Thursday, October 16, 2025
Google search engine
Home Blog Page 327

ಚೇಳೂರು ನೂತನ ತಾಲ್ಲೂಕು: ಅಧ್ಯಯನಕ್ಕಾಗಿ ಸಮಿತಿ ಏಕಿಲ್ಲ?

ವಿಶೇಷ ವರದಿ:ಲಕ್ಷ್ಮಿಕಾಂತ ರಾಜ್  

ಗುಬ್ಬಿ ತಾಲ್ಲೂಕಿನ ಚೇಳೂರು, ಶಿರಾ  ತಾಲ್ಲೂಕಿನ ಕಳ್ಳಂಬೆಳ್ಳ ಈ ಎರಡು ಕೇಂದ್ರಗಳಲ್ಲಿ ಯಾವುದನ್ನು ತಾಲ್ಲೂಕು ಕೇಂದ್ರವಾಗಿ ಮಾಡಬೇಕೆಂಬ ಬಗ್ಗೆ ಅಧ್ಯಯನಕ್ಕಾಗಿ 2009ರಲ್ಲೇ ಅಂದಿನ ರಾಜ್ಯ ಸರ್ಕಾರ ನಿವೃತ್ತ ಅಧಿಕಾರಿ ಎಂ.,ಬಿ.ಪ್ರಕಾಶ್ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ನೀಡಿದ ಶಿಫಾರಸು ಏಕ ಪಕ್ಷೀಯವಾಗಿತ್ತು. ಹೊಸ ಸಮಿತಿ ನೇಮಕ ಮಾಡುವ ಮೂಲಕ ಚೇಳೂರು ತಾಲ್ಲೂಕು ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂಬುದು ಈ ಭಾಗದ ಜನರ ಹಕ್ಕೊತ್ತಾಯವಾಗಿದೆ.

ಪ್ರಕಾಶ್ ಸಲಹಾ ಸಮಿತಿಯು ಪಕ್ಕದ ಕಳ್ಳಬೆಳ್ಳ ತಾಲ್ಲೂಕು ಕೇಂದ್ರವನ್ನಾಗಿಸಿ ಗುಬ್ಬಿಯ ಚೇಳೂರು ಹೋಬಳಿಯ ನಲ್ಲೂರು ಮತ್ತು ಅಂಕಸಂದ್ರ ಪಂಚಾಯಿತಿ ಹಾಗೂ ಹಾಗಲವಾಡಿ ಹೋಬಳಿಯನ್ನ ಕಳ್ಳಂಬೆಳ್ಳ ಉದ್ದೇಶಿತ ತಾಲ್ಲೂಕು ಕೇಂದ್ರವನ್ನಾಗಿಸಲು ಗುಬ್ಬಿ ತಾಲ್ಲೂಕಿನ ಈ ಮೇಲ್ಕಾಣಿಸಿದ ಭಾಗಗಳನ್ನ ಸೇರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಆ ಸಮಯದಲ್ಲಿ ಚೇಳೂರು ಹಾಗೂ ಹಾಗಲವಾಡಿ ಭಾಗದಲ್ಲಿ ವ್ಯಾಪಕ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಪ್ರಕಾಶ್ ಸಮಿತಿಯು ಶಿಫಾರಸ್ಸು ಮಾಡಿದ್ದ ಕಳ್ಳಂಬೆಳ್ಳ ತಾಲ್ಲೂಕನ್ನ ಸರ್ಕಾರ ವರದಿಯಿಂದ ಕೈಬಿಡಲಾಯಿತು. ಇದಾದ ಬಳಿಕ ಚೇಳೂರು ತಾಲ್ಲೂಕು ಕೇಂದ್ರದ ಹೋರಾಟಕ್ಕೆ ಮಂಕು ಬಡಿಯಿತು ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ಹಿರಿಯರು.

ಸಲಹಾ ಸಮಿತಿಯು ಶಿಫಾರಸ್ಸು ಮಾಡಿದ್ದ ಕಳ್ಳಂಬೆಳ್ಳವು ಶಿರಾ ತಾಲ್ಲೂಕು ಕೇಂದ್ರದಿಂದ ಕೇವಲ ಹತ್ತು ಕಿಮೀ‌ ಅಂತರ ಇದ್ದು ಇದೊಂದು ಉದ್ದೇಶಿತ ಪೂರಿತ ಶಿಫಾರಸು ಆಗಿತ್ತು. ನಿಜ ಅರ್ಥದಲ್ಲಿ ಚೇಳೂರನ್ನು ತಾಲ್ಲೂಕು ಮಾಡುವುದೇ ಸರಿಯಾಗಿದೆ. ಇದು ವೈಜ್ಞಾನಿಕವೂ ಆಗಿದೆ ಎಂದು ಇಲ್ಲಿನ ಹಿರಿಯರೊಬ್ಬರು ತಿಳಿಸಿದರು.

ಹಾಗೆ ನೋಡಿದರೆ ಕಳ್ಳಂಬೆಳ್ಳ ಗ್ರಾಮಕ್ಕಿಂತ ಚೇಳೂರು ತಾಲ್ಲೂಕು ಕೇಂದ್ರವಾಗಲು ಹೆಚ್ಚು ಅರ್ಹತೆ ಹೊಂದಿದೆ.  ಚೇಳೂರಿನಲ್ಲಿ ಶಿಕ್ಷಣ ಕ್ಷೇತ್ರವೂ ಮುಂದುವರೆದಿದೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಸರ್ಕಾರಿ ಮತ್ತು ಖಾಸಗಿ ಪಿಯು ಕಾಲೇಜುಗಳು ಮತ್ತು ಖಾಸಗಿ ಐಟಿಐ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳ ಜೊತೆಗೆ ತಾಲ್ಲೂಕು ಮಟ್ಟದಂತೆ ಪ್ರತಿಷ್ಟಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿವೆ. ಆದ್ದರಿಂದ ಎಲ್ಲ ರೀತಿಯಿಂದಲೂ‌ ಚೇಳೂರು ತಾಲ್ಲೂಕು ಕೇಂದ್ರವಾಗಿಸಲು ಅರ್ಹತೆ ಎನ್ನುತ್ತಾರೆ ಚೇಳೂರು ಭಾಗದ ಮುಖಂಡರುಗಳು.

ಹಾಗಲವಾಡಿಯಿಂದ ಗುಬ್ಬಿಯು ನಲವತ್ತೈದು ಕಿಮೀ ಅಂತರವಿದ್ದು ತಾಲ್ಲೂಕು ಕಚೇರಿಗಳಿಗೆ ಹೋಗಿಬರಲು ಒಂದು ದಿನವೇ ಬೇಕಾಗಿದ್ದು ನಮ್ಮ ಸಮೀಪದ ಚೇಳೂರು ತಾಲ್ಲೂಕು ಕೇಂದ್ರವಾದರೆ ನಮಗೆ ಎಲ್ಲ ರೀತಿಯಿಂದಲೂ ಅನುಕೂಲವಾಗುತ್ತದೆ.

ಶಿವರಾಜು,ಹಾಗಲವಾಡಿ

ಚೇಳೂರು ತಾಲ್ಲೂಕು ಆಗುವದಾದರೆ ನೆರೆಯ ಶಿರಾ ತಾಲ್ಲೂಕಿನ ಗೋಪಾಲದೇವರಹಳ್ಳಿ ಪಂಚಾಯತಿಯು ಶಿರಾಕ್ಕೆ ದೂರವಿದ್ದು ಈ ಪಂಚಾಯತಿಯನ್ನ ಚೇಳೂರು ತಾಲ್ಲೂಕಿಗೆ ಸೇರ್ಪಡೆಯಾಗಲು ವೈಜ್ಞಾನಿಕವಾಗಿದ್ದು ಅಲ್ಲಿನ ಜನರು ಈ ಕುರಿತು ಆಸಕ್ತಿದಾಯಕವಾಗಿದ್ದಾರೆ

ಕಿರಣ್ ಕುಮಾರ್,ಬಿಜ್ಜನಬೆಳ್ಳ ಶಿರಾ ತಾಲ್ಲೂಕು

ಸುಳ್ಳು ಆರೋಪ ನಿಲ್ಲಲಿ: ದೊರೈರಾಜ್

0

ತುಮಕೂರು:ದೊಡ್ಡಪಾಳ್ಯ ನರಸಿಂಹಮೂರ್ತಿ ಪತ್ರಕರ್ತರಾಗಿ ಹೋರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಂಥವರ ಮೇಲೆ ಸುಳ್ಳು ಆರೋಪ ಹೊರಿಸ ಬಂದಿಸಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್ ಹೇಳಿದರು.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಿಪಾಳ್ಯ ನರಸಿಂಹಮೂರ್ತಿ ದೇಶದ್ರೋಹಿ, ತಲೆಮರೆಸಿಕೊಂಡ ವ್ಯಕ್ತಿ ಎಂದು ಬಿಂಬಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಜನವಿರೋಧಿ ನೀತಿ ವಿರೋಧಿಸುವ ಮತ್ತು ಹೋರಾಟ ,ಮಾಡುವವರ ದನಿಗಳನ್ನು ಅಡಗಿಸುವ ಕೆಲಸ ಮಾಡುತ್ತಿದೆ. ಇದು ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದ್ದು ಇದನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಸ್ವರಾಜ್ ಇಂಡಿಯಾದ ಮುಖಂಡ ಸಿ.ಯತಿರಾಜು ಮಾತನಾಡಿ, ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯ ಸ್ವಾತಂತ್ರ್ಯ ಮತ್ತು ವಿರೋಧಿ ಅಭಿಪ್ರಾಯ ವ್ಯಕ್ತಪಡಿಸುವವರ ದನಿಯನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದೆ. ಇದನ್ನು ಜನಪರ ಸಂಘಟನೆಗಳು ಬಲವಾಗಿ ಖಂಡಿಸುತ್ತವೆ ಎಂದರು.

ಜನಸಂಗ್ರಾಮ ಪರಿಷತ್ ಮುಖಂಡ ಪಂಡಿತ್ ಜವಹಾರ್ ಮಾತನಾಡಿ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಪತ್ರಕರ್ತರು ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಸರ್ಕಾರ ಕೆಲಸ ಮಾಡಲು ಸಾಕಷ್ಟು ಕೆಲಸ ಇದೆ. ಹಲವು ಮಂದಿ ರೈತ, ಕಾರ್ಮಿಕ, ಆರ್ ಎಸ್ಎಸ್ ನಲ್ಲಿ ಗುರುತಿಸಿಕೊಂಡವರು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಮಾಜ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಜನಪರ ಮತ್ತು ಪ್ರಗತಿಪರ ದನಿಗಳನ್ನು ಅಡಗಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದ್ದು ಇದನ್ನು ಬಿಡಬೇಕು ಎಂದರು. ಜನಪರ ಸಂಘಟನೆಗಳ ಒಕ್ಕೂಟ, ಜನಸಂಗ್ರಾಮ ಪರಿಷತ್, ಪಿಯುಸಿಎಲ್, ಸ್ವರಾಜ್ ಇಂಡಿಯಾ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ನಾದೂರು ಕೆಂಚಪ್ಪ, ಹಂದ್ರಾಳ್ ನಾಗಭೂಷಣ, ಮೋಹನ್ ಉಪಸ್ಥಿತರಿದ್ದರು.

ಮಾಜಿ ಸಚಿವ, ಹೋರಾಟಗಾರ ವೈಜನಾಥ ಪಾಟೀಲ್ ಇನ್ನಿಲ್ಲ

ಕಲಬುರಗಿ: ಮಾಜಿ ಸಚಿವ, 371ಜೆ ವಿಧಿ ತಿದ್ದುಪಡಿ ಜಾರಿ ಹೋರಾಟಗಾರ ವೈಜನಾಥ ಪಾಟೀಲ್ ಇನ್ನಿಲ್ಲ.ಅವರಿಗೆ 82 ವರ್ಷ ವಯಸ್ಸಾಗಿತ್ತು.

ಅನಾರೋಗ್ಯ ದಿಂದ ಬಳಲುತ್ತಿದ್ದ ಪಾಟೀಲ್ ಅವರು ಇಂದು ಬೆಳಿಗ್ಗೆ ೬ ಗಂಟೆ ಸುಮಾರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ 1984ರಲ್ಲಿ ತೋಟಗಾರಿಕೆ ಹಾಗೂ ಎಚ್. ಡಿ. ದೇವೆಗೌಡ ಸಂಪುಟದಲ್ಲಿ 1994ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಗೆ ಪಾಟೀಲ್ ರ ಮನಸ್ಸು ಸದಾ ಮಿಡಿಯುತ್ತಿತ್ತು. ಈ ಭಾಗದ ಅಭಿವೃದ್ಧಿ ಗಾಗಿ ವಿಶೇಷ ಸ್ಥಾನಮಾನ ಕಲ್ಪಿಸುವ 371 ಜೆ ವಿಧಿ ಜಾರಿಗೆ ಆಗ್ರಹಿಸಿ ಎರಡು ದಶಕಗಳ ಹಿಂದೆ ಧ್ವನಿ ಎತ್ತಿ ಹೋರಾಟ ರೂಪಿಸಿದವರೇ ವೈಜನಾಥ ಪಾಟೀಲ್.
371 ಜೆ ವಿಧಿ ಜಾರಿಯಲ್ಲದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನಾದರೂ ಅನ್ಯಾಯವಾದರೆ ತಕ್ಷಣ ವೇ ಸರಕಾರ ದ ಗಮನ ಸೆಳೆಯುತ್ತಿದ್ದ ವೈಜನಾಥ ಪಾಟೀಲ್ ಅವರು ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದವರಾಗಿದ್ದಾರೆ.

ಹೋರಾಟಕ್ಕೆ ಇನ್ನೊಂದು ಹೆಸರು ವೈಜನಾಥ ಪಾಟೀಲ್ ಎಂದೇ ಹೆಸರು ಪಡೆದ ಪಾಟೀಲ್ ರನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕವಿಂದು ಬಡವಾಗಿದೆ.

ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ್ ಸೇರಿ ಮೂವರು ಪುತ್ರರು, ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ರವಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಸೆಪ್ಟೆಂಬರ್ 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೀವನ ಪರಿಚಯ ಹಾಗೂ ಹೋರಾಟದ ಇತಿಹಾಸ ಹೇಳಿದ್ದರು. ಆದರೆ ಜೀವನ ಇತಿಹಾಸದಿಂದ ಇಷ್ಟು ಬೇಗ ಮರೆಯಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ

ಮಹಿಳೆಯ ಕೊಲೆ

ಹೊಲದಿಂದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ತುಮಕೂರು ಸಮೀಪದ ದೊಡ್ಡಸಿದ್ದಯ್ಯನಪಾಳ್ಯದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು 35 ವರ್ಷದ ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಶುಕ್ರವಾರ ಸುಮಾರು 3.30ರ ಸಮಯದಲ್ಲಿ ಹೊಲದಿಂದ ಮನೆಗೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಎದುರಾದ ವ್ಯಕ್ತಿ ಆಕೆ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ.

ಚಾಕುವಿಂದ ಮಾಂಗಲ್ಯ ಸರ ಕತ್ತರಿಸಲು ಮುಂದಾದಾಗ ಆಕೆ ಜಗ್ಗಿದ್ದು ಆ ಸಂದರ್ಭದಲ್ಲಿ ಚಾಕು ಆಕೆಯ ಕುತ್ತಿಗೆಯನ್ನು ಸೀಳಿದೆ. ತೀವ್ರ ರಕ್ತಸ್ರಾವವಾಗಿ ಹಳ್ಳದಲ್ಲಿ ಇಳಿದು ಹತ್ತುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇಸ್ಪೀಟು ಆಟದಲ್ಲಿ ಸೋತಿದ್ದ. ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದ. ಮತ್ತೆ ಆಟ ಆಡಲು ಹಣ ಬೇಕಾಗಿದ್ದರಿಂದ ಮಾಂಗಲ್ಯ ಸರ ಕದಿಯಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿ ಶೀಟರ್ ಭೀಕರ ಕೊಲೆ

ತುಮಕೂರು ಹೊರವಲಯದ ಬೆಳಗುಂಬದಲ್ಲಿ ರೌಡಿಶೀಟರ್ ವೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಸ್ನೇಹಿತನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು ರೌಡಿಶೀಟರ್ ಮೋಹನ್ ಕುಮಾರ್ ಅಲಿಯಾಸ್ ಚಟ್ಟ ಕುಮಾರ್ ಎಂದು ಗುರುತಿಸಲಾಗಿದೆ.

ತಲೆ ಮೇಲೆ ಕಲ್ಲು ಎತ್ತಿಹಾಕಿರುವುದರಿಂದ ತಲೆ ನಜ್ಜುಗುಜ್ಜಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ

ಚಿ,ನಾ.ಹಳ್ಳಿ ಕೆರೆಗಳಿಗೆ ನೀರು: ಸ್ವಾಗತ

0

ಚಿ.ನಾ,ಹಳ್ಳಿ: ತಾಲ್ಲೂಕಿನ 28 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ನೀರಾವರಿ ಹೋರಾಟಗಾರರಾದ ವಕೀಲ ಬಿ.ಜೆ.ಮಹಾವೀರ್ ಸ್ವಾಗತಿಸಿದ್ದಾರೆ.
ಒಂದು ಕಾಲದಲ್ಲಿ ತೆಂಗಿಗೆ ನಾಡಿನೆಲ್ಲಡೆ ಹೆಸರಾಗಿದ್ದ ತಾಲ್ಲೂಕು ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ಸಿಲುಕಿ ನಲುಗಿದೆ. ವ್ಯಾಪಕವಾಗಿ ತೋಟ-ತುಡಿಕೆಗಳು ಒಣಗಿ ಹೋಗಿವೆ. ಕೃಷಿಕರು ಊರು ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಡಿಯಲು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ 28 ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಲು ರಾಜ್ಯ ಸರ್ಕಾರದ ನಿರ್ಧಾರ ಶಾಘ್ಲನೀಯವಾಗಿದೆ ಎಂದು ಹೇಳಿದ್ದಾರೆ.
ತಾಲ್ಲೂಕಿಗೆ ಹೇಮಾವತಿ ನೀರಿಗಾಗಿ ಹಲವು ಹೋರಾಟಗಳು ನಡೆದಿವೆ. ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಕಾರ್ಯಕರ್ತರು, ಸಂಘಟನೆಗಳು, ನೀರಾವರಿ ಹೋರಾಟಗಾರರ ಫಲ ಇದಾಗಿದೆ. ಸಚಿವ ಸಂಪುಟದ ನಿರ್ಧಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಶ್ರಮ ಇರುವುದು ಎದ್ದು ಕಾಣುವಂತಿದೆ. ಜನರ ಭಾವನೆಗಳಿಗೆ ಅವರು ಬೆಲೆ ನೀಡಿದ್ದಾರೆ. ತಾಲ್ಲೂಕಿಗೆ ಕೊನೆಗೂ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
ಮರಳು ಗಣಿಗಾರಿಕೆಗೆ ಅವಕಾಶ ಬೇಡ: ಕೆರೆ, ತೋಡುಗಳಲ್ಲಿ,ಹಳ್ಳಗಳಲ್ಲಿ ಮರಳು ತೆಗೆಯಲು ಬಿಡಬೇಕು ಎಂದು ಸಚಿವರು ಹೇಳಿರುವುದು ಸಲ್ಲದು. ಅಕ್ರಮ ಮರಳುಗಣಿಗಾರಿಕೆಗೆ ಸಿಲುಕಿ ತಾಲ್ಲೂಕಿನ ಅಂತರ್ಜಲ ಕುಸಿದು ಹೋಗಿದೆ, ಮರಳು ಬೋರ್ ಗಳಲ್ಲಿ ಹಿಂದೆಲ್ಲ ನೀರು ಬರುತ್ತಿತ್ತು. ಅಂಥ ಪರಿಸ್ಥಿತಿ ಇಲ್ಲದಂತಾಗಲು ಯತ್ಥೇಚ್ಛವಾಗಿ ತೆಗೆದ ಮರಳು ಕಾರಣ. ಇದನ್ನು ಅರಿಯದಷ್ಟು ಸಚಿವ ಮಾಧುಸ್ವಾಮಿ ದಡ್ಡರಲ್ಲ. ಮರಳು ತೆಗೆಯಲು ಅವಕಾಶ ನೀಡುವಂತೆ ಅವರು ಮಾತನಾಡಿರುವ ಹಿಂದೆ ಪ್ರಬಲ ಶಕ್ತಿಗಳು ಕೆಲಸ ಮಾಡಿರಬಹುದು. ಇಂಥ ಶಕ್ತಿಗಳಿಗೆ ಸಚಿವರು ಮನ್ನಣೆ ನೀಡಬಾರದು. ಬೇರೆ ಕಡೆಯಿಂದ ನೀರು ತರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು ಆಗಿದೆ ಎಂದು ಮಹಾವೀರ್ “ಪಬ್ಲಿಕ್ ಸ್ಟೋರಿ’ಗೆ ತಿಳಿಸಿದ್ದಾರೆ.

ವಯಸ್ಸು ಇಪ್ಪತ್ತೆಂಟು ಸೇವೆ ನೂರೆಂಟು

9

ಚಿಗುರು ಮೀಸೆಯ ಯುವಕನಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ [ವ್ಯಕ್ತಿಪರಿಚಯ]

ತಲೆ ತುಂಬ ಬಿಳಿಕೂದಲು, ಆಸರೆಗೊಬ್ಬರನ್ನು ಕರೆತಂದು ಪ್ರಶಸ್ತಿ ಪಡೆಯುವವರ ನಡುವೆ ಕಡಿಮೆ ವಯಸ್ಸಿನಲ್ಲಿಯೆ ಸಮಾಜಸೇವೆಯಲ್ಲಿ ತಲ್ಲೀನನಾಗಿರುವ ಚಿಗುರು ಮೀಸೆಯ ಯುವಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತುಮಕೂರು ಜಿಲ್ಲೆ ಪಾವಗಡದ  ಗಿರಿ ಫ್ಯಾಷನ್ಸ್ ಗಿರೀಶ್ ಎಂದೇ ಜನಪ್ರಿಯತೆ ಗಳಿಸಿರುವ ಇವರು ನಮ್ಮ ಹಕ್ಕು ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ, ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ, ರೋಟರಿ ಸಂಸ್ಥೆಯ ಯುವ ನಿರ್ದೇಶಕರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ, ಪರಿಸರ ಸಂರಕ್ಷಣೆ, ಸ್ವಚ್ಚತೆ, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಪ್ರವಾಹ ಪೀಡಿತರು ಹಾಗೂ ರೋಗಿಗಳಿಗೆ ಸಹಾಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.

ತಾನು ದುಡಿದ ಹಣದಲ್ಲಿ ಶೇಕಡಾವಾರು ಭಾಗವನ್ನು ಸಮಾಜ ಕಾರ್ಯಕ್ಕಾಗಿ ಮೀಸಲಿಟ್ಟಿರುವುದು ಇವರ ವಿಶೇಷ.

ಸೇವೆಯ ಹೆಜ್ಜೆ ಗುರುತುಗಳು

ತುಮಕೂರು ಜಿಲ್ಲೆ ಪಾವಗಡ   ತಾಲ್ಲೂಕಿನ ಸರ್ಕಾರಿ ಕನ್ನಡ ಶಾಲೆಗಳ 500 ಕ್ಕೂ ಹೆಚ್ಚಿನ ಬಡ ಮಕ್ಕಳಿಗೆ ನಮ್ಮ ಹಕ್ಕು ಸಂಘಟನೆಯ ವತಿಯಿಂದ ಶಾಲಾ ಬ್ಯಾಗ್ ಗಳನ್ನು ವಿತರಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ರೊಪ್ಪ ಸರ್ಕಾರಿ ಶಾಲೆಯ ಮಕ್ಕಳಿಗೆ ಬಟ್ಟೆ, ಲೇಖನ ಸಾಮಾಗ್ರಿಗಳನ್ನು ವಿತರಿಸುವುದರೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೆ ರಕ್ತ ಪರೀಕ್ಷೆ ಮಾಡಿಸಿದ್ದಾರೆ. ಇದು ಬಡ ಮಕ್ಕಳ ಬಗ್ಗೆ ಇವರಿಗಿರುವ ಕಾಳಜಿಯನ್ನು ಪ್ರಚುರಪಡಿಸುತ್ತದೆ.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುಂಗಾಭದ್ರಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ತಿಂಗಳುಗಳ ಕಾಲ ನಡೆದ ನಿರಂತರ ಪ್ರತಿಭಟನೆಯಲ್ಲಿ ಭಾಗವಹಿಸಿ, ಪಾವಗಡ ಮಿನಿ ಫನ್ ಮ್ಯಾರಥಾನ್  ಕ್ರಿಡಾಕೂಟ ಆಯೋಜನೆಗೆ ಶ್ರಮಿಸುವುದರೊಂದಿಗೆ ತಾಲ್ಲೂಕಿನ ಜ್ವಲಂತ ಸಮಸ್ಯೆ ಪರಿಹರಿಸಲು ಹೆಜ್ಜೆ ಇಟ್ಟಿದ್ದಾರೆ.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿನಿಯರಿಗೆ ಮಾನವ ಹಕ್ಕುಗಳ ಬಗ್ಗೆ ಮಾಹಿತಿ ಕೊಡಿಸಿದ್ದಾರೆ.

ಗ್ರಾಮೀಣ ಭಾಗದ ವೃದ್ಧರಿಗೆ ಹೊದಿಕೆ ವಿತರಣೆ, ಕೊಡಗು, ಉತ್ತರ ಕರ್ನಾಟಕ ಭಾಗದ ನೆರೆ ಪೀಡಿತರಿಗೆ  ಹೊದಿಕೆ, ಅಗತ್ಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಅರಸೀಕೆರೆ, ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ  ಶಿಬಿರವನ್ನು ಆಯೋಜಿಸಿ, ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಹಸ್ತ ಚಾಚಿ ಚಿಕಿತ್ಸೆ ಕೊಡಿಸಿದ್ದಾರೆ. ತುರ್ತು ಇದ್ದ ಗರ್ಭಿಣಿಯರು, ರೋಗಿಗಳಿಗೆ ಉಚಿತವಾಗಿ ರಕ್ತ ಕೊಡಿಸಿಕೊಡುವ ಮೂಲಕ ಅಪದ್ಭಾಂದವನೆನೆಸಿಕೊಂಡಿದ್ದಾರೆ.

ಶನೈಶ್ಚರ ಜಾತ್ರೆ, ಶ್ರಾವಣ ಮಾಸದಲ್ಲಿ ಪಟ್ಟಣಕ್ಕೆ ಆಗಮಿಸುವ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಲಘು ಉಪಹಾರ, ಪಾನಕ, ಮಜ್ಜಿಗೆ, ನೀರು ವಿತರಣೆ ಮಾಡುವುದರ ಜೊತೆಗೆ ರಾಮ ನವಮಿ, ಹಬ್ಬ ಹರಿದಿನಗಳಂದು ಪಾನಕ, ಹೆಸರುಬೇಳೆ ವಿತರಣೆಯಂತಹ ಕೆಲಸಗಳನ್ನು ನಿರಂತರವಾಗಿ ನಡೆಸಿಕೊಂಡು ಬರುವ ಇವರು ಧಾರ್ಮಿಕ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ವಿಶ್ವ ಪರಿಸರ ದಿನಾಚರಣೆ, ಭೂ ದಿನಾಚರಣೆ ಇತ್ಯಾದಿ ದಿನಗಳಂದು ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಸಾಹಸ್ರಾರು ಸಸಿಗೆಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ರಸ್ತೆ ಬದಿ, ಅರಣ್ಯ ಪ್ರದೇಶದಲ್ಲಿ ಮರ ಕಡಿಯುವ ಕಿಡಿಗೇಡಿಗಳ ವಿರುದ್ಧ ಹೋರಾಟ ನಡೆಸಿ ಮರ ಕಡಿದ ಸ್ಥದಲ್ಲಿ ಸಸಿ ನೆಡಿಸುವ ಹಾಗೂ ಪರಿಸರಕ್ಕೆ ದಕ್ಕೆ ತರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಯಶಸ್ಸು ಸಾಧಿಸಿದ ಸಾಕಷ್ಟು  ನಿದರ್ಶನಗಳಿವೆ.

ರಾಜ್ಯೋತ್ಸವ ಪ್ರಶಸ್ತಿ ಜವಬ್ಧಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಸಮಾಜ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಾಗಿ ಗಿರಿ ಫ್ಯಾಷನ್ಸ್ ಗಿರೀಶ್ ಪಬ್ಲಿಕ್ ಸ್ಟೋರಿ ಜೊತೆ ಸಂತಸ ಹಂಚಿಕೊಂಡರು.

ಚೇಳೂರು ಹೊಸ ತಾಲ್ಲೂಕು: ಚಿಗುರೊಡೆದ ಆಸೆ

0
  • ವಿಶೇಷ ವರದಿ: ಲಕ್ಷ್ಮೀಕಾಂತರಾಜು ಎಂಜಿ,9844777110

ರಾಜ್ಯ ಸರ್ಕಾರ ಹೊಸ ತಾಲ್ಲೂಕುಗಳ ರಚನೆಗೆ ಮುಂದಾಗುತ್ತಿದ್ದಂತೆ  ಜಿಲ್ಲೆಯ  ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರ ಹೊಸ ತಾಲ್ಲೂಕು ಆಗಲಿದೆಯೇ ಎಂಬ ಆಸೆ ಚಿಗುರೊಡೆದಿದೆ.

ಗುಬ್ಬಿ ತಾಲ್ಲೂಕಿನ‌ ಚೇಳೂರು ಹೋಬಳಿ ಕೇಂದ್ರವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣ. ಇಲ್ಲಿ ನಡೆಯುವ ವಾಣಿಜ್ಯ ವ್ಯವಹಾರ ವಹಿವಾಟು ತಾಲ್ಲೂಕು ಕೇಂದ್ರ ಗುಬ್ಬಿಯಲ್ಲೂ ನಡೆಯುವುದಿಲ್ಲ. ಗುಬ್ಬಿ ಕೇಂದ್ರ ಸ್ಥಾನದಿಂದ ತಾಲ್ಲೂಕಿನ ಗಡಿ ಗ್ರಾಮಗಳಿಗೆ ಐವತ್ತು ಕಿಮೀ ದೂರವಿದೆ. ಇದರಿಂದ ಕೆಲಸ ಕಾರ್ಯಗಳಿಗೆ ಗುಬ್ಬಿ ಕಚೇರಿಗೆಳಿಗೆ ಹೋಗಿ ಬರಲು ಒಂದು ದಿನವೂ ಸಾಲದಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಉದ್ದೇಶಿತ ಚೇಳೂರು ತಾಲ್ಲೂಕು ವ್ಯಾಪ್ತಿಗೆ ಸೇರಲಿರುವ ಹಾಗಲವಾಡಿ ಹೋಬಳಿ ಗುಬ್ಬಿ ತಾಲ್ಲೂಕಿನ ಬಹುದೊಡ್ಡ ಹೋಬಳಿಯಾಗಿದೆ. ಹಾಗಲವಾಡಿ ಹೋಬಳಿಯ ಭೌಗೋಳಿಕ ವಿಸ್ತಾರ ಎರೆಡು ಹೋಬಳಿಗೆ ಸಮವಾಗಿದೆ. ಈ ಹೋಬಳಿಯ ಗಡಿಗ್ರಾಮಗಳಾದ ಬೋಡತಿಮ್ಮನಹಳ್ಳಿ ಹಾಗೂ ಶಿವರಾಂಪುರ ಸೇರಿಸದಂತೆ ಅನೇಕ ಗ್ರಾಮಗಳು ಪ್ರಸ್ತುತ ತಾಲ್ಲೂಕಿನ ಕೇಂದ್ರದಿಂದ ಐವತ್ತು ಕಿಮೀ ಅಂತರವಿದ್ದು, ಈ ಭಾಗದ ಗ್ರಾಮಸ್ಥರು ಗುಬ್ಬಿಗೆ ಕೆಲಸ ಕಾರ್ಯಗಳಿಗೆ ಬಂದು ಹೋಗಲು ಕಷ್ಟಕರ.

ಕಡಿಮೆ ಅಂತರದಲ್ಲಿ ಸಾರ್ವಜನಿಕರಿಗೆ ಆಡಳಿತ ಅನುಕೂಲ ಸಿಗುವ ದೃಷ್ಟಿಯಲ್ಲಿ‌ ಈಗಾಗಲೇ ರಾಜ್ಯದಲ್ಲಿ ಹಲವು ಪಟ್ಟಣಗಳನ್ನ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಈಗಾಗಲೇ ತಾಲ್ಲೂಕು ಕೇಂದ್ರವಾಗಿ ಬಡ್ತಿ ಪಡೆದಿರುವ ಪಟ್ಟಗಳ ಮಾನದಂಡ ನೋಡಿದಾಗ ಅದಕ್ಕಿಂತ ಹೆಚ್ಚು ಅರ್ಹತೆಗಳನ್ನ ಚೇಳೂರು ಹೊಂದಿದೆ.

ಚೇಳೂರಿನಲ್ಲಿ ಈಗಾಗಲೇ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯೂ ಇದ್ದು ರೈತರು ಇದನ್ನೇ ಬಳಸಿಕೊಳ್ಳುತ್ತಿದ್ದಾರೆ.  ಕೊಬ್ಬರಿ ವಹಿವಾಟಿನಲ್ಲಿ ತಿಪಟೂರು ನಂತರದ ಸ್ಥಾನ ಚೇಳೂರು ಆಗಿದೆ. ಅಡಕೆ ವ್ಯಾಪಾರದಲ್ಲಿ ಚೇಳೂರು ಇಡೀ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿದ್ದು ಬಹುದೊಡ್ಡ ವಹಿವಾಟು ನಡೆಯುತ್ತಿದೆ. ಇನ್ನು ಹಣ್ಣುಗಳಾದ ಹಲಸು ಮತ್ತು ಮಾವಿನ ಹಣ್ಣುಗಳ ವ್ಯಾಪಾರಕ್ಕೆ ಚೇಳೂರು ಹೆಸರುವಾಸಿಯಾಗಿದ್ದು ಇಡೀ ದೇಶದಲ್ಲಿಯೇ ಹೆಸರು ಮಾಡಿರುವ ಸಿದ್ದು ಹಲಸು ತಳಿ ಚೇಳೂರಿನದ್ದಾಗಿರುವುದು ವಿಶೇಷ.

https://youtu.be/eEhv_oYbh8w

ಕೃಷಿ,ವಾಣಿಜ್ಯ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಗುಬ್ಬಿ ತಾಲ್ಲೂಕಿನ ಚೇಳೂರು ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಇದೆ.

ಹಾಗಲವಾಡಿ,ಚೇಳೂರು ,ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳು ಮಳೆ ಕೊರತೆಯಿಂದ ತೀರಾ ಹಿಂದುಳಿದಿದ್ದು ಅಭಿವೃದ್ದಿ ಹೊಂದುವ ದೃಷ್ಟಿಯಿಂದ ಚೇಳೂರು,ಹಾಗಲವಾಡಿ ಹೋಬಳಿಗಳ ಜತೆಗೆ ನಿಟ್ಟೂರು ಹೋಬಳಿಯ ಕೆಲ ಪಂಚಾಯ್ತಿಗಳನ್ನ ಸೇರಿಸಿ ಚೇಳೂರನ್ನ ತಾಲ್ಲೂಕು ಕೇಂದ್ರವನ್ನಾಗಿ ಮಾಡಿದರೆ ಈ ಭಾಗ ಅಭಿವೃದ್ಧಿಯಾಗುವುದರಲ್ಲಿ ಅನುಮಾನವಿಲ್ಲ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿ ಎಂಬುದೇ ಈ ಭಾಗದ ರೈತರ ಒತ್ತಾಯವಾಗಿದೆ.

ಚೇಳೂರು ಇತಿಹಾಸ ಪ್ರಸಿದ್ಧವೂ ಹೌದು. ಇಲ್ಲಿನ ಶ್ರೀಮರಳು ಬಸವೇಶ್ವರ ಸ್ವಾಮಿ ದೇವಾಲಯವಿದೆ. ಜಾನುವಾರುಗಳು ಕಡಿಮೆಯಾಗುತ್ತಿರುವ ಈ ಕಾಲಮಾನದಲ್ಲೂ ವರ್ಷಕ್ಕೊಮ್ಮೆ ನಡೆಯುವ ಮರಳುಬಸವೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಭಾರೀ ದನಗಳ ಜಾತ್ರೆ ನಡೆಯತ್ತದೆ. ಇಲ್ಲಿ ಎತ್ತುಗಳನ್ನ ಕೊಳ್ಳಲು ದೂರದ ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ರೈತರು ಬರುವುದು ವಿಶೇಷ.

ಚೇಳೂರಿನ ಕುರಿತು ಮತ್ತೊಂದು ದಂತ ಕತೆಯೆಂದರೆ ಇಲ್ಲಿನ ಮರಳುಬಸವೇಶ್ವರ ಸ್ವಾಮಿಯು ಘರ್ಜಿಸಿ,ಚೇಳೂರು ಬಾವಿಯು ತುಂಬಿ ಹರಿದು ಇಲ್ಲಿನ ಊರು ಬಾಗಿಲಲ್ಲಿ ಕೆತ್ತಿರುವ ಕಲ್ಲು ಕೋಳಿಯು ಕೂಗಿದರೆ ಪ್ರಪಂಚ ಪ್ರಳಯವಾಗುತ್ತದೆ ಎಂಬುದು ಇಲ್ಲಿ ಹಿಂದಿನಿಂದ ಕೇಳಿ ಬರುತ್ತಿರುವ ದಂತ ಕತೆಯಾಗಿದೆ.

ಚೇಳೂರಿನಲ್ಲಿ ಈಗಾಗಲೇ ಪೊಲೀಸ್ ಠಾಣೆ ಹಾಗೂ ಹಾಗಲವಾಡಿಯಲ್ಲಿ ಉಪ ಠಾಣೆ ಹೊಂದಿದ್ದು ಮೈಸೂರಿನಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಚೇಳೂರು‌ ಪಟ್ಟಣವಿರುವ ಕಾರಣ, ಸಮೂಹ ಸಾರಿಗೆ ವ್ಯವಸ್ಥೆಗೆ ಅನುಕೂಲವಿದೆ.

ಹತ್ತು ವರ್ಷಗಳ ಹಿಂದೆಯೇ ಚೇಳೂರು ತಾಲ್ಲೂಕು ಕೇದ್ರ ಮಾಡಲು ಆಗ್ರಹಿಸಿ ಹೋರಾಟ ಮಾಡಲಾಗಿತ್ತು. ಕಳೆದ ವರ್ಷವೂ ಚೇಳೂರು ಪಟ್ಟಣವನ್ನ‌ ತಾಲ್ಲೂಕು ಕೇಂದ್ರ ಮಾಡಲು ಆಗ್ರಹಿಸಿ ಚೇಳೂರು ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಚೇಳೂರು ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಸರ್ಕಾರ ಘೋಷಿಷಬೇಕಾಗಿದೆ

ಕಾರ್ತಿಕ್, ಅಧ್ಯಕ್ಷರು ಜಯಕರ್ನಾಟಕ ಸೇನೆ,ಚೇಳೂರು

ಸಾರಿಗೆ ಅಧಿಕಾರಿಗಳಿಗೆ ಸಚಿವರ ಸೂಚನೆ

ಬಸ್ಸು ಸಂಚಾರ ಅಂತರ ನಿಗದಿಪಡಿಸಲು ಸೂಚನೆ
ಕಚೇರಿ ಹಾಗೂ ಶಾಲಾ ಸಮಯದಂತಹ ಫೀಕ್ ಅವರ್ನಲ್ಲಿ ಬಸ್ಸುಗಳ ಸಂಚಾರ ಅಂತರದ ಸಮಯ ನಿಗದಿಪಡಿಸಿ ಹಾಗೂ ಜಿಲ್ಲೆಯಲ್ಲಿರುವ ಸಂಚಾರ ದಟ್ಟನೆಗೆ ತಕ್ಕಂತೆ ಬಸ್ಸುಗಳ ಟ್ರಿಪ್ ಗಳನ್ನು ರೂಪಿಸಬೇಕೆಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಧುಗಿರಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಂಚಾರ ಸಮಯದಲ್ಲಿ ಅಂತರವಿರಬೇಕು. ಈ ಬಸ್ಸುಗಳು ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳ ಜನರನ್ನು ಹಾಗೂ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂಬ ದೂರುಗಳಿವೆ. ಹಾಗಾಗಿ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್ಗಳನ್ನು ಓಡಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಗುಬ್ಬಿ, ಹುಳಿಯಾರು, ಮಧುಗಿರಿ ಹಾಗೂ ಪಾವಗಡ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಮಯದಲ್ಲಿ ಕೆಎಸ್ ಆರ್ ಟಿ ಸಿ ಬಸ್ಗಳನ್ನು ಓಡಿಸಬೇಕು. ಬಸ್‌ಗಳ ವೇಳಾಪಟ್ಟಿಯ ಸಮಯವನ್ನು ಬದಲಾಯಿಸಿ ಬಸ್ಸುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಎಲ್ಲಾ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಿ ಜಾತ್ರೆ, ಮಕ್ಕಳು ಶಾಲೆಗೆ ಹೋಗುವ ಸಮಯ, ಗಾರ್ಮೆಂಟ್ಸ್ಗಳಿಗೆ ಕಾರ್ಮಿಕರು, ತೆರಳುವ ಸಮಯ, ರಜಾ ಮುಗಿದ ನಂತರದ ದಿನಗಳಲ್ಲಿ ಹೆಚ್ಚಿನ ಬಸ್ ಓಡಿಸಬೇಕು.

ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಿನದಾಗಿ ಆಟೋ, ಗೂಡ್ಸ್ ಆಟೋ ಸೇರಿದಂತೆ ಸ್ಥಳೀಯವಾಗಿ ಸಿಗುವ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹವರಿಗೆ ಬಸ್ ಪಾಸ್ ಗಳನ್ನು ವಿತರಿಸಿ ಅವರು ಕೆಲಸಕ್ಕೆ ತೆರಳುವ ಸಮಯಗಳಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ರಾಜ್ಯೋತ್ಸವ ರಂಗೇರಿತು

ಮಹಾತ್ಮಗಾಂಧಿ ಕ್ರೀಡಾಂಗಣದ ನವೀಕರಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ಧ್ವಜ ಮತ್ತು ರಾಷ್ಟ್ರಧ್ವಜ ಎರಡನ್ನೂ ಹಾರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಕಾನೂನು ಸಚಿವರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜೆ.ಸಿ. ಮಾಧುಸ್ವಾಮಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್, ಸಶಸ್ತ್ರ ಮೀಸಲು ದಳ, ಸೇವಾದಳ, ಎನ್.ಎಸ್.ಎಸ್, ಎನ್.ಸಿ.ಸಿ ಬ್ಯಾಂಡ್ ಸೆಟ್ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು.

ಧ್ವಜಾರೋಹಣ ನೆರವೇರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠ ಡಾ.ವಂಶಿಕೃಷ್ಣ ಮೊದಲಾದವರು ಹಾಜರಿದ್ದರು.

ವೀರಗಾಸೆ, ಕರಪಾಲ ಮೇಳ, ಸೋಮನಕುಣಿತ, ಗೊಂಬೆ ಕುಣಿತ ಮೊದಲಾದ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಆಕರ್ಷಕ ಮೆರುಗು ನೀಡಿದವು.