ದೀಪು ಬೋರೇಗೌಡ
ಸ್ವಾತಂತ್ರ್ಯ ದಿನಾಚರಣೆ ಬರುತ್ತಿದ್ದಂತೆ ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಇಂದಿಗೂ ಸರಿಯಾದ ರೀತಿಯಲ್ಲಿ ಬಾಬಾ ಸಾಹೇಬರನ್ನ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾದೆವಲ್ಲ ಎಂಬ ನೋವು ಇಂದಿಗೂ ಕಾಡುತ್ತದೆ.
ಬಾಬಾ ಸಾಹೇಬರ ದೃಷ್ಟಿಯಲ್ಲಿ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಎಂದರೇನು..? ಹಾಗಿದ್ದ ಮೇಲೆ ಯಾವುದರ ವಿರುದ್ಧ ಹೋರಾಟ ಮಾಡಬೇಕಿತ್ತು..? ಅದನ್ನು ಯಾರು ಮಾಡಿದ್ದಾರೆ ? ಎಂಬುದು ಪ್ರಶ್ನೆಯಾಗೇ ಉಳಿದಿದೆ.

ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಜೀವತ್ಯಾಗ, ಬಲಿದಾನಗಳ ಜೊತೆಗೆ ಡಾ. ಬಿ.ಆರ್ ಅಂಬೇಡ್ಕರ್ ಎಂಬ ಮಹಾನ್ ಮಾನವತಾವಾದಿಯ ಶ್ರೇಷ್ಠ ಜ್ಞಾನ, ಸಮಯಪ್ರಜ್ಞೆ, ಚಿಂತನೆಗಳಿಂದಷ್ಟೆ ಸ್ವಾಭಿಮಾನದ, ಆತ್ಮಗೌರವದ ಸ್ವಾತಂತ್ರ್ಯ ಸಿಕ್ಕಿದೆ ಎಂದರೇ ತಪ್ಪಾಗಲಾರದು. ಯಾಕೆಂದರೆ ಬಾಬಾ ಸಾಹೇಬರ ದುಂಡುಮೇಜಿನ ಸಮ್ಮೆಳನದ ಪ್ರಜ್ಞಾಪೂರ್ವಕ ಮಾತುಗಳು ಇಂದಿಗೂ ದೇಶವನ್ನು ಸುಭದ್ರವಾಗಿಟ್ಟಿದೆ.
ಬಾಬಾ ಸಾಹೇಬರ ದೃಷ್ಟಿಯಲ್ಲಿ ಸ್ವಾತಂತ್ರ್ಯ ಎಂದರೆ ಭಾರತದ ಪ್ರತಿಯೊಬ್ಬ ನಾಗರೀಕನ ಗೌರವಯುತ, ನಿರ್ಭೀತ, ಸ್ವಾಭಿಮಾನದ, ಶೋಷಣೆಮುಕ್ತ ಜೀವನವೇ ಆಗಿತ್ತು. ಇದನ್ನೆ ತಮ್ಮ ಜೀವಿತಾವಧಿಯುದ್ದಕ್ಕೂ ಸಾರಿ ಸಾರಿ ಹೇಳಿದರು.
ಸ್ವಾತಂತ್ರ್ಯ ಬೇಕಿರುವುದು ಭೌಗೋಳಿಕವಾಗಿ ಅಂದರೆ ಈ ದೇಶದ ಭೂಮಿಗೆ & ದೇಶದ ಗಡಿಗಲ್ಲಾ, ನಿಜವಾದ ಸ್ವಾತಂತ್ರ್ಯ ಬೇಕಿರುವುದು ಜನರಿಗೆ ಎಂದು ಬ್ರಿಟಿಷ್ ನೆಲದಲ್ಲಿ ನಿಂತು ದುಂಡು ಮೇಜಿನ ಸಮ್ಮೇಳನಗಳಲ್ಲಿ ಅವರೆದುರು, ಅಲ್ಲಿನ ವ್ಯವಸ್ಥೆಯ ವಿರುದ್ಧ ಗುಡುಗಿದ ನಿಜ ರಣಕಲಿ, ಸ್ವಾಭಿಮಾನಿ, ಭಾರತಾಂಬೆಯ ಹೆಮ್ಮೆಯ ಪುತ್ರ ಡಾ. ಬಾಬಾ ಸಾಹೇಬರು.
ದೇಶವೆಂದರೇ ಮಣ್ಣಲ್ಲಾ, ಗಡಿಯಲ್ಲ, ದೇಶವೆಂದರೇ ಆ ದೇಶದ ಜನ, ಜನರ ಸಂಸ್ಕೃತಿ, & ಅವರುಗಳ ಹಿತ. ಅಂತಹ ಜನಗಳ ಹಿತ ಕಾಪಾಡುವುದೆ ನಿಜ ಸ್ವಾತಂತ್ರ್ಯ ಎಂದು ಭಾವಿಸಿ ಅಂತಹ ಹಿತಕ್ಕಾಗಿ ಕಾದಾಡಿದ ಮದಗಜ, ಮಹಾದೇಶಭಕ್ತ ಭೀಮರಾವ್ ಅಂಬೇಡ್ಕರ್.
ಭಾರತ ದೇಶದ ಜನಗಳನ್ನ ಸಾವಿರಾರು ವರ್ಷಗಳ ಕಾಲ ಅಮಾನವೀಯವಾಗಿ ಶೋಷಣೆ ಮಾಡುತ್ತಾ ಅದೆಷ್ಟೊ ದಾರಿದ್ರ್ಯ ಪಿಡುಗುಗಳನ್ನು ಮೇಲೇರಿ, ವರ್ಣಸಹಿತ ಜಾತಿ ವ್ಯವಸ್ಥೆ ಮಾಡಿಕೊಂಡು ತಿನ್ನಲು ಅನ್ನವನ್ನು, ಕುಡಿಯಲು ನೀರನ್ನು, ಓಡಾಡೋ ರಸ್ತೆಯನ್ನು, ಓದುವ ಅಕ್ಷರವನ್ನು, ಭೂ ಒಡೆತನವನ್ನು, ರಾಜ್ಯಾಧಿಕಾರವನ್ನು, ಕನಿಷ್ಟ ಮಾನವೀಯ ಮೌಲ್ಯವನ್ನು ತೋರದೇ, ಮೃಗಿಯ ರೀತಿಯಲ್ಲಿ ನಡೆಸಿಕೊಂಡ ಪ್ರಪಂಚದ ಯಾವ ದೇಶದಲ್ಲೂ ಇರದ ಒಂದು ರೀತಿಯ ವಿಭಿನ್ನ ವರ್ಗ ಈ ದೇಶದಲ್ಲಿ ತಮ್ಮದೇ ಆದ ವ್ಯವಸ್ಥೆಯ ಬೇಲಿ ಹಾಕಿಕೊಂಡು, ಮನುಷ್ಯರ ರಕ್ತ ಹೀರಿ ಬಡಕಲು ದೇಹವನ್ನು ಬಿಟ್ಟಿತ್ತಷ್ಚೆ.
ಬಡಕಲು ದೇಹ, ಅಸಹಾಯಕತೆಯ ನೋವು, ಹಸಿವಿನ ಕೂಗು, ಅಸಮಾನತೆಯ ಕೂಪ, ಮಹಿಳೆಯರ ಶೋಷಣೆ, ದಲಿತರ ಶೋಷಣೆ, ಅಸಹಾಯಕರ ಮೇಲಿನ ದೌರ್ಜನ್ಯ, ನಿರ್ಗತಿಕರ ಸೂರು, ಆರೋಗ್ಯ, ವಿದ್ಯೆ ಇಷ್ಟೆಲ್ಲ ವಿಷಯಗಳ ಬಗ್ಗೆ ರಾಷ್ಟ್ರೀಯವಾದಿಗಳೆಂದು ಗುರುತಿಸಿಕೊಂಡವರು ಯಾವುದೇ ಚಕಾರವೆತ್ತದೇ, ಚಕಾರ ಎತ್ತಿದರೂ ಜಾಣಮೌನವಹಿಸುತ್ತಾ ಬಂದರು. ಬರೀಯ ಭೌಗೋಳಿಕ & ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದ ರಾಷ್ಟ್ರೀಯವಾದಿಗಳ ಗುಂಪೊಂದೆಡೆಯಾದರೇ ಭಾರತೀಯರ ಆಂತರಿಕ ಸ್ವಾತಂತ್ರ್ಯಕ್ಕಾಗಿ & ಬ್ರಿಟೀಷರಿಂದಲೂ ಸ್ವಾತಂತ್ರ್ಯಕ್ಕಾಗಿ ನೇರ ವಾಗ್ವಾದಕ್ಕಿಳಿಯುತ್ತಿದ್ದ ಏಕೈಕ ವ್ಯಕ್ತಿ, ಭಾರತದ ಶಕ್ತಿ ಬಾಬಾಸಾಹೇಬರು.
ಎಷ್ಟೊ ಬಾರಿ ಬಾಬಾ ಸಾಹೇಬರ ಜೀವಕ್ಕೆ ಆಪತ್ತಿದ್ದರೂ ದೃತಿಗೆಡಲಿಲ್ಲ. ತಮ್ಮ ಎದುರಾಳಿಗಳಿಗೆ, ಗುಲಾಮಗಿರಿ ಸಂಸ್ಕೃತಿ ಪೋಷಿಸುವ ಮನಸ್ಥಿತಿಯ ಸಂಪ್ರದಾಯವಾದಿಗಳಿಗೆ ಮಾತಿನಲ್ಲೇ ಚಾಟಿ ಬೀಸುತ್ತಿದ್ದರು. “ಯಾರು ನನ್ನನ್ನು ಮಣ್ಣಿನಲ್ಲಿ ಹೂಳಲು ಅನೇಕ ಬಾರಿ ಪ್ರಯತ್ನಿಸಿದರೋ, ಅವರಿಗೆ ಗೊತ್ತಿಲ್ಲ ನಾನೊಂದು ಬೀಜವೆಂದು” ನೀವು ನನ್ನನ್ನು ಮಣ್ಣಿನಲ್ಲಿ ಹೂತಷ್ಟು ನನ್ನ ಜನಗಳಿಗಾಗಿ ನಾನು ಗಿಡವಾಗಿ, ಮರವಾಗಿ, ಹೆಮ್ಮರವಾಗುತ್ತೆನೆಂದು ಗುಡುಗುತ್ತಿದ್ದರು.
ಮಾನವೀಯ ಮೌಲ್ಯಗಳ ಭಂಡಾರವಾಗಿದ್ದ, ತನ್ನ ಜೀವಮಾನವಿಡಿ ತನ್ನ ವೈಯಕ್ತಿಕ ಜೀವನವನ್ನೆ ತ್ಯಾಗ ಮಾಡಿ, ತನ್ನುಸಿರಿನ ಕೊನೆವರೆಗೂ ಈ ದೇಶದಲ್ಲಿ ಸಮಸಮಾಜದ ಕನಸು ಕಂಡು, ದೇಶದೊಳಗಿನ ಆಂತರಿಕ ಸ್ವಾತಂತ್ರ್ಯದಿಂದಿಡಿದು ಬ್ರಿಟೀಷರಿಂದಲೂ ಸ್ವಾತಂತ್ರ್ಯಕ್ಕಾಗಿ ಏಕಕಾಲದಲ್ಲಿ ಸಮಯಪ್ರಜ್ಞೆ ಮೆರೆದು ತಮ್ಮ ಜ್ಞಾನ & ಲೇಖನಿಯಿಂದ ಹೋರಾಡಿ ದೇಶಕ್ಕೆ ಅಕ್ಷರಸಹಿತ ನಿಜ ಸ್ವಾತಂತ್ರ್ಯ ನೀಡಿದವರು ಡಾ. ಬಿ.ಆರ್ ಅಂಬೇಡ್ಕರ್ ರವರು.
ಹಲವು ಧರ್ಮ, ಜಾತಿಯ ಹೆಸರಲ್ಲಿದ್ದ ದೇಶವಾಸಿಗಳಿಗೆ
“WE ARE INDIANS, FIRSTLY & LASTLY” ಎನ್ನುವ ಘೋಷವಾಕ್ಯದ ಮೂಲಕ ಗುಂಪುಗಳಾಗಿ ಚದುರಿ ಹೋಗಿದ್ದ ಭಾರತ ದೇಶಕ್ಕೆ “ರಾಷ್ಟ್ರೀಯತೆಯ” ಹೊಸ ವ್ಯಾಖ್ಯಾನ ನೀಡಿದವರು.
ಇಂತಹ ನೈಜ ದೇಶ ಪ್ರೇಮಿಯನ್ನು ಕಂಡು ದೇಶದ ಅಂತಿಮ ಬ್ರಿಟೀಷ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಬಾಬಾ ಸಾಹೇಬರ ಬಗೆಗಿನ ಹೆಮ್ಮೆಯ ಮಾತುಗಳನ್ನು ಹೀಗೆಳಿದರು.. “ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ರಾಜ ಮಹಾರಾಜರು ತಮ್ಮ ಖಡ್ಗಗಳಿಂದ ಮಾಡಲಾಗದ ಕಾರ್ಯವನ್ನು ಬಾಬಾ ಸಾಹೇಬರು ಲೇಖನಿಯಿಂದ ಮಾಡಿದರು” ಎಂದು.
ಹಾಗಿದ್ದ ಮೇಲೆ ಬಾಬಾ ಸಾಹೇಬರು ನೀಡಿದ ಸ್ವಾಭಿಮಾನದ ಸ್ವಾತಂತ್ರ್ಯ ಎಂತದ್ದು.?
ಆ ಸ್ವಾತಂತ್ರ್ಯ ಮೈನೆವಿರೇಳಿಸುವ ಸ್ವಾಭಿಮಾನದ, ಸಮಾನತೆಯ, ಸಹೋದರತೆಯ, ದೇಶದ ಐಕ್ಯತೆಯ, ಶೋಷಣೆ ವಿರುದ್ಧವಾದ, ಸರ್ವರಿಗೂ ಶಿಕ್ಷಣದ, ಕುಡಿಯುವ ನೀರಿನ, ಕೂಲಿ ಕಾರ್ಮಿಕನ ಕಲ್ಯಾಣದ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ, ಅಸ್ಪಶ್ಯತೆ ನಿರ್ಮೂಲನೆಯ, ಜಾತಿಯತೆ ವಿರುದ್ದವಾದ, ಸಮಪಾಲಿನ & ಸಹಬಾಳ್ವೆಯ, ವರ್ಣಭೇದದ ವಿರುದ್ಧವಾದ, ಹೆಣ್ಣುಮಕ್ಕಳ ಹಕ್ಕಿನ, ಮೌಡ್ಯತೆಯ ವಿರುದ್ಧವಾದ ಸ್ವಾತಂತ್ರ್ಯ ಇಂತಹ ವಿಶಾಲ ವೈಚಾರಿಕ, ವೈಜ್ಞಾನಿಕ ಹಾಗೂ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ಸ್ವಾತಂತ್ರ್ಯ ತಂದುಕೊಟ್ಟ ಸಮಾನತೆ ಹರಿಕಾರ, ವಿಶ್ವಜ್ಞಾನಿ, ನಿಜ ದೇಶಪ್ರೇಮಿಗೆ ಎಲ್ಲರೂ ಕೃತಜ್ಞರಾಗಿ ನಮಿಸೋಣಾ & ಅವರ ನಿಸ್ವಾರ್ಥ ಸೇವೆ ನೆನೆಯೋಣಾ. ನೈಜ ಇತಿಹಾಸವನ್ನು ನವತರುಣರಿಗೆ ತಿಳಿಸುವ ಪ್ರಯತ್ನ ಎಲ್ಲರದ್ದಾಗಲಿ. ಈ ದೇಶದ ಜಾತಿಗ್ರಸ್ಥ ಮನಸ್ಥಿತಿಗಳು ಬಾಬಾ ಸಾಹೇಬರಿಗೆ ಅಂಟಿಸಿರುವ ಜಾತಿಕೊಳಕಿನ ಪರದೆ ಸರಿಸಿ ನಿಜ ಬಾಬಾ ಸಾಹೇಬರನ್ನ ಕಾಣೋಣಾ..
ಪ್ರೀತಿಯ ಓದುಗರಿಗೆ ನನ್ನೆಲ್ಲಾ ನೆಲಮೂಲದ ದೇಶಬಂಧುಗಳಿಗೆ 74 ನೇ ಸ್ವಾತಂತ್ರ್ಯೋತ್ಸವದ ಭೀಮಾಶುಭಾಷಯ ತಿಳಿಸುತ್ತೆನೆ.
ಜೈ ಭೀಮ್.
✍️ಕೆ.ಬಿ ದಯಾನಂದಗೌಡ ಅವರನ್ನು ಅವರ ಸ್ನೇಹಿತರು, ಅಭಿಮಾನಿಗಳು, ಅವರ ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ದೀಪು ಬೋರೇಗೌಡ ಎಂದೇ ಕರೆಯುತ್ತಾರೆ.
ಓದೇ ಗೊತ್ತಿಲ್ಲದ, ಸಾಮಾಜಿಕ ನ್ಯಾಯದ ಕಲ್ಪನೆಯೇ ಗೊತ್ತಿಲದ ಯುವ ರಾಜಕಾರಣಿಗಳಲ್ಲಿ ಓದಿನ ರುಚಿ ಹತ್ತಿಸಿಕೊಂಡಿರುವ, ಇತಿಹಾಸ ಅರಿತು ಭವಿಷ್ಯದ ಬಗ್ಗೆ ಮಾತನಾಡುವ ಜೆಡಿಎಸ್ ಪಕ್ಷದ ಹೊಸ ತಲೆಮಾರಿನ ರಾಜಕಾರಣಿ ಇವರು.
ಸದ್ಯ, ಜೆಡಿಎಸ್ ಯುವಘಟಕದ
ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ.




