Tuesday, May 5, 2026
Google search engine
Home Blog Page 180

ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ…

ದೀಪು ಬೋರೇಗೌಡ


ಸ್ವಾತಂತ್ರ್ಯ ದಿನಾಚರಣೆ ಬರುತ್ತಿದ್ದಂತೆ ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಇಂದಿಗೂ ಸರಿಯಾದ ರೀತಿಯಲ್ಲಿ ಬಾಬಾ ಸಾಹೇಬರನ್ನ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾದೆವಲ್ಲ ಎಂಬ ನೋವು ಇಂದಿಗೂ ಕಾಡುತ್ತದೆ.

ಬಾಬಾ ಸಾಹೇಬರ ದೃಷ್ಟಿಯಲ್ಲಿ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಎಂದರೇನು..? ಹಾಗಿದ್ದ ಮೇಲೆ ಯಾವುದರ ವಿರುದ್ಧ ಹೋರಾಟ ಮಾಡಬೇಕಿತ್ತು..? ಅದನ್ನು ಯಾರು ಮಾಡಿದ್ದಾರೆ ? ಎಂಬುದು ಪ್ರಶ್ನೆಯಾಗೇ ಉಳಿದಿದೆ.

ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಜೀವತ್ಯಾಗ, ಬಲಿದಾನಗಳ ಜೊತೆಗೆ ಡಾ. ಬಿ.ಆರ್ ಅಂಬೇಡ್ಕರ್ ಎಂಬ ಮಹಾನ್ ಮಾನವತಾವಾದಿಯ ಶ್ರೇಷ್ಠ ಜ್ಞಾನ, ಸಮಯಪ್ರಜ್ಞೆ, ಚಿಂತನೆಗಳಿಂದಷ್ಟೆ ಸ್ವಾಭಿಮಾನದ, ಆತ್ಮಗೌರವದ ಸ್ವಾತಂತ್ರ್ಯ ಸಿಕ್ಕಿದೆ ಎಂದರೇ ತಪ್ಪಾಗಲಾರದು. ಯಾಕೆಂದರೆ ಬಾಬಾ ಸಾಹೇಬರ ದುಂಡುಮೇಜಿನ ಸಮ್ಮೆಳನದ ಪ್ರಜ್ಞಾಪೂರ್ವಕ ಮಾತುಗಳು ಇಂದಿಗೂ ದೇಶವನ್ನು ಸುಭದ್ರವಾಗಿಟ್ಟಿದೆ.

ಬಾಬಾ ಸಾಹೇಬರ ದೃಷ್ಟಿಯಲ್ಲಿ ಸ್ವಾತಂತ್ರ್ಯ ಎಂದರೆ ಭಾರತದ ಪ್ರತಿಯೊಬ್ಬ ನಾಗರೀಕನ ಗೌರವಯುತ, ನಿರ್ಭೀತ, ಸ್ವಾಭಿಮಾನದ, ಶೋಷಣೆಮುಕ್ತ ಜೀವನವೇ ಆಗಿತ್ತು. ಇದನ್ನೆ ತಮ್ಮ ಜೀವಿತಾವಧಿಯುದ್ದಕ್ಕೂ ಸಾರಿ ಸಾರಿ ಹೇಳಿದರು.

ಸ್ವಾತಂತ್ರ್ಯ ಬೇಕಿರುವುದು ಭೌಗೋಳಿಕವಾಗಿ ಅಂದರೆ ಈ ದೇಶದ ಭೂಮಿಗೆ & ದೇಶದ ಗಡಿಗಲ್ಲಾ, ನಿಜವಾದ ಸ್ವಾತಂತ್ರ್ಯ ಬೇಕಿರುವುದು ಜನರಿಗೆ ಎಂದು ಬ್ರಿಟಿಷ್ ನೆಲದಲ್ಲಿ ನಿಂತು ದುಂಡು ಮೇಜಿನ ಸಮ್ಮೇಳನಗಳಲ್ಲಿ ಅವರೆದುರು, ಅಲ್ಲಿನ ವ್ಯವಸ್ಥೆಯ ವಿರುದ್ಧ ಗುಡುಗಿದ ನಿಜ ರಣಕಲಿ, ಸ್ವಾಭಿಮಾನಿ, ಭಾರತಾಂಬೆಯ ಹೆಮ್ಮೆಯ ಪುತ್ರ ಡಾ. ಬಾಬಾ ಸಾಹೇಬರು.

ದೇಶವೆಂದರೇ ಮಣ್ಣಲ್ಲಾ, ಗಡಿಯಲ್ಲ, ದೇಶವೆಂದರೇ ಆ ದೇಶದ ಜನ, ಜನರ ಸಂಸ್ಕೃತಿ, & ಅವರುಗಳ ಹಿತ. ಅಂತಹ ಜನಗಳ ಹಿತ ಕಾಪಾಡುವುದೆ ನಿಜ ಸ್ವಾತಂತ್ರ್ಯ ಎಂದು ಭಾವಿಸಿ ಅಂತಹ ಹಿತಕ್ಕಾಗಿ ಕಾದಾಡಿದ ಮದಗಜ, ಮಹಾದೇಶಭಕ್ತ ಭೀಮರಾವ್ ಅಂಬೇಡ್ಕರ್.

ಭಾರತ ದೇಶದ ಜನಗಳನ್ನ ಸಾವಿರಾರು ವರ್ಷಗಳ ಕಾಲ ಅಮಾನವೀಯವಾಗಿ ಶೋಷಣೆ ಮಾಡುತ್ತಾ ಅದೆಷ್ಟೊ ದಾರಿದ್ರ್ಯ ಪಿಡುಗುಗಳನ್ನು ಮೇಲೇರಿ, ವರ್ಣಸಹಿತ ಜಾತಿ ವ್ಯವಸ್ಥೆ ಮಾಡಿಕೊಂಡು ತಿನ್ನಲು ಅನ್ನವನ್ನು, ಕುಡಿಯಲು ನೀರನ್ನು, ಓಡಾಡೋ ರಸ್ತೆಯನ್ನು, ಓದುವ ಅಕ್ಷರವನ್ನು, ಭೂ ಒಡೆತನವನ್ನು, ರಾಜ್ಯಾಧಿಕಾರವನ್ನು, ಕನಿಷ್ಟ ಮಾನವೀಯ ಮೌಲ್ಯವನ್ನು ತೋರದೇ, ಮೃಗಿಯ ರೀತಿಯಲ್ಲಿ ನಡೆಸಿಕೊಂಡ ಪ್ರಪಂಚದ ಯಾವ ದೇಶದಲ್ಲೂ ಇರದ ಒಂದು ರೀತಿಯ ವಿಭಿನ್ನ ವರ್ಗ ಈ ದೇಶದಲ್ಲಿ ತಮ್ಮದೇ ಆದ ವ್ಯವಸ್ಥೆಯ ಬೇಲಿ ಹಾಕಿಕೊಂಡು, ಮನುಷ್ಯರ ರಕ್ತ ಹೀರಿ ಬಡಕಲು ದೇಹವನ್ನು ಬಿಟ್ಟಿತ್ತಷ್ಚೆ.

ಬಡಕಲು ದೇಹ, ಅಸಹಾಯಕತೆಯ ನೋವು, ಹಸಿವಿನ ಕೂಗು, ಅಸಮಾನತೆಯ ಕೂಪ, ಮಹಿಳೆಯರ ಶೋಷಣೆ, ದಲಿತರ ಶೋಷಣೆ, ಅಸಹಾಯಕರ ಮೇಲಿನ ದೌರ್ಜನ್ಯ, ನಿರ್ಗತಿಕರ ಸೂರು, ಆರೋಗ್ಯ, ವಿದ್ಯೆ ಇಷ್ಟೆಲ್ಲ ವಿಷಯಗಳ ಬಗ್ಗೆ ರಾಷ್ಟ್ರೀಯವಾದಿಗಳೆಂದು ಗುರುತಿಸಿಕೊಂಡವರು ಯಾವುದೇ ಚಕಾರವೆತ್ತದೇ, ಚಕಾರ ಎತ್ತಿದರೂ ಜಾಣಮೌನವಹಿಸುತ್ತಾ ಬಂದರು. ಬರೀಯ ಭೌಗೋಳಿಕ & ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದ ರಾಷ್ಟ್ರೀಯವಾದಿಗಳ ಗುಂಪೊಂದೆಡೆಯಾದರೇ ಭಾರತೀಯರ ಆಂತರಿಕ ಸ್ವಾತಂತ್ರ್ಯಕ್ಕಾಗಿ & ಬ್ರಿಟೀಷರಿಂದಲೂ ಸ್ವಾತಂತ್ರ್ಯಕ್ಕಾಗಿ ನೇರ ವಾಗ್ವಾದಕ್ಕಿಳಿಯುತ್ತಿದ್ದ ಏಕೈಕ ವ್ಯಕ್ತಿ, ಭಾರತದ ಶಕ್ತಿ ಬಾಬಾಸಾಹೇಬರು.

ಎಷ್ಟೊ ಬಾರಿ ಬಾಬಾ ಸಾಹೇಬರ ಜೀವಕ್ಕೆ ಆಪತ್ತಿದ್ದರೂ ದೃತಿಗೆಡಲಿಲ್ಲ. ತಮ್ಮ ಎದುರಾಳಿಗಳಿಗೆ, ಗುಲಾಮಗಿರಿ ಸಂಸ್ಕೃತಿ ಪೋಷಿಸುವ ಮನಸ್ಥಿತಿಯ ಸಂಪ್ರದಾಯವಾದಿಗಳಿಗೆ ಮಾತಿನಲ್ಲೇ ಚಾಟಿ ಬೀಸುತ್ತಿದ್ದರು. “ಯಾರು ನನ್ನನ್ನು ಮಣ್ಣಿನಲ್ಲಿ ಹೂಳಲು ಅನೇಕ ಬಾರಿ ಪ್ರಯತ್ನಿಸಿದರೋ, ಅವರಿಗೆ ಗೊತ್ತಿಲ್ಲ ನಾನೊಂದು ಬೀಜವೆಂದು” ನೀವು ನನ್ನನ್ನು ಮಣ್ಣಿನಲ್ಲಿ ಹೂತಷ್ಟು ನನ್ನ ಜನಗಳಿಗಾಗಿ ನಾನು ಗಿಡವಾಗಿ, ಮರವಾಗಿ, ಹೆಮ್ಮರವಾಗುತ್ತೆನೆಂದು ಗುಡುಗುತ್ತಿದ್ದರು.

ಮಾನವೀಯ ಮೌಲ್ಯಗಳ ಭಂಡಾರವಾಗಿದ್ದ, ತನ್ನ ಜೀವಮಾನವಿಡಿ ತನ್ನ ವೈಯಕ್ತಿಕ ಜೀವನವನ್ನೆ ತ್ಯಾಗ ಮಾಡಿ, ತನ್ನುಸಿರಿನ ಕೊನೆವರೆಗೂ ಈ ದೇಶದಲ್ಲಿ ಸಮಸಮಾಜದ ಕನಸು ಕಂಡು, ದೇಶದೊಳಗಿನ ಆಂತರಿಕ ಸ್ವಾತಂತ್ರ್ಯದಿಂದಿಡಿದು ಬ್ರಿಟೀಷರಿಂದಲೂ ಸ್ವಾತಂತ್ರ್ಯಕ್ಕಾಗಿ ಏಕಕಾಲದಲ್ಲಿ ಸಮಯಪ್ರಜ್ಞೆ ಮೆರೆದು ತಮ್ಮ ಜ್ಞಾನ & ಲೇಖನಿಯಿಂದ ಹೋರಾಡಿ ದೇಶಕ್ಕೆ ಅಕ್ಷರಸಹಿತ ನಿಜ ಸ್ವಾತಂತ್ರ್ಯ ನೀಡಿದವರು ಡಾ. ಬಿ.ಆರ್ ಅಂಬೇಡ್ಕರ್ ರವರು.

ಹಲವು ಧರ್ಮ, ಜಾತಿಯ ಹೆಸರಲ್ಲಿದ್ದ ದೇಶವಾಸಿಗಳಿಗೆ
“WE ARE INDIANS, FIRSTLY & LASTLY” ಎನ್ನುವ ಘೋಷವಾಕ್ಯದ ಮೂಲಕ ಗುಂಪುಗಳಾಗಿ ಚದುರಿ ಹೋಗಿದ್ದ ಭಾರತ ದೇಶಕ್ಕೆ “ರಾಷ್ಟ್ರೀಯತೆಯ” ಹೊಸ ವ್ಯಾಖ್ಯಾನ ನೀಡಿದವರು.

ಇಂತಹ ನೈಜ ದೇಶ ಪ್ರೇಮಿಯನ್ನು ಕಂಡು ದೇಶದ ಅಂತಿಮ ಬ್ರಿಟೀಷ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಬಾಬಾ ಸಾಹೇಬರ ಬಗೆಗಿನ ಹೆಮ್ಮೆಯ ಮಾತುಗಳನ್ನು ಹೀಗೆಳಿದರು.. “ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ರಾಜ ಮಹಾರಾಜರು ತಮ್ಮ ಖಡ್ಗಗಳಿಂದ ಮಾಡಲಾಗದ ಕಾರ್ಯವನ್ನು ಬಾಬಾ ಸಾಹೇಬರು ಲೇಖನಿಯಿಂದ ಮಾಡಿದರು” ಎಂದು.

ಹಾಗಿದ್ದ ಮೇಲೆ ಬಾಬಾ ಸಾಹೇಬರು ನೀಡಿದ ಸ್ವಾಭಿಮಾನದ ಸ್ವಾತಂತ್ರ್ಯ ಎಂತದ್ದು.?
ಆ ಸ್ವಾತಂತ್ರ್ಯ ಮೈನೆವಿರೇಳಿಸುವ ಸ್ವಾಭಿಮಾನದ, ಸಮಾನತೆಯ, ಸಹೋದರತೆಯ, ದೇಶದ ಐಕ್ಯತೆಯ, ಶೋಷಣೆ ವಿರುದ್ಧವಾದ, ಸರ್ವರಿಗೂ ಶಿಕ್ಷಣದ, ಕುಡಿಯುವ ನೀರಿನ, ಕೂಲಿ ಕಾರ್ಮಿಕನ ಕಲ್ಯಾಣದ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ, ಅಸ್ಪಶ್ಯತೆ ನಿರ್ಮೂಲನೆಯ, ಜಾತಿಯತೆ ವಿರುದ್ದವಾದ, ಸಮಪಾಲಿನ & ಸಹಬಾಳ್ವೆಯ, ವರ್ಣಭೇದದ ವಿರುದ್ಧವಾದ, ಹೆಣ್ಣುಮಕ್ಕಳ ಹಕ್ಕಿನ, ಮೌಡ್ಯತೆಯ ವಿರುದ್ಧವಾದ ಸ್ವಾತಂತ್ರ್ಯ ಇಂತಹ ವಿಶಾಲ ವೈಚಾರಿಕ, ವೈಜ್ಞಾನಿಕ ಹಾಗೂ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ಸ್ವಾತಂತ್ರ್ಯ ತಂದುಕೊಟ್ಟ ಸಮಾನತೆ ಹರಿಕಾರ, ವಿಶ್ವಜ್ಞಾನಿ, ನಿಜ ದೇಶಪ್ರೇಮಿಗೆ ಎಲ್ಲರೂ ಕೃತಜ್ಞರಾಗಿ ನಮಿಸೋಣಾ & ಅವರ ನಿಸ್ವಾರ್ಥ ಸೇವೆ ನೆನೆಯೋಣಾ. ನೈಜ ಇತಿಹಾಸವನ್ನು ನವತರುಣರಿಗೆ ತಿಳಿಸುವ ಪ್ರಯತ್ನ ಎಲ್ಲರದ್ದಾಗಲಿ. ಈ ದೇಶದ ಜಾತಿಗ್ರಸ್ಥ ಮನಸ್ಥಿತಿಗಳು ಬಾಬಾ ಸಾಹೇಬರಿಗೆ ಅಂಟಿಸಿರುವ ಜಾತಿಕೊಳಕಿನ ಪರದೆ ಸರಿಸಿ ನಿಜ ಬಾಬಾ ಸಾಹೇಬರನ್ನ ಕಾಣೋಣಾ..

ಪ್ರೀತಿಯ ಓದುಗರಿಗೆ ನನ್ನೆಲ್ಲಾ ನೆಲಮೂಲದ ದೇಶಬಂಧುಗಳಿಗೆ 74 ನೇ ಸ್ವಾತಂತ್ರ್ಯೋತ್ಸವದ ಭೀಮಾಶುಭಾಷಯ ತಿಳಿಸುತ್ತೆನೆ.

ಜೈ ಭೀಮ್.


✍️ಕೆ.ಬಿ ದಯಾನಂದಗೌಡ ಅವರನ್ನು ಅವರ ಸ್ನೇಹಿತರು, ಅಭಿಮಾನಿಗಳು, ಅವರ ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ದೀಪು ಬೋರೇಗೌಡ ಎಂದೇ ಕರೆಯುತ್ತಾರೆ.

ಓದೇ ಗೊತ್ತಿಲ್ಲದ, ಸಾಮಾಜಿಕ ನ್ಯಾಯದ ಕಲ್ಪನೆಯೇ ಗೊತ್ತಿಲದ ಯುವ ರಾಜಕಾರಣಿಗಳಲ್ಲಿ ಓದಿನ‌ ರುಚಿ ಹತ್ತಿಸಿಕೊಂಡಿರುವ, ಇತಿಹಾಸ ಅರಿತು ಭವಿಷ್ಯದ ಬಗ್ಗೆ ಮಾತನಾಡುವ ಜೆಡಿಎಸ್ ಪಕ್ಷದ ಹೊಸ ತಲೆಮಾರಿನ ರಾಜಕಾರಣಿ ಇವರು.

ಸದ್ಯ, ಜೆಡಿಎಸ್ ಯುವಘಟಕದ
ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ.

ಒಂದೊಮ್ಮೆ ಮನುಕುಲವನ್ನು ನಡುಗಿಸಿದ ಕತೆ: ಪಿಳೇಕು

ಡಾ.ಓ.ನಾಗರಾಜ್ ಅವರು ಬರೆದಿರುವ ಈ ಪಿಳೇಕು ಕತೆ ಕೊರೊನಾವನ್ನು ಮೀರಿದ ಭಯಾನಕತೆಯನ್ನು ತೆರೆದಿಡುತ್ತದೆ.


ಇದು ಯಾವ ಪಕ್ಷಿ ಹಾಕಿದ ಹಿಕ್ಕೆಯೊಳಗಿನ ಬೀಜ ಮೊಳೆತು ಇಷ್ಟು ದೊಡ್ದಾಗಿ ಬೆಳಕ್ಕಂಡಿರಂತ ಮರವೊ ! ಉತ್ತಮರು ಅದುಕ್ಕೆ ಅಶ್ವತ್ಥ ವೃಕ್ಷ ಅಂಥ ಹೆಸರು ಕೊಟ್ಟವರೆ.ಅದರ ಪಕ್ಕದಾಗೆ ಹೆಂಡ್ರು ಇರಲಿ ಅಂತೇಳಿ ಬೇವಿನ ಗಿಡವ ನೆಟ್ಟವ್ರೆ .ದನ ಕಾಯೊ ಹುಡ್ರು ಸುತ್ತ ಕಟ್ಟೆ ಕಟ್ಟಿದಾರೆ.

ಒಟ್ನಲ್ಲಿ ಅದು ಹಿಂದೂಪುರದ ಒಳಗಿರದೆ ಅಲ್ಲಿ ಕಾಣ ಬಂತೆಗುಟ್ಟೆಗೂ ಹೊಂದಿಕಳ್ಳದೆ ಬಯಲೊಳಗೆ ನಡುವಂತರದಲ್ಲದೆ.ಸುತ್ತ ಮುತ್ತ ಹೊಲಗಳವ್ವೆ.ಅದರ ಸನ್ನಿಧಿಯಲ್ಲಿ ರಸ್ತೆ ಹಾದೋಗದೆ.

ಎದುರು ಬಿಸ್ಲಾಗೆ ನೆಡ್ಕ ಬಂದ ಇವರಿಗೆ ಸುಸ್ತು ಬಡಿದಂಗಾಗಿತ್ತು.ಮೂವರೂ ಇದೇ ಅಳ್ಳಿಮರದಡಿಕ್ಕೆ ಬಂದರು. ಸ್ಯಾನಬೋಗ್ರು ಸೆಲ್ಯದಿಂದ ಮಕ ಒರಿಸ್ಕೆಂತ ಕತ್ತಲಂಗಿದ್ದ ನೆಳ್ಳಾಗೆ ನಿಂತ್ಕಂಡಿದ್ದರು.

ಎಲ್ಲ ಅಂಗೆ ಹಿಂತಿರುಗಿ ಹಿಂದೂಪುರದ ಕಡಿಕ್ಕೆ ಕಣ್ಣಾಯಿಸಿದ್ರು. ಅಲ್ಲಿ ಒಂದು ನರಪಿಳ್ಳೆ ಸುಳಿವು ಕಾಮದೆ ಊರು ಹಾಳು ಸುರೀತಿತ್ತು. ಸತ್ತುಬಿದ್ದಿರ ಇಲಿ ಯಗ್ಗಣಗಳನ್ನ ತಿಂಬಾಕೆ ನಾಯ್ಗಳು ಮುಗಿಬಿದ್ದಿದ್ದವೊ ಏನೊ, ಅವ್ವು ಕಚ್ಚಾಡ್ಕಂಡು ಕಯ್ಗುಡುತ್ತಿದ್ದ ಸವುಂಡು ಇವರಿಗೆ ಮಾರ್ಧನಿಯಾಗಿ ಕೇಳುಸ್ತಿತ್ತು.

ಮನೆಗಳ ಮ್ಯಾಲೆ ಹಾರಾಡ್ತ ಇದ್ದ ಹದ್ದು ಕಾಗೆಗಳ ಹಿಂಡು ಏನೊ ಕಸ್ಕಮ ಯತ್ನದೊಳಗಿದ್ದವು.ಇದುನ್ನೆಲ್ಲ ನೋಡ್ತ ನಿಟ್ಟುಸಿರು ಬಿಟ್ಟಂತ ಶಾಂತವೀರಪ್ಪರು “ಎಂಥಾ ದೊಡ್ಡಾಪತ್ತು ಒದಿಕ್ಯ ಬಿಡ್ತಪ್ಪಾ ನಮ್ಮ ಗ್ರಾಮಕ್ಕೆ. ಮತ್ತೆ ನಮ್ಮೂರವ್ರ ಬದುಕು ನ್ಯಾರ ಆಗೋದು ಯಾವಾಗ?”ಎಂದು ವೇದನೆಯಿಂದ ನುಡಿದರು.ಪಟೇಲ ಸೋಮಶೇಕರಪ್ಪ “ಪಿಳೇಕು ಅಂಟು ಜಾಡ್ಯಕಣ್ ಗೌಡ್ರೆ. ಒಬ್ಬರಿಗೆ ಬಂತು ಅಂದ್ರೆ ಮನೆ ಮಕ್ಕಳಿಗೆಲ್ಲ ಹಬ್ಕಂತದೆ.ಒಂದು ಮನೇಲಿ ಕಾಣಿಸ್ಕೆಣ ಅದು ಊರಿಗೇ ಹಲ್ಡಿಬಿಡ್ತದೆ.ಅಂಗೇನೆ ಊರೂರು ತಟಾಯ್ಸಿ ಜನರನ್ನ ಬಲಿ ತಕಂತದೆ “ಎನ್ನಲು, ಗೌಡ್ರು” ಇದುನ್ನ ಥಟ್ಟಂತ ನಿಲ್ಲಿಸ ಔಸ್ತಿನ ಯಾರು ಕಂಡಿಡಿದಿಲ್ಲವೆ ಸೂರಪ್ಪ” ಎಂದು ಕೇಳಿದರು.

ಸ್ಯಾನಬೋಗ್ರು” ಇದು ಮದ್ದಿಗೆಲ್ಲ ಜಗ್ಗಂತದಲ್ಲ ಗೌಡ್ರೆ, ಪ್ಲೇಗ್ ಮಾರಿ ಕ್ವಾಪ ಮಾಡ್ಕೊಂಡ್ರೆ ಹಿಂಗಾಗ್ತದೆ ತುರುಕರಿಗೆ ಸಪ್ಪೇಜಾಡ್ಯ ನರಮಾನವರಿಗೆ ಪ್ಲೇಗು ಕಾಲರಾ, ಮಕ್ಕಳಿಗೆ ಕುಕ್ಕಲುಕೆಮ್ಮು ಬಾಲಗ್ರಾವು ತಂದಿಕ್ಕಿ ಬಿಡ್ತಾಳೆ.ಅದಿಕ್ಕೆ ಮಾರೆಮ್ಮನ ಪರಿಷೆ ಮಾಡಿ ಕ್ವಾಣನ್ನ ಬಲಿಕೊಟ್ಟು ಶಾಂತಿಮಾಡಬೇಕು. ಅವಳು ತಾಂಸವಾಗದ ಹೊರತು ಕಾಯಿಲೆ ಹೋಗಲ್ಲ “ಎಂದು ಸಲಹೆ ಕೊಟ್ಟರು.

ಸ್ಯಾನಬೋಗ್ರಮಾತಿಗೆ ಗೌಡ್ರುಕ್ವಾಪ ಮಾಡ್ಕೆಂಡು ” ನೀನು ಸುಮ್ಕೆ ನಿಂತ್ಕತೀಯ. ಮಾತೆತುದ್ರೆ ಮಾರಿ ಮಸಣಿ, ದೇವರು ದಿಂಡ್ರುಅಂತೀಯಲ್ಲ.ನಾವು ಈಟೊರ್ಸದಿಂದ ಊರಾಗೆ ಪರಸೆ ಮಾಡ್ತಿಲ್ಲವಾ ?ಪೂಜೆ ಮಾಡಿ ಏನು ಬಲಿ ಕೊಟ್ಟೇ ಇಲ್ಲವಾ? ಶಾಂತಿ ಮಾಡಿಸಬೇಕಂತೆ ಶಾಂತಿ..” ಎಂದರು.

ಪಟೇಲರು ” ಜನ ಊರು ಬಿಟ್ಟು ವರಚ್ಚಿಗೆ ಇದ್ದು, ಸುಚಿಯಾಗಿದ್ಕಂಡು ರುಚಿಯಾಗಿರದ್ನ ತಿಂಬೋದೇ ಇದಕ್ಕೆ ಸರಿಯಾದ ಪಥ್ಯ”ಎಂದರು. ಸ್ಯಾನಬೋಗ್ರು ವಕ್ರವಾಗಿ ಪಟೇಲರ ಮಕವ ನೋಡಿದರು.

ಆಗ ಪಟೇಲರು ” ಸೂರಪ್ಪಣ್ಣ, ನಿಮ್ಮಪ್ಪಾರು ಟುಮುಕೂರಿಗೆ ಸಂಬಂಧಿಕರ ಶ್ರಾದ್ಧಕ್ಕೆಅಂತಹೋಗಿ ಪಿಳೇಕ್ನ ಅಂಟಿಸ್ಕ ಬಂದ್ರು. ಅತ್ತ ಮೂರುದಿನಕ್ಕೆ ಪಿಂಕೆಂಡ್ರಲ್ಲವಾ?ಎಂದು ತಮ್ಮಷ್ಟಕ್ಕೇ ಅಂದುಕೊಳ್ಳುವಾಗ, ಸ್ಯಾನಬೋಗ್ರು “ಗೌಡ್ರ ಅಪ್ಪ ಹಟ್ಟಿಯಂಕಟಿಗನ ಕೊಲೆ ಕೇಸಿನ ಸಂಬಂಧ ಬೆಂಗಳೂರು ಕೋರ್ಟ್ ಗೆ ಅಲೆದಾಡಿ ಬಂದವರು, ಒಣಕೆಮ್ಮುಅಂತ ಮಲಗಿ ಮನೆ ಮುಂದೆ ಹೊಗೆ ಹಾಕಿಸ್ಕಂಡ್ರು.ದೊಡ್ಡೋರಿಂದ ಸುರುವಾದ ಈ ಕಾಯಿಲೆ ಇವತ್ತು ಜನ ಮನೆಬಿಟ್ಟು ಬಯಲಿಗೆ ಬೀಳೊ ಹಂತಕ್ಕೆ ತಲುಪೈತೆ”ಅಂಬ್ತ ಮನಸ್ಸಿನಾಗೇ ಗೊಣಿಕ್ಕಂಡರು.
ಹಿಂಗೆ ಈ ಮಹಾ ಮಹಿಮರು! ಹಿಂದೂಪುರಕ್ಕೆ ಬಂದಿರ ವ್ಯಾಧಿ ಮೂಲದ ಗುಟ್ಟನ್ನ ರಟ್ಟುಮಾಡದೆ ಇವರ ಮನ್ಯಾಗೆ ಹುಟ್ಕಂಡ ಕಾಯಿಲೆ ಊರಿಗೆ ಮಾರಕವಾಗಿರುವ ಹೊತ್ನಲ್ಲಿ ಇವರ ಮೂಗಿನ ನೇರಕ್ಕೆ ಲೋಕೋದ್ಧಾರದ ಮಾತುಕತೆ ನಡೆಸ್ತ ನಿಂತವ್ರೆ.
ಉರಿಯಾ ಬಿಸ್ಲಾಗೆ ಇವರ ಸವಾರಿ ಪಿಳೇಕ್ ಸಂತ್ರಸ್ತರಿರ ಕಡೆ ನೋಡ್ಕಬರಾಕೆ ಹೊರಟು ನಿಂತದೆ. ಇವರ ಜತಿಯಾಗೆ ಸೇವೆ ಮಾಡತಕ್ಕಂತ ಆಳುಗಳಿಲ್ಲ. ನೊಂದವರಿಗೆ ನೀಡಕಂತಾವ ಕೈಯಾಗೆ ಕಾಳಿಲ್ಲ. ಜೋಪ್ನಾಗೆ ಒಂದು ದಮ್ಮಡಿ ಕೂಡ ಇಕ್ಕ ಬಂದಿಲ್ಲ.
ವಲಸೆ ಬಂದ ಪಳಾಂತ್ರ ಪ್ರಾಣ ಉಳಿಸ್ಕೆಮ ದರ್ದಿನೊಳಗೆ ಯಣಗಾಡ್ತ ಬಂತೆಗುಟ್ಟೆ ಬುಡದಲ್ಲಿ ಇದ್ದಾಗ, ಇದ್ದಕ್ಕಿದ್ದಂತೆ ಆ ಜೀವದಾಣಗಳ ಕಣ್ಣಲ್ಲಿ ಕಾಂತಿಮೂಡ್ತು. ದೂರದಲ್ಲಿ ಬತ್ತಿದ್ದ ಈ ಊರೆಜಮಾನ್ರನ ಕಂಡು ಸತ್ತೋಗಂತ ವಟ್ಟೆ ಹಸಿವು ಮತ್ತೆ ಉಸಿಡಾಕ್ಕೆ ತಿರಿಕೆಂತು.ಆದ್ರೆ ದೊಡ್ಡವ್ರು ಹತ್ರುಕ್ಕೆ ಬಂದಾಗ ತಿಳೀತು, ಬಾಯಿಮಾತಲ್ಲೇ ಹೊಟ್ಟೆ ತುಂಬಿಸಾಕೆ ಬಂದವ್ರೆ ಅಂಬ್ತ. ಇದರಿಂದ ಹಸಿದ ಹೊಟ್ಟೆಗಳು ತಿರುಗ ನಿರಾಸೆ ಕಾರ್ಮೋಡವ ಗುಬುರಾಕ್ಕಂಡುವು.ಅವರ ಬಾಳು ಹದ್ದು ಬಾಸ್ಕಂಡೋಗೊ ಹೊತ್ತಿನಾಗೆ ಭೀತಿ ಸರಿದು ತತ್ತರಿಸಿರ ಕೋಳಿಪಿಳ್ಳೆ ಥರವಾಗಿ ಸಾವು ಬದುಕಿನ ಉದೊಸ್ಲು ಮೇಲೆ ಡೋಲಾಮಾನಸ್ಥಿತಿ ತಲುಪಿತು.
ಈ ಮಧ್ಯೆ ಸೋಂಕಿಗೆ ತುತ್ತಾದ ಜನ ಬೊಗಸೆನ ಮೂಗುಬಾಯಿಗೆ ಅಡ್ಡವಾಗಿಕ್ಕಂಡು ಇರಬರ ಸಕ್ತಿಬಿಟ್ಟು ಕೆಮ್ಮಿ ಕ್ಯಾಕರಿಸೋರು. ಜೀವ ಅಂಗೈಗೇ ಬಿತ್ತೇನೊ ಎಂಬ ಆತಂಕದೊಳಗೆ ಕಣ್ಣಾಗೆ ನೀರುಬರಿಸ್ಕಂಡು ಮೂಗಾಗೆ ಸಿಂಬಳ ಕಾರ್ತ ಇದ್ದರು. ಕೆಲವರ ತೊಡೆಸಂಧಿಯಲ್ಲಿ ಬೊಕ್ಕೆಗಳೆದ್ದು ಮರ್ಮ ಸ್ಥಳದಲ್ಲಿ ಅದ್ಗಾಳ್ ಕಟ್ಟಿ ನಡೀಲಾರದೆ ಕಾಲೆಳ್ಕಂಡು ಕಾಲ್ಮಡಿಯಾಕೆ ನಿರಕಡಿಕ್ಕೆ ಅಡ್ಡಾಡೋರು.ಇನ್ನ ಕೆಲವರಿಗೆ ಗಂಟಲು ಬ್ಯಾನಿಬಂದು ಗದ್ದಗಲ್ ಕಟ್ಕಂಡು ಕೀರಲು ಸ್ವರದಲ್ಲಿ ಮಾತಾಡ್ತ ಕೈಸನ್ನೆ ಬಾಯಿಸನ್ನೆ ಮಾಡಿಕೆಂತ ಕಾಲದೂಡುತ್ತಿದ್ದರು.ಇವರಿಗೆ ರೋಗಕ್ಕೆ ತುತ್ತಾಗಿ ಮಣ್ಣಾದ ತಮ್ಮವರನ್ನ ನೆಪ್ಪು ಮಾಡ್ಕಮಕೆ ಆಗದಿರಾಷ್ಟು ಭಯ ಹುಟ್ಟಿಸಿತ್ತು ಈ ಕಾಯಿಲೆ. ಮೊದ ಮೊದಲು ಒಬ್ಬೊಬ್ರೆ ಸಾಯಾರು,ಒಂದೊಂದು ಗುಂಡಿ ತೋಡಿ ಮುಚ್ಚಲಾಗುತಿತ್ತು.ಮನೆ ಒಳಗೆ ಇಲಿ ಸತ್ತು ಬಿದ್ದಷ್ಟು ಯಣಗಳು ಬೀಳಾಕತ್ತಿದಾಗ ಒಂದೇಗುಂಡಿಗೆ ಎಲ್ಲರನ್ನ ಇಕ್ಕ ಪರಿಸ್ಥಿತಿ ಬಂತು. ಎಷ್ಟು ಹೆಣ ಚಟ್ಟ ಕಟ್ಟಿಸ್ಕಂಡವೊ? ಅದೆಷ್ಟು ಜನವ ಚಾಪೇಗ್ ಸುತ್ಕಂಡೋಗಿ ಗುಂಡಿಕ್ಕಲಾಯ್ತೊ!
ಬಲಿತವರ ಜಾಣತನದಿಂದ ಹಿಂದೂಪುರದ ಹಟ್ಬಿಗಳು ಮೊದಲೇ ಬಡವಾಗಿದ್ದವು. ಈಗ ಮಧ್ಯೆಗಾಲದ ದಾರಿದ್ರ್ಯಜೋಪಡಿಗಳ ರೂಪ ಪಡ್ಕಂಡಿತ್ತು ಅದರೊಳಗೆ ಜೀವಿಸಿರಾರ ದೊಡ್ಡಜೀವ ವಲ್ಟೋಗಿತ್ತು. ಹಿಂಗಿರುವಾಗ ಸಣ್ಣಜೀವ ಗಾಡಿಬಿಡೊ ಸೂಚನೆಯಾಗಿ ಅದೇ ಗುಡಿಸಲ ಮಧ್ಯೆ ದೊಡ್ಡದಾಗಿ ಬೆಂಕಿ ಹೊತ್ತಿಕಂಡಿರಂಗೆ ಕಾಣಿಸ್ತು. ದಟ್ಟವಾದ ಊದ್ರ ಆವರಿಸಿ ಮ್ಯಾಲಕ್ಕೆ ಏರುತ್ತಾ,ಅದರ ಲೀಲೆ ಆಕಾಶದ ಬಿಳಿಮೋಡದ ಜತೆ ಸಖ್ಯ ಬೆಳೆಸ ಸಾಸ ಮಾಡುತ್ತಿತ್ತು.ಅದುನ್ನ ದೂರದಿಂದಲೇ ಕಂಡಂತ ಗೌಡ್ರು “ಏನಾರ ಗುಡುಸ್ಲುಗಳಿಗೆ ಬೆಂಕಿ ಬಿತ್ತಾ ಯಂಗೆ?ಅಂಗೇನಾರ ಆದ್ರೆ ನಮ್ಮೂರವರು ಪೀಳೇಕಾವಳಿ ತಟ್ಕಮಕಾಗ್ದೆ ಬದುಕು ಬ್ಯಾನೆ ಅನಿಸಿ ಬೆಂಕಿಇಕ್ಕಂಡು ದಯಿಸೋದ್ರು ಅಂಬೋ ಸುದ್ದಿ ಎಲ್ಲ ಕಡೆ ಹಬ್ಬಿಕ ಬಿಡ್ತದೆ ಸೇಕ್ರಿ.ಆಗ ನಮ್ಮ ಮರ್ವಾದೆ ಏನಾಗಬೇಕು ಹೇಳು? ಬೇಕಾದ್ರೆ ಹಸ್ಗಂಡು ಅಂಗೆ ಸಾಯ್ಲಿ.ಅವರ ಸಾವಿನ ಹೊಣೆಯ ಪಿಳೇಕಿನ್ ತಲೇಗೆ ಕಟ್ಟಿದ್ರಾತು. ಮಾತ್ರ ಅಲ್ಲಿರಾರು ಬೆಂಕಿಗೆ ಬಿದ್ದು ಸಾಯ್ದೆ ಇರಲಿ”ಎಂಬುವವರಾದರು. ಪಟೇಲರು” ನೀನು ಹೇಳೋದು ಸರಿ ಐತೆ ಕಣಣ್ಣ” ಎನ್ನುತ್ತಿರುವಾಗ ಸೂರಪ್ಪನೋರು “ಈ ಹಾಳಾದ್ ಕಾಯಿಲೆ ಬಂದು ಆದಾಯಕ್ಕೆ ಕಲ್ಲುಬಿತ್ತಲ್ಲಪ್ಪ”ಅಂಬ್ತ ಅನ್ಯಮನಸ್ಕರಾಗಿದ್ದರು.
ಎಲ್ಲರೂ ನೆಡ್ಕಂಡೋಗವಾಗ ಸೇಕ್ರಪ್ಪ “ಅಲ್ನೋಡ್ರಿ ನಮ್ಮೂರ ತೋಟಿ ಕೊಂಡ ಗುಡುಸ್ಲು ಮುಂದೆ ಯಾತುಕ್ಕೊ ಸುಡಿಗೆ ಇಕ್ಕವನೆ” ಎಂದು ಬೊಟ್ಟುಮಾಡಿ ತೋರಿಸಿದರು. ಗೌಡ್ರು “ಯಾವ್ದಾರ ಮಿಕ ಗಿಕ ಹೊಡ್ಕಬಂದಿರ್ತಾನೆ. ಬಡ್ಡೀಮಗ ನಾಲ್ಗೆ ಚಪಲ ಹತ್ತುತು ಅಂದ್ರೆ ಸಾಕು ಏನಾರ ಹಿಡ್ಕ ಬಂದು ಬಿಡ್ತಾನೆ ” ಎನ್ನುತ್ತಿರುವಾಗಲೇ ಅವರು ಕೊಂಡ ಹೊಗೆ ಎಬ್ಬಿಸಿದ್ದ ಜಾಗದಲ್ಲಿ ನಿಂತಿದ್ದರು.ಮರದ ಕೆಳಗಿದ್ದಾಗ ಇವರಿಗೆ ಕಾಣಿಸಿದ್ದುಇದೇ ಬೆಂಕಿ ಊದ್ರ ಆಗಿತ್ತು.
ಇವಾಗ ಗಪ್ಪಂತ ನುಗ್ಗಿ ಬಂದ ಕಮುಟು ವಾಸಣೆಗೆ ಮೂವರೂ ಮೂಗ್ನ ರಪ್ಪಂತ ಮುಚ್ಚಿಕೊಂಡರು. ಗೌಡ್ರು ಅಸಹನೆಯಲಿ ಮೂಗ್ನ ತುರಿಸ್ಕೆಂತ “ಏನ್ಲಾ ಸುಡುತ್ತಿದ್ದೀಯ ಕೊಂಡಾ “ಎಂದು ಕೇಳಿದರು.ಅವನು ಯಾವುದೇ ಅಳುಕಿಲ್ಲದೆ “ಕಾಣಿಸ್ತಿಲ್ಲವಾ ಬುದ್ದೇರಾ..ನೆಲ್ಲು ತುಂಬಿರ ಮಡಕೆ ಸ್ವಾರೆ ವಳಗೆ ಇಲಿ ಸೇರ್ಕಬಿಟ್ಟಿದ್ದುವು.ಇವುನೆತ್ತೋಳ್ನ ಕ್ಯಾಯ ನಮಗೇ ತಿನ್ನಾಕೆ ಗತಿ ಇಲ್ದಿರ ಹೊತ್ನಾಗೆ ಒಳ್ಗೇಮೆದ್ದ ಗುಳಿಗೆ ಸಿದ್ದ ಅಂಬಂಗೆ ದವಸವ ತಿಂದು ಕೊಬ್ಬಿ ಮರಿ ಹಾಕ್ಕಂಡವ್ವೆ.ಇವುನ್ನ ಸಮ್ನೆ ಬಿಟ್ಟೋರುಂಟಾ?ಸುಟ್ಕಂಡು ತಿಂದ್ ಬಿಡ್ತೀನಿ. ನೋಡ್ರಿ ಯಂಗೆ ಬಲುತ್ಕಂಡವ್ವೆ “ಎನ್ನುತ ಬೆಂಕಿಗೆ ಸೀದು ಕರಕಲಾಗಿರ ಒಂದರ ತ್ವಾಕೆನ ಹಿಡಿದೆತ್ತಿ ಇವರಿಗೆ ತೋರಿಸಿದನು.
ಅವನ ಮಾತ್ನ ಕೇಳಿ ಗೌಡ್ರು ಹೌಹಾರಿಬಿಟ್ಟರು. ಸ್ಯಾನಬೋಗ್ರು”ಮುಂಡೇದೇ ಅದು ವಿನಾಯಕನ ವಾನ “ಎಂದರು. ಪಟೇಲರು “ಶಿವ ಶಿವಾ “ಎನ್ನುತ ಕೆನ್ನೆ ಬಡುಕೊಂಡರು.ಅವರನ್ನ ಓರೆ ಗಣ್ಣಲ್ಲಿನೋಡ್ತ ಕೊಂಡ “ಯಾವ ಸಿವನೊ ಯಾವ ಇನಾಯಕನೊ, ನೀವು ಕಂಡಿದ್ದೀರಾ? ನಂಗಂತು ಇವತ್ತು ವಟ್ಟೆಪಾಡಿಗೆ ಮಾರ್ಗ ಆಯ್ತು. ಕಾರ ಮೆಣಸು ಅರಿಯೆಲೇ ಮುದ್ದೀ ” ಅಂತ ಗುಡಿಸಲ ಕಡೆ ನೋಡ್ತಾ ಇವರೂ ಕೇಳಿಸ್ಕೆಮ್ಮಂಗೆ ಅವನೆಂಡ್ರುಗೆ ಕೂಗಿ ಹೇಳಿದ. ಮನಸ್ಸಿನೊಳಗೆ ” ದೊಡ್ಡ ಮನುಷ್ರು ಬರೆಕೈಯಾಗೆ ಬಂದವರೆ ಅಳ್ಳಾಡಿಸ್ಕಂಡು. ಸತ್ತವ್ರಾ ಬದಿಕವ್ರ ಅಂತ ನೋಡ್ಕೊಂಡುಹೋಗಾಕೆ ” ಎಂದು ಕೊಳ್ಳುತ್ತ ಮತ್ತದೇ ಮೂಷಿಕ ದಹನ ಕ್ರಿಯೆಯೊಳಗೆ ತೊಡಗಿಕೊಂಡನು.
ಅವನ ಗುಡಿಸಲೊಳಗಿಂದ” ಬ್ಯಾಡ ಮಾಮಯ್ಯ ಕರೇ ಇಲೀನ ತಿಂಬಾರ್ದು, ನಿಂಗೆ ದೊಡ್ಡಬಾಡ್ನ ನಾನ್ ತರಿಸಿ ಕೊಡ್ತೀನಿ.ನಿಂಗೆ ಕೈಮುಗಿತೀನಿ. ಇಲಿ ಸವಾಸ ಒಳ್ಳೇದಲ್ಲ”ಎಂದು ಪರಿಪರಿಯಾಗಿ ಬೇಡ್ಕಂತಿರ ಅವನ ಮಡದಿ ಸಬುದ ಕೇಳಿ ಬರುತ್ತಿತ್ತು.
ಇದುನ್ನೆಲ್ಲ ನೋಡ್ತ ಕೇಳ್ತ ಇದ್ದಂತಗೌಡ್ರು ಗಾಬರಿಯಿಂದ ಹೊರಿಕ್ಕೆ ಬಂದಿರನಿಲ್ಲ.”ಲೋ ಕೊಂಡ..ಈ ಇಲಿ ದೆಸೆಯಿಂದನೇ ಕಣೊ ಊರಿಗೆ ಪಿಳೇಕು ಬಂದಿರಾದು. ಎಲ್ಲಾರ ಮನೆವಳಗೆ ಯಣ ಬೀಳ್ತಿರಾದು ನೀವು ಊರುತೊರೆದು ಬಂದಿರಾದು”ಎಂಬುವವರಾದರು. ಪಟೇಲರು “ಹೂಂ ಕಣ್ ಕೊಂಡ..ಈ ಇಲಿಗಳ್ನ ಕಚ್ಚೊ ಚಿಗಟ ಸೊಳ್ಳೆ ಮನುಷ್ಯರನ್ನ ಕಚ್ಚಿ ಜಾಡ್ಯ ತಂದಿಕ್ತವೆ. ಇಂತ ಸಾವಿಗೆ ಕಾರಣ ಆಗಿರ ಇಲಿಗಳ್ನ ತಿಂಬಾಕೆ ಹೊರಟಿದ್ದೀಯಲ್ಲೊ ದಡ್ಡಾ “ಎಂದು ತಿಳುವಳಿಕೆ ಕೊಡಲು ಯತ್ನಿಸಿದರು. ಸ್ಯಾನಬೋಗ್ರಂತು ಅಲ್ಲಿಂದದೂರಕ್ಕೆ ಹೋಗಿ ಒಂದು ಮರದ ನೆಳ್ಳಾಗೆ ನಿಂತು ಕತ್ತಲಾಗಿದ್ದರು.
ಕೊಂಡ ” ಇದುನ್ನೇಳಕೆ ನೀವು ಅಷ್ಟು ದೂರದಿಂದ ಬಂದ್ರಾ ಬುದ್ದೇರ..? ಇಲಿಗಳಿಂದ್ಲೇ ಪಿಳೇಕು ಬರೋದು ಅಂಬ್ತ ನಂಗೂ ಗೊತ್ತು. ಏಟು ದಿನಾಂತ ಎಲ್ಲಾರ ಕೈಲಿ ಕೈಲಾಗದೋನು, ಕ್ಯಾಮೆಮಾಡಲ್ಲ, ಆಗ ಕೂಳಿಗೆ ಕಾಯ್ಕಂಡಿರ್ತನೆ ಅಂಬ್ತ ಬಯಿಸ್ಕಮದು. ಪಿಳೇಕು ಬಂದಂತೂ ನಾನು ವರಗಲಿಲ್ಲ. ಇಂಗಾದ್ರು ವಟ್ಟೆ ತುಂಬಿಸ್ಕೆಂಡು ಪಕ್ನೆ ಪ್ರಾಣ ಬಿಡಾನ ಅಂದ್ಕಂಡಿದ್ದೀನಿ. ಅದಿಕ್ಕೆ ನಾನಿರಬೇಕು ಇಲ್ಲವಾ ಈ ಇಲಿಗಳಿರಬೇಕು”ಎನ್ನುತ ಹಠಕ್ಕೆ ಬಿದ್ದವನಂತೆ ಸೌದೆಪುಳ್ಳೆ ಯಾರಾಕುತ್ತ ಅಂದ್ಕಂಡ ಕಾರ್ಯ ಮುಂದುವರಿಸಿದನು.
ಈ ಮೊದಲು ಯಜಮಾನ್ರುನ ಕಂಡಕೂಡಲೇ ನಡಾಬಗ್ಗಿಸಿ ವಿನಯ ತೋರಿಸಿ ಮುಖದಲ್ಲಿ ಭಯ ತಂದುಕೊಳ್ಳುತ್ತಿದ್ದನು. ಇವತ್ತು ಎದುರಿದ್ದವರನ್ನು ಓಸಳಕು ಮಾಡಿ ಬಿಸಾಕಿದ್ದನು.
ಗುಡಿಸಲ ಒಳಗೆ ರೋದನೆಮಾಡ್ತಿದ್ದ ಕೊಂಡನ ಹೆಂಡ್ರು ಮುದ್ದಮ್ಮ ಇವರು ನಿಂತು ಮಾತಾಡ್ತಿರತಾಕೆ ತಡಿಕೆ ಬಾಗ್ಲ ಕಿತ್ತು ಬಿಸಾಕಿ ನುಗ್ಗಿ ಬಂದಳು. ಕೊಂಡ ಅವುಳ್ನ ಕೂಡಾಕಿದ್ದ ಅಂತ ಇವರಿಗೆಅವಾಗಲೇ ಮನವರಿಕೆ ಆಗಿತ್ತು.ಇವಾಗ ಅವಳು ಸುಂಟರಗಾಳಿ ತರವಾಗಿ ಧಾವಿಸಿ ಬರ್ತಇರಾದ್ನ ಕಂಡು ” ನಾವು ಏನು ತರದೆ ಇರಾದಿಕ್ಕೆ ಸಿಟ್ಗಂಡು ಛೀಮಾರಿ ಹಾಕದಿಕ್ಕೆ ಬತ್ತಾವಳೆ “ಎಂದು ಚಣೊತ್ತು ದಿಗಿಲುಬಿದ್ದರು.
ಆದರೆ ಅವಳು ಬಂದವಳೆ “ಸ್ವಾಮೇರ ನನ್ನ ಗಂಡುನ್ನ ಬದುಕಿಸಿ ಕೊಡ್ರಿ. ಯಂಗಾರ ಮಾಡಿ ಮನೆ ಇಲಿತಿಂದು ಸಾಯಾದನ್ನ ತಡೀರಿ.ಇಲಿ ಸಣ್ಣಾವು ಅಂತ ತಾಚ್ಚಾರ ಮಾಡ್ಕಂಡವನೆ. ಮಕ್ಕಳು ಬ್ಯಾರೆ ಮನ್ಯಾಗಿಲ್ಲ ಕೆರೆ ಬ್ಯಾಟೆಗೋಗವ್ರೆ. ಬುದ್ದೇರಾ ನಮ್ಮುನ್ನ ಕಾಪಾಡ್ರಿ ದಮ್ಮಯ್ಯ ಅಂತೀನಿ “ಎಂದು ಕೈ ಮುಕ್ಕಂಡು ಗೋಗರೆದಳು. ದೂರದಲ್ಲಿ ನೋಡಿಕೆಂತ ನಿಂತಿದ್ದ ಅದಾಗತಾನೆ ಲಗ್ಣವಾಗಿದ್ದ ಹರೇದುಡುಗಿ ಒಬ್ಬಳು ಮನಸಿನಾಗೆ ” ಈವಜ್ಜಂಗೆ ಬರಬಾರದೇ ಬಂದು ಸಾಯಾ..ಅವತ್ತು ಗಂಡ ಯಂಡ್ರುನಾವು ವಳಗಿದ್ರೆ ಬಂದುಬಿಟ್ಟು ಲೇ ನಾಮರ್ದ ನಿಮ್ಮಪ್ಪ ಸಾಯ್ತ ಮನಿಗವನೆ ನೀನು ಯಂಡ್ರತಾವ ಸೆಕ್ಕಂದ ಆಡ್ಕಂಡು ಒಳಗಿದ್ದೀಯ ಅಂತಾನೆ.ಇವನು ನೆಗುದು ಬೀಳ “ಎಂದು ಸಾಪರ್ಸಿ ಸರಿಗಟ್ಟಿದಳು. ಕೊಂಡ ಮಾತ್ರ ಏನೂ ಕೇಳಿಸ್ಕಳ್ಳದೆ ಒಂದೊಂದೆ ಇಲಿಗಳ್ನ ಸುಟ್ಟು ಮುತ್ತುಗದ ಎಲೆ ಮೇಲೆ ಸಾಲಾಗಿ ಜೋಡಿಸುತ್ತಿದ್ದನು.
ಕೆಲವು ಇಲಿಗಳಿಗೆ ಕಳ್ಳುಪಚ್ಚಿವಲ್ಡಕ ಬಿಟ್ಟಿತ್ತು. ಮುಖಂಡರಿಗೆ ಅಸಿಸಿ ಅನಿಸಿ ಬಾಯಿ ಮಾತು ಬಿದ್ದೋಗಿತ್ತು.
ಇವರು ಬಂದ ಕೂಡ್ಲೇ ಮಿಕ್ಕ ಗುಡಿಸಲಾಗಿದ್ದ ವಯಸ್ಸಾದವರು, ರೋಗಕ್ಕೆ ತುತ್ತಾಗಿ ನರಳ್ತಿದ್ದವರು ಒಬ್ಬೊಬ್ಬರಾಗಿ ಬರಲಾಂಭಿಸಿದ್ದರು. ಯಜಮಾನ್ರು ಏನಾರ ತಂದವರೇನೊ ಕೈಎತ್ತಿ ಕೊಡ್ತರೇನೊ ನಾವು ಬೊಗಸೆವೊಡ್ಡಿ ಇಸ್ಕಮನ ಅಂದ್ಕಂಡು ಕಾಯ್ಕಂಡೆ ನಿಂತಿದ್ದರು. ಅವರಾರೂ “ಕೊಂಡಪ್ಪ ನೀನು ಮಾಡ್ತಿರಾದು ಸರಿಯಲ್ಲ” ಅಂತೇಳಿರಲಿಲ್ಲ. ಯಾಕಂದ್ರೆ ಕೊಂಡ ಬೆಳದಿಂಗಳ ಬ್ಯಾಟೆ ಆಡಿ ಬೆಳ್ಳಿಲಿ ಇಡ್ಕಬಂದು ಸುಟ್ಕಂಡು ತಿಂಬಾಕೆ ಬೆಂಕಿಹಾಕವನೆ ಅಂದ್ಕಂಡಿದ್ದರು. ಮುದ್ದಮ್ಮ ಮನೆಇಲಿ ತಿಂದು ಸಾಯಾದ್ನ ತಡುದು ಗಂಡುನ್ನ ಬದುಕಿಸಿರಿ ಅಂದಾಗಲೇ ಅವರಿಗೂ ಗೊತ್ತಾಗಿದ್ದು.
ಅಂಗಾಗಿ ಹಟ್ಟಿ ಜನ ಧಣೇರ ಕಡೆ ನೋಡೊ ಬದಲು ಈಗ ಕೊಂಡನ ಕಡೆ ನೋಡ್ತಾ ಅವನ ನಡೆಗೆ ಬೆಕ್ಕಸ ಬೆರಗಾದ್ರು. ಅವಾಗ ಗುಂಪಿನಲ್ಲಿದ್ದವ, ಆಂಧ್ರದಿಂದ ಬಂದು ಇಲ್ಲಿ ನೆಲೆಕಂಡ್ಕಂಡು ಕನ್ನಡಿಗನಾಗಿದ್ದವ, ಮಾತ್ರ ತನ್ನ ಮಾತೃಭಾಷೆಯನ್ನ ಅಂಗೆ ಉಳಿಸಿಕೊಂಡಿದ್ದ ಮುಸಲನೊಬ್ಬ”ಇಂಟಿ ಯಲಕ ಸಂಪೇಸಿ ತಿನೇಕಿ ಎಲ್ಲಿಂಡೇವಂಟೇ, ನುವ್ವೇರಾ ನಿಜಮೈನ ಮೊಗವಾಡು. ಮಾಕಿ ಯೀ ಉಪಾಯಮು ತೆಲೀಕ ಪಾಯ. ದೀನ್ನಿ ತಿಂಟೈನ ಮೇಮು ಬದುಕುಂಟೆ ಇಂಟೆಲಕ ಅನ್ನಮು ಅನಿಕೊಂದಾಮು.ತಿನ್ನಪ್ಪಡೆ ಸಚ್ಚಿ ಪೋತೆ ಮರಣಂ ಕರುಣಿಂಚಿನ ದೇವುಡು ಅನುಕೊಂಟಾಮು. ನೇನೂ ಇದೆ ಪನಿ ಜೇಸ್ತಾನು ಕೊಂಡನ್ನ ವಸ್ತಾನು “ಎನ್ನುತ ತನ್ನ ವಾಸದ ಗುಡಿಸಲತ್ತ ಗಾಳಿ ಮೆಟ್ಟಿಸಿಕೊಂಡವನಂತೆ ಹೋಗೇಬಿಟ್ಟನು. ಅವನು ಆಡಿದ ಪ್ರತಿ ಮಾತು ಊರವರಿಗೆ ಕೇಳಿಸಿತ್ತು. ಮತ್ತು ಅರ್ಥವಾಗಿತ್ತು. ಆದ್ರೆ ಅವರು ಯಾವ ಪ್ರತಿಕ್ರಿಯೆ ಕೊಡಲಿಲ್ಲ. ಸಾವಿನ ಸನ್ನಿಧಿಯಲ್ಲಿದ್ದೇವೆ ಅಂದ್ಕಂಡರೇನೊ ? ದೂಸ್ರ ಮಾತಾಡದೆ ಹೊರಟು ಬಿಟ್ಟರು.
ಕೊಂಡನು” ಅಲ್ಲಾ ಎಲ್ಲಸೆಂದಾಗಿ ನೆಡಿಯವಾಗ ನಾವು ಬೇಕಿತ್ತು,ನಿಮ್ಮೊಲಗಳಾಗೆ ನಾವು ದುಡಿದು ನಿಮ್ಮ
ಅಗೇವು ಕಣಜ ತಿಜೋರಿ ತುಂಬಿಸಬೇಕಾಗಿತ್ತು.
ನಿಮ್ಮವ್ರು ಸತ್ರೆ ಗುಣಿತೋಡಬೇಕು ಸಾವಿನ ಸುದ್ಧಿ ಮುಟ್ಟಿಸಬೇಕು. ನಮಗೆ ಎಡ ಮಗ್ಗುಲಾಗಿರವಾಗ ಬ್ಯಾಡವಾದ್ವ? ಕಾಲ ಇಂಗೇ ಇರಲ್ಲ ಹೋಗ್ರಿ”ಎನ್ನುತ ಮತ್ತದೆ ಕೆಲ್ಸ ಮಾಡತೊಡಗಿದನು.
ಹೆಚ್ಚು ಕಮ್ಮಿ ಅವನು ಸುಡುತ್ತಇದ್ದಂತ ಇಲಿಗ್ಳು ಅವನ ಬಣ್ಣಕ್ಕೆ ಕರ್ರಗಿದ್ದವು.ಮುಷ್ಠಿ ಗಾತ್ರದ ಹೆಬ್ಬಿಲಿ,ಮಿದಿಕೆ ಸೈಜಿನ ಸೊಂಡಿಲಿ ,ಹೆಬ್ಬೆಟ್ಟನಂತ ಸಿಟ್ಟಿಲಿ ಹಿಂಗೆ ತರಾವರಿ ಇಲಿಗಳ್ನ ಬೆಂಕಿಗದ್ದಿ ತೆಗೀತಿರಬೇಕಾದ್ರೆ ಮುದ್ದಮ್ಮ ಹತ್ರುಕ್ ಬಂದು ಅವನ ಪಕ್ಕೆಲುಬಿಗೆ ತಿವಿದು “ಮಾಮಯ್ಯ ತಲೆ ಎತ್ತಿನೋಡು ಯಾರು ಬಂದವ್ರೆಅಂತ”ಕಿವಿಯಲ್ಲಿ ಉಸುರಿದಳು. “ಏ ತೆಗಿಯೆ ಅತ್ಲಾಗಿ ನೀನೊಬ್ಳು” ಎನ್ನುತ ನಿಧಾನವಾಗಿ ಕತ್ತೆತ್ತಿ ನೋಡಿದನು. ಅವಂಗೆ ಅಷ್ಟು ದೂರದಲ್ಲಿ ನಿಂತಿದ್ದವರ್ನಕಂಡು ಐಸೋಜಿಗ ಆಗಿಬಿಡ್ತು. ನಿಧಾನವಾಗಿ ಮೇಲಕ್ಕೆದ್ದು ಕೈಮುಕ್ಕಂಡು ನಿಂತನು. ಎದುರುಗಡೆ ನಿಂತಿದ್ದವರಿಗೆ ಮೈಮೇಲೆ ಒಂದು ನೂಲಿನಷ್ಟೂ ಬಟ್ಟೆ ಇರಲಿಲ್ಲ.ಇನ್ನಿಬ್ಬರು ಎಡಬಲದಲ್ಲಿ ಅದೆ ಬಗೆಯ ನಿರ್ವಾಣ ಸ್ಥಿತಿಯಲ್ಲಿದ್ದರು.ಅವರು ಜೈನಿಗ್ರು ಅಂತ ಅವನಿಗೆ ಗೊತ್ತಾಗಿ ಬಿಡ್ತು.
ದಾರಿವಳಗೆ ಹೋಗ್ತಿರುವಾಗ ದಿಗಂಬರ ಸ್ವಾಮೀಜಿಯವರು ಕಣ್ಣಿಗೆ ಕಂಡಂತ ಗುಡಿಸಲಗಳನ್ನ ಗಮನಿಸಿದರು.ಇದೇ ಹಾದಿಯಲ್ಲಿ ಗೋರಿಬಿದನೂರಿಂದ ಶ್ರವಣಬೆಳಗೊಳಕ್ಕೆ ಅದೆಷ್ಟು ಸಾರಿ ಅಡ್ಡಾಡಿದ್ದರು.ಅವಾಗೆಲ್ಲ ಇಲ್ಲಿ ಜೋಪಡಿಗಳಿಲ್ಲದ್ದನ್ನು ನೆನೆಸಿಕೊಂಡರು. ಇವತ್ತು ಏನೊ ತಾಪತ್ರಯ ಆಗಿ ಜನವಸತಿ ಎದ್ದಿರಬೇಕು ಅಂದುಕೊಂಡೆ ವಿಚಾರಿಸಲೆಂದು ಬಂದಿದ್ದರು.ತಮ್ಮ ಮತಸ್ತರಿದ್ದಲ್ಲಿಗೇ ಹೋಗಬೇಕು ಪ್ರವಚನ ನೀಡಬೇಕು ಎಂಬ ನಿಯಮಾವಳಿ ಮೀರಿದವರಾಗಿದ್ದ ಇವರು ಇಂದು ಅಚಾನಕ್ಕಾಗಿ ಕೊಂಡನ ಮುಂದೆ ನಿಂತಿದ್ದರು.ಅವನೂ ಕೂಡ ಹೆಚ್ಚು ಕಡಿಮೆ ಇವರಂತೆಯೇ ಬೆತ್ತಲಾಗಿರುವನು.. ಸ್ವಂಟ ಬಳಸಿರುವ ಅವನ ಉಡುದಾರವು ಪುಟಗೋಸಿಯ ತಲೆತ್ವಾಕೆಗಳನ್ನ ಬಿಗಿಗೊಳಿಸಿದ ಸ್ಥಿತಿಯಿಂದ ಒಂದು ಪಕ್ಷ ವಿಮುಖವಾದರೆ ಇವನೂ ಹಟ್ಟಿಗೊಮ್ಮಟ ಆಗಿರುತ್ತಿದ್ದ. ಇವುನ್ನ ನೋಡಿದ ಸ್ವಾಮ್ಗಳು “ಸರ್ವಸಂಗ ಪರಿತ್ಯಾಗಿ ಆಗಿರುವ ನಾನು ವಿವಸ್ತ್ರನಾಗುವುದು ಸರಿ.ಆದರೆ ಗೃಹಸ್ಥನಾಗಿರುವ ಇವನೇಕೆ ಹೀಗಿರಬೇಕು.ಇವನ ಈ ಸ್ಥಿತಿಗೆ ಕಾರಣವೇನು? ಎಂದು ಆಲೋಚಿಸುವಾಗ ಯಾಕೊ ಅವರ ಕಣ್ಣಲ್ಲಿ ನೀರಿಳಿಯತೊಡಗಿತು.
ಹಾಗೆ ನೋಡುತ್ತಿದ್ದ ಅವರ ಶಿಷ್ಯರಿಗೂ ಮತ್ತು ಹಿಂಬಾಲಕರಿಗೆ ಗುರುವರ್ಯರು ಅಚ್ಚರಿಯಾಗಿ ಕಂಡರು. ಮೌನವೇ ಆವರಿಸಿದ್ದ ಆ ಜಾಗದಲ್ಲಿ ತದೇಕಚಿತ್ತದಿಂದ ನೋಡುತಲಿದ್ದ ಕೊಂಡನನ್ನು”ಏನು ಮಾಡುತ್ತಿರುವೆ ಗೃಹಸ್ಥ “ಅಂದರು. ಅವ ಕ್ಷೀಣ ಸ್ವರದಲ್ಲಿ “ಇಲಿ ಸುಡ್ತ ಇದ್ದೆ ಸ್ವಾಮೇರಾ “ಎಂದನು. “ನಿನ್ನ ಪರಿಸ್ಥಿತಿ ನನಗೆ ಅರ್ಥವಾಯ್ತು. ಆದರೆ ಒಂದುನ್ನ ತಿಳುಕೊ, ನೀನು ಹಚ್ಚಿರ ಬೆಂಕಿಯಲ್ಲಿರುವ ಸೌದೆ ಕಡ್ಡಿಗಳನ್ನ ನೋಡು.ನಿಗಿನಿಗಿ ಕೆಂಡವಾಗಿ ಉರಿಯುವಾಗಲೂ, ಕೆಲವೇ ಹೊತ್ತಿಗೆ ಅದು ಸುಟ್ಟು ಭಸ್ಮವಾಗುವ ಹಂತದೊಳಗೂ ಗಿಡವಾಗಿದ್ದಾಗಿನ ಮೂಲ ಆಕಾರವನ್ನ ಬಿಟ್ಟುಕೊಟ್ಟಿಲ್ಲ. ನೋಡು ಅಲ್ಲಿ ಕಡ್ಡಿ ಕೆಂಡವಾಗಿ, ಕೆಂಡ ಇದ್ದಿಲಾಗಿ, ಇದ್ದಿಲು ಸುಟ್ಟು ಬೂದಿ ಆಗುವ ತನಕವೂ ಇನ್ನೊಬ್ಬರಿಗೆ ಆಹಾರ ಒದಗಿಸುತ್ತಲೇ ತನ್ನ ಬಾಳನ್ನು ನಂದಿಸಿಕೊಳ್ಳುತ್ತಿದೆ.ಮನುಷ್ಯಕೂಡ ಇದೇ ರೀತಿಯೊಳಗೆ ಇನ್ನೊಬ್ಬರಿಗಾಗಿ ಬದುಕಬೇಕು. ಇಲಿ ನಿನ್ನ ಆಹಾರವಲ್ಲ ಮಿತ್ರ.ನಿನ್ನಸಿವಿನ ತೀವ್ರತೆ ತಿಳಿದೇ ಹೇಳುತ್ತಿರುವೆ. ಆಹಾರ ಮೂಲ ಮನುಷ್ಯನಿಗೆ ಬಹಳಷ್ಟು ಇವೆ.ದಾರಿ ಕಂಡು ಕೊಳ್ಳುವುದೆ ಜಾಣತನ.ಹೆದರದಿರು ” ಎಂದು ಆಶೀರ್ವದಿಸಿ ಬೆನ್ನು ತಿರುಗಿಸಿದರು.ಆಗ ಇವನ ಕಣ್ಣೆದುರೇ ಬೆಕ್ಕೊಂದು ಬಂದು ಸುಟ್ಟ ಇಲಿಗಳನ್ನ ಗಬರಾಡ್ಕಂಡು ತಿಂತಾಇತ್ತು. ಅವನು ಗರಬಡಿದಂತೆ ನಿಂತಿದ್ದನು. ಅಷ್ಟರಲ್ಲಿ ಕೆರೆ ಬೇಟೆಗೆ ಹೋಗಿದ್ದ ಕೊಂಡನ ಸಂತಾನ ಜೋಪಡಿಗೆ ಹಿಂತಿರುಗಿತು. ಶ್ರಮಪಟ್ಟು ಹಿಡಿದು ತಂದಿದ್ದ ತರಾವರಿ ಮೀನುಗಳನ್ನ ಚೀಲದಿಂದ ಹೊರತೆಗೆದು ಅವರಮ್ಮನಿಗೆ ವರ್ಣಿಸಿ ಒಪ್ಪಿಸುತ್ತಿದ್ದರು.
ಊರಾಳೋರು ಬಿಸಿಲಿಗೆ ಬಸವಳಿದು ಮತ್ತದೆ ಅಳ್ಳಿಮರದ ಕೆಳಗೆ ಸುಧಾರಿಸ್ಕೆಂತ ಕುಂತರು. ಶಾಂತವೀರಪ್ಪಪಗೌಡ್ರು “ಏನ್ರಯ್ಯ ಕೊಂಡ ಈ ಪಾಟಿ ರೋಸೆದ್ದು ಬಿಟ್ಟವನೆ.ಎಲ್ಲಾರು ಇವನಂಗೆ ಮಾಡಿಬಿಟ್ರೆ ಏನುಗತಿ ?ಈ ನನ್ನ ಮಕ್ಕಳು ಇಲಿತಿಂದು ಸತ್ರು ಅಂತ ಸುತ್ತಮುತ್ತ ಊರುಗಳಿಗೆ ಸುದ್ದಿ ಹೋದ್ರೆ ನಾವು ಪಂಚಾಯ್ತಿ ದಾರರಾಗಿ ಮಕ ಯತ್ಕಂಡು ತಿರುಗಾಡೊದೆಂಗೆ “ಎಂದರು.ಮಿಕ್ಕವರು ಎಲ್ಲಿ ಸವ್ಕಬೇಕಾಗ್ತದೊ ಅಂತೇಳಿ ತುಟಿ ಬಿಚ್ಚಲಿಲ್ಲ.

ಇವರು ಸಾಗಿ ಬಂದ ಹಾದಿಯಲ್ಲೇ ಸುಡೊಬಿಸಿಲು ಲೆಕ್ಕಿಸದೆ ಒಂದಷ್ಟು ಜನ ಇವರು ಕುಂತಿರ ಕಡಿಕ್ಕೇ ನೆಡ್ಕಬತ್ತಿರಾದು ಕಾಣಿಸ್ತು. ಅವರು ಜೈನಮತಸ್ಥರು ಅಂಬ್ತ ಅರಿವಾಯಿತು.ಇಲಿ ಸುಡುತಿದ್ದ ಆ ಕೊಂಡನಿಗೂ ನಿರ್ವಾಣವಾಗಿದ್ದ ಈ ಸ್ವಾಮ್ಗಳಿಗೂ ಏನು ವ್ಯತ್ಯಾಸ ಅನಿಸಲಿಲ್ಲ. ಅವರು ಹತ್ರ ಬಂದಂಗೆ ಒಳಗೊಳಗೆ ಭಕ್ತಿ ಭಾವ ಅಂಕುರಿಸ್ತು. ಅದೆ ಕೊಂಡನ್ನ ಕಂಡಾಗ ಅಸಹ್ಯ ಅನಿಸಿತ್ತು.ಅವರು ಮರದಡಿ ಬರುತ್ತಿದ್ದಂತೆ ದೀರ್ಘದಂಡ ನಮಸ್ಕಾರ ಬಿದ್ದರು. ಕಾಲಿಗೆರಗಿದವರನ್ನು ಮೇಲೇಳಲು ಹೇಳಿದಜ್ಞಾನಿಗಳು, ಇವರು ನಿಂತಮೇಲೆ “ನೀವು ಹಿಂದೂಪುರದ ದೊರೆಗಳಲ್ಲವೇ?ಎಂದು ಪ್ರಶ್ನಿಸಿದರು. ಇವರು ಮಕಮಕ ನೋಡಿಕೆಂತ ನಿಂತ್ರು. ಬೈರಾಗಿಗಳು ಇವರನ್ನವಲೋಕಿಸಿ ” ನಮಗೆ ಎಲ್ಲ ಅರ್ಥವಾಗಿದೆ. ಶ್ರಮಿಕರ ಬೆವರಿನ ನಾತವು ಸತ್ತಿಗೆಯಡಿ ಕುಂತು ಉಂಬುವವನ ಅನ್ನದ ಪರಿಮಳ. ಎಲ್ಲಾ ಸಮಯವೂ ಎಲ್ಲರಿಗೂ ಸಂಕಟಮಯವಾಗಿರುವುದಿಲ್ಲ ಬಂಧುಗಳೇ .ಕಾಲನ ಮುಂದೆ ನಾವೆಲ್ಲ ಸರಿಸಮಾನರು. ಹರುಷದ ಸಹಜಮರಣವೇ ನಿಜವಾದ ಸುಖದಬುತ್ತಿ.ಮಾಲಕನ ಹಸಿವೆ ಕಾರಣದ ಅಕಾಲಿಕ ಸಾವು ಮಾಲೀಕಗೆ ಪಾಪದಗಂಟು. ಮನುಷ್ಯನಿಗೆ ಯಾವುದನ್ನೂ ಸೃಷ್ಟಿಸಲಾಗದ ಮೇಲೆ ಮತ್ತೆ ಬದುಕಿಸಲಾಗದ ಹೊರತು ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಕೊಲ್ಲುವ,ಅಕಾಲಸಾವಿಗೆ ಕಾರಣವಾಗುವ ಹಕ್ಕು ಎಲ್ಲಿರುತ್ತೆದೆ? ಅಲ್ಲವೆ ಹಿಂದೂಪುರದ ಒಡೆಯರೇ? ನೀವು ಬುದ್ಧನಿಗೆ ಜ್ಞಾನೋದಯವಾದ ವೃಕ್ಷದಡಿಯಲ್ಲಿದ್ದೀರಿ ಆಲೋಚಿಸಿ ನೋಡಿ. ನಿಮಗೆ ಒಳ್ಳೆಯದಾಗಲಿ “ಎಂದು ಆಶೀರ್ವಾದ ಮಾಡಿ ಹೊರಟರು. ಇವರು ಕೈಮುಗಿಯುತ್ತ ನಿಂತರು.

ಇತ್ತ ಹೊಲ ಗದ್ದೆಗಳಲ್ಲಿ ಬೀಡು ಬಿಟ್ಕಂಡಿರಾಂತ ಊರೆಜಮಾನ್ರು ಬಂದೋದ್ರು ಎಂಬ ವಾಗ್ದಾನವನ್ನೆಲ್ಲಾ ಆಲಿಸಿದ ಯುವ ಪೀಳಿಗೆಗೆ ಎಲ್ಲಿಲ್ಲದ ಸಿಟ್ಟು ಬಂದುಬಿಡ್ತು. ಅವ್ರು ” ಹಿರೇರು ಇನ್ನೊಂದು ಕಿತ್ತ ಆ ಕೆಲ್ಸ ಐತೆ ಈ ಕೆಲ್ಸ ಐತೆ ಅಂತಾವ ಬರ್ಲಿ,ನಾವು ಅಂದ್ರೆ ಏನು? ನಮ್ಮ ಕಿಮ್ಮತ್ತೇನು ಅಂಬ್ತ ತೋರಿಸ್ತೀವಿ” ಎಂದು ಕೊಂಡನ ಹಿರಿಮಗ ಮದ್ಲೇಟಿ, ಛಲವಾದಿ ಯಂಗಟಿಗನ ಮಗ ದಾಸಯ್ಯ, ನಾಯಕರ ಪೈಕಿ ಕೆಂಚಣ್ಣನ ಮಗ ಕರಿಯ ಮತ್ತು ಸಾಬರಜಾತಿ ವಾಜೀದ್ ಒಟ್ಟಿಗೆ ಸಂಸತ್ತು ಸೇರಿ ಯಗರಾಡಕತ್ತಿದ್ರು. ಕಡೆಗೆ ಇನ್ನೆಂದೂ ಬಿಟ್ಟಿಚಾಕ್ರಿ ಮಾಡಬಾರ್ದು ಅಂಬೊ ತೀರ್ಮಾನಕ್ಕೆ ಬಂದ್ರು.

ಇಂಗಂದಂಕ್ಕಂಡ ಮಾರನೆ ದಿವಸವೇ ಇವರಿರ ಜಾಗಕ್ಕೆ ನಾಕು ಬಂಡಿಗಳು ಬಂದು ನಿಂತ್ಕಂಡವು.ಅವು ನಮ್ಮ ಹಿಂದೂಪುರದವೇ ಅಂತ ಖಾತ್ರಿ ಮಾಡ್ಕೆಂಡ ಈ ನೊಂದಿರ ಹುಡ್ರು, ಮಾತಾಡ್ದೆ ಪಡಿ ಪದಾರ್ಥತುಂಬಿರ ಸೀಲಗಳಿಗೆ ಹೆಗಲು ಕೊಟ್ಟರು.
ಯಾವಾಗ ತಿಂಬಾ ಅನ್ನಕ್ಕೆ ಅವಕಾಶ ಒದಿಗಿ ಬಂತೊ ಅವಾಗ ಜೋಪಡಿಯವರ ಮುಖ ಅರಳಿತು. ಇದೆಲ್ಲ ಬಂದೋದ ಸ್ವಾಮ್ಗಳ ಮಹಿಮೆ ಎಂದ್ಕಂಡ ಕೊಂಡನು ನೆಮ್ಮದಿಯ ನಿಟ್ಟುಸಿರು ಬಿಟ್ಟನು. ಇದುಕ್ಕೆಲ್ಲಾ ಕಾರಣ ನಮ್ಮ ಕೊಂಡನೆ ಎಂದುಕೊಂಡ ಪಿಳೇಕು ಸಂತ್ರಸ್ತರು ಅವುನ್ನ ಗೌರವದಿಂದ ಕಾಣಕತ್ತಿದ್ರು.ಆದ್ರೆ ಅವನು “ಯಾಕಾದ್ರು ನಾನು ಇಲಿಸುಟ್ಕತಿಂಬ ಮನಸು ಮಾಡಿದೆನೊ? ಎಲ್ಲಿ ಆ ಸ್ವಾಮ್ಗಳು ನೊಂದು ಕೊಂಡೋದ್ರೊ?” ಅಂಬೊ ಸಂವೇದನೆಯೊಳಗೇ ಹರಿದೋಗಿರ ರಗ್ಗು ಗುಬರಾಕ್ಕೆಂಡು ಮನಿಕೆಂಡಿದ್ದನು.

ಅತ್ತ ಕೆಲಹೊತ್ತಿಗೆ ಆಸ್ಪತ್ರೆ ಜೀಪು ಬಂತು. ಕುಚ್ಚೋರು ಬಂದವ್ರೆ ಅಂತಾವ ಜನ ಬೆದರಿಬಿಟ್ಟರು. ಜೀಪಿಳಿದ ಡಾಕುಟ್ರು ನರಸಮ್ಮದೀರು ಜೋಪಡಿಗಳತ್ತ ಬರುವಾಗ್ಗೆ ಕೆಲವರು ದಿಕ್ಕಾಪಾಲಾಗಿ ಓಡಿಬಿಟ್ಟರು.ಹರೇದುಡುಗರಿಗೆ ಓಡೋಗೋರನ್ನ ಹಿಡ್ಕಬಂದು ಡಾಕುಟ್ರಿಗೆ ಒಪ್ಪಿಸವತ್ತಿಗೆ ಸಾಕು ಬೇಕಾಗಿಹೋಯ್ತು.ಹಿಂಗೆ ರೋಗ ಅಂಟಿರಾರ್ನ ಗುರುತಿಸಿ ಚುಚ್ಚುಮದ್ದು ಕೊಡ್ತ ಇರುವಾಗ್ಗೆ, ಮದ್ಲೇಟಿಯು ಮುಲಿಕ್ಕೆಂಡು ಮನಿಗಿದ್ದ ಅವರಪ್ಪನ್ನ ಬಾಸಿಎತ್ತಿ ಹೆಗಲಿಗಾಕ್ಕಂಡು ಬಂದು ವೈದ್ಯರ ಮುಂದೆ ನಿಲಾಕಿದನು. “ಸ್ವಾಮೇರಾ ನಮ್ಮಪ್ಪ ಪಿಳೇಕು ಜಾಡ್ಯ ಬರಿಸೊ ಇಲಿಗಳನ್ನೇ ಸುಟ್ಕ ತಿಂದುಬಿಟ್ಟವ್ನೆ ಸೂಜಿ ಸುಚ್ರಿ”ಅಂದನು. ವೈದ್ಯರು ದಿಗ್ಭಾಂತರಾಗಿಬಿಟ್ರು. ಅವನ ಮಾತು ಕೇಳಿಸ್ಕಂಡಂತ ಒಬ್ಬ ನರ್ಸು ತಲೆತಿರುಗಿ ಬಿದ್ದುಬಿಟ್ಟಳು.


ಕುರಂಗ ರಾಜ ವೈಭವದಂತ ಐತಿಹಾಸಿಕ ಕಾದಂಬರಿ ಮೂಲಕ ಸಾಹಿತ್ಯಕ ಹಾಗೂ ಸಾಮಾಜಿಕ ವಲಯದ ಗಮನ ಸೆಳೆದ ಡಾ.ಓ. ನಾಗರಾಜು ಅವರು ಕೊರಟಗೆರೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ

ಕನ್ನಡ ಸಹ ಪ್ರಾಧ್ಯಾಪಕರು.

ಮತ್ತು ಸಾಹಿತಿ

Covid: ತುಮಕೂರಿನಲ್ಲಿ‌ ಒಂದೇ ದಿನ 67 ಮಂದಿ‌ ಗುಣಮುಖ: 3000 ಮೀರಿತು ಸೋಂಕಿತರ ಸಂಖ್ಯೆ

Publicstory


ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 67‌ ಕೋವಿಡ್ ರೋಗಿಗಳು ಗುಣಮುಖರಾಗಿ ಮನೆಗೆ ಮರುಳಿದರು. ಆದರೆ ಮತ್ತೇ 92 ಹೊಸ ಪ್ರಕರಣಗಳು ದೃಢಪಟ್ಟಿವೆ.

ಗುಣಮುಖರಾಗುವವರಿಗಿಂತ ಸೋಂಕು ತಗುತ್ತಿರುವವರ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ತುಮಕೂರು ಅತಿ ಹೆಚ್ಚು ಕೋವಿಡ್ ಪೀಡಿತರು ಹೊಂದಿರುವ ತಾಲ್ಲೂಕು ಆಗಿದೆ.

ಒಟ್ಟಾರೆ 3211 ಮಂದಿ ಕೋವಿಡ್ ರೋಗಿಗಳಲ್ಲಿ 1220 ಮಂದಿ ತುಮಕೂರಿನವರೇ ಆಗಿದ್ದಾರೆ. ತುಮಕೂರು ನಗರದ ಜನರು ಹೆಚ್ಚು ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಅಗತ್ಯವಿದೆ.

ತುಮಕೂರು ಜಿಲ್ಲೆಯಲ್ಲಿಂದು 92 ಕೊವೀಡ್ 19 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3211 ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ಈ ದಿನವೂ ತಿಪಟೂರು, ಕುಣಿಗಲ್, ತುಮಕೂರು, ಪಾವಗಡ ತಾಲ್ಲೂಕಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

‘ಪಿವಿಆರ್’ ಅಂದ್ರೆ ಏನು ಹೇಳಿ..??

0

ಜಿ.ಎನ್.ಮೋಹನ್


ಅವತ್ತೊಂದು ದಿನ ಹೀಗಾಯ್ತು. ನಂದಿನಿ ಲಕ್ಷ್ಮೀಕಾಂತ್ ಬಲವಂತದಿಂದಾಗಿ ನಾನು ಮೀಡಿಯಾ ವಿದ್ಯಾರ್ಥಿಗಳ ಮುಂದೆ ಕುಳಿತಿದ್ದೆ. ಮೀಡಿಯಾ ಬಗ್ಗೆ ಒಂದು ಗಂಟೆ ಮಾತು ಮಾತು.

ಒಳ್ಳೆ ಜೋಷ್ ನಲ್ಲಿದ್ದ ನಾನು ಅವರೆಲ್ಲರಿಗೆ ‘ಪಿವಿಆರ್’ ಅಂದರೆ ಏನು? ಅಂತ ಕೇಳಿದೆ.

ಗಲಗಲ ಅನ್ನುತ್ತಿದ್ದ ಕ್ಲಾಸು ಒಂದೇ ಕ್ಷಣಕ್ಕೆ ಸ್ಥಬ್ಧವಾಯಿತು.

ಪ್ರತಿಯೊಬ್ಬರ ಮುಖದಲ್ಲೂ ಪ್ರಶ್ನಾರ್ಥಕ ಚಿಹ್ನೆ. ಒಂದಷ್ಟು ಹುಡುಗರು ಧೈರ್ಯ ಮಾಡಿ ‘ಸರ್, ಪಿ ಅಂದ್ರೆ ಪಿಕ್ಚರ್’ ಅಂದರು. ‘ವಿ ಅಂದ್ರೆ ವಿಡಿಯೋ, ಆರ್ ಅಂದ್ರೆ ರೆಕಾರ್ಡಿಂಗ್’. ಪಿವಿಆರ್ ಅಂದರೆ ಪಿಕ್ಚರ್ ವಿಡಿಯೋ ರೆಕಾರ್ಡಿಂಗ್ ಅಂದರು.

ಈಗ ಮುಖವನ್ನು ಕ್ವಶ್ಚನ್ ಮಾರ್ಕ್ ಆಗಿ ಬದಲಿಸಿಕೊಳ್ಳುವ ಸರದಿ ನನ್ನದಾಗಿತ್ತು.

ನಾನು ಕುಳಿತಿದ್ದು ಈಗಿನ ಕಾಲದ ಹುಡುಗ ಹುಡುಗಿಯರ ಎದುರು.

ಇದ್ದಿದ್ದರಲ್ಲಿ ಜೇಬಿನ ಪರಿಸ್ಥಿತಿ ಪರವಾಗಿಲ್ಲ ಎನ್ನಬಹುದಾದವರ ಎದುರು, ಹಾಗಾಗಿ ಮಲ್ಟಿಪ್ಲೆಕ್ಸ್ ತಿರುಗಾಟ ಇವರಿಗೆ ಅಪರೂಪದ್ದೇನಲ್ಲ.

ನಾನು ಒಬ್ಬೊಬ್ಬರೂ ಮಾಡುತ್ತಿದ್ದ ಊಹೆಯನ್ನು ನೋಡಿ ಗಾಬರಿ ಆದವನೇ, ಬೇಡ ಬೇಡ, ಪಿವಿಆರ್ ಅಂದರೆ ‘ಪ್ರಿಯಾ ವಿಲೇಜ್ ರೋಡ್ ಶೋ’ ಅಂತ ಅಂದೆ.

ಅವರ ಮುಖದಲ್ಲಿ ಆದ ಬದಲಾವಣೆ ಗಮನಿಸಬೇಕಿತ್ತು. ತೆರೆದ ಬಾಯಿ ತೆರೆದೇ ಇತ್ತು. ಬಿಟ್ಟ ಕಣ್ಣು ಬಿಟ್ಟ ಹಾಗೇ ಇತ್ತು.

ವರ್ಷಗಳ ಹಿಂದೆ ನನ್ನ ಕಸಿನ್ ಧೀರಜ್ ಫೋನ್ ಮಾಡಿ ‘ಐಪಿಎಲ್ ಟಿಕೆಟ್ ಇದೆ ಬರ್ತೀಯಾ ನನ್ನ ಜೊತೆ’ ಅಂದ.

ನನಗೂ ಕ್ರಿಕೆಟ್ ಗೂ ಅಂತಾ ಒಳ್ಳೆ ನಂಟೇನಿಲ್ಲ. ಖಾಲಿ ಇದ್ದರೆ ಸ್ಕೋರ್ ಕಡೆ ಕಣ್ಣಾಡಿಸ್ತೀನಿ. ಕೆಲಸ ಇದ್ರೆ ಗೋಲಿಮಾರ್ ಅಂತೀನಿ.

ಹಾಗಾಗಿ ಅವನು ಕರೆದಾಗ ‘ಹೋಗೋ ಯಾರು ಬರ್ತಾರೆ, ಬೆಳಗ್ಗೆ ಪೇಪರ್ ನಲ್ಲಿ ಬೇರೆ ಕಾರು ತರಬೇಡಿ, ಬಸ್ ಹಿಡ್ಕೊಂಡು ಬನ್ನಿ ಅಂತ ಹೇಳಿದ್ದಾರೆ. ಅಲ್ಲಿ ಬೇರೆ ರಷ್ ಒದ್ದಾಡಬೇಕು ಅಂತ ಕಣಿ ಹೇಳಿದೆ.

ಅವನು ‘ರಷ್ ಏನಿಲ್ಲ, ಖಾಲಿ ಹೊಡೀತಾ ಇರುತ್ತೆ ಬಾ’ ಅಂದ. ಅವತ್ತು ಯಾವ ಮ್ಯಾಚಪ್ಪಾ ಅಂತ ನೋಡಿದೆ. ರಾಯಲ್ ಚಾಲೆಂಜರ್ಸ್ ಆಟ. ಹಾಗಿದ್ರೂ ಖಾಲಿ ಹೊಡೆಯುತ್ತೆ ಅಂದ್ರೆ ಯಾರು ನಂಬ್ತಾರೆ ಅಂದೆ.

ತಕ್ಷಣ ಅವನು ಹೇಳಿದ ‘ಅಯ್ಯೋ, ನಾನು ಹೇಳಿದ್ದು ಫನ್ ಮಲ್ಟಿಪ್ಲೆಕ್ಸ್ ನಲ್ಲಿ, ಕ್ರಿಕೆಟ್ ಸ್ಟೇಡಿಯಂನಲ್ಲಿ ಅಲ್ಲ’ ಅಂದ, ಓಹ್ ಕ್ರಿಕೆಟ್ ಇವಾಗ ಫಿಲಂ ಥಿಯೇಟರಿಗೆ ಬಂದಿದೆ. ಬಿಟ್ಟ ಬಾಯಿ ಬಿಟ್ಟ ಹಾಗೇ ಇರುವ ಪರಿಸ್ಥಿತಿ ಈಗ ನನ್ನದಾಗಿತ್ತು.

‘ಇದು ಎಂಥಾ ಕಾಲವಯ್ಯ ಹೊಸತನವ ಕೊಡುವ, ಹೊಸ ವಿಷಯ ಅರಿವ..’ ಅನ್ನೋ ಪ್ರಶ್ನೆಗೆ ಸಿಂಪಲ್ ಉತ್ತರ ‘ಇದು ಮಲ್ಟಿಪ್ಲೆಕ್ಸ್ ಕಾಲ’.

ಮಲ್ಟಿಪ್ಲೆಕ್ಸ್ ಬಿರುಗಾಳಿಗೆ ನಾಂದಿ ಹಾಡಿದ್ದೇ ‘ಪ್ರಿಯಾ ವಿಲೇಜ್ ರೋಡ್ ಶೋ’ ಅರ್ಥಾತ್ ಪಿವಿಆರ್.

ಇವತ್ತು ಮಲ್ಟಿಪ್ಲಿಕ್ಸ್ ವಿಚಾರದಲ್ಲಿ ಬೆಂಗಳೂರಿಗೆ ವಿಶಿಷ್ಟ ಸ್ಥಾನ ಇದೆ. ಯಾಕೆಂದರೆ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಸ್ಕ್ರೀನ್ ಇರೋದು ಬೆಂಗಳೂರಿನ ಪಿವಿಆರ್ ನಲ್ಲಿ.

ನಾವು ಈಗ ಕಾಣ್ತಾ ಇರೋದು ಮಲ್ಟಿಪ್ಲೆಕ್ಸ್ ಬಿರುಗಾಳಿ ಮಾತ್ರ. ಆದ್ರೆ ಅದರ ಹಿಂದೆ ‘ಮೆಗಾ ಪ್ಲೆಕ್ಸ್’ ಅನ್ನೋ ಬಿರುಗಾಳಿ ಸಹಾ ಎಂಟ್ರಿ ತಗೊಳ್ಳೋಕೆ ಕಾಯ್ತಾ ನಿಂತಿದೆ.

ಒಂದಕ್ಕಿಂತ ಜಾಸ್ತಿ ಸ್ಕ್ರೀನ್ ಇದ್ದರೆ ಅದು ಮಲ್ಟಿಪ್ಲೆಕ್ಸ್. ಅದೇ 16ಕ್ಕಿಂತ ಜಾಸ್ತಿ ಸ್ಕ್ರೀನ್ ಇದ್ದರೆ ಅದು ಮೆಗಾಪ್ಲೆಕ್ಸ್.

ಕೆನಡಾದಲ್ಲಿ ನ್ಯಾಟ್ ಟೇಲರ್ ಗೆ ‘ಎಲ್ಜಿನ್’ ಅಂತ ಸಿನಿಮಾ ಥಿಯೇಟರ್ ಇತ್ತು.

ಆತ ಅದರ ಪಕ್ಕದಲ್ಲೇ ಇನ್ನೊಂದು ಥಿಯೇಟರ್ ಕಟ್ಟಿದ. ಒಂದೇ ರೀಲು ಎರಡು ಹಾಲ್ ನಲ್ಲಿ ಓಡಿಸಿ ಬೇಜಾನ್ ದುಡ್ಡು ಮಾಡ್ಬೋದಲ್ಲ ಅಂತ ಅವನ ಯೋಚನೆ.

ಆಮೇಲೆ ಇನ್ನೂ ಈಸಿಯಾಗಿ ದುಡ್ಡು ಮಾಡಬೇಕು ಅಂದ್ರೆ ಎರಡರಲ್ಲೂ ಬೇರೆಬೇರೆ ಸಿನಿಮಾ ಹಾಕಬೇಕು ಅಂತ ಅವನಿಗೆ ಗೊತ್ತಾಯ್ತು.

ಅಲ್ಲಿಂದ ಶುರುವಾಯ್ತು ನೋಡಿ ಮಲ್ಟಿಪ್ಲೆಕ್ಸ್ ಅನ್ನೋ ಬಿರುಗಾಳಿ. ಅದು ಕನ್ಸಾಸ್, ಟೊರೆಂಟೋ ಎಲ್ಲವನ್ನೂ ಆಕ್ರಮಿಸಿಕೊಂಡು ಭಾರತಕ್ಕೂ, ಬೆಂಗಳೂರಿಗೂ ಬಂದಿಳೀತು.

ಮುಧೋಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಆಗ ಜೋರಾಗಿ ಸದ್ದು ಮಾಡ್ತಿದ್ದ ಡಂಕೆಲ್ ಪ್ರಸ್ತಾವನೆ ಟಿವಿ ಮೇಲೆ, ಪತ್ರಿಕೆಗಳ ಮೇಲೆ ಏನೇನು ಪರಿಣಾಮ ಮಾಡುತ್ತೆ ಅಂತ ಒಂದೆರಡು ಪುಸ್ತಕ ಬರೆದಿದ್ದೆ.

ಅದನ್ನ ನೋಡಿಯೇ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಅದರ ಮೇಲೇ ಒಂದು ವಿಶೇಷ ಉಪನ್ಯಾಸ ಕೊಟ್ಬಿಡಿ ಅಂದ್ರು.

ಆಗ ಫ್ರಾನ್ಸ್ ದೇಶ ಡಬ್ಬಿಂಗ್ ವಿರುದ್ಧ, ಸಿನಿಮಾ ಅನ್ನೋದನ್ನು ಸರಕು ಅಂತ ಅಮೆರಿಕಾ ಗುರುತಿಸಿದ್ದನ್ನ ವಿರೋಧಿಸಿತ್ತು. ಬುದ್ಧಿಜೀವಿಗಳು ಸಿಡಿದು ನಿಂತಿದ್ದರು.

ಆಗಲೇ ಭಾರತಕ್ಕೂ ಮಲ್ಟಿಪ್ಲೆಕ್ಸ್ ಬರ್ತಾ ಇದೆ ಅನ್ನುವ ಸೂಚನೆ ಸಿಕ್ಕಿದ್ದು. ನಾನು ಖಡಾಖಂಡಿತವಾಗಿ ಮಲ್ಟಿಪ್ಲೆಕ್ಸ್ ಬರಕೂಡದು. ಅದು ಅರ್ಥಪೂರ್ಣ ಸಿನೇಮಾಗಳನ್ನು ಕೊಂದುಹಾಕಿಬಿಡುತ್ತೆ ಎಂದೆ.

ಎದುರುಗಡೆ ಸಂಸ್ಕೃತಿ ಸಚಿವ ಎಂ.ಪಿ. ಪ್ರಕಾಶ್ ಕುಳಿತಿದ್ದರು.

ಮಲ್ಟಿಪ್ಲೆಕ್ಸ್ ಗಳು ಬಂದರೆ ಅಲ್ಲಿ ಗಿರೀಶ್ ಕಾಸರವಳ್ಳಿ ಸಿನೆಮಾ ಸ್ಕ್ರೀನ್ ಆಗುತ್ತಾ ಅಂತ ಅವ್ರಿಗೆ ಪ್ರಶ್ನೆ ಕೇಳಿದ್ದೆ. ಅವರಿಗೆ ಬೇಕಾಗಿರುವುದು ಕೋಲಾ ಕುಡೀತಾ, ಪಾಪ್ ಕಾರ್ನ್ ತಿಂತಾ ಸಿನೆಮಾ ನೋಡುವ ಜನ.

ಅಂತಾ ಜನಕ್ಕೆ ಹಾಲಿವುಡ್, ಬಾಲಿವುಡ್ ಬೇಕೇ ಹೊರತು ನಮ್ಮ ಸಂವೇದನೆ ಬೇಕಾಗೋಲ್ಲ ಅಂದೆ.

ಅದಾಗಿ ಸುಮಾರು ವರ್ಷ ಉರುಳಿ ಹೋಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಸಾಕಷ್ಟು ಕೋಲಾ ಹರಿದಿದೆ. ಪಾಪ್ ಕಾರ್ನ್ ಖರ್ಚಾಗಿಹೋಗಿದೆ.

ಗಿರೀಶ್ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್’ ನೋಡಬೇಕು ಅಂತ ಒದ್ದಾಡುತ್ತಿದ್ದೆ. ಎಲ್ಲಿ ರಿಲೀಸ್ ಆಗಿದೆ ಅಂತ ನೋಡಿದರೆ ಅದೇ ಪಿವಿಆರ್ ನಲ್ಲಿ ತೆರೆ ಕಂಡಿತ್ತು. ಮಲ್ಟಿಪ್ಲೆಕ್ಸ್ ಇವತ್ತು ಎಷ್ಟೋ ಹೊಸಬರಿಗೆ, ಹೊಸ ಅಲೆ ಸಿನಿಮಾಗಳಿಗೆ ಜಾಗ ಮಾಡಿಕೊಟ್ಟಿದೆ.

ಹೀಗೆ ಹೇಳುವಾಗ ನನಗೆ ತಕ್ಷಣ ನೆನಪಾಗುತ್ತಿರುವುದು ಮಧುರ್ ಭಂಡಾರ್ಕರ್, ಪಿವಿಆರ್ ನಲ್ಲಿ ‘ಫ್ಯಾಷನ್’ ಫಿಲಂ ರಿಲೀಸಾಗಿತ್ತು. ಪ್ರಿಯಂಕಾ ಚೋಪ್ರಾ, ಮಧುರ್ ಭಂಡಾರ್ಕರ್ ಫಿಲಂ ಪ್ರಚಾರಕ್ಕೆ ಅಲ್ಲಿಗೆ ಬಂದಿದ್ದರು.

ಜರ್ನಲಿಸ್ಟುಗಳು ಮೈಕ್ ಹಿಡಿದು ಮಲ್ಟಿಪ್ಲೆಕ್ಸ್ ಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ದರು.

ಮಧುರ್ ಹೇಳಿದ್ರು ‘ಮಲ್ಟಿಪ್ಲೆಕ್ಸ್ ಗಳ ಅನ್ನೋದು ಇರುವುದರಿಂದ ಒಬ್ಬ ಮಧುರ್ ಭಂಡಾರ್ಕರೂ ಇದ್ದಾನೆ. ನನ್ನ ಫಿಲಂಗಳ ಕಥೆ, ನರೇಷನ್ ಎಲ್ಲಾ ಭಿನ್ನ’.

‘ಅದನ್ನೇ ಸಾವಿರಾರು ಸೀಟ್ ಇರುವ ಸಿಂಗಲ್ ಸ್ಕ್ರೀನ್ ಥಿಯೇಟರಿನಲ್ಲಿ ಬಿಡುಗಡೆ ಮಾಡಿ ಅಂದಿದ್ದಿದ್ರೆ ಯಾರೂ ಮೂಸಿ ನೋಡ್ತಾ ಇರಲಿಲ್ಲ. ಈಗ ನೋಡಿ. 200 ಸೀಟ್ ಇರುವ ಮಲ್ಟಿಪ್ಲೆಕ್ಸ್ ನಲ್ಲಿ ಆರಾಮಾಗಿ ಫ್ಯಾಷನ್ ಓಡುತ್ತೆ’.

ಮಲ್ಟಿಪ್ಲೆಕ್ಸ್ ಗುಟ್ಟೇ ಅದು ‘ಕಡಿಮೆ ಸೀಟು. ಹೆಚ್ಚು ರೇಟು’.

ಇವತ್ತು ಇಂಡಿಯಾದಲ್ಲಿ ದುಡ್ಡು ಮಾಡೋ ಕುದುರೆ ಅಂದ್ರೆ ಎರಡೇ ಎರಡು. ಕ್ರಿಕೆಟ್ಟು ಮತ್ತೆ ಸಿನೆಮಾ.

ಮನರಂಜನೆ ಉದ್ಯಮದಲ್ಲಿ ಶೇಕಡಾ 27ರಷ್ಟು ಆದಾಯ ಸಿನೆಮಾದಿಂದಾನೇ ಬರ್ತಾ ಇದೆ.

ಹಾಗಾಗೀನೇ ಮಲ್ಟಿಪ್ಲೆಕ್ಸ್ ಗಳ ಕಣ್ಣೂ ಅದರ ಮೇಲೆ ಬಿದ್ದಿದೆ. ಅವರ ಲೆಕ್ಕಾಚಾರ ನೋಡಿ, ಇಂಡಿಯಾದಲ್ಲಿ ಇವತ್ತು 11,500 ಸ್ಕ್ರೀನ್ ಗಳಿವೆ.

ಅಲ್ಲ, ಸಿನಿಮಾನೇ ನೋಡ್ದೇ ಇರೋ ಚೀನಾದಲ್ಲಿ 65 ಸಾವಿರ ಸ್ಕ್ರೀನ್ ಇದೆ. ಅಮೆರಿಕಾದಲ್ಲಿ 36 ಸಾವಿರ ಸ್ಕ್ರೀನ್ ಇವೆ. ಭಾರತದಲ್ಲಿ ಸಿನೆಮಾನೇ ಉಸಿರಾಡಿ ಬದುಕ್ತಾರೆ. ಆದರೂ ಇರೋದು 10 ಲಕ್ಷ ಜನಕ್ಕೆ ಹನ್ನೆರಡು ಸ್ಕ್ರೀನ್ ಮಾತ್ರ.

ಆ ಕಾರಣಕ್ಕೇ ಇವತ್ತು ಗುಜರಾತ್ ನಲ್ಲಿ ಫ್ಲೂರೋಕೆಮಿಕಲ್ಸ್ ಹೊಂದಿರೋ ಕಂಪನಿ ‘ಐನಾಕ್ಸ್’ ಥಿಯೇಟರ್ ಶುರು ಮಾಡಿದೆ.

ರಿಲಯನ್ಸ್ ಕಂಪನಿ ದೊಡ್ಡ ಹೆಜ್ಜೆ ಹಾಕಿದೆ.

ಸಿನೆಮಾ ಮಾಡೋದಕ್ಕೆ ಬಂದ ಆಡ್ ಲ್ಯಾಬ್ಸ್ ಮಲ್ಟಿಪ್ಲೆಕ್ಸ್ ಗೆ ಕಾಲಿಟ್ಟಿದೆ.

‘ರಾಶಿ ರೊಕ್ಕ ಇರೋರೆಲ್ಲಾ ರಾಚೂಟಪ್ನಂಗಿರಬೇಕು’ ಅನ್ನೋ ಸಿನೆಮಾ ಹಾಡಿನ ಥರಾ ರಾಶಿ ರೊಕ್ಕ ಇರೋರೆಲ್ಲಾ ಮಲ್ಟಿಪ್ಲೆಕ್ಸ್ ಶುರು ಮಾಡೋದಿಕ್ಕೆ ರೆಡಿ ಆಗಿ ನಿಂತಿದ್ದಾರೆ.

ಕಾರ್ಪೋರೇಟ್ ಕಂಪನಿಗಳು ಮಲ್ಟಿಪ್ಲೆಕ್ಸ್ ಹಿಂದೆ ನಿಂತ ಮೇಲೆ ರಿಯಲ್ ಎಸ್ಟೇಟ್ ನವರು ನಾವೇನ್ ಕಡಿಮೆ ಅಂತ ಅವರೂ ರೆಡಿ ಇದ್ದಾರೆ.

ಊರಿಗೆ ಬಂದವರು ನೀರಿಗೂ ಬಂದಿದ್ದಾರೆ. ಬೆಂಗಳೂರಿಗೆ ಬಂದ ಮಲ್ಟಿಪ್ಲೆಕ್ಸ್ ಮಂಗಳೂರು, ಗುಲ್ಬರ್ಗಕ್ಕೂ ಹೋಗಿದೆ.

ಮೊದಲು ದೊಡ್ಡ ದೊಡ್ಡ ಸಿಟಿ, ಆಮೇಲೆ ಜಿಲ್ಲೆಗಳು, ಆಮೆಲೆ ಗಲ್ಲಿಗಳು ಅನ್ನೋ ಸೂತ್ರ

‘ಮಾವಿನ ಮರದಲ್ಲಿ ಕೆಳಗಡೆ ತೂಗ್ತಾ ಇರೋ ಹಣ್ಣನ್ನ ಮೊದಲು ತಿನ್ನಬೇಕು. ಆಮೇಲೆ ಮೇಲಗಡೆ ಇರೋದನ್ನ ಕೈಗೆಟುಕಿಸಿಕೊಳ್ಳಬೇಕು’ ಅನ್ನೋದು ಬ್ಯುಸಿನೆಸ್ ಗೊತ್ತಿರುವವರ ಗುಟ್ಟು.

ಈಗ ಮತ್ತೆ ನನ್ನ ಚಿಂತೆ ತಲೆ ಎತ್ತಿದೆ. ಈಗೇನೋ ಸರಿ, ಆದ್ರೆ ಮುಂದೇನೂ ಮಲ್ಟಿಪ್ಲೆಕ್ಸ್ ನಲ್ಲಿ ‘ಗುಲಾಬಿ ಟಾಕೀಸ್’ನ ಗುಲಾಬಿ ಕಾಣಿಸ್ಕೊಂತಾಳ ಅಂತ.

ಮುಂದಿನ ತಿಂಗಳು ಶಾಲಾ‌‌-ಕಾಲೇಜು ಇಲ್ಲ: ಸಚಿವ

ಬೆಂಗಳೂರು : ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಶಾಲೆಗಳು ಪ್ರಾರಂಭವಾಗುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಶಾಲೆ‌ ಆರಂಭಿಸಲಾಗುತ್ತದೆ ಎಂಬ ಪ್ರಚಾರ ಸುಳ್ಳು. ಕೊರೊನಾಬಕಾರಣ ಶಾಲೆಗಳನ್ನು ಪ್ರಾರಂಭಿಸಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ಭೀತಿಯ ನಡುವೆ ಶಾಲೆಗಳನ್ನು ಪ್ರಾರಂಭಿಸುವುದು ಸಲ್ಲದು. ಮನೆಯಿಂದಲೇ‌‌ ಮಕ್ಕಳಿಗೆ ಕಲಿಸುವ ಬಗ್ಗೆ ಈಗಾಗಲೇ ವಿದ್ಯಾಗಮನ ಯೋಜನೆಯನ್ನು ತರಲಾಗಿದೆ‌ ಎಂದರು.

ಎಲ್ಲ ಮಕ್ಕಳ ಮನೆಗೆ ಈಗಾಗಲೇ ಪಠ್ಯ ಪುಸ್ತಕ ತಲುಪಿಸಿದ್ದೇವೆ. . ಶಿಕ್ಷಣ ಇಲಾಖೆಯಿಂದ ಎರಡು ಚಾನಲ್‌ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದಿದ್ದಾರೆ.

ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಭಾಗ; ಅಂಬೇಡ್ಕರ್ ಏನು ಹೇಳಿದ್ರು ಗೊತ್ತಾ, ಏನ್ ತ್ಯಾಗ ಮಾಡಿದ್ರು ಗೊತ್ತಾ…

1

ಹೆತ್ತೇನಹಳ್ಳಿ ಮಂಜುನಾಥ್


ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005 ರಲ್ಲಿ ತಂದೆಯು ಜೀವಂತವಾಗಿರದಿದ್ದರೂ ಸಹ ಹೆಣ್ಣುಮಕ್ಕಳಿಗೆ ಕೋಪರ್ಸೆನರಿ ಹಕ್ಕುಗಳಿವೆ ಎಂದು ದಿನಾಂಕ 11-08-2020 ರ ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಮಹತ್ವದ ತೀರ್ಪಿನಲ್ಲಿ, ತಿದ್ದುಪಡಿ ಸಮಯದಲ್ಲಿ ತಂದೆ ಜೀವಂತವಾಗಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, 2005 ರ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆಯ ನಂತರ ಮಗಳಿಗೆ ಪಾಲು ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪೂರ್ವಜರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕನ್ನು ನೀಡಿದ ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ 2005, ಹಿಂದಿನ ಅವಧಿಯ ಪರಿಣಾಮವನ್ನು ಬೀರುತ್ತದೆಯೆ ಎಂದು ಕಾನೂನು ವಿಷಯವನ್ನು ಎತ್ತುವ ಮೇಲ್ಮನವಿಗಳಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ತೀರ್ಪು ಪ್ರಕಟಿಸಿದ್ದಾರೆ.

ಐತಿಹಾಸಿಕ ಸುಪ್ರಿಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ನಾವು ಅತ್ಯಂತ ಪ್ರಾಮಾಣಿಕವಾಗಿ ನೆನೆಯಬೇಕಾದದ್ದು ಈ ದೇಶದ ಸಂವಿಧಾನ ಕರ್ತೃ, ಪುಸ್ತಕ ಪ್ರೇಮಿ, ಶೋಷಿತ ಸಮುದಾಯದ ವಿಮೋಚಕ, ಜ್ಞಾನ ಸೂರ್ಯ, ಮಾತೃಹೃದಯಿ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು.

ಬಾಬಾಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಒಂದು ದೇಶದ ಅಭಿವೃದ್ಧಿ ಎಂದರೆ, “ದೇಶದ ಹೆಣ್ಣು ಮತ್ತು ಗಂಡು ಗಳ ಪಾಲ್ಗೊಳ್ಳುವಿಕೆ” ಎಂಬುದಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಧದಷ್ಟು ಜನಸಂಖ್ಯೆ ಹೆಣ್ಣುಮಕ್ಕಳೇ ಆಗಿದ್ದಾಗ ಅವರನ್ನು ವ್ಯವಸ್ಥೆ ಒಳಗೊಳ್ಳದಿದ್ದರೇ ಆ ದೇಶ ಪ್ರಗತಿ ಸಾಧಿಸಲು ಸಾಧ್ಯವೇ ಇಲ್ಲಾ ಎಂದು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು.

ಸ್ವಾತಂತ್ರ್ಯಪೂರ್ವದಲ್ಲಿ ಶೋಷಿತರ, ಅಸ್ಪೃಶ್ಯರ ಮತ್ತು ಮಹಿಳೆಯರ ಸ್ಥಿತಿ ಒಂದೇ ಆಗಿತ್ತು. ಮೇಲ್ವರ್ಗದ ಸಮುದಾಯದಲ್ಲಿ ಹುಟ್ಟಿದಂತ ಹೆಣ್ಣುಮಗಳಿಗೂ ಕೂಡಾ ಯಾವುದೇ ರೀತಿಯಾದಂತಹ ಶೈಕ್ಷಣಿಕ, ರಾಜಕೀಯ, ಆಸ್ತಿ ಹಕ್ಕನ್ನು ಹೊಂದದೇ ಕೊನೆಯವರೆವಿಗೂ ಪುರುಷಾಶ್ರಯದಲ್ಲೆ ಜೀವಿಸಬೇಕಿತ್ತು.

ಸಾಮಾಜಿಕ ಸ್ಥಾನಮಾನಗಳು ಸಿಗದೇ, ಹೆಣ್ಣು ಕೇವಲ ಅಡುಗೆಮನೆ & ಮಕ್ಕಳನ್ನು ಹೆರುವ ಯಂತ್ರವಾಗಿದ್ದಳು.

“ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾಃ” ಎಂದು ಬಾಯಲ್ಲಿ ನುಡಿಯುತ್ತಾ, ಪುರುಷಪ್ರಧಾನ & ಮನುವಾದಿ ವ್ಯವಸ್ಥೆ ಹೆಣ್ಣನ್ನು ದಿನನಿತ್ಯ ಜೀವನದಲ್ಲಿ ನಿರಂತರವಾಗಿ ಶೋಷಣೆ ಮಾಡುತ್ತಾ, ಹೆಣ್ಣನ್ನು ಬೋಗದ ಜೀವನಕ್ಕಾಗೇ ಮಾರ್ಪಾಟು ಮಾಡಿಕೊಂಡಿದ್ದ ಸಾಮಾಜಿಕ ವ್ಯವಸ್ಥೆ ವಿರುದ್ಧ ಗುಡುಗಿದವರು ಬಾಬಾ ಸಾಹೇಬರು.

ಸಾವಿರಾರು ವರ್ಷ ಶೋಷಣಿಯ ಸ್ಥಿತಿಯಲ್ಲಿದ್ದ ಹೆಣ್ಣಿನ ನೋವು, ಅಸಹಾಯಕತೆ ಅರಿತ ಮಾತೃ ಹೃದಯಿ ಬಾಬಾ ಸಾಹೇಬರು.

ಸ್ವಾತಂತ್ರ್ಯ ನಂತರದ ದೇಶದ ಮೊದಲ ಸರ್ಕಾರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿದ್ದರು, ತಮ್ಮ ಅಧಿಕಾರಾವಧಿಯಲ್ಲಿ ಫೆಬ್ರವರಿ 1951 ಸಂಸತ್ತಿನಲ್ಲಿ ಸ್ತ್ರೀ ಸಮಾನತೆಗಾಗಿ “ಹಿಂಧೂ ಬಿಲ್ ಕೋಡ್” ಮಂಡಿಸಿದರು.

ಹಿಂದೂ ಕೋಡ್ ಬಿಲ್ ಕೋಡ್ ನಲ್ಲಿದ್ದ ಪ್ರಮುಖ ನಾಲ್ಕು ಅಂಶಗಳು ಹೀಗಿದ್ದವು.

1. ಮಹಿಳೆಯು ಕೂಡಾ ತನ್ನ ಪತಿಯನ್ನು ಆಯ್ಕೆಮಾಡುವ ಹಕ್ಕು
2. ಪುರುಷರ ಹಾಗೆ ವಿಚ್ಚೇಧಿಸುವ ಹಕ್ಕು
3. ತಂದೆಯ ಆಸ್ತಿಯಲ್ಲಿ ಗಂಡುಮಕ್ಕಳ ಸಮನಾಗಿ ಹೆಣ್ಣುಮಗಳಿಗೂ ಆಸ್ತಿ ಹಕ್ಕು
4.ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ವಿಧವೆ ಸೊಸೆಗೂ ಸಮ ಪಾಲು ಹಕ್ಕು.

ಹಿಂದೂ ಕೋಡ್ ಬಿಲ್ ಕೋಡ್ ಮನುವಾದಿಗಳ & ಸಂಪ್ರದಾಯವಾದಿಗಳ ನಿದ್ರೆ ಕೆಡಿಸಿತು & ಅವರ ಷಡ್ಯಂತ್ರದಿಂದ ಬಿಲ್ ಅನುಮೋದನೆಗೊಳ್ಳಲಿಲ್ಲಾ ಜೊತೆಗೆ ಅವರ ಕೆಂಗಣ್ಣಿಗೂ ಬಾಬಾ ಸಾಹೇಬರು ಗುರಿಯಾದರು.

ಬಿಲ್ ಮಂಡನೆಯಾದ ದಿನ ದೇಶದಲ್ಲಿ ಸಂಪ್ರದಾಯವಾದಿಗಳು ಗಲಭೆಯನ್ನೇ ಸೃಷ್ಟಿಸಿದರು. ದೆಹಲಿ ಒಂದರಲ್ಲೇ 72 ಕಡೆ ನೆಹರು ಮತ್ತು ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ದಹಿಸಿ ಸಂಪ್ರದಾಯವಾದಿಗಳು ವಿಕೃತಿ ಮೆರೆದರು & ಹೀನ ಮನಸ್ಥಿತಿಯ ಆಕ್ರೋಶವನ್ನು ಹೊರಹಾಕಿದರು. ಹಿಂಧೂ ಕೋಡ್ ಬಿಲ್ ನ್ನು ವಿರೋಧಿಸಿದರು.

ಇಷ್ಟೆಲ್ಲಾ ಆದರೂ ಬಾಬಾಸಾಹೇಬರು ತಮ್ಮ ನಿಲುವನ್ನು ಬದಲಾಯಿಸಲಿಲ್ಲಾ ಬದಲಿಗೆ ತಾಯ್ತನ ಮೆರೆದ ಬಾಬಾ ಸಾಹೇಬರು, ದೇಶದ ಶೇಕಡಾ 50 ರಷ್ಟಿರುವ, ಅಸಮಾನತೆ ಕೂಪದಲ್ಲಿ ಬಿದ್ದಿರುವ ಸ್ತ್ರೀಯರಿಗೆ ಸಮಾನತೆ ಇಲ್ಲದ ಸ್ಥಾನ ನನಗೇಕೆ ಬೇಕು ಎಂದು ತಮ್ಮ ಪದವಿಯನ್ನೇ ತ್ಯಾಗ ಮಾಡಿದರು. ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಇಷ್ಟೆಲ್ಲಾ ಆದರೂ ತಮ್ಮ ಹೋರಾಟವನ್ನ ಮುಂದುವರಿಸಿದರು.

ಇಂದು ದೇಶದ ಅತ್ಯಂತ ಉನ್ನತ ಹುದ್ದೆಗಳನ್ನು ಹೆಣ್ಣುಮಕ್ಕಳು ಅನುಭವಿಸಲು ಮುಖ್ಯಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶ್ರಮವೇ ಆಗಿದೆ.

ರಾಜಕೀಯ, ಆಡಳಿತ, ವಿಜ್ಞಾನ, ಸಾಹಿತ್ಯ ಕ್ಷೇತ್ರ ಬಹುತೇಕ ಎಲ್ಲಾ ರಂಗದಲ್ಲೂ ಹೆಣ್ಣು ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಇಂತಹ ಅದೆಷ್ಟೋ ಮಹಿಳೆಯರ ಅಸಮಾನ್ಯ ಸಾಧನೆಗಳ ಹಿಂದಿರುವುದು ಬಾಬಾ ಸಾಹೇಬರ ಪರಿಶ್ರಮವೇ ವಿನಃ ಮತ್ಯಾವುದೂ ಅಲ್ಲಾ.

ಇವುಗಳ ಜೊತೆಗೆ ಸ್ತ್ರೀ ಪರವಾದ ಅದೆಷ್ಟೋ. ಕಾನೂನು ಜಾರಿ ಮಾಡಿದ ಯಶಸ್ಸು ಕೂಡಾ ಬಾಬಾ ಸಾಹೇಬರದ್ದೇ.

1. ಭಾರತ ದೇಶದಲ್ಲಿ ಇವತ್ತು ಎಲ್ಲಾ ಮಹಿಳೆಯರು “ಮಹಿಳಾ ಮಿಸಲಾತಿ”ಮತ್ತು ಹೆರಿಗೆ ರಜೆಯನ್ನು ಪಡೆಯುತ್ತಿದ್ದಾರೆ, ಈ ಸೌಲಭ್ಯವನ್ನ ದೊರಕಿಸಿಕೊಟ್ಟವರು.
2. ಸಂವಿಧಾನದ ಅನುಚ್ಛೇದ 14ರಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮನವಾದ ಕಾನೂನಿನ ರಕ್ಷಣೆಯನ್ನು ಒದಗಿಸಲಾಗಿದೆ.
3. ಅನುಚ್ಛೇದ 15ರಲ್ಲಿ ಲಿಂಗಬೇಧದ ಆಧಾರದ ಮೇಲೆ ತಾರತಮ್ಯ ಧೋರಣೆಯನ್ನು ತೋರಬಾರದೆಂದು ಸೂಚಿಸಲಾಗಿದೆ.
4. ಅನುಚ್ಛೇದ 18ರಲ್ಲಿ ಸರ್ಕಾರಿ ನೌಕರಿ ಅಥವಾ ಯಾವುದೇ ಹುದ್ದೆಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನೀತಿ ತೋರಬಾರದೆಂದು ನಿರ್ದೇಶಿಸಿದೆ.
5. ಅನುಚ್ಛೇದ 21ರಲ್ಲಿ ಮಹಿಳೆಯರು ಮಾನವ ಘನತೆಯಿಂದ ಬದುಕುವ ಹಕ್ಕನ್ನು ಕೊಡುತ್ತದೆ.
6. ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಪ್ರತ್ಯೇಕ ಕಾನೂನುಗಳನ್ನು ಮತ್ತು ಯೋಜನೆಗಳನ್ನು ರೂಪಿಸುವ ಅಧಿಕಾರವನ್ನು ನೀಡಲಾಗಿದೆ.
7. ಅನುಚ್ಛೇದ 51(ಎ)ನಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಆಚರಣೆಗಳನ್ನು ತ್ಯಜಿಸಬೇಕೆಂದು ನಿರ್ದೇಶಿಸಿದೆ.
8. ಅನುಚ್ಛೇದ 243ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕಡ್ಡಾಯ ಮೀಸಲಾತಿ ಒದಗಿಸಲಾಗಿದೆ.
9. ಇದರ ಜೊತೆಗೆ ಕುಟುಂಬ ಕಲ್ಯಾಣ ಯೋಜನೆಯಡಿ ತಾಯಿ ಮರಣವನ್ನು ಪ್ರಧಾನವಾಗಿಟ್ಟಕೊಂಡು, ಎರಡು ಮಕ್ಕಳ ಮೇಲೆ ನಮ್ಮ ಹೆಣ್ಣು ಮಕ್ಕಳಿಗೆ ಮಗು ಹೆರುವ ಸಾಮಾರ್ಥ್ಯವಿಲ್ಲವೆಂದು ಹೇಳಿ ಕಾನೂನು ಜಾರಿ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು & ತಾಯ್ತನ ಮೆರೆದದ್ದು ಇದೇ ಬಾಬಾ ಸಾಹೇಬರು.

ಇದನ್ನೇಲ್ಲಾ ನೀಡಿದ್ದು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ತ್ಯಾಗ, ಶ್ರಮ & ಮಾತೃ ಹೃದಯ ಎಂದು ಅರಿಯಬೇಕಿದೆ.

ಭವ್ಯ ಭಾರತದ ಹೆಣ್ಣು ಮಕ್ಕಳೇ ಅವರ ತ್ಯಾಗ ನೆನಪಿನಲ್ಲಿಡಿ & ನಿಮ್ಮ ಪೂಜೆ ನಿಜವಾಗಿಯೂ ಸೇರಬೇಕಾದದ್ದು ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ.

ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ನೋಡುವ ಸಮಾಜಕ್ಕೆ ಜಾತಿಯೇ ಮುಖ್ಯವಾಯಿತು. ಈ ದೇಶ ಬಾಬಾ ಸಾಹೇಬರನ್ನು ಜ್ಞಾನದ ದೃಷ್ಟಿಯಿಂದ ನೋಡಲೇ ಇಲ್ಲಾ. ಬಾಬಾ ಸಾಹೇಬರ ಅಪಾರ ಓದು ನಮಗೆ ಅರ್ಥವಾಗಲಿಲ್ಲ ಅರ್ಥವಾದವರೂ ಅನರ್ಥಿಸುತ್ತಾ ಹೋದೆವು.
ಅವರ ಸಂಘಟನಾ ಶಕ್ತಿ ನಮಗೆ ಗೊತ್ತಾಗಲಿಲ್ಲಾ,
ಗೊತ್ತಾದವರು ತಮ್ಮ ವೈಯಕ್ತಿಕ ಜೀವನ ಕಟ್ಟಿಕೊಂಡರು.

ಅವರ ಹೋರಾಟದ ಶ್ರಮ ನಮಗೆ ಸರಿಯಾಗಿ ಸಿಗಲಿಲ್ಲ, ಸಿಗಲು ಮನುವಾದಿಗಳು ಬಿಡಲಿಲ್ಲ.
ಅವರ ಮಾನವೀಯತೆ ನಮಗೆ ಬರಲಿಲ್ಲ, ಬಾಬಾ ಸಾಹೇಬರನ್ನೇ ಅಮಾನವೀಯವಾಗಿ ನಡೆಸಿಕೊಂಡೆವು.

ಸ್ವಾರ್ಥಿಗಳೇ ತುಂಬಿರುವ ದೇಶದಲ್ಲಿ ನಿಸ್ವಾರ್ಥವಾಗಿ ಜೀವ & ಜೀವನವನ್ನೇ ತೇಯ್ದ ಬಾಬಾ ಸಾಹೇಬರನ್ನು
ಜಾತಿ ಕನ್ನಡಕ ಧರಿಸಿ ನೋಡಬೇಡಿ, ಜಾತಿ ಕನ್ನಡಕವನ್ನು ತೆಗೆದು ನೋಡಿ ಬಾಬಾ ಸಾಹೇಬರು ಆಕಾಶದಷ್ಟು ಅಗಲವಾಗಿ ಸಮುದ್ರದಷ್ಟು ಆಳವಾಗಿ ಕಾಣುತ್ತಾರೆ”.

ಜೈ ಭೀಮ್


✍️ ಹೆಚ್. ಎನ್ ಮಂಜುನಾಥ್ ಹೆತ್ತೇನಹಳ್ಳಿ ಅವರು ತುಮಕೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಮಾಜಿ ಸದಸ್ಯರು ಹಾಗೂ ಬುದ್ಧ, ಬಸವಣ್ಣ, ಅಂಬೇಡ್ಕರ್ ಕುರಿತ ಆಳ ಅಧ್ಯಯನಕಾರರು.

ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು..

0

ಜಿ.ಎನ್.ಮೋಹನ್


ಅವರು ಅಕ್ಷರಶಃ ಕಣ್ಣೀರಾಗಿ ಹೋಗಿದ್ದರು

ನಾನು ಅವರ ಮನೆಯ ಗೇಟಿನ ಆಗಳಿ ತೆರೆಯುತ್ತಿದ್ದಂತೆಯೇ ಮಹಡಿಯಲ್ಲಿ ಒಂದು ಜೀವ ನಸುನಕ್ಕಿತು. ಅದೇ ಉತ್ಸಾಹದಲ್ಲಿ ಮನೆಯೊಳಗೆ ಇದ್ದ ಮನೆಯೊಡತಿಯನ್ನು ‘ನೋಡು ಬಾ ಇಲ್ಲಿ’ ಎಂದು ಕೂಗಿ ಕರೆಯಿತು. ನಾನು ಮೆಟ್ಟಿಲನ್ನು ಏರಿ ಅವರೆದುರು ನಿಂತಾಗ ಅಕ್ಷರಶಃ ಕಣ್ಣೀರಾಗಿ ಹೋಯಿತು

ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು

ತಮ್ಮ ನಿಡುಗಾಲದಲ್ಲಿ ತನ್ನನ್ನು ನೋಡಲು ಒಬ್ಬ ಬರುತ್ತಾನೆ ಎನ್ನುವುದೇ ಅವರ ಸಂತಸಕ್ಕೆ ಕಾರಣವಾಗಿತ್ತು.

ನಾನು ಹಾಗೂ ಅವರು ಹಾಗೆ ಕೈ ಕುಲುಕಲು ಕಾರಣವಾಗಿದ್ದು ಇನ್ನೊಬ್ಬ ಹಿರಿಯ ಅನ್ನದಾನಯ್ಯ ಪುರಾಣಿಕ್ ಅವರು. ಸ್ವಾತಂತ್ರ್ಯ ಹೋರಾಟಗಾರರೂ, ಬರವಣಿಗೆಯನ್ನು ಪ್ರೀತಿಸಿದವರೂ ಆದ ಅನ್ನದಾನಯ್ಯನವರು ಜೀವನದ ಕೊನೆಯಲ್ಲಿದ್ದರು.

ಆಗ ಮಾಧ್ಯಮ ಲೋಕದ ಹಿರಿಯರಾದ, ‘ಈಟಿವಿ’ ಸಂಸ್ಥೆ ಕಟ್ಟುವಲ್ಲಿ ಮಹತ್ತರ ಜವಾಬ್ದಾರಿ ಹೊತ್ತ ಪವನ್ ಕುಮಾರ್ ಮಾನ್ವಿ ಅವರು ಫೋನ್ ಮಾಡಿ ಈ ಬಗ್ಗೆ ಜನಕ್ಕೆ, ಸರ್ಕಾರಕ್ಕೆ ತಿಳಿಯುವಂತಾಗಬೇಕಲ್ಲ ತುಂಬಾ ಹಿರಿ ಜೀವ ಅದು ಎಂದಿದ್ದರು.

ಹಾಗೆ ಆ ಕೆಲಸಕ್ಕೆ ಮುಂದಾದಾಗ ಅವರ ಸಹೋದರರಾದ ಬಸವರಾಜ ಪುರಾಣಿಕ್ ಅವರ ಹೆಸರು ಮತ್ತೆ ಮತ್ತೆ ಬಂದಿತ್ತು. ‘ಕಾವ್ಯಾನಂದ’ ಎಂದೇ ಹೆಸರಾದ ಸಿದ್ಧಯ್ಯ ಪುರಾಣಿಕ್ ಅವರ ಇಬ್ಬರು ಸಹೋದರರು ಈ ಅನ್ನದಾನಯ್ಯ ಹಾಗೂ ಬಸವರಾಜ ಪುರಾಣಿಕ್ ಅವರು.

ಅನ್ನದಾನಯ್ಯನವರು ಇಲ್ಲವಾದರು ಎನ್ನುವುದರೊಂದಿಗೆ ಇಡೀ ಪ್ರಕರಣ ನನ್ನ ಮನದ ಹಿನ್ನೆಲೆಗೆ ಸರಿಯಿತು

ಈ ಮಧ್ಯೆ ಒಂದು ಮೇಲ್ ನನ್ನ ಇನ್ಬಾಕ್ಸ್ ನಲ್ಲಿ ಸದ್ದು ಮಾಡಿತು. ಅದರಲ್ಲಿ ಇದ್ದ ಮೂರ್ನಾಲ್ಕು ಸಾಲುಗಳು ನನ್ನನ್ನು ಆಕರ್ಷಿಸಿಬಿಟ್ಟಿತು.

ಎಸ್ ಚಂದ್ರಶೇಖರ್ ಅವರಿಗೆ ನೊಬೆಲ್ ಘೋಷಣೆಯಾಗುತ್ತದೆ. ಆಗ ಅಮೆರಿಕಾದ ಪತ್ರಿಕೆಗಳೆಲ್ಲಾ ಮುಗಿಬಿದ್ದು ಅವರ ಸಂದರ್ಶನ ನಡೆಸುತ್ತದೆ. ‘ಈಗ ನೊಬೆಲ್ ಬಂದಾಯ್ತಲ್ಲ.. ಇನ್ನು ನಿಮ್ಮ ಮುಂದಿನ ಆಸೆ ಏನು’ ಎಂದು ಕೇಳುತ್ತಾರೆ.

ಎಸ್ ಚಂದ್ರಶೇಖರ್ ವಿಜ್ಞಾನದ ಇನ್ನೇನೋ ಹೇಳುತ್ತಾರೆ ಎಂದು ಎಲ್ಲರೂ ಕಿವಿ ತೆರೆದು ಕುಳಿತಿದ್ದಾಗ ಅವರು ‘ನಾನು ಶೇಕ್ಸ್ ಪಿಯರ್ ನನ್ನ ಓದಬೇಕು’ ಎನ್ನುತ್ತಾರೆ.

”ನನಗೆ ಬಹಳ ದಿನಗಳಿಂದಲೂ ಒಂದು ಇಚ್ಛೆ ಇದೆ. I want to read Shakespeare between the lines. ಈಗ ಆರಾಮಾಗಿ ಓದಬಲ್ಲೆ”.

ಜಗತ್ತು ನಿಬ್ಬೆರಗಾಗುತ್ತದೆ

ಅದನ್ನು ಮೇಲ್ ಮಾಡಿ ನನ್ನ ಗಮನಕ್ಕೆ ತಂದವರು- ಬಸವರಾಜ ಪುರಾಣಿಕ್

ನನಗೋ ಇಂತಹ ಚಿಕ್ ಚಿಕ್ ಸಂಗತಿಗಳಲ್ಲೇ ಮಹಾನ್ ಆಸಕ್ತಿ
ಹಾಗಾಗಿ ಮತ್ತೆ ಅವರಿಗೆ ಬರೆದೆ
ಆಮೇಲೆ..??
-ಥೇಟ್ ಕಥೆ ಹೇಳುವ ಅಜ್ಜನ ಮುಂದೆ ಕೂತ ಮಗು ಕೇಳುವ ಹಾಗೆ

ಬಸವರಾಜ ಪುರಾಣಿಕರಿಂದ ಮತ್ತೊಂದು ಮೇಲ್ ಬಂತು

ಎಸ್ ಚಂದ್ರಶೇಖರ್ ಶೇಕ್ಸ್ ಪಿಯರ್ ನನ್ನ ಓದಬೇಕು ಎಂದು ಸುಮ್ಮನೆ ಹೇಳಿರಲಿಲ್ಲ. ಓದಿದರು. ಓದಿಯೇ ಓದಿದರು

ಅಷ್ಟೇ ಅಲ್ಲ ಸರಿಯಾಗಿ ಆ ಓದನ್ನು ಅರಗಿಸಿಕೊಂಡರು. ಅಷ್ಟೂ ಅಲ್ಲ ಶೇಕ್ಸ್ ಪಿಯರ್, ನ್ಯೂಟನ್ ಹಾಗೂ ಬೀಟೊವನ್ ಸೃಜನಶೀಲತೆಯ ಬಗ್ಗೆ ಬರೆದೂ ಬಿಟ್ಟರು.
1987ರಲ್ಲಿ ಅವರ ಈ ಕೃತಿ ಪ್ರಕಟವಾಯಿತು.:

Truth and Beauty
Aesthetics and Motivations in Science.
The University of Chicago Press.
ಆ ಕೃತಿಯ ಮೂರನೆಯ ಅಧ್ಯಾಯ,
Shakespeare, Newton and Beethoven-
or Patterns of Creativity

ಹೀಗೆ ಬಸವರಾಜರಿಗೆ ನಾನು ಪ್ರಶ್ನೆ ಕೇಳುತ್ತಲೇ ಇದ್ದೆ ಅವರು ಉತ್ತರಿಸುತ್ತಲೇ ಇದ್ದರು.

ಅವರು ‘ಅವಧಿ’ಯ ಎಷ್ಟು ಒಳ್ಳೆಯ ಓದುಗರಾಗಿದ್ದರೆಂದರೆ ‘ಅವಧಿ’ಯಲ್ಲಿ ಯಾವುದೇ ಒಳ್ಳೆ ಬರಹ ಓದಿದರೂ ನಾನು ಅವರಿಗೆ ಆ ಲೇಖಕರ ನಂಬರ್ ಕೊಡಬೇಕಿತ್ತು. ಅವರು ಆ ಬರಹಗಾರರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರ ಬರಹ ಯಾವ ಕಾರಣಕ್ಕೆ ಇಷ್ಟವಾಯಿತು ಅದಕ್ಕೆ ಇನ್ನೂ ಏನು ಪೂರಕ ಓದು ಮಾಡಬಹುದು ಎಂದು ವಿವರಿಸುತ್ತಿದ್ದರು.

ಇದೆಲ್ಲಾ ನೋಡುತ್ತಿದ್ದ ನಾನು ಅರೆ ಇಷ್ಟೊಂದು ಜನರನ್ನು ಹಚ್ಚಿಕೊಳ್ಳುವ ಮನುಷ್ಯ ಅವರನ್ನು ಭೇಟಿಯೂ ಆದರೆ ಇನ್ನೂ ಎಷ್ಟು ಸಂತೋಷ ಪಡುತ್ತಾರೋ ಎಂದುಕೊಂಡು ಒಂದು ದಿನ ಫೋನಾಯಿಸಿದೆ.

ಸಾರ್ ‘ಕಪ್ಪಣ್ಣ ಅಂಗಳದಲ್ಲಿ ಗೋಪಾಲ ವಾಜಪೇಯಿ ಅವರಿಗೆ ನುಡಿ ನಮನವಿದೆ ಬರುತ್ತೀರಾ..

ಆ ಕಡೆಯಿಂದ ಬಸವರಾಜ ಪುರಾಣಿಕರು ನಕ್ಕುಬಿಟ್ಟರು.

‘ನನ್ನ ಮನಸ್ಸಿಗೆ ಉತ್ಸಾಹವಿದೆಯಪ್ಪಾ, ದೇಹಕ್ಕಲ್ಲ..’ ಎಂದರು. ಅವರ ದನಿಯಲ್ಲಿನ ಸಣ್ಣ ನೋವು ನನ್ನನ್ನು ತಾಕಿಬಿಟ್ಟಿತು.

ತಕ್ಷಣ ಹೇಳಿದೆ -ಸಾರ್ ನೀವು ರೆಡಿ ಇರಿ ನಾನೇ ಬರುತ್ತೇನೆ ಹೋಗಿ ಬರೋಣವಂತೆ. ನಿಮ್ಮನ್ನು ಮತ್ತೆ ಮನೆಗೆ ಮುಟ್ಟಿಸುವುದು ನನ್ನ ಜವಾಬ್ದಾರಿ.

ಆ ಕಡೆ ಒಂದಷ್ಟು ಹೊತ್ತು ಮೌನ. ನಂತರ ಕೇಳಿಸಿದ್ದು ನಿಟ್ಟುಸಿರು..

ಆ ನಂತರವೇ ನಾನು ಅವರ ಮನೆಯ ಬಾಗಿಲಲ್ಲಿ ನಿಂತದ್ದು. ಅವರ ಉತ್ಸಾಹ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ತಮ್ಮ ಮನೆಯವರ ಮುಂದೆ ಒಂದು ಹೆಮ್ಮೆಯಿಂದ ಓಡಾಡಿದರು. ನನ್ನನ್ನು ಹುಡುಕಿಬರುವವರು ಇನ್ನೂ ಇದ್ದಾರೆ ಎನ್ನುವುದು ಅವರ ವಯಸ್ಸನ್ನು ೨೦ ವರ್ಷವಾದರೂ ಕಡಿಮೆ ಮಾಡಿತ್ತು.

ಮನೆ ತುಂಬಾ ಓಡಾಡಿದರು. ಹಣ್ಣು ಹಂಪಲು ಕೊಟ್ಟರು. ಪತ್ನಿ, ಹೆಸರಾಂತ ವೈದ್ಯೆಯನ್ನು ಪರಿಚಯಿಸಿದರು. ಮಕ್ಕಳ ಬಗ್ಗೆ ಹೇಳಿದರು. ‘ಅವಧಿ’ ಓದುವುದಕ್ಕಾಗಿಯೇ ಲ್ಯಾಪ್ ಟಾಪ್ ಕಲಿತದ್ದು ಅದನ್ನು ಬಳಸುವುದು.. ಹೀಗೆ..

ಆ ನಂತರ ನಾವು ಕಪ್ಪಣ್ಣ ಅಂಗಳ ತಲುಪಿದೆವು. ಎಲ್ಲರಿಗೂ ಪ್ರಶ್ನೆ ಇದು ಯಾರು ನನ್ನೊಂದಿಗೆ.

ನಾನಂತೂ ನಮ್ಮ ಅಜ್ಜ, ಊರಿಂದ ಬಂದಿದ್ದಾರೆ ಎಂದು ಯಾರೂ ನಂಬದ ಮಾತನ್ನು ಆಡುತ್ತಾ ಅವರನ್ನು ಒಳಗೆ ಕರೆದುಕೊಂಡು ಹೋದೆ.

ಗೋಪಾಲ ವಾಜಪೇಯಿ ಬಗ್ಗೆ ನಾವು ನಾಲ್ಕಾರು ಜನ ಮಾತಾಡಿರಬೇಕು ಆಗ ಅವರು ನಾನೂ ಮಾತನಾಡುತ್ತೇನೆ ಎಂದು ಉಸುರಿದಾಗ ನನಗೆ ಅವರಿಗೆ ಬಂದ ಹುಕಿ ನೋಡಿ ಸಂತೋಷವಾಯ್ತು. ವೇದಿಕೆಗೆ ಕರೆದರು.

ನನಗೂ, ನೆರೆದ ಮಂದಿಗೂ ಆಗ ಆಯ್ತು ನೋಡಿ ಬಸವರಾಜ ಪುರಾಣಿಕರ ಸರಿಯಾದ ಪರಿಚಯ.

ಆ ದನಿ, ಸ್ಪಷ್ಟತೆ, ಮಾತಲ್ಲಿನ ರಸಿಕತೆ ಅಷ್ಟೇ ಅಲ್ಲ ಅವರು ತಾವು ಬಾಗಲಕೋಟೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾಗ ಮೊದಲು ಗೋಪಾಲ ವಾಜಪೇಯಿ ಅವರಿಗೆ ವೇದಿಕೆ ಒದಗಿಸಿದ್ದೂ ‘ದೊಡ್ಡಪ್ಪ’ ನಾಟಕದ ನಟಿ ನಾಟಕದ ದಿನ ಹೊರಗೆ ಬರದಿದ್ದಾಗ ತಾವೇ ಖುದ್ದು ಹೋಗಿ ಕೈ ಮುಗಿದು ಮನೆಯವರನ್ನು ಒಪ್ಪಿಸಿ ಕರೆತಂದು ನಾಟಕ ನಡೆಯುವಂತೆ ಮಾಡಿದ್ದೂ ಎಲ್ಲವನ್ನೂ ವಿವರಿಸುತ್ತಾ ಹೋದರು.

ಸಭೆ ದಂಗಾಗಿತ್ತು

ಆ ನಂತರ, ಅದುವರೆಗೆ ಅವರಿಗೆ ಫೋನ್ ನಂಬರ್ ಮಾತ್ರವಾಗಿದ್ದವರು ಜೀವಂತವಾಗಿ ಅವರ ಕೈ ಕುಲುಕಲು ಸಾಲು ನೆರೆದಾಗ ಅವರ ಸಂತೋಷ ನೋಡಬೇಕಿತ್ತು.

ಆಮೇಲೆ ಮತ್ತೆ ನಮ್ಮದು ಮೇಲ್ ಸಂಭಾಷಣೆ. ನನಗೆ ಅದು ಓದು, ಇದು ಓದು ಎಂದು ರೆಫೆರೆನ್ಸ್ ಕಳಿಸುತ್ತಲೇ ಇದ್ದರು. ಅದೆಲ್ಲವೂ ಅಪರೂಪದ ಪುಸ್ತಕಗಳೇ.

ಹಾಗಾಗಿ ನಾನು ಅದನ್ನು ‘ಅವಧಿ’ಯಲ್ಲೂ ಪ್ರಕಟಿಸುತ್ತಾ ಹೋದೆ. ಅವರು ‘ಇಳಿಗಾಲದಲ್ಲಿ ನನಗೆ ನೀನು ಯೌವನ ಕೊಟ್ಟೆ’ ಎನ್ನುತ್ತಿದ್ದರು.

ಆ ನಂತರ ಮತ್ತೆ ನಾನು ಅವರ ಏಕತಾನತೆ ಮುರಿಯಲೆಂದೇ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಇದ್ದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದೆ. ಅಲ್ಲಿದ್ದ ಪ್ರತಿಯೊಬ್ಬರೂ ಎಷ್ಟು ಮುತುವರ್ಜಿಯಿಂದ ಅವರನ್ನು ನೋಡಿಕೊಂಡರೆಂದರೆ ಅವರಿಗೆ ಇನ್ನೂ ತಾರುಣ್ಯ ಹೆಚ್ಚಾಗಿತ್ತು.

ಕಾರ್ಯಕ್ರಮ ಮುಗಿಸಿ ನೋಡುತ್ತೇನೆ. ಅವರಿಲ್ಲ. ಎಲ್ಲಿ ಹೋದರು ಎಂದು ಹುಡುಕುತ್ತ ಹೊರಗೆ ಬಂದರೆ ಅಲ್ಲಿ ಯುವಕರ ದಂಡು ಅವರೊಡನೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿತ್ತು.

ನನಗೋ ಆಶ್ಚರ್ಯ. ಹತ್ತಿರ ಹೋದರೆ ಪುರಾಣಿಕರ ಮುಖ ಅಷ್ಟಗಲ ಅರಳಿ ಹೋಗಿತ್ತು. ನನ್ನನ್ನು ಹತ್ತಿರ ಕರೆದವರೇ ‘ನೋಡು, ನೋಡು ಇವರೆಲ್ಲಾ ನನ್ನ ಸ್ಟೂಡೆಂಡ್ಸ್. ಇವ ನನ್ನ ಮನೆಯಲ್ಲೇ ಊಟ ಮಾಡುತ್ತಿದ್ದ, ಇವ ನಾನು ಊರಿಗೆ ಹೋದರೆ ಮನೆಯಲ್ಲಿ ಕಾವಲಿರುತ್ತಿದ್ದ, ಇವ ತುಂಟ, ಇವ ಶಾಣ್ಯಾ..’ ಎನ್ನುತ್ತಾ ಆ ಕಾಲದ ಹುಡುಗರಾಗಿಬಿಟ್ಟಿದ್ದರು.

ನಾನು ದೂರ ಹೋಗಿ ಕುಳಿತೆ. ತಾಯಿ ಹಕ್ಕಿಯ ಸುತ್ತ ಒಂದು ಗುಂಪು. ಸಾಕಷ್ಟು ಕಲರವ.

ಆ ದಿನ ಮನೆಯ ಬಳಿ ಅವರನ್ನು ಡ್ರಾಪ್ ಮಾಡಿದಾಗ ನನ್ನ ಕೈ ಹಿಡಿದವರು ಬಿಡಲೇ ಇಲ್ಲ. ಮತ್ತೆ ಕಣ್ಣಂಚು ಒದ್ದೆಯಾಗಿತ್ತು.

ಅದು ಕೊನೆ. ಆ ನಂತರ ಅವರು ಆಸ್ಪತ್ರೆ ಸೇರಿದರು. ಆಗ ತಾನೇ ರೆಕ್ಕೆ ಪಡೆಯುತ್ತಿದ್ದ ಹಕ್ಕಿಯೊಂದು ಆಸ್ಪತ್ರೆಯ ಅಂಗಳ ಸೇರಿ ಹೋಗಿತ್ತು ಅವರು ಇಲ್ಲವಾದರು.

ಓದುಗರ ಕೈಗೆ ಲೇಖನಿ…

0

ಜಿ ಎನ್ ಮೋಹನ್


ಓದುಗರ ಕೈಗೆ ಲೇಖನಿ–

ಜಿ.ಆರ್. ದೃಢ ಕಂಠದಲ್ಲಿ ಹೇಳಿದ ಮಾತಿದು.

ಮಾಧ್ಯಮಗಳ ಜಗತ್ತಿನಲ್ಲಿ ಈಗ ಹೊಸ ಚಡಪಡಿಕೆ ಆರಂಭವಾಗಿದೆ. ಎಷ್ಟು ಪತ್ರಿಕೆ ತಿರುವಿ ಹಾಕಿದರೂ, ಎಷ್ಟು ಚಾನೆಲ್ ಗಳನ್ನು ಮಗುಚಿದರೂ ತಮಗೆ ಬೇಕಾದ ಸುದ್ದಿ ಸಿಗುತ್ತಿಲ್ಲ ಎಂಬ ಚಡಪಡಿಕೆ ಓದುಗನದ್ದು.

ಆಕಾಶದಲ್ಲಿ ತೇಲಿ ಚಂದ್ರನ ಮೇಲೆ ನೀರಿದೆಯೇ ಎಂದು ಪರೀಕ್ಷಿಸುತ್ತಿರುವ ನಾಸಾ ವಿಜ್ಞಾನಿಗಳ ಶೋಧನೆಗಿಂತ ಹಾರೋಗೇರಿಯ ನೆಲದಲ್ಲಿ ಇಷ್ಟು ನೀರು ಹಿಂಗಿದ್ದು ಹೇಗೆ ಎಂಬುದು ಗೊತ್ತಾಗಬೇಕು..

ಹಿಲ್ಲರಿ ಕ್ಲಿಂಟನ್ ಬರೆದ ಪುಸ್ತಕಕ್ಕಿಂತಲೂ ಪಿ. ಸಾಯಿನಾಥ್ ಭಾರತದ ಹಳ್ಳಿಗಳನ್ನು ಕದಡುತ್ತಿರುವ ಸಮಸ್ಯೆಗಳ ಬಗ್ಗೆ ಬರೆದ ಪುಸ್ತಕ ಗೊತ್ತಾಗಬೇಕು.

..ಸಯಾಮಿ ಅವಳಿಗಳ ತಲೆ ಬೇರ್ಪಡಿಸಲು ನಡೆದ ಶಸ್ತ್ರಚಿಕಿತ್ಸೆಗಿಂತ ಆಸ್ಪತ್ರೆಯ ಮೆಟ್ಟಿಲು ಹತ್ತಲಾಗದೆ ಕಣ್ಣು ಮುಚ್ಚುತ್ತಿರುವ ಎಳೆಯ ಕಂದಮ್ಮಗಳ ಕಥೆ ಬೇಕು, ಡೇವಿಡ್ ಬೆಕಮ್ ಫುಟ್ಬಾಲ್ ಒದೆಯುವುದನ್ನು ನೋಡಲು ಸಾಗರದಷ್ಟು ಜನ ಸೇರಿದ್ದರ ಬಗ್ಗೆಗಿಂತ ಬಿಹಾರದಲ್ಲಿ ಕೂಲಿ ಕೆಲಸದ ಯುವಕರು ಕನಸನ್ನೇ ಬಂಡವಾಳ ಮಾಡಿಟ್ಟುಕೊಂಡು ಕಟ್ಟಿದ ತಂಡದ ಆಟ ನೋಡಲು ಜನರೇ ಇಲ್ಲದಿರುವ ನಿಟ್ಟುಸಿರು ಬೇಕು.

ಬಾಹ್ಯಾಕಾಶ ತಂತ್ರಜ್ಞಾನ ಬಳಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ದೇಶಕ್ಕೆ ನಡೆಯುವ ಶಸ್ತ್ರ ಚಿಕಿತ್ಸೆಗಿಂತ ಉತ್ತರ ಕನ್ನಡದ ಮಂಚಿಕೇರಿಯಲ್ಲಿ ಇದ್ದ ಕೂಲಿ ಹಣವನ್ನೆಲ್ಲಾ ಕೊಟ್ಟರೂ ನಕಲಿ ಔಷಧಿ ನೀಡುತ್ತಿರುವ ಖೊಟ್ಟಿ ವೈದ್ಯರ ಕರಾಮತ್ತು ಗೊತ್ತಾಗಬೇಕು.

ಮಾಧ್ಯಮ ಒಂದು ವ್ಯಾಪಾರವಾಗಿರುವಾಗ ನಿಟ್ಟುಸಿರುಗಳ ಲೆಕ್ಕ ಹಾಕಲು ಪುರುಸೊತ್ತಾದರೂ ಎಲ್ಲಿ?

ದೆಹಲಿಯಿಂದ ಹಿಡಿದು ನಮ್ಮ ಊರ ಅಂಗಳದಲ್ಲಿ ಬೆಡಗಿನಿಂದ ಹೆಜ್ಜೆ ಹಾಕುವ ಮುಗುಳ್ನಗೆಯ ಸುಂದರಿಯರ ಫ್ಯಾಷನ್ ಷೋ ಹಾಗೂ ನಿಟ್ಟುಸಿರುಗಳ ಮಧ್ಯೆ ಆಯ್ಕೆ ಬಂದಾಗ ಐದು ಕಾಲಂ ಫೋಟೋ ಆಗುವ, ದಿನಗಟ್ಟಲೇ ಬರೆದರೂ ಮುಗಿಯದ ಸುದ್ದಿಯ ಅರ್ಹತೆ ಇರುವುದು ಆ ಮುಗುಳ್ನಗೆಯ ಒಡತಿಯರಿಗೆ.

ಹಾಗಾಗಿಯೇ ಜಿ. ಆರ್. ದೃಢವಾಗಿ ಹೇಳಿದ್ದು-

‘ಓದುಗರ ಕೈಗೆ ಲೇಖನಿ.’

‘ನಮ್ಮೊಡನಿದ್ದೂ ನಮ್ಮಂತಾಗದ’ ಮಾಧ್ಯಮಗಳ ಮಧ್ಯೆ ನಮ್ಮನ್ನು ನಾವೇ ಹುಡುಕಿಕೊಳ್ಳುವ ಪ್ರಯತ್ನ.

ಭಾರತದ ಮಾಧ್ಯಮಗಳ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಬ್ರಿಟನ್-ಅಮೆರಿಕಾದ ಕಣ್ಣಿನಿಂದ ಸುದ್ದಿಯನ್ನು ನೋಡುವ ದಿನಗಳು ಇನ್ನೂ ಮುಗಿದಿಲ್ಲ.

ಈ ಮಧ್ಯೆಯೇ ಬಂದ ಜಾಗತೀಕರಣದ ಅಲೆ ಸುದ್ದಿಯ ಅರ್ಥವನ್ನೇ ಬದಲಿಸಿದೆ. ಮಾತ್ರವಲ್ಲ, ಸುದ್ದಿಗಳನ್ನು ವಿದೇಶೀ ಕಣ್ಣಿನಿಂದ ನೋಡುವ ಪ್ರವೃತ್ತಿಗೆ ಇನ್ನಷ್ಟು ಮಣೆ ಹಾಕಿದೆ.

ಆದ್ದರಿಂದಲೇ ಓದುತ್ತಿರುವ ಸುದ್ದಿಗೂ, ಓದಬೇಕಾಗಿದ್ದ ಸುದ್ದಿಗೂ ವಿಪರೀತ ಅಂತರ.

ಭಾರತದ ಬಡತನ, ಹಸಿವಿನ ಸಾವುಗಳು, ಇದಕ್ಕೆ ಬೇಕಾದ ಪರಿಹಾರ, ಎಲ್ಲರೂ ಬದುಕಲು ಅವಕಾಶವಿರುವ ದೇಶ ಕಟ್ಟುವ ಚಿಂತನೆಗಳು ಈಗ ಬದಲಾದ ವ್ಯಾಕರಣದಿಂದಾಗಿ ಮರೆಯಾಗಿ ಹೋಗಿವೆ.

ಇಂತಹ ಸಂದರ್ಭದಲ್ಲಿಯೇ ಜಿ. ಆರ್. ಓದುಗರ ಕೈಗೇ ಲೇಖನಿ ನಿಡುವ ಮಾತುಗಳನ್ನು ಮುಂದಿಟ್ಟಿದ್ದಾರೆ.

ಓದುಗನಿಗೆ ಬೇಕಾದದ್ದನ್ನು ಓದುಗನೇ ಬರೆಯುವಂತಾದರೆ ಎಂಬುದು ಈ ಕಲ್ಪನೆಯ ಹಿಂದಿರುವ ಆಶಯ. ಬೇಕಾದ ಸುದ್ದಿಗಳೇ ಇಲ್ಲದಿರುವ ದಿನಗಳಲ್ಲಿ ಬೇಕಾದ ಸುದ್ದಿಗಳನ್ನು ಹುಡುಕುವ ಪ್ರಯತ್ನ.

ಪತ್ರಿಕೆ ಎನ್ನುವುದು ಯಾರೋ ರೂಪಿಸಬೇಕಾದದ್ದು, ಸುದ್ದಿ ಎನ್ನುವುದು ಇನ್ನಾರೋ ನಿರ್ಧರಿಸಬೇಕಾದದ್ದು ಎನ್ನುವ ದಿನಗಳಿಗೆ ಕೊನೆ ಹಾಡುವ ನಿರ್ಧಾರ ಇದರ ಹಿಂದಿದೆ.

ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಳ್ಳಬೇಕಾದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಬೇಕಾದ ಸುದ್ದಿಗಳು ಸಿಗದ ಈ ಚಡಪಡಿಕೆಯ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಬಹುಶಃ ಓದುಗನ ಕೈಗೆ ಲೇಖನಿ ನೀಡುವ ಪ್ರಯತ್ನ ಪರ್ಯಾಯ ಮಾಧ್ಯಮವನ್ನು ಹುಡುಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.

ಯಾವುದೇ ಪತ್ರಿಕೆಯ ‘ವಾಚಕರ ವಾಣಿ’ ವಿಭಾಗಗಳು ಜನರ ಸಂಪಾದಕೀಯ ಎಂದೇ ಹೆಸರಾಗಿದೆ. ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸುವ ಓದುಗರು ತೆರೆದಿಡುವ ಕಣ್ಣೋಟ ಪತ್ರಿಕೆಯ ಸುದ್ದಿಗಳನ್ನೂ ಮೀರಿ ನಿಲ್ಲುವ ಗುಣಗಳನ್ನು ಹೊಂದಿರುತ್ತದೆ. ಸುದ್ದಿಗಳ ಅನೇಕ ವೇಳೆ ಮುಚ್ಚಿಡುವ, ಬಿಚ್ಚಿಡುತ್ತಿದ್ದೇವೆ ಎನ್ನುವ ಭ್ರಮೆ ಹುಟ್ಟಿಸುತ್ತಲೇ ಬೇಕಾದ್ದನ್ನು ಮಾತ್ರ ಹೇಳುವ, ಎಷ್ಟೋ ವೇಳೆ ವಶೀಲಿಬಾಜಿ ನಡೆಸುವಾಗ ಈ ಜನತೆಯ ಸಂಪಾದಕೀಯಗಳು ಸಮಾಜದ ಸ್ಪಂದನವನ್ನು ನೀಡುತ್ತವೆ.

‘ಸಮುದಾಯ’ ಸಂಘಟನೆ ಹೊಸ ಮೌಲ್ಯಗಳತ್ತ ಬೀದಿನಾಟಕಗಳ ಜಾಥಾ ಹಮ್ಮಿಕೊಂಡಾಗ ವಾಚಕರವಾಣಿಗಳು ಯುದ್ಧರಂಗವಾಗಿತ್ತು. ಪರ ವಿರೋಧಗಳ ಸುರಿಮಳೆ ಯಾವುದನ್ನೂ ಮುಚ್ಚಿಡದೆ ಜನರಿಗೆ ದನಿ ನೀಡಿದ್ದವು.

ಈ ಕಾರಣಕ್ಕಾಗಿಯೇ ಓದುಗ ತನಗೆ ದೃಷ್ಟಿಕೋನವನ್ನು ರೂಪಿಸಿಕೊಳ್ಳುವ, ತನಗೆ ಬೇಕಾದ ಮಾರ್ಗವನ್ನು ಆರಿಸಿಕೊಳ್ಳುವ ಅವಕಾಶ ಸೃಷ್ಟಿಯಾಗುತ್ತಿತ್ತು.

ಈಗ ಸುದ್ದಿ ಅತ್ಯುತ್ತಮ ರೀತಿಯಲ್ಲಿ ಪ್ಯಾಕ್ ಮಾಡಲ್ಪಟ್ಟ ಒಂದು ಬಿಕರಿಗಿರುವ ಉತ್ಪನ್ನ ಎನ್ನುವ ದಿನಗಳು ಬಂದಿವೆ. ಆದ್ದರಿಂದಲೇ ಓದುಗ ತನಗೆ ಅನ್ನಿಸಿದ್ದೆಲ್ಲವನ್ನೂ ಹೇಳುವ, ತನಗೆ ಅನ್ನಿಸಿದ್ದಕ್ಕೆ ನಾಜೂಕಿನ ಯಾವುದೇ ಪ್ಯಾಕ್ ಹೊದಿಸದೆ ಹೇಳುವುದಕ್ಕೆ ಪ್ರಾಮುಖ್ಯತೆ ಬಂದಿವೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿಯ ಕೊಂಚಾವರಂ ತಾಂಡಾದಲ್ಲಿ ಲಂಬಾಣಿಗಳು ಮಕ್ಕಳನ್ನು ಮಾರಾಟ ಮಾಡಬೇಕಾಗಿ ಬಂದದ್ದು ಏಕೆ? ಕಲಬುರ್ಗಿಯಲ್ಲಿ ಅಪೌಷ್ಟಿಕತೆಯಿಂದ ಸಾವು ಬರಲು ಕಾರಣರಾದವರು ಯಾರು? ಕೂಲಿಗಾಗಿ ಕಾಳು ನೀಡಬೇಕಾಗಿದ್ದ ಸರ್ಕಾರ ಯಂತ್ರಗಳನ್ನು ಏಕೆ ಕಾಮಗಾರಿಗಳಿಗೆ ಕಳಿಸುತ್ತಿದೆ? ಬರ ಬರಲಿ ಎಂದು ಹಾರೈಸುವವರ ಸಂತಸದ ಕಾರಣ ಏನು?

ಜನರು ಲೇಖನಿ ಕೈಗೆತ್ತಿಕೊಂಡಾಗ ಮಾತ್ರ ಒಳ ಸತ್ಯಗಳು ಹೊರಬರಲು ಸಾಧ್ಯ. ಕೆಂಡದ ಮೇಲೆ ನಡೆದವರಿಗೆ ಮಾತ್ರವೇ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ.

ಜಿ.ಆರ್. ಮಂಡಿಸಿದ ಈ ಓದುಗನೇ ಬರಹಗಾರನಾಗುವ ಆಲೋಚನೆ ಪತ್ರಿಕೋದ್ಯಮದ ಅನೇಕ ಸೂತ್ರಗಳನ್ನು ಕದಲಿಸಲು ಸಾಧ್ಯ.

ಇದಕ್ಕೆ ಕೃಷಿಕರು ತಮ್ಮ ಕೈಗೆ ಲೇಖನಿ ಎತ್ತಿಕೊಂಡ ಉದಾಹರಣೆಯೂ ನಮ್ಮೊಂದಿಗಿದೆ.
ಅಡಿಕೆಯ ಬೆಲೆ ಕುಸಿಯಲು, ಪಾತಾಳ ಕಾಣಲು ಆರಂಭವಾದಾಗ ತೋಟಗಳಲ್ಲಿ ದಿಕ್ಕು ಕಾಣದೆ ನಿಂತ ಹಲವರು ‘ಕೃಷಿಕರ ಕೈಗೆ ಲೇಖನಿ’ ನೀಡುವ ಕನಸನ್ನು ಕಂಡಿದ್ದರು.

ಬೀಳದ ಮಳೆ, ಏಳದ ಬೆಲೆ, ದಿಕ್ಕೆಟ್ಟ ಬದುಕುಗಳು ಎಲ್ಲ ಕೃಷಿಕರನ್ನೂ ಕದಡುತ್ತಿರುವಾಗ ಪತ್ರಿಕೆಗಳು ಎಂದಿನಂತೆ ರಾಸಾಯನಿಕ ಔಷಧಿಗಳನ್ನು ಎಷ್ಟು ಸಿಂಪಡಿಸಬೇಕು, ಡಾಲರ್ ಗಳ ಮಳೆಯೇ ಸುರಿಸಬೇಕಾದರೆ ಯಾವ ಬೆಳೆ ತೆಗೆಯಬೇಕು, ತಾಳೆ ಬೆಳೆದರೆ ರೈತನ ಬದುಕು ಹೇಗೆ ಬಂಗಾರವಾಗುತ್ತದೆ ಎಂಬುದರ ಪಾಠ ಮಾಡುತ್ತಿದ್ದವು.

ಪ್ರಯೋಗಾಲಯದಲ್ಲಿ ಮಾಡಿದ ಸೂತ್ರಗಳು ರೈತನ ಅಂಗಳದಲ್ಲಿ ಹೊರಳಾಡುತ್ತಿದ್ದ ವಾಸ್ತವವೇ ಪತ್ರಿಕೆಗಳಿಗೆ ತಿಳಿದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮಾಡಿದ ಚಿಂತನೆ ಇಂದು ದೊಡ್ಡ ಆಂದೋಲನ.

ನೆಲದಲ್ಲಿ ಕಳೆ ಕಿತ್ತ, ಮಣ್ಣು ಅಗೆದ, ಸಸಿ ನೆಟ್ಟ, ರಾಸಾಯನಿಕ ಸಿಂಪಡಿಸಿ ತಲೆ ಮೇಲೆ ಕೈ ಹೊತ್ತ ಕೃಷಿಕರೇ ಲೇಖನಿ ಕೈಗೆತ್ತಿಕೊಂಡರು. ಒಂದು ಪ್ರಶ್ನೆ, ಹಲವು ಪ್ರಶ್ನೆ, ಹಲಹಲವು ಪ್ರಶ್ನೆಗಳನ್ನು ಕೇಳುತ್ತಾ ಕೇಳಿಕೊಳ್ಳುತ್ತಾ, ಬರೆಯುತ್ತಾ ಹೋದರು.

ಮಾಧ್ಯಮಗಳ ಮನಸ್ಸನ್ನು ಬದಲಿಸುವ, ಮಾಧ್ಯಮಗಳನ್ನು ತಿದ್ದುವ, ಅವರ ವ್ಯಾಕರಣಗಳನ್ನು ಜನಪರವಾಗಿ ರೂಪಿಸುವ ಕೆಲಸ ಓದುಗರೇ ಲೇಖನಿ ಕೈಗೆತ್ತಿಕೊಳ್ಳುವ ಮೂಲಕ ಆರಂಭವಾಗುತ್ತದೆ.

ಮಾಧ್ಯಮಗಳನ್ನು ವಿಮರ್ಶಿಸುವ ಪರಿಪಾಠ ಇಲ್ಲದ ಕಾರಣದಿಂದಲೇ ಮಾಧ್ಯಮಗಳು ಇಂದು ತಮಗೆ ಬೇಕಾದ್ದನ್ನು ತಿಳಿಸುವ ಹಂತದಲ್ಲಿದೆ.

ಇರಾಕ್ ಯುದ್ಧವಾದರೆ ಅಮೆರಿಕಾಗೆ ಬೇಕಾದ ದೃಷ್ಟಿಕೋನ ತಿಳಿಸಲು ಸೇನೆಯ ತುಕಡಿಯೊಂದಿಗೆ ಸಾಗಲು ಮಾಧ್ಯಮಗಳು ಸಿದ್ಧವಾಗಿದ್ದು ಮಾಧ್ಯಮವನ್ನು ಪ್ರಶ್ನಿಸುವ ಮನಸ್ಸು ಇಲ್ಲದ ಕಾರಣ.

ಕೋಮುವಾದದ ಬೆಂಕಿ ಹರಡುತ್ತಾ ಹೋಗಿದ್ದರಲ್ಲಿ ಸ್ವಲ್ಪ ಪಾಲು ಮಾಧ್ಯಮಗಳನ್ನು ಪ್ರಶ್ನಿಸದ ಮನಸ್ಸಿನಲ್ಲಿಯೂ ಇದೆ.

ಪತ್ರಿಕೆಗಳು ಫ್ಯಾಷನ್ ಷೋ ಬೆನ್ನು ಹತ್ತುವುದರಲ್ಲಿ, ಜೀವನದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುವ ಮೆರವಣಿಗೆಯನ್ನು ನಿರ್ಲಕ್ಷಿಸುವುದರಲ್ಲಿ, ಐಟಿ ಕಂಪನಿಗಳನ್ನು ವಿಜೃಂಬಿಸುವುದರಲ್ಲಿ, ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿಬಿಡಿ ಎಂದು ಭೋದಿಸುವುದರಲ್ಲಿ, ಗ್ರಾಮೀಣ ಕೃಪಾಂಕ ಮಾರಕ ಎಂದು ಬಿತ್ತುವುದರ ಹಿಂದೆ ಮಾಧ್ಯಮಗಳನ್ನು ಪ್ರಶ್ನಿಸದ ಮನಸ್ಸುಗಳಿವೆ.

ಓದುಗ ಈ ಪ್ರಶ್ನೆಗಳನ್ನು ತಾನೇ ಒಡ್ಡಿಕೊಳ್ಳುತ್ತಾ, ಬರೆಯುತ್ತಾ ಹೋದಂತೆ ದಾರಿಗಳು ಸ್ಪಷ್ಟವಾಗಲಿವೆ. ಕತ್ತಲಿನ ಕೋಣೆಯಿಂದ ಬೆಳಕಿಗೆ ದಾರಿಗಳು ಹುಟ್ಟಿಕೊಳ್ಳಲಿವೆ.
—-

‘ಜಿ ಆರ್’ ಎಂದೇ ಖ್ಯಾತರಾದ ಜಿ ರಾಮಕೃಷ್ಣ ನವಕರ್ನಾಟಕ ಪ್ರಕಾಶನ ಹೊರ ತರುತ್ತಿರುವ ‘ಹೊಸತು‘ ಮಾಸಿಕ ಪತ್ರಿಕೆಯ ಗೌರವ ಸಂಪಾದಕರೂ ಹೌದು.

ನಾನು ಮಂಗಳೂರಿನಲ್ಲಿ ‘ಪ್ರಜಾವಾಣಿ’ಯ ವರದಿಗಾರನಾಗಿದ್ದಾಗ ‘ಹೊಸತು’ ಪತ್ರಿಕೆಯ ವಾರ್ಷಿಕೋತ್ಸವವನ್ನು ಅಲ್ಲಿ ಹಮ್ಮಿಕೊಳ್ಳಲಾಯಿತು.

ಜಿ ಆರ್ ಮಾಡಿದ ಭಾಷಣ ನನ್ನನ್ನು ಇನ್ನಷ್ಟು ಮಾಧ್ಯಮದ ಬಗ್ಗೆ ಯೋಚಿಸಲು ಕಾರಣವಾಯಿತು. ಆ ವೇಳೆಗಾಗಲೇ ಮಾಧ್ಯಮದ ಸೂತ್ರಗಳು ಬದಲಾಗಬೇಕಾದ ಅನಿವಾರ್ಯತೆಯನ್ನು ಮನಗಾಣುತ್ತಿದ್ದ ನಾನು ಜಿ ಆರ್ ಮಾತಿನಿಂದ ಪ್ರೇರಿತನಾಗಿ ಬರೆದ ಲೇಖನ ಇದು.

ಬೆಂಗಳೂರು ಗಲಭೆ: ಶಾಸಕರ ಮನೆಗೆ ಬೆಂಕಿ, ಕರ್ಪ್ಯೂ ಜಾರಿ

ಬೆಂಗಳೂರು: ಫೇಸ್ ಬುಕ್ ನಲ್ಲಿ ‘ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ಗುಂಪೊಂದು ಇಲ್ಲಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದೆ.

ಮನೆಯ ಮುಂದೆ ನಿಂತಿದ್ದ ಕಾರು, ಬೈಕ್ ಗಳಿಗೂ ಬೆಂಕಿ ಹಚ್ಚಿದೆ.

ಈ ಮೂರು ಬಡಾವಣೆಗಳಲ್ಲಿ ರಾತ್ರಿ ನಿಂತ ನಿಂತಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದೆ .

ಶಾಸಕರ‌ ಸಂಬಂಧಿಯೊಬ್ಬ ಫೇಸ್ ಬುಕ್ ನಲ್ಲಿ ಈ ಅವಹೇಳನಕಾರಿ‌ ಪೋಸ್ಟ್ ಹಾಕಿದ್ದು, ಬಂಧಿಸುವಂತೆ ಒತ್ತಾಯಿಸಿದೆ. ಆತನನ್ನು ಬಂಧಿಸುವುದಾಗಿ ಪೊಲೀಸರು ಹೇಳಿದರೂ ಕೇಳದೇ ದಾಂಧಲೆ ನಡೆಸಿದೆ.

ಸಿಸಿಬಿ ಪೊಲೀಸರಿಗೆ ಪ್ರಕರಣ ತನಿಖೆ ನೀಡಿದ್ದು, ಅವರು ಈಗಾಗಲೇ ಮೂವತ್ತು ಅಧಿಕ ಜನರನ್ನು ಬಂಧಿಸಿದ್ದಾರೆ.

ಮೂರು ಪ್ರದೇಶಗಳ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಈಗ ಪರಿಸ್ಥಿತಿ ಹತೋಟಿಗೆ ಬಂದಿದೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆ: ಶಿರಾದವರಿಗೆ ಬಂತು ಮೊದಲ ಮೂರು ಸ್ಥಾನ….

Publicstory


ಶಿರಾ: ಎಸ್ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಟಾಪ್ ಮೂರು ಸ್ಥಾನ ಪಡೆದ ವಿದ್ಯಾರ್ಥಿ ಗಳೆಲ್ಲರೂ ಶಿರಾದವರೇ ಆಗಿರುವುದು ವಿಶೇಷವಾಗಿದೆ.

ಶಿಕ್ಷಣಾಧಿಕಾರಿಯ ಶ್ರಮಕ್ಕೆ ಸಂದ ಪ್ರತಿಫಲ:


ಕೊರೋನಾತಂಕದ ನಡುವೆಯೂ ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ತಾಲ್ಲೂಕು ಶೈಕ್ಷಣಿಕವಾಗಿ ಗುರುತಿಸಿಕೊಳ್ಳುವ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ಪೋಷಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಮಾಡಿದ ನಂತರ ಹಲವು ಸವಾಲುಗಳು ಅಧಿಕಾರಿಗಳ ಮುಂದಿದ್ದವು.

ಪರೀಕ್ಷೆಗೆ ಪೂರ್ವಬಾವಿಯಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಬಿ.ಆರ್.ಸಿ., ಶಿಕ್ಷಣ ಸಂಯೋಜಕರು, ಬಿ.ಆರ್.ಪಿ., ಐ.ಇ.ಆರ್.ಟಿ., ಸಿ.ಆರ್.ಪಿ.ಗಳು ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿ, ಯಾವುದೇ ವಿದ್ಯಾರ್ಥಿಯು ಪರೀಕ್ಷೆಯಿಂದ ವಂಚಿತನಾಗಬಾರದು ಎಂಬ ನಿರ್ಧಾರದೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜು ತನ್ನದೇ ಆದ ಶೈಲಿಯಲ್ಲಿ ಯೋಜನೆ ರೂಪಿಸಿ, ಅದರಲ್ಲಿ ಸಫಲರಾದರು.

ಪರೀಕ್ಷಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಕೆಲ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟು, ಇಡೀ ಪರೀಕ್ಷಾ ಕೇಂದ್ರಕ್ಕೇ ಆತಂಕ ಸೃಷ್ಠಿಸಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಇಡೀ ರಾತ್ರಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಬೆಳಗಾಗುವುದರೊಳಗೆ ಪರೀಕ್ಷಾ ಸಿಬ್ಬಂದಿಯನ್ನ ಬದಲಿಸಿ, ಸುಸೂತ್ರವಾಗಿ ಪರೀಕ್ಷೆ ನಡೆಸಿದ ಕೀರ್ತಿ ಬಿಇಓರವರಿಗೆ ಸಲ್ಲುತ್ತದೆ.

ಬಿಇಓ ಸಿ.ವಿ.ನಟರಾಜು ಶಿಕ್ಷಕ-ವಿದ್ಯಾರ್ಥಿ ಸ್ನೇಹಿಯಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲ್ಲೂಕಿನಾದ್ಯಂತ ಗುಣಮಟ್ಟದ ಶಿಕ್ಷಣ ನೀಡಲು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಪ್ರತಿ ಶಾಲೆಗೂ ಸಮಯಕ್ಕೆ ಸರಿಯಾಗಿ ಭೇಟಿ ನೀಡುವ ಮೂಲಕ ಶಿಕ್ಷಕರಿಗೆ ಸಮಯಪಾಲನೆ, ಕಲಿಕಾ-ಬೋಧನೆ ಕುರಿತು ಸಲಹೆ ಮಾರ್ಗದರ್ಶನ ನೀಡುವ ರೀತಿ ಇಡೀ ತಾಲ್ಲೂಕಿನ ಶಿಕ್ಷಕರಲ್ಲಿ ಧನಾತ್ಮಕ ಬೋಧನೆಗೆ ಕಾರಣವಾಗಿದೆ.

ತಾಲ್ಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆ ತರಲು ಬಯಸುತ್ತಿರುವ ಪ್ರಾಮಾಣಿಕ ಮತ್ತು ಧಕ್ಷ ಹಾಗೂ ದೂರದೃಷ್ಠಿ ಹೊಂದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸತತ ಪರಿಶ್ರಮದ ಫಲವಾಗಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ದೊರೆಯಲು ಕಾರಣವಾಗಿದೆ ಎಂದು ಶಿಕ್ಷಕ-ಪೋಷಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ತಾಲ್ಲೂಕಿನ ಒಟ್ಟು 81 ಪ್ರೌಢಶಾಲೆಗಳ ಪೈಕಿ ಸರ್ಕಾರಿ ಪ್ರೌಢಶಾಲೆ ಗೊಲ್ಲಹಳ್ಳಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಭೂವನಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕನಹಳ್ಳಿ, ಮೊರಾರ್ಜಿ ವಸತಿ ಶಾಲೆ, ಭೂವನಹಳ್ಳಿ, ಸ್ಪಟಿಕಪುರಿ ಶಾಲೆ ಸಿರಾ ಈ 5 ಶಾಲೆಗಳು ಶೇ100 ರಷ್ಟು ಫಲಿತಾಂಶ ಪಡೆದಿವೆ.

ತಾಲ್ಲೂಕಿನ ಅಜ್ಜೇನಹಳ್ಳಿ ಗ್ರಾಮದ ಕೆ.ರಾಜಣ್ಣ ಭಾಗ್ಯಮ್ಮ ದಂಪತಿಯ ಪುತ್ರಿ ಆರ್. ಪ್ರಿಯಾಂಕ, ಅರ್-ರೆಹಾನ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, 625ಕ್ಕೆ 622 ಅಂಕಗಳನ್ನು ಪಡೆಯುವ ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ತಾಲ್ಲೂಕಿನ ಹುಲಿಕುಂಟೆ ಹೋಬಳಿ ಬೆಜ್ಜಿಹಳ್ಳಿ ಗ್ರಾಮದ ಬೊಪ್ಪರಾಯಪ್ಪ ಮತ್ತು ದೊಡ್ಡತಿಮ್ಮಕ್ಕ ದಂಪತಿಯ ಪುತ್ರಿ ಬಿ.ಪುಷ್ಪಲತಾ ವಿದ್ಯಾರ್ಥಿನಿ ಭೂವನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿ, 625ಕ್ಕೆ 621 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಲಕ್ಕನಹಳ್ಳಿ ಗ್ರಾಮದ ಗೋಪಿನಾಥ್ ಮತ್ತು ಭಾಗ್ಯಮ್ಮ ದಂಪತಿಯ ಪುತ್ರ ಎಲ್.ಜಿ.ಕಾರ್ತಿಕ್ ಸಿರಾ ನಗರದ ಮಂಜುಶ್ರೀ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, 620 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.

ಜಿಲ್ಲೆಗೆ ಮೊದಲ ಮೂರು ಸ್ಥಾನಗಳನ್ನು ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ ಮೂವರು ವಿದ್ಯಾರ್ಥಿಗಳನ್ನು ಉಪನಿರ್ದೇಶಕ ರೇವಣಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜು ಸೇರಿದಂತೆ ತಾಲ್ಲೂಕು ಹಂತದ ಅಧಿಕಾರಿಗಳು ಮಂಗಳವಾರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.