Thursday, February 19, 2026
Google search engine
Home Blog Page 333

ವಿದೇಶಿ ಹಾಲು: ರೈತರು ಗರಂ

ತೆರಿಗೆರಹಿತ ವಿದೇಶಿ ಹಾಲು ಮತ್ತು ಹಾಲು ಉತ್ಪನ್ನಗಳ ಆಮದಿಗೆ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ಮುಕ್ತ ಆರ್ಥಿಕ ಧೋರಣೆಗಳ ಜಾರಿಯ ಭಾಗವಾಗಿ ಮುಂದಿನ ತಿಂಗಳ ಆರಂಭದಲ್ಲಿ ಬ್ಯಾಂಕಾಕ್‍ನಲ್ಲಿ ನಡೆಯುವ ಸಭೆಯಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಭಾರತ ಸೇರಿದಂತೆ 16 ರಾಷ್ಟ್ರಗಳು ಸಹಿ ಹಾಕುವುದರೊಂದಿಗೆ ಬರಲಿವೆ. ನೋಟು ಅಮಾನಿಕರಣ, ಅವೈಜ್ಞಾನಿಕ ಜಿಎಸ್‍ಟಿ, ನೆರೆ ಹಾವಳಿ ಬರದಿಂದ ರೈತ ಮತ್ತು ಕೃಷಿಕೂಲಿಕಾರರು ಬೀದಿಪಾಲಾಗಿದ್ದಾರೆ. ರೈತರಿಗೆ ಹಸುಗಳ ಸಾಕಾಣಿಕೆಯ ಹೈನೋದ್ಯಮ ಸಣ್ಣ ಆದಾಯದೊಂದಿಗೆ ಸಹಕಾರಿಯಾಗಿತ್ತು. ಇದನ್ನು ಸಹ ಪ್ರಧಾನಿಯವರು ಕಿತ್ತುಕೊಳ್ಳುವ ನೀತಿಗೆ ವಿರೋಧ ವ್ಯಕ್ತಪಡಿಸಿದರು..

ನಮ್ಮ ಹಾಲಿನ ಶೇಕಡ 50ಕ್ಕಿಂತ ಕಡಿಮೆ ದರದಲ್ಲಿ ನಮ್ಮಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ದವಾಗುತ್ತಿದೆ. ಇಂತಹದ್ದೇ ಇನ್ನು ಹಲವು ದೇಶಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಹಾಕಿ ದೇಶೀಯ ಉತ್ಪಾದನೆಯನ್ನು ನಾಶ ಮಾಡಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆಯಲು ಅವಕಾಶ ಕೊಡದಂತೆ ದೇಶದ ರೈತರ ಬದುಕನ್ನು ಉಳಿಸಲು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತ ಸಂಘ ಅಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಎಐಕೆಎಸ್‍ಎಸ್‍ಸಿ ಕಾರ್ಯದರ್ಶಿ ಸಿ.ಯತಿರಾಜು, ಎಐಕೆಎಸ್‍ಎಸ್‍ಸಿ ಸಂಚಾಲಕ ಬಿ.ಉಮೇಶ್, ಮುಖಂಡ ಎಚ್.ಎಂ. ರವೀಶ್, ರೈತರಾದ ಪಾಪಣ್ಣ, ಅರುಣ್‍ಕುಮಾರ್, ಚಿಕ್ಕಬೋರೇಗೌಡ, ಶಬ್ಬೀರ್ ಪಾಷ, ಈಶ್ವರಪ್ಪ, ಕೆ.ಎಸ್.ವಿ.ಗೌಡ, ವೆಂಕಟೇಗೌಡ, ಮೊದಲಾದವರು ಉಪಸ್ಥಿತರಿದ್ದರು.

ಜೂನ್‌ನಲ್ಲಿ ತುಮಕೂರು ಗ್ರಾಮ ಪಂಚಾಯತಿಗಳಿಗೆ ಚುನಾವಣೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿಎನ್ ಶ್ರೀನಿವಾಸಾಚಾರಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನೀತಿ ಸಂಹಿತೆ ಮೇ 10 ರಂದು ಜಾರಿಯಾಗಲಿದ್ದು, ಜೂನ್ 5 ರಂದು ಫಲಿತಾಂಶ ಪ್ರಕಟವಾಗಲಿದೆ.

ಕಡ್ಡಾಯ ಮತದಾನ ಮತ್ತು ಮಹಿಳೆಯರಿಗೆ ಶೇ. 50 ಮೀಸಲು ಕಲ್ಪಿಸುವ ಪಂಜಾಯತ್ ರಾಜ್ ತಿದ್ದುಪಡಿ ಅನ್ವಯ ಚುನಾವಣೆ ನಡೆಯುತ್ತಿರುವುದು ಈ ಬಾರಿಯ ವಿಶೇಷ.[ಪಂಚಾಯಿತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯ]

6073 ಗ್ರಾಮ ಪಂಚಾಯಿತಿಗಳಲ್ಲಿ 229 ಗ್ರಾಮ ಪಂಚಾಯ್ತಿ ಹೊರತುಪಡಿಸಿ ಉಳಿದ 5,844 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಅಂದರೆ ನಗರ ಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಚುನಾವಣೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದರು.

ಚುನಾವಣಾ ಆಯುಕ್ತ ಶ್ರೀನಿವಾಸಾಚಾರಿ ಸುದ್ದಿಗೋಷ್ಠಿಯ ಹೈಲೈಟ್ಸ್

* ಮೇ 29 ಕ್ಕೆ ಮೊದಲ ಹಂತದ ಚುನಾವಣೆ

* ಜೂನ್ 2 ಕ್ಕೆ 2ನೇ ಹಂತದ ಚುನಾವಣೆ

* ಮೈಸೂರು ಮತ್ತು ಬೆಳಗಾವಿ ವಿಭಾಗಕ್ಕೆ ಮೇ 29 ರಂದು ಚುನಾವಣೆ

* ಕಲಬುರಗಿ ಮತ್ತು ಬೆಂಗಳೂರು ವಿಭಾಗಕ್ಕೆ 2 ನೇ ಹಂತದಲ್ಲಿ ಚುನಾವಣೆ

* ರಾಜ್ಯದ ಒಟ್ಟು 5844 ಗ್ರಾಮ ಪಂಚಾಯಿತಿಗಳಿಗೆ ಮತದಾನ

* 220 ಗ್ರಾಮ ಪಂಚಾಯಿತಿ ಅವಧಿ ಇನ್ನು ಮುಗಿದಿಲ್ಲವಾದ್ದರಿಂದ ಚುನಾವಣೆ ಇಲ್ಲ

* ಜೂನ್ 5 ರಂದು ಮತಎಣಿಕೆ ಮತ್ತು ಫಲಿತಾಂಶ ಪ್ರಕಟ

* ಪಂಚಾಯತ್ ರಾಜ್ ತಿದ್ದುಪಡಿ ಅನ್ವಯ ಮತದಾನ

* ಕಡ್ಡಾಯ ಮತದಾನ ಈ ಬಾರಿಯ ಪ್ರಮುಖ ಅಂಶ

* ಮಹಿಳೆಯರಿಗೆ ಶೇ. 50 ಸ್ಥಾನ ಮೀಸಲು

* ಮೊದಲ ಹಂತಕ್ಕೆ ನೀತಿ ಸಂಹಿತೆ ಜಾರಿ

ಮೊದಲ ಹಂತದ ಚುನಾವಣೆ – ಮೇ 29

ಚುನಾವಣೆ ನೀತಿ ಸಂಹಿತೆ ಜಾರಿ – ಮೇ 10

ಅಧಿಸೂಚನೆ ಪ್ರಕಟ – ಮೇ 11

ನಾಮಪತ್ರ ಸಲ್ಲಿಕೆ ಕೊನೆ ದಿನ – ಮೇ 18

ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ – ಮೇ 21

* ಎರಡನೇ ಹಂತಕ್ಕೆ ನೀತಿ ಸಂಹಿತೆ ಜಾರಿ

ಎರಡನೇ ಹಂತದ ಚುನಾವಣೆ – ಜೂನ್ 2

ಅಧಿಸೂಚನೆ ಪ್ರಕಟ – ಮೇ 15

ನಾಮಪತ್ರ ಸಲ್ಲಿಕೆ ಕೊನೆ ದಿನ – ಮೇ 22

ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ – ಮೇ 25

ಮೊದಲ ಹಂತದ ಚುನಾವಣೆ ಎಲ್ಲೆಲ್ಲಿ?

ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ ಉತ್ತರ ಕನ್ನಡ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.

ಎರಡನೇ ಹಂತದ ಚುನಾವಣೆ ಎಲ್ಲೆಲ್ಲಿ?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಮತದಾನ ನಡೆಯಲಿದೆ.

ಅಗತ್ಯ ಬಿದ್ದರೆ ಮೊದಲ ಹಂತಕ್ಕೆ ಮೇ 31 ರಂದು 2 ನೇ ಹಂತಕ್ಕೆ ಜೂನ್ 4 ರಂದು ಮರುಮತದಾನ ನಡೆಸಲಾಗುವುದು. ಇದರ ಜತೆಗೆ ವಿದ್ಯುನ್ಮಾನ ಮತ ಯಂತ್ರ ಉಪಯೋಗಕ್ಕೂ ಚಿಂತನೆ ನಡೆಸಲಾಗಿದೆ ಎಂದು ಎಂದು ಶ್ರೀನಿವಾಸಾಚಾರಿ ಮಾಹಿತಿ ನೀಡಿದರು.

ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ: ಡಾ.ಕೆ.ರಾಕೇಶ್ ಕುಮಾರ್

ತುಮಕೂರಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ಆಚರಣೆ
ತುಮಕೂರು ನಗರದಲ್ಲಿ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ವಿಶ್ವ ಅಂತರಿಕ್ಷ ಸಪ್ತಾಹ ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಲ ಭವನದಲ್ಲಿ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಅಂತರಿಕ್ಷ ಸಪ್ತಾಹ ಕುರಿತು ಮಾಹಿತಿ ಅರಿತರು.

ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳು ಸತತ ಪ್ರಯತ್ನ ಉದ್ದೇಶಿತ ಗುರಿ ಮುಟ್ಟಲು ಮತ್ತು ಯಶಸ್ಸು ಕಾಣಲು ಸಾಧ್ಯವೆಂದರು.

ಚಂದ್ರಯಾನ-2 ಉಡಾವಣೆ ಎಂದಿಗೂ ವಿಫಲವಾಗುವುದಿಲ್ಲ. ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ ಕಂಡು ಹಿಡಿಯುವಾಗ ಅನೇಕ ಬಾರಿ ಸೋತರೂ ಸತತ ಪರಿಶ್ರಮದಿಂದ ಕೊನೆಗೆ ಯಶಸ್ಸು ಕಂಡರು.

ಇಸ್ರೋ ಸಂಸ್ಥೆಯ ಎಸ್ಸಿಸಿಪಿ ಉಪ ನಿರ್ದೇಶಕ ಎಚ್.ಎಸ್. ವೆಂಕಟೇಶ್ ಸಾಮಾಜಿಕ ಕಲ್ಯಾಣಕ್ಕಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕೊಡುಗೆ ಅಪಾರ. ಚಂದ್ರಯಾನ-2 ಕೊನೆಯ ಹಂತದಲ್ಲಿ ಯಶಸ್ವಿ ಕಾಣಲಿಲ್ಲ. ಮುಂದೆ ಯಶಸ್ಸು ಸಾಧಿಸುತ್ತೇವೆ. ಮುಂದಿನ ವರ್ಷದಲ್ಲಿ ಆದಿತ್ಯ ಉಪಗ್ರಹ ಉಡಾವಣೆ ಮಾಡುವ ಆಶಯ ಹೊಂದಲಾಗಿದೆ. ಇದರಿಂದ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಅವಕಾಶವಾಗುತ್ತದೆ ಎಂದರು.

ಡಿಡಿಪಿಐ ಎಂ.ಆರ್. ಕಾಮಾಕ್ಷಿ , ಇಸ್ರೋ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಟಿ.ಎಸ್. ಶಿವಪ್ರಸಾದ್, ಎಸ್ಸಿಸಿಪಿ ಉಪ ನಿರ್ದೇಶಕ ಆರ್. ನಾರಾಯಣ್ ಉಪಸ್ಥಿತರಿದ್ದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ನೀವು ಮಾಡಬೇಕಾದುದು ಏನು?

ತುಮಕೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿರುವ ತಪ್ಪು ತಿದ್ದುಪಡಿಗೆ

ನವೆಂಬರ್ 18ವರೆಗೆ ಅವಕಾಶ ಕಲ್ಪಿಸಲಾಗಿದೆ.
ಚುನಾವಣಾ ಆಯೋಗ 2020ರ ಜನವರಿ 1ನ್ನು ಅರ್ಹತಾ ದಿನವೆಂದು ಪರಿಗಣಿಸಿದೆ.,ಹೀಗಾಗಿ ಬಿಎಲ್ಒಗಳು ಮನೆಮನೆಗೂ ತೆರಳಿ ಮತದಾರರ ಪಟ್ಟಿ ಪರಿಶೀಲಿಸುತ್ತಿದ್ದಾರೆ. ಆ ಮಾಹಿತಿ ನೀಡಬೇಕು. ಜೊತೆಗೆ ಮತದಾರರೇ ಎನ್ವಿಎಸ್ಪಿ ಪೋರ್ಟಲ್ ಹಾಗೂ ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ಖುದ್ದು ಪರಿಶೀಲನೆ ಮಾಡಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್.

ಮತದಾರರ ಭಾವಚಿತ್ರಗಳು ಸರಿಯಾಗಿ ಮುದ್ರಣವಾಗದೇ ಇದ್ದಲ್ಲಿ ಭಾವಚಿತ್ರ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ತಿದ್ದುಪಡಿ ಹಾಗೂ ಬಿಡತಕ್ಕವುಗಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಜನವರಿ 2020ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವ ಯುವ ಮತದಾರರು ನಮೂನೆ -6 ರಲ್ಲಿ ಅರ್ಜಿ ತುಂಬಿ ಬಿಎಲ್ಒಗಳಿಗೆ ನೀಡಬೇಕು.

ಜಿಲ್ಲೆಯಲ್ಲಿ 22,09,900 ಮತದಾರರ ಪೈಕಿ 13,09,604 ಮತದಾರರು ತಮ್ಮ ಮಾಹಿತಿ ಪರಿಶೀಲಿಸಿಕೊಂಡಿದ್ದು, ಇನ್ನು 9,00,296 ಮತದಾರರು ಪರಿಶೀಲಿಸಿಕೊಳ್ಳಲು ಬಾಕಿ ಇರುತ್ತದೆ. ಸುಮಾರು 61753 ತಿದ್ದುಪಡಿ ಗುರುತಿಸಲಾಗಿದೆ.

ಸಿದ್ದರಾಮಯ್ಯನು ಕೂಡ ಜೈಲಿಗೆ ಹೋಗುತ್ತಾನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪ್ರಧಾನಿ, ಸ್ಪೀಕರ್ ಮತ್ತು ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಬೋಧಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಾನು ಯಾರ ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಶಿವಣ್ಣ ನಾನು ನನ್ನ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ. ಸ್ವಲ್ಪ ದಿನ ಕಾಯಿರಿ. ಅವರ ಜೈಲಿಗೆ ಹೋಗುತ್ತಾರೆ. ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದರು. ಇದನ್ನು ಸಹಿಕೊಳ್ಳಬೇಕೆ ಎಂದು ಪ್ರಶ್ನಿಸಿದರು.

ಪದೇಪದೇ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಆರೋಪ ಮಾಡುತ್ತಾರೆ. ಜೈಲಿಗೆ ಹೋಗಿ ಬಂದವರು ಎಂದು ಜರೆಯುತ್ತಾರೆ. ಇದು ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಂತಹ ಮಾತುಗಳನ್ನು ಕೇಳಿದರೆ ನನ್ನ ರಕ್ತ ಕುದಿಯುತ್ತದೆ.

ಸಿದ್ದರಾಮಯ್ಯನು ಕೂಡ ಜೈಲಿಗೆ ಹೋಗುತ್ತಾನೆ. ಸ್ವಲ್ಪ ದಿನ ಕಾಯಬೇಕು ಅಷ್ಟೇ ಎಂದು ಹೇಳಿದರು.
ನನಗೆ ಎಲ್ಲರೂ ಬೇಕು. ದಲಿತರು, ಕುರುಬರು, ಮುಸ್ಲೀಮರು ಸೇರಿ ಎಲ್ಲಾ ಜಾತಿಯವರ ಮನೆಯಲ್ಲಿ ಉಂಡಿದ್ದೇನೆ. ಹಾಗೆಯೇ ಅವರೂ ನನ್ನ ಜೊತೆ ಬಂದು ಊಟ ಮಾಡಲಿ ಎಂದು ಸವಾಲು ಹಾಕಿದರು. ಸ್ವಲ್ಪ ದಿನಗಳಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವರ ಬಣ್ಣ ಬಯಲಾಗಲಿದೆ ಎಂದು ತಿಳಿಸಿದರು.

ಊರ ಹೆಸರೇ “ಮಠ”

0

ಲೇಖಕರು :ಲಕ್ಷ್ಮೀಕಾಂತರಾಜು ಎಂಜಿ
ಮಠ

ಈ ಊರಿನ‌ ಗ್ರಾಮಸ್ಥರು ತಮ್ಮ ಊರಿನಿಂದ ಐದಾರು ಕಿಮೀಗೂ ಹೆಚ್ಚು ದೂರದ ಸ್ಥಳಗಳಿಗೆ ಹೋದಾಗ ಅಲ್ಲಿ ಯಾರಾದರು ನಿಮ್ಮೂರು ಯಾವೂರು ಎಂದು ಸಂದರ್ಭವೊಂದರಲ್ಲಿ ಪ್ರಶ್ನಿಸಿದರೆ ಗ್ರಾಮಸ್ಥರು ನಮ್ಮೂರು ಮಠ ಎಂದು ಉತ್ತರಿಸಿದ ತಕ್ಷಣ ಸಿದ್ಧಗಂಗಾ ಮಠವೇ? ಚುಂಚನಗಿರಿ ಮಠವೇ? ಎಂದು ಪ್ರತಿಕ್ರಿಯಿಸುವ ಮೂಲಕ ಪ್ರತ್ಯುತ್ತರ ನೀಡುತ್ತಾರೆ! ಅಲ್ಲ . ನಮ್ಮೂರ‌ ಹೆಸರೇ ಮಠ ಎಂದು ಹೇಳಿದರೆ ಎಲ್ಲಿದೆ? ಅದರ ಹೆಸರೇ ಮಠಾನ ? ಎಂಥಾ ಮಠ..?ಎಂದು ಹಾಸ್ಯಾಸ್ಪದವಾಗಿ ಕೇಳುತ್ತಾರೆ.ಈ ರೀತಿಯ ವಿಶಿಷ್ಠ ಹೆಸರಿನ ಊರು ಮಠ‌ ಇರುವುದು‌ ತುಮಕೂರು‌ ಜಿಲ್ಲೆಯ ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ವ್ಯಾಪ್ತಿಯಲ್ಲಿನ ಈ ಊರು ತಾಲ್ಲೂಕು‌ ಕೇಂದ್ರದಿಂದ ಮೂವತ್ತೈದು ಕಿಮೀ ಹಾಗೂ ಜಿಲ್ಲಾ ಕೇಂದ್ರದಿಂದ ನಲವತ್ತು ಕಿಮೀ ದೂರದಲ್ಲಿದೆ.ಬಹಳ ವರ್ಷಗಳ ಹಿಂದೆ ಹಾಗಲವಾಡಿ ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿದ್ದ ಈ ಊರಿನಲ್ಲಿ ಶಾಂತದೇವರಾಯನೆಂಬ ಋಷಿ ಮುನಿಯು ಇಲ್ಲಿ ವಾಸಿಸುತ್ತಿದ್ದು ತದನಂತರ ಗ್ರಾಮವು ಋಷಿಮುನಿಯ ಶಾಂತದೇವರರಾಯನ ಹೆಸರಿನೊಂದಿಗೆ ಶಾಂತದೇವರಾಯನಮಠ ವೆಂದು ಆಗಿತ್ತು. ಅದು ಕೊನೆಗೆ ದಾಖಲೆಗಳಲ್ಲಿ ಬಂದು ಉಳಿಯುವ ಹೊತ್ತಿಗೆ ಮಠ ಆಗಿ ಉಳಿದಿದೆ. ಬಹು ಹಿಂದೆಯೇ ಇಲ್ಲಿ ದೇವಸ್ಥಾನವಿದ್ದ ಕುರುಹು ಗ್ರಾಮದ ಸರ್ವೇ ನಕಾಶೇಯಲ್ಲಿಯೇ ಇದೆ. ಅದೇ ಜಾಗದಲ್ಲಿಯೇ ಇಂದೂ ಕೂಡ ದೇವಸ್ಥಾನ ಇರುವ ಕಾರಣ ಗ್ರಾಮಕ್ಕಿರುವ ಇತಿಹಾಸಕ್ಕೊಂದು ಅದೊಂದು ದಾಖಲೆಯಾಗಿದೆ.”ಮಠ” ಹೆಸರಿನಲ್ಲಿ ಅನೇಕ ಮಠಮಾನ್ಯಗಳು ಇರುವ ಕಾರಣ ಜನರ ಮನಸ್ಸಿನಲ್ಲಿ ಮಠವೆಂದ ಕೂಡಲೇ ಅದೊಂದು ನಿತ್ಯ ಅಕ್ಷರ ಹಾಗೂ ಅನ್ನ ದಾಸೋಹ ಸ್ಥಳವೆಂಬುದು ಉಳಿದುಹೋಗಿದ್ದು ಮಠ ಎಂದಕೂಡಲೇ ಆ ಕಲ್ಪನೆ ಜನರ ಮನಸ್ಪಟಲದಲ್ಲಿ ಮೂಡಿಬರುವುದು ಸಹಜವೇ ಸರಿ.

ಮಠವೂ ಮುಖ್ಯರಸ್ತೆಯಲ್ಲಿರದೆ ಮುಖ್ಯ ರಸ್ತೆಯಿಂದ ಐದಾರು ಕಿಮಿಗಳ ಅಂತರದಲ್ಲಿದ್ದು ಇಂದಿಗೂ ಈ ಗ್ರಾಮಕ್ಕೆ ಬಸ್ ಸಂಪರ್ಕವಿರದ ಕಾರಣ ಗ್ರಾಮ ಇತರರಿಗೆ ಪರಿಚಯವಾಗದೇ ದೂರ ಉಳಿದಿರುವುದಕ್ಕೂ ಒಂದು ಕಾರಣವಾಗಿದೆ ಎನ್ನಬಹುದು.

ಈ ಗ್ರಾಮದಲ್ಲಿನ‌ ಗ್ರಾಮದೇವತೆಯಾಗಿ ಬಸವಣ್ಣನಿದ್ದು ಇಲ್ಲಿಯ ಪೂರ್ವಜರೇ ರಚಿಸಿರುವ ಇಂದಿಗೂ ಹಾಡಿಕೊಂಡು ಬರುತ್ತಿರುವ ದೇವರ ಭಜನೆ ಗೀತೆಯೊಂದರಲ್ಲಿ “ಶಾಂತದೇವರಾಯ ಮಠದಲ್ಲಿ ನೆಲಸಿದ ದೇವ….”

ಎಂದು ಚರಣವೊಂದರಲ್ಲಿ ಬಸವಣ್ಣನನ್ನ ಸ್ಮರಿಸಲಾಗುತ್ತಿದೆ. ಈ ಚರಣದ ಸಾಲುಗಳನ್ನ ಗಮನಿಸಿದಾಗ ಇಲ್ಲಿ ಶಾಂತದೇವರಾಯಮಠದ ಬಗ್ಗೆ ದಾಖಲೆ ಸಿಕ್ಕಂತಾಗುತ್ತದೆ.ಇದೇ ಬಸವಣ್ಣನ ದೇವಸ್ಥಾನದ ಒಡೆತನದಲ್ಲಿ ಸುಮಾರು ಇಪ್ಪತ್ತೈದು ಎಕರೆ ಜಮೀನು ಇರುವುದು ವಿಶೇಷ.

ಶ್ರೀ‌ಬಸವಣ್ಣ ದೇವರ ಧರ್ಮದರ್ಶಿ ಕಮಿಟಿ‌ ಹೆಸರನಲ್ಲಿರುವ ಈ ಜಮಿನನ್ನ‌‌ ಇಲ್ಲಿನ ಟ್ರಸ್ಟ್ ನಿರ್ವಹಣೆ ಮಾಡಿಕೊಂಡು ಅದರಲ್ಲಿ ಬರುವ ಕೃಷಿ ಆದಾಯವನ್ನು ದೇವಸ್ಥಾನದ ನಿರ್ವಹಣೆಗೆ ಬಳಸಲಾಗುತ್ತಿದೆ. ಈಗ ಪ್ರಸ್ತುತವಾಗಿ ಹಳೇ ದೇವಸ್ಥಾನವನ್ನು ಸುಮಾರು ನಲವತ್ತು ಲಕ್ಷಗಳ ವೆಚ್ಚದೊಂದಿಗೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಇಂಥಹ ಗ್ರಾಮವಾದ ಮಠವು ಸುಮಾರು ಅರವತ್ತು ಮನೆಗಳು ಉಳ್ಳ ಈ ಗ್ರಾಮದಲ್ಲಿ ಎಲ್ಲರೂ ಒಕ್ಕಲಿಗ ಸಮುದಾಯದವರೇ ಆಗಿರುವ ಕಾರಣ ಕುಲ ಕಸುಬು ಕೃಷಿಯೇ ಆಗಿದೆ ಮತ್ತು ಪ್ರಧಾನ ವೃತ್ತಿಯಾಗಿದೆ.

ಪ್ರಮುಖ ಬೆಳೆಯಾಗಿ ಇಂದು ಅಡಕೆ ತೆಂಗು ಇಲ್ಲಿನ ಜೀವನಾಧಾರವಾಗಿದೆ.ಸುಮಾರು ಹತ್ತು ವರ್ಷದ ಹಿಂದೆ ಈ ಊರಿನ ರೈತರು ಕೇವಲ ರಾಗಿ ಸೇರಿದಂತೆ ದವಸ ಧಾನ್ಯಗಳ ಬೆಳೆಗಳನ್ನ ಬೆಳೆಯುತ್ತಿದ್ದು ಇಂದು ವಾಣಿಜ್ಯ ಬೆಳೆಗಳತ್ತ ಗಮನಹರಿಸಿ ನೀರೊಂದಿದ್ದರೆ ಲಕ್ಷ ಲಕ್ಷ ಎಣಿಸುವ ಮಟ್ಟಕ್ಕೆ ರೈತ ಬೆಳೆದಿದ್ದಾನೆ. ಪ್ರಮುಖವಾಗಿ ಮಿಡಿ ಸೌತೆಯನ್ನೆ ಹೆಚ್ಚು ಬೆಳೆಯುತ್ತಿದ್ದು ಇದು ಅಲ್ಪಾವಧಿಯ ಬೆಳೆಯು ಆಗಿರುವ ಕಾರಣ ರೈತ ಹೆಚ್ಚು ಆಸಕ್ತಿ ಹೊಂದಿದ್ದಾನೆಇಲ್ಲಿ ವಾಡಿಕೆ ಪ್ರಮಾಣದ ಮಳೆಯಾಗದ ಕಾರಣ ಅಂತರ್ಜಲದ ಮಟ್ಟ ಇಂದು ಸಾವಿರ ಅಡಿಯ ಗಡಿ ದಾಟಿದೆ. ಪಾತಾಳದಿಂದ ನೀರೆತ್ತಿ ರೈತನಿಂದು ಬೆಳೆಸಿದ ತೆಂಗು ,ಅಡಕೆ ಬೆಳೆಗಳನ್ನ ಉಳಿಸುವ ಪ್ರಯತ್ನದಲ್ಲಿದ್ದು ರೈತ ತನ್ನ ಆದಾಯದ ಜೊತೆಗೆ ಸಾಲ ಮಾಡಿ ಬೋರ್ ವೆಲ್ ಗೆ ಸುರಿಯುತ್ತಿದ್ದಾನೆ.ಇಲ್ಲಿ ಕುಡಿಯುವ ನೀರಿಗೆ ಬಳಕೆಯಾಗುವ ನೀರು ಸಾವಿರ ದಾಟಿರುವ ಕಾರಣ ಫ್ಲೋರೈಡ್ ಅಂಶವಿದ್ದು ಪ್ಲೋರೈಡ್ ಬಾಧಿತರೂ ಇದ್ದಾರೆ. ಇದನ್ನ ನಿವಾರಿಸಲೆಂದೇ ಇಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ.

ಮುಖ್ಯ ರಸ್ತೆಯಿಂದ ಊರಿಗೆ ಸಂಪರ್ಕ ರಸ್ತೆಯು “ನಮ್ಮ ರಸ್ತೆ ನಮ್ಮ ಗ್ರಾಮ ” ಯೋಜನೆಯಲ್ಲಿ ರಸ್ತೆ ನಿರ್ಮಾಣವಾಗಿದ್ದು ಉತ್ತಮ‌ ರಸ್ತೆ ಇದೆ. ಅಂಗನವಾಡಿ ಹಾಗೂ ಪ್ರಾಥಮಿಕ‌ ಶಾಲೆ ಇದ್ದೂ ಹಾಜರಾತಿಯ ಕೊರತೆ ಎದುರಿಸುತ್ತಿದೆ.

ಒಟ್ಟಿನಲ್ಲಿ ಈ ಊರ ಹೆಸರೇ ಮಠ ಎಂಬುದಾಗಿದ್ದು ಇಲ್ಲಿ ಯಾವುದೇ ಸ್ವಾಮಿಗಳು ಇರುವ ಗದ್ದಿಗೆ ಮಠವಲ್ಲ. ಇದು ಊರ ಹೆಸರೇ ಮಠ ಎಂಬುದು ವಿಶೇಷವಾಗಿದೆ.

ಜಿ.ಪಂಗೆ ಭೇಟಿ ನೀಡಿದ ಸಂಸದ ಬಸವರಾಜು ಮಾಡಿದ್ದು ಏನು?

ಸಂಸದ ಜಿ.ಎಸ್. ಬಸವರಾಜು ಬುಧವಾರ ತುಮಕೂರು ನಗರದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ವೀಕ್ಷಿಸಿದರು.
ಸರ್ಕಾರ ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಸಮಗ್ರ ಅಂಕಿ-ಅಂಶಗಳ ಕ್ರೂಢೀಕೃತ ಮಾಹಿತಿ ಅತ್ಯಗತ್ಯ. ಹಾಗಾಗಿ ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳ ಭೌಗೋಳಿಕ ಗುರುತು ಮಾಹಿತಿಗಾಗಿ ಬೇಸ್ ಮ್ಯಾಪ್ ತಯಾರಿಸಲು ಉದ್ದೇಶಿಸಿದೆ.

ಪ್ರತಿಯೊಂದು ಇಲಾಖೆ ನೆನೆಗುದಿಗೆ ಬಿದ್ದಿರುವ, ಪ್ರಗತಿಯಲ್ಲಿರುವ, ಮಂಜೂರಾತಿ ಹಂತದಲ್ಲಿರುವ, ಹೊಸ ಪ್ರಸ್ತಾವನೆಗಳು ಹಾಗೂ ಪುನರ್ ನವೀಕರಣ ಯೋಜನೆಗಳ ಪ್ರಗತಿ ಅಂಕಿ-ಅಂಶಗಳನ್ನು ದೂರ ಸಂವೇದನಾ ಇಲಾಖೆ ಮೂಲಕ ಸಂಗ್ರಹಿಸಿ ದಾಖಲಿಸಿ ಬೇಸ್ ಮ್ಯಾಪ್ ತಯಾರಿಸಬೇಕು ಎಂದರು.

ಪ್ರತೀ ಗ್ರಾಮದ ಕೆರೆ-ಕಟ್ಟೆ, ಕೊಳವೆಬಾವಿ, ತೆರೆದ ಬಾವಿ, ಜನಸಂಖ್ಯೆ, ಕುಟುಂಬ, ರಸ್ತೆ, ಮನೆ, ಕೃಷಿಭೂಮಿ, ಸರ್ಕಾರಿ ಜಮೀನು, ಶಾಲೆ, ಮರ-ಗಿಡ, ಅಂಗನವಾಡಿ ಕೇಂದ್ರ, ಆಸ್ಪತ್ರೆ, ಸಂಘ-ಸಂಸ್ಥೆ, ವಿವಿಧ ಇಲಾಖೆಗಳ ಅಧಿಕಾರಿ/ನೌಕರರು ಹಾಗೂ ಮತ್ತಿತರ ಅಂಕಿ-ಅಂಶಗಳ ಸ್ಥಿತಿ-ಗತಿ ಅರಿತು ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ.
ಪಂಚಾಯತಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಾರಂಭಿಸಲಾಗಿರುವ ಮಿಷನ್ ಅಂತ್ಯೋದಯ ಕಾರ್ಯಕ್ರಮಕ್ಕೆ ಪೂರಕವಾಗಿ ನೆರವಾಗಬೇಕು ಎಂದು ಸೂಚಿಸಿದರು.

ತುಮಕೂರಿನಲ್ಲಿ ಕುರುಬರ ಪ್ರತಿಭಟನೆ

0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇಶದ್ರೋಹಿ ಎಂದು ಕರೆದಿರುವ ಬಿಜೆಪಿ ಮುಖಂಡರು ಕೂಡಲೇ ಬಹಿರಂಗ ಕ್ಷಮೆ ಕೋರಬೇಕೆಂದು ಒತ್ತಾಯಿಸಿ ಕುರುಬ ಸಮುದಾಯದ ನೂರಾರು ಮಂದಿ ತುಮಕೂರಿನಲ್ಲಿ ಪ್ರತಿಭನಾ ಮೆರವಣಿಗೆ ನಡೆಸಿದರು.

ತುಮಕೂರಿನ ಕಾಳಿದಾಸ ವಿದ್ಯಾವರ್ಧಕ ಸಂಘದಿಂದ ಬಿಜಿಎಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾಜಿ ಸಚಿವರಾದ ಸೊಗಡು ಶಿವಣ್ಣ ಮತ್ತು ಸಿ.ಟಿ.ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕುರುಬರ ಮುಖಂಡ ಚಂದ್ರಶೇಖರ್ ಮಾತನಾಡಿ ಸೊಗಡು ಶಿವಣ್ಣ ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದರು. ಸಚಿವರು ಆದರು. ಏನೂ ಕೆಲಸ ಮಾಡಲಿಲ್ಲ. ನಾಲ್ಕು ಬಾರಿ ಗೆದ್ದು ಸಚಿವರಾದರೂ ಸೊಗಡು ಶಿವಣ್ಣ ಮತ್ತೆ ಟಿಕೆಟ್ ಗಳಿಸಿಕೊಳ್ಳಲು ಆಗಿಲಿಲ್ಲ. ಶಿವಣ್ಣನವರಿಗೆ ಒಬ್ಬರನ್ನೂ ಕೂಡ ಗೆಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಬಿಜೆಪಿಯಲ್ಲಿ ಮೂಲೆಗುಂಪಾಗಿರುವ ಶಿವ ಣ್ಣ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ರಾಜಕಾರಣಿ. ಹಲವರನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಅವರಿಗಿದೆ. ಅಂಥವರನ್ನು ದೇಶದ್ರೋಹಿ ಎಂದು ಕರೆದು ಸಣ್ಣತನ ಮೆರೆದಿದ್ದಾರೆ. ಹೀಗಾಗಿ ಸಿ.ಟಿ.ರವಿ ಮತ್ತು ಸೊಗಡು ಶಿವಣ್ಣ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಎಲ್ಲ ಜಾತಿಗಳಿಗೆ ಸಿದ್ದರಾಮಯ್ಯ ಮಾನ್ಯತೆ ನೀಡಿದ್ದಾರೆ. ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅಂಥ ವ್ಯಕ್ತಿಯ ವಿರುದ್ಧ ಸಣ್ಣತನದ ಹೇಳಿಕೆ ನೀಡುವುದು ಬಿಜೆಪಿ ನಾಯಕರಿಗೆ ಸಲ್ಲದು ಎಂದರು. ಪ್ರತಿಭಟನೆಯಲ್ಲಿ ಪತ್ರಕರ್ತ
ಪತ್ರಕರ್ತ ಎಸ್. ನಾಗಣ್ಣ ಮೊದಲಾದವರು ಉಪಸ್ಥಿತರಿದ್ದರು.

ಸೆಕ್ಸ್ ಗೂ ವಯಸ್ಸಿಗೂ ಸಂಬಂಧ ಇಲ್ಲ!: ಸಂಶೋಧನೆಯಲ್ಲಿ ಬಹಿರಂಗ

0

ತುಮಕೂರು: ವರ್ಷ 50 ದಾಟಿದರೂ ಪ್ರತಿ ರಾತ್ರಿ ಶೃಂಗಾರ ರಸಗಳಿಗೆ ಮಾತ್ರ ನಿಂತಿಲ್ಲ.
ಇದೇನು ಕಥೆಯಲ್ಲ. ಚೆನ್ನೈನ ಸೆಕ್ಸಾಲಿಜಿಸ್ಟ್ ಡಾ. ನಾರಾಯಣ ರೆಡ್ಡಿ ಅವರು ಚೆನ್ನೈನಲ್ಲಿ ನಡೆಸಿದ ‘ವಯಸ್ಸಾದವರಲ್ಲಿ ಸೆಕ್ಸ್ ಬಿಹೇವಿಯರ್’ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ,

ಅಧ್ಯಯನ ಅನೇಕ ಕೌತುಕದ ಅಂಶಗಳನ್ನು ಹೊರ ಹಾಕಿದೆ. ಸೆಕ್ಸ್ ಗೂ ವಯಸ್ಸಿಗೂ ಸಂಬಂಧ ಇಲ್ಲ ಎಂಬುದನ್ನು ಗಟ್ಟಿಯಾಗಿ ಹೇಳಿದ್ದಾರೆ. ಅಧ್ಯಯನಕ್ಕೆ ಒಳಪಡಿಸಿದ ಮಹಿಳೆಯರು ಅವರ ಸೆಕ್ಸ್ ಕುರಿತು ಸತ್ಯಗಳನ್ನು ಬಿಚ್ಚಿಟಿದ್ದಾರೆ.
50ರಿಂದ 59 ವರ್ಷ ಒಳಗಿಗ ಮಹಿಳೆಯರು- ಪುರುಷರು ಪ್ರತಿ ತಿಂಗಳಲ್ಲಿ ಹತ್ತು ಸಲವಾದರೂ ರತಿಕ್ರೀಡೆಯಲ್ಲಿ ತೊಡಗುವುದಾಗಿ ಹೇಳಿಕೊಂಡಿದ್ದಾರೆ. 50 ವರ್ಷ ದಾಟಿದ ಬಳಿಕ ರತಿಕ್ರೀಡೆ ನಡೆಸಲಾರರು ಎಂದು ಜನರು ಸಾಮಾನ್ಯವಾಗಿ ನಂಬುತ್ತಾರೆ. ಅವರು ವಯಸ್ಕರಿಗಿಂತ ಹಿರಿಯರೇ ರತಿಕ್ರೀಡೆಯ ಸುಖ ಅನುಭವಿಸುತ್ತಿದ್ದಾರೆ. ಈ ಅಧ್ಯಯನವನ್ನು 2005ರಿಂದ 2015ರಲ್ಲಿ ಕೈಗೊಂಡಿದ್ದು, 51ನೇ ವಯಸ್ಸಿನಿಂದ 90 ವರ್ಷದವರೆಗಿನ ಸುಮಾರು 2017 ಜನರನ್ನು ವೈಯಕ್ತಿಕವಾಗಿ ಸಂದರ್ಶಿಸಿ ಈ ಸಂಶೋಧನಾ ಅಧ್ಯಯನ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಚೆನ್ನೈನಲ್ಲಿ ಈಚೆಗೆ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಂಡಿಸಿದ್ದಾರೆ.

ಜೀವನ ಶೈಲಿಯಲ್ಲಿನ ಬದಲಾವಣೆ, ಆಯುಸ್ಸಿನ ಹೆಚ್ಚಳ, ಉತ್ತಮ ಆರೋಗ್ಯ ಸೇವೆ ಕಾರಣದಿಂದ ಭಾರತದಲ್ಲಿ ಹಿರಿಯ ವಯಸ್ಸಿನವರು ಶೃಂಗಾರ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಶಕ್ತಿ ಹೊಂದಲು ಕಾರಣವಾಗಿದೆ.

ಶೇ 22ರಷ್ಟು ಗಂಡಂದಿರುವ ಶೃಂಗಾರ ಕ್ರಿಯೆಗೆ ಪತ್ನಿಯನ್ನು ನಾವೇ ಮೊದಲು ಆಹ್ವಾನಿಸುವುದಾಗಿ ಹೇಳಿದ್ದರೆ, ಈ ವಿಚಾರದಲ್ಲೇ ಹೆಂಗಸರೇ ಮುಂದಿದ್ದಾರೆ. ಶೇ 24.06 ರಷ್ಟು ಮಹಿಳೆಯರು ರಾತ್ರಿ ವೇಳೆ ನಾವೇ ಮುಂದಾಗಿ ಗಂಡಂದಿರನ್ನು ಸೆಕ್ಸ್ ಗೆ ಆಹ್ವಾನಿಸುವುದಾಗಿ ಹೇಳಿದ್ದಾರೆ!

ಶೇ 68ರಷ್ಟು ಗಂಡಂದಿರು ತಮ್ಮ ಹೆಂಡತಿಯರು ಅತ್ಯಂತ ಕ್ರಿಯಾಶೀಲತೆಯಿಂದ ಸೆಕ್ಸ್ ನಲ್ಲಿ ಪಾಲ್ಗೊಳ್ಳುವುದಾಗಿಹೇಳಿದ್ದರೆ, ಶೇ 87 ರಷ್ಟು ಮಹಿಳೆಯರು ಗಂಡಂದಿರ ಹಾಸಿಗೆ ಸುಖ ಚೆನ್ನಾಗಿದೆ ಎಂದಿದ್ದಾರೆ.

ಅಚ್ಚರಿಯೆಂದರೆ; ಶೇ 29.87ರಷ್ಟು ಗಂಡಸರು ಪರಸಂಗ ಇಟ್ಟುಕೊಂಡಿರುವುದಾಗಿ ಹೇಳಿದ್ದರೆ, ಶೇ 16.76 ರಷ್ಟು ಮಹಿಳೆಯರು ಪರ ಪುರುಷರ ಜತೆ ಹಾಸಿಗೆ ಹಂಚಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದರಲ್ಲಿ, ಶೇ 23.95ರಷ್ಟು ಪುರುಷರು ಹೆಂಡತಿ ಅಲಭ್ಯದ ಕಾರಣದಿಂದಾಗಿ ಬೇರೆ ಮಹಿಳೆಂರೊಂದಿಗೆ ಸಂಬಂಧ ಇಟ್ಟುಕೊಳ್ಳಲು ಕಾರಣ ಎಂದು ತಿಳಿಸಿದ್ದಾರೆ. ಶೇ 6.38ರಷ್ಟು ಮಹಿಳೆಯರು ಗಂಡನೊಂದಿಗೆ ಲೈಂಗಿಕ ತೃಪ್ತಿ ಇದ್ದರೂ ಸಹ ಬೇರೊಬ್ಬ ಗಂಡಸರ ಜತೆ ಲೈಂಗಿಕ ಸುಖಕ್ಕೆ ಬಿದ್ದಿರುವುದಾಗಿ ಹೇಳಿದ್ದಾರೆ.

ಶೇ 41.99ರಷ್ಟು ಗಂಡಸರು, ಶೇ 44ರಷ್ಟು ಮಹಿಳೆಯರು ರತಿಕ್ರೀಡೆಗೂ ಮುನ್ನ ಶೇ 5ರಿಂದ 10 ನಿಮಿಷ ಕಾಲ ಶೃಂಗಾರ ಸಲ್ಲಾಪದಲ್ಲಿ ತೊಡಗುವುದಾಗಿ ಹೇಳಿದ್ದಾರೆ. ಶೇ 24.42ರಷ್ಟು ಮಹಿಳೆಯರು ಸೆಕ್ಸ್ ವೇಳೆ ಪೂರಾ ನಗ್ನರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಶೇ 63ರಷ್ಟು ಗಂಡಸರು ರಾತ್ರಿ ವೇಳೆ ಮಾತ್ರ ರತಿ ಕ್ರೀಡೆ ನಡೆಸುವುದಾಗಿ ಹೇಳಿದ್ದರೆ, ಶೇ 66.13ರಷ್ಟು ಮಹಿಳೆಯರು ರಾತ್ರಿ ಸೆಕ್ಸ್ ಗೆ ತೆರೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಎಂದು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ ಡಾ ರೆಡ್ಡಿ ತಿಳಿಸಿದ್ದಾರೆ.

ಭಾರೀ ಮಳೆಗೆ ಹೇಮಾವತಿ ನಾಲೆ ಕುಸಿತ

ಗುಬ್ಬಿ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹೇಮಾವತಿ ನಾಲೆ ಕುಸಿದು ಹೋಗಿದೆ. ರಾಷ್ಟ್ರೀಯ ಹೆದ್ದಾರಿ 206ನ್ನು ಸೀಳಿಕೊಂಡು ಹೋಗುವ ನಾಲೆಯ ರಸ್ತೆಬದಿಯಲ್ಲೇ ಮಣ್ಣು ಕುಸಿದು ಆತಂಕ ಮೂಡಿಸಿದೆ. ಹೀಗಾಗಿ ಕೂಡಲೇ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಅಪಾಯ ಎದುರಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಸಮೀಪ ಈ ನಾಲೆ ಕುಸಿದಿದೆ. ಸೇತುವೆಗೆ ಹೊಂದಿಕೊಂಡಂತೆ ಇರುವ ನಾಲೆಯ ಎರಡೂ ಬದಿ ಕುಸಿದು ಜನರ ಆತಂಕಕ್ಕೆ ಕಾರಣವಾಗಿದೆ. ಸ್ವಲ್ಪ ಹೆಚ್ಚಿಗೆ ಮಳೆ ಸುರಿದ್ದರೆ ಇಡೀ ಸೇತುವೆ ಬಿದ್ದು ಹೋಗಿ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಜನರು ಮಣ್ಣು ಕುಸಿದಿರುವುದನ್ನು ವೀಕ್ಷಿಸಿದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಿರುತ್ತವೆ. ಸಾವಿರಾರು ವಾಹನಗಳ ಸಂಚಾರದ ಹಿನ್ನೆಲೆಯಲ್ಲಿ ಮಣ್ಣು ಕುಸಿದಿರುವುದನ್ನು ರಿಪೇರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.