಬಿ.ಎನ್.ದಯಾನಂದ್, ಉಪಾಧ್ಯಕ್ಷೆ ರಮ್ಯ, ಚಿಕ್ಕಮ್ಮ ಸದಸ್ಯರಾದ ಬಿ.ಜಿ.ಹರೀಶ್, ಬಿ.ಹೆಚ್.ವೆಂಕಟಚಲ ಬಿ.ಎನ್.ಲೋಕೇಶ್, ಕಂಬೇಗೌಡ, ಚಿಕ್ಕೇಗೌಡ, ಗೋಪಾಲಯ್ಯ ಬಿ.ಡಿ.ದೊಡ್ಡಯ್ಯ ನಿಂಗರಾಜು ಹಾಗೂ ಬಿ.ಸಿ.ಹೊನ್ನಲಿಂಗೇಗೌಡ, ಬಿ.ಸಿ.ಶಿವಣ್ಣ ಬೀಮೇಶ್ ಬಿ,ಸಿ.ಕೃಷ್ಣೆಗೌಡ ಬಿ.ಸಿ.ಶಿವಕುಮಾರ್ ಬಿ.ಟಿ.ನಾಗಣ್ಣ ಶಿವಕುಮಾರ್ ಇನ್ನು ಅನೇಕ ಗ್ರಾಮಸ್ಥರು ಇದ್ದರು.

ಬೆಲವತ್ತದಲ್ಲಿ ಹೋರಾಟಗಾರರಿಗೆ ಸನ್ಮಾನದ ಸಂಭ್ರಮ

ವರದಿ: ವೀರಭದ್ರ ಬೆಲವತ್ತ


ಗುಬ್ಬಿ: ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಭಾನುವಾರ ಸಡಗರದ ಸಂಭ್ರಮ.

ಇಲ್ಲಿ‌ನ ಹಾಲು ಉತ್ಪಾದಕರ ಸಹಕಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಅಂತರದ ಪಾಲನೆ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಗ್ರಾಮದಿಂದ ನಗರಕ್ಕೆ ಜನರು ಸಂದೇಶ ರವಾನಿಸಿದರು.

ವಿಶೇಷವೇನೆಂದರೆ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಾಲು ಉತ್ಪಾದಕ ಸಹಕಾರಿ ಸಂಘವೊಂದು ಕೊರೊನಾ ವಾರಿಯರ್ಸ್ ಗೆ ಸನ್ಮಾನಿಸಿತು.

ಗ್ರಾಮದಲ್ಲಿ ಕೊರೊನಾ ಹರಡಂತೆ ಜನರಲ್ಲಿ ಜಾಗೃತಿ ಮೂಡಿಸಿದ ಕೊರೊನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಕಡಬಾ ಪೊಲೀಸ್ ಸಿಬ್ಬಂದಿಗೆ ಸನ್ಮಾನಿಸಿದರು.

ಪಣಕ್ಕಿಟ್ಟು ಕೊರೊನಾ ವಿರುದ್ಧ ಸೆಣಸುತ್ತಿರುವ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ ಶಾಘ್ಲನೆ ವ್ಯಕ್ತಪಡಿಸಿದರು.

ಈ ವೇಳೆ ಆಡಳಿತ ಸುಧಾರಣಾ ಸಲಹಾ ಸಮಿತಿ ಅಧ್ಯಕ್ಷ ಬಿ.ಎಸ್. ಸುರೇಶ್, ಶಿಕ್ಷಕ ಶಿವಣ್ಣ, ಬಿ.ಸಿ.ಲೋಕೇಶ್, ಮುಖಂಡರಾದ ಬಿ.ಸಿ.ಹೊನ್ನಲಿಂಗೇಗೌಡ, ಕೃಷ್ಣೇಗೌಡ, ಬೀಮೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ಸದಸ್ಯರು, ಗ್ರಾಮದ ಅನೇಕ ಮುಖಂಡರು, ಹಿರಿಯರು ಹಾಜರಿದ್ದರು.

ಬೀದಿ ಬದಿ ವ್ಯಾಪಾರಿಗಳಿಗೆ ಧೈರ್ಯ ತುಂಬಿದ ಶಾಸಕ

ಬೀದಿ ವ್ಯಾಪಾರಿಗಳಿಗೆ 10 ಸಾವಿರ ಸಾಲವನ್ನು ಶಾಸಕ ಮಸಾಲ ಜಯರಾಮ್ ವಿತರಿಸಿದರು

ತುರುವೇಕೆರೆ: ಕೊರೊನಾ ಹಾಗು ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳಿಗೆ ತುಮಕೂರು ಡಿಸಿಸಿ ಬ್ಯಾಂಕ್ ಹತ್ತು ಸಾವಿರ ರೂಪಾಯಿಗಳ ಸಾಲವನ್ನು ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಡಿಸಿಸಿ ಬ್ಯಾಂಕ್ ವತಿಯಿಂದ ತಾಲ್ಲೂಕಿನ ಅತಿ ಸಣ್ಣ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ 78 ಕೋಟಿ ರೂಪಾಯಿಗಳ ಸಾಲಮನ್ನಾ ಮಾಡಿದ ರಾಜ್ಯದ ಏಕೈಕ ಬ್ಯಾಂಕ್ ಡಿಸಿಸಿ ಬ್ಯಾಂಕಾಗಿದ್ದು, ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿದೆ. ಕಳೆದ ಮೂರು ತಿಂಗಳುಗಳಿಂದ ತಾಲ್ಲೂಕಿನ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಜೀವನ ನಿರ್ವಹಣೆ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು. ಮತ್ತೊಂದೆಡೆ ಶ್ರಮಿಕ ವ್ಯಾಪಾರಿಗಳು ಸ್ಥಳೀಯ ಲೇವಾದೇವಿದಾರರ ಕಪಿಮುಷ್ಠಿಗೆ ಸಿಲುಕಿ ನರಳುತ್ತಿದ್ದರು ಎಂದರು.

ಇಂತಹ ವ್ಯಾಪಾರಿಗಳು ಆರ್ಥಿಕ ಸಂಕಷ್ಟದಿಂದ ಹೊರ ಬರಲು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿಗಳನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಾ ಯಾವ ಬ್ಯಾಂಕ್ ಗಳು ಮಾಡದ ಕೆಲಸ ಮಾಡಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ರೈತರು ಮತ್ತು ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ವಿಧಾನ ಸಭೆಯಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಬಿ.ಎಸ್.ದೇವರಾಜ್ ಮಾತನಾಡಿದರು.

ಪಟ್ಟಣದ 50 ಮಂದಿ ವ್ಯಾಪಾರಿಗಳಿಗೆ 5 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.

ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಕೊಳಾಲನಾಗರಾಜು, ದಾನಿಗೌಡ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಚ್.ಸಿ.ಗೌಡ, ವ್ಯವಸ್ಥಾಪಕ ನಾಗರಾಜು, ಸಲಹೆಗಾರ ಜಂಗಮಪ್ಪ, ನೋಡಲ್ ಅಧಿಕಾರಿ ನರಸಿಂಹಮೂರ್ತಿ, ತಾಲ್ಲೂಕು ಬೀದಿ ಬದಿ ವ್ಯಾಪಾರಿಗಳ ಮುಖಂಡ ಮಾರುತಿ ಇದ್ದರು.