Tuesday, July 1, 2025
Google search engine
Home Blog Page 327

ವಯಸ್ಸು ಇಪ್ಪತ್ತೆಂಟು ಸೇವೆ ನೂರೆಂಟು

9

ಚಿಗುರು ಮೀಸೆಯ ಯುವಕನಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ [ವ್ಯಕ್ತಿಪರಿಚಯ]

ತಲೆ ತುಂಬ ಬಿಳಿಕೂದಲು, ಆಸರೆಗೊಬ್ಬರನ್ನು ಕರೆತಂದು ಪ್ರಶಸ್ತಿ ಪಡೆಯುವವರ ನಡುವೆ ಕಡಿಮೆ ವಯಸ್ಸಿನಲ್ಲಿಯೆ ಸಮಾಜಸೇವೆಯಲ್ಲಿ ತಲ್ಲೀನನಾಗಿರುವ ಚಿಗುರು ಮೀಸೆಯ ಯುವಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತುಮಕೂರು ಜಿಲ್ಲೆ ಪಾವಗಡದ  ಗಿರಿ ಫ್ಯಾಷನ್ಸ್ ಗಿರೀಶ್ ಎಂದೇ ಜನಪ್ರಿಯತೆ ಗಳಿಸಿರುವ ಇವರು ನಮ್ಮ ಹಕ್ಕು ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ, ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ, ರೋಟರಿ ಸಂಸ್ಥೆಯ ಯುವ ನಿರ್ದೇಶಕರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ, ಪರಿಸರ ಸಂರಕ್ಷಣೆ, ಸ್ವಚ್ಚತೆ, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಪ್ರವಾಹ ಪೀಡಿತರು ಹಾಗೂ ರೋಗಿಗಳಿಗೆ ಸಹಾಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.

ತಾನು ದುಡಿದ ಹಣದಲ್ಲಿ ಶೇಕಡಾವಾರು ಭಾಗವನ್ನು ಸಮಾಜ ಕಾರ್ಯಕ್ಕಾಗಿ ಮೀಸಲಿಟ್ಟಿರುವುದು ಇವರ ವಿಶೇಷ.

ಸೇವೆಯ ಹೆಜ್ಜೆ ಗುರುತುಗಳು

ತುಮಕೂರು ಜಿಲ್ಲೆ ಪಾವಗಡ   ತಾಲ್ಲೂಕಿನ ಸರ್ಕಾರಿ ಕನ್ನಡ ಶಾಲೆಗಳ 500 ಕ್ಕೂ ಹೆಚ್ಚಿನ ಬಡ ಮಕ್ಕಳಿಗೆ ನಮ್ಮ ಹಕ್ಕು ಸಂಘಟನೆಯ ವತಿಯಿಂದ ಶಾಲಾ ಬ್ಯಾಗ್ ಗಳನ್ನು ವಿತರಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ರೊಪ್ಪ ಸರ್ಕಾರಿ ಶಾಲೆಯ ಮಕ್ಕಳಿಗೆ ಬಟ್ಟೆ, ಲೇಖನ ಸಾಮಾಗ್ರಿಗಳನ್ನು ವಿತರಿಸುವುದರೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಇದು ಬಡ ಮಕ್ಕಳ ಬಗ್ಗೆ ಇವರಿಗಿರುವ ಕಾಳಜಿಯನ್ನು ಪ್ರಚುರಪಡಿಸುತ್ತದೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುಂಗಾಭದ್ರಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ತಿಂಗಳುಗಳ ಕಾಲ ನಡೆದ ನಿರಂತರ ಪ್ರತಿಭಟನೆಯಲ್ಲಿ ಭಾಗವಹಿಸಿ, ಪಾವಗಡ ಮಿನಿ ಫನ್ ಮ್ಯಾರಥಾನ್  ಕ್ರಿಡಾಕೂಟ ಆಯೋಜನೆಗೆ ಶ್ರಮಿಸುವುದರೊಂದಿಗೆ ತಾಲ್ಲೂಕಿನ ಜ್ವಲಂತ ಸಮಸ್ಯೆ ಪರಿಹರಿಸಲು ಹೆಜ್ಜೆ ಇಟ್ಟಿದ್ದಾರೆ.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿನಿಯರಿಗೆ ಮಾನವ ಹಕ್ಕುಗಳ ಬಗ್ಗೆ ಮಾಹಿತಿ ಕೊಡಿಸಿದ್ದಾರೆ.

ಗ್ರಾಮೀಣ ಭಾಗದ ವೃದ್ಧರಿಗೆ ಹೊದಿಕೆ ವಿತರಣೆ, ಕೊಡಗು, ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತರಿಗೆ  ಹೊದಿಕೆ, ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಅರಸೀಕೆರೆ, ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ  ಶಿಬಿರವನ್ನು ಆಯೋಜಿಸಿ, ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಹಸ್ತ ಚಾಚಿ ಚಿಕಿತ್ಸೆ ಕೊಡಿಸಿದ್ದಾರೆ. ತುರ್ತು ಇದ್ದ ಗರ್ಭಿಣಿಯರು, ರೋಗಿಗಳಿಗೆ ಉಚಿತವಾಗಿ ರಕ್ತ ಕೊಡಿಸಿಕೊಡುವ ಮೂಲಕ ಅಪದ್ಭಾಂದವನೆನೆಸಿಕೊಂಡಿದ್ದಾರೆ.

ಶನೈಶ್ಚರ ಜಾತ್ರೆ, ಶ್ರಾವಣ ಮಾಸದಲ್ಲಿ ಪಟ್ಟಣಕ್ಕೆ ಆಗಮಿಸುವ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಲಘು ಉಪಹಾರ, ಪಾನಕ, ಮಜ್ಜಿಗೆ, ನೀರು ವಿತರಣೆ ಮಾಡುವುದರ ಜೊತೆಗೆ ರಾಮ ನವಮಿ, ಹಬ್ಬ ಹರಿದಿನಗಳಂದು ಪಾನಕ, ಹೆಸರುಬೇಳೆ ವಿತರಣೆಯಂತಹ ಕೆಲಸಗಳನ್ನು ನಿರಂತರವಾಗಿ ನಡೆಸಿಕೊಂಡು ಬರುವ ಇವರು ಧಾರ್ಮಿಕ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ವಿಶ್ವ ಪರಿಸರ ದಿನಾಚರಣೆ, ಭೂ ದಿನಾಚರಣೆ ಇತ್ಯಾದಿ ದಿನಗಳಂದು ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಸಾಹಸ್ರಾರು ಸಸಿಗೆಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ರಸ್ತೆ ಬದಿ, ಅರಣ್ಯ ಪ್ರದೇಶದಲ್ಲಿ ಮರ ಕಡಿಯುವ ಕಿಡಿಗೇಡಿಗಳ ವಿರುದ್ಧ ಹೋರಾಟ ನಡೆಸಿ ಮರ ಕಡಿದ ಸ್ಥದಲ್ಲಿ ಸಸಿ ನೆಡಿಸುವ ಹಾಗೂ ಪರಿಸರಕ್ಕೆ ದಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಯಶಸ್ಸು ಸಾಧಿಸಿದ ಸಾಕಷ್ಟು  ನಿದರ್ಶನಗಳಿವೆ.

ರಾಜ್ಯೋತ್ಸವ ಪ್ರಶಸ್ತಿ ಜವಬ್ಧಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಸಮಾಜ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಾಗಿ ಗಿರಿ ಫ್ಯಾಷನ್ಸ್ ಗಿರೀಶ್ ಪಬ್ಲಿಕ್ ಸ್ಟೋರಿ ಜೊತೆ ಸಂತಸ ಹಂಚಿಕೊಂಡರು.

ಚೇಳೂರು ಹೊಸ ತಾಲ್ಲೂಕು: ಚಿಗುರೊಡೆದ ಆಸೆ

0
  • ವಿಶೇಷ ವರದಿ: ಲಕ್ಷ್ಮೀಕಾಂತರಾಜು ಎಂಜಿ,9844777110

ರಾಜ್ಯ ಸರ್ಕಾರ ಹೊಸ ತಾಲ್ಲೂಕುಗಳ ರಚನೆಗೆ ಮುಂದಾಗುತ್ತಿದ್ದಂತೆ  ಜಿಲ್ಲೆಯ  ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರ ಹೊಸ ತಾಲ್ಲೂಕು ಆಗಲಿದೆಯೇ ಎಂಬ ಆಸೆ ಚಿಗುರೊಡೆದಿದೆ.

ಗುಬ್ಬಿ ತಾಲ್ಲೂಕಿನ‌ ಚೇಳೂರು ಹೋಬಳಿ ಕೇಂದ್ರವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಇಲ್ಲಿ ನಡೆಯುವ ವಾಣಿಜ್ಯ ವ್ಯವಹಾರ ವಹಿವಾಟು ತಾಲ್ಲೂಕು ಕೇಂದ್ರ ಗುಬ್ಬಿಯಲ್ಲೂ ನಡೆಯುವುದಿಲ್ಲ. ಗುಬ್ಬಿ ಕೇಂದ್ರ ಸ್ಥಾನದಿಂದ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಐವತ್ತು ಕಿಮೀ ದೂರವಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಗುಬ್ಬಿ ಕಚೇರಿಗೆಳಿಗೆ ಹೋಗಿ ಬರಲು ಒಂದು ದಿನವೂ ಸಾಲದಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಉದ್ದೇಶಿತ ಚೇಳೂರು ತಾಲ್ಲೂಕು ವ್ಯಾಪ್ತಿಗೆ ಸೇರಲಿರುವ ಹಾಗಲವಾಡಿ ಹೋಬಳಿ ಗುಬ್ಬಿ ತಾಲ್ಲೂಕಿನ ಬಹುದೊಡ್ಡ ಹೋಬಳಿಯಾಗಿದೆ. ಹಾಗಲವಾಡಿ ಹೋಬಳಿಯ ಭೌಗೋಳಿಕ ವಿಸ್ತಾರ ಎರೆಡು ಹೋಬಳಿಗೆ ಸಮವಾಗಿದೆ. ಈ ಹೋಬಳಿಯ ಗಡಿಗ್ರಾಮಗಳಾದ ಬೋಡತಿಮ್ಮನಹಳ್ಳಿ ಹಾಗೂ ಶಿವರಾಂಪುರ ಸೇರಿಸದಂತೆ ಅನೇಕ ಗ್ರಾಮಗಳು ಪ್ರಸ್ತುತ ತಾಲ್ಲೂಕಿನ ಕೇಂದ್ರದಿಂದ ಐವತ್ತು ಕಿಮೀ ಅಂತರವಿದ್ದು, ಈ ಭಾಗದ ಗ್ರಾಮಸ್ಥರು ಗುಬ್ಬಿಗೆ ಕೆಲಸ ಕಾರ್ಯಗಳಿಗೆ ಬಂದು ಹೋಗಲು ಕಷ್ಟಕರ.

ಕಡಿಮೆ ಅಂತರದಲ್ಲಿ ಸಾರ್ವಜನಿಕರಿಗೆ ಆಡಳಿತ ಅನುಕೂಲ ಸಿಗುವ ದೃಷ್ಟಿಯಲ್ಲಿ‌ ಈಗಾಗಲೇ ರಾಜ್ಯದಲ್ಲಿ ಹಲವು ಪಟ್ಟಣಗಳನ್ನ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಈಗಾಗಲೇ ತಾಲ್ಲೂಕು ಕೇಂದ್ರವಾಗಿ ಬಡ್ತಿ ಪಡೆದಿರುವ ಪಟ್ಟಗಳ ಮಾನದಂಡ ನೋಡಿದಾಗ ಅದಕ್ಕಿಂತ ಹೆಚ್ಚು ಅರ್ಹತೆಗಳನ್ನ ಚೇಳೂರು ಹೊಂದಿದೆ.

ಚೇಳೂರಿನಲ್ಲಿ ಈಗಾಗಲೇ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯೂ ಇದ್ದು ರೈತರು ಇದನ್ನೇ ಬಳಸಿಕೊಳ್ಳುತ್ತಿದ್ದಾರೆ.  ಕೊಬ್ಬರಿ ವಹಿವಾಟಿನಲ್ಲಿ ತಿಪಟೂರು ನಂತರದ ಸ್ಥಾನ ಚೇಳೂರು ಆಗಿದೆ. ಅಡಕೆ ವ್ಯಾಪಾರದಲ್ಲಿ ಚೇಳೂರು ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದ್ದು ಬಹುದೊಡ್ಡ ವಹಿವಾಟು ನಡೆಯುತ್ತಿದೆ. ಇನ್ನು ಹಣ್ಣುಗಳಾದ ಹಲಸು ಮತ್ತು ಮಾವಿನ ಹಣ್ಣುಗಳ ವ್ಯಾಪಾರಕ್ಕೆ ಚೇಳೂರು ಹೆಸರುವಾಸಿಯಾಗಿದ್ದು ಇಡೀ ದೇಶದಲ್ಲಿಯೇ ಹೆಸರು ಮಾಡಿರುವ ಸಿದ್ದು ಹಲಸು ತಳಿ ಚೇಳೂರಿನದ್ದಾಗಿರುವುದು ವಿಶೇಷ.

https://youtu.be/eEhv_oYbh8w

ಕೃಷಿ,ವಾಣಿಜ್ಯ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಗುಬ್ಬಿ ತಾಲ್ಲೂಕಿನ ಚೇಳೂರು ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಇದೆ.

ಹಾಗಲವಾಡಿ,ಚೇಳೂರು ,ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳು ಮಳೆ ಕೊರತೆಯಿಂದ ತೀರಾ ಹಿಂದುಳಿದಿದ್ದು ಅಭಿವೃದ್ದಿ ಹೊಂದುವ ದೃಷ್ಟಿಯಿಂದ ಚೇಳೂರು,ಹಾಗಲವಾಡಿ ಹೋಬಳಿಗಳ ಜತೆಗೆ ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳನ್ನ ಸೇರಿಸಿ ಚೇಳೂರನ್ನ ತಾಲ್ಲೂಕು ಕೇಂದ್ರವನ್ನಾಗಿ ಮಾಡಿದರೆ ಈ ಭಾಗ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿ ಎಂಬುದೇ ಈ ಭಾಗದ ರೈತರ ಒತ್ತಾಯವಾಗಿದೆ.

ಚೇಳೂರು ಇತಿಹಾಸ ಪ್ರಸಿದ್ಧವೂ ಹೌದು. ಇಲ್ಲಿನ ಶ್ರೀಮರಳು ಬಸವೇಶ್ವರ ಸ್ವಾಮಿ ದೇವಾಲಯವಿದೆ. ಜಾನುವಾರುಗಳು ಕಡಿಮೆಯಾಗುತ್ತಿರುವ ಈ ಕಾಲಮಾನದಲ್ಲೂ ವರ್ಷಕ್ಕೊಮ್ಮೆ ನಡೆಯುವ ಮರಳುಬಸವೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಭಾರೀ ದನಗಳ ಜಾತ್ರೆ ನಡೆಯತ್ತದೆ. ಇಲ್ಲಿ ಎತ್ತುಗಳನ್ನ ಕೊಳ್ಳಲು ದೂರದ ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ರೈತರು ಬರುವುದು ವಿಶೇಷ.

ಚೇಳೂರಿನ ಕುರಿತು ಮತ್ತೊಂದು ದಂತ ಕತೆಯೆಂದರೆ ಇಲ್ಲಿನ ಮರಳುಬಸವೇಶ್ವರ ಸ್ವಾಮಿಯು ಘರ್ಜಿಸಿ,ಚೇಳೂರು ಬಾವಿಯು ತುಂಬಿ ಹರಿದು ಇಲ್ಲಿನ ಊರು ಬಾಗಿಲಲ್ಲಿ ಕೆತ್ತಿರುವ ಕಲ್ಲು ಕೋಳಿಯು ಕೂಗಿದರೆ ಪ್ರಪಂಚ ಪ್ರಳಯವಾಗುತ್ತದೆ ಎಂಬುದು ಇಲ್ಲಿ ಹಿಂದಿನಿಂದ ಕೇಳಿ ಬರುತ್ತಿರುವ ದಂತ ಕತೆಯಾಗಿದೆ.

ಚೇಳೂರಿನಲ್ಲಿ ಈಗಾಗಲೇ ಪೊಲೀಸ್ ಠಾಣೆ ಹಾಗೂ ಹಾಗಲವಾಡಿಯಲ್ಲಿ ಉಪ ಠಾಣೆ ಹೊಂದಿದ್ದು ಮೈಸೂರಿನಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಚೇಳೂರು‌ ಪಟ್ಟಣವಿರುವ ಕಾರಣ, ಸಮೂಹ ಸಾರಿಗೆ ವ್ಯವಸ್ಥೆಗೆ ಅನುಕೂಲವಿದೆ.

ಹತ್ತು ವರ್ಷಗಳ ಹಿಂದೆಯೇ ಚೇಳೂರು ತಾಲ್ಲೂಕು ಕೇದ್ರ ಮಾಡಲು ಆಗ್ರಹಿಸಿ ಹೋರಾಟ ಮಾಡಲಾಗಿತ್ತು. ಕಳೆದ ವರ್ಷವೂ ಚೇಳೂರು ಪಟ್ಟಣವನ್ನ‌ ತಾಲ್ಲೂಕು ಕೇಂದ್ರ ಮಾಡಲು ಆಗ್ರಹಿಸಿ ಚೇಳೂರು ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಚೇಳೂರು ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಸರ್ಕಾರ ಘೋಷಿಷಬೇಕಾಗಿದೆ

ಕಾರ್ತಿಕ್, ಅಧ್ಯಕ್ಷರು ಜಯಕರ್ನಾಟಕ ಸೇನೆ,ಚೇಳೂರು

ಸಾರಿಗೆ ಅಧಿಕಾರಿಗಳಿಗೆ ಸಚಿವರ ಸೂಚನೆ

ಬಸ್ಸು ಸಂಚಾರ ಅಂತರ ನಿಗದಿಪಡಿಸಲು ಸೂಚನೆ
ಕಚೇರಿ ಹಾಗೂ ಶಾಲಾ ಸಮಯದಂತಹ ಫೀಕ್ ಅವರ್ನಲ್ಲಿ ಬಸ್ಸುಗಳ ಸಂಚಾರ ಅಂತರದ ಸಮಯ ನಿಗದಿಪಡಿಸಿ ಹಾಗೂ ಜಿಲ್ಲೆಯಲ್ಲಿರುವ ಸಂಚಾರ ದಟ್ಟನೆಗೆ ತಕ್ಕಂತೆ ಬಸ್ಸುಗಳ ಟ್ರಿಪ್ ಗಳನ್ನು ರೂಪಿಸಬೇಕೆಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಧುಗಿರಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಂಚಾರ ಸಮಯದಲ್ಲಿ ಅಂತರವಿರಬೇಕು. ಈ ಬಸ್ಸುಗಳು ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳ ಜನರನ್ನು ಹಾಗೂ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂಬ ದೂರುಗಳಿವೆ. ಹಾಗಾಗಿ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ಗಳನ್ನು ಓಡಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಗುಬ್ಬಿ, ಹುಳಿಯಾರು, ಮಧುಗಿರಿ ಹಾಗೂ ಪಾವಗಡ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಮಯದಲ್ಲಿ ಕೆಎಸ್ ಆರ್ ಟಿ ಸಿ ಬಸ್ಗಳನ್ನು ಓಡಿಸಬೇಕು. ಬಸ್‌ಗಳ ವೇಳಾಪಟ್ಟಿಯ ಸಮಯವನ್ನು ಬದಲಾಯಿಸಿ ಬಸ್ಸುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಎಲ್ಲಾ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಿ ಜಾತ್ರೆ, ಮಕ್ಕಳು ಶಾಲೆಗೆ ಹೋಗುವ ಸಮಯ, ಗಾರ್ಮೆಂಟ್ಸ್ಗಳಿಗೆ ಕಾರ್ಮಿಕರು, ತೆರಳುವ ಸಮಯ, ರಜಾ ಮುಗಿದ ನಂತರದ ದಿನಗಳಲ್ಲಿ ಹೆಚ್ಚಿನ ಬಸ್ ಓಡಿಸಬೇಕು.

ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಿನದಾಗಿ ಆಟೋ, ಗೂಡ್ಸ್ ಆಟೋ ಸೇರಿದಂತೆ ಸ್ಥಳೀಯವಾಗಿ ಸಿಗುವ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹವರಿಗೆ ಬಸ್ ಪಾಸ್ ಗಳನ್ನು ವಿತರಿಸಿ ಅವರು ಕೆಲಸಕ್ಕೆ ತೆರಳುವ ಸಮಯಗಳಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ರಾಜ್ಯೋತ್ಸವ ರಂಗೇರಿತು

ಮಹಾತ್ಮಗಾಂಧಿ ಕ್ರೀಡಾಂಗಣದ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ಧ್ವಜ ಮತ್ತು ರಾಷ್ಟ್ರಧ್ವಜ ಎರಡನ್ನೂ ಹಾರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಕಾನೂನು ಸಚಿವರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜೆ.ಸಿ. ಮಾಧುಸ್ವಾಮಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್, ಸಶಸ್ತ್ರ ಮೀಸಲು ದಳ, ಸೇವಾದಳ, ಎನ್.ಎಸ್.ಎಸ್, ಎನ್.ಸಿ.ಸಿ ಬ್ಯಾಂಡ್ ಸೆಟ್ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು.

ಧ್ವಜಾರೋಹಣ ನೆರವೇರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠ ಡಾ.ವಂಶಿಕೃಷ್ಣ ಮೊದಲಾದವರು ಹಾಜರಿದ್ದರು.

ವೀರಗಾಸೆ, ಕರಪಾಲ ಮೇಳ, ಸೋಮನಕುಣಿತ, ಗೊಂಬೆ ಕುಣಿತ ಮೊದಲಾದ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕ ಮೆರುಗು ನೀಡಿದವು.

ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯ ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಮೊದಲೇ ಪಟ್ಟಿ ಬಿಡುಗಡೆಗೊಳಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣೆಯ ಉಸ್ತುವಾರಿ ಮುಕುಲ್ ವಾಸ್ನಿಕ್ ಎಂಟು ಹೆಸರುಗಳಿರುವ ಪಟ್ಟಿಗೆ ಸಹಿ ಹಾಕಿ ಬಿಡುಗಡೆ ಮಾಡಿದ್ದಾರೆ.

ಯಲ್ಲಾಪುರ – ಭೀಮಣ್ಣ ನಾಯ್ಕ್
ಹಿರೇಕೆರೂರು – ಬಿ.ಎಚ್.ಬನ್ನಿಕೋಡ್
ರಾಣೆಬೆನ್ನೂರು – ಕೆ.ಬಿ.ಕೋಳಿವಾಡ
ಚಿಕ್ಕಬಳ್ಳಾಪುರ – ಎಂ.ಅಂಜಿನಪ್ಪ
ಕೆ.ಆರ್.ಪುರಂ – ಎಂ.ನಾರಾಯಸ್ವಾಮಿ
ಮಹಾಲಕ್ಷ್ಮಿಲೇಔಟ್ – ಎಂ. ಶಿವರಾಜ್
ಹೊಸಕೋಟೆ – ಪದ್ಮಾವತಿ ಸುರೇಶ್
ಹುಣಸೂರು – ಎಚ್.ಪಿ.ಮಂಜುನಾಥ್

ಮೈಸೂರು, ಕರ್ನಾಟಕವಾಗಿದ್ದೇಗೆ?; ಇಲ್ಲಿದೆ ಸವಿಸ್ತಾರ ಮಾಹಿತಿ

ಪ್ರಪಂಚದಾದ್ಯಂತ ಕನ್ನಡ ನುಡಿ, ಜನ, ಸಂಸ್ಕೃತಿಗೆ ವಿಶೇಷ ಸ್ಥಾನ ಮಾನವಿದೆ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕನ್ನಡಿಗರು. ಸುಸಂಸ್ಕೃತ ನಡೆ, ನುಡಿಯ ಜನರಿರುವ ರಾಜ್ಯ  ಎಂಬ ಹೆಸರು ರಾಜ್ಯಕ್ಕಿದೆ.

ಈ ಹಿಂದೆ ಮೈಸೂರು ಎಂದು ಈ ಪ್ರಾಂತ್ಯವನ್ನು ಕರೆಯಲಾಗುತ್ತಿತ್ತು. ಕರ್ನಾಟಕ ಏಕೀಕರಣ ಚಳುವಳಿಯನ್ನು ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ 1905 ರಲ್ಲಿ ಪ್ರಾರಂಭಿಸಿದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

ಮೈಸೂರು ರಾಜ್ಯದ ಉದಯ

1956 ರ ನವೆಂಬರ್ 1 ರಂದು, ಮದ್ರಾಸ್ಮುಂಬಯಿಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಮೊದಲಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ 1, 1973 ರಂದು “ಕರ್ನಾಟಕ” ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ರಾಜ್ಯೋತ್ಸವ ಆಚರಣೆ

1956ರ ನವೆಂಬರ್ 1 ರಂದು ಮೈಸೂರು ರಾಜ್ಯವು ಉದಯವಾದ ಸಂಕೇತವಾಗಿ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತದೆ.    ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವ ಪದ್ದತಿ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ.

ರಾಜ್ಯೋತ್ಸವದಂದು  ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.

ಭಾರತದ ಇನ್ನಿತರ ಪ್ರದೇಶಗಳಾದ ಮುಂಬಯಿದೆಹಲಿ ಇತರೆಡೆಯೂ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್ದುಬೈ , ಮಸ್ಕಟ್ದಕ್ಷಿಣಕೊರಿಯಾಆಸ್ಟ್ರೇಲಿಯಾನ್ಯೂಜಿಲ್ಯಾಂಡ್ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ಪ್ರಧಾನಿಗೆ ಪತ್ರ ಬರೆದ ತಿಪಟೂರು ‌ರೈತರು

ಎಲ್ಲರ ಪತ್ರಗಳಿಗೆ ಉತ್ತರಿಸಿ ಗಮನ ಸೆಳೆಯುವ ಪ್ರಧಾನಿ ನರೇಂದ್ರ ಮೋದಿಯವರು ತಿಪಟೂರು ತಾಲ್ಲೂಕಿನ ರೈತರು ಬರೆದಿರುವ ಪತ್ರಕ್ಕೆ ಏನು ಉತ್ತರ ಕೊಡುತ್ತಾರೆ ಎಂಬ ಕುತೂಹಲ ಮೂಡಿದೆ.

ಗುರುವಾರ ತಿಪಟೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ರೈತರು,

ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

#RCEPಬೇಡ #NoRCEP

ಕೃಷಿ, ಹೈನುಗಾರಿಕೆ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳು `ಆರ್.ಸಿ.ಇ.ಪಿ’ ಒಪ್ಪಂದ ಕುರಿತಾಗಿನ ಆತಂಕದಿಂದ ಮತ್ತು ಬಹುಕಾಳಜಿಯಿಂದ ಈ ಪತ್ರ ಬರೆಯುತ್ತಿದ್ದು, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಲ್ಲಿ ಭಾರತ ಅಥವಾ ಇತರೆ ಯಾವುದೇ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಅತೀ ಸೂಕ್ಷ್ಮ ಉತ್ಪನಗಳಾದ ಹಾಲು, ಅಡುಗೆ ಎಣ್ಣೆ, ರೇಷ್ಮೆ ಮತ್ತು ಕೃಷಿ ಬೀಜಗಳ ಮೇಲಿನ ಯಾವುದೇ ಬೌದ್ದಿಕ ಆಸ್ತಿ ಹಕ್ಕು (IPR) ಸೇರಿದಂತೆ ಯಾವುದೇ ರೀತಿಯ ಹಕ್ಕು ಭಾಧ್ಯತೆಗಳನ್ನು ಮತ್ತು ಮುಕ್ತ ವ್ಯಾಪರವನ್ನು ಹೇರಬಾರದು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್. ದೇವರಾಜು ಆಗ್ರಹಿಸಿದರು.
ತಿಪಟೂರಿನಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂದು ನಡೆದ ರೈತ ವಿರೋಧಿ `ಆರ್ ಸಿಇಪಿ’ (RCEP) ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಮಾಡಬಾರದೆಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗ್ರಾಮದೇವತೆ ಕೆಂಪಮ್ಮದೇವಿ ದೇವಸ್ಥಾನದ ಬಳಿ ಉದ್ಘಾಟಿಸಿ ಮಾತನಾಡಿದರು.

ವಿಡಿಯೋಗೆ ಇಲ್ಲೊ ಕ್ಲಿಕ್ ಮಾಡಿ

ಆರ್.ಸಿ.ಇ.ಪಿ(RCEP) ಪ್ರಸ್ತುತ ವಿಶ್ವವ್ಯಾಪಾರ ಸಂಸ್ಥೆಯ (WTO) ಒಪ್ಪಂದಗಳ ನಿಯಮಗಳನ್ನು ಮೀರಿಸುವಂತಹ ಅಸಮಂಜಸ ಕಟ್ಟುಪಾಡುಗಳನ್ನು ಮತ್ತು ನಿಯಮಗಳನ್ನು ಭಾರತ ಸೇರಿದಂತೆ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಹೇರಲು ಒತ್ತಾಯಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಬೀಜ ಕಂಪನಿಗಳು UPOV 91 ನಿಯಮಗಳಡಿ ನಮ್ಮ ದೇಸಿ ತಳಿ ಬೀಜಗಳನ್ನು ಕಸಿಯುವ ತಂತ್ರವಾಗಿರುತ್ತದೆ. ಆದುದರಿಂದ ಅಂತರರಾಷ್ಟ್ರೀಯ ಸಸ್ಯಪ್ರಭೇದಗಳ ಸಂರಕ್ಷಣೆ ಒಕ್ಕೂಟದ (UPOV 91) ಯಾವುದೇ ಕಟ್ಟುಪಾಡುಗಳು/ನಿಯಮಗಳನ್ನು ಆರ್.ಸಿ.ಇ.ಪಿ (RCEP) ಒಪ್ಪಂದದಲ್ಲಿ ಭಾರತ ನಿರಾಕರಿಸಬೇಕು ಎಂದು RKS ನ ಸ್ವಾಮಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈಗಾಗಲೇ ಭಾರತ-ಆಸಿಯಾನ್ ದೇಶಗಳ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಆಗ್ನೇಯ ರಾಷ್ಟ್ರಗಳಿಂದ ಅದರಲ್ಲಿಯೂ ಫಿಲಿಫೈನ್ಸ್, ಮಲೇಶಿಯಾ, ಇಂಡೋನೇಷಿಯಾದಂತಹ ದೇಶಗಳಿಂದ ಅತೀ ಕಡಿಮೆ ಬೆಲೆಯಲ್ಲಿ ತೆಂಗಿನ ಎಣ್ಣೆ ಮತ್ತು ತೆಂಗು ಉತ್ಪನ್ನಗಳ ಆಮದಿನ ಕಾರಣ ಕರ್ನಾಟಕದ ವಿಶಿಷ್ಟವಾದ ತಿಪಟೂರು ತೆಂಗಿನಕಾಯಿ, ಸೇರಿದಂತೆ ದಕ್ಷಿಣ ಭಾರತದ ತೆಂಗು ಬೆಳೆಯುವ ರೈತರು ತಮ್ಮ ತೆಂಗು ಉತ್ಪನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಕಂಗಾಲಗಿದ್ದು ಆರ್.ಸಿ.ಇ.ಪಿ ಒಪ್ಪಂದವು ತೆಂಗು ಬೆಳೆಗಾರರನ್ನು ಮತ್ತಷ್ಟು ಆತಂಕ್ಕೆ ದೂಡುತ್ತಿದೆ. ಇದೇ ಪರಿಸ್ಥಿತಿಯು ಕರ್ನಾಟಕ ರೇಷ್ಮೆ ಬೆಳೆಯುವ ರೈತರಿಗೂ ಕೂಡ ಉಂಟಾಗಿದ್ದು ಈ ಒಪ್ಪಂದವು ಭಾರತದ ರೈತರ ಜೀವನೋಪಾಯವನ್ನು ಅಪಾಯದಲ್ಲಿ ಸಿಲುಕಿಸುವುದರಲ್ಲಿ ಅನುಮಾನವೇ ಇಲ್ಲ, ಹಾಗಾಗಿ RCEPಯನ್ನು ದುಡಿಯು ರೈತರು ವಿರೋಧಿಸಬೇಕು ಎಂದು ಸೌಹಾರ್ದ ವೇದಿಕೆಯ ಅಲ್ಲಾಬಕಾಶ್ ಹೇಳಿದರು.

ಕೃಷಿಯ ಜೊತೆಜೊತೆಯಾಗಿ ಹೈನುಗಾರಿಕೆ ಕಟ್ಟಿಕೊಂಡ ಭಾರತದ 10 ಕೋಟಿ ರೈತರ ಜೀವನ ಭದ್ರತೆಗೆ ಆಪಾಯ ಬಂದಿದ್ದು ಆರ್.ಸಿ.ಇ.ಪಿ ಕಾರಣದಿಂದ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯ ದೇಶಗಳ ಹಾಲು ಉತ್ಪಾದಿಸುವ ದೈತ್ಯ ಕಂಪನಿಗಳು ಹಾಲು ಮತ್ತು ಅದರ ಉತ್ಪನ್ನಗಳನ್ನು ನಮ್ಮ ದೇಶಕ್ಕೆ ತಂದು ಸುರಿದು ಇಲ್ಲಿನ ಸ್ಥಳೀಯ ಹೈನು ಉದ್ಯಮವನ್ನು ಹಾಗು 30 ವರ್ಷಗಳಿಂದ ಹಳ್ಳಿ ಹಳ್ಳಿಗಳಲ್ಲಿ ರೈತರೇ ಕಟ್ಟಿ ಬೆಳೆಸಿದ ಹಾಲು ಉತ್ಪಾದಕ ಸಂಘಗಳನ್ನು ನಾಶಪಡಿಸಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈ ಒಪ್ಪಂದದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೈಬಿಡದಿದ್ದರೆ ಹೋರಾಟ ಇನ್ನೂ ತೀವ್ರ ರೂಪ ತಾಳಲಿದೆ ಎಂದು ಬೆಂಗಳೂರು ಹಾಲು ಮಹಾ ಮಂಡಳಿಯ ತುಮಕೂರು ಜಿಲ್ಲಾ ನಿರ್ದೇಶಕ ಮಾದೀಹಳ್ಳಿ ಪ್ರಕಾಶ ಸರ್ಕಾರಕ್ಕೆ ಎಚ್ಚರಿಸಿದರು.

ಭಾರತ ಸರ್ಕಾರವು ಈ ಒಪ್ಪಂದಕ್ಕೆ ಬದ್ದರಾಗುವ ಮುನ್ನ ಭಾರತದ ತೆಂಗು ಮತ್ತು ಇತರ ಎಣ್ಣೆ ಬೀಜಗಳ ಉತ್ಪಾದಕ ರೈತರು, ಹಾಲು ಉತ್ಪಾದಕ ರೈತರು, ರೇಷ್ಮೆ ಬೆಳೆಗಾರ ರೈತರು ಹಾಗು ಇತರೆ ಕೃಷಿ ಬೀಜಗಳನ್ನು ಉಳಿಸಿಕೊಳ್ಳುವ, ಬೀಜಗಳನ್ನು ವಿನಿಮಯ ಮಾಡಿಕೊಳ್ಳುವ, ಬೀಜಗಳನ್ನು ಮಾರುವ ಅಥವ ಪ್ರಸರಣ ಮಾಡುವ ಸ್ವಾತಂತ್ರ್ಯಕ್ಕೆ ಚ್ಯುತಿ ಬಾರದಂತೆ ಮತ್ತು UPOV 91 ಅಂಶಗಳನ್ನು ಸೇರಿದಂತ ನಕಾರಾತ್ಮಕ ಅಂಶಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಉಜ್ಜಜ್ಜಿ ರಾಜಣ್ಣ ಅಭಿಪ್ರಾಯಪಟ್ಟರು.

ಈ ಒಪ್ಪಂದಕ್ಕೆ ಒಮ್ಮೆ ಭಾರತ ಬದ್ದವಾದಲ್ಲಿ ಭಾರತದ ಹಾಲು ಉತ್ಪಾದನೆಯ ವ್ಯವಸ್ಥೆ, ತೆಂಗು ಮತ್ತು ಇತರೆ ಎಣ್ಣೆ ಬೀಜಗಳ ಉತ್ಪಾದನೆ ವ್ಯವಸ್ಥೆ, ಕೃಷಿ ಬೀಜ ವ್ಯವಸ್ಥೆ, ಅಂತರರಾಷ್ಟ್ರೀಯ ಹಕ್ಕುಗಳು ಮತ್ತು ಅವುಗಳ ಕಟ್ಟುಪಾಡುಗಳ ಮೇಲೆ ಅಸಮಂಜಸ ಮತ್ತು ದುಷ್ಪರಿಣಾಮ ಬೀರಲಿದೆ. ಆದುದರಿಂದ ಭಾರಿ ವೈವಿಧ್ಯಮಯ ಬದುಕು ಮತ್ತು ಕೃಷಿ ಜ್ಞಾನದ ದೇಶವಾಗಿರುವಂತಹ ಭಾರತದ, ವೈವಿಧ್ಯ ಬೀಜ ಸಂರಕ್ಷಣೆ, ವಿನಿಮಯ ಮತ್ತು ಪ್ರಸರಣ ಸಂಸ್ಕೃತಿಯ ಸ್ವಾತಂತ್ರ್ಯದ ಮೇಲೆ ಹಾಗೂ ರೈತರ ಜೀವನೋಪಾಯ ರಕ್ಷಣೆಯ ವ್ಯವಸ್ಥೆಯ ಮೇಲೆ ಅಪಾಯ ಬೀರುವ ಆರ್.ಸಿ.ಇ.ಪಿ ಅಂತಹ ಭಾರಿ ಮುಕ್ತ ವ್ಯಾಪಾರ ನಮಗೆ ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆರ್.ಸಿ.ಇ.ಪಿ ಒಪ್ಪಂದವನ್ನು ಧಿಕ್ಕರಿಸಿದರು.

ಕಾಲ್ನಡಿಗೆ ಮೂಲಕ ಸಾವಿರಾರು ರೈತರು ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಜಮಾಯಿಸಿದರು. ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ ಮಾತನಾಡಿದರು. ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದ ಸಾರಾಂಶವನ್ನು ಓದಿ ನಂತರ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಸಿರು ಸೇನೆಯ ತಿಮ್ಲಾಪುರ ದೇವರಾಜು, ಬಸ್ತೀಹಳ್ಳಿ ರಾಜಣ್ಣ, ಮನೋಹರ್ ಪಟೇಲ್, ಸಿ.ಬಿ.ಶಶಿಧರ್, ಎಂ.ಆರ್. ಸಂಗಮೇಶ್, ನ್ಯಾಕೇನಹಳ್ಳಿ ಸುರೇಶ್ ಹಾಜರಿದ್ದರು. ಸಾವಿರಾರು ರೈತರು ಭಾಗವಹಿಸಿದ್ದರು. ನೂರಾರು ಮಹಿಳಾ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿ RCEP ಒಪ್ಪಂದದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾಸ್ ಸ್ಟೌ ಸ್ಪೋಟ; ರೈಲಿನಲ್ಲಿದ್ದ 65 ಕ್ಕೂ ಹೆಚ್ಚಿನ ಪ್ರಯಾಣಿಕರು ಸಾವು

ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿ–ರಾವಲ್ಪಿಂಡಿ ತೇಜ್‌ಗಂ ಎಕ್ಸ್‌ಪ್ರೆಸ್‌ರೈಲಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಆವರಿಸಿದ ಪರಿಣಾಮ 65 ಕ್ಕೂ ಹೆಚ್ಚಿನ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಮಂದಿ ಪ್ರಯಾಣಿಕರು ಚಲಿಸುವ ರೈಲಿನಿಂದ ಹೊರಗೆ ಜಿಗಿದಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ತೇಜ್‌ಗಂ ರೈಲಿನ ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಬೋಗಿಗಳಲ್ಲಿದ್ದವರು ಸಂಪೂರ್ಣವಾಗಿ ಸುಟ್ಟು ಹೋಗಿದ್ದಾರೆ. ಬೆಳಗಿನ ತಿಂಡಿ ತಯಾರಿಸಲು ಬಳಸುತ್ತಿದ್ದ ಎರಡು ಪುಟ್ಟ ಗ್ಯಾಸ್‌ ಸ್ಟೌಗಳು ಸ್ಫೋಟಗೊಂಡಿವೆ. ಬೆಂಕಿ ವೇಗವಾಗಿ ರೈಲು ಬೋಗಿಗಳನ್ನು ಆವರಿಸಿದೆ. ಪಂಜಾಬ್‌ ಪ್ರಾಂತ್ಯದ ರಹಿಮ್‌ ಯಾರ್‌ ಖಾನ್‌ ಪಟ್ಟಣ ಸಮೀಪ ಅವಘಡ ಸಂಭವಿಸಿದೆ.

ಅಡುಗೆಗೆ ಬಳಸಲು ಇಟ್ಟಿದ್ದ ಎಣ್ಣೆ ಬೆಂಕಿಯ ತೀವ್ರತೆ ಹೆಚ್ಚಲು ಕಾರಣವಾಗಿದೆ. 65 ಕ್ಕೂ ಹೆಚ್ಚಿನ ಪ್ರಯಾಣಿಕರು ಮೃತಪಟ್ಟಿದ್ದು, 15ಕ್ಕೂ ಹೆಚ್ಚಿನವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

 

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕರ ಸಾವು

ತುಮಕೂರು: ಕೆ. ಬೊಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಪ್ರವೀಣ್ ಮತ್ತು ರಮೇಶ(21)  ಮೃತಪಟ್ಟಿದ್ದಾರೆ.

ತುಮಕೂರು ಸಮೀಪವಿರುವ ಕೆ.ಪಾಲಸಂದ್ರ ಪಾಳ್ಯದ ನಿವಾಸಿಗಳಾದ ಪ್ರವೀಣ್ ಹಾಗೂ ರಮೇಶ್  ವಸಂತ ನರಸಪುರದ ಕೈಗಾರಿಕಾ ಪ್ರದೇಶದಲ್ಲಿ  ಕೆಲಸಕ್ಕೆ ಹೋಗಿದ್ದರು. ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಹಿಂತಿರುಗುವಾಗ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ  ಇಬ್ಬರೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಪಬ್ಲಿಕ್ ಸ್ಟೋರಿಗೆ ಮಾಹಿತಿ ನೀಡಿದರು.

ಡಿಕ್ಕಿ ಹೊಡೆತಕ್ಕೆ  ರಮೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೊಬ್ಬ ಗಾಯಾಳು ಪ್ರವೀಣ್  ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ  ಮೃತಪಟ್ಟರು.

ಮತ್ತೊಬ್ಬ ಗಾಯಾಳು ದೊಡ್ಡಬಳ್ಳಾಪುರಸ ಮಧುಸೂಧನ್ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೇಟಿಯಂ, ಫೋನ್ ಪೇ ಒಂದು ದಿನದ ನಷ್ಟ ಎಷ್ಟು ಗೊತ್ತೇ?

ಇ- ಪೇಮೆಂಟ್ ದೈತ್ಯ ಸಂಸ್ಥೆ ಗಳು ನಷ್ಟ ದಲ್ಲಿದ್ದು, ಪೇಟಿಯಂ, ಅಮೆಜಾನ್ ಪೆ, ಪೋನ್ ಪೆ ದಿನಕ್ಕೆ 20ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ಟಾಪ್ಲರ್ ಎನ್ ಟ್ಯ್ತಾಕರ್ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷದ ಹಣಹಾಸು ವರ್ಷ ದಲ್ಲಿ ನಷ್ಟ ಇನ್ನೂ ಹೆಚ್ಚಾಗಿದೆ ಎಂದು ಹೇಳಿದೆ.
ಕಳೆದ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಈ ಮೂರು ಸಂಸ್ಥೆ ಗಳ ಒಟ್ಟು ನಷ್ಟ 2729 ಕೋಟಿ ರೂಪಾಯಿ ಆಗಿತ್ತು ಎಂದು ಹೇಳಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ದಿನ ಈ ಸಂಸ್ಥೆಗಳು ಪ್ರತಿ ದಿನ 7.5 ಕೋಟಿ ನಷ್ಟ ಅನುಭವಿಸುತ್ತಿದ್ದವು. ಈ ವರ್ಷ ಇದು ಪ್ರತಿ ದಿನ 20 ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವಿಸ್ತಾರವಾದ ವರದಿ ಪ್ರಕಟಿಸಿದೆ.

ಇಷ್ಟು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಲು ಈ ಸಂಸ್ಥೆಗಳನಡುವೆ ಇರುವ ಪೈಪೋಟಿ, ಮಾರುಕಟ್ಟೆ ಯನ್ನು ಹಿಡಿತದಲ್ಲಿ ಹಿಡಿದುಕೊಳ್ಳಲು ಮಾಡುತ್ತಿರುವ ಜಾಹೀರಾತು ಖರ್ಚು, ಗ್ರಾಹಕರಿಗೆ ನೀಡುತ್ತಿರುವ ಪೇ ಬ್ಯಾಕ್, ಡಿಸ್ಕೌಂಟ್ ಕೊಡುಗೆಗಳು ಕಾರಣ ಎಂದು ವಿಶ್ಲೇಷಿಸಲಾಗಿದೆ.