Monday, February 23, 2026
Google search engine
Home Blog Page 305

ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ‌ ತುಮಕೂರು ಸರ್ಕಾರಿ ಶಾಲೆ ಹುಡುಗರು

Publicstory.in


ವಿಜ್ಞಾನ ಪರಿಷತ್ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತುಮಕೂರು ನಗರದ ಬಿಎಚ್.ರಸ್ತೆಯಲ್ಲಿರುವ ಸಿದ್ದಗಂಗಾ ಹೈಸ್ಕೂಲ್ ವಿದ್ಯಾರ್ಥಿ ಸಿದ್ದಾರ್ಥ ಕೆ.ಶೆಟ್ಟಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಕಾತ್ರಿಕೆಹಾಳ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ಪುನೀತ್ ಈ ಸಮಾವೇಶದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ಸಿದ್ದಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಿದ್ದಾರ್ಥ ಕೆ ಶೆಟ್ಟಿ ತರಕಾರಿಯಿಂದ ಉತ್ಪಾದನೆಯಾಗುವ ಸಿಪ್ಪೆ ಮುಂತಾದ ತ್ಯಾಜ್ಯವನ್ನು ಬೆಳೆಗಳಿಗೆ ಹಾಕಿದರೆ ಅದು ಫಲವತ್ತತೆ ಹೆಚ್ಚುತ್ತದೆ ಎಂಬುದನ್ನು ಸಂಶೋಧಿಸಿದ್ದಾರೆ. ಇವರು ಮಂಡಿಸಿದ ವಿಷಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಅದೇ ರೀತಿ ಕಾತ್ರಿಕೆಹಾಳ್ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿ ಪುನೀತ್ ಗ್ರಾಮೀಣ ಪ್ರದೇಶದ ಬಡ ರೈತ ಕುಟುಂಬದಿಂದ ಬಂದಿದ್ದು ಆತ ಮತ್ತೆ ಬಾ ಮುತ್ತುಗ ವಿಷಯ ಕುರಿತು ಸಂಶೋಧನೆ ನಡೆಸಿ ಪ್ಲಾಸಿಟ್ ಗೆ ಬದಲಾಗಿ ಮುತ್ತುಗದ ಎಲೆಯನ್ನು ಬಳಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮುತ್ತುಗದ ಎಲೆ ಬಳಸಿ ಬಿಸಾಕಿದರೂ ಅದು ಗೊಬ್ಬರವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಮುತ್ತುಗವನ್ನು ಬಳಸಬಹುದು ಎಂದು ಹೇಳಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ತಮ್ಮ ವಿಷಯವನ್ನು ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಮಂಡಿಸಲಿದ್ದಾರೆ.



ತುಮಕೂರು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಇವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ವಿಜ್ಞಾನ ಪರಿಷತ್ ಸಮನ್ವಯ ಎಂ.ಎಸ್ ಅಧಿಕಾರಿ ಪರಮೇಶ್ವರಯ್ಯ ತಿಳಿಸಿದ್ದಾರೆ.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಕರ್ನಾಟದಿಂದ 10 ಮಂದಿ ಎಸ್ಕಾರ್ಟ್ ಗಳಾಗಿ ಆಯ್ಕೆಯಾಗಿದ್ದು ಅವರ ಪೈಕಿ ತುಮಕೂರು ಜಿಲ್ಲೆಯ ವಿಜ್ಞಾನ ಪರಿಷತ್ ಸಮನ್ವಯ ಅಧಿಕಾರಿ ಪರಮೇಶ್ವರಯ್ಯ ಎಂ.ಎಸ್. ಕೂಡ ಒಬ್ಬರಾಗಿದ್ದಾರೆ.

ತುಮಕೂರು ಸರ್ಕಾರಿ ಬಸ್ ನಿಲ್ದಾಣ ಸ್ಥಳಾಂತರ

ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿಯನ್ನು ಶಾಸಕ‌ ಜ್ಯೋತಿ‌ಗಣೇಶ್ ಪರಿಶೀಲಿಸಿದರು.

ತುಮಕೂರು: ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.

ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ 5 ಮಹಡಿಗಳುಳ್ಳ ಇಂಟಿಗ್ರೇಟೆಡ್ ಬಸ್ ನಿಲ್ದಾಣ ಮಾಡಲಾಗುವುದು ಎಂದರು.

ನೂತನ ಸ್ಮಾರ್ಟ್ ಬಸ್ ನಿಲ್ದಾಣವಾಗುವವರೆಗೂ ಪರ್ಯಾಯವಾಗಿ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ತಾತ್ಕಾಲಿಕ ಬಸ್‍ನಿಲ್ದಾಣ ಮಾಡಲು ಕಾಮಗಾರಿ ನಡೆಸುತ್ತಿದ್ದು, ಸದರಿ ಕಾಮಗಾರಿ ಕೊನೆಯ ಹಂತದಲ್ಲಿದೆ ಎಂದರು.

ತಾತ್ಕಾಲಿಕ ಬಸ್ ನಿಲ್ದಾಣ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕಿಂತ ಕಡಿಮೆ ಸ್ಥಳಾವಕಾಶ ಹೊಂದಿದ್ದು, ಸಾರ್ವಜನಿಕರು ಸ್ಮಾರ್ಟ್ ಬಸ್ ನಿಲ್ದಾಣವಾಗುವರೆಗೂ ಸಹಕರಿಸಬೇಕು ಎಂದರಲ್ಲದೇ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿಯವರ ಸಹಕಾರದಲ್ಲಿ ಕಾಮಗಾರಿಗಳು ತುರ್ತಾಗಿ ನಡೆಯುತ್ತಿದೆ. ಬಸ್‍ಗಳ ಸಂಚಾರ ಮಾರ್ಗದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಹೇಳಿದರು.

ನಗರದ ಕೆಎಸ್‍ಆರ್‍ಟಿಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮಾತನಾಡಿ, ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಸುಮಾರು 400-500 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಯಬೇಕೆ? ಇಲ್ಲಿದೆ ಕನ್ನಡದ ಪುಸ್ತಕ

ತುಮಕೂರು: ‘ಬಹುರೂಪಿ’ ಪ್ರಕಾಶನದಿಂದ
ಇಂದು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ
ಪೌರತ್ವ (ತಿದ್ದುಪಡಿ) ಕಾಯಿದೆ -2019 ರ ಬಗ್ಗೆ ಸಮಗ್ರ ಒಳನೋಟವನ್ನು ಕೊಡುವ ಕೃತಿ ಮಾರಾಟಕ್ಕೆ ಸಿದ್ಧವಾಗಿದೆ.

ಖ್ಯಾತ ಸಾಮಾಜಿಕ ಚಿಂತಕರಾದ ರಾಜಾರಾಂ ತಲ್ಲೂರು ಅವರು
ಪ್ರಶ್ನೆ-ಉತ್ತರ ಮಾದರಿಯಲ್ಲಿ ಸರಳವಾಗಿ
ಈ ಕಾಯಿದೆಯ ಬಗೆಗಿನ ಎಲ್ಲಾ ಮಾಹಿತಿ ನೀಡಿದ್ದಾರೆ.

ಕೃತಿಯ ಮುಖಬೆಲೆ 50 ರೂ. ಇದಕ್ಕೆ ಸೂಕ್ತ ರಿಯಾಯಿತಿ ಇದೆ.

ನಿಮಗೆ ಎಷ್ಟು ಪ್ರತಿಗಳು ಬೇಕು ಎನ್ನುವುದನ್ನು ಈ ನಂಬರ್ ಗೆ 7019182729 ವಾಟ್ಸ್ ಆಪ್ ಮಾಡಬೇಕು ‌ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರು ಹಾಗೂ ನಿವೃತ್ತ ನೌಕರರಿಗೆ ಸನ್ಮಾನ

ಮಧುಗಿರಿ: ಮಧುಗಿರಿ ತಾಲೂಕು ಛಲವಾದಿ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಛಲವಾದಿ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಡಿ.22 ರ ಭಾನುವಾರ ಬೆಳಿಗ್ಗೆ 10-30ಕ್ಕೆ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ನೇ.ರಂ.ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು. ಮಧುಗಿರಿ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಚಿತ್ರದುರ್ಗ
ಛಲವಾದಿ ಗುರುಪೀಠದ ಅಧ್ಯಕ್ಷ ಎನ್.ಲಕ್ಷ್ಮೀನರಸಯ್ಯ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರು ಹಾಗೂ ಸಾಧಕರನ್ನು ಅಭಿನಂದಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಯುವಕನ ಹತ್ಯೆ

ಕೊರಟಗೆರೆ:ಯುವಕನೊಬ್ಬನನ್ನು ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿಕೊಲೆ ಮಾಡಿರುವ ಘಟನೆ ದಾಬಸ್ ಪೇಟೆ, ಕೊರಟಗೆರೆ ಮುಖ್ಯರಸ್ತೆಯ ಜಿ. ನಾಗೇನಹಳ್ಳಿ ಬಳಿ ಗುರುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ನಡೆದಿದೆ.

ಮಧುಗಿರಿ ತಾಲ್ಲೂಕಿನ‌ ಮಿಡಿಗೇಶಿ ಹೋಬಳಿಯ ಬಿದರಗೆರೆ ವಾಸಿ ಶ್ರೀನಿವಾಸ(25)ಕೊಲೆಗೀಡಾದ ಯುವಕ.

ಶ್ರೀನಿವಾಸ ಬೆಂಗಳೂರಿನ ಬಾಗಲಗುಂಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಬಾಗಲಗುಂಟೆಯ ಅಕ್ಷಿತ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಐದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇಬ್ಬರೂ ಸ್ಕಾರ್ಪಿಯೋ ವಾಹನದಲ್ಲಿ ಬಿದರಗೆರೆಗೆ ಬಂದು ವಾಪಸ್ ಬೆಂಗಳೂರಿಗೆ ಹೋಗುತ್ತಿದ್ದಾಗ ಮತ್ತೊಂದು ಸ್ಕಾರ್ಪಿಯೋ ವಾಹನದಲ್ಲಿ ಬಂದ ಆರು ಜನರ ಗುಂಪು ಕಾರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಶ್ರೀನಿವಾಸನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಈ ವೇಳೆ ಅಕ್ಷಿತ ಕಾರಿನಲ್ಲಿಯೇ ಇದ್ದರು. ತರಕಾರಿ, ಹಣ್ಣು ವ್ಯಾಪಾರ ವೈಶಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ಸ್ನೇಹಿತರೆ ಕೊಲೆ‌ಮಾಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಎಂ.ಪ್ರವೀಣ್, ಸಿಪಿಐ ಎಫ್.ಕೆ.ನದಾಪ್ ಭೇಟಿ ನೀಡಿದ್ದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದದ ಹೇಳಿಕೆಗೆ ಆಕ್ರೋಶ

ಮಧುಗಿರಿ – ಜಿಲ್ಲಾ ಕಾಂಗ್ರೆಸ್ ಗೆ ತಮ್ಮ ಕೊಡುಗೆ ಏನೆಂದು ತಿಳಿಸಿ ನಂತರ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದ ಮಾತನಾಡಿ ಎಂದು ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್.ಭಾಸ್ಕರ್ ಕಾಂಗ್ರೆಸ್  ಅಧ್ಯಕ್ಷ ರಿಗೆ ಸವಾಲು ಹಾಕಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು,   ಚುನಾವಣೆ ಸಮಯದಲ್ಲಿ  ಅಭ್ಯರ್ಥಿಗಳ ಗೆಲುವಿಗೆ  ತಮ್ಮ ಕೊಡುಗೆ ಏನು?   ನಿಮ್ಮ ಅಧಿಕಾರಾವಧಿಯಲ್ಲಿ ಪಕ್ಷದ ಬಲವರ್ದನೆಗೆ ಯಾವ ರೀತಿ ಯೋಜನೆಗಳನ್ನು ರೂಪಿಸಿದ್ದೀರಾ ಹಾಗೂ ಮಧುಗಿರಿ ಕ್ಷೇತ್ರಕ್ಕೆ ಎಷ್ಟು ಭಾರಿ ಬಂದು ಪಕ್ಷ ಸಂಘಟನೆ ಮಾಡಿದ್ದೀರಾ ಎಂದು  ತಿಳಿಸಿ ನಂತರ ಕೆ.ಎನ್.ರಾಜಣ್ಣ ವಿರುದ್ದ ಮಾತನಾಡಿ ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿಕೊಂಡು ಬಂದಿರುವ ಕೆ.ಎನ್.ರಾಜಣ್ಣ ಅವರು ಮೂಲ ಕಾಂಗ್ರೆಸ್ ಹಿನ್ನೆಲೆಯವರು . ಒಬ್ಬ ಜನಪರ ನಾಯಕನ ಮೇಲೆ ಮತ್ತೊಬ್ಬ ನಾಯಕನನ್ನು ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಪಕ್ಷದ ಸಂಘಟನೆಗಾಗಿ ಶ್ರಮಿಸಿ, ಆಗಲಾದರೂ ಜಿಲ್ಲೆಯಲ್ಲಿ  ಪಕ್ಷ   ಸುಭಧ್ರವಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೆ.ಎನ್.ರಾಜಣ್ಣ ಅವರು ಜನರ  ಕಷ್ಟ-ಸುಖಗಳಿಗೆ ಸ್ಪಂದಿಸಿಸುತ್ತಾ ಇಡೀ ಜಿಲ್ಲೆಯಲ್ಲಿ ಅವರದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅವರಿಗೆ ಅಧಿಕಾರವಿರಲಿ ಇಲ್ಲದಿರಲಿ ಜನರು ಸದಾ ಅವರೊಂದಿಗೆ ಇರುತ್ತಾರೆ. ಇದನ್ನು ಅರಿಯದೆ ಡಿಸಿಸಿ ಬ್ಯಾಂಕಿನ ಅದ್ಯಕ್ಷ ಸ್ಥಾನ ತೊರೆದರೆ ಅವರ ಸುತ್ತಾ ಇರುವೆ ಕೂಡ ಇರುವುದಿಲ್ಲ ಎಂಬ ನಿಮ್ಮ ಹೇಳಿಕೆ ಖಂಡನೀಯ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದಲೇ ನಾವೆಲ್ಲರೂ ಅವರ ಜೊತೆ ಪಕ್ಷದಲ್ಲಿದ್ದೇವೆ. ಒಂದು ವೇಳೆ ಅವರಿಗೆ ಇರುಸು-ಮುರುಸು ಉಂಟು ಮಾಡಿದಲ್ಲಿ ಅವರ ಜೊತೆಯಲ್ಲಿ  ನಾವೆಲ್ಲರೂ  ಪಕ್ಷವನ್ನು ತ್ಯೆಜಿಸುವ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಿರ್ಗತಿಕ ಕುಟುಂಬಕ್ಕೆ ದಾರಿದೀಪವಾದ ಜಪಾನಂದ ಸ್ವಾಮೀಜಿ

ಪಾವಗಡ ತಾಲ್ಲೂಕಿನ ನೀಲಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಂಕಿಯ ಅವಘಡದಿಂದ ಬೀದಿಗೆ ಬಂದಿದ್ದ ನರಸಿಂಹಪ್ಪ, ಅನಿತಾ ದಂಪತಿಗಳಿಗೆ ಸ್ವಾಮಿ ಜಪಾನಂದ ಜಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಕುಟುಂಬದ ಪಾಲಿನ ಅಪದ್ಭಾಂದವರಾಗಿದ್ದಾರೆ.

ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ದಿನ ನಿತ್ಯ ಬಟ್ಟೆಗಳನ್ನು ಶುದ್ಧಿಗೊಳಿಸಿ ಜೀವನ ಸಾಗಿಸುತ್ತಿದ್ದರು. ಬೆಂಕಿಯ ಅವಘಡ ಜರುಗಿ ಇದ್ದ ಪುಟ್ಟ ಗುಡಿಸಿಲು ಆಹುತಿಯಾಗಿ ಬೂದಿಯಾಯಿತು. ಮನೆಯಲ್ಲಿದ್ದ ಸರ್ವಸ್ವವೂ ಭಸ್ಮವಾಗಿದ್ದವು. ಬಟ್ಟೆ, ಪಾತ್ರೆ ಮತ್ತಿತರ ಸಮಸ್ತ ವಸ್ತುಗಳು ಒಂದು ಕಪಾಟು ಸಮೇತ ಸಂಪೂರ್ಣವಾಗಿ ಕರಕಲಾಗಿದ್ದನ್ನು ಸಮಸ್ತ ಜನತೆ ಮಾಧ್ಯಮದ ಮೂಲಕ ಅರಿಯುವಂತಾಯಿತು. ಈ ಬಗ್ಗೆ ಪಬ್ಲಿಕ್ ಸ್ಟೋರಿ ವರದಿ ಮಾಡಿ, ಕುಟುಂಬ ಸದಸ್ಯರ ಸ್ಥಿತಿಯ ಬಗ್ಗೆ ಸ್ವಾಮೀಜಿಯವರ ಗಮನಕ್ಕೆ ತಂದಿತ್ತು.

ಬಡ ಕುಟುಂಬಕ್ಕೆ ತತ್ ಕ್ಷಣದ  ಆಸರೆಯಾಗಿ ರಾಮಕೃಷ್ಣ ಸೇವಾಶ್ರಮ ಗೃಹೋಪಯೋಗಿ ವಸ್ತುಗಳನ್ನು, ಪಾತ್ರೆಗಳನ್ನು ಮತ್ತು ಚಳಿಯ ಈ ಸ್ಥಿತಿಯಲ್ಲಿ ಮಕ್ಕಳಿಗೆ ಹಾಗೂ ದಂಪತಿಗಳಿಗೆ ನೂತನ ಸ್ವೆಟರ್ಗಳು, ಕಂಬಳಿಗಳು, ಸೀರೆಗಳು, ದವಸ ಧಾನ್ಯಗಳನ್ನು ನೀಡಲಾಯಿತು. ಚುಮು ಚುಮು ಚಳಿಯಲ್ಲಿ ಮೂರು ದಿನಗಳಿಂದ ಉಟ್ಟ ಬಟ್ಟೆಯಲ್ಲಿಯೇ ಇದ್ದಂತಹ ಪುಟ್ಟ ಮಕ್ಕಳ ಮುಖದಲ್ಲಿ ಬೆಚ್ಚನೆಯ ಸ್ವೆಟರ್ ಗಳನ್ನು ಪೂಜ್ಯ ಸ್ವಾಮೀಜಿಯವರೇ ತೊಡಿಸಿದ ಸಂದರ್ಭದಲ್ಲಿ ಆನಂದದ ಸೆಲೆ ಹರಿದು ಬರುತ್ತಿರುವುದನ್ನು ಕಾಣಬಹುದಾಗಿತ್ತು.


ಕೊಟ್ಟ ವಸ್ತುಗಳನ್ನು ಕೊಂಡೊಯ್ಯುವ ಬಗ್ಗೆಯೂ ಚಿಂತಿಸುತ್ತಿದ್ದ ಅವರ ನಿಸ್ಸಹಾಯ ಸ್ಥಿತಿ ಗಮನಿಸಿ ಸಂಸ್ಥೆಯ ವಾಹನದಲ್ಲಿ ಅವರ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆಯನ್ನೂ ಸ್ವಾಮೀಜಿ  ಮಾಡಿದರು.  ಮುಖಂಡ ಕಿರಣ್ ಇದ್ದರು.

ನಾನು ಪ್ರಶಸ್ತಿ ವಾಪಸ್ ಮಾಡುವುದಿಲ್ಲ: ಡಾ ವಿಜಯಾ

Publicstory.in


ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ನನ್ನ ‘ಕುದಿ ಎಸರು’ ಕೃತಿಗೆ ಕೊಟ್ಟಿರುವ ಪ್ರಶಸ್ತಿಯನ್ನು ನಾನು ಹಿಂದಿರುಗಿಸುವುದಿಲ್ಲ ಎಂದು ಲೇಖಕಿ ಡಾ ವಿಜಯಾ ಖಚಿತ ಮಾತುಗಳಲ್ಲಿ ತಿಳಿಸಿದ್ದಾರೆ.

ಇಂದು ‘ಅವಧಿ’ ಅಂತರ್ಜಾಲ ಪತ್ರಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಪ್ರಶಸ್ತಿ ನನಗೆ ವಯಕ್ತಿಕವಾಗಿ ಕೊಟ್ಟ ಪ್ರಶಸ್ತಿ ಅಲ್ಲ. ಇದು ಮಹಿಳಾ ಲೋಕದ ದನಿಗೆ ಕೊಟ್ಟ ಪ್ರಶಸ್ತಿ. ವೈದೇಹಿ ಅವರಿಗೆ ಪ್ರಶಸ್ತಿ ನೀಡಿದ ೧೦ ವರ್ಷಗಳ ನಂತರ ಇನ್ನೊಬ್ಬ ಲೇಖಕಿಗೆ ಈ ಪ್ರಶಸ್ತಿ ಸಿಕ್ಕಿದೆ. ಹಾಗಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದೂ ಸಹಾ ಒಂದು ಪ್ರತಿಭಟನೆಯೇ ಎಂದು ಅವರು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಇದು ಸರ್ಕಾರದ ಪ್ರಶಸ್ತಿ ಅಲ್ಲ ಎಂದ ಅವರು ನಾನು ಇದುವರೆಗೂ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನಾಗಲೀ, ಅತ್ತಿಮಬ್ಬೆ ಪ್ರಶಸ್ತಿಯನ್ನಾಗಲೀ ಸ್ವೀಕರಿಸಿಲ್ಲ. ಆದರೆ ಅಕಾಡೆಮಿಗಳು ನೀಡುವ ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ಕೃತಿಯಲ್ಲೂ ನಾನು ಸಂಘ ಪರಿವಾರವನ್ನೂ ಸಹಾ ನೇರವಾಗಿ ಪ್ರಶ್ನಿಸಿದ್ದೇನೆ. ಈ ಪ್ರಶಸ್ತಿಗಳಿಂದ ನನ್ನ ಮಾತನ್ನು, ನನ್ನ ಹೋರಾಟವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ನಾನು ಯಾವತ್ತೂ ಹೋರಾಟದ ಅಂಗಳದಲ್ಲಿರುವವಳು ಹಾಗೂ ನಿರ್ಭಿಡೆಯ ಮಾತನ್ನಾಡುವವಳು ಎಂದು ಅವರು ನೇರವಾಗಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯಿದೆಯ ಔಚಿತ್ಯವನ್ನು ಪ್ರಶ್ನಿಸಿದ ಅವರು ತುರ್ತು ಪರಿಸ್ಥಿತಿಯನ್ನೂ ಮೀರಿದ ಒಂದು ಭಯಾನಕ ಪರಿಸ್ಥಿತಿ ನಮ್ಮ ಮುಂದಿದೆ. ಈ ವ್ಯವಸ್ಥೆಗೆ ಯಾರನ್ನೂ ಕೇಳುವ ಮನಸ್ಸಿಲ್ಲ. ಇದು ಸಂಪೂರ್ಣವಾಗಿ ಸರ್ವಾಧಿಕಾರಿ ಸರ್ಕಾರ ಎಂದು ಆತಂಕ ವ್ಯಕ್ತಪಡಿಸಿದರು.

ಕಾಫ್ಕಾ, ಕಳೆದೋದ ಗೊಂಬೆ ಮತ್ತು ಹುಡುಗಿ

0

ಮನೋಹರ ಪಟೇಲ್


ಬೋಹೀಮಿಯನ್ ಕಾದಂಬರಿಕಾರ ಮತ್ತು ಸಣ್ಣಕಥೆಗಾರ ಫ್ರಾಂಜ್ ಕಾಫ್ಕಾ (1883-1924),
ಒಂದು ದಿನ ಎಂದಿನಂತೆ ಬರ್ಲಿನ್‌ನ ಸ್ಟೆಗ್ಲಿಟ್ಜ್ ಪಾರ್ಕ್‌ನ ಮೂಲಕ ಅಡ್ಡಾಡುತ್ತಿದ್ದಾಗ, ಪಾರ್ಕನಲ್ಲಿ ತನ್ನ ನೆಚ್ಚಿನ ಗೊಂಬೆಯನ್ನು ಕಳೆದುಕೊಂಡಿದ್ದ ಕಾರಣ ಕಣ್ಣೀರು ಹಾಕುತ ಗೊಂಬೆಯನ್ನು ಹುಡುಕುತ್ತಿದ್ದ ಪುಟ್ಟ ಹುಡುಗಿಯನ್ನು ಕಂಡರು.

ಆಗ ಆ ಹುಡುಗಿಯೊಂದಿಗೆ ತಾವೂ ಕೂಡ ಸೇರಿಕೊಂಡು ಗೊಂಬೆಯನ್ನು ಹುಡುಕಲು ವಿಫಲ ಪ್ರಯತ್ನಗಳನ್ನು ಮಾಡಿದ ಕಾಫ್ಕಾ ಕೊನೆಗೆ ತಾವು ಮತ್ತು ಆಕೆ ಮರುದಿನ ಅದೇ ಜಾಗದಲ್ಲಿ ಭೇಟಿಯಾಗಿ ಕಳೆದುಹೋದ ಗೊಂಬೆಯನ್ನು ಪುನಃ ಹುಡುಕುವ ಒಟ್ಟು ನಿರ್ಧಾರಕ್ಕೆ ಬರುತ್ತಾರೆ.

ಮರುದಿನ, ಇಬ್ಬರೂ ಸೇರಿ ಗೊಂಬೆಯನ್ನ ಹುಡುಕಲು ಹೊರಡುತ್ತಾರೆ. ಆದರೆ ಕೊನೆಗೂ ಗೊಂಬೆಯನ್ನು ಕಂಡುಹಿಡಿಯಲು ಆಗುವುದಿಲ್ಲ. ಆಗ ಕಾಫ್ಕಾ ತಮ್ಮ ಜೇಬಿನಲ್ಲಿ ಮುಂಚೆಯೇ ಬರೆದಿಟ್ಟಿಕೊಂಡಿದ್ದ ಪತ್ರವನ್ನು ತೆಗೆದು ಇದು ಗೊಂಬೆ “ಬರೆದ” ಪತ್ರ ಸಿಕ್ಕಿತು ಎಂದು ಕಾಫ್ಕಾ ಆ ಹುಡುಗಿಗೆ ನೀಡಿದರು. ಆ ಪತ್ರದಲ್ಲಿ “ದಯವಿಟ್ಟು ಅಳಬೇಡ” , ನಾನು ಜಗತ್ತನ್ನು ನೋಡಲು ಪ್ರವಾಸಕ್ಕೆ ಹೋಗಿದ್ದೇನೆ. ನನ್ನ ಸಾಹಸಗಳ ಬಗ್ಗೆ ನಾನು ನಿಮಗೆ ಬರೆಯಲಿದ್ದೇನೆ. ” ಎಂದು ಒಕ್ಕಣೆಯಿತ್ತು.

ಹೀಗೆ ಆರಂಭವಾದ ಅವರಿಬ್ಬರ ಕಥೆ ಕಾಫ್ಕಾರ ಕೊನೆಯ ದಿನಗಳವರೆಗೂ ಮುಂದುವರಿದಿತ್ತು.

ಅವರು ಪುನಃ ಭೇಟಿಯಾದಾಗೆಲ್ಲಾ, ಕಾಫ್ಕಾ ಅವರು ತಾವು ಬಹು ಜಾಗೂರುಕವಾಗಿ ಸಂಯೋಜಿಸಿದ ಹುಡುಗಿಯ ಪ್ರೀತಿಯ ಗೊಂಬೆಯ ಸಾಹಸ ಪತ್ರಗಳನ್ನು ಮತ್ತು ಸಂಭಾಷಣೆಗಳನ್ನು ಆಕೆಯೊಂದಿಗೆ ಗಟ್ಟಿಯಾಗಿ ಓದುತ್ತಿದ್ದರುರು, ಅದು ಆ ಪುಟ್ಟ ಹುಡುಗಿಗೆ ಮನಸನ್ನು ಮೋಡಿಮಾಡಿದಂತಾಗುತ್ತಿತ್ತು.

ಅಂತಿಮವಾಗಿ, ಒಂದು ದಿನ ಕಾಫ್ಕಾ ತಾವೇ ಬರ್ಲಿನ್ ನಿಂದ ಖರೀದಿಸಿ ತಂದ ಒಂದು ಗೊಂಬೆಯೊಂದನ್ನು ಆಕೆಗೆ ಕೊಟ್ಟು ಗೊಂಬೆಯ ಕಥೆಯಿರುವ ಒಂದು ಪತ್ರವೊಂದನ್ನು ಆಕೆಗೆ ಓದಿದರು. ಆ ಹುಡುಗಿ “ಇದು ನನ್ನ ಗೊಂಬೆಯಂತೆ ಕಾಣ್ತಾಯಿಲ್ಲ” ಎಂದು ಹೇಳಿದಾಗ. ಕಾಫ್ಕಾ ಆಕೆಗೆ ಮತ್ತೊಂದು ಪತ್ರವನ್ನು ಹಸ್ತಾಂತರಿಸಿದರು, ಅದರಲ್ಲಿ “ನನ್ನ ಪ್ರವಾಸಗಳು, ನನ್ನನ್ನು ಬದಲಾಯಿಸಿಬಿಟ್ಟಿದೆ” ಎಂದು ಬರೆದಿತ್ತು. ಹುಡುಗಿ ಸಂತೋಷದಿಂದ ತನ್ನ ಗೊಂಬೆಯನ್ನು ತಬ್ಬಿಕೊಂಡು ತನ್ನೊಂದಿಗೆ ಮನೆಗೆ ಕರೆದೊಯ್ದಳು.

ತದನಂತರ ಹಲವು ವರ್ಷಗಳ ಬಳಿಕ, ಬೆಳೆದ ದೊಡ್ಡವಳಾದ ಆ ಹುಡುಗಿ ತನ್ನ ಗೊಂಬೆಯಲ್ಲಿ ಎಂದೂ ಗಮನಿಸದ ಬಿರುಕಿನಲ್ಲಿ ಸಿಕ್ಕಿಸಿದ ಸಣ್ಣ ಪತ್ರವೊಂದನ್ನು ಕಂಡುಳು. ಕಾಫ್ಕಾ ಸಹಿ ಮಾಡಿದ್ದ ಆ ಸಣ್ಣ ಪತ್ರದಲ್ಲಿ, “ನೀವು ಪ್ರೀತಿಸುವ ಪ್ರತಿಯೊಂದುವೂ ಕಳೆದುಹೋಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ, ಆ ಪ್ರೀತಿ ಬೇರೆ ರೀತಿಯಲ್ಲಿಯೆ ಮರಳಿಬರುತ್ತದೆ” ಎಂದು ಬರೆದಿತ್ತು.

Image courtesy ; @Kafka’s doll

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ; ಮೋಹನ್ ಭಾಗವತ್

ಪಾವಗಡ:  ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಆರ್.ಎಸ್.ಎಸ್. ಸರ ಸಂಚಾಲಕ ಮೋಹನ್ ಭಾಗವತ್ ತಿಳಿಸಿದರು

ತಾಲ್ಲೂಕಿನ ಚನ್ನಕೇಶಪುರದಲ್ಲಿ ಬುಧವಾರ ಸಂಜೆ ನಡೆದ ಗ್ರಾಮ ವಿಕಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಗಳು ವಿಸ್ತಾರಗೊಳ್ಳುತ್ತಿವೆ.  ಗ್ರಾಮಸ್ಥರ ಅಭಿವೃದ್ಧಿಪರ ಚಿಂತನೆ, ಪಾಲ್ಗೊಳ್ಳುವಿಕೆಯಿಂದ ಹಳ್ಳಿಗಳು ಉದ್ಧಾರವಾಗುತ್ತವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರಲ್ಲಿ ಗ್ರಾಮಗಳ ಬಗ್ಗೆ ಸಂಘಟನಾತ್ಮಕ ಚಿಂತನೆಗಳಿರಬೇಕು. ಆಧುನಿಕ ತಂತ್ರಜ್ಞಾನವನ್ನು ಪ್ರಗತಿಗಾಗಿ ಬಳಸಿಕೊಳ್ಳಬೇಕು  ಎಂದರು.

ಗ್ರಾಮದ ಚನ್ನಕೇಶವ ದೇಗುಲದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸುತ್ತ ಮುತ್ತಲ ಗ್ರಾಮದ ಮಹಿಳೆಯರು ದೇಗುಲದ ಆವರಣದಲ್ಲಿ  ದೀಪಗಳನ್ನು ಬೆಳಗಿಸಿದರು.

ಕಲಾವಿದರು, ಗ್ರಾಮಸ್ಥರು, ವಿದ್ಯಾರ್ಥಿಗಳು ನಡೆಸಿಕೊಟ್ಟ ಜನಪದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಆರ್.ಎಸ್.ಎಸ್ ಸಹ ಸಂಚಾಲಕ ಪಿ.ಆರ್. ಮುಕುಂದ್, ದತ್ತಾತ್ರೇಯ, ಆನಂದ ರಾವ್ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.