Friday, March 13, 2026
Google search engine
Home Blog Page 63

ಪ್ರೊ.ಪರುಷರಾಮ್ ತುಮಕೂರಿನ ಆಸ್ತಿ

ತುಮಕೂರು: ಪ್ರೊ.ಪರುಷರಾಮ್ ಅವರು ತುಮಕೂರು ವಿ.ವಿಗೆ ಮಾತ್ರವಲ್ಲ ಇಡೀ ತುಮಕೂರು ಜಿಲ್ಲೆಯ ಆಸ್ತಿಯಾಗಿದ್ದಾರೆ ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಮೇಶ್ ಬಣ್ಣಿಸಿದರು.

ನಗರದ ಸುಫಿಯಾ ಕಾಲೇಜಿನಲ್ಲಿ ಶನಿವಾರ ಕಾನೂನು ಕಾಲೇಜಿನ ಪ್ರಾಧ್ಯಾಪಕರಿಗಾಗಿ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ. ಪರುಷರಾಮ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಸ್.ರಮೇಶ್, ಓಬಯ್ಯ, ಸಿ.ಕೆ.ಮಹೇಂದ್ರ ಇತರರು ಇದ್ದಾರೆ.

ಪರುಷರಾಮ್ ಅವರ ವಿದ್ವತ್ ಅನ್ನು ಜಿಲ್ಲೆಯ ಶೈಕ್ಷಣಿಕ ವಲಯ ಬಳಸಿಕೊಳ್ಳಬೇಕು ಎಂದರು.
ಸುಫಿಯಾ ಕಾಲೇಜು ಹಲವು ಮೈಲುಗಲ್ಲು ಸಾಧಿಸಿದೆ. ಬೋಧಕ ವರ್ಗ ಉತ್ತಮವಾಗಿದೆ. ಇದೇ ಕಾರಣದಿಂದ ಕಾಲೇಜಿನ ವಿದ್ಯಾರ್ಥಿಗಳು ರಾಂಕ್ ಪಡೆಯುತ್ತಿದ್ದಾರೆ ಎಂದರು.

ಅಸಡ್ಡೆಯಿಂದ ಪಾಠ ಮಾಡುತ್ತಾ ಶಿಕ್ಷಕ ವೃತ್ತಿಯ ಪಾವಿತ್ರ್ಯ ಹಾಳು ಮಾಡುವ ಬದಲು ಕೆಲಸ ಬಿಟ್ಟು ಮನೆಗೆ ಹೋಗುವುದು ಒಳಿತು ಎಂದು ತುಮಕೂರು ವಿ.ವಿ. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪೊ. ಪರುಷರಾಮ್ ಹೇಳಿದರು.

ಹೊಸ ಸವಾಲುಗಳನ್ನು ರೂಢಿಸಿಕೊಳ್ಳದಿದ್ದರೆ ಆತ ಒಳ್ಳೆಯ ಶಿಕ್ಷಕನಾಗಲು ಸಾಧ್ಯವೇ ಇಲ್ಲ. ಒಂದು ಗಂಟೆಯ ಪಾಠ ಮಾಡಲು ಮೂರು ಗಂಟೆ ತಯಾರು ಮಾಡಿಕೊಳ್ಳಬೇಕು.
ಅಮಾಯಕ, ಅನಾದರಕ್ಕೆ ಒಳಗಾದ ಕುಟುಂಬಗಳಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರಿಗೆ ಅನ್ಯಾಯ ಮಾಡಬಾರದು ಎಂದು ತಿಳಿ ಹೇಳಿದರು.

ಬೋಧನೆಯಲ್ಲಿ ನಾವೀನ್ಯತೆಯನ್ನು ಅಳವಡಿಸಿಕೊಳ್ಳಬೇಕು. ತಮ್ಮದೇ ಆದ ಸಂಶೋಧನಾ ಕಲಿಕಾ ಪ್ರವೃತ್ತಿಯನ್ನು  ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾನೂನು ಕಾಲೇಜಿನ ಪ್ರಾಧ್ಯಾಪಕರಿಗೆ ಅನೇಕ ಸವಾಲುಗಳಿರುತ್ತದೆ. ಪಿಯುಸಿ ನಂತರ, ಪದವಿ ನಂತರದ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ. ಐದು ವರ್ಷದ, ಮೂರು ವರ್ಷದ ಪದವಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಪಾಠ ಮಾಡಬೇಕು ಎಂದರು.

ಕಲಿಕೆಯ ಜತೆಗೆ ಅವಕಾಶಗಳ ಕಡೆಗೂ ವಿದ್ಯಾರ್ಥಿಗಳು ಗಮನ ಹರಿಸುವಂತೆ ಹೇಳಬೇಕು. ಪಠ್ಯ ಬಿಟ್ಟು ಆಚೆಗೆ ವಿಧ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪ   ಪ್ರಾಂಶುಪಾಲ ಟಿ.ಓಬಯ್ಯ, ಸಹ ಪ್ರಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಕಾಲೇಜು ಅಧೀಕ್ಷಕ ಜಗದೀಶ್, ಗ್ರಂಥಪಾಲಕ ಸುಬ್ಬು ಇತರರು ಇದ್ದರು.

ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತ

ತುಮಕೂರು: ನಗರದ ಶೇಷಾದ್ರಿಪುರ ಪದವಿ ಪೂರ್ವ ಕಾಲೇಜಿನಲ್ಲಿ ಬಸವ ಅಧ್ಯಯನ ಕೇಂದ್ರದ ವತಿಯಿಂದ ವಚನ ನಿರ್ವಚನ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಲಿಂಗದೇವರು ಅಧ್ಯಕ್ಷರು ಪದವಿಪೂರ್ವ ಕಾಲೇಜುಗಳ ಪಾಂಶುಪಾಲರ ಸಂಘ ತುಮಕೂರು ಇವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತುಮಕೂರು ಜಿಲ್ಲೆ ವಿಶ್ವದಲ್ಲೇ ಗಮನ ಸೆಳೆದಿದೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ ಕಾರಣ ಇಲ್ಲಿನ ಸಾವಿರಾರು ವಿದ್ಯಾಕಾಂಕ್ಷಿಗಳಿಗೆ, ಜ್ಞಾನಾರ್ಜನೆ ನೀಡುತ್ತಿರುವ ಸಿದ್ದಗಂಗಾ ಮಠ ಹಾಗೂ ನಡೆದಾಡುವ ದೇವರು ಎಂದು ಖ್ಯಾತಿಗಳಿಸಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರೇ ಕಾರಣ ಕರ್ತರು.
ರೈತಾಪಿ ಕುಟುಂಬದಲ್ಲಿ ಜನಿಸಿ ಶಿಕ್ಷಣಗಳಿಸುವ ಮೂಲಕ ಬೇರೆಯವರಿಗೆ ಮಾರ್ಗದರ್ಶಿಯಾಗಿ ಬದುಕುತ್ತಿರುವ ಅನೇಕರ ಉದಾಹರಣೆ ನೀಡುತ್ತಾ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು.


ಬಸವಣ್ಣನವರ ಜೀವನ ಸಾಧನೆ ಹಾಗೂ ಅವರ ಸಮಾಜ ಸುಧಾರಣೆಯ ಬಗ್ಗೆ ಬಸವಣ್ಣನವರು ಬದುಕ್ಕಿದ್ದ ಕಡಿಮೆ ಅವಧಿಯಲ್ಲಿ ಜಗತ್ತು ಸ್ಮರಿಸುವ ಸಾಧನೆ ಮಾಡಿದ ವಿಶ್ವಗುರು ಮಾನವತಾವಾದಿ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ ಬಸವರಾಜು ಬಿ ವಿ ಅವರು “ಬಸವಣ್ಣನವರ ಜೀವನ ಮತ್ತು ಸಾಧನೆಯನ್ನು ಎಲ್ಲಾ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಮುನ್ನಡೆದರೆ ಸಮಾಜ ಉನ್ನತ ಪಥದಲ್ಲಿ ಚಲಿಸುತ್ತದೆ, ವಿದ್ಯಾರ್ಥಿಗಳು ಒಳ್ಳೆಯ ಗುಣಗಳನ್ನು ರೂಢಿಸಿಕೊಂಡು ಸಮಾಜಕ್ಕೆ ಪೂರಕವಾಗಬೇಕು ಎಂದರು.


ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸ್ಪರ್ಧೆಯಲ್ಲಿ ಶೇಷಾದ್ರಿಪುರಂ ಅಂಗ ಸಂಸ್ಥೆಗಳಾದ ಬೆಂಗಳೂರು, ಯಲಹಂಕ, ಮೈಸೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು : ನಾಡೋಜ ಡಾ.ವೂಡೇ.ಪಿ.ಕೃಷ್ಣ

ತುಮಕೂರು ನಗರದ ಶೇಷಾದ್ರಿಪುರಂ ಪಿಯು ಕಾಲೇಜಿನ ವಿದ್ಯಾರ್ಥಿಗಳು 2022 ನೇ ಸಾಲಿನಲ್ಲಿ ವಿದ್ಯಾರ್ಥಿಗಳು ನೀಟ್ ಮತ್ತು ಸಿ.ಎ. ಫೌಂಡೇಶನ್ ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನೀಟ್ ನಲ್ಲಿ ಸಾಧನೆ ಮಾಡಿರುವ ನಿರೀಕ್ಷ ಸಿದ್ಧಗಂಗ ಮೆಡಿಕಲ್ ಕಾಲೇಜು ತುಮಕೂರು, ಚೈತ್ರ ಎಂ.ಎನ್. ಮಂಡ್ಯ ಮೆಡಿಕಲ್ ಕಾಲೇಜು, ಪ್ರತೀಕ್ಷ ಕೆ. ಜಿ. ಸಿದ್ಧಾರ್ಥ ಮೆಡಿಕಲ್ ಕಾಲೇಜು ತುಮಕೂರು ಇಲ್ಲಿ ದಾಖಲಾತಿ ಪಡೆದ್ದಾರೆ. ಸಿ.ಎ. ಫೌಂಡೇಶನ್‌ ನಲ್ಲಿ ಕೋಮಲ,ಎಂ.ಎ, ನಿಸರ್ಗ ಎಚ್.ಆರ್., ಪ್ರತ್ಯುಷ್ ಎನ್.ಬಿ. ಸಾಧನೆ ಮಾಡಿದ್ದಾರೆ.


ಈ ವಿದ್ಯಾರ್ಥಿಗಳಿಗೆ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೇ.ಪಿ.ಕೃಷ್ಣ ರವರು ಸನ್ಮಾನ ಮಾಡಿದರು
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು. ಒಳ್ಳೆಯ ಶಿಕ್ಷಣ ಪಡೆದು ಸಮಾಜಸೇವೆ ಮಾಡಿ ಉತ್ತಮ ಪ್ರಜೆಗಳು ಎನಿಸಿಕೊಳ್ಳಬೇಕು. ಉತ್ತಮ ಚಿಂತನೆಗಳನ್ನು ಮಾಡಿ ಅವುಗಳಿಂದ ಚಿಂತನಾ ನಾಯಕರಾಗಬೇಕು. ವಿದ್ಯಾರ್ಥಿಗಳು ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ತುಮಕೂರಿನಲ್ಲಿ ನಮ್ಮ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯು ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಉಳಿದ ವಿದ್ಯಾರ್ಥಿಗಳು ಇವರಂತೆ ಸಾಧನೆ ಮಾಡಿ ಉನ್ನತ ವ್ಯಾಸಂಗಕ್ಕೆ ಹೋಗಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಬ್ಲ್ಯೂ. ಡಿ. ಅಶೋಕ್, ಪ್ರಾಂಶುಪಾಲರಾದ ಪ್ರೊ. ಬಸವಸರಾಜು ಬಿ.ವಿ, ಶೇಷಾದ್ರಿಪುರಂ ಪಿಯು ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತುಮಕೂರು: ವಕೀಲರ ಪ್ರತಿಭಟನೆ

ತುಮಕೂರು: ಮಂಗಳೂರಿನ ಪೂಂಜಾಲ ಕಟ್ಟೆಯ ವಕೀಲ ಕುಲದೀಪ ಶೆಟ್ಟಿ ನಿವಾಸಕ್ಕೆ ರಾತ್ರೋರಾತ್ರಿ ಪೊಲೀಸರು ಅತಿಕ್ರಮ ಪ್ರವೇಶಿಸಿ, ದೌರ್ಜನ್ಯ ಎಸಗಿ ಬಂಧಿಸಲಾಗಿದ್ದು ಇದನ್ನು ಖಂಡಿಸಿ ತುಮಕೂರಿನಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕುಲದೀಪ ಶೆಟ್ಟಿ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಯ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಮತ್ತು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ವಕೀಲರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ದೌರ್ಜನ್ಯಕ್ಕೆ ಒಳಗಾದ ಕುಲದೀಪ ಶೆಟ್ಟಿ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಹಲ್ಲೆ ಮಾಡಿದ ಎಸ್.ಐ ಸತೀಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಿಮಾನಂದ, ಉಪಾಧ್ಯಕ್ಷ ಕೆ.ಸಿ.ವೆಂಕಟೇಶ್, ಜಂಟಿ ಕಾರ್ಯದರ್ಶಿ ಭಾರತಿ, ಸದಸ್ಯರಾದ ರೇಖಾರಾಜ್, ನವೀನ್ ನಾಯಕ್, ರಾಮಕೃಷ್ಣ, ರಾಮಾಂಜಿನೇಯ ಎಲ್. ಷಣ್ಮುಖ ಎಲ್. ಎಸ್.ಮಂಜುನಾಥ್, ರಂಗಧಾಮಯ್ಯ ಜೆ.ಸಿ. ಸುರೇಶ್, ಈ ಶಿವಣ್ಣ ಮೊದಲಾದವರು ಭಾಗವಹಿಸಿದ್ದರು.

ವರದಿ: ಇ.ಶಿವಣ್ಣ, ವಕೀಲರು


ನ್ಯಾಯಾಂಗ ಸ್ವಾತಂತ್ರ್ಯ ಮುಖ್ಯ; ಡಾ. ರಮೇಶ್

ತುಮಕೂರು: ಜನಪ್ರತಿನಿಧಿಗಳು ಚುನಾವಣೆಯ ಲೆಕ್ಕ ಕೊಡಬೇಕೆಂಬ ಕಾನೂನು ಬಂದಿದ್ದು ಒಬ್ಬ ನಿವೃತ್ತ ಶಿಕ್ಷಕ ಹಾಗೂ ಕಾನೂನು ವಿದ್ಯಾರ್ಥಿಗಳ ಪ್ರಯತ್ನದಿಂದ ಎಂದು ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ.ಮುದ್ದೇಶ್ ತಿಳಿಸಿದರು.

ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಾವುಗಳು ಪತ್ರಿಕೆಯಲ್ಲಿ ಪಿಎಎಲ್, ಸಾಮಾಜಿಕ ವಿಷಯಗಳನ್ನು ಎತ್ತಿಕೊಂಡು ಬರೆಯಲು ಆರಂಭಿಸಿದವು.

ಪಿಎಎಲ್ ಹಾಕುವ ಅನೇಕ ವಕೀಲರು ಇದ್ದಾರೆ. ಮಾಧ್ಯಮಗಳನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ಕೊಡಿಸಬಹುದಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ರಮೇಶ್ ಮಾತನಾಡಿ, ಸ್ವಾತಂತ್ರ್ಯ, ಘನತೆ, ನ್ಯಾಯ ಈ ಮೂರು ಪದಗಳು ಈ ಸಂದರ್ಭದಲ್ಲಿ ಮುಖ್ಯವಾಗಿವೆ ಎಂದರು.

ವ್ಯಕ್ತಿ ಸ್ವಾತಂತ್ರ್ಯ ವನ್ನು ಕಾಪಾಡಲು, ಗೌರವಿಸಲು ಇಡೀ ಪ್ರಪಂಚದಲ್ಲಿ ಆತಂಕವೇ ಕಾಡುತ್ತಿದೆ ಎಂದರು.

ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರವಾದ ನಂಬಿಕೆ ಇದೆ. ನ್ಯಾಯಾಂಗದ ಸ್ವಾತಂತ್ರ್ಯ ಇದ್ದಾಗ ಮಾತ್ರ ವ್ಯಕ್ತಿ ಸ್ವಾತಂತ್ರ್ಯ ಕಾಪಾಡುತ್ತದೆ. ಫೇಸ್ ಬುಕ್ ಪ್ರಕರಣದಲ್ಲಿ ಜಸ್ಟೀಸ್ ಚಂದ್ರಚೂಡ್ ಅವರ ತೀರ್ಪು, ಜಸ್ಟೀಸ್ ಪುಟ್ಟಸ್ವಾಮಿ ಅವರ ಪ್ರಕರಣ ದೇಶದ ವ್ಯಕ್ತಿ ಸ್ವಾತಂತ್ರ್ಯ ಉಳಿಯಲು ಸುಪ್ರೀಂಕೋರ್ಟ್ ನೀಡಿದ ಮಹತ್ವದ ಕೊಡುಗೆಯಾಗಿದೆ ಎಂದರು.


ಇವೊತ್ತು ಎಲ್ಲರಿಗೂ ಅನ್ನ ಸಿಗಲು ಕಾರಣ ಪಿಯುಸಿಎಲ್ ಸಂಸ್ಥೆ ಹಾಕಿದ ಒಂದು ಪಿಐಎಲ್. ಇವೊತ್ತು ಎಲ್ಲರಿಗೂ ಪುಕ್ಕಟ್ಟೆ ಅಕ್ಕಿ ಸಿಗಲು ಕಾರಣವಾಯಿತು. ಆದರೆ ಇಂದು ರಾಜಕೀಯ ಪಕ್ಷಗಳು ತಮ್ಮದೇ ಅಜೆಂಡ ಎಂದು ಬಿಂಬಿಸಿಕೊಳ್ಳುತ್ತಿವೆ ಎಂದರು.

ಎಲ್ಲರಿಗೂ ಸೂರು ಯೋಜನೆ ಕೂಡ ಸುಪ್ರೀಂಕೋರ್ಟ್ ಆದೇಶವೇ ಕಾರಣವಾಗಿದೆ. ಇಂದು ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾದೀಶೆ ನೂರುನ್ನೀಸಾ, ಹಿರಿಯ ಪತ್ರಕರ್ತರಾದ ಸಾ.ಚಿ. ರಾಜಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲ ಓಬಯ್ಯ, ಸಹ ಪ್ರಾಧ್ಯಾಪಕ ಸಿ.ಕೆ.ಮಹೇಂದ್ರ, ಅಧೀಕ್ಷರಾದ ಜಗದೀಶ್ ಇತರರು ಇದ್ದರು.

ಬಹುತ್ವ ನಾಡು ಕಟ್ಟಲು ಬಸವಣ್ಣನ ಚಿಂತನೆಗಳು ಬೇಕು.- ಎಸ್.ಜಿ ಸಿದ್ಧರಾಮಯ್ಯ.

ತುಮಕೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಸವ ಅಧ್ಯಯನ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಎಸ್.ಜಿ.ಸಿದ್ಧರಾಮಯ್ಯನವರು ಇಪ್ಪತ್ತನೇ ಶತಮಾನದಲ್ಲಿ ಬಹುತ್ವ ಭಾರತವನ್ನು ಗೌರವಿಸಬೇಕು. ಈ ಬಹುತ್ವಗಳ ಕನಸನ್ನು ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ ಕಂಡಿದ್ದ. ಬಸವಣ್ಣ ತನ್ನ ಹುಟ್ಟಿನ ಹಂಗನ್ನು ತೊರೆದು ವಿಶ್ವವನ್ನು ತಬ್ಬಿ ವಿಶ್ವಗುರುವಾದ. ಜನಸಾಮಾನ್ಯರ ನಡುವೆ ಬದುಕಿದ. ಬಸವಣ್ಣನವರು ಭಜನೆಯ ವಸ್ತು ಆಗದೆ ಚಿಂತನೆಯ ದ್ರವ್ಯವಾಗಬೇಕು. ಬಸವಣ್ಣನವರ ವಿಚಾರಗಳು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅನುಸರಿಸಬೇಕು. ಚರಿತ್ರೆಯನ್ನು ಮರೆತು ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಜನರ ನೋವುಗಳನ್ನು ಅರ್ಥಮಾಡಿಕೊಂಡು ಅವರ ಉದ್ಧಾರಕ್ಕಾಗಿ ಶ್ರಮಿಸಿದ. ವರ್ಣ ವ್ಯವಸ್ಥೆಯಿಂದ ಆಚೆ ಬಂದು ಧರ್ಮ ಕಟ್ಟಿ ಮಹಾ ಕ್ರಾಂತಿ ಮಾಡಿದ. ಬಸವಣ್ಣನವರ ಚಿಂತನೆಗಳು ಸರ್ವಕಾಲಿಕ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಿಕ್ಷಣ ತಜ್ಞ, ಗಾಂಧಿ ಚಿಂತಕರು, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ.ವೂಡೇ.ಪಿ.ಕೃಷ್ಣ ರವರು ಮಾತನಾಡಿ ವಿದ್ಯಾರ್ಥಿಗಳು ಚಿಂತೆ ಬಿಟ್ಟು ಚಿಂತನೆಗಳನ್ನು ಮಾಡಿ ಚಿಂತನಾ ನಾಯಕತ್ವ ಬೆಳೆಸಿಕೊಂಡು, ನಿಮ್ಮ ಚಿಂತನೆಗಳ ಸ್ವರೂಪ ದಿಂದ ಬೆಳೆಯಬೇಕು. ವಿದ್ಯಾರ್ಥಿಗಳು ಸರ್ವಜನಾಂಗದ ತೋಟವಾಗಬೇಕು ಎಂದು ತಹೇಳಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ದುಗ್ಗೇನಹಳ್ಳಿ ಸಿದ್ದೇಶ ಮಾತನಾಡಿ ಅಧ್ಯಯನ ಕೇಂದ್ರದ ಮೂಲಕ ಬಸವಣ್ಣನವರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿಚಾರವಂತರನ್ನಾಗಿ ಮಾಡಿ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುವ ಕೆಲಸ ಮಾಡುತ್ತೇವೆ ಎಂದು ಅಧ್ಯಯನ ಕೇಂದ್ರದ ಆಶಯವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಬ್ಲ್ಯೂ. ಡಿ. ಅಶೋಕ್, ಪ್ರಾಂಶುಪಾಲರಾದ ಡಾ.ಜಗದೀಶ ಜಿ.ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವಸರಾಜು ಬಿ.ಆರ್, ಶೇಷಾದ್ರಿಪುರಂ ಶಾಲೆಯ ಪ್ರಾಂಶುಪಾಲೆ ನಂದರಾಜು ಹಾಗು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಧಿಕಾರಿಗಳು ಜನರ ಬಳಿಗೆ ಹೋಗಲಿ: ನ್ಯಾಯಾಧೀಶೆ

0

ತುಮಕೂರು: ಸರ್ಕಾರಿ ಅಧಿಕಾರಿಗಳು ಕಚೇರಿ ಬಿಟ್ಟು ಜನರ ಮನೆಗೆ ಬಳಿಗೆ ತೆರಳಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಶ್ರೇಣಿ ನ್ಯಾಯಾಧೀಶೆ ನೂರುನ್ನೀಸಾ ಹೇಳಿದರು.

ನಗರದ ಸುಫಿಯಾ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.

ಪಿಡಿಒ, ಪಂಚಾಯತ್ ಅಧಿಕಾರಿಗಳು ಜನರ ಬಳಿಗೆ ಭೇಟಿ ನೀಡದಿರುವುದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಳ್ಳಿ ಭೇಟೆ ವೇಳೆ ಗಮನಕ್ಕೆ ಬಂದಿದೆ. ಹೀಗಾಗಬಾರದು, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದೇ ಕೆಲಸ ಅಲ್ಲ. ಜನರ ಬಳಿಗೆ ಹೋಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೆಲವು ಹಳ್ಳಿಗಳ ಪ್ರತಿ ಮನೆ ಮನೆಗೆ, ಕೇರಿ‌ಕೇರಿಗೆ ಭೇಟಿ ನೀಡಿದ್ದೇವೆ. ಸುಫಿಯಾ ಕಾನೂನು ಕಾಲೇಜಿನ ಮಕ್ಕಳು ಸಹ ಕಾನೂನು ಸೇವಾ ಪ್ರಾಧಿಕಾರದ ಜತೆ ಕೆಲಸ ಮಾಡುತ್ತಿದ್ದಾರೆ ಎಂದರು.

ನೆರೆ ಹೊರೆಯವರ ಹಕ್ಕುಗಳ ರಕ್ಷಣೆ ಸಹ ಮುಖ್ಯ. ಇನ್ನೊಬ್ಬರ ಹಕ್ಕುಗಳನ್ನು ದಮನ ಮಾಡಬಾರದು. ಎಲ್ಲರೂ ಸ್ವಾತಂತ್ರ್ಯ ಅನುಭವಿಸಬೇಕು. ಆದರೆ ಅದು ಸ್ವೇಚ್ಛಾಚಾರ ಆಗಬಾರದು ಎಂದರು.

ಮಾನವ ಹಕ್ಕುಗಳ ಆಯೋಗ ಅತ್ಯಂತ ದಕ್ಷವಾಗಿದೆ. ನಿರ್ಭೀತವಾಗಿ ಕೆಲಸ ಮಾಡುತ್ತಿದೆ ಎಂದರು.

ಬೇರೊಬ್ಬರ ಹಕ್ಕುಗಳನ್ನು ಮೊಟುಕುಗೊಳಿಸಲು ಯಾರಿಗೂ ಹಕ್ಕು ಇಲ್ಲ. ಆಯೋಗವು ಪ್ರತಿ ಜಿಲ್ಲೆಗೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಜನರಿಗೆ ನ್ಯಾಯಾಂಗ ಇಲಾಖೆ ಮೇಲೆ ಇನ್ನೂ ಗೌರವ ಉಳಿದಿದೆ. ಆ ಘನತೆಯನ್ನು ಕಾಪಾಡುವ ಕೆಲಸವನ್ನು ವಕೀಲರು, ನ್ಯಾಯಾಂಗ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ನಾವು ಬಡವರು, ನಮಗೆ ಇಂಗ್ಲಿಷ್ ಬರೋಲ್ಲ, ನಮ್ಮ ಕುಟುಂಬ ಬಡತನದ್ದು ಎಂಬ ದೌರ್ಬಲ್ಯ ದಿಂದ ಹೊರಬನ್ನಿ. ಪಾಸಿಟಿವ್ ಬೆಳೆಸಿಕೊಳ್ಳಿ ಎಂದು ಹೇಳಿದರು.

ನ್ಯಾಯಾಧೀಶರ ಪರೀಕ್ಷೆಯನ್ನು ಬರೆಯಿರಿ. ನೀವು ಪ್ರಯತ್ನಪಟ್ಟರೆ ಎಲ್ಲರೂ ಯಶಸ್ವಿಯಾಗುತ್ತೀರಿ ಎಂದರು.

ಹಿರಿಯ ಪತ್ರಕರ್ತ ಸಾ.ಚಿ.ರಾಜ್ ಕುಮಾರ್ ಮಾತನಾಡಿ, ವರದಕ್ಷಿಣೆ ವಿರೋಧಿ ವೇದಿಕೆ ಆರಂಭವಾಗಿದ್ದೆ ಕಾನೂನು ಕಾಲೇಜಿನಲ್ಲಿ. ಒಂದು ಮಹಿಳೆಯ ಸಾವು ಖಂಡಿಸಿ ವೇದಿಕೆ ಆರಂಭವಾಯಿತು. ತುಮಕೂರು ಹಳ್ಳಿ ಹಳ್ಳಿಗಳಿಗೂ ವೇದಿಕೆ ಹೋಗಿದೆ ಎಂದರು.

ಸಮಾನತೆ, ಸ್ವಾತಂತ್ರ್ಯ, ಘನತೆಯಿಂದ ಜೀವಿಸುವ ಹಕ್ಕು ಇದೆ. ಸುಪ್ರೀಂಕೋರ್ಟ್, ಮಾನವ ಹಕ್ಕು ಆಯೋಗ ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಈ ದಿನ ಎಲ್ಲ ಕಾನೂನುಗಳು ಬಂದಿರುವುದು ಸಂಘಟನೆಗಳಿಂದ ಎಂದರು.

ಇಂದು ನಾವು ತುಂಬಾ ಕಷ್ಟದ ದಿನಗಳಲ್ಲಿ ಇದ್ದೇವೆ. ವೀರಪ್ಪನ ಕಾಲಘಟ್ಟದಲ್ಲಿ ಎಸ್ ಟಿಎಫ್ ಮಾಡಿದ ದೌರ್ಜನ್ಯ ಗಳನ್ನು ಸಂಘಟನೆಗಳು ಬಯಲು ಮಾಡಿದವು. ಆಗ ಜನರ ನೆರವಿಗೆ ಬಂದಿದ್ದು ಮಾನವ ಹಕ್ಕುಗಳ ಆಯೋಗ. 83 ಮಹಿಳೆಯರಿಗೆ ನ್ಯಾಯ ಸಿಕ್ಕಿತು ಎಂದರು.

ಮಾನವ ಹಕ್ಕುಗಳ ಪರಿಕಲ್ಪನೆಯಿಂದಲೇ ಇಂದು ಬಡವರ ಬಾಯಿಗೆ ಅನ್ನ ಸಿಗುತ್ತಿದೆ. ಅವಳ ಹಕ್ಕುಗಳು ಈ ದೇಶದಲ್ಲಿ ಹೆಚ್ಚು ಉಲ್ಲಂಘನೆಯಾಗುತ್ತಿವೆ. ಹೀಗಾಗಿಯೇ ಅವರ ಬಗ್ಗೆ ಹೆಚ್ಚು ಮಾತನಾಡಬೇಕಾಗಿದೆ ಎಂದು ತಿಳಿಸಿದರು.

ಕಾನೂನು ಕಾಲೇಜಿನ ಸಿ ಇ ಒ ಸುಫಿಯಾ, ಪ್ರಾಂಶುಪಾಲರಾದ ಡಾ.ಎಸ್.ರಮೇಶ್, ಸಿದ್ಧಾರ್ಥ ಮಾಧ್ಯಮ ಕೇಂದ್ರದ ನಿರ್ದೇಶಕ ಡಾ. ಮುದ್ದೇಶ್, ಉಪ ಪ್ರಾಂಶುಪಾಲ ಟಿ.ಓಬಯ್ಯ, ಕಾಲೇಜಿನ ಅಧೀಕ್ಷರಾದ ಜಗದೀಶ್, ಸಹ ಪ್ರಾಧ್ಯಾಪಕರಾದ ಮಮತಾ, ಸಿ.ಕೆ.ಮಹೇಂದ್ರ ಇತರರು ಇದ್ದರು.

ಇತರರು ಇದ್ದರು.

ಉಪ್ಪಚ್ಚಿಮುಳ್ಳು ಬಿಡುಗಡೆ

ಕರ್ನಾಟಕ ಲೇಖಕಿಯರ ಸಂಘ(ರಿ)
ಜಿಲ್ಲಾ ಶಾಖೆ ತುಮಕೂರು
ಮತ್ತು
ಹಾಡ್ಲಹಳ್ಳಿ ಪಬ್ಲಿಕೇಷನ್ಸ್ .ಹಾಸನ
ರವರ ಸಹಯೋಗದಲ್ಲಿ,

ದಯಾಗಂಗನ ಘಟ್ಟ ರವರ
“ಉಪ್ಪಚ್ಚಿಮುಳ್ಳು” ಎಂಬ ಕಥಾಸಂಕಲನದ ಎರಡನೇ ಅವೃತ್ತಿಯ ಬಿಡುಗಡೆ ಕಾರ್ಯಕ್ರಮವನ್ನು
ದಿ:11- 12- 2022 ರಂದು ಬೆಳಗ್ಗೆ 10-30 ಗಂಟೆಗೆ
IMA ಸಭಾಂಗಣ ಬಿಜಿಎಸ್ ಸರ್ಕಲ್ (ಟೌನ್ ಹಾಲ್ ಸರ್ಕಲ್) ತುಮಕೂರು ಇಲ್ಲಿ ಹಮ್ಮಿಕೊಂಡಿರುತ್ತದೆ.

ಕೇಶವರೆಡ್ಡಿ ಹಂದ್ರಾಳ ರವರು ಕೃತಿ ಬಿಡುಗಡೆ ಮಾಡಲಿದ್ದು ,ಎಸ್ .ಗಂಗಾಧರಯ್ಯ ರವರು ಕೃತಿ ಕುರಿತು ಮಾತನಾಡಲಿದ್ದಾರೆ .
ಬಾ.ಹ.ರಮಾಕುಮಾರಿ ರವರು ಮುಖ್ಯ ಅತಿಥಿಗಳಾಗಿ
ಆಗಮಿಸಲಿದ್ದು , ಕೃತಿಕಾರರಾದ ದಯಾ ಗಂಗನಘಟ್ಟ ರವರು ಮತ್ತು ಪ್ರಕಾಶಕರಾದ ಚಲಂ . ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಹಾಸನ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.

ಎಲ್ಲಾ ಸಾಹಿತ್ಯಾಸಕ್ತರು ಮತ್ತು ಲೇಖಕಿಯರ ಸಂಘದ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಸಂಘದ ಕಾರ್ಯದರ್ಶಿ ಗಳಾದ ಡಾ/ಶ್ವೇತಾರಾಣಿ ರವರು ಕೋರಿರುವರು.

ತುಮಕೂರು ವಿ.ವಿ. ಕುಲಸಚಿವ ಶಿವಚಿತ್ತಪ್ಪ ರಾಜೀನಾಮೆ

0

Publicstory


ತುಮಕೂರು; ತುಮಕೂರು ವಿ.ವಿ. ಕುಲ ಸಚಿವ ಶಿವಚಿತ್ತಪ್ಪ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.

ಕುಲ ಸಚಿವ ಸ್ಥಾನಕ್ಕೆ ಸರ್ಕಾರ ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರನ್ನು ವರ್ಗಾವಣೆ ಮಾಡಿರುವುದಕ್ಕೆ ಶಿವಚಿತ್ತಪ್ಪ ಟೀಕಿಸಿದ್ದರು.

ಮಹಿಳಾ ಕುಲಸಚಿವರು ಇಲ್ಲಿಗೆ ಬಂದು ಪಹಣಿ ಕೊಡಬಹುದು ಎಂದು ವಿ.ವಿ.ಯಲ್ಲಿ ನಡೆದ ಮಹಿಳಾಗೋಷ್ಠಿ ಕಾರ್ಯಕ್ರಮದಲ್ಲಿ ವ್ಯಂಗ್ಯವಾಡಿದ್ದರು.

ಶಿವಚಿತ್ತಪ್ಪ ಮಾತುಗಳು ತೀವ್ರ ಟೀಕೆಗೆ ಒಳಗಾಗಿತ್ತು. ಕರ್ನಾಟಕ ಕೆ ಎ ಎಸ್ ಅಧಿಕಾರಿಗಳ ಸಂಘ ಖಂಡಿಸಿ ಶಿವ ಚಿತ್ತಪ್ಪ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿತ್ತು.

ನಾಡಿನ ಅನೇಕ ಹಿರಿಯ ಸಾಹಿತಿಗಳು, ಮಹಿಳಾ ಹೋರಾಟಗಾರರು ಸಹ ಟೀಕಿಸಿದ್ದರು. ಒತ್ತಡಕ್ಕೆ ಸಿಲುಕಿದ ಸರ್ಕಾರ ರಾಜೀನಾಮೆ ಪಡೆದಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಅವಧಿ ಮುಗಿದ ಬಳಿಕ ಕುಲ ಸಚಿವರು ಹೊಸಬರಿಗೆ ಅಧಿಕಾರ ಹಸ್ತಾಂತರಿಸಿ ಅವರ ಮೂಲ ವಿ.ವಿಗೆ ಮರಳಿ ಹೋಗುವುದು ವಾಡಿಕೆಯಾಗಿದೆ.

ಅಧಿಕಾರ ಹಸ್ತಾಂತರಕ್ಕೂ ಮುನ್ನವೇ ರಾಜೀನಾಮೆ ನೀಡಿದ್ದಾರೆ.

ಕನ್ನಡದ ಭವಿಷ್ಯದ ಬಗ್ಗೆ ಆತಂಕ ಬೇಡ: ಯೋಗರಾಜ ಭಟ್

ಬೆಂಗಳೂರು- ‘ಕನ್ನಡಕ್ಕೆ ಆತಂಕವಿದೆ. ಕನ್ನಡ ಮೂಲೆಗುಂಪಾಗುತ್ತದೆ ಎನ್ನುವ ಆತಂಕ ಸುಳ್ಳು’ ಎಂದು ಖ್ಯಾತ ಚಲನಚಿತ್ರ ನಿರ್ದೇಶಕರಾದ ಯೋಗರಾಜ ಭಟ್ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಹಾಗೂ ‘ಬ್ಲಾಸಮ್ ಬುಕ್ ಹೌಸ್’ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಖ್ಯಾತ ಕಿರುತೆರೆ ನಟಿ ರಂಜನಿ ರಾಘವನ್ ಅವರ ‘ಸ್ವೈಪ್ ರೈಟ್’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಕನ್ನಡ ಭಾಷೆ ಹುಟ್ಟಿದಾಗಿನಿಂದಲೂ ಭಾಷೆ ಮೂಲೆಗುಂಪಾಗುತ್ತಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ಬೆಂಗಳೂರು ದಾಟಿದರೆ ಕನ್ನಡ ನೆಮ್ಮದಿಯಾಗಿಯೇ ಇದೆ. ಬೆಂಗಳೂರಿನಲ್ಲಿ ಮಾತ್ರ ನಾವು ಅನಗತ್ಯ ಗೊಂದಲಕ್ಕೆ ಒಳಗಾಗಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮಹಾಪ್ರಾಣ ಕಿತ್ತುಹಾಕಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಮಹಾಪ್ರಾಣ ಇರಬೇಕೇ, ಇಲ್ಲದಿರಬೇಕೇ ಎನ್ನುವುದಕ್ಕಿಂತ ಕನ್ನಡ ಮಾತನಾಡುತ್ತ ಇರಬೇಕು ಎನ್ನುವುದೇ ಮುಖ್ಯವಾಗಬೇಕು ಎಂದು ಯೋಗರಾಜ ಭಟ್ದ ಅವರು ಕಿವಿಮಾತು ಹೇಳಿದರು.

ರಂಜನಿ ರಾಘವನ್ ಅವರ ಬರಹ ಸ್ತ್ರೀ ಸಮುದಾಯಕ್ಕೆ ಸಹಜವಾಗಿ ಇರುವ ಕಥನ ಕಲೆಯ ಹಿರಿಮೆಯನ್ನು ತೋರಿಸುತ್ತದೆ. ಕಥನ ಕಲೆ ರಂಜನಿ ಅವರಿಗೆ ಸಿದ್ಧಿಸಿದೆ ಎಂದರು.

ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಕಾಲದಲ್ಲಿ ರಂಜನಿ ರಾಘವನ್ ಅವರು ದೊಡ್ಡ ಸಂಖ್ಯೆಯ ಓದುಗರನ್ನು ತಮ್ಮ ಬರಹದ ಮೂಲಕ ಸೃಷ್ಟಿಸಿದ್ದಾರೆ ಎಂದು ಪ್ರಶಂಸಿಸಿದರು. ಡಿಜಿಟಲ್ ಮಾಧ್ಯಮದ ಕಾಲಘಟ್ಟದಲ್ಲಿ ನಾವೆಲ್ಲರೂ ಕಲ್ಪನೆಯ ಲೋಕವನ್ನು ಕಳೆದುಕೊಂಡಿದ್ದೇವೆ. ಬುದ್ದಿ ಪ್ರಚೋದಕವಾಗಿರಲು ಓದು ಅತಿ ಮುಖ್ಯ ಎಂದರು.

ಚಿತ್ರ ನಿರ್ದೇಶಕ ಮಂಸೋರೆ ಅವರು ಮಾತನಾಡಿ ಚಿತ್ರ ನಿರ್ಮಿಸಿ ಅದರ ವಿತರಣೆ ಗೊತ್ತಾಗದೆ ಕಂಗಾಲಾಗುವಂತೆ ಪುಸ್ತಕ ಪ್ರಕಟಿಸಿ ಅದನ್ನು ಓದುಗರ ಬಳಿಗೆ ಕೊಂಡೊಯ್ಯುವ ದಾರಿ ಗೊತ್ತಾಗದೆ ಕಂಗಾಲಾಗುವ ಸ್ಥಿತಿ ಕನ್ನಡ ಪ್ರಕಾಶನ ರಂಗಕ್ಕೆ ಬಾರದಿರಲಿ ಎಂದು ಆಶಿಸಿದರು.

ಖ್ಯಾತ ನಟಿ ರಂಜನಿ ರಾಘವನ್ ಅವರು ಮಾತನಾಡಿ ಬರವಣಿಗೆ ನನಗೆ ಮುಕ್ತ ಸ್ವಾತಂತ್ರ್ಯದ ಅನುಭವವನ್ನು ಕೊಟ್ಟಿದೆ. ನನ್ನ ಕತೆಗಳನ್ನು ಓದಿ ಮೆಚ್ಚಿದ ಕಾರಣದಿಂದಾಗಿ ನನ್ನಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಜೋಗಿ, ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್ , ಬ್ಲಾಸಮ್ ಬುಕ್ ಹೌಸ್ ನ ಮಾಯಿ ಗೌಡ, ಹೇಮಾ, ನಟ ಶ್ರೀನಿವಾಸ ಪ್ರಭು ಅವರು ಉಪಸ್ಥಿತರಿದ್ದರು.

ಕೃತಿಗಾಗಿ ಸಂಪರ್ಕಿಸಿ :+917019182729

+91 88617 63788

ಕೃತಿ: ಸ್ವೈಪ್ ರೈಟ್
ಲೇಖಕಿ: ರಂಜನಿ ರಾಘವನ್
ಪ್ರಕಾಶನ: ಬಹುರೂಪಿ
ಬೆಲೆ: ರೂ 250ಕ