Thursday, May 7, 2026
Google search engine
Home Blog Page 177

ಅವರು ಕಲ್ಲೆ ಶಿವೋತ್ತಮ ರಾಯರು..

0

ಜಿ.ಎನ್.ಮೋಹನ್


ಆ ಮನೆಯಲ್ಲಿ ನನಗೆ ಸಿಕ್ಕಿದ್ದಕ್ಕೆ ಲೆಕ್ಕವಿಲ್ಲ..

ಸಿಂದಾಬಾದ್, ಟುವಾಟಾರ, ನದಿಯ ಮೇಲಿನ ಗಾಳಿ, ತಾಪಿ ನದಿ, ಮೂಲಕ ಮಹಾಶಯರು.. ಅದ್ಕಕಿಂತಲೂ ಹೆಚ್ಚಾಗಿ ವಾದ ವಿವಾದ, ಮಾತಿಗೆ ಮಾತು ಮಥಿಸಿ ಹುಟ್ಟಿದ ನವನೀತ ಎಲ್ಲವೂ.. ಗೋಪಾಲಗೌಡ, ಇ ಕೆ ನಯನಾರ್, ಆ ಕಾರ್ಲ್ ಮಾರ್ಕ್ಸ್, ಇದೂ ಮೀರಿ ಭಾರತ ಏಕೆ ಅಮೆರಿಕಾ ಎದುರಿಸಬೇಕು, ಚೀನಾ ಹೇಗೆ ನಮ್ಮ ಶತ್ರು, ಹಿಂದುಳಿದವರು ರಾಜಕೀಯ ಪ್ರಜ್ಞೆ ಇಲ್ಲದಿದ್ದರೆ ಏನಾಗುತ್ತದೆ ಎನ್ನುವ ಅರಿವನ್ನೂ ನಾನು ಅಲ್ಲಿ ಪಡೆದುಕೊಂಡೆ

ಆ ಮನೆಯ ಡೋರ್ ನಂಬರ್ ೮೮.

ಬಹುಷಃ ಅಂದು ಆ ಎಲ್ಲವೂ ಧಕ್ಕುವಾಗ ನನಗೆ ಆ ಮನೆಯ, ಅಲ್ಲಿದ್ದ ಹಿರಿಯ ಮನದ ಪ್ರಾಮುಖ್ಯತೆ ಗೊತ್ತಾಗುವ ದಿನಗಳಲ್ಲ. ಆದರೆ ಈಗ ನಾನು ಮಾಧ್ಯಮದ ದೋಣಿಯಲ್ಲಿ ಸಾಗುತ್ತಿರುವಾಗ ಅವರು ಬಿತ್ತಿದ ಅರಿವು ನನ್ನೊಳಗೆ ಆಡುತ್ತಲೇ ಇದೆ. ಮುನ್ನಡೆಸುತ್ತಲೇ ಇದೆ.

ಅವರು ಕಲ್ಲೆ ಶಿವೋತ್ತಮ ರಾವ್.

ನಾನು ಅವರ ಮುಂದೆ ನಿಂತಾಗ ನನಗೆ ೧೦ ವರ್ಷ. ಚಿನ್ನಿ ದಾಂಡು, ಲಗೋರಿ, ಕುಂಟಾಬಿಲ್ಲೆ, ಕ್ರಿಕೆಟ್ ಗೆ ಅವರ ಮನೆಯಲ್ಲಿ ಮೂವರು ಜೊತೆಗಾರರು. ಹಾಗಾಗಿ ಎದ್ದರೆ ಬಿದ್ದರೆ ಅವರ ಮನೆಯಲ್ಲಿರುತ್ತಿದ್ದೆ. ಡೋರ್ ನಂಬರ್ ೧೪೨ ರ ಮೂಲಕ ನನ್ನ ಪ್ರಜ್ಞೆ ಕಟ್ಟಿಕೊಳ್ಳುತ್ತಿದ್ದ ನನಗೆ ಬೋನಸ್ ನಂತೆ ಸಿಕ್ಕಿದ್ದು ಈ ಡೋರ್ ನಂಬರ್ ೮೮.

ನನಗೆ ಅವರು ಯಾರು ಎನ್ನುವುದಕ್ಕಿಂತ ಒಂದು ತೂಕ ಹೆಚ್ಚು ಕುತೂಹಲವಿದ್ದದ್ದು ಅವರ ಹೆಸರಿನಲ್ಲಿದ್ದ ಕಲ್ಲೆಯ ಬಗ್ಗೆ. ಅದರ ಜೊತೆಗೆ ನನಗೆ ಒಗಟಾಗಿದ್ದದ್ದು ನನ್ನ ಜೊತೆ ಆಡುತ್ತಿದ್ದ ಅವರ ಮೂರು ಮಕ್ಕಳ ಹೆಸರುಗಳು. ಅಜಿತ್ ಅಶುತೋಷ್ ಕಲ್ಲೆ , ಅನಿತಾ ಪ್ರಿಯಕಾರಿಣಿ ಕಲ್ಲೆ, ಅಲಕರತ್ನ ಸ್ವರೂಪ ಕಲ್ಲೆ.

ಈ ಎಲ್ಲದರಿಂದಾಗಿ ನನಗೆ ಡೋರ್ ನಂಬರ್ ೮೮ ಒಂದು ಕುತೂಹಲದ ಕೇಂದ್ರವಾಯಿತು. ಅದಕ್ಕಿಂತಲೂ ಹೆಚ್ಚಾಗಿ ನಿಧನಿಧಾನವಾಗಿ ಅರಿವಿನ ತಾಣವಾಗುತ್ತಾ ಹೋಯಿತು.

ಕಾರ್ಕಳ ತಾಲೂಕಿನ ಬಳಿ ಕಲ್ಲೆ ಎನ್ನುವ ಊರಿದೆಯೆಂದು ನನಗೆ ಗೊತ್ತಾಗುವ ವೇಳೆಗೆ ಕಲ್ಲೆ ಶಿವೋತ್ತಮ ರಾವ್ ಇನ್ನೂ ಹೈಸ್ಕೂಲ್ ದಾಟದ ನನ್ನನ್ನು ನಿಲ್ಲಿಸಿಕೊಂಡು ಆ ಕಾಲದ ಸಂಘರ್ಷಗಳನ್ನು ಹೇಳುತ್ತಿದ್ದರು. ನನಗೆ ಎಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ ಆದರೆ ಅವರೊಳಗೆ ಮಾತನಾಡಲೇಬೇಕೆಂಬ ಹಠ ಎದ್ದು ಕಾಣುತ್ತಿತ್ತು. ತಮ್ಮೊಳಗೆ ಗೂಡು ಕಟ್ಟಿದ್ದ ವಿಚಾರವನ್ನು ಹೊರಗೆ ಹಾಕಬೇಕೆಂಬ ಉದ್ವೇಗವೂ..

ಆ ಕಾಲಕ್ಕೆ ಹಠ, ಉದ್ವೇಗ ಅನಿಸಿದ್ದು ನಂತರ ನನಗೆ ಗೊತ್ತಿಲ್ಲದೆಯೇ ಅದು ಪತ್ರಿಕೋದ್ಯಮಕ್ಕೆ ನನಗೆ ಹಾಕಿಕೊಟ್ಟ ಅಡಿಪಾಯವಾಗಿ ಹೋಗಿತ್ತು. ನನ್ನ ಪತ್ರಿಕೋದ್ಯಮ ಜೀವನಕ್ಕೆ ನಾನು ಎನಿತು ಜೀವಗಳಿಗೆ ಋಣಿಯೋ ಎನ್ನುವಾಗ ನನ್ನೆದುರು ನಿಲ್ಲುವುದು ನನ್ನ ಅಣ್ಣ ಹಾಗೂ ಕಲ್ಲೆ ಶಿವೋತ್ತಮ ರಾವ್.

ನಾನು ಅವರಿಗೆ ಕಿವಿಯಾಗಿ ಕುಳಿತುಕೊಳ್ಳಲು ಒಂದು ಬಲವಾದ ಕಾರಣವಂತೂ ಇತ್ತು. ಅದು ಅವರ ಮನೆಯ ಅಗಾಧ ಗ್ರಂಥ ಭಂಡಾರ ಮತ್ತು ಅವರ ಮನೆಗೆ ಬರುತ್ತಿದ್ದ ಅಸಂಖ್ಯಾತ ದಿನ ಹಾಗೂ ವಾರಪತ್ರಿಕೆಗಳು.

ನನಗ್ ‘ಪ್ರಪಂಚ’ದ ಪಾಟೀಲ ಪುಟ್ಟಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಹಂಪ ನಾಗರಾಜಯ್ಯ, ‘ಪ್ರಜಾವಾಣಿ’ಯ ಹೇಮದಳ ರಾಮದಾಸ್, ರಾಜಕಾರಣಿ ಕೆ ಎಚ್ ರಂಗನಾಥ್.. ಹೀಗೆ ದೊಡ್ಡ ದಂಡು ನೋಡಲು ಸಿಕ್ಕಿದ್ದು ಅವರ ಮನೆಯಲ್ಲಿ.
ನಾನು ನೋಡುವ ವೇಳೆಗೆ ಅವರು ‘ಜನಪ್ರಗತಿ’ ಸಂಪಾದಕ- ಮಾಲೀಕರಾಗಿದ್ದರು. ನನಗೆ ಪತ್ರಿಕೋದ್ಯಮದ ಮಸಿ-ಘಮ ಎರಡೂ ಧಕ್ಕಿದ್ದೆ ಅವರ ಮನೆಯಲ್ಲಿ. ಮಾರುಕಟ್ಟೆಗೂ ಹೋಗುವ ಮೊದಲೇ ಒಂದು ಪತ್ರಿಕೆಯನ್ನು ನಾನು ಓದಿದ್ದೆ ಎಂದರೆ ಅದು ಜನಪ್ರಗತಿಯೇ

ಪ್ರೂಫಿಂಗ್ ಗ್ಯಾಲಿಗಳು, ಪ್ರೂಫ್ ಮಾರ್ಕುಗಳು, ಕೊನೆಯಚ್ಚು ಎಲ್ಲವೂ ನನ್ನ ಮೈಗೂ ಅಂಟುತ್ತಾ ಹೋಯಿತು. ಕಲ್ಲೆ ಶಿವೋತ್ತಮ ರಾವ್ ಅವರು ಸುಮ್ಮನಿರಲಿಲ್ಲ, ನನಗೂ ಬರಿ ಎಂದು ಒತ್ತಾಯಿಸಿದರು. ನಾನು ಅಲ್ಲಿ ಬರುತ್ತಿದ್ದ ಲೇಖನಗಳಿಗೆ ಪ್ರತಿಕ್ರಿಯೆ ಎಂದು ಏನೋ ಗೀಚುತ್ತಾ ಕೊನೆಗೆ ಚಂಪಾ ಅವರು ಗೋಕಾಕ್ ಹೋರಾಟಕ್ಕೆ ಹರಿಶಿನ ಕುಂಕುಮ ಕೊಟ್ಟು ಕರೆಯಬೇಕಾ ಎಂದಿದ್ದರ ಬಗ್ಗೆ ದನಿಗೂಡಿಸಿ ಹೀಗೆ ಏನೇನೋ ಬರೆಯುತ್ತಾ ಹೋದೆ.

ಅವರ ಮನೆಯಲ್ಲಿದ್ದ ಅಜ್ಜ, ಕಲ್ಲೆ ಶಿವೋತ್ತಮರಾಯರ ತಂದೆ ಸ್ವಾತಂತ್ರ್ಯ ಹೋರಾಟಗಾರರೆಂದೂ ಅವರ ತಲೆಯ ಮೇಲೆ ಆಗಲೇ ಬ್ರಿಟಿಷರು ದೊಡ್ಡ ಬೆಲೆ ನಿಗದಿಪಡಿಸಿದ್ದರೆಂದೂ ನನಗೆ ಗೊತ್ತಾದದ್ದು ತೀರಾ ಇತ್ತೀಚಿಗೆ.

ಕಲ್ಲೆಯೆಂಬ ಪುಟ್ಟ ಊರಿನ ಹುಡುಗನೊಬ್ಬ ಬೆಂಗಳೂರು ತಲುಪಿಕೊಂಡು ಪ್ರಜಾವಾಣಿ ಸೇರಿ ಅಲ್ಲಿ ನಿರ್ಭೀತ ಸಂಪಾದಕೀಯ ಬರೆದು ಮಾಲೀಕರ ಕಣ್ಣು ಕೆಂಪಗಾದಾಗ ಹೆದರದೆ ರಾಜೀನಾಮೆ ಕೊಟ್ಟು ಹೊರಬಂದು ನಂತರ ಜನಪ್ರಗತಿ ಸೇರಿ ಅದರ ಸಂಪಾದಕರಾಗುವವರೆಗಿನ ಕಥೆ ಒಂದು ರೀತಿಯದ್ದು.

ನಮಗೆ ಗೊತ್ತಿಲ್ಲದ್ದು ಅವರು ಆಗಿನ ಕಾಲಕ್ಕೆ ವಿಶ್ವ ವಿದ್ಯಮಾನಗಳ ಬಗ್ಗೆ ಮಹತ್ವದ ವಿಶ್ಲೇಷಕರಾಗಿದ್ದರು. ಆಗ ಭಾರತ ಮತ್ತು ಚೀನಾ ನಡುವೆ ವೈಷಮ್ಯ ತಲೆದೋರಿದಾಗ ಕನ್ನಡದವರು ಬಿಡಿ ದೇಶದ ಅನೇಕರು ಇವರ ವಿಶ್ಲೇಷಣೆಗೆ ಕಾಯುವಷ್ಟು ಇವರು ಆ ವಿಷಯದ ಆಳ ಗೊತ್ತಿದ್ದವರಾಗಿದ್ದರು.

ಹಿಂದುಳಿದವರು ರಾಜಕೀಯ ಪ್ರಜ್ಞೆ ಹೊಂದಬೇಕು ಅದರಿಂದಾಗಿ ನೊಂದವರ ದನಿ ಕೇಳುವಂತಾಗಬೇಕು ಎಂದು ಅವರು ಪಟ್ಟ ಸಾಹಸವನ್ನು ಹತ್ತಿರದಿಂದ ಕಂಡಿದ್ದೇನೆ. ದೇವರಾಜ ಅರಸು ಅವರ ಥಿಂಕ್ ಟ್ಯಾಂಕ್ ನಲ್ಲಿ ಕಲ್ಲೆ ಅವರು ಪ್ರಮುಖರಾಗಿದ್ದರು. ಅಷ್ಟೇ ಅಲ್ಲ ಅವರ ಬಹುತೇಕ ಭಾಷಣಗಳ ಹಿಂದೆ ಇದ್ದ ಶಕ್ತಿ ಇವರು.

ಆಗಿನ ಕಾಲದಲ್ಲಿ ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣ.. ಹೀಗೆ ಅಸಂಖ್ಯಾತ ಲೇಖಕರಿಗೆ ಕನ್ನೆನೆಲವಾಗಿದ್ದದ್ದು ಇದೇ ಜನಪ್ರಗತಿ.

ಇಂತಹ ಕಲ್ಲೆ ಊರಿಗೆ ಮೊನ್ನೆ ಹೋಗಿ ಬಂದೆ. ಕಲ್ಲೆ ಶಿವೋತ್ತಮ ರಾಯರು ಓಡಾಡಿದ ಎಲ್ಲಾ ಕಡೆ ಓಡಾಡಿ ಬಂದೆ ಎನ್ನುವುದು ನನಗೆ ಕೊಂಬು ಮೂಡಿಸಿತ್ತು.

ಇಂದು ಕಲ್ಲೆ ಶಿವೋತ್ತಮರಾಯರ ೯೨ ನೇ ಜನ್ಮ ದಿನ. ಎಲ್ಲಾ ನೆನಪಿಗೆ ಬಂತು.

ಎಮೋಜಿ ಸೃಷ್ಟಿಸಿದವರಿಗೆ ಮನಸ್ಸಿನಲ್ಲಿಯೇ ಒಂದು ನಮಸ್ಕಾರ..

0

ಜಿ.ಎನ್.ನಾಗರಾಜ್


ನನ್ನ ಪ್ರತೀ ಸ್ಟೇಟಸ್ ಗೆ ಬರುವ ಕಾಮೆಂಟ್ ಗಳನ್ನು ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಗಮನಿಸಿದ್ದರೆ ಒಂದು ವಿಷಯ ನಿಮ್ಮನ್ನು ಕಾಡಿರಲೇಬೇಕು.

ಚಿತ್ರಶೇಖರ ಕಂಠಿ ಎನ್ನುವ ಮಿತ್ರರು ಯಾವುದೇ ಪ್ರತಿಕ್ರಿಯೆ ಬರೆಯದೆ ಬರೀ ಎಮೋಜಿ ಮಾತ್ರ ಕಳಿಸುತ್ತಾರೆ. ನನ್ನ ಇಷ್ಟೂ ದಿನದ ಸ್ಟೇಟಸ್ ಗೆ ಅವರು ಕೊಡುವ ಎಲ್ಲಾ ಪ್ರತಿಕ್ರಿಯೆ ಎಮೋಜಿ ರೂಪದಲ್ಲಿಯೇ ಇರುತ್ತದೆ.

ವಿಚಿತ್ರ ಆದರೂ ನಿಜ..

ಹಾಗನ್ನಿಸುವುದು ನಿಮಗೆ, ನನಗಲ್ಲ. ಏಕೆಂದರೆ ಚಿತ್ರಶೇಖರ ಕಂಠಿ ಅವರು ಬರೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಕಂಠಿ ಎಂದರೆ ಕಲಬುರ್ಗಿಯ ಪ್ರಮುಖ ಸಾಂಸ್ಕೃತಿಕ ಬಿಂದು. ಅವರಿಲ್ಲದೆ ಒಂದೂ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿರಲಿಲ್ಲ ಎನ್ನುವಷ್ಟು ಕಂಠಿ ಅವರನ್ನು ಎಲ್ಲರೂ ಅವಲಂಬಿಸಿದ್ದರು.

ಅವರೂ ಅಷ್ಟೇ ತಮ್ಮ ಮನೆಯನ್ನು ಎಲ್ಲರಿಗಾಗಿಯೇ ನಿರ್ಮಿಸಿದ ಛತ್ರವೇನೋ ಎನ್ನುವಂತೆ ತೆರೆದಿಟ್ಟರು.

ಅವರ ಪತ್ನಿ ಆಶಾ ಹಗಲೂ ರಾತ್ರಿ ನಡೆಯುತ್ತಿದ್ದ ಈ ಚರ್ಚೆಗೆಲ್ಲ ಕಿವಿಯಾಗುತ್ತಾ ಸತತವಾಗಿ ಟೀ ಸರಬರಾಜು ಮಾಡುತ್ತಾ, ಹೊತ್ತು ಹೊತ್ತಿಗೆ ಹೊಟ್ಟೆ ತುಂಬಿಸುತ್ತಾ ಇರುತ್ತಿದ್ದರು.

ಹೀಗಾಗಿ ಇವರ ಮನೆಯಲ್ಲಿ ಸಾಹಿತಿಗಳ ಜಾಗರಣೆ ಸದಾ.

ಕಂಠಿ ಹೈದ್ರಾಬಾದ್ ಕರ್ನಾಟಕದ ಪ್ರಮುಖ ಕಥೆಗಾರ, ಕವಿ. ‘ಬಿಸಿಲು ನಾಡಿನ ಬೆಳದಿಂಗಳು’ ಎನ್ನುವ ಉಪಮೆ ಸರಿಯಾಗಿ ಅನ್ವಯವಾಗುವುದು ಕಂಠಿಯವರಿಗೇ. ಅಷ್ಟರ ಮಟ್ಟಿಗೆ ಅವರು ಪ್ರತಿಯೊಬ್ಬರಿಗೂ ತಂಪಾದ ನೆನಪು.

ಅಂತಹ ಕಂಠಿ ಒಂದು ದಿನ ಲಕ್ವಾದ ಏಟಿಗೆ ತತ್ತರಿಸಿ ಹೋದರು. ಮಾತು ನಿಂತು ಹೋಯಿತು, ಅಕ್ಷರಗಳು ಕೈಗೆಟುಕುತ್ತಿಲ್ಲ. ಹಿಂದಿನ ಏನೆಂದರೆ ಏನೂ ನೆನಪಿಗೆ ಬರುತ್ತಿಲ್ಲ, ಎದುರಿಗೆ ಬಂದವರ ಮುಖ ಗುರುತಾಗುತ್ತಿಲ್ಲ.

ಕಲಬುರ್ಗಿ ಹಾಗೂ ರಾಜ್ಯದ ಅನೇಕ ಕಡೆ ಹರಡಿಹೋಗಿದ್ದ ಅವರ ಗೆಳೆಯರು ತತ್ತರಿಸಿ ಹೋದರು.

ಆಗ ಎದ್ದು ನಿಂತವರು ಆಶಾ ಕಂಠಿ.

ಸೊಲ್ಲಾಪುರ, ಹೈದ್ರಾಬಾದ್, ಬೆಂಗಳೂರು, ಮೈಸೂರು ಹೀಗೆ ಎಲ್ಲೆಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತದೋ ಅಲ್ಲೆಲ್ಲಾ ಅವರನ್ನು ಕರೆದುಕೊಂಡು ಹೋಗಿ ಇನ್ನೊಂದು ಮಗುವಿಗೆ ಜನ್ಮ ಕೊಟ್ಟೆನೇನೋ ಎನ್ನುವಂತೆ ಚಿತ್ರಶೇಖರ ಕಂಠಿಯವರನ್ನು ನೋಡಿಕೊಂಡರು.

ನೋಡನೋಡುತ್ತಿದ್ದಂತೆಯೇ ಕಂಠಿ ಅಂಬೆಗಾಲಿಡುವ ಮಗುವಾದರು. ತಪ್ಪು ತಪ್ಪು ಹೆಜ್ಜೆ ಇಟ್ಟು ನಡೆದರು. ನಂತರ ಜನರನ್ನು ನೋಡಿ ಮುಗುಳ್ನಗಲು ಕಲಿತರು.

ಒಂದಿಷ್ಟು ನೆನಪು ಮನದ ಪರದೆಯ ಮೇಲೆ ಮೂಡಿತು. ಸ್ಪಷ್ಟ ಅಲ್ಲದಿದ್ದರೂ ತೊದಲು ಮಾತು ಕಲಿತರು. ಸಂವಹನಕ್ಕೆ ಎಷ್ಟು ಬೇಕೋ ಅಷ್ಟು ದಕ್ಕಿಸಿಕೊಂಡರು.

ಈಗ ಮೊಬೈಲ್ ನೋಡುವುದನ್ನು ಕಲಿತುಕೊಂಡಿದ್ದಾರೆ. ಓದಲು ಗೊತ್ತಾಗುತ್ತದೆ. ಅರ್ಥ ಆಗದಿದ್ದರೂ ಗೆಳೆಯರನ್ನು ಗುರುತಿಸುತ್ತಾರೆ.

ಅವರಿಗೆ ಪ್ರತಿಕ್ರಿಯೆ ನೀಡಲು ಗೊತ್ತಾಗುವುದಿಲ್ಲ, ಟೈಪಿಸಲು ಬರುವುದಿಲ್ಲ. ಹಾಗಾಗಿ ನೀವು ಸದಾ ನೋಡುತ್ತಿದ್ದೀರಲ್ಲಾ ಆ ಎಮೋಜಿ ಒತ್ತುತ್ತಾರೆ..

ಅಲ್ಲಿ ಅವರು ಎಮೋಜಿ ಒತ್ತುತ್ತಾರೆ ಇಲ್ಲಿ ನನಗೆ ಕಣ್ತುಂಬಿ ಬರುತ್ತದೆ.

ಎಮೋಜಿ ಹೀಗೂ ಬಳಕೆಯಾಗುತ್ತದೆ. ಎಮೋಜಿ ಸೃಷ್ಟಿಸಿದವರಿಗೆ ಮನಸ್ಸಿನಲ್ಲಿಯೇ ಒಂದು ನಮಸ್ಕಾರ ಕೊಡುತ್ತೇನೆ..

ಅದು ನೀರ ರುದ್ರ ನರ್ತನ

0

ಜಿ ಎನ್ ಮೋಹನ್


‘ನೀನು ನಾಳೆ ಇಲ್ಲಿರಬೇಕು ನೋಡಪ್ಪ’ ಅಂತ ದಾವಣಗೆರೆಯಿಂದ ಬಿ ಎನ್ ಮಲ್ಲೇಶ್ ಫೋನ್ ಮಾಡಿದಾಗ ನಾನು ಅವನಿಗೆ ಮೂರನೆಯ ಮಗು ಹುಟ್ಟಿರಬೇಕು ಎಂದುಕೊಂಡೆ.

ಮಗುವಿನ ನಾಮಕರಣವೋ, ತೊಟ್ಟಿಲು ಶಾಸ್ತ್ರವೋ ಅಂದುಕೊಂಡು ನನ್ನ ಮನಸ್ಸನ್ನೂ ಮೀರಿದ ವೇಗದಲ್ಲಿ ದಾವಣಗೆರೆಗೆ ಬಂದಿಳಿದಾಗ ಅಲ್ಲಿ ಆಗಲೇ ದೊಡ್ಡ ದಂಡೇ ನೆರೆದಿತ್ತು.

ಹೊಚ್ಚಹೊಸ ಇನೋವಾ ನಮಗಾಗಿ ಕಾದಿತ್ತು. ‘ಸೀದಾ ಗಾಡಿ ಹತ್ತು’ ಎಂದವನ ಮುಖ ನೋಡಲೂ ಸಮಯ ಸಿಗದಂತೆ ನಾನು ಗಾಡಿ ಹತ್ತಲೇಬೇಕಾಯ್ತು.

ಮಗುವಿನ ಕೈಗಿಡಲು ೧೦೦ ರೂಪಾಯಿಯ ಎರಡು ಹೊಸ ನೋಟುಗಳನ್ನು ಸುಂದರ ಕವರ್ ನಲ್ಲಿ ನನ್ನ ಹೆಸರು ಎದ್ದು ಕಾಣುವಂತೆ ಬರೆದು ತಂದಿದ್ದ ನನ್ನ ಮುಖ ಏನೂ ತಿಳಿಯದೆ ಕಕ್ಕಾಬಿಕ್ಕಿಯಾಗಿತ್ತು.

೬೫ ದಾಟಿದ ಎಂಜಿನಿಯರ್ ರಾಜಶೇಖರಪ್ಪ ನನ್ನ ಪಕ್ಕ ಕುಳಿತಿದ್ದರು. ಅವರ ಬಗಲಿಗೊಂದು ಬ್ಯಾಗು. ನಾನು ಅವರಿಗೆ ಕಾಣದಂತೆ ಅದರೊಳಗೆ ಇಣುಕಿದೆ.

ಶಾರದಾ ಅಟ್ಲಾಸ್, ಎಂಜಿನಿಯರಿಂಗ್ ಇಲಾಖೆಯ ಅಟ್ಲಾಸ್, ಒಂದು ಟೋಪಿ, ಒಂದು ಟಾರ್ಚ್, ಒಂದು ಮೆತ್ತನೆಯ ಶೀಟು ಎಲ್ಲವೂ ಇತ್ತು.

ಮಗು, ಬಾಣಂತಿ ತವರುಮನೆಯಲ್ಲಿದ್ದಾರಾ ಅಂದೆ. ಮಲ್ಲೇಶ ಪಕಪಕನೆ ನಕ್ಕ. ‘ಅಲ್ಲಲೇ, ಟೂರ್ ಹೊಂಟೀವಿ’ ಅಂದ.

ಆಗಲೇ ರಾಜಶೇಖರಪ್ಪ ತಮ್ಮದೇ ಗತ್ತಿನಿಂದ ಮ್ಯಾಪ್ ಹರಡಿದ್ದು. ಮೂರು ದಿನ ಟ್ರಿಪ್ ಅಂತ ಹೇಳಿದವರೇ ೩೦೦ ಜಾಗಗಳ ಪಟ್ಟಿ ಒಪ್ಪಿಸತೊಡಗಿದರು.

ಜೀವಮಾನವಿಡೀ ನೋಡಬೇಕಾದಷ್ಟು ಜಲಪಾತಗಳನ್ನು ಮೂರು ದಿನದಲ್ಲಿ ತೋರಿಸಿಬಿಡುವ ಉತ್ಸಾಹ ಹೊತ್ತಿದ್ದರು.

ಆಗಲೇ ಗೊತ್ತಾಯ್ತು ಈ ಟೂರು ಹಳ್ಳ ಹಿಡಿಯುತ್ತೆ ಅಂತ. ಆದರೆ ಅಲ್ಲಿದ್ದ ಯಾರಿಗೂ ಹಾಗನಿಸಿರಲಿಲ್ಲ.

ಹಗಲಿರುಳೂ ತಮ್ಮ ಕೆಲಸವನ್ನೇ ಧ್ಯಾನಿಸುವ, ಹೋದ ಊರುಗಳಲ್ಲಿಯೂ ತನ್ನದೇನಾದರೂ ಒಂದಿಷ್ಟು ಕೆಲಸ ಆಂಟಿಹಾಕಿಕೊಂಡೇ ಬರುವ, ಸದಾ ನಗುಮುಖದ ಶೇಖರಪ್ಪ..

..ಟೂರ್ ಅಂದರೆ ಸಾಕು ಚಪಾತಿ, ರೊಟ್ಟಿ, ಅನ್ನ, ಎಣ್ಣೆಗಾಯಿ, ಉಪ್ಪಿನಕಾಯಿ, ನೀರು.. ಎಲ್ಲವನ್ನೂ ಬೇಕಾದಷ್ಟು ದಿನಕ್ಕೆ, ಬೇಕಾದಂತೆ ಸ್ಟಾಕ್ ಮಾಡಿಸಿಕೊಂಡು ಬರುವ ಚಂದ್ರಣ್ಣ ಎಲ್ಲರೂ ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದಿರಲಿ’ ಎನ್ನುವಂತೆ ಮುಖ ಮಾಡಿಕೊಂಡು ಅತ್ಯುತ್ಸಾಹಿ ರಾಜಶೇಖರಪ್ಪನವರಿಗೆ ತಮ್ಮ ಕಿವಿಯನ್ನು ದಾನವಾಗಿ ಕೊಟ್ಟಿದ್ದರು

‘ಸಿರಸಿಯಲ್ಲಿ ಉಂಚಳ್ಳಿ ಫಾಲ್ಸ್ ನೋಡಿಕೊಂಡು ಅಲ್ಲಿಂದ ಧಾರವಾಡ ಹಾದು ಖಾನಾಪುರದತ್ತ ತಿರುಗಿ ದೂದ್ ಸಾಗರ ಗೆ ಹೋಗುವ ಗಾಡಿ ಹಿಡಿಯುವುದೇ’ ಎಂದರು

ಒಟ್ಟಿನಲ್ಲಿ ರಾಜಶೇಖರಪ್ಪನವರ ಕೈಗೆ ನಮ್ಮ ಜುಟ್ಟು (ನನ್ನದು ಬಿಟ್ಟು) ಕೊಟ್ಟಿದ್ದೇವೆ. ಬೇಕಾದ ರಸ್ತೆಯಲ್ಲಿ ಓಡಲು ಗಾಡಿ ಇದೆ. ‘ಹೊಡೀರಿ ಹಲಗಿ..’ ಅಂತ ಸುಮ್ಮನೆ ಕೂತದ್ದಾಯ್ತು.’

ಅಲ್ಲಲೇ ಮಲ್ಲೇಶ, ನೀನು ಹಿಂಗೆ ಫಾಲ್ಸ್ ನೋಡೋದಿಕ್ಕೆ ಹೋಗ್ತೀವಿ ಅಂದಿದ್ರೆ ನಾನೂ ತಯಾರಿ ಆಗಿ ಬರ್ತಿದ್ನೆಲ್ಲಾ ತಲೆಗೆ ಟೋಪಿ, ಕಾಲಿಗೆ ಬೂಟು, ಮೈಗೆ ಬೆಚ್ಚನೆ ಉಣ್ಣೆ ಕೋಟು ಕೈಯಲ್ಲಿ ಟಾರ್ಚು’ ಅಂದೆ

‘ಸುಮ್ನೆ ಕೂಡ್ರಪ್ಪ ದಾವಣಗೆರೆ ಬಿಟ್ಟು ನಾಲ್ಕು ದಿನ ಎಲಾದ್ರೂ ಹೋದ್ರೆ ಸಾಕಾಗಿದೆ ಎಲ್ಲಿಗೆ ಹೋಗ್ತೀವೋ ಬಿಡ್ತೀವೋ ದಾವಣಗೆರೆಯಿಂದ ಆಚೆ ಹೋಗ್ತೀವಿ ಅನ್ನೋದಷ್ಟೇ ಮುಖ್ಯ’ ಅಂದ. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವಂತೆ ನಿದ್ದೆಗೆ ಜಾರಿಕೊಂಡ.

ಒಂದಷ್ಟು ದೂರ ಓಡಿದ ಗಾಡಿ ತಿಂಡಿ ತಿನ್ನಲು ನಿಂತಿತು. ಬೆಳ್ಳಂಬೆಳಗ್ಗೆ ಉಪ್ಪಿನಕಾಯಿ, ಮೊಸರು ಸಮೇತ ಮಸಾಲೆ ಉಪ್ಪಿಟ್ಟು ಹೊಟ್ಟೆಗೆ ಬಿದ್ದ ತಕ್ಷಣವೇ ಯಾಕೋ ಎಲ್ಲರಿಗೂ ಜ್ಞಾನೋದಯವಾಯಿತು.

ಶೇಖರಪ್ಪನವರ ಮಾತಿನ ಪ್ರಕಾರ ಹೋದರೆ ತಂದಿದ್ದ ತಿಂಡಿ, ಊಟದ ಗಂಟು ಮಾತ್ರ ಖಾಲಿ ಆಗುತ್ತೆ ಊರು ನೋಡಕ್ಕಂತೂ ಆಗಲ್ಲ ಅಂತ ಆಗ್ಲೇ ಎಲ್ಲರೂ ಒಟ್ಟಾಗಿ ತಾವೇ ಹೋಗಬೇಕಾದ ದಿಕ್ಕು ರೂಪಿಸಲು ಕೂತರು.

ಆಗಲೇ ಎಲ್ಲರೂ ಒಟ್ಟಾಗಿ ‘ಓಂ, ಪ್ರಥಮ, ಶುರು, ಫ಼ಸ್ಟ್’ ನಲ್ಲೇ ನೋಡಬೇಕಾದ ಜಾಗ ಅಂತ ತೀರ್ಮಾನಿಸಿದ್ದು ದೂದ್ ಸಾಗರವನ್ನು.

ಒಮ್ಮೆ ದಿಕ್ಕು ನಿರ್ಧಾರವಾಗುವುದನ್ನೇ ಕಾಯುತ್ತಾ ಕೂತಿದ್ದಂತೆ ಇನೋವಾ ಶರವೇಗದಲ್ಲಿ ಹಾವೇರಿ ಹುಬ್ಬಳ್ಳಿ ಧಾರವಾಡವನ್ನು ಹಿಂದಿಕ್ಕಿ, ಎಡಕ್ಕೆ ಹೊರಳಿ, ಉತ್ತರ ಕನ್ನಡದ ಕಾಡು ಹೊಕ್ಕು, ಸಿಕ್ಕ ಸಿಕ್ಕ ರೈಲ್ವೆ ಹಳಿಗಳ ಬಳಿ ರೈಲಿಗೆ ಮೊದಲು ಹೋಗಲು ಬಿಟ್ಟು, ಯಾವುದೇ ಗೂಡಂಗಡಿ ಕಂಡರೂ ಫ್ರೆಶ್ ಹಾಲಿನಲ್ಲಿ ಮಾಡಿಸಿದ ಖಡಕ್ ಟೀ ಕುಡಿದು ಓಡತೊಡಗಿತು

‘ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ ನಿನ್ನೆ ಕ್ಯಾಸಲ್ ರಾಕ್ ನಲ್ಲಿ ದಾಖಲಾಗಿದೆ. ೨೧ ಸೆಂಟಿ ಮೀಟರ್ ಮಳೆ’ ಎನ್ನುವ ಸುದ್ದಿಯತ್ತ ನಮ್ಮ ಕಣ್ಣು ಬಿದ್ದದ್ದು ಅದೇ ಕ್ಯಾಸಲ್ ರಾಕ್ ರೈಲ್ವೆ ಸ್ಟೇಶನ್ ಗೆ ಕಾಲಿಟ್ಟಾಗಲೇ.

‘ಹೌದೇನ್ರೀ ?’ ಅಂತ ಅಲ್ಲಿನ ಸ್ಟೇಶನ್ ಮಾಸ್ತರ್ ನನ್ನು ಕೇಳಿದಾಗ ೨೧ ಅಲ್ಲ ೨೭ ಅಂತ ತಿದ್ದಿದ. ಪೇಪರ್ ಪ್ರಿಂಟ್ ಆಗೋವರೆಗೂ ಬಿದ್ದದ್ದು ೨೧ ಆದರೆ ಇವತ್ತು ಬೆಳಗ್ಗೆ ವರೆಗೆ ೨೭ ಅಂದ.

‘ಸುಳ್ಳು ಹೇಳ್ತಾನೆ ಬಿಡು’ ಅಂತ ಗುಮಾನಿ ಪಡುವ ವೇಳೆಗೆ ನಾವು ‘ಹಗಲಿರುಳೆನ್ನದೆ ಹೊಡೆಯುವ ಜಡಿಮಳೆ’ಗೆ ಸಿಕ್ಕು ತೊಯ್ದು ತೊಪ್ಪೆಯಾಗಿ ಹೋಗಿದ್ದೆವು.

ದೂದ್ ಸಾಗರ್ ಇರುವ ದಿಕ್ಕು ಯಾವುದು ಅಂತ ನೋಡುವಷ್ಟರಲ್ಲೇ ಅದರ ಒಂದು ಸ್ಯಾಂಪಲ್ ರುಚಿ ನಮಗೆ ಸಿಕ್ಕಿತ್ತು.

ನಾವು ಚಳಿಗೆ ಗಡ ಗಡ ನಡುಗುತ್ತಾ ಕೂತಿದ್ದೆವು. ಹೌರಾದಿಂದ ಗೋವಾದತ್ತ ಓಡುತ್ತಿದ್ದ ರೈಲು ನಮ್ಮನ್ನು ‘ಬಂದರೆ ಬನ್ನಿ, ಬಿಟ್ಟರೆ ಬಿಡಿ’ ಎನ್ನುವಂತೆ ಎರಡು ನಿಮಿಷ ಕಣ್ಣು ಮಿಟುಕಿಸಿತು.

ಚಕ್ರ ತಿರುಗುತ್ತಿದ್ದಂತೆಯೇ ಎಲ್ಲೆಲ್ಲೋ ಇದ್ದ ನಾವು ಯಾವ್ಯಾವುದೋ ಬೋಗಿಯಲ್ಲಿ ತೂರಿಕೊಂಡುಬಿಟ್ಟೆವು.

ಇಲ್ಲಿಂದ ೧೬ ಕಿ ಮೀ ರೈಲಿನ ಕಿಟಕಿ, ಬಾಗಿಲಿಗೇ ಅಂಟಿ ಕೊಂಡಿರಿ. ಎಲ್ಲೆಲ್ಲೂ ಝರಿಗಳೇ ಎಂದು ವಡಾ ಪಾವ್ ಮಾರುತ್ತಿದ್ದಾತ ‘ಪಿಚ್ಚರ್ ಅಭಿ ಬಾಕೀ ಹೈ’ ಎನ್ನುವಂತೆ ಹೇಳಿದ.

ನಾವಂತೂ ಆತ ಪಾನ್ ಪರಾಗ್ ಸೋರುತ್ತಿದ್ದ ಬಾಯನ್ನುಒರೆಸಿದ ಕೈನಿಂದಲೇ ವಡಾ ಪಾವ್ ಹಂಚುತ್ತಾ ಹೊರಟಿದ್ದನ್ನು ನೋಡುತ್ತಾ ನಿಂತಿದ್ದೆವು.

ಆತನೇ ನಮ್ಮ ಮೊದಲ ಹಾಗೂ ಕೊನೆಯ ಗೈಡ್. ಆಮೇಲೆ ಜಪ್ಪಯ್ಯ ಎಂದರೂ ನಿಮಗೆ ನೀವೇ ಮಾರ್ಗದರ್ಶಿಗಳು

ರೈಲು ಕಿಯ್ಯೋ ಕಿರ್ರೋ ಎನ್ನುತ್ತಾ ನಿಂತಿತೋ ಇಲ್ಲವೋ ಎನ್ನುವಂತೆ ಒಂದಿಷ್ಟು ಜರ್ಕ್ ಹೊಡೆಯಿತು ಆ ವೇಳೆಗೆ ನಾವೆಲ್ಲರೂ ಉದುರಿಕೊಂಡಿದ್ದೆವು.

ಯಾಕಪ್ಪಾ ಹೀಗೆ ಎಂದರೆ ದೂದ್ ಸಾಗರ್ ನಲ್ಲಿ ರೈಲ್ವೆ ಸ್ಟೇಶನ್ ಇಲ್ಲ. ಇಲ್ಲಿ ರೈಲು ಭಗವಾನ್ ಮಹಾವೀರ ಸಂರಕ್ಷಿತ ಅರಣ್ಯವನ್ನು ಪ್ರವೇಶಿಸುವ ಮುನ್ನ ತನ್ನ ಬ್ರೇಕ್ ಸರಿ ಇದೆಯೇ, ಕೀಲು ಪಕ್ಕೆಲುಬು ನೆಟ್ಟಗಿದೆಯೇ ಎಂದು ಪರೀಕ್ಷಿಸಿಕೊಳ್ಳಲು ಐದು ನಿಮಿಷ ನಿಲ್ಲಿಸುತ್ತದೆ ಅಷ್ಟೇ.

ಅಲ್ಲಿ ಉದುರಿಕೊಂಡಿದ್ದ ನಾವು ಎಲ್ಲಿದ್ದೇವೆ ಎಂದು ಕಣ್ಣು ಬಿಟ್ಟರೆ ಆಗಲೇ ಗೋವಾ ನೆಲದಲ್ಲಿ!.

ಇಲ್ಲಿಂದ ಒಂದು ಕಿ ಮೀ ಅಷ್ಟು ನಡೆಯಿರಿ ಎಂದರು. ನಡೆಯೋಣ ಎಂದರೆ ಎದುರಿಗೆ ಕಂಡದ್ದು ಉದ್ದೋ ಉದ್ದಕ್ಕೆ ಬಿದ್ದಿದ್ದ ರೈಲ್ವೆ ಹಳಿಗಳು ಮಾತ್ರ.

ಸರಿ ಜಡಿಯುತ್ತಿದ್ದ ಮಳೆ ಆ ವೇಳೆಗಾಗಲೇ ನಮಗೆ ಹಳೆ ಕಾಲದ ನೆಂಟನೇನೋ ಎನ್ನುವಂತಾಗಿದ್ದ. ಅದರ ಸಮೇತ ರೈಲು ಹಳಿಯ ಮೇಲೆ ಹೆಜ್ಜೆ ಹಾಕುತ್ತಾ, ಸುರಂಗ ಸಿಕ್ಕೆಡೆ ಎಳೆ ಹುಡುಗರಂತೆ ಹೋ ಎಂದು ಕಿರುಚುತ್ತಾ, ಟಾರ್ಚ್ ಹತ್ತಿಸಿ ಹೊರಬಂದೆವು.

ಅಷ್ಟರಲ್ಲೇ ಆರ್ಭಟ ಕೇಳಿಸಿತು. ನನಗೆ ಮಂಗಳೂರಿನಲ್ಲಿ ಸಮುದ್ರದ ಪಕ್ಕವೇ ಮನೆ ಮಾಡಿಕೊಂಡಿದ್ದ ಕಾರಣ ಅದರ ಆರ್ಭಟ ಹೇಗಿರುತ್ತದೆ ಎಂದು ಗೊತ್ತಿತ್ತು.

ಆದರೆ ಇದು ಹಾಗಲ್ಲ. ‘ಸುತ್ತುವ ಮುತ್ತುವ ಎಲೆಸೆರೆಗೆತ್ತುವ ಸಮೀರ ಸಂತತ ಹಾಯೆ’ ಎನ್ನುವಂತೆ ಆ ಸಮೀರನನ್ನು ಜೊತೆ ಮಾಡಿಕೊಂಡು ಸಿಕ್ಕ ಸಿಕ್ಕೆಡೆಯೆಲ್ಲಾ ಚಿಮ್ಮುತ್ತಿದ್ದ ಜಲಪಾತ.

ನೋಡೋಣ ಎಂದು ನಾಲ್ಕು ಹೆಜ್ಜೆ ಮುಂದೆ ಹೆಜ್ಜೆ ಹಾಕಿದ್ದಷ್ಟೇ ಗೊತ್ತು ಆ ನೀರಿನ ಹೊಡೆತಕ್ಕೆ ನಾವು ತಂದಿದ್ದ ಛತ್ರಿಗಳು ಎಲ್ಲೋ ಹೋಗಿತ್ತು, ತೊಟ್ಟ ಕೋಟು ಟೋಪಿಗಳು ಎಲ್ಲೋ ಬಿದ್ದಿತ್ತು.

ಟೋಪಿ ಕೋಟು ಛತ್ರಿ ಬಿಡಿ ನಮ್ಮನ್ನೇ ಒಂದು ಹೊಡೆತಕ್ಕೆ ಎತ್ತಿ ಆ ಘಾಟಿಯ ಆಳಕ್ಕೆಸೆದು ಮೂಳೆಯಾಗಿಸಿಬಿಡುತ್ತೇನೆ ಎನ್ನುವ ರೋಷದಿಂದ ದೂದ್ ಸಾಗರ್ ಕುಣಿಯುತ್ತಿತ್ತು.

ದೂದ್ ಸಾಗರ ಜಲಪಾತದ ಬಳಿ ಹೋಗುವ ಮಾತು ಬಿಡಿ ಅದರ ಎದುರಿದ್ದ ರೈಲ್ವೆ ಸೇತುವೆಯ ಮೇಲೆ ಒಮ್ಮೆ ಆ ಕಡೆಯಿಂದ ಈ ಕಡೆ ಈ ಕಡೆಯಿಂದ ಆ ಕಡೆ ಹೋಗಿ ಬಂದರೇ ಸಾಕು ವೀರ ಪ್ರಶಸ್ತಿ ಕೊಟ್ಟು ಸನ್ಮಾನಿಸಿಬಿಡಬಹುದಿತ್ತು.

೧೦೦ ಅಡಿ ಅಗಲಕ್ಕೆ ಹರಡಿಕೊಂಡಿದ್ದ ಈ ಜಲಪಾತ ೧೦೧೭ ಅಡಿ ಎತ್ತರದಿಂದ ಬೀಳುತ್ತದೆ.

ಯಾಕೋ ಬೇಂದ್ರೆ ನೆನಪಾದರು. ‘ಇಳಿದು ಬಾ ತಾಯಿ ಇಳಿದು ಬಾ’ ಎಂದ ಬೇಂದ್ರೆ ಇಲ್ಲಿಗೆ ಬಂದಿದ್ದರೆ ಯಾರೂ ಕೇಳದೆಯೇ ಧುಮ್ಮಿಕ್ಕುತ್ತಿದ್ದ ಈ ಜಲಪಾತವನ್ನು ಕಂಡು ಕವಿತೆಯನ್ನು ತಮ್ಮೊಳಗೇ ಇಟ್ಟುಕೊಂಡುಬಿಡುತ್ತಿದ್ದರೇನೋ

ಭಾರತದ ಜಲಪಾತಗಳ ಪೈಕಿ ಇದು ನಾಲ್ಕನೆಯ ಅತಿ ಎತ್ತರದ ಜಲಪಾತ ಎನಿಸಿಕೊಂಡಿದೆ. ಜಗತ್ತಿನಲ್ಲಿ ೨೨೭ನೆಯದು. ನೀರು ಎನ್ನುವುದರ ರುದ್ರ ಸೌಂದರ್ಯ ನೋಡಬೇಕು ಎಂದರೆ ದೂದ್ ಸಾಗರ ಬಿಟ್ಟರೆ ನಮ್ಮ ಹತ್ತಿರದಲ್ಲಿ ಮತ್ತೊಂದಿಲ್ಲ.

ಜೋಗಕ್ಕೆ ಹತ್ತಾರು ಸಲ ಹೋಗಿರುವ ನನಗಂತೂ ‘ಸಾಯೋದ್ರಲ್ಲಿ ಒಮ್ಮೆ ನೋಡು ಜೋಗಾದ್ ಗುಂಡಿ..’ ಎನ್ನುವ ಸಾಲನ್ನು ಬದಲಿಸಬೇಕು ಎಂದು ಇದೇ ಮೊದಲ ಬಾರಿ ಅನಿಸಿಹೋಯ್ತ

ಪ್ರಧಾನಿಯವರ ಆತ್ಮನಿರ್ಭರದ ಮಾತು ಡಾ.ನಿತ್ಯಾನಂದ ಶೆಟ್ಟಿ ಅವರ ಕಣ್ಣಿನಲ್ಲಿ….

0

ಒಂದು ದಿನ‘ಆತ್ಮನಿರ್ಭರ ಭಾರತ’ಎಂದು ಕರೆಕೊಟ್ಟು ಇನ್ನೊಂದು ದಿನ‘ಕೋವಿಡೋತ್ತರ ದಿನಗಳು ಭಾರತದಲ್ಲಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸುತ್ತವೆ,ಕೋಟ್ಯಾಂತರ ಬಂಡವಾಳತೊಡಗಿಸಿ’ ಎಂಬ ಆಹ್ವಾನ ನೀಡಲಾಗುತ್ತಿದೆ. ಆದರೆ ಇವೆರಡೂ ಪರಸ್ಪರ ವಿರೋಧಾಭಾಸದ ಮತ್ತು ಮಹಾ ಸಾಂಕ್ರಾಮಿಕದಿಂದ ಯಾವ ಪಾಠವನ್ನೂ ಕಲಿಯದ ಮಾತುಗಳು.

ಮೊದಲಿಗೆ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ನೋಡೋಣ. ಸ್ಥಳೀಯ ನಿದರ್ಶನವೊಂದರ ಮೂಲಕವೇ ಇದನ್ನು ಆರಂಭಿಸೋಣ.

ಲಾಕ್‌ಡೌನ್ ಕಾಲದಲ್ಲಿ ನಡೆದ ಒಂದು ಸಣ್ಣ ಘಟನೆ ಇದು. ತುಮಕೂರು ಪೇಟೆಯ ಹೊರವಲಯದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ನನ್ನ ಪಕ್ಕದ ಮನೆಯಲ್ಲಿ ಇರುವವನು ಮಂಜಣ್ಣ. ಆತ ಓರ್ವ ಪೂರ್ಣಪ್ರಮಾಣದ ಕೃಷಿಕ. ಜಾತಿಯಲ್ಲಿ ತಿಗಳ ಸಮುದಾಯಕ್ಕೆ ಸೇರಿದ ಮಂಜಣ್ಣ ಅತ್ಯಂತ ವ್ಯವಸ್ಥಿತ ತರಕಾರಿ ಬೆಳೆಗಾರ. ಆತ ತನ್ನ ಹೊಲದಲ್ಲಿ ಬೆಳೆದಿರುವ ಯಾವುದೇ ಬೆಳೆ ನೋಡಿದರೂ ಅದು ರಂಗೋಲಿ ಇಟ್ಟಷ್ಟು ಚಂದ. ನಮ್ಮ ಮನೆಯದೇನಾದರೂ ಸಣ್ಣ-ಪುಟ್ಟ ಕೆಲಸ ಇದ್ದರೆ ಅದನ್ನು ಚೊಕ್ಕವಾಗಿ ಮುಗಿಸಿ ಅದಕ್ಕೆ ಪ್ರತಿಫಲವಾಗಿ ಏನನ್ನೂ ಸ್ವೀಕರಿಸದ ನಿಷ್ಕಾಮ ನೇಗಿಲ ಯೋಗಿ.

ಕೊರೊನಾ ರೋಗ ಭಾರತಕ್ಕೂ ಪ್ರವೇಶಿಸಿದ ಹಿಂಚು-ಮುಂಚಿನ ದಿನಗಳಲ್ಲಿ ತನ್ನ ಒಂದು ಹೊಲದಲ್ಲಿ ಹೂಕೋಸು ಬೆಳೆದಿದ್ದ ಮಂಜಣ್ಣ. ಬೆಳೆ ಚೆನ್ನಾಗಿ ಬಂದಿತ್ತು. ಮಾರ್ಚ್ 22, 2020ರ ಸಂಜೆ ಸುಮಾರು ಒಂದು ಕ್ವಿಂಟಾಲ್‌ನಷ್ಟು ಹೂಕೋಸು ಕುಯ್ದ ಮಂಜಣ್ಣ. ಆ ದಿನ ರಾತ್ರಿ (ಎಲ್ಲ ನ್ಯೂಸ್ ಚಾನೆಲ್‌ಗಳು ಮನೆಯ ಸೂರು ಕಿತ್ತು ಹೋಗುವಂತೆ ಆರ್ಭಟಿಸುವ ಹೊತ್ತಿನಲ್ಲಿ) 9 ಗಂಟೆಗೆ ಸರಿಯಾಗಿ ಪ್ರೈಮ್ ಟೈಮ್‌ನಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಮ್ಮ ಪ್ರೈಮ್ ಮಿನಿಸ್ಟರ್‌ರವರು “ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್” ಎಂದು ಘೋಷಿಸಿದರು.

ನಮ್ಮ ಮಂಜಣ್ಣನಿಗೆ ಕರ್ಫ್ಯೂ ಗೊತ್ತಿತ್ತು. ಆದರೆ ಈ ಲಾಕ್‌ಡೌನ್ ಗೊತ್ತಿರಲಿಲ್ಲ. ಕುಯ್ದು ಇಟ್ಟಿರುವ ಕೋಸು. ನಾಳೆ ಮಾರ್ಕೆಟ್‌ಗೆ ಹಾಕದಿದ್ದರೆ ಕೊಳೆಯುತ್ತದೆ ಎಂದು ಅಂಜುತ್ತ-ಅಳುಕುತ್ತ ಮಂಜಣ್ಣ ತನ್ನ ಟಿವಿಎಸ್‌ನಲ್ಲಿ ಅಷ್ಟೂ ಹೂಕೋಸು ಹೇರಿಕೊಂಡು ತುಮಕೂರು ಅಂತರಸನಹಳ್ಳಿಯಲ್ಲಿರುವ ತರಕಾರಿ ಮಾರ್ಕೆಟ್‌ಗೆ ಹೋದ. ಚೀಲ ಇಳಿಸಿದ ಮಂಜಣ್ಣ ನೋಡ್ತಾನೆ. ಇವನಂತೆಯೇ ತರಕಾರಿ ಮಾರಲು ಬಂದಿದ್ದ ರೈತರ ಬೆನ್ನ ಮೇಲೆ, ಕುಂಡಿ ಮೇಲೆ ಪೊಲೀಸರ ಲಾಠಿಗಳು ಶ್ಯಾನೆ ಬಿರುಸಾಗಿ ಓಡಾಡ್ತಾ ಇದ್ದವು. ಭಯಗ್ರಸ್ತನಾದ ಮಂಜಣ್ಣ ಅಲ್ಲೇ ಒಂದು ಅಂಗಡಿಯ ಹಿಂಭಾಗದಲ್ಲಿ ಅಡಗಿ ಕುಳಿತು ಪೊಲೀಸ್ ವ್ಯಾನು ಹೋದ ಬಳಿಕ ಹೊರ ಬಂದರೆ ಒಂದು ನರಪಿಳ್ಳೆಯೂ ಮಾರ್ಕೆಟ್‌ನಲ್ಲಿ ಇಲ್ಲ. ತಾನು ತಂದ ಅಷ್ಟೂ ಕೋಸನ್ನು ಅಲ್ಲೇ ರಸ್ತೆ ಮೇಲೆ ಸುರಿದು ಮನೆಗೆ ಬಂದ ಮಂಜಣ್ಣ, ಟಿಲ್ಲರ್ ತಗೊಂಡು ಕೋಸು ತುಂಬಿದ ಇಡೀ ಹೊಲದ ಉದ್ದಕ್ಕೂ ಟಿಲ್ಲರ್ ಓಡಾಡಿಸಿ ತನಗೆ ಬಂದ ರೋಷವನ್ನು ಇಳಿಸಿದ ಬಳಿಕವೇ ಕೂಲಾದ.

ಸಂಜೆ ನಮ್ಮ ಮನೆ ಮುಂದೆ ಬಂದು ಇದನ್ನೆಲ್ಲ ವರ್ಣಿಸಿದ ಮಂಜಣ್ಣನನ್ನು ನಾನು ಮೆತ್ತಗೆ ಕೇಳಿದೆ. “ಇಷ್ಟೊಂದು ಕೋಪ ಯಾಕ್ ಮಂಜಣ್ಣ?”.

“ಇನ್ನೇನು ಸಾ. ಕಷ್ಟ ಪಟ್ಟು ಬೆಳೆ ಬೆಳೆದು ಮಾರ್ಕೆಟ್‌ಗೆ ಹೋದರೆ ನಮಗೆ ಕಳ್ಳರಿಗೆ ಹೊಡ್ದಂಗೆ ಹೊಡೀತಾರಲ್ಲ ಸಾ. ಇದು ನ್ಯಾಯನಾ? ನೋಡ್ತೀರಿ ಸಾ. ಲಾಕ್‌ಡೌನ್ ಇಪ್ಪತ್ತೊಂದು ದಿನ ಅಲ್ಲ. ಇಪ್ಪತ್ತೊಂದು ತಿಂಗಳು ಮಾಡಲಿ. ಹೆದರೋ ಮಗಾ ಅಲ್ಲ ನಾ. ಇನ್ನೂ ನಾಲ್ಕು ವರ್ಷಕ್ಕಾಗೋವಷ್ಟು ರಾಗಿ ಹಂಗೇ ಮಡಗಿದ್ದೀನಿ. ಮನೆಗೆ ಎಷ್ಟು ಬೇಕೋ ಅಷ್ಟು ತರಕಾರಿ ಬೆಳ್ಕೊಂಡು ಆರಾಮ ಇರ್ತೀನಿ. ಯಾರೇನು ಮಾಡ್ತಾರೆ ಸಾ ನನ್ನನ್ನು? ಇಮಾನದಾಗೆ ಓಡಾಡೋರಿಂದ ಬಸ್ಸಲ್ಲಿ ಓಡಾಡುವವರವರೆಗೆ ಹೆದರ್ಬೇಕು. ನಾ ಯಾಕೆ ಹೆದರ್ಲಿ?÷ನಮ್ಮ ಇಡೀ ಮನೆಮಂದಿ ಉಪ್ಪೊಂದನ್ನು ಬುಟ್‌ಬುಟ್ಟು ಇನ್ಯಾವುದಕ್ಕೂ ಹೊರಗಿನ ಪ್ರಪಂಚಕ್ಕೆ ಕ್ಯಾರೇ ಅನ್ನಲ್ಲ ಸಾ. ಈ ಶನಿ ಊರಾಚೆ ತೊಲಗುವವರೆಗೆ ನಾ ಪೇಟೆ ಮುಖ ನೋಡೋ ಮಗನೇ ಅಲ್ಲ” ಅಂದುಬಿಟ್ಟ.

ಆತನ ಆತ್ಮಾಭಿಮಾನ, ಧೈರ್ಯ ಮತ್ತು ದಿಟದ ನುಡಿಗಳಿಗೆ ನಾನು ನಿರುತ್ತರನಾಗಿದ್ದೆ.

ಮಂಜಣ್ಣ ನಮ್ಮ ಪ್ರಧಾನಿಯವರು ಹೇಳುವುದಕ್ಕೂ ಮೊದಲೇ ‘ಆತ್ಮನಿರ್ಭರ’ನಾಗಿಯೇ ಬದುಕಿದ್ದ. ಪ್ರಾಯಃ ಮುಂದೆಯೂ ಬದುಕುತ್ತಾನೆ. ಪೊಲೀಸರ ಪೆಟ್ಟು ನೋಡಿದ ಆತನಿಗೆ ತನ್ನಂತಹ ರಟ್ಟೆ ಮುರಿದು ದುಡಿದು ಬದುಕುವ ರೈತರ ವ್ಯಕ್ತಿತ್ವದ ಘನತೆಗೆ ಬಂದ ಅಪಾಯದ ಬಗ್ಗೆ ಖೇದವುಂಟಾಗಿತ್ತು. ಕೋಪವೂ ಬಂದಿತ್ತು. ನನ್ನ ಅನ್ನ ನನ್ನ ಕೈಯಲ್ಲಿರುವ ತನಕ ನಾನು ಯಾರಿಗೂ ತಲೆಬಾಗಲಾರೆ ಎಂಬ ನಿಲುವನ್ನು ಹೊಂದಿದ್ದ ಆತನಿಗೆ ನಾನು ಮನಸಲ್ಲೇ ತಲೆಬಾಗಿದೆ.

ವಿಷ್ಣು ಪುರಾಣದಲ್ಲಿ ಬರುವ ಒಂದು ಕಥೆ ಇಲ್ಲಿ ನೆನಪಾಗುತ್ತಿದೆ. ಎಲ್ಲರಿಗೂ ಗೊತ್ತಿರುವ ಕಥೆ ಅದು. ದೇವ-ದಾನವರು ಹಾಲಿನ ಸಮುದ್ರವನ್ನು ಕಡೆಯುವುದರಲ್ಲಿ ಮಗ್ನವಾಗಿದ್ದಾಗ ಮಂದರ ಪರ್ವತ ಮುಳುಗಿ ಹೋಗುತ್ತಿತ್ತು. ವಿಷ್ಣು ಕೂರ್ಮಾವತಾರವನ್ನು ತಾಳಿ ಪರ್ವತವನ್ನು ತನ್ನ ಬೆನ್ನ ಮೇಲಿನ ಚಿಪ್ಪಿನಿಂದ ಹೊತ್ತು ಮುಳುಗುವುದನ್ನು ತಡೆದ ಎನ್ನುವುದು ಆ ದೊಡ್ಡ ಕಥೆಯ ಒಂದು ಪ್ರಮುಖ ಭಾಗ. ಆ ಕಥೆಯನ್ನು, ಕೊರೊನಾದ ಕಾಲದಲ್ಲಿ ನಮ್ಮಲ್ಲಿ ನಡೆಯುತ್ತಿರುವ ಈ ಆಧುನಿಕ ಸಮುದ್ರ ಮಥನದ ಜೊತೆಗಿಟ್ಟೂ ನೋಡಬಹುದಾಗಿದೆ.

ಈ ಮಥನದಲ್ಲಿ ಕುಸಿಯುತ್ತಿರುವುದು ನಾವು ಕಟ್ಟಿಕೊಂಡ ಜಾಗತೀಕರಣ ಕೃಪಾಪೋಷಿತ ಆರ್ಥಿಕತೆ ಎಂಬ ಮಂದರ ಪರ್ವತ. ಅದನ್ನು ಬೆನ್ನಮೇಲೆ ಹೊರಬೇಕಾದ ಆಮೆಗಳು ನಮ್ಮ ರೈತರೇ. ಸೂರ್ಯಸ್ಪಷ್ಟವಾಗಿ ಕಾಣುವಂತಹ ಇಂತಹ ಒಂದು ಸತ್ಯ ನಮ್ಮ ನೀತಿ-ನಿರೂಪಕರಿಗೆ, ನಮ್ಮನ್ನು ಆಳುವವರಿಗೆ ಯಾಕೆ ಕಾಣುತ್ತಿಲ್ಲ ಎಂಬುದೇ ನಿಜಕ್ಕೂ ಸೋಜಿಗ.

ಈ ಸತ್ಯವನ್ನು ಕಾಣುವ ಬದಲಿಗೆ ಇದರ ತಲೆಯ ಮೇಲೆ ಹೊಡೆಯುವಂತಹ ಎರಡು ಘಟನೆಗಳು ನಮ್ಮ ರಾಜ್ಯದಲ್ಲೇ ನಡೆದವು. ಅವೇನೆಂದರೆ ಸಾಂಕ್ರಾಮಿಕ ಖಾಯಿಲೆ ನಮ್ಮಲ್ಲಿ ಸಂಕಟಗಳ ಮತ್ತು ಸಾವು-ನೋವುಗಳ ಸರಮಾಲೆಯನ್ನು ಸೃಷ್ಟಿಸುತ್ತಿರುವ ಕಾಲದಲ್ಲೇ ನಮ್ಮ ರಾಜ್ಯ ಸರಕಾರ ತರಾತುರಿಯಲ್ಲಿ ರೈತವಿರೋಧಿಯಾದ ಮತ್ತು ದೂರಗಾಮಿ ಪರಿಣಾಮದಲ್ಲಿ ತೀವ್ರಬಗೆಯ ಅ-ಸಮಾನತೆಗಳನ್ನು ಮತ್ತು ಅ-ಸಮಂಜಸತೆಗಳನ್ನು ಸೃಷ್ಟಿಸಬಲ್ಲ ಎರಡು ತಿದ್ದುಪಡಿಗಳನ್ನು ಕಾನೂನು ಪ್ರಕಾರವಾಗಿಯೇ ಜಾರಿಗೊಳಿಸಿತು.

ಮೊದಲನೆಯದು, ಎಪಿಎಂಸಿ ಕಾಯಿದೆಗೆ ತಿದ್ದುಪಡಿ. ಇನ್ನೊಂದು, ಕೃಷಿ ಜಮೀನಿನ ಮಾರಾಟಕ್ಕೆ ಇದ್ದ ‘ಅಡ್ಡಿ-ಆತಂಕ’ ಅಥವಾ ಕಾನೂನಾತ್ಮಕ ‘ತೊಡಕು’ಗಳ ನಿವಾರಣೆ. ಈ ಎರಡೂ ನಿರ್ಧಾರಗಳಿಂದ, ನಮ್ಮೆಲ್ಲರನ್ನು ನಿನ್ನೆ-ಇಂದು-ನಾಳೆಯ ದಿನಗಳಲ್ಲಿ ಪೊರೆದ-ಪೊರೆಯುತ್ತಿದ್ದ-ಪೊರೆಯಲಿದ್ದ ರೈತನೆಂಬ ಆಮೆಯ ಬೆನ್ನ ಮೇಲಣ ಚಿಪ್ಪನ್ನು ಇಕ್ಕುಳ ಹಾಕಿ ಕಿತ್ತಂತೆಯೇ ಆಗಿದೆ. ಈ ಅವಳಿ ನಿರ್ಧಾರಗಳ ಹಿಂದೆ ನಿಸ್ಸಂಶಯವಾಗಿಯೂ ನಮ್ಮನ್ನು ಆಳುವ ಸರಕಾರಗಳ ಕಾರ್ಪೊರೇಟ್ ಪರವಾದ ಹಿತಾಸಕ್ತಿ ಇದೆಯೇ ಹೊರತು ‘ಆತ್ಮನಿರ್ಭರ ಭಾರತ’ ವಂತೂ ಇಲ್ಲ.

ಭಾರತದಂತಹ ಬಹುರೂಪಿ ಮತ್ತು ಸಂಕೀರ್ಣ ಸಾಮಾಜಿಕ ಸಂರಚನೆಯನ್ನು ಹೊಂದಿರುವ ದೇಶದಲ್ಲಿ ನಮ್ಮನ್ನು ಆಳುವ ಜನನಾಯಕರು ತಮ್ಮ ಸಾಮಾಜಿಕ-ಆರ್ಥಿಕ ನೀತಿಗಳಲ್ಲಿ ಪ್ರಮುಖವಾಗಿ ನಾಲ್ಕು ಅಂಶಗಳಿಗೆ ಗಮನ ಕೊಡಬೇಕಾಗಿದೆ. ಮೊದಲನೆಯದು, ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು. ಎರಡನೆಯದು, ಆಹಾರ ವಿತರಣೆಯನ್ನು ಕೇಂದ್ರೀಕೃತ ವ್ಯವಸ್ಥೆಯಿಂದ ಗ್ರಾಮ ಪಂಚಾಯತ್ ಮಟ್ಟಕ್ಕೆ ವಿಕೇಂದ್ರೀಕರಣಗೊಳಿಸುವುದು. ಮೂರನೆಯದು, ಸುಸ್ಥಿರ ಆರೋಗ್ಯವಂತ ಶರೀರವನ್ನು ಹೊಂದುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿ ಪರಿವರ್ತನೆಗೊಳಿಸುವುದು. ಕೊನೆಯದಾಗಿ ಹೇಳುವುದಿದ್ದರೂ ಕೊನೆಯದ್ದಲ್ಲದ್ದು ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಜನಸಮುದಾಯದ ನಡುವೆ ಸ್ಥಾಪಿಸುವುದು.

ಯಾವುದೇ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ, ಅಥವಾ ಜಾಗತಿಕ ಮಹಾಯುದ್ಧಗಳ ಸಮಯದಲ್ಲಿ ಅಥವಾ ಬಲುದೊಡ್ಡ ಆರ್ಥಿಕ ಹಿಂಜರಿತದ ಸನ್ನಿವೇಶದಲ್ಲಿ ಜನಸಮುದಾಯಗಳು ತೀವ್ರತರವಾದ ಕಷ್ಟ-ಕಾರ್ಪಣ್ಯಗಳನ್ನು ಎದುರಿಸುವುದು ಆಹಾರದ ಕೊರತೆಯಿಂದ. ಹಾಗಿರುವಾಗ ಆಹಾರದ ಉತ್ಪಾದನೆಯ ಬಗ್ಗೆ ಮತ್ತು ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತರ ಬಗ್ಗೆ ನಮ್ಮ ಸರಕಾರಗಳು ಬಹಳ ಕಾಳಜಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಮಂಜಣ್ಣನಂಥವರ ದೃಢತೆ ಮತ್ತು ಆತ್ಮಗೌರವದ ಮಾತುಗಳಿಂದ ನಮ್ಮ ಅರ್ಥಶಾಸ್ತ್ರಜ್ಞರು, ನಮ್ಮ ನಾಯಕರು ಮತ್ತು ಸಾಮಾಜಿಕ ನೀತಿ-ನಿರೂಪಕರು ಅತ್ಯವಶ್ಯವಾಗಿ ಕಲಿಯಬೇಕಾದ ಒಂದು ಪಾಠ ಇದೆ. ಅದು ನಿಸ್ಸಂಶಯವಾಗಿ ಆಹಾರ ಉತ್ಪಾದನೆಗೆ ಸಂಬಂಧಿಸಿದ್ದು.

ಜಗತ್ತಿಗೆ ಯಾವ ಗಂಡಾAತರ ಬಂದು ಎರಗಿದರೂ ಮನುಷ್ಯ ಕನಿಷ್ಠ ಪಕ್ಷ ಎರಡು ಹೊತ್ತು ಆದರೂ ಹೊಟ್ಟೆಗೆ ಅನ್ನ ತಿನ್ನಬೇಕಾಗುತ್ತದೆ. ಜಗತ್ತಿಗೆ ಜಗತ್ತೇ ಬಾಗಿಲು ಹಾಕಿಕೊಂಡು ಲಾಕ್‌ಡೌನ್ ಆಗಿದ್ದರೂ ಅಡುಗೆ ಮನೆಯ ಬಾಗಿಲುಗಳನ್ನು ಮಾತ್ರ ಯಾವತ್ತೂ ತೆರೆದಿಡಬೇಕಾಗುತ್ತದೆ. ಆದರೆ ಈ ಪಾಠವನ್ನು ಕಲಿಯುವುದಕ್ಕೆ ನಮ್ಮ ಸರಕಾರಗಳೊಳಗಿನ ನೀತಿ-ನಿರೂಪಕರು ನಿರಾಕರಿಸುವಂತಿದೆ.

ಕೊರೊನಾದ ಕಾಲದಲ್ಲಿ ನಮ್ಮೆಲ್ಲರನ್ನು ತೀವ್ರವಾಗಿ ಬಾಧಿಸಿದ್ದು ಆಹಾರದ ಪ್ರಶ್ನೆ. ನಾವು ಇಲ್ಲಿ ಇರಲಾರೆವು ಎಂದು ಮಹಾನಗರಗಳಿಂದ ಹೊರಟ ಸುಮಾರು 13 ಕೋಟಿ ವಲಸಿಗರು ಎದುರಿಸಿದ್ದೂ ಆಹಾರದ ಸಮಸ್ಯೆಯನ್ನೇ. ಅವರು ದಾರಿ ಮಧ್ಯೆ ದಾರುಣವಾಗಿ ನಿಧನಗೊಂಡದ್ದು ಆಹಾರದ ಕೊರತೆಯಿಂದಲೇ. ಇಂದು ನಮ್ಮ ದೇಶದಲ್ಲಿ ಕೊರೊನಾದ ಕಾರಣದಿಂದ ಸಾಯುತ್ತಿರುವವರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಅತ್ಯಂತ ಶಿಸ್ತುಬದ್ಧವಾದ ವ್ಯವಸ್ಥೆ ಇದೆ. ಆದರೆ ಹಸಿವಿನಿಂದ ಸಾಯುತ್ತಿರುವವರ ಪಟ್ಟಿಯನ್ನು ಕಡೆಗಣ್ಣಿನಿಂದ ನೋಡಲು ನಿರಾಕರಿಸುವವರೂ ನಮ್ಮ ವ್ಯವಸ್ಥೆಯಲ್ಲಿದ್ದಾರೆ.

ಆಹಾರ ಪೂರೈಕೆ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿ ಯಾವುದೇ ಸ್ಪಷ್ಟ ನೀತಿ ಇಲ್ಲದ ಸರಕಾರವೊಂದು ಕೇವಲ ತನ್ನ ಜನಮರುಳು ‘ಚೇಷ್ಟೆ’ಗಳಿಂದ ಬಹಳ ದಿನಗಳವರೆಗೆ ಸಾರ್ವಜನಿಕ ವಿಶ್ವಾಸವನ್ನು ಗಳಿಸಲಾರದು. ಅದರ ಸಂಕೇತಗಳನ್ನು ನಾವು ಈಗ ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ.

ಆಹಾರ ಪೂರೈಕೆ ಮತ್ತು ಆಹಾರ ಭದ್ರತೆಯ ಕುರಿತು ಹೆಸರಾಂತ ಅರ್ಥಶಾಸ್ತ್ರಜ್ಞರಾಗಿರುವ ಮಧುರಾ ಸ್ವಾಮಿನಾಥನ್ ಅವರು ಹೇಳುವ ಮಾತುಗಳನ್ನು ಗಮನಿಸಿ:

“1940ರಲ್ಲಿ ಯುದ್ಧ ನಡೆದಾಗ ಇಂಗ್ಲೆAಡಿನಲ್ಲಿ ತೀವ್ರವಾದ ಆಹಾರದ ಕೊರತೆ ಉಂಟಾಗಿತ್ತು. ಅದನ್ನು ನಿರ್ವಹಿಸಲು ಇಂಗ್ಲೆಂಡ್ “ಫೇರ್ ಶರ‍್ಸ್” ಎಂಬ ಪಡಿತರ ಪದ್ಧತಿಯನ್ನು ಜಾರಿಗೆ ತಂದಿತು. ಇಂಗ್ಲೆAಡ್ 1939ರಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಪಡಿತರ ಪುಸ್ತಕವೊಂದನ್ನು ನೀಡುವುದಕ್ಕೆ ಪ್ರಾರಂಭಿಸಿತ್ತು. ಜನ ಪುಸ್ತಕವನ್ನು ತೋರಿಸಿ ವಾರಕ್ಕಾಗುವಷ್ಟು ಪಡಿತರವನ್ನು ಸ್ಥಳೀಯ ಪಡಿತರ ಅಂಗಡಿಯಿAದ ಪಡೆದುಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಬೆಣ್ಣೆ, ಬೇಕನ್, ಸಕ್ಕರೆ, ಮುಂತಾದ ಪದಾರ್ಥಗಳು ಪಡಿತರದಲ್ಲಿ ಸಿಗುತ್ತಿದ್ದವು. ಅನಂತರದಲ್ಲಿ ಅದಕ್ಕೆ ಮೊಟ್ಟೆ, ಬಿಸ್ಕತ್ತುಗಳು, ಸಂರಕ್ಷಿಸಿದ ಆಹಾರ, ಮಾಂಸ ಮತ್ತು ದವಸ ಧಾನ್ಯಗಳೂ ಸೇರಿಕೊಂಡವು. ಯುದ್ಧ ಕಾಲದಲ್ಲಿ ಕೈಗೊಂಡ ಈ ಪ್ರಯೋಗದ ಪರಿಣಾಮ ಮಾತ್ರ ಅದ್ಭುತವಾಗಿತ್ತು. ಅಮರ್ತ್ಯಸೇನ್ ಹೇಳುವಂತೆ ಇದರಿಂದ ಜನರ ಪ್ರಮುಖ ಸೂಚಿಗಳಲ್ಲಿ ಬಹುದೊಡ್ಡ ಸುಧಾರಣೆ ಆಯಿತು. ಜನರ ಆಯಸ್ಸು ಗಣನೀಯವಾಗಿ ಹೆಚ್ಚಿತು. ಮರಣ ಪ್ರಮಾಣವೂ ಕಡಿಮೆಯಾಯಿತು. ಯುದ್ಧದಿಂದಾಗಿ ಸಾವುನೋವು ಭೀಕರವಾಗಿತ್ತು. ಜನರು ಹಣ ಖರ್ಚು ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರ ಜೀವಿತಾವಧಿ ಹೆಚ್ಚಾಗಿತ್ತು. ಇಪ್ಪತ್ತನೆಯ ಶತಮಾನದ ಮೊದಲ ಆರು ದಶಕಗಳಲ್ಲಿ ಅದರಲ್ಲೂ 1941ರಿಂದ 1950ರ ಆವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಜೀವಿತಾವಧಿಯ ಪ್ರಮಾಣ ಗಣನೀಯವಾಗಿ ಏರಿತು.

1942ರಲ್ಲಿ ಬ್ರಿಟಿಷರು ಕೈಗಾರಿಕಾ ಕಾರ್ಮಿಕರಿಗೆ ಸಾಕಷ್ಟು ಆಹಾರವನ್ನು ಒದಗಿಸುವ ಉದ್ದೇಶದಿಂದ ಭಾರತದ ಆರು ನಗರಗಳಲ್ಲಿ ಪಡಿತರ ಪದ್ಧತಿಯನ್ನು ಪ್ರಾರಂಭಿಸಿದರು. 1943ರಲ್ಲಿ ಪ್ರಬಲವಾಗಿದ್ದ ರಾಜ¬ಕೀಯ ಚಳವಳಿಯ ಒತ್ತಾಯದಿಂದ ಮಲಬಾರಿನಲ್ಲಿ ಪಡಿತರ ಪದ್ಧತಿ ಜಾರಿಗೆ ಬಂತು. ಮಲಬಾರ್ ಪಡಿತರ ಪದ್ಧತಿ ಪ್ರಾರಂಭವಾದ ಮೊಟ್ಟಮೊದಲ ಗ್ರಾಮೀಣ ಪ್ರದೇಶ. 1960ರ ಮಧ್ಯಭಾಗದ ವೇಳೆಗೆ ಸಾರ್ವಜನಿಕ ಪಡಿತರ ಪದ್ಧತಿ, ರಾಷ್ಟ್ರೀಯ ಸಾರ್ವತ್ರಿಕ ಯೋಜನೆಯ ಭಾಗವಾಯಿತು. 1991ರವರೆಗೂ ಇದು ವಿಸ್ತಾರಗೊಳ್ಳುತ್ತಾ ಹೋಯಿತು. 1990ರಲ್ಲಿ ಉದಾರೀಕರಣದ ಫಲವಾಗಿ ಸಾರ್ವತ್ರಿಕ ಪಡಿತರ ವ್ಯವಸ್ಥೆ ಸ್ಥಗಿತಗೊಂಡಿತು. ಒಂದು ಸಣ್ಣ ನಿರ್ದಿಷ್ಟ ಜನರ ಗುಂಪಿಗೆ ಮಾತ್ರ ಪಡಿತರವನ್ನು ವಿತರಿಸುವ ಕ್ರಮ ಪ್ರಾರಂಭವಾಯಿತು. ಬಿಪಿಎಲ್ (ಬಡನತನದ ರೇಖೆಯ ಕೆಳಗಿರುವವರು) ಮತ್ತು ಎಪಿಲ್ (ಬಡತನದ ರೇಖೆಯ ಮೇಲಿರುವವರು) ಕುಟುಂಬಗಳು ಎಂಬ ವಿಂಗಡಣೆಯಾಯಿತು. ಅದಕ್ಕೆ ತಕ್ಕಂತೆ ಅವರಿಗೆ ಕೊಡುವ ಪಡಿತರದ ಪ್ರಮಾಣದಲ್ಲೂ ವ್ಯತ್ಯಾಸ ಶುರುವಾಯಿತು.

2013ರಲ್ಲಿ ಪ್ರಮುಖ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂತು. ಇದೊಂದು ಪ್ರಮುಖ ಹೆಜ್ಚೆ. ರೇಷನ್ ಮತ್ತು ಇತರ ಆಹಾರ ಆಧಾರಿತ ಯೋಜನೆಗಳನ್ನು (ಉದಾಹರಣೆಗೆ ಶಾಲೆಗಳಲ್ಲಿ ಮಧ್ಯಾಹ್ನದ ಊಟದಂತಹ ಯೋಜನೆಗಳು) ಒದಗಿಸುವುದು ಕಾನೂನಿನ ಪ್ರಕಾರ ಅವಶ್ಯಕ ಅಂತ ಆಯಿತು. ಶೇಕಡ 75ರಷ್ಟು ಗ್ರಾಮೀಣ ಕುಟುಂಬಗಳು, ಶೇಕಡ 50ರಷ್ಟು ನಗರದ ಕುಟುಂಬಗಳು ಅಂದರೆ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಕುಟುಂಬಗಳು ಈ ಯೋಜನೆಯ ಲಾಭ ಪಡೆದವು.” (ಅರ್ಥ-03, ಏಪ್ರಿಲ್ 2020. ಅನುವಾದ ಮತ್ತು ಸಂಪಾದನೆ: ಟಿ ಎಸ್ ವೇಣುಗೋಪಾಲ್).

ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಆಹಾರ ವಿತರಣೆಯ ಕಾರ್ಯಕ್ರಮವನ್ನು ಈ ವರ್ಷದ ನವೆಂಬರ್ ತಿಂಗಳವರೆಗೂ ವಿಸ್ತರಿಸಿದ್ದಾರೆ. ಇದು ಸಂತೋಷದ ವಿಷಯವೇ. ಆದರೆ ಇದಿಷ್ಟೇ ಸಾಕಾಗುವುದಿಲ್ಲ. ಈ ತೀರ್ಮಾನ ಸದ್ಯದ ಸಂಕಟವನ್ನು ಬಗೆಹರಿಸುವುದಕ್ಕೆ ಆಯಿತು. ನಾಯಕನಾದವನಿಗೆ ಭವಿಷ್ಯದ ಒಂದು ಮುನ್ನೋಟ ಇರಬೇಕಾಗುತ್ತದೆ.

ನಮ್ಮ ದೇಶಕ್ಕೆ ಖಾಯಿಲೆಯನ್ನು ತಂದವರು ವಿದೇಶೀ ನೆಲಸಿಗರು. ಖಾಯಿಲೆಯಿಂದ ಅಪಾರ ಪ್ರಮಾಣದ ಪರಿತಾಪವನ್ನು ಪಟ್ಟವರು ದೇಶೀ ವಲಸಿಗರು. ಆದರೆ ಈ ಖಾಯಿಲೆಯಿಂದ ಇಂದಿಗೂ ನರಳದೆ, ತನ್ನ ದೈನಂದಿನ ಬದುಕಿನ ಲಯವನ್ನೂ ಕಳೆದುಕೊಳ್ಳದೆ ಸಮಾಧಾನದಿಂದ ಇದ್ದಿರುವುದು ಈ ನಮ್ಮ ದೇಶದ ಗ್ರಾಮಭಾರತದ ಜನರು. ವಾರಾನುಗಟ್ಟಲೆಯ ಲಾಕ್‌ಡೌನ್ ಕಾಲದಲ್ಲಿ ಕಾಲಸ್ತಂಭನಗೊAಡAತೆ ದಿಙ್ಮೂಢರಾದವರು ಪೇಟೆ-ಪಟ್ಟಣಗಳ ಜನರು. ಹಳ್ಳಿಯಲ್ಲೇ ವಾಸಿಸುವ ನನ್ನ ಅನುಭವದಿಂದ ಹೇಳುವುದಾದರೆ ಈ ಲಾಕ್‌ಡೌನ್ ಕಾಲದಲ್ಲಿ ಹಳ್ಳಿಯ ಜನರು ಏನೂ ಸಂಭವಿಸಿಯೇ ಇಲ್ಲವೇನೋ ಎನ್ನುವಷ್ಟು ನಿರಾಳವಾಗಿದ್ದರು.

ಸೈಕಲ್‌ನಲ್ಲಿ ಹೋಗುವ ಗಂಡಸರು ಹೆಗಲ ಮೇಲಿನ ಟವೆಲ್‌ನಿಂದ ಮುಖ ಮರೆಮಾಡಿದ್ದರೆ, ಹೆಂಗಸರು ತಮ್ಮ ಸೆರಗಿನ ಒಂದು ತುದಿಯಿಂದ ಮುಖ-ಮೂಗು ಮುಚ್ಚಿ ಇನ್ನೊಂದು ತುದಿಯನ್ನು ಕುಪ್ಪಸಕ್ಕೆ ಸಿಕ್ಕಿಸಿಕೊಂಡಿದ್ದರು. ಮಾತ್ರವಲ್ಲ ತಮ್ಮತಮ್ಮ ಹೊಲ-ಗದ್ದೆ-ತೋಟದ ಕೆಲಸಗಳಲ್ಲಿ ವ್ಯಸ್ತರಾಗಿದ್ದರು. ಜಗತ್ತನ್ನು ನಡುಗಿಸಿದ ಸಾಂಕ್ರಾಮಿಕ ರೋಗಕ್ಕೆ ನಗರ ಭಾರತ ಮತ್ತು ಗ್ರಾಮ ಭಾರತದ ಈ ಬಗೆಯ ಆಂಗಿಕ ಪ್ರತಿಕ್ರಿಯೆಗಳು ನಮಗೆ ಯಾವ ಅರ್ಥವನ್ನು ದಾಟಿಸುತ್ತಿವೆ? ಗ್ರಾಮ ಭಾರತವನ್ನು ನಾನು ರೊಮಾಂಟಿಸೈಸ್ ಮಾಡುತ್ತಿಲ್ಲ. ಇಲ್ಲಿಯ ಕಷ್ಟಗಳು ಬೇರೆ ಸ್ವರೂಪದ್ದು ಹೌದು. ಆದರೆ ಕೋವಿಡ್-19ಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ನೋಡುವುದಿದ್ದಲ್ಲಿ ನಮ್ಮ ನೀತಿ-ನಿರೂಪಕರು ಮತ್ತು ನಮ್ಮನ್ನು ಆಳುತ್ತಿರುವ ನಾಯಕರು ಗ್ರಾಮಭಾರತದಿಂದ ಕಲಿಯುವುದು ಬಹಳಷ್ಟಿದೆ.

ಒಂದು ದಿನ ‘ಆತ್ಮನಿರ್ಭರ ಭಾರತ’ ಎಂದೂ ಇನ್ನೊಂದು ದಿನ ‘ಕೋವಿಡೋತ್ತರದ ಈ ದಿನಗಳು ಭಾರತದಲ್ಲಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸಿವೆ, ಬನ್ನಿ ಕೋಟ್ಯಾಂತರ ಬಂಡವಾಳದೊAದಿಗೆ ಭಾರತದಲ್ಲಿ ನಿಮ್ಮನ್ನು ನೀವು ತೊಡಗಿಸಿ’ ಎಂಬ ಎರಡು ಮಾತುಗಳು ಪರಸ್ಪರ ವಿರೋಧಾಭಾಸದ ಮಾತುಗಳು ಮತ್ತು ಮಹಾ ಸಾಂಕ್ರಾಮಿಕದಿAದ ಯಾವ ಪಾಠವನ್ನೂ ಕಲಿಯದ ಮಾತುಗಳು.

ಯಾವ ದೇಶದಲ್ಲಿ ಜನರು ಅತ್ಯಂತ ಕ್ಷಿಪ್ರವಾಗಿ ಚಲಿಸುತ್ತಿರುತ್ತಾರೋ ಆ ದೇಶದ ಅರ್ಥವ್ಯವಸ್ಥೆಯೂ ಹಾಗೆಯೇ ಚಂಚಲವಾಗಿರುತ್ತದೆ. ಯಾವ ಸಮಾಜಗಳ ಜನರು ಚಲಿಸಲು ನಿರಾಕರಿಸುವ ಮನೋಭಾವವನ್ನು ಹೊಂದಿರುತ್ತಾರೋ ಅಲ್ಲಿಯ ಆರ್ಥಿಕ ಬೆಳವಣಿಗೆಯ ದರ ನಿಧಾನವಾಗಿದ್ದರೂ ಸ್ಥಿರವಾಗಿರುತ್ತದೆ. ನಗರಗಳ ಅವ್ಯಾಹತ ಬೆಳವಣಿಗೆ, ವಿಪರೀತ ಕೈಗಾರಿಕೀಕರಣ ನಮ್ಮ ಜಗತ್ತಿನ ಜನರನ್ನು ನಿಂತಲ್ಲಿ ನಿಲ್ಲದಂತೆ ಮಾಡಿದೆ. ಈ ಬಗೆಯ ಅತಿ ಚಲನೆಯನ್ನೇ ಸಾಂಕ್ರಾಮಿಕ ಬಾಧಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಗ್ರಾಮಭಾರತದ ರೈತಾಪಿ ಜನರು ಸಾಮಾನ್ಯವಾಗಿ ಚಲನೆಯನ್ನು ನಿರಾಕರಿಸಿ ತಾವು ಇದ್ದಲ್ಲೇ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುತ್ತಿರುವವರು. ಅವರನ್ನು ರೋಗ ಅಷ್ಟಾಗಿ ತಟ್ಟಿಲ್ಲ ಎಂಬುದನ್ನೂ ಇಲ್ಲಿ ಗಮನದಲ್ಲಿರಿಸಿಕೊಳ್ಳಬೇಕು.

ಇವೆಲ್ಲವುಗಳ ಜೊತೆಜೊತೆಗೆ, ಯಾವ ದೇಶದ ಸಾಮಾಜಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಶಾಂತಿ-ಸಾಮರಸ್ಯದ ಬೆಳಕು ಇರುತ್ತದೋ ಆ ದೇಶಗಳ ಆರ್ಥಿಕ ಅಭಿವೃದ್ಧಿಯ ದರವೂ ಮೇಲ್ಮುಖವಾಗಿರುತ್ತದೆ ಎಂಬ ಅಂಶವನ್ನು ಇಲ್ಲಿ ಅವಶ್ಯವಾಗಿ ಪ್ರಸ್ತಾವಿಸಬೇಕು. ಇದು ಸಾಮಾನ್ಯ ವಿವೇಕದ ಮಾತೂ ಹೌದು. ಅಂತೆಯೇ ಅಧ್ಯಯನದ ಮೂಲಕ ಕಂಡುಕೊಂಡ ವಾಸ್ತವವೂ ಹೌದು.

ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಕೌಶಿಕ್ ಬಸು ಮತ್ತು ನಿರ್ವಿಕಾರ್ ಸಿಂಗ್ ಅವರು ‘ಭಾರತ ಎಂಬ ಕಲ್ಪನೆಯನ್ನು (ದಿ ಐಡಿಯಾ ಆಫ್ ಇಂಡಿಯಾ) ರಕ್ಷಿಸೋಣ’ ಎಂಬ ತಮ್ಮ ಲೇಖನದಲ್ಲಿ ಯಾನ್ ಅಲ್ಗಾನ್ (Yann Algan) ಮತ್ತು ಪಿಯರಿ ಕಾಹುಕ್ (Pierre Cahuc) ಎಂಬ ಇಬ್ಬರು ಫ್ರೆಂಚ್ ಅರ್ಥನೀತಿ ತಜ್ಞರು ಹೇಳುವ ‘ವಿಶ್ವಾಸ ಹೆಚ್ಚಾದಂತೆ ರಾಷ್ಟ್ರೀಯ ವರಮಾನವೂ ಅತ್ಯಂತ ತ್ವರಿತವಾಗಿ ಹೆಚ್ಚುತ್ತದೆ’ ಎಂಬ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಗಳನ್ನು ಬಳಸಿಕೊಂಡು ತೋರಿಸಿದ ವಾಸ್ತವವನ್ನು ಉದ್ಧರಿಸಿದ್ದಾರೆ.

ಜಾಗತೀಕರಣ ಜನರ ಚಲನೆಯನ್ನು ತೀವ್ರಗೊಳಿಸುತ್ತದೆ, ಜನರ ಬಯಕೆಯನ್ನು ಅನಂತವಾಗಿಸುತ್ತದೆ ಮತ್ತು ಜನರ ನೆಮ್ಮದಿಯನ್ನು ಎಂದೆಂದಿಗೂ ಕನ್ನಡಿಯೊಳಗಿನ ಗಂಟು ಆಗಿ ರೂಪಿಸಿರುತ್ತದೆ. ಅದಕ್ಕೆ ಪರ್ಯಾಯವಾಗಿರುವ ಸ್ವಾವಲಂಬನೆ ಅಥವಾ ಮಹಾತ್ಮಾ ಗಾಂಧಿಯವರು ಮತ್ತೆಮತ್ತೆ ಪ್ರತಿಪಾದಿಸುತ್ತಿದ್ದ ‘ಗ್ರಾಮ ಸ್ವರಾಜ್’ ಜನರನ್ನು ತಾವಿರುವ ಎಡೆಯಲ್ಲೇ ಸುಸ್ಥಿರಗೊಳಿಸುತ್ತದೆ ಮತ್ತು ಜನರ ನೆಮ್ಮದಿಯನ್ನು ಸ್ಥಳೀಯವಾಗಿ ಸಂತೃಪ್ತಿಗೊಳಿಸುವ ಹೊಸ ಕಾಲುದಾರಿಗಳ ಅನ್ವೇಷಣೆ ಮಾಡುತ್ತದೆ.

ಮನೆಯ ಗೃಹಸ್ಥ ಅಥವಾ ಗೃಹಿಣಿ ಇಡುವ ಒಂದು ತಪ್ಪು ಹೆಜ್ಜೆ ಒಂದು ಮನೆಯನ್ನು ಅಪಾಯಕ್ಕೆ ತಳ್ಳಬಲ್ಲದು. ಆದರೆ ಒಂದು ದೇಶದ ನಾಯಕತ್ವದ ಚುಕ್ಕಾಣಿ ಹಿಡಿದವರು ಇಡುವ ಒಂದು ತಪ್ಪು ಹೆಜ್ಜೆ ಇಡಿಯ ದೇಶವನ್ನು ಶತ-ಶತಮಾನಗಳವರೆಗೆ ಕತ್ತಲೆಗೆ ನೂಕಬಲ್ಲದು. ಈ ಸತ್ಯವನ್ನು ಕಂಡುಕೊಳ್ಳುವ ಮತ್ತು ಭವಿಷ್ಯದ ಮುನ್ನೋಟವನ್ನೂ ಹೊಂದಿರಬೇಕಾದ ಜಗತ್ತಿನ ನಾಯಕರು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ.

ಚೀನಾ ದೇಶ ಇನ್ನು ಮುಂದಿನ ದಿನಗಳಲ್ಲಿ ಜಾಗತಿಕ ಹೂಡಿಕೆಯನ್ನು ಆಕರ್ಷಿಸಲಾರದು ಎಂದು ಈಗಲೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವ ನಮ್ಮಲ್ಲಿನ ಬಂಡವಾಳಶಾಹೀ ಪರವಾದ ಆರ್ಥಿಕ ತಜ್ಞರು ಕೋವಿಡ್-19 ಎಂಬ ವೈರಾಣುವನ್ನು ಮಹಾಪೂರವೊಂದು ನಿನ್ನೆ ಬಂದು ನಾಳೆ ಹೋಗುತ್ತದೆ ಎಂಬಷ್ಟು ಸಲೀಸಾಗಿ ಭಾವಿಸಿದಂತಿದೆ. ಆದರೆ ಅವರು, ನಮ್ಮ ಜೀವವಿಜ್ಞಾನಿಗಳು ‘ಕೋವಿಡ್-19 ಮನುಷ್ಯನ ಈ ಭೋಗಲಾಲಸೆಯ ಭೀಕರ ಪರಿಣಾಮಗಳ ಒಂದು ಟ್ರೈಲರ್ ಅಷ್ಟೇ. ಪಿಚ್ಚರ್ ಅಭಿ ಬಾಕಿ ಹೈ.’ ಎಂದಿರುವುದನ್ನು ಕೇಳಿಸಿಕೊಂಡಿಲ್ಲದಂತಿದೆ.

ಈ ವಿಷಮ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಮತ್ತು ಇದರಿಂದ ಪಾರಾಗುವುದು ಹೇಗೆ ಎಂಬ ಎರಡು ಮುಖ್ಯ ಪ್ರಶ್ನೆಗಳೊಂದಿಗೆ, ಇನ್ನು ಮುಂದೆ ಇಂತಹ ವಿಷಮ ರೋಗಗಳು ಬಾರದಂತೆ ಜಗತ್ತಿನ ಪುರ‍್ರಚನೆಯನ್ನು ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನೂ ನಾವು ಅಗತ್ಯವಾಗಿ ಉತ್ತರಿಸಬೇಕಾಗಿದೆ.

ಜಾಗತೀಕರಣಕ್ಕಿರುವ ಒಂದು ಒಳ್ಳೆಯ ಅರ್ಥ ಇಡಿಯ ಜಗತ್ತೇ ಒಂದು ಕುಟುಂಬ. ಈ ಅರ್ಥದ ನೆಲೆಯಿಂದ ನಾವು ಜಾಗತೀಕರಣವನ್ನು ಕಾಣುವುದಾದರೆ ವಿಶ್ವದ ಎಲ್ಲ ರಾಜಕೀಯ ಮುಖಂಡರು ಮತ್ತು ಬುದ್ಧಿಜೀವಿಗಳು ಜಗತ್ತನ್ನು ಚೀನಾ-ಅಮೇರಿಕ-ಭಾರತ ಎಂದು ಪ್ರತ್ಯ-ಪ್ರತ್ಯೇಕ ದ್ವೀಪಗಳಾಗಿ ಕಾಣದೆ ಎಲ್ಲವನ್ನೂ ಅಖಂಡವಾಗಿ ಭಾವಿಸಿ ಜಗತ್ತಿನ ಹಿತಚಿಂತನೆಯನ್ನು ಬಯಸುವುದು ಮತ್ತು ಪೊರೆಯುವುದೇ ನಿಜವಾದ ರಾಜನೀತಿಯೂ ಹೌದು. ಅರ್ಥನೀತಿಯೂ ಹೌದು.



ಲೇಖಕರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು.

ಚಂದ್ರಿಕಾ ಎಂಬ ‘ಚಿಟ್ಟಿ’

0

ಜಿ.ಎನ್.ಮೋಹನ್


ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ..

ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’.

ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್ ಒಂದು ಪದ್ಯಗಳ ಕಟ್ಟನ್ನು ನಾನಿದ್ದ ಕಲಬುರ್ಗಿಗೆ ಕಳಿಸಿ ಎಲ್ಲವನ್ನೂ ಓದಿ ಬಹುಮಾನ ಕೊಡು ಎಂದಿದ್ದ. ಹಾಗಾಗಿ ಬಿಸಿಲ ಬೆಳದಿಂಗಳ ನಗರಿಯಲ್ಲಿ ಕೂತು ಕವಿತೆಗಳ ಸರಮಾಲೆಯನ್ನೇ ಹರಡಿಕೊಂಡಿದ್ದ ನನಗೆ ಆ ಬಿಸಿಲಿನ ಶಾಖ ಇನ್ನಷ್ಟು ಹೆಚ್ಚಿಸುವಂತೆ ಮಾಡಿದ್ದು ಈ ಕವಿತೆ.

ಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಉರುಳಿಸಿದ ಬಗ್ಗೆ ಇದ್ದ ಕವಿತೆ- ‘ಸರಯೂ ನದಿಯ ತೀರದಲ್ಲಿ’ . ಬರೆದದ್ದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ.

ಇಂತಹ ಕವಿತೆಗಳು ಘೋಷಣೆಗಳಾಗಿ ಅಬ್ಬರಿಸಿ ಬೊಬ್ಬಿರಿದುಬಿಡುವ ಅಪಾಯವೇ ಹೆಚ್ಚಿದ್ದ ದಿನಗಳಲ್ಲಿ ಈ ಹುಡುಗಿ ಕವಿತೆ ತಣ್ಣಗೆ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಿತ್ತು.

ಕವಿತೆ ಬರೆದವರು ಯಾರು ಎಂದು ಬಹುಮಾನ ಘೋಷಿಸಿದಾಗ ಗೊತ್ತಾಯಿತು- ಆಕೆ ಪಿ ಚಂದ್ರಿಕಾ

ನಾನು ಪಿ ಚಂದ್ರಿಕಾ ಕವಿತೆಗಳ ಲೋಕಕ್ಕೆ ಹೆಜ್ಜೆ ಹಾಕಿ ಬಂದದ್ದು ಹೀಗೆ. ಆ ನಂತರ ಚಂದ್ರಿಕಾ ಕವಿತೆಗಳು ನನ್ನಿಂದ ತಪ್ಪಿಸಿಕೊಂಡಿಲ್ಲ.

‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ನನ್ನ ಕೈಗಿಟ್ಟದ್ದು ‘ಸೂರ್ಯಗಂಧಿ ಧರಣಿ’ಯನ್ನು .

ಆ ವೇಳೆಗಾಗಲೇ ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಎನ್ನುವ ಕವನ ಸಂಕಲನ ಹಕ್ಕುಚ್ಯುತಿ ಮಂಡಿಸಿತ್ತು. ಸಂಕಲನದ ಶೀರ್ಷಿಕೆಯೇ ನನ್ನನ್ನು ಚಿತ್ ಮಾಡಿ ಹಾಕಿತ್ತು. ಆ ನಂತರದ ಸಂಕಲನ ಸೂರ್ಯಗಂಧಿ.. ತಮ್ಮ ಒಡಲು ಸಂಭ್ರಮಿಸಿ ಪಲ್ಲವಿಸಲು ರೆಡಿ ಆಗುತ್ತಿದ್ದಾಗ ಕಂಡುಂಡ ಭಾವನೆಗಳ ಕೊಲಾಜ್ ಇದು. ಅಲ್ಲಿಂದ ಅವರ ಕವಿತೆಗಳು ನನ್ನೊಳ ಹೊಕ್ಕಾಡಿದೆ

ಪಿ ಚಂದ್ರಿಕಾ ನನಗೆ ಚಂದ್ರಿಕಾ ಅಲ್ಲ ‘ಚಿಟ್ಟಿ’ . ಎರಡನೆಯ ಬಾರಿ ನಾಮಕರಣ ಸಂಭ್ರಮ ಅನುಭವಿಸಿದಾಕೆ. ತೊಟ್ಟಿಲಲ್ಲಿ ಇದ್ದಾಗ ಕೊಟ್ಟ ಹೆಸರು ದೊಡ್ಡವರ ರೀತಿ ದನಿ ಹೊರಡಿಸುತ್ತಿತ್ತು. ಆದರೆ ಹಲವು ಕವಿತಾ ಸಂಕಲನ ಹೊತ್ತು ನಡೆಯುವಾಗ ಈಕೆ ಬದಲಾಗಿದ್ದು ಪುಟ್ಟ ಜಡೆಯ ಚಿಟ್ಟಿಯಾಗಿ

ಇದು ಯಾಕೆ ನನಗೆ ನೆನಪಾಗುತ್ತಿದೆ ಎಂದರೆ ಈ ‘ಚಂದ್ರಿಕಾ ಹಾಗೂ ಚಿಟ್ಟಿ’ ಎರಡರ ನಡುವಿನ ತುಯ್ದಾಟವೆ ಇವರ ಎಲ್ಲಾ ಬರಹಗಳ ಉಸಿರು.

ಚಂದ್ರಿಕಾಗೆ ‘ಚಿಟ್ಟಿ’ ಬೇಕು ಆದರೆ ಲೋಕಕ್ಕೆ ‘ಚಂದ್ರಿಕಾ’ ಬೇಕು ಈ ಎರಡು ತೊಯ್ದಾಟಗಳ ಮಧ್ಯೆ ಇವರ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಮೈತಳೆದು ನಿಂತಿವೆ. ಹಾಗಾಗಿ ಅವರ ಕವಿತೆ ಕಥೆ ಕಾದಂಬರಿ ಎಲ್ಲವೂ ಸೇರಿ ಒಂದೇ ಕೃತಿ

ಚಂದ್ರಿಕಾ ಒಳಗೆ ಆಡುವ ಆ ಬಾಲ್ಯದ ಕಣ್ಣಾ ಮುಚ್ಚಾಲೆಯಾಟ ಅವರನ್ನು ಕಾಡುವ, ನಮ್ಮೊಳಗಿನ ತುಯ್ದಾಟಕ್ಕೂ ಉಸಿರು ನೀಡುವ ಬರಹಗಾರಳನ್ನಾಗಿ ಮಾಡಿಬಿಟ್ಟಿದೆ.

ಚಂದ್ರಿಕಾ ಕವಿತೆಗಳ ಈ ಆಟವೇ ನನ್ನನ್ನು ಅವರ ‘ತಾಮ್ರವರ್ಣದ ತಾಯಿ’ ಬಗ್ಗೆ ಮಾತನಾಡಲು ವೇದಿಕೆಯ ಮೇಲೆ ನಿಲ್ಲುವಂತೆ ಮಾಡಿತ್ತು.

ಆ ಕಾರಣಕ್ಕಾಗಿ ಅವರ ಕವಿತೆಗಳನ್ನು ಬಗೆಯುತ್ತಾ ಹೋದಾಗ ಗೊತ್ತಾಗಿಬಿಟ್ಟಿದ್ದು ಚಂದ್ರಿಕಾ ನನ್ನಂತೆಯೇ ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಗುಳೆ ಎದ್ದು ಹೋದವರು ಅಂತ.

ಆದರೆ ಇಲ್ಲೊಂದು ಟ್ವಿಸ್ಟ್ ಇದೆ- ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಹೋದವರನ್ನು ‘ಕಳೆದು ಹೋದವರು’ ಎಂದು ಕರೆದು ಕೈತೊಳೆದುಕೊಂಡು ಬಿಡುತ್ತದೆ ಬರಹದ ಜಗತ್ತು

ಆದರೆ ಚಂದ್ರಿಕಾ ಛಲಗಾತಿ. ಆಕೆ ಹಾಗೆ ಗುಳೆ ಹೋಗಿ ದೃಶ್ಯ ಜಗತ್ತಿನ ಹೆಡೆಮುರಿ ಕಟ್ಟಿ ಅಕ್ಷರ ಲೋಕಕ್ಕೆ ಎಳೆತಂದು ಬಿಟ್ಟರು. ಅವರ ಯಾವುದೇ ಕವನ ನಿಮ್ಮ ಎದುರಿಟ್ಟುಕೊಳ್ಳಿ. ಅಲ್ಲಿ ಆ ಕವಿತೆಗಳು ದೃಶ್ಯವಾಗಿ ನಿಮ್ಮ ಕಣ್ಣೆದುರಾಡದಿದ್ದರೆ ನನ್ನಾಣೆ.

ಅಷ್ಟೇ ಅಲ್ಲ ದೃಶ್ಯ ಮಾಧ್ಯಮ ಇವರ ಕವನಗಳನ್ನೂ ತಿದ್ದಿದೆ. ಇವರು ಹಿರಿ ತೆರೆಗೆ, ಕಿರು ತೆರೆಗೆ ಬರೆಯಲು ಹೊರಡುವುದಕ್ಕೆ ಮುನ್ನ ಹಾಗೂ ನಂತರದ ಕವಿತೆ ಓದಿ, ಚಂದ್ರಿಕಾ ಬದಲಾಗಿದ್ದು
ಗೊತ್ತಾಗಿಬಿಡುತ್ತದೆ

ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುವ ಹುಡುಗಿ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಕವಿತೆಗಳಾಗಿಬಿಡುತ್ತದೆ.

ಚಂದ್ರಿಕಾರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿ ಕೊಳ್ಳುತ್ತಾರೆ.

ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಸುಳಿಯಲ್ಲಿ ಸಿಕ್ಕ ಅನುಭವಕ್ಕೆ ಮಾತು ಕೊಡುವುದು ಹೇಗೆ? ಅದು ಅನುಭವ ಅಷ್ಟೇ.. ಹಾಗೆ ಚಂದ್ರಿಕಾ ಬರಹಗಳ ಓದಿನ ಕಥೆ. ಅದಕ್ಕೆ ಮಾತು ಕೊಡುವುದು ಕಷ್ಟವೇ

ಚಂದ್ರಿಕಾ ಒಂದೇ ಸಮಯಕ್ಕೆ ಸಂಭಾಳಿಸುವ ಹಲವು ಲೋಕವಿದೆಯಲ್ಲಾ ಅದು ನನಗೆ ಅಚ್ಚರಿ ತರಿಸಿದೆ. ಮನೆ, ಅಕ್ಷರ ಹಾಗೂ ದೃಶ್ಯ ಜಗತ್ತನ್ನು ಅವರು ಒಂದೇ ಕಾಲಕ್ಕೆ ಮಣಿಸುತ್ತಾರೆ.

ಅಷ್ಟೇ ಎಂದುಕೊಂಡಿದ್ದೆ ಅವರು ನನ್ನ ಜೊತೆ ‘ಚಿಟ್ಟಿ’ ಎನ್ನುವ ಹೆಸರನ್ನು ಉಸುರುವವರೆಗೆ.

ಅವರು ನನ್ನೊಡನೆ ಒಂದು ದಿನ ‘ಚಿಟ್ಟಿ ಎಂಬುವವಳಿದ್ದಳು..’ ಎಂದು ಶುರು ಮಾಡಿದಾಗ ನಾನು ಗೊಳ್ಳನೆ ನಕ್ಕು ಒಂದು ಜೋಕ್ ಹೇಳಿದ್ದೆ. ‘ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ ಅಂದಾಗ ಕೇಳಿಸಿಕೊಳ್ಳುತ್ತಿದ್ದವರು ಹೇಳುತ್ತಾರೆ ‘ಇರ್ಲಿ ಬಿಡು ಏನಿವಾಗ’ ಅಂತ.

ಚಂದ್ರಿಕಾ ‘ಚಿಟ್ಟಿ ಅಂತ ಒಬ್ಬಳಿದ್ದಳು’ ಎಂದಾಗ ನನಗೂ ಹಾಗೆ ಕೇಳಿಸಿತ್ತು ಆ ಕಾರಣಕ್ಕಾಗಿಯೇ ‘ಇರ್ಲಿಬಿಡು ಏನಿವಾಗ..?’ ಎಂದಿದ್ದೆ.

ಆದರೆ ಚಂದ್ರಿಕಾ ಒಳಗೇ ಚಿಟ್ಟಿ ನಡೆದುಕೊಂಡೇ ಬಂದಿದ್ದಾಳೆ ದಶಕಗಳ ಕಾಲ. ಹಾಗಾಗಿಯೇ ಆಕೆ ಚಂದ್ರಿಕಾ. ಒಂದು
ಅದಮ್ಯ ನೆನಪಿನ ಈ ಹುಡುಗಿ ತನ್ನ ನೆನಪಿನ ಓಣಿಯಲ್ಲಿ ನಡೆಯುತ್ತಲೇ ಇದ್ದಾಳೆ.

ನನಗೋ ಡಿಸ್ನಿ ಲ್ಯಾಂಡ್ ನಲ್ಲಿ ಇಂದು ಮತ್ತು ಹಿಂದು ಎರಡನ್ನೂ ಹೊತ್ತುಕೊಂಡು ನಡೆಯುವ ಯಾವುದೋ ಮ್ಯಾಜಿಕ್ ಕನ್ಯೆಯಂತೆ ಚಂದ್ರಿಕಾ ಅನಿಸಿಬಿಡುತ್ತಾರೆ..

ಇವರು ಎಷ್ಟು ತಮ್ಮ ನೆನಪುಗಳನ್ನು ಹೊದ್ದು ನಡೆಯುತ್ತಾರೆ ಎಂದರೆ ಇವರ ಜೊತೆಗಿನ ಒಂದು ಫೋನ್ ಮಾತೂ ಸಹಾ ಮಾತಾಗಿರುವುದಿಲ್ಲ.. ಫೋನಿನ ಆಚೆಗಿರುವ ಕಿವಿ ಲಿಪಿಕಾರ ಗಣೇಶನದ್ದಿರಬೇಕು ಎನ್ನುವಂತೆ ಆಕೆ ವ್ಯಾಸಳಾಗಿಬಿಡುತ್ತಾಳೆ

ನಾನೋ ನೆನಪಿನ ಹಂಗುಗಳಿಂದ ಹೊರ ಹಾರಲು ಕಾಯುತ್ತಿರುವವ. ಅವರೋ ನೆನಪಿನ ಕೋಟೆ ಕಟ್ಟಿ ಬದುಕುತ್ತಿರುವವರು ಹಾಗಾಗಿ ನಾನು ಚಂದ್ರಿಕಾ ಎಂದರೂ, ಚಂದ್ರಿಕಾ ಫೋನ್ ಎಂದರೂ ಒಂದು ಮಾರು ದೂರವೇ ಇರುತ್ತೇನೆ

ಅವರು ಚಿಟ್ಟಿ ಎಂದದ್ದಷ್ಟೇ ಗೊತ್ತು , ನಾನು ನನ್ನೊಳಗಿನ ‘ಡೋರ್ ನಂ ೧೪೨’ ಕಾಲದ ಹುಡುಗನ ಸಂಕಟ, ತಲ್ಲಣಗಳನ್ನ ಹೊರಗೆಳೆದುಕೊಂಡದ್ದೂ ಆಯ್ತು.

ಚಂದ್ರಿಕಾಗೆ ಬರಿ ಎಂದೆ. ಆಕೆ ‘ಯಾವುದೀ ಪ್ರವಾಹವು..’ ಎನ್ನುವಂತೆ ಬರೆಯುತ್ತಲೇ ಹೋದರು. ‘ಅವಧಿ’ ಅವರ ಪ್ರವಾಹಕ್ಕೆ ಲೆಡ್ ಟಿ ವಿ ಯಂತೆ ಕೆಲಸ ಮಾಡಿತು.

ಅವರೂ ಆ ನೆನಪ ಪ್ರವಾಹದಲ್ಲಿ ಕೊಚ್ಚಿಹೋದರೇನೋ.. ಚಿಟ್ಟಿಗೆ ಎದೆ ಗುಬ್ಬಿ ಮೂಡಿದ್ದೇ ತಡ ದಿಢೀರ್ ಅಂತ ಅವಳನ್ನು ಆಚೆ ಹಾಕಿಯೇ ಬಿಟ್ಟರು

ಹೀಗೆ ಚಿಟ್ಟಿ ಕಾದಂಬರಿ ದಿಢೀರ್ ಮುಗಿಯಿತು, ಆದರೆ ಅವರ ನೆನಪುಗಳಲ್ಲ. ಹಾಗಾಗಿ ಚಿಟ್ಟಿ ಇನ್ನೊಂದು ಹೆಸರು ಹೊದ್ದು ಯಾವಾಗ ಬೇಕಾದರೂ ಹೊರಗೆ ಕಾಲಿಟ್ಟಾಳು.

ಚಂದ್ರಿಕಾಗೆ ಬರೆಯುವುದು ಯಾರಿಗೋ ಅಲ್ಲ, ಪ್ರಕಟಿಸಲೂ ಅಲ್ಲ ಅದು ಅವರಿಗೆ ‘ತಾನೊಬ್ಬಳೇ ಆಡುವ ಆಟ’

ಇನ್ನೂ ಪ್ರೆಸ್ ನ ಇಂಕಿನ ಘಮ ಆರದಿರುವಾಗ, ಬಿಸಿ ತಣ್ಣಗಾಗದಿರುವಾಗಲೇ ಚಂದ್ರಿಕಾ ‘ಚಿಟ್ಟಿ’ ಕಾದಂಬರಿಯ ಮೊದಲ ಪ್ರತಿ ನನ್ನ ಕೈಗಿಟ್ಟರಲ್ಲಾ.. ಆಗ ಓಲಾಡಿದ ನೆನಪುಗಳೇ ಇವು..

ಚಂದ್ರಿಕಾ ಎಂಬ ‘ಚಿಟ್ಟಿ’

0

ಜಿ.ಎನ್.ಮೋಹನ್


ಈಕೆ ನನಗೆ ಪರಿಚಯವಾದದ್ದು ಒಂದು ಕವಿತೆಯ ಮೂಲಕ..

ನನ್ನ ನೆನಪು ಇನ್ನೂ ಕೈಕೊಡುವ ಕಾಲಕ್ಕೆ ಬಂದಿಲ್ಲ ಎನ್ನುವುದಾದರೆ ಆ ಕವಿತೆಯ ಹೆಸರು- ‘ಸರಯೂ ನದಿಯ ದಂಡೆಯಲ್ಲಿ’.

ನನ್ನ ‘ಅಣ್ತಮ್ಮ’ ಎಸ್ ವೈ ಗುರುಶಾಂತ್ ಒಂದು ಪದ್ಯಗಳ ಕಟ್ಟನ್ನು ನಾನಿದ್ದ ಕಲಬುರ್ಗಿಗೆ ಕಳಿಸಿ ಎಲ್ಲವನ್ನೂ ಓದಿ ಬಹುಮಾನ ಕೊಡು ಎಂದಿದ್ದ. ಹಾಗಾಗಿ ಬಿಸಿಲ ಬೆಳದಿಂಗಳ ನಗರಿಯಲ್ಲಿ ಕೂತು ಕವಿತೆಗಳ ಸರಮಾಲೆಯನ್ನೇ ಹರಡಿಕೊಂಡಿದ್ದ ನನಗೆ ಆ ಬಿಸಿಲಿನ ಶಾಖ ಇನ್ನಷ್ಟು ಹೆಚ್ಚಿಸುವಂತೆ ಮಾಡಿದ್ದು ಈ ಕವಿತೆ.

ಅದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಉರುಳಿಸಿದ ಬಗ್ಗೆ ಇದ್ದ ಕವಿತೆ- ‘ಸರಯೂ ನದಿಯ ತೀರದಲ್ಲಿ’ . ಬರೆದದ್ದು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿನಿ.

ಇಂತಹ ಕವಿತೆಗಳು ಘೋಷಣೆಗಳಾಗಿ ಅಬ್ಬರಿಸಿ ಬೊಬ್ಬಿರಿದುಬಿಡುವ ಅಪಾಯವೇ ಹೆಚ್ಚಿದ್ದ ದಿನಗಳಲ್ಲಿ ಈ ಹುಡುಗಿ ಕವಿತೆ ತಣ್ಣಗೆ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಿತ್ತು.

ಕವಿತೆ ಬರೆದವರು ಯಾರು ಎಂದು ಬಹುಮಾನ ಘೋಷಿಸಿದಾಗ ಗೊತ್ತಾಯಿತು- ಆಕೆ ಪಿ ಚಂದ್ರಿಕಾ

ನಾನು ಪಿ ಚಂದ್ರಿಕಾ ಕವಿತೆಗಳ ಲೋಕಕ್ಕೆ ಹೆಜ್ಜೆ ಹಾಕಿ ಬಂದದ್ದು ಹೀಗೆ. ಆ ನಂತರ ಚಂದ್ರಿಕಾ ಕವಿತೆಗಳು ನನ್ನಿಂದ ತಪ್ಪಿಸಿಕೊಂಡಿಲ್ಲ.

‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ನನ್ನ ಕೈಗಿಟ್ಟದ್ದು ‘ಸೂರ್ಯಗಂಧಿ ಧರಣಿ’ಯನ್ನು .

ಆ ವೇಳೆಗಾಗಲೇ ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಎನ್ನುವ ಕವನ ಸಂಕಲನ ಹಕ್ಕುಚ್ಯುತಿ ಮಂಡಿಸಿತ್ತು. ಸಂಕಲನದ ಶೀರ್ಷಿಕೆಯೇ ನನ್ನನ್ನು ಚಿತ್ ಮಾಡಿ ಹಾಕಿತ್ತು. ಆ ನಂತರದ ಸಂಕಲನ ಸೂರ್ಯಗಂಧಿ.. ತಮ್ಮ ಒಡಲು ಸಂಭ್ರಮಿಸಿ ಪಲ್ಲವಿಸಲು ರೆಡಿ ಆಗುತ್ತಿದ್ದಾಗ ಕಂಡುಂಡ ಭಾವನೆಗಳ ಕೊಲಾಜ್ ಇದು. ಅಲ್ಲಿಂದ ಅವರ ಕವಿತೆಗಳು ನನ್ನೊಳ ಹೊಕ್ಕಾಡಿದೆ

ಪಿ ಚಂದ್ರಿಕಾ ನನಗೆ ಚಂದ್ರಿಕಾ ಅಲ್ಲ ‘ಚಿಟ್ಟಿ’ . ಎರಡನೆಯ ಬಾರಿ ನಾಮಕರಣ ಸಂಭ್ರಮ ಅನುಭವಿಸಿದಾಕೆ. ತೊಟ್ಟಿಲಲ್ಲಿ ಇದ್ದಾಗ ಕೊಟ್ಟ ಹೆಸರು ದೊಡ್ಡವರ ರೀತಿ ದನಿ ಹೊರಡಿಸುತ್ತಿತ್ತು. ಆದರೆ ಹಲವು ಕವಿತಾ ಸಂಕಲನ ಹೊತ್ತು ನಡೆಯುವಾಗ ಈಕೆ ಬದಲಾಗಿದ್ದು ಪುಟ್ಟ ಜಡೆಯ ಚಿಟ್ಟಿಯಾಗಿ

ಇದು ಯಾಕೆ ನನಗೆ ನೆನಪಾಗುತ್ತಿದೆ ಎಂದರೆ ಈ ‘ಚಂದ್ರಿಕಾ ಹಾಗೂ ಚಿಟ್ಟಿ’ ಎರಡರ ನಡುವಿನ ತುಯ್ದಾಟವೆ ಇವರ ಎಲ್ಲಾ ಬರಹಗಳ ಉಸಿರು.

ಚಂದ್ರಿಕಾಗೆ ‘ಚಿಟ್ಟಿ’ ಬೇಕು ಆದರೆ ಲೋಕಕ್ಕೆ ‘ಚಂದ್ರಿಕಾ’ ಬೇಕು ಈ ಎರಡು ತೊಯ್ದಾಟಗಳ ಮಧ್ಯೆ ಇವರ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಮೈತಳೆದು ನಿಂತಿವೆ. ಹಾಗಾಗಿ ಅವರ ಕವಿತೆ ಕಥೆ ಕಾದಂಬರಿ ಎಲ್ಲವೂ ಸೇರಿ ಒಂದೇ ಕೃತಿ

ಚಂದ್ರಿಕಾ ಒಳಗೆ ಆಡುವ ಆ ಬಾಲ್ಯದ ಕಣ್ಣಾ ಮುಚ್ಚಾಲೆಯಾಟ ಅವರನ್ನು ಕಾಡುವ, ನಮ್ಮೊಳಗಿನ ತುಯ್ದಾಟಕ್ಕೂ ಉಸಿರು ನೀಡುವ ಬರಹಗಾರಳನ್ನಾಗಿ ಮಾಡಿಬಿಟ್ಟಿದೆ.

ಚಂದ್ರಿಕಾ ಕವಿತೆಗಳ ಈ ಆಟವೇ ನನ್ನನ್ನು ಅವರ ‘ತಾಮ್ರವರ್ಣದ ತಾಯಿ’ ಬಗ್ಗೆ ಮಾತನಾಡಲು ವೇದಿಕೆಯ ಮೇಲೆ ನಿಲ್ಲುವಂತೆ ಮಾಡಿತ್ತು.

ಆ ಕಾರಣಕ್ಕಾಗಿ ಅವರ ಕವಿತೆಗಳನ್ನು ಬಗೆಯುತ್ತಾ ಹೋದಾಗ ಗೊತ್ತಾಗಿಬಿಟ್ಟಿದ್ದು ಚಂದ್ರಿಕಾ ನನ್ನಂತೆಯೇ ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಗುಳೆ ಎದ್ದು ಹೋದವರು ಅಂತ.

ಆದರೆ ಇಲ್ಲೊಂದು ಟ್ವಿಸ್ಟ್ ಇದೆ- ಅಕ್ಷರ ಲೋಕದಿಂದ ದೃಶ್ಯ ಲೋಕಕ್ಕೆ ಹೋದವರನ್ನು ‘ಕಳೆದು ಹೋದವರು’ ಎಂದು ಕರೆದು ಕೈತೊಳೆದುಕೊಂಡು ಬಿಡುತ್ತದೆ ಬರಹದ ಜಗತ್ತು

ಆದರೆ ಚಂದ್ರಿಕಾ ಛಲಗಾತಿ. ಆಕೆ ಹಾಗೆ ಗುಳೆ ಹೋಗಿ ದೃಶ್ಯ ಜಗತ್ತಿನ ಹೆಡೆಮುರಿ ಕಟ್ಟಿ ಅಕ್ಷರ ಲೋಕಕ್ಕೆ ಎಳೆತಂದು ಬಿಟ್ಟರು. ಅವರ ಯಾವುದೇ ಕವನ ನಿಮ್ಮ ಎದುರಿಟ್ಟುಕೊಳ್ಳಿ. ಅಲ್ಲಿ ಆ ಕವಿತೆಗಳು ದೃಶ್ಯವಾಗಿ ನಿಮ್ಮ ಕಣ್ಣೆದುರಾಡದಿದ್ದರೆ ನನ್ನಾಣೆ.

ಅಷ್ಟೇ ಅಲ್ಲ ದೃಶ್ಯ ಮಾಧ್ಯಮ ಇವರ ಕವನಗಳನ್ನೂ ತಿದ್ದಿದೆ. ಇವರು ಹಿರಿ ತೆರೆಗೆ, ಕಿರು ತೆರೆಗೆ ಬರೆಯಲು ಹೊರಡುವುದಕ್ಕೆ ಮುನ್ನ ಹಾಗೂ ನಂತರದ ಕವಿತೆ ಓದಿ, ಚಂದ್ರಿಕಾ ಬದಲಾಗಿದ್ದು
ಗೊತ್ತಾಗಿಬಿಡುತ್ತದೆ

ಚಂದ್ರಿಕಾ ಏನನ್ನೇ ಆದರೂ ತೀವ್ರವಾಗಿ ಅನುಭವಿಸುವ ಹುಡುಗಿ. ಹಾಗಾಗಿಯೇ ಅವರ ಒಂದೊಂದು ಅನುಭವವೂ ಜೋಡಿ ರೆಕ್ಕೆ ಪಡೆದ ಕವಿತೆಗಳಾಗಿಬಿಡುತ್ತದೆ.

ಚಂದ್ರಿಕಾರ ಇನ್ನೊಂದು ಶಕ್ತಿ ಎಂದರೆ ಅವರು ತನ್ನ ಅನುಭವಕ್ಕೆ, ತನ್ನದೇ ಎನ್ನುವ ಅನುಭವಕ್ಕೆ ಅಕ್ಷರ ಮೂಡಿಸಲು ಇನ್ನೊಬ್ಬರ ಶಬ್ದಗಳ ಹಂಗಿಗೆ ಬೀಳುವುದೇ ಇಲ್ಲ, ತನ್ನದೇ ರೂಪಕಗಳನ್ನು ಕಟ್ಟಿ ಕೊಳ್ಳುತ್ತಾರೆ.

ಅವರ ರೂಪಕಗಳು ಒಂದು ಸುಳಿಯಲ್ಲಿ ನಮ್ಮನ್ನು ಸಾಕಷ್ಟು ಕಾಲ ಸಿಕ್ಕಿಸಿ ತಿರುಗಿಸುತ್ತದೆ. ಸುಳಿಯಲ್ಲಿ ಸಿಕ್ಕ ಅನುಭವಕ್ಕೆ ಮಾತು ಕೊಡುವುದು ಹೇಗೆ? ಅದು ಅನುಭವ ಅಷ್ಟೇ.. ಹಾಗೆ ಚಂದ್ರಿಕಾ ಬರಹಗಳ ಓದಿನ ಕಥೆ. ಅದಕ್ಕೆ ಮಾತು ಕೊಡುವುದು ಕಷ್ಟವೇ

ಚಂದ್ರಿಕಾ ಒಂದೇ ಸಮಯಕ್ಕೆ ಸಂಭಾಳಿಸುವ ಹಲವು ಲೋಕವಿದೆಯಲ್ಲಾ ಅದು ನನಗೆ ಅಚ್ಚರಿ ತರಿಸಿದೆ. ಮನೆ, ಅಕ್ಷರ ಹಾಗೂ ದೃಶ್ಯ ಜಗತ್ತನ್ನು ಅವರು ಒಂದೇ ಕಾಲಕ್ಕೆ ಮಣಿಸುತ್ತಾರೆ.

ಅಷ್ಟೇ ಎಂದುಕೊಂಡಿದ್ದೆ ಅವರು ನನ್ನ ಜೊತೆ ‘ಚಿಟ್ಟಿ’ ಎನ್ನುವ ಹೆಸರನ್ನು ಉಸುರುವವರೆಗೆ.

ಅವರು ನನ್ನೊಡನೆ ಒಂದು ದಿನ ‘ಚಿಟ್ಟಿ ಎಂಬುವವಳಿದ್ದಳು..’ ಎಂದು ಶುರು ಮಾಡಿದಾಗ ನಾನು ಗೊಳ್ಳನೆ ನಕ್ಕು ಒಂದು ಜೋಕ್ ಹೇಳಿದ್ದೆ. ‘ಒಂದೂರಲ್ಲಿ ಒಬ್ಬ ರಾಜ ಇದ್ದನಂತೆ ಅಂದಾಗ ಕೇಳಿಸಿಕೊಳ್ಳುತ್ತಿದ್ದವರು ಹೇಳುತ್ತಾರೆ ‘ಇರ್ಲಿ ಬಿಡು ಏನಿವಾಗ’ ಅಂತ.

ಚಂದ್ರಿಕಾ ‘ಚಿಟ್ಟಿ ಅಂತ ಒಬ್ಬಳಿದ್ದಳು’ ಎಂದಾಗ ನನಗೂ ಹಾಗೆ ಕೇಳಿಸಿತ್ತು ಆ ಕಾರಣಕ್ಕಾಗಿಯೇ ‘ಇರ್ಲಿಬಿಡು ಏನಿವಾಗ..?’ ಎಂದಿದ್ದೆ.

ಆದರೆ ಚಂದ್ರಿಕಾ ಒಳಗೇ ಚಿಟ್ಟಿ ನಡೆದುಕೊಂಡೇ ಬಂದಿದ್ದಾಳೆ ದಶಕಗಳ ಕಾಲ. ಹಾಗಾಗಿಯೇ ಆಕೆ ಚಂದ್ರಿಕಾ. ಒಂದು
ಅದಮ್ಯ ನೆನಪಿನ ಈ ಹುಡುಗಿ ತನ್ನ ನೆನಪಿನ ಓಣಿಯಲ್ಲಿ ನಡೆಯುತ್ತಲೇ ಇದ್ದಾಳೆ.

ನನಗೋ ಡಿಸ್ನಿ ಲ್ಯಾಂಡ್ ನಲ್ಲಿ ಇಂದು ಮತ್ತು ಹಿಂದು ಎರಡನ್ನೂ ಹೊತ್ತುಕೊಂಡು ನಡೆಯುವ ಯಾವುದೋ ಮ್ಯಾಜಿಕ್ ಕನ್ಯೆಯಂತೆ ಚಂದ್ರಿಕಾ ಅನಿಸಿಬಿಡುತ್ತಾರೆ..

ಇವರು ಎಷ್ಟು ತಮ್ಮ ನೆನಪುಗಳನ್ನು ಹೊದ್ದು ನಡೆಯುತ್ತಾರೆ ಎಂದರೆ ಇವರ ಜೊತೆಗಿನ ಒಂದು ಫೋನ್ ಮಾತೂ ಸಹಾ ಮಾತಾಗಿರುವುದಿಲ್ಲ.. ಫೋನಿನ ಆಚೆಗಿರುವ ಕಿವಿ ಲಿಪಿಕಾರ ಗಣೇಶನದ್ದಿರಬೇಕು ಎನ್ನುವಂತೆ ಆಕೆ ವ್ಯಾಸಳಾಗಿಬಿಡುತ್ತಾಳೆ

ನಾನೋ ನೆನಪಿನ ಹಂಗುಗಳಿಂದ ಹೊರ ಹಾರಲು ಕಾಯುತ್ತಿರುವವ. ಅವರೋ ನೆನಪಿನ ಕೋಟೆ ಕಟ್ಟಿ ಬದುಕುತ್ತಿರುವವರು ಹಾಗಾಗಿ ನಾನು ಚಂದ್ರಿಕಾ ಎಂದರೂ, ಚಂದ್ರಿಕಾ ಫೋನ್ ಎಂದರೂ ಒಂದು ಮಾರು ದೂರವೇ ಇರುತ್ತೇನೆ

ಅವರು ಚಿಟ್ಟಿ ಎಂದದ್ದಷ್ಟೇ ಗೊತ್ತು , ನಾನು ನನ್ನೊಳಗಿನ ‘ಡೋರ್ ನಂ ೧೪೨’ ಕಾಲದ ಹುಡುಗನ ಸಂಕಟ, ತಲ್ಲಣಗಳನ್ನ ಹೊರಗೆಳೆದುಕೊಂಡದ್ದೂ ಆಯ್ತು.

ಚಂದ್ರಿಕಾಗೆ ಬರಿ ಎಂದೆ. ಆಕೆ ‘ಯಾವುದೀ ಪ್ರವಾಹವು..’ ಎನ್ನುವಂತೆ ಬರೆಯುತ್ತಲೇ ಹೋದರು. ‘ಅವಧಿ’ ಅವರ ಪ್ರವಾಹಕ್ಕೆ ಲೆಡ್ ಟಿ ವಿ ಯಂತೆ ಕೆಲಸ ಮಾಡಿತು.

ಅವರೂ ಆ ನೆನಪ ಪ್ರವಾಹದಲ್ಲಿ ಕೊಚ್ಚಿಹೋದರೇನೋ.. ಚಿಟ್ಟಿಗೆ ಎದೆ ಗುಬ್ಬಿ ಮೂಡಿದ್ದೇ ತಡ ದಿಢೀರ್ ಅಂತ ಅವಳನ್ನು ಆಚೆ ಹಾಕಿಯೇ ಬಿಟ್ಟರು

ಹೀಗೆ ಚಿಟ್ಟಿ ಕಾದಂಬರಿ ದಿಢೀರ್ ಮುಗಿಯಿತು, ಆದರೆ ಅವರ ನೆನಪುಗಳಲ್ಲ. ಹಾಗಾಗಿ ಚಿಟ್ಟಿ ಇನ್ನೊಂದು ಹೆಸರು ಹೊದ್ದು ಯಾವಾಗ ಬೇಕಾದರೂ ಹೊರಗೆ ಕಾಲಿಟ್ಟಾಳು.

ಚಂದ್ರಿಕಾಗೆ ಬರೆಯುವುದು ಯಾರಿಗೋ ಅಲ್ಲ, ಪ್ರಕಟಿಸಲೂ ಅಲ್ಲ ಅದು ಅವರಿಗೆ ‘ತಾನೊಬ್ಬಳೇ ಆಡುವ ಆಟ’

ಇನ್ನೂ ಪ್ರೆಸ್ ನ ಇಂಕಿನ ಘಮ ಆರದಿರುವಾಗ, ಬಿಸಿ ತಣ್ಣಗಾಗದಿರುವಾಗಲೇ ಚಂದ್ರಿಕಾ ‘ಚಿಟ್ಟಿ’ ಕಾದಂಬರಿಯ ಮೊದಲ ಪ್ರತಿ ನನ್ನ ಕೈಗಿಟ್ಟರಲ್ಲಾ.. ಆಗ ಓಲಾಡಿದ ನೆನಪುಗಳೇ ಇವು..

ಹೌ ಆರ್ ಯು ಗೂಳೂರ್ ಗಣೇಶ್..??

0

ಜಿ.ಎನ್.ಮೋಹನ್


ನಾನು ಇನ್ನೇನು ಇಡೀ ಒಂದು ಗಂಟೆಯ ಭಾಷಣ ಮುಗಿಸಿ ‘ಸೀ ಯು’ ಎನ್ನುವಂತೆ ಮುಖ ಮಾಡಿ ಆಚೆ ಹೊರಡುವ ವೇಳೆಗೆ ಸಭಾಂಗಣದಲ್ಲಿದ್ದ ಎಲ್ಲರೂ “ಸಾರ್ ನೀವು ‘ಜಿ’ ಅಂದ್ರೆ ಏನು ಅಂತಾನೆ ಹೇಳಲಿಲ್ಲ..” ಅಂತ ಒಟ್ಟಾಗಿ ಕೂಗು ಹಾಕುತ್ತಾರೆ.

ಯಾವುದೇ ಪತ್ರಿಕೋದ್ಯಮದ ಕ್ಲಾಸ್ ನಲ್ಲಿ ‘ನಿಮ್ಮ ಹೆಸರು ಏನು?’ ಎನ್ನುವುದು ನಾನು ಕೇಳುವ ಮೊದಲ ಪ್ರಶ್ನೆಯಾದರೆ, ‘ಆ ಹೆಸರು ಯಾಕೆ ಬಂತು’ ಎನ್ನುವುದು ಎರಡನೆಯ ಪ್ರಶ್ನೆ.

‘ಸಾರ್ ಅದು ನಮ್ಮ ಅಪ್ಪ ಅಮ್ಮ ಇಟ್ಟದ್ದು’ ಎನ್ನುವ ಮಾಮೂಲಿ ಉತ್ತರ ಬರುತ್ತದೆ ಎನ್ನುವುದು ನನಗೆ ಖಂಡಿತಾ ಗೊತ್ತು.

ಆಗಲೇ ನಾನು ಸ್ವಲ್ಪ ಗಂಭೀರವಾಗಿ ‘ಅದು ಗೊತ್ತು ಆದರೆ ಅವರು ಅದೇ ಹೆಸರು ಯಾಕೆ ಇಟ್ಟರು’ ಎಂದು ಕೇಳುತ್ತೇನೆ.

ನಂತರ ಸಿಟ್ಟಾದವನಂತೆ ‘ನೀವು ಪತ್ರಿಕೋದ್ಯಮದ ವಿದ್ಯಾರ್ಥಿಗಳು ನಿಮ್ಮಜೊತೆ ೨೦ಕ್ಕಿಂತ ಹೆಚ್ಚು ವರ್ಷದಿಂದ ಪ್ರಯಾಣ ಮಾಡುತ್ತಿರುವ ನಿಮ್ಮ ಹೆಸರನ್ನ ಒಂದು ನಿಮಿಷ ಬಿಡುವು ಮಾಡಿಕೊಂಡು ಮಾತನಾಡಿಸಲಾಗಿಲ್ಲ ಎಂದರೆ ಏನು ಅರ್ಥ? ನೀವು ಪತ್ರಕರ್ತರಾಗಲು ಸಜ್ಜಾಗುತ್ತಿರುವವರಲ್ಲವಾ ಪ್ರತಿಯೊಂದಕ್ಕೂ ಮೂಗು ತೂರಿಸಬೇಕು ತಾನೇ’ ಅಂತ ಗದರುತ್ತೇನೆ.

ಆ ನಂತರ ನೋಡಬೇಕು. ಅವರ ಹೆಸರು ಹಿಡಿದುಕೊಂಡು ಅವರ ತಂದೆ ತಾಯಿಗೆ, ಅವರ ನೆಂಟರಿಗೆ ಫೋನ್ ಮಾಡುತ್ತಾ ಹೆಸರ ಆಟ ಆಡುವುದನ್ನು.

ಇಷ್ಟು ಆಗಿ ಮುಗಿಯಿತು ಎನ್ನುವಾಗ ‘ಸರ್ ಈಗ ನೀವು ಹೇಳಿ ಜಿ ಎನ್ ಮೋಹನ್ ಅನ್ನುವ ಹೆಸರು ಹೇಗೆ ಬಂತು?’ ಎನ್ನುವ ಪ್ರತಿಬಾಣ ಹೂಡುತ್ತಾರೆ.

ಆಗ ನಾನು ನಕ್ಕು ‘ಇದು ಇವತ್ತಿನ ನಿಮ್ಮ ಹೋಮ್ ವರ್ಕ್. ಹುಡುಕೋದು ನಿಮ್ಮ ಕೆಲಸ’ ಅಂತ ಕೈ ಬೀಸಿ ಹೊರಟುಬಿಡುತ್ತೇನೆ.

ಮಾರನೆಯ ಸಲ ಭೇಟಿ ಆದಾಗ ಅವರು ನನ್ನ ಹೆಸರು ಒಂದು ಒಡಪೇನೋ ಎನ್ನುವಂತೆ ಅದರ ಬೆನ್ನು ಹತ್ತಿ ಬಂದಿರುತ್ತಾರೆ.

ಆದರೆ ಎಲ್ಲರಿಗೂ ಬಿಡಿಸಲಾಗದ ಒಗಟಾಗಿ ಹೋಗುವುದು ನನ್ನ ಹೆಸರಲ್ಲಿರುವ ‘ಜಿ’ . ತಲೆಕೆಳಗಾಗಿ ನಿಂತು ಲೆಕ್ಕ ಮಾಡಿದರೂ ಅದರ ಉತ್ತರ ಹುಡುಕಲಾಗಿರುವುದಿಲ್ಲ.

ಹೀಗೇ ಒಂದು ದಿನ ಪಿ ಸಾಯಿನಾಥರನ್ನು ತುಮಕೂರಿಗೆ ದಾಟಿಸಬೇಕಿತ್ತು. ಬರಗೂರು ರಾಮಚಂದ್ರಪ್ಪನವರ ಆಹ್ವಾನದ ಮೇರೆಗೆ ಅವರು ಅಲ್ಲಿ ಇರಬೇಕಿತ್ತು.

ಆ ನಂತರ ಶರ ವೇಗದಲ್ಲಿ ನಾನು ಮಂಗಳೂರು ಸೇರಿಕೊಳ್ಳಬೇಕಾದ ತುರ್ತಿತ್ತು. ಹಾಗಾಗಿ ಮಂಗಳೂರು ರಸ್ತೆಯನ್ನು ಕೂಡಿಕೊಳ್ಳುವ ಕುಣಿಗಲ್ ಹಾದಿಯಲ್ಲಿದ್ದೆ. ಕಾರು ರಭಸದಿಂದ ಮುನ್ನುಗುತ್ತಿತ್ತು.

ಆಗಲೇ ನಾನು ಒಂದಿಷ್ಟು ಜೋರಾಗೇ ‘ನಿಲ್ಸಿ, ನಿಲ್ಸಿ’ ಅಂತ ಕೂಗಿದೆ. ಏನೋ ಭಯಂಕರವಾಯಿತು ಎಂದು ಡ್ರೈವರ್ ಕಾರು ನಿಲ್ಲಿಸಿದ.

ನಾನು ಓಡಿಹೋದವನೇ ರಸ್ತೆಬದಿಯಿದ್ದ ಬೋರ್ಡ್ ನ್ನು ಮುಟ್ಟಿ ಮುಟ್ಟಿ ನೋಡತೊಡಗಿದೆ.

ಆ ವೇಳೆಗೆ ನಮ್ಮ ಗುಬ್ಬಚ್ಚಿ ಸತೀಶ್ ಹಾಗೂ ಅವರ ಕುಟುಂಬ ಅಲ್ಲಿಗೆ ಬರಬೇಕೇ? . ಅವರಿಗೂ ಡೌಟು. ಯಾವುದೋ ಬೋರ್ಡ್ ತೊಳೆಯುವಂತೆ ನಿಂತಿರುವ ‘ಇವರು ಅವರೇನಾ..?’ ಅಂತ.

ನಾನು ದೊಡ್ಡದಾಗಿ ನಕ್ಕು ‘ಇದು ನನ್ನ ಹೆಸರಿನಲ್ಲಿದೆಯಲ್ಲಾ ಜಿ ಅದರ ಬೊರ್ಡು’ ಅಂದೆ.

‘ಯುರೇಕಾ’ ಎನ್ನುವಂತೆ ಅವರೂ ನನ್ನ ಜೊತೆ ಇದ್ದವರೂ ನನ್ನತ್ತ ನೋಡಿದರು.

ಯಸ್, ನನ್ನ ಹೆಸರಿನಲ್ಲಿರುವ ‘ಜಿ’ ಅಂದರೆ ಇನ್ನೇನೂ ಅಲ್ಲ ‘ಗೂಳೂರು’.

ಇದನ್ನು ಕೇಳಿದವರು ಯಾರನ್ನೇ ನೋಡಿ ‘ಓಹ್ ಗೂಳೂರಾ..!’ ಅಂತ ಒಂದು ಸಲ ನನ್ನನ್ನ ಆಪಾದಮಸ್ತಕ ನೋಡಿ ಒಂದು ಹುಸಿ ನಗೆಯನ್ನು ಬೀರಿಯೇ ಬೀರುತ್ತಾರೆ.

ಯಾಕೆಂದರೆ ಗೂಳೂರು, ಗಣೇಶನಿಗೆ ಹೆಸರುವಾಸಿ. ‘ಬಿಡು ಗುರೂ ನೀನು ಗೂಳೂರಿನವನು ಅಂತ ಬಿಡಿಸಿಹೇಳಬೇಕಾ’ ಅಂತ ನಾನೇ ಗಣೇಶ ಎನ್ನುವಂತೆ ಮುಖ ಮಾಡುತ್ತಾರೆ.

ಗೂಳೂರು ಗಣೇಶ ನ ಖದರ್ ಬೇರೆಯೇ. ಎಲ್ಲಾ ಕಡೆ ಗಣೇಶನ ಹಬ್ಬದ ದಿನ ಗಣೇಶ ಸ್ಥಾಪನೆ ಆದರೆ ಇಲ್ಲಿ ಗಣೇಶನ ಕೆಲಸ ಶುರುವಾಗುವುದೇ ಆ ಹಬ್ಬದ ದಿನ.

ಅದೂ ದೇಗುಲದ ಒಳಗೆ ಮೂರ್ತಿ ನಿರ್ಮಾಣ ಶುರು ಮಾಡುತ್ತಾರೆ. ಅದು ಎಷ್ಟು ಬೆಳೆಯುತ್ತಾ ಹೋಗುತ್ತೆ ಎಂದರೆ ದೇಗುಲದ ಬಾಗಿಲಿನಿಂದ ಹೊರಬರಲಾಗದಷ್ಟು. ಹಾಗಾಗಿ ಗಣೇಶನ ಕಿರೀಟವನ್ನು ಬೇರೆ ಮಾಡಿ ಕೂರಿಸುತ್ತಾರೆ. ಕಿರೀಟ ತೆಗೆದರಷ್ಟೇ ಆತ ಹೊರಬರಲು ಸಾಧ್ಯ.

ಈ ಊರಲ್ಲಿ ಗಣಪತಿ ಯಾಕೆ ಬಂದ ಎಂದು ಕೇಳಿದರೆ ಊರಲ್ಲಿಇರುವ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ಕಥೆ ಇದೆ. ಅದು ಇರಲಿ ಬಿಡಿ ಆದರೆ ‘ಬೆಂಗಳೂರು ಬಣ್ಣಕ್ಕೆ, ಗುಬ್ಬಿ ಸುಣ್ಣಕ್ಕೆ, ಗೂಳೂರು ಗಣೇಶನಿಗೆ’ ಹೆಸರುವಾಸಿ.

ಗಣೇಶನನ್ನ ನೀರಿಗೆ ಬಿಟ್ಟರೂ ಅವನ ಕಿರೀಟವನ್ನು ಮಾತ್ರ ಬಿಡುವುದಿಲ್ಲ. ಅದನ್ನ ಮೆರವಣಿಗೆಯಲ್ಲಿ ತಂದು ಮತ್ತೆ ದೇವಸ್ಥಾನದಲ್ಲಿ ಸ್ಥಾಪಿಸುತ್ತಾರೆ. ಮತ್ತೆ ಮುಂದಿನ ಹಬ್ಬದವರೆಗೆ ಕಿರೀಟಕ್ಕೆ ಪೂಜೆ.

ಯಾಕೆ ಈ ಊರಲ್ಲಿ ಗಣೇಶ ಅಷ್ಟೆತ್ತರ? ಅಂತ ಊರವರನ್ನೇ ಒಮ್ಮೆ ಕೇಳಿದ್ದೆ. ಅವರು ಸಿಂಪಲ್ಲಾಗಿ ಊರವರ ವಿಶ್ವಾಸ ಎಲ್ಲಾ ಸೇರಿದರೆ ಗಣೇಶ ಅಷ್ಟು ಎತ್ತರ ಆಗ್ತಾನಪ್ಪ ಅಂದರು.

‘ಓಹೋ ಅಪ್ಪಡಿ..’ ಅಂದುಕೊಂಡು ಸುಮ್ಮನಾದೆ.

ಅದಿರಲಿ ಪುಟ್ಟಣ್ಣ ಕಣಗಾಲ್ ಗೂ ಈ ಗೂಳೂರು ಗಣೇಶನಿಗೂ ಒಂದು ಕನೆಕ್ಷನ್ ಇದೆ.

ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ‘ಪಡುವಾರಳ್ಳಿ ಪಾಂಡವರು’ ಸಿನೆಮಾದಲ್ಲಿ ‘ಈ ಗುಡೇಮಾರನಹಳ್ಳಿ ಗಿಣಿ ಗಮ್ಮತ್ತು ಆ ಗೂಳೂರು ಗಣೇಶನಿಗೂ ಗೊತ್ತಿಲ್ಲ’ ಅಂತ ಒಂದು ಡೈಲಾಗ್ ಬರುತ್ತೆ.

ಅದು ಬಂದದ್ದೇ ಬಂದದ್ದು. ನೀವು ನೋಡಬೇಕಿತ್ತು. ಊರವರೆಲ್ಲಾ ಗಾಡಿ ಕಟ್ಟಿಕೊಂಡು ಹಿಂಡು ಹಿಂಡಾಗಿ ಹೋಗಿ ಆ ಸಿನೆಮಾ ನೋಡಿದ್ದರು.

ಆ ಕಡೆ ಗುಡೇಮಾರನಹಳ್ಳಿಯವರೂ ಗಾಡಿ ಹತ್ತಿರಬೇಕು…!!

ವಿಜಯಕ್ಕ ತಮ್ಮ ಋಣ ಸಂದಾಯ ಮಾಡಿಯೇ ಬಿಟ್ಟರು…!!

0

ಜಿ.ಎನ್.ಮೋಹನ್


ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು ‘ಅಜ್ಜಿಮನೆ’ಗೆ ಎಂದೆ.

‘ಅಜ್ಜಿಮನೆ’ ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು.

ತಲೆಯ ಮೇಲೆ ಪ್ರಭಾವಳಿ ಇದ್ದವರ ನ್ಯೂಸ್ ಗಳಲ್ಲಿ ಮಾತ್ರ ಇರಬೇಕಾದ ನಾನು ಇದೇನಿದು ‘ಅಜ್ಜಿಮನೆ’ಗೆ ಎಂಬಂತೆ ನೋಡಿದರು.

ನಾನು ಅಜ್ಜಿಮನೆಗೆ ಹೋಗಲು ಇದ್ದ ಕಾರಣವೇ ಅದು.. ಅವರಿಗೆ ತಲೆಯಲ್ಲಿ ಕೋಡು ಇರಲಿಲ್ಲ, ಪ್ರಭಾವಳಿಯೂ ಇರಲಿಲ್ಲ ಎನ್ನುವುದು..

ನಾನು ಅಜ್ಜಿಮನೆಗೆ ಹೋಗದೆ ಇದ್ದರೆ ಅವರು ಏನೇನೂ ಕಳೆದುಕೊಳ್ಳುತ್ತಿರಲಿಲ್ಲ. ಆದರೆ ನಾನು ಬದುಕಿನಲ್ಲಿ ಶಾಲ್ಮಲೆಯಂತೆ ಇನ್ನೂ ನಿಷ್ಕಲ್ಮಶ ಪ್ರೀತಿ ಹರಿಯುತ್ತಿದೆ ಎನ್ನುವ ಸತ್ಯವನ್ನು ಕಂಡುಕೊಳ್ಳದೆ ಹೋಗುತ್ತಿದ್ದೆ.

ಅಜ್ಜಿಮನೆ ಎನ್ನುವುದು ‘ವಿಜಯಕ್ಕ’ ಎಂದೇ ಎಲ್ಲರಿಂದ ಕರೆಯಲ್ಪಡುವ ವಿಜಯಾ ಅವರ ಕೂಸು.

ನಗರದ ದಾವಂತದಲ್ಲಿ ಸಿಕ್ಕು ಒದ್ದಾಡುವವರ ಮಕ್ಕಳಾದರೂ ನೆಮ್ಮದಿಯಿಂದ ಅಜ್ಜಿಮನೆಯಲ್ಲಿರುವಂತೆ ಇರಲಿ ಎಂದು ಹುಟ್ಟುಹಾಕಿದ ತಾಣ ಅದು.

ಇದು ಇದೆ ಎಂದು ಗೊತ್ತಾದ ತಕ್ಷಣವೇ ನಾನು ಆಗ ನಾನು ರೂಪಿಸುತ್ತಿದ್ದ ‘ಹಾಯ್ ಬೆಂಗಳೂರು’ ಸರಣಿಗಾಗಿ ಕಾರು ಏರಿಯೇಬಿಟ್ಟಿದ್ದೆ.

ಅಜ್ಜಿಮನೆ ಒಳಹೊಕ್ಕಾಗ ಎಷ್ಟೊಂದು ಚಿಲಿಪಿಲಿ ಹಕ್ಕಿಗಳು. ಅವರ ಜೊತೆ ಆಡುತ್ತಾ ಹಾಡುತ್ತಾ ಗಂಟೆಗಟ್ಟಲೆ ಕಳೆದುಬಿಟ್ಟೆ.

ಹೀಗೆ ಅಲ್ಲಿ ಕೈಕುಲುಕಿದ್ದ ಅಕ್ಕ ಮತ್ತೆ ಕಾಣಿಸಿಕೊಂಡಿದ್ದು ಒಂದಷ್ಟು ವರ್ಷಗಳ ಹಿಂದೆ ಫೇಸ್ ಬುಕ್ ನಲ್ಲಿ.

ಈಗ ನೋಡಿದರೆ ವಿಜಯಕ್ಕ ಚಾರಣಕಾರ್ತಿ. ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ.. ಎಲ್ಲೆಂದರಲ್ಲಿ ಅವರು ನಿಂತ ಫೋಟೋಗಳೇ. ಇನ್ನೊಂದಷ್ಟು ದಿನ ಬಿಟ್ಟು ನೋಡಿದರೆ ಆಕೆ ಛಾಯಾಗ್ರಾಹಕಿ.

ಅವರ ಕಣ್ಣು ನಾವು ನೋಡದ ಅಂಶಗಳ ಮೇಲೆ ನೆಟ್ಟಿದ್ದು ತಕ್ಷಣ ಗೊತ್ತಾಗಿ ಹೋಗುತ್ತಿತ್ತು.

ಇಂತಹ ವಿಜಯಕ್ಕ ಫೇಸ್ ಬುಕ್ ನಲ್ಲಿ ತಮ್ಮ ಆತ್ಮಕಥೆಯ ತುಣುಕುಗಳೇನೋ ಎನ್ನುವಂತೆ ಒಂದಷ್ಟು ತುಣುಕನ್ನು ಬರೆಯಲಾರಂಭಿಸಿದರು.

ಅವು ನನ್ನನ್ನು ಇನ್ನಿಲ್ಲದಂತೆ ತಾಕಿತು. ಹಾಗಾಗಿ ‘ಅವಧಿ’ಯಲ್ಲಿಯೂ ಕಾಣಿಸಿಕೊಂಡಿತು.

ಆ ನಂತರ ಒಂದು ದಿನ ಇದ್ದಕ್ಕಿದ್ದಂತೆ ಫೋನ್ ಮಾಡಿದ ವಿಜಯಕ್ಕ ನಾನೊಂದು ಶಾರ್ಟ್ ಫಿಲಂ ಮಾಡಿದ್ದೇನೆ ಎಂದರು.

‘ಹೌದಾ..!’ ಎಂದು ನಾನು ಆಶ್ಚರ್ಯದಿಂದ ಬಾಯಿ ತೆಗೆವ ಮುನ್ನವೇ ಕನ್ನಡ, ತುಳು. ಕೊಂಕಣಿ ಮೂರು ಭಾಷೆಯಲ್ಲಿ ಎಂದರು. ನಾನು ನಿಜಕ್ಕೂ ಬೆರಗಾದೆ.

‘ಒಂದು ಮುಷ್ಠಿ ಆಕಾಶ’ ಕಿರುಚಿತ್ರ ಬಿಡುಗಡೆ ಎಂದಾಗ ನಾನು ವಿಜಯಕ್ಕನ ಬೆನ್ನಿಗೆ ನಿಂತುಬಿಟ್ಟೆ.

ಅಷ್ಟು ಉತ್ಸಾಹದ ಬುಗ್ಗೆಯ ಚಿತ್ರವೊಂದು ಹಾಗೆ ಸದ್ದಿಲ್ಲದೇ ಒಂದಷ್ಟು ಜನ ನೋಡಿ ಮುಗಿದುಹೋಗಬಾರದು ಎನ್ನುವುದಷ್ಟೆ ನನ್ನ ಮನಸ್ಸಿನಲ್ಲಿದ್ದದ್ದು.

ಆ ನಂತರ ನೋಡಿದರೆ ಆ ಅದೇ ವಿಜಯಕ್ಕ ಅಡಿಗೆ ಮನೆಯಲ್ಲಿದ್ದಾರೆ. ಅರೆರೆ..!! ಎಂದು ನನ್ನ ಕಣ್ಣು ನಾನೇ ನಂಬದೆ ಅವರ ಪ್ರೊಫೈಲ್ ತಡಕಾಡಿದರೆ ಘಮ್ಮನೆಯ ವಾಸನೆ.

ಏನೆಂದು ನೋಡಿದರೆ ಕೋವಿಡ್ ನಲ್ಲಿ ಎಲ್ಲರೂ ಅಕ್ಷರಶಃ ಕುಸಿದು ಕೂತಿದ್ದಾಗ ಯಾವಾಗಲೂ ಚಾರಣ, ಛಾಯಾಗ್ರಹಣ ಎಂದು ತಿರುಗುತ್ತಿದ್ದ ಅಕ್ಕ ಒಂದಿಷ್ಟೂ ಕಂಗೆಡದೆ ಕುಸಿಯದೆ ಸೌಟು ಹಿಡಿದು ಅಡುಗೆ ಮನೆ ಹೊಕ್ಕಿಯೇಬಿಟ್ಟಿದ್ದರು.

‘ವಿಜ್ಜಿಸ್ ಕಿಚನ್’ ಎನ್ನುವ ಹೆಸರಲ್ಲಿ ಬೇಕಾದವರಿಗೆ ಸಿಹಿ ತಿಂಡಿ ಮಾಡಿ ಕಳಿಸುತ್ತಾ, ಎಲ್ಲರ ಬಾಯಲ್ಲೂ ಸಿಹಿಯೇ ಇರುವಂತೆ ನೋಡಿಕೊಳ್ಳುತ್ತಾ ಉತ್ಸಾಹದ ಬುಗ್ಗೆಯಾಗಿದ್ದರು.

ನಾನು ಮತ್ತೊಮ್ಮೆ ನನ್ನ ಸಲಾಂ ಅರ್ಪಿಸಿದೆ.

ಇದು ನನ್ನ ಮನಸ್ಸಲ್ಲಿತ್ತು. ‘ಅವಧಿ’ ಹೊಸ ರೆಕ್ಕೆ ಪಡೆದು ಹಾರಲು ಸಜ್ಜಾಗುವಾಗ ‘ನಿಮ್ಮ ಕಿಚನ್ ನ ಜಾಹೀರಾತೊಂದನ್ನು ‘ಅವಧಿ’ಯಲ್ಲಿ ಪ್ರಕಟಿಸುತ್ತೇನೆ. ಆದರೆ ಉಚಿತವಾಗಿ’ ಎನ್ನುವ ಕಂಡೀಷನ್ ಮಂಡಿಸಿದೆ.

ಆಗ ಅವರು ಬರೆದದ್ದು ‘ಮೋಹನ್, ಕೆಟ್ಟ ಸುದ್ದಿಯನ್ನು ಹೇಗೆ ಎದುರಿಸಬೇಕು ಎಂದು ನನ್ನ ಮನಸ್ಸಿಗೆ ರೂಢಿಯಾಗಿ ಹೋಗಿದೆ. ಆದರೆ ಒಳ್ಳೆಯ ಸಂಗತಿಯನ್ನು ಎದುರಿಸುವುದು ಅದಕ್ಕೆ ಗೊತ್ತಿಲ್ಲ’ ಅಂತ. ನಾನೂ ಮೌನವಾದೆ.

ಆಮೇಲೆ ವಿಜ್ಜಿಸ್ ಕಿಚನ್ ನ ‘ರಾಯಲ್ ಸ್ವೀಟ್’ ಜಾಹೀರಾತು ‘ಅವಧಿ’ಯೊಳಗೆ ಬಂತು.

ಅಕ್ಕ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದರು. ಅವರಿಗೆ ಸಿಕ್ಕ ಪ್ರೋತ್ಸಾಹದಿಂದಲೋ ಏನೋ ಇದಕ್ಕೆ ಹಣ ತೆಗೆದುಕೊಳ್ಳದೆ ನಾನು ಬಿಡುವುದಿಲ್ಲ ಎಂದು ಹಠ ಹಿಡಿದರು.

‘ನನ್ನ ಹಠಕ್ಕೇನು ಕಡಿಮೆ ಆಯಸ್ಸಿದೆಯೇ’.. ನಾನು ಅದು ಹೇಗೆ ಸಾಧ್ಯ ಎಂದು ಕೂತೆ.

‘ಅವಧಿ’ಯ ತಂಡವೆಲ್ಲವೂ ಗಲ ಗಲ ಸದ್ದು ಮಾಡುತ್ತಾ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪಾರ್ಸೆಲ್ ಒಂದು ಒಳಗೆ ಇಣುಕಿತು.

ಏನು ಎಂದು ತೆರೆದು ನೋಡಿದರೆ ಅಚ್ಚ ತುಪ್ಪದಲ್ಲಿ ಕರಿದ ಬಾದಾಮ್, ಪಿಸ್ತಾ ಸೇರಿದ್ದ ಸಿಹಿ ತಿಂಡಿಯೊಂದು ಕಣ್ಣು ಹೊಡೆಯುತ್ತಾ ಕುಳಿತಿತ್ತು.

ಅದರ ಪ್ಯಾಕಿಂಗ್ ರೀತಿಯಲ್ಲಿಯೇ ಇದು ‘ರಾಯಲ್ ಸ್ವೀಟ್ಸ್’ನಿಂದ ನೇರ ಬಂದದ್ದು ಎಂದು ಗೊತ್ತಾಗಿ ಹೋಗಿತ್ತು.

ವಿಜಯಕ್ಕ ತಮ್ಮ ಋಣ ಸಂದಾಯ ಮಾಡಿಯೇ ಬಿಟ್ಟಿದ್ದರು…!!

ಒಗ್ಗೂಡಿದರೆ ದೇಶ ಅಭಿವೃದ್ಧಿ; ಅನಂತಪ್ಪ ಬರಗೂರುಪಾಳ್ಯ

Publicstory


ತುಮಕೂರು: ವಿವಿಧ ಜಾತಿ, ಧರ್ಮ, ಪಂಥಗಳಿಗೆ ಸೇರಿದ ಭಾರತೀಯರೆಲ್ಲರೂ ಭಾವೈಕ್ಯತೆಯಿಂದ ಒಗ್ಗೂಡಿ ಕೆಲಸ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿ ಪಥದ ಕಡೆ ಕೊಂಡೊಯ್ಯಬೇಕಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಅನಂತಪ್ಪ ಬರಗೂರುಪಾಳ್ಯ ಕರೆ ನೀಡಿದರು.

ನಗರದ ನೆಹರು ಯುವ ಕೇಂದ್ರ ಕಚೇರಿಯಲ್ಲಿ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ತುಮಕೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಜಯಂತಿ ಅಂಗವಾಗಿ ನಡೆದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ಸಮಾನತೆ, ಸಹಬಾಳ್ವೆ ಮತ್ತು ಸಹೋದರತ್ವವನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲಾ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದತೆ ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆ ಮೂಡಿಸಿ ಹಿಂಸಾಚಾರ ತ್ಯಜಿಸುವಂತೆ ಮಾಡುವುದು ಸದ್ಭಾವನ ದಿನದ ಉದ್ದೇಶವಾಗಿದೆ ಎಂದರು.

ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
‘ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ. ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್ ವೈ ವಿ ಗಳಾದ ಮಾರುತೇಶ್ ಕಾಳಾಪುರ, ಉಮೇಶ್, ದಿವ್ಯ, ರಶ್ಮಿ, ರವಿಕುಮಾರ್, ವಿಜಯ್ ಕುಮಾರ್ ಜಿ.ಆರ್,ಚಂದನ್ ಡಿ ಎನ್, ಕುವೆಂಪು, ಲೆಕ್ಕಾಧಿಕಾರಿ ಶೇಖರ್, ಸಿಬ್ಬಂದಿ ರಾಮಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

ಮದಲಿಂಗನ ಕಣಿವೆಯಲ್ಲಿ ತಿರಂಗ ಹಾರಾಟ

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿಯ ಹೆಸರಾಂತ ಪ್ರಸಿದ್ಧ ಪ್ರವಾಸಿ ತಾಣವಾದ ಮದಲಿಂಗನ ಗುಡ್ಡದ ಮೇಲ್ಬಾಗದಲ್ಲಿ ಚಿಕ್ಕನಾಯಕನಹಳ್ಳಿ ಹೊಸಬೀದಿ ಹುಡುಗರು ಸ್ವತಂತ್ರ ದಿನಾಚರಣೆಯನ್ನು ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ
ಬಾನು,ಹಿಮವಂತ್, ಮೋಹನ್ ಮತ್ತು ಸಂಗಡಿಗರು ಇದ್ದರು.