Tuesday, October 14, 2025
Google search engine
Home Blog Page 333

ಸಿದ್ದರಾಮಯ್ಯನು ಕೂಡ ಜೈಲಿಗೆ ಹೋಗುತ್ತಾನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪ್ರಧಾನಿ, ಸ್ಪೀಕರ್ ಮತ್ತು ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಬೋಧಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಾನು ಯಾರ ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಶಿವಣ್ಣ ನಾನು ನನ್ನ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ. ಸ್ವಲ್ಪ ದಿನ ಕಾಯಿರಿ. ಅವರ ಜೈಲಿಗೆ ಹೋಗುತ್ತಾರೆ. ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದರು. ಇದನ್ನು ಸಹಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.

ಪದೇಪದೇ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಆರೋಪ ಮಾಡುತ್ತಾರೆ. ಜೈಲಿಗೆ ಹೋಗಿ ಬಂದವರು ಎಂದು ಜರೆಯುತ್ತಾರೆ. ಇದು ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಂತಹ ಮಾತುಗಳನ್ನು ಕೇಳಿದರೆ ನನ್ನ ರಕ್ತ ಕುದಿಯುತ್ತದೆ.

ಸಿದ್ದರಾಮಯ್ಯನು ಕೂಡ ಜೈಲಿಗೆ ಹೋಗುತ್ತಾನೆ. ಸ್ವಲ್ಪ ದಿನ ಕಾಯಬೇಕು ಅಷ್ಟೇ ಎಂದು ಹೇಳಿದರು.
ನನಗೆ ಎಲ್ಲರೂ ಬೇಕು. ದಲಿತರು, ಕುರುಬರು, ಮುಸ್ಲೀಮರು ಸೇರಿ ಎಲ್ಲಾ ಜಾತಿಯವರ ಮನೆಯಲ್ಲಿ ಉಂಡಿದ್ದೇನೆ. ಹಾಗೆಯೇ ಅವರೂ ನನ್ನ ಜೊತೆ ಬಂದು ಊಟ ಮಾಡಲಿ ಎಂದು ಸವಾಲು ಹಾಕಿದರು. ಸ್ವಲ್ಪ ದಿನಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವರ ಬಣ್ಣ ಬಯಲಾಗಲಿದೆ ಎಂದು ತಿಳಿಸಿದರು.

ಊರ ಹೆಸರೇ “ಮಠ”

0

ಲೇಖಕರು :ಲಕ್ಷ್ಮೀಕಾಂತರಾಜು ಎಂಜಿ
ಮಠ

ಈ ಊರಿನ‌ ಗ್ರಾಮಸ್ಥರು ತಮ್ಮ ಊರಿನಿಂದ ಐದಾರು ಕಿಮೀಗೂ ಹೆಚ್ಚು ದೂರದ ಸ್ಥಳಗಳಿಗೆ ಹೋದಾಗ ಅಲ್ಲಿ ಯಾರಾದರು ನಿಮ್ಮೂರು ಯಾವೂರು ಎಂದು ಸಂದರ್ಭವೊಂದರಲ್ಲಿ ಪ್ರಶ್ನಿಸಿದರೆ ಗ್ರಾಮಸ್ಥರು ನಮ್ಮೂರು ಮಠ ಎಂದು ಉತ್ತರಿಸಿದ ತಕ್ಷಣ ಸಿದ್ಧಗಂಗಾ ಮಠವೇ? ಚುಂಚನಗಿರಿ ಮಠವೇ? ಎಂದು ಪ್ರತಿಕ್ರಿಯಿಸುವ ಮೂಲಕ ಪ್ರತ್ಯುತ್ತರ ನೀಡುತ್ತಾರೆ! ಅಲ್ಲ . ನಮ್ಮೂರ‌ ಹೆಸರೇ ಮಠ ಎಂದು ಹೇಳಿದರೆ ಎಲ್ಲಿದೆ? ಅದರ ಹೆಸರೇ ಮಠಾನ ? ಎಂಥಾ ಮಠ..?ಎಂದು ಹಾಸ್ಯಾಸ್ಪದವಾಗಿ ಕೇಳುತ್ತಾರೆ.ಈ ರೀತಿಯ ವಿಶಿಷ್ಠ ಹೆಸರಿನ ಊರು ಮಠ‌ ಇರುವುದು‌ ತುಮಕೂರು‌ ಜಿಲ್ಲೆಯ ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ವ್ಯಾಪ್ತಿಯಲ್ಲಿನ ಈ ಊರು ತಾಲ್ಲೂಕು‌ ಕೇಂದ್ರದಿಂದ ಮೂವತ್ತೈದು ಕಿಮೀ ಹಾಗೂ ಜಿಲ್ಲಾ ಕೇಂದ್ರದಿಂದ ನಲವತ್ತು ಕಿಮೀ ದೂರದಲ್ಲಿದೆ.ಬಹಳ ವರ್ಷಗಳ ಹಿಂದೆ ಹಾಗಲವಾಡಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿದ್ದ ಈ ಊರಿನಲ್ಲಿ ಶಾಂತದೇವರಾಯನೆಂಬ ಋಷಿ ಮುನಿಯು ಇಲ್ಲಿ ವಾಸಿಸುತ್ತಿದ್ದು ತದನಂತರ ಗ್ರಾಮವು ಋಷಿಮುನಿಯ ಶಾಂತದೇವರರಾಯನ ಹೆಸರಿನೊಂದಿಗೆ ಶಾಂತದೇವರಾಯನಮಠ ವೆಂದು ಆಗಿತ್ತು. ಅದು ಕೊನೆಗೆ ದಾಖಲೆಗಳಲ್ಲಿ ಬಂದು ಉಳಿಯುವ ಹೊತ್ತಿಗೆ ಮಠ ಆಗಿ ಉಳಿದಿದೆ. ಬಹು ಹಿಂದೆಯೇ ಇಲ್ಲಿ ದೇವಸ್ಥಾನವಿದ್ದ ಕುರುಹು ಗ್ರಾಮದ ಸರ್ವೇ ನಕಾಶೇಯಲ್ಲಿಯೇ ಇದೆ. ಅದೇ ಜಾಗದಲ್ಲಿಯೇ ಇಂದೂ ಕೂಡ ದೇವಸ್ಥಾನ ಇರುವ ಕಾರಣ ಗ್ರಾಮಕ್ಕಿರುವ ಇತಿಹಾಸಕ್ಕೊಂದು ಅದೊಂದು ದಾಖಲೆಯಾಗಿದೆ.”ಮಠ” ಹೆಸರಿನಲ್ಲಿ ಅನೇಕ ಮಠಮಾನ್ಯಗಳು ಇರುವ ಕಾರಣ ಜನರ ಮನಸ್ಸಿನಲ್ಲಿ ಮಠವೆಂದ ಕೂಡಲೇ ಅದೊಂದು ನಿತ್ಯ ಅಕ್ಷರ ಹಾಗೂ ಅನ್ನ ದಾಸೋಹ ಸ್ಥಳವೆಂಬುದು ಉಳಿದುಹೋಗಿದ್ದು ಮಠ ಎಂದಕೂಡಲೇ ಆ ಕಲ್ಪನೆ ಜನರ ಮನಸ್ಪಟಲದಲ್ಲಿ ಮೂಡಿಬರುವುದು ಸಹಜವೇ ಸರಿ.

ಮಠವೂ ಮುಖ್ಯರಸ್ತೆಯಲ್ಲಿರದೆ ಮುಖ್ಯ ರಸ್ತೆಯಿಂದ ಐದಾರು ಕಿಮಿಗಳ ಅಂತರದಲ್ಲಿದ್ದು ಇಂದಿಗೂ ಈ ಗ್ರಾಮಕ್ಕೆ ಬಸ್ ಸಂಪರ್ಕವಿರದ ಕಾರಣ ಗ್ರಾಮ ಇತರರಿಗೆ ಪರಿಚಯವಾಗದೇ ದೂರ ಉಳಿದಿರುವುದಕ್ಕೂ ಒಂದು ಕಾರಣವಾಗಿದೆ ಎನ್ನಬಹುದು.

ಈ ಗ್ರಾಮದಲ್ಲಿನ‌ ಗ್ರಾಮದೇವತೆಯಾಗಿ ಬಸವಣ್ಣನಿದ್ದು ಇಲ್ಲಿಯ ಪೂರ್ವಜರೇ ರಚಿಸಿರುವ ಇಂದಿಗೂ ಹಾಡಿಕೊಂಡು ಬರುತ್ತಿರುವ ದೇವರ ಭಜನೆ ಗೀತೆಯೊಂದರಲ್ಲಿ “ಶಾಂತದೇವರಾಯ ಮಠದಲ್ಲಿ ನೆಲಸಿದ ದೇವ….”

ಎಂದು ಚರಣವೊಂದರಲ್ಲಿ ಬಸವಣ್ಣನನ್ನ ಸ್ಮರಿಸಲಾಗುತ್ತಿದೆ. ಈ ಚರಣದ ಸಾಲುಗಳನ್ನ ಗಮನಿಸಿದಾಗ ಇಲ್ಲಿ ಶಾಂತದೇವರಾಯಮಠದ ಬಗ್ಗೆ ದಾಖಲೆ ಸಿಕ್ಕಂತಾಗುತ್ತದೆ.ಇದೇ ಬಸವಣ್ಣನ ದೇವಸ್ಥಾನದ ಒಡೆತನದಲ್ಲಿ ಸುಮಾರು ಇಪ್ಪತ್ತೈದು ಎಕರೆ ಜಮೀನು ಇರುವುದು ವಿಶೇಷ.

ಶ್ರೀ‌ಬಸವಣ್ಣ ದೇವರ ಧರ್ಮದರ್ಶಿ ಕಮಿಟಿ‌ ಹೆಸರನಲ್ಲಿರುವ ಈ ಜಮಿನನ್ನ‌‌ ಇಲ್ಲಿನ ಟ್ರಸ್ಟ್ ನಿರ್ವಹಣೆ ಮಾಡಿಕೊಂಡು ಅದರಲ್ಲಿ ಬರುವ ಕೃಷಿ ಆದಾಯವನ್ನು ದೇವಸ್ಥಾನದ ನಿರ್ವಹಣೆಗೆ ಬಳಸಲಾಗುತ್ತಿದೆ. ಈಗ ಪ್ರಸ್ತುತವಾಗಿ ಹಳೇ ದೇವಸ್ಥಾನವನ್ನು ಸುಮಾರು ನಲವತ್ತು ಲಕ್ಷಗಳ ವೆಚ್ಚದೊಂದಿಗೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಇಂಥಹ ಗ್ರಾಮವಾದ ಮಠವು ಸುಮಾರು ಅರವತ್ತು ಮನೆಗಳು ಉಳ್ಳ ಈ ಗ್ರಾಮದಲ್ಲಿ ಎಲ್ಲರೂ ಒಕ್ಕಲಿಗ ಸಮುದಾಯದವರೇ ಆಗಿರುವ ಕಾರಣ ಕುಲ ಕಸುಬು ಕೃಷಿಯೇ ಆಗಿದೆ ಮತ್ತು ಪ್ರಧಾನ ವೃತ್ತಿಯಾಗಿದೆ.

ಪ್ರಮುಖ ಬೆಳೆಯಾಗಿ ಇಂದು ಅಡಕೆ ತೆಂಗು ಇಲ್ಲಿನ ಜೀವನಾಧಾರವಾಗಿದೆ.ಸುಮಾರು ಹತ್ತು ವರ್ಷದ ಹಿಂದೆ ಈ ಊರಿನ ರೈತರು ಕೇವಲ ರಾಗಿ ಸೇರಿದಂತೆ ದವಸ ಧಾನ್ಯಗಳ ಬೆಳೆಗಳನ್ನ ಬೆಳೆಯುತ್ತಿದ್ದು ಇಂದು ವಾಣಿಜ್ಯ ಬೆಳೆಗಳತ್ತ ಗಮನಹರಿಸಿ ನೀರೊಂದಿದ್ದರೆ ಲಕ್ಷ ಲಕ್ಷ ಎಣಿಸುವ ಮಟ್ಟಕ್ಕೆ ರೈತ ಬೆಳೆದಿದ್ದಾನೆ. ಪ್ರಮುಖವಾಗಿ ಮಿಡಿ ಸೌತೆಯನ್ನೆ ಹೆಚ್ಚು ಬೆಳೆಯುತ್ತಿದ್ದು ಇದು ಅಲ್ಪಾವಧಿಯ ಬೆಳೆಯು ಆಗಿರುವ ಕಾರಣ ರೈತ ಹೆಚ್ಚು ಆಸಕ್ತಿ ಹೊಂದಿದ್ದಾನೆಇಲ್ಲಿ ವಾಡಿಕೆ ಪ್ರಮಾಣದ ಮಳೆಯಾಗದ ಕಾರಣ ಅಂತರ್ಜಲದ ಮಟ್ಟ ಇಂದು ಸಾವಿರ ಅಡಿಯ ಗಡಿ ದಾಟಿದೆ. ಪಾತಾಳದಿಂದ ನೀರೆತ್ತಿ ರೈತನಿಂದು ಬೆಳೆಸಿದ ತೆಂಗು ,ಅಡಕೆ ಬೆಳೆಗಳನ್ನ ಉಳಿಸುವ ಪ್ರಯತ್ನದಲ್ಲಿದ್ದು ರೈತ ತನ್ನ ಆದಾಯದ ಜೊತೆಗೆ ಸಾಲ ಮಾಡಿ ಬೋರ್ ವೆಲ್ ಗೆ ಸುರಿಯುತ್ತಿದ್ದಾನೆ.ಇಲ್ಲಿ ಕುಡಿಯುವ ನೀರಿಗೆ ಬಳಕೆಯಾಗುವ ನೀರು ಸಾವಿರ ದಾಟಿರುವ ಕಾರಣ ಫ್ಲೋರೈಡ್ ಅಂಶವಿದ್ದು ಪ್ಲೋರೈಡ್ ಬಾಧಿತರೂ ಇದ್ದಾರೆ. ಇದನ್ನ ನಿವಾರಿಸಲೆಂದೇ ಇಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ.

ಮುಖ್ಯ ರಸ್ತೆಯಿಂದ ಊರಿಗೆ ಸಂಪರ್ಕ ರಸ್ತೆಯು “ನಮ್ಮ ರಸ್ತೆ ನಮ್ಮ ಗ್ರಾಮ ” ಯೋಜನೆಯಲ್ಲಿ ರಸ್ತೆ ನಿರ್ಮಾಣವಾಗಿದ್ದು ಉತ್ತಮ‌ ರಸ್ತೆ ಇದೆ. ಅಂಗನವಾಡಿ ಹಾಗೂ ಪ್ರಾಥಮಿಕ‌ ಶಾಲೆ ಇದ್ದೂ ಹಾಜರಾತಿಯ ಕೊರತೆ ಎದುರಿಸುತ್ತಿದೆ.

ಒಟ್ಟಿನಲ್ಲಿ ಈ ಊರ ಹೆಸರೇ ಮಠ ಎಂಬುದಾಗಿದ್ದು ಇಲ್ಲಿ ಯಾವುದೇ ಸ್ವಾಮಿಗಳು ಇರುವ ಗದ್ದಿಗೆ ಮಠವಲ್ಲ. ಇದು ಊರ ಹೆಸರೇ ಮಠ ಎಂಬುದು ವಿಶೇಷವಾಗಿದೆ.

ಜಿ.ಪಂಗೆ ಭೇಟಿ ನೀಡಿದ ಸಂಸದ ಬಸವರಾಜು ಮಾಡಿದ್ದು ಏನು?

ಸಂಸದ ಜಿ.ಎಸ್. ಬಸವರಾಜು ಬುಧವಾರ ತುಮಕೂರು ನಗರದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ವೀಕ್ಷಿಸಿದರು.
ಸರ್ಕಾರ ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಸಮಗ್ರ ಅಂಕಿ-ಅಂಶಗಳ ಕ್ರೂಢೀಕೃತ ಮಾಹಿತಿ ಅತ್ಯಗತ್ಯ. ಹಾಗಾಗಿ ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳ ಭೌಗೋಳಿಕ ಗುರುತು ಮಾಹಿತಿಗಾಗಿ ಬೇಸ್ ಮ್ಯಾಪ್ ತಯಾರಿಸಲು ಉದ್ದೇಶಿಸಿದೆ.

ಪ್ರತಿಯೊಂದು ಇಲಾಖೆ ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಮಂಜೂರಾತಿ ಹಂತದಲ್ಲಿರುವ, ಹೊಸ ಪ್ರಸ್ತಾವನೆಗಳು ಹಾಗೂ ಪುನರ್ ನವೀಕರಣ ಯೋಜನೆಗಳ ಪ್ರಗತಿ ಅಂಕಿ-ಅಂಶಗಳನ್ನು ದೂರ ಸಂವೇದನಾ ಇಲಾಖೆ ಮೂಲಕ ಸಂಗ್ರಹಿಸಿ ದಾಖಲಿಸಿ ಬೇಸ್ ಮ್ಯಾಪ್ ತಯಾರಿಸಬೇಕು ಎಂದರು.

ಪ್ರತೀ ಗ್ರಾಮದ ಕೆರೆ-ಕಟ್ಟೆ, ಕೊಳವೆಬಾವಿ, ತೆರೆದ ಬಾವಿ, ಜನಸಂಖ್ಯೆ, ಕುಟುಂಬ, ರಸ್ತೆ, ಮನೆ, ಕೃಷಿಭೂಮಿ, ಸರ್ಕಾರಿ ಜಮೀನು, ಶಾಲೆ, ಮರ-ಗಿಡ, ಅಂಗನವಾಡಿ ಕೇಂದ್ರ, ಆಸ್ಪತ್ರೆ, ಸಂಘ-ಸಂಸ್ಥೆ, ವಿವಿಧ ಇಲಾಖೆಗಳ ಅಧಿಕಾರಿ/ನೌಕರರು ಹಾಗೂ ಮತ್ತಿತರ ಅಂಕಿ-ಅಂಶಗಳ ಸ್ಥಿತಿ-ಗತಿ ಅರಿತು ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ.
ಪಂಚಾಯತಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಾರಂಭಿಸಲಾಗಿರುವ ಮಿಷನ್ ಅಂತ್ಯೋದಯ ಕಾರ್ಯಕ್ರಮಕ್ಕೆ ಪೂರಕವಾಗಿ ನೆರವಾಗಬೇಕು ಎಂದು ಸೂಚಿಸಿದರು.

ತುಮಕೂರಿನಲ್ಲಿ ಕುರುಬರ ಪ್ರತಿಭಟನೆ

0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇಶದ್ರೋಹಿ ಎಂದು ಕರೆದಿರುವ ಬಿಜೆಪಿ ಮುಖಂಡರು ಕೂಡಲೇ ಬಹಿರಂಗ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಕುರುಬ ಸಮುದಾಯದ ನೂರಾರು ಮಂದಿ ತುಮಕೂರಿನಲ್ಲಿ ಪ್ರತಿಭನಾ ಮೆರವಣಿಗೆ ನಡೆಸಿದರು.

ತುಮಕೂರಿನ ಕಾಳಿದಾಸ ವಿದ್ಯಾವರ್ಧಕ ಸಂಘದಿಂದ ಬಿಜಿಎಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾಜಿ ಸಚಿವರಾದ ಸೊಗಡು ಶಿವಣ್ಣ ಮತ್ತು ಸಿ.ಟಿ.ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕುರುಬರ ಮುಖಂಡ ಚಂದ್ರಶೇಖರ್ ಮಾತನಾಡಿ ಸೊಗಡು ಶಿವಣ್ಣ ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದರು. ಸಚಿವರು ಆದರು. ಏನೂ ಕೆಲಸ ಮಾಡಲಿಲ್ಲ. ನಾಲ್ಕು ಬಾರಿ ಗೆದ್ದು ಸಚಿವರಾದರೂ ಸೊಗಡು ಶಿವಣ್ಣ ಮತ್ತೆ ಟಿಕೆಟ್ ಗಳಿಸಿಕೊಳ್ಳಲು ಆಗಿಲಿಲ್ಲ. ಶಿವಣ್ಣನವರಿಗೆ ಒಬ್ಬರನ್ನೂ ಕೂಡ ಗೆಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಶಿವ ಣ್ಣ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ರಾಜಕಾರಣಿ. ಹಲವರನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಅವರಿಗಿದೆ. ಅಂಥವರನ್ನು ದೇಶದ್ರೋಹಿ ಎಂದು ಕರೆದು ಸಣ್ಣತನ ಮೆರೆದಿದ್ದಾರೆ. ಹೀಗಾಗಿ ಸಿ.ಟಿ.ರವಿ ಮತ್ತು ಸೊಗಡು ಶಿವಣ್ಣ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಎಲ್ಲ ಜಾತಿಗಳಿಗೆ ಸಿದ್ದರಾಮಯ್ಯ ಮಾನ್ಯತೆ ನೀಡಿದ್ದಾರೆ. ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅಂಥ ವ್ಯಕ್ತಿಯ ವಿರುದ್ಧ ಸಣ್ಣತನದ ಹೇಳಿಕೆ ನೀಡುವುದು ಬಿಜೆಪಿ ನಾಯಕರಿಗೆ ಸಲ್ಲದು ಎಂದರು. ಪ್ರತಿಭಟನೆಯಲ್ಲಿ ಪತ್ರಕರ್ತ
ಪತ್ರಕರ್ತ ಎಸ್. ನಾಗಣ್ಣ ಮೊದಲಾದವರು ಉಪಸ್ಥಿತರಿದ್ದರು.

ಸೆಕ್ಸ್ ಗೂ ವಯಸ್ಸಿಗೂ ಸಂಬಂಧ ಇಲ್ಲ!: ಸಂಶೋಧನೆಯಲ್ಲಿ ಬಹಿರಂಗ

0

ತುಮಕೂರು: ವರ್ಷ 50 ದಾಟಿದರೂ ಪ್ರತಿ ರಾತ್ರಿ ಶೃಂಗಾರ ರಸಗಳಿಗೆ ಮಾತ್ರ ನಿಂತಿಲ್ಲ.
ಇದೇನು ಕಥೆಯಲ್ಲ. ಚೆನ್ನೈನ ಸೆಕ್ಸಾಲಿಜಿಸ್ಟ್ ಡಾ. ನಾರಾಯಣ ರೆಡ್ಡಿ ಅವರು ಚೆನ್ನೈನಲ್ಲಿ ನಡೆಸಿದ ‘ವಯಸ್ಸಾದವರಲ್ಲಿ ಸೆಕ್ಸ್ ಬಿಹೇವಿಯರ್’ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ,

ಅಧ್ಯಯನ ಅನೇಕ ಕೌತುಕದ ಅಂಶಗಳನ್ನು ಹೊರ ಹಾಕಿದೆ. ಸೆಕ್ಸ್ ಗೂ ವಯಸ್ಸಿಗೂ ಸಂಬಂಧ ಇಲ್ಲ ಎಂಬುದನ್ನು ಗಟ್ಟಿಯಾಗಿ ಹೇಳಿದ್ದಾರೆ. ಅಧ್ಯಯನಕ್ಕೆ ಒಳಪಡಿಸಿದ ಮಹಿಳೆಯರು ಅವರ ಸೆಕ್ಸ್ ಕುರಿತು ಸತ್ಯಗಳನ್ನು ಬಿಚ್ಚಿಟಿದ್ದಾರೆ.
50ರಿಂದ 59 ವರ್ಷ ಒಳಗಿಗ ಮಹಿಳೆಯರು- ಪುರುಷರು ಪ್ರತಿ ತಿಂಗಳಲ್ಲಿ ಹತ್ತು ಸಲವಾದರೂ ರತಿಕ್ರೀಡೆಯಲ್ಲಿ ತೊಡಗುವುದಾಗಿ ಹೇಳಿಕೊಂಡಿದ್ದಾರೆ. 50 ವರ್ಷ ದಾಟಿದ ಬಳಿಕ ರತಿಕ್ರೀಡೆ ನಡೆಸಲಾರರು ಎಂದು ಜನರು ಸಾಮಾನ್ಯವಾಗಿ ನಂಬುತ್ತಾರೆ. ಅವರು ವಯಸ್ಕರಿಗಿಂತ ಹಿರಿಯರೇ ರತಿಕ್ರೀಡೆಯ ಸುಖ ಅನುಭವಿಸುತ್ತಿದ್ದಾರೆ. ಈ ಅಧ್ಯಯನವನ್ನು 2005ರಿಂದ 2015ರಲ್ಲಿ ಕೈಗೊಂಡಿದ್ದು, 51ನೇ ವಯಸ್ಸಿನಿಂದ 90 ವರ್ಷದವರೆಗಿನ ಸುಮಾರು 2017 ಜನರನ್ನು ವೈಯಕ್ತಿಕವಾಗಿ ಸಂದರ್ಶಿಸಿ ಈ ಸಂಶೋಧನಾ ಅಧ್ಯಯನ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಚೆನ್ನೈನಲ್ಲಿ ಈಚೆಗೆ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಂಡಿಸಿದ್ದಾರೆ.

ಜೀವನ ಶೈಲಿಯಲ್ಲಿನ ಬದಲಾವಣೆ, ಆಯುಸ್ಸಿನ ಹೆಚ್ಚಳ, ಉತ್ತಮ ಆರೋಗ್ಯ ಸೇವೆ ಕಾರಣದಿಂದ ಭಾರತದಲ್ಲಿ ಹಿರಿಯ ವಯಸ್ಸಿನವರು ಶೃಂಗಾರ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಶಕ್ತಿ ಹೊಂದಲು ಕಾರಣವಾಗಿದೆ.

ಶೇ 22ರಷ್ಟು ಗಂಡಂದಿರುವ ಶೃಂಗಾರ ಕ್ರಿಯೆಗೆ ಪತ್ನಿಯನ್ನು ನಾವೇ ಮೊದಲು ಆಹ್ವಾನಿಸುವುದಾಗಿ ಹೇಳಿದ್ದರೆ, ಈ ವಿಚಾರದಲ್ಲೇ ಹೆಂಗಸರೇ ಮುಂದಿದ್ದಾರೆ. ಶೇ 24.06 ರಷ್ಟು ಮಹಿಳೆಯರು ರಾತ್ರಿ ವೇಳೆ ನಾವೇ ಮುಂದಾಗಿ ಗಂಡಂದಿರನ್ನು ಸೆಕ್ಸ್ ಗೆ ಆಹ್ವಾನಿಸುವುದಾಗಿ ಹೇಳಿದ್ದಾರೆ!

ಶೇ 68ರಷ್ಟು ಗಂಡಂದಿರು ತಮ್ಮ ಹೆಂಡತಿಯರು ಅತ್ಯಂತ ಕ್ರಿಯಾಶೀಲತೆಯಿಂದ ಸೆಕ್ಸ್ ನಲ್ಲಿ ಪಾಲ್ಗೊಳ್ಳುವುದಾಗಿಹೇಳಿದ್ದರೆ, ಶೇ 87 ರಷ್ಟು ಮಹಿಳೆಯರು ಗಂಡಂದಿರ ಹಾಸಿಗೆ ಸುಖ ಚೆನ್ನಾಗಿದೆ ಎಂದಿದ್ದಾರೆ.

ಅಚ್ಚರಿಯೆಂದರೆ; ಶೇ 29.87ರಷ್ಟು ಗಂಡಸರು ಪರಸಂಗ ಇಟ್ಟುಕೊಂಡಿರುವುದಾಗಿ ಹೇಳಿದ್ದರೆ, ಶೇ 16.76 ರಷ್ಟು ಮಹಿಳೆಯರು ಪರ ಪುರುಷರ ಜತೆ ಹಾಸಿಗೆ ಹಂಚಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದರಲ್ಲಿ, ಶೇ 23.95ರಷ್ಟು ಪುರುಷರು ಹೆಂಡತಿ ಅಲಭ್ಯದ ಕಾರಣದಿಂದಾಗಿ ಬೇರೆ ಮಹಿಳೆಂರೊಂದಿಗೆ ಸಂಬಂಧ ಇಟ್ಟುಕೊಳ್ಳಲು ಕಾರಣ ಎಂದು ತಿಳಿಸಿದ್ದಾರೆ. ಶೇ 6.38ರಷ್ಟು ಮಹಿಳೆಯರು ಗಂಡನೊಂದಿಗೆ ಲೈಂಗಿಕ ತೃಪ್ತಿ ಇದ್ದರೂ ಸಹ ಬೇರೊಬ್ಬ ಗಂಡಸರ ಜತೆ ಲೈಂಗಿಕ ಸುಖಕ್ಕೆ ಬಿದ್ದಿರುವುದಾಗಿ ಹೇಳಿದ್ದಾರೆ.

ಶೇ 41.99ರಷ್ಟು ಗಂಡಸರು, ಶೇ 44ರಷ್ಟು ಮಹಿಳೆಯರು ರತಿಕ್ರೀಡೆಗೂ ಮುನ್ನ ಶೇ 5ರಿಂದ 10 ನಿಮಿಷ ಕಾಲ ಶೃಂಗಾರ ಸಲ್ಲಾಪದಲ್ಲಿ ತೊಡಗುವುದಾಗಿ ಹೇಳಿದ್ದಾರೆ. ಶೇ 24.42ರಷ್ಟು ಮಹಿಳೆಯರು ಸೆಕ್ಸ್ ವೇಳೆ ಪೂರಾ ನಗ್ನರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಶೇ 63ರಷ್ಟು ಗಂಡಸರು ರಾತ್ರಿ ವೇಳೆ ಮಾತ್ರ ರತಿ ಕ್ರೀಡೆ ನಡೆಸುವುದಾಗಿ ಹೇಳಿದ್ದರೆ, ಶೇ 66.13ರಷ್ಟು ಮಹಿಳೆಯರು ರಾತ್ರಿ ಸೆಕ್ಸ್ ಗೆ ತೆರೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎಂದು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ ಡಾ ರೆಡ್ಡಿ ತಿಳಿಸಿದ್ದಾರೆ.

ಭಾರೀ ಮಳೆಗೆ ಹೇಮಾವತಿ ನಾಲೆ ಕುಸಿತ

ಗುಬ್ಬಿ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹೇಮಾವತಿ ನಾಲೆ ಕುಸಿದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 206ನ್ನು ಸೀಳಿಕೊಂಡು ಹೋಗುವ ನಾಲೆಯ ರಸ್ತೆಬದಿಯಲ್ಲೇ ಮಣ್ಣು ಕುಸಿದು ಆತಂಕ ಮೂಡಿಸಿದೆ. ಹೀಗಾಗಿ ಕೂಡಲೇ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಅಪಾಯ ಎದುರಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಸಮೀಪ ಈ ನಾಲೆ ಕುಸಿದಿದೆ. ಸೇತುವೆಗೆ ಹೊಂದಿಕೊಂಡಂತೆ ಇರುವ ನಾಲೆಯ ಎರಡೂ ಬದಿ ಕುಸಿದು ಜನರ ಆತಂಕಕ್ಕೆ ಕಾರಣವಾಗಿದೆ. ಸ್ವಲ್ಪ ಹೆಚ್ಚಿಗೆ ಮಳೆ ಸುರಿದ್ದರೆ ಇಡೀ ಸೇತುವೆ ಬಿದ್ದು ಹೋಗಿ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಜನರು ಮಣ್ಣು ಕುಸಿದಿರುವುದನ್ನು ವೀಕ್ಷಿಸಿದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿರುತ್ತವೆ. ಸಾವಿರಾರು ವಾಹನಗಳ ಸಂಚಾರದ ಹಿನ್ನೆಲೆಯಲ್ಲಿ ಮಣ್ಣು ಕುಸಿದಿರುವುದನ್ನು ರಿಪೇರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿಐಟಿಯು ಸಂಭ್ರಮಕ್ಕೆ ತುಮಕೂರು ಸಜ್ಜು

ತುಮಕೂರು: ಸಿಐಟಿಯುನ ಐವತ್ತನೇ ವರ್ಷಾಚರಣೆ ಹಾಗೂ ಹದಿನಾಲ್ಕನೇ ರಾಜ್ಯ ಸಮ್ಮೇಳನ ತುಮಕೂರು ನಗರದಲ್ಲಿ ನಡೆಯಲಿದೆ. ನವೆಂಬರ್ 8, 9 ಮತ್ತು 10ರಂದು ಮೂರು ದಿನಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಸಕ್ತ ಆರ್ಥಿಕ, ಕಾರ್ಮಿಕರ ಸ್ಥಿತಿಗತಿ ಕಾರ್ಮಿಕ ಕಾನೂನು-ಕಾಯ್ದೆ, ದೇಶ ಎದುರಿಸುತ್ತಿರುವ ಬಿಕ್ಕಟ್ಟು ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ 600ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸಮ್ಮೇಳನಕ್ಕಾಗಿ ಪೂರ್ವ ತಯಾರಿಗಳು ಭರದಿಂದ ಸಾಗಿವೆ.

ಸಮ್ಮೇಳನದ ಮೊದಲ ದಿನ ಕೆಂಪಂಗಿ ದಳದ ಮೆರವಣಿಗೆ ಇದೆ. ನೂರಾರು ಕಾರ್ಮಿಕರು ಕೆಂಪು ಷರ್ಟ್ ಮತ್ತು ಕೆಂಪು ಪ್ಯಾಂಟ್ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದು ಮೆರವಣಿಗೆಗೆ ಮೆರಗು ನೀಡಲಿದೆ. ಸಾವಿರಾರು ಕಾರ್ಮಿಕರು ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸಮ್ಮೇಳನಕ್ಕೆ ಅಖಿಲ ಭಾರತ ಸಿಐಟಿಯು ಅಧ್ಯಕ್ಷೆ ಡಾ.ಹೇಮಲತ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಉಪಾಧ್ಯಕ್ಷ ಡಾ.ಎ.ಕೆ.ಪದ್ಮನಾಭನ್ ಭಾಗವಹಿಸಿ ಮಾಹಿತಿ ನೀಡುವರು. ಜನಪರ ಚಿಂತಕ ಕೆ.ದೊರೈರಾಜ್ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಸೈಯದ್ ಮುಜೀಬ್, ಬಿ.ಉಮೇಶ್, ಎನ್.ಕೆ. ಸುಬ್ರಮಣ್ಯ, ಜಿ.ಕಮಲ, ಷಣ್ಮುಖಪ್ಪ, ಲೋಕೇಶ್ ಹೀಗೆ ಎಲ್ಲಾ ವಿಭಾಗದ ಪ್ರಮುಖರನ್ನು ಒಳಗೊಂಡಂತೆ ಸಮಿತಿ ರಚಿಸಿದ್ದು ವಿಶೇಷವಾಗಿದೆ.

                                                                              ಮುಜೀಬ್

ಸಮ್ಮೇಳನದ ಭಾಗವಾಗಿ ರಚಿಸಿರುವ ಸ್ವಾಗತ ಸಮಿತಿ, ವಸತಿ, ಆಹಾರ, ವೇದಿಕೆ, ಪ್ರಚಾರ, ಸ್ಮರಣ ಸಂಚಿಕೆ ಸಮಿತಿಗಳ ಸಭೆಗಳು ನಡೆದಿದ್ದು ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿಯೊಂದು ಸಮಿತಿಗೂ ಅಧ್ಯಕ್ಷರು, ಸಂಚಾಲಕರನ್ನು ನೇಮಕ ಮಾಡಿದೆ. ಪ್ರತಿಯೊಂದು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈಗಾಗಲೇ ತುಮಕೂರು, ತಿಪಟೂರು, ಶಿರಾ ಮತ್ತು ಕುಣಿಗಲ್ ಕೇಂದ್ರ ಸ್ಥಾನಗಳಲ್ಲಿ ವಿಚಾರ ಸಂಕಿರಣಗಳು ನಡೆದಿವೆ.


ತುಮಕೂರಿನಲ್ಲಿ ಕಾರ್ಮಿಕರ ಕಾಯ್ದೆಗಳನ್ನು ಸಂಹಿತೆಗಳಾಗಿ ಬದಲಾವಣೆ, ದುಡಿವ ಜನರ ನಿಲುಮೆ, ತಿಪಟೂರಿನಲ್ಲಿ ಕೃಷಿ ಬಿಕ್ಕಟ್ಟು, ರೈತರ ಸಂಕಷ್ಟಗಳು ಮತ್ತು ಪರಿಹಾರ, ಶಿರಾದಲ್ಲಿ ಸೌಹಾರ್ದತೆ ಮತ್ತು ಬಹುತ್ವಕ್ಕೆ ಇರುವ ಸವಾಲುಗಳು, ಕುಣಿಗಲ್‍ನಲ್ಲಿ ಕುಣಿಗಲ್ ಸಮಗ್ರ ಅಭಿವೃದ್ಧಿಗಿರುವ ಸವಾಲುಗಳು ವಿಷಯಗಳ ಕುರಿತು ವಿವಿಧ ಗಣ್ಯರು ಚರ್ಚೆ ನಡೆಸಿದ್ದಾರೆ. ಕಾರ್ಮಿಕ ಮುಖಂಡರು, ರೈತ ಸಂಘ, ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪತ್ರಕರ್ತರು, ಬರಹಗಾರರು ಚಿಂತಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ದೇಶದಲ್ಲಾಗುತ್ತಿರುವ ಬೆಳವಳಿಗೆಗಳ ಕುರಿತು ಗಮನ ಸೆಳೆದಿದ್ದಾರೆ.
ಜಿಲ್ಲೆಯ ಸಿಐಟಿಯು ನಾಯಕರು, ಅಂಗನವಾಡಿ, ಗ್ರಾಮ ಪಂಚಾಯಿತಿ, ಕಾರ್ಖಾನೆಗಳ ಸಂಘಗಳು ಹೀಗೆ ಎಲ್ಲರೂ ಅಹರ್ನಿಷಿ ಕಟ್ಟಾಳುಗಳಂತೆ ಕೆಲಸ ಮಾಡುತ್ತಿರುವುದು ಮುಂದುವರಿದಿದೆ. ಕಾರ್ಯಕ್ರಮ ಯಶಸ್ವಿಗೆ ಬೇಕಾದ ಎಲ್ಲ ಕೆಲಸಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ.

ಇನ್ನೊಂದೆಡೆ ಸ್ಮರಣ ಸಂಚಿಕೆ ಸಮಿತಿ ಮೂರು ಬಾರಿ ನಡೆಸಿದೆ. ಸ್ಮರಣ ಸಂಚಿಕೆಯು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಯ ಸೌಹಾರ್ದ ನೆಲೆ, ಚಳವಳಿ, ಇತಿಹಾಸ, ಸ್ಲಂ ಜನರ ಬದುಕು, ಜಿಲ್ಲೆ ಮತ್ತು ರಾಜ್ಯವನ್ನು ಬಾಧಿಸುತ್ತಿರುವ ಗಣಿಗಾರಿಕೆ, ದಲಿತ ಹೋರಾಟಗಳು ಹೀಗೆ ಹತ್ತು ಹಲವು ವೈವಿಧ್ಯಮಯ ವಿಷಯಗಳು ಇರಬೇಕು ಎಂಬುದನ್ನು ಸಮಿತಿ ಕಂಡುಕೊಂಡಿದೆ.

                                                                     ಬಿ ಉಮೇಶ್

ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯಲ್ಲಿ ಹಿರಿಯರಾದ ಕೆ.ದೊರೈರಾಜು, ವಕೀಲ ಸಿ.ಕೆ. ಮಹೇಂದ್ರ, ಪತ್ರಕರ್ತ ಕೆ.ಈ.ಸಿದ್ದಯ್ಯ, ಸಹಪ್ರಾಧ್ಯಾಪಕ ಡಾ.ಓ.ನಾಗರಾಜು, ಲೇಖಕಿಯರಾದ ಮಲ್ಲಿಕಾ ಬಸವರಾಜು, ಬಾ.ಹ.ರಮಾಕುಮಾರಿ ಇದ್ದು ಸಹಕಾರ ನೀಡುತ್ತಿದ್ದಾರೆ.

ಇದರ ಭಾಗವಾಗಿ ನಾಡೋಜ ಬರಗೂರು ರಾಮಚಂದ್ರಪ್ಪ, ಲೇಖಕಿ ಬಾ.ಹ.ರಮಾಕುಮಾರಿ, ಸಾಹಿತಿ ಎನ್.ನಾಗಪ್ಪ, ಕಥೆಗಾರ ಎಸ್.ಗಂಗಾಧರಯ್ಯ, ಪತ್ರಕರ್ತ ಉಗಮ ಶ್ರೀನಿವಾಸ್, ಬರಹಗಾರ ಉಜ್ಜಜ್ಜಿ ರಾಜಣ್ಣ ಮೊದಲಾದವರಿಗೆ ಒಂದೊಂದು ವಿಷಯ ಕುರಿತು ಲೇಖನ ಬರೆಯಬೇಕು. ಶೀಘ್ರವೇ ಲೇಖನಗಳನ್ನು ಕಳಿಸಿಕೊಡಬೇಕೆಂದು ಮನವಿಯನ್ನು ಮಾಡಲಾಗಿದೆ. ಈಗಾಗಲೇ ಕೆಲ ಲೇಖಕರು ಲೇಖನಗಳನ್ನು ಕಳಿಸಿಕೊಟ್ಟಿದ್ದರೆ, ಇನ್ನು ಉಳಿದವು ಬರಬೇಕಾಗಿದೆ.
ಕಾರ್ಮಿಕರು, ರೈತರು, ಮಹಿಳೆಯರು ಮತ್ತು ಮಕ್ಕಳು ಬಿಕ್ಕಟ್ಟು ಎದುರಿಸುತ್ತಿದ್ದು ಅವುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಇಂತಹ ಚರ್ಚೆ, ಸಂವಾದಗಳಿಂದ ಭಾರತ ಸರ್ಕಾರದ ಗಮನ ಸೆಳೆಯುವ ಯತ್ನ ಇದಾಗಿದೆ.

ತುಮಕೂರು ವಿಶ್ವವಿದ್ಯಾನಿಲಯದೊಂದಿಗೆ ಅಂತರರಾಷ್ಟ್ರೀಯ ಒಡಂಬಡಿಕೆ

ತುಮಕೂರು: ಉನ್ನತ ಸಂಶೋಧನೆಗಳ ಕುರಿತು ಅಂತರರಾಷ್ಟ್ರೀಯ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ಸ್ಟೆಲೆನ್ಬಾಷ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ. ಬೆನ್ ಲೂಸ್ ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಉದ್ಘಾಟನೆ ಹಾಗೂ ಮೆಥಡ್ಸ್ ಅಂಡ್ ಅನಾಲಿಸಿಸ್ ಟೂಲ್ಸ್ ಇನ್ ಮೈಕ್ರೋಬಯಲ್ ಬಯೋಟೆಕ್ನಾಲಜಿ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿವಿಧ ಬಗೆಯ ಸಂಶೋಧನೆ ನಡೆಸುವ ಸಂಬಂಧ ತುಮಕೂರು ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಮಾತನಾಡಿ ಮೂಲವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಆರಂಭಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಹೆಚ್ಚುಹೆಚ್ಚು ಸಾಧನೆ ಮಾಡಬೇಕು. ಮಾನವ ಸಂಪನ್ಮೂಲಗಳ ವಿಷಯದಲ್ಲಿ ಉನ್ನತ ಸಂಶೋಧನೆ ನಡೆಯಬೇಕು. ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ಮಾಡಿದರೆ ವಿಫುಲ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ತಿಳಿಸಿದರು.

ಸ್ನಾತಕೋತ್ತರ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಂಯೋಜಕ ಡಾ. ಆರ್. ಜಿ. ಶರತ್ಚಂದ್ರ, ತುಮಕೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು.

ಉತ್ತಮ ಫಲಿತಾಂಶಕ್ಕೆ ಹೀಗೆ ಮಾಡಿ

ಉತ್ತಮ ಫಲಿತಾಂಶಕ್ಕಾಗಿ ವಿಶೇಷ ತರಗತಿ
ತುಮಕೂರು:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಸಂಜೆ ವೇಳೆ ವಿಶೇಷ ತರಗತಿ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶುಭ ಕಲ್ಯಾಣ್, ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ 21 ಸರ್ಕಾರಿ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದರು.
ತಾಲೂಕಿನಲ್ಲಿ ಉತ್ತಮ ಮಳೆ ಬರುತ್ತಿದ್ದು, ಈಗಾಗಲೇ ತುಂಬಿರುವ ಕೆರೆಗಳಿಗೆ ಮೀನಿನ ಮರಿಗಳನ್ನು ನಿಯಮಾನುಸಾರ ಬಿಡಲು ಅಗತ್ಯ ಕ್ರಮವಹಿಸುವಂತೆ ಮೀನುಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಶೇಕಡ 68ರಷ್ಟು ಪ್ರಗತಿ ಸಾಧಿಸಿದೆ. ಮಾರ್ಚ್ ಅಂತ್ಯದೊಳಗೆ ಶೇಕಡಾ 100ರಷ್ಟು ಭೌತಿಕ ಗುರಿ ಸಾಧಿಸಲು ಕ್ರಮವಹಿಸಬೇಕೆಂದು ಪಿಡಿಓಗಳಿಗೆ ತಿಳಿಸಿದರು.

ತುಂಬಿದ್ದ ಕೆರೆ ಹೇಗೆ ಖಾಲಿಯಾಯಿತು.

ಪಾವಗಡ: ತಾಲ್ಲೂಕಿನ ಕೆರೆ, ಗೋಕಟ್ಟೆಗಳನ್ನು  ದುರಸ್ಥಿಪಡಿಸದಿದ್ದಲ್ಲಿ  ಶೀಘ್ರ ತಹಶೀಲ್ದಾರ್ ಕಚೇರಿ ಮುಂಭಾಗ   ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ  ನಡೆಸಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ತಿಳಿಸಿದರು.

ಪಾವಗಡ ತಾಲ್ಲೂಕು ಪೆಂಡ್ಲಿಜೀವಿಯಲ್ಲಿ ಮಂಗಳವಾರ ನಡೆದ  ರೈತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಹಲ ದಶಕಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿತ್ತು. ಜಾನುವಾರುಗಳಿಗೆ ಮೇವು, ಕುಡಿಯಲು ನೀರಿಗೂ ಅಭಾವವಾಗಿತ್ತು. ಆದರೆ ಈಚೆಗೆ ಉತ್ತಮ ಮಳೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆ ಏರಿ ಒಡೆದು, ಮಂಗೆ ಬಿದ್ದು ಕೆರೆಯ ನೀರು ಹರಿದು ಹೋಗಿದೆ ಎಂದು ಆರೋಪಿಸಿದರು.

ಉತ್ತಮ ಮಳೆಯಾದರೂ ಕೆರೆಗಳಲ್ಲಿ ನೀರು ನಿಲ್ಲದ ಕಾರಣ ಅಂತರ್ಜಲ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆಯಾಗಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಕೊಂಡನ್ನ, ರೈತರ ದಾಖಲಾತಿ ಸರಿಯಿಲ್ಲ ಎಂಬ ನೆಪ ಹೇಳಿ ಸಾಲ ಮನ್ನಾ ಮಾಡದೆ ಸತಾಯಿಸಲಾಗುತ್ತಿದೆ. ಅಧಿಕಾರಿಗಳು ಕೂಡಲೇ ತಾಂತ್ರಿಕ ದೋಶ ಸರಿಪಡಿಸಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಹನುಮಂತರೆಡ್ಡಿ, ಕೊಂಡಪ್ಪ, ವೇಣುಗೋಪಾಲ್, ಓಬಳೇಶಪ್ಪ, ನಾರಾಯಣಪ್ಪ, ಅಂಜಪ್ಪ, ಮುತ್ಯಾಲಪ್ಪ ಉಪಸ್ಥಿತರಿದ್ದರು.