Monday, June 16, 2025
Google search engine
Home Blog Page 4

ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಪೂಜ್ಯ ಶ್ರೀ  ವೀರೇಶಾನಂದ ಸರಸ್ವತೀ ಸ್ವಾಮೀಜಿ

ಮೈಸೂರು


ಕನ್ನಡ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಶ್ರಮ ಸಂಸ್ಕೃತಿಯ ವೈಶಿಷ್ಟ್ಯತೆ ಚಿಂತನೆ ಕುರಿತಂತೆ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಸಾಹಿತಿಗಳು ವಿಶೇಷವಾಗಿ ನಿರೂಪಿಸಿದ್ದಾರೆ. ಕನ್ನಡ ಮಾತೃಭಾಷೆಯಲ್ಲದ ಅನೇಕ ಮಹನೀಯರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಸ್ಮರಣೀಯವಾದದ್ದು.ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ವಿಚಾರ ಸಂಕಿರಣದ ಗೋಷ್ಠಿಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.ಭಾಷೆಯ ಬಗೆಗೆ ಗಂಭೀರವಾದ ಚಿಂತನೆ ನಡೆಸಿದವರು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ.ಹಾಗಾಗಿ ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಉದಯಪುರದಲ್ಲಿ ಮಿಂಚಿದ ಶಿರಾದ ಮೇಸ್ಟ್ರು

0

ಕೇಂದ್ರ ಸಂಸ್ಕೃತಿಕ ಸಚಿವಾಲಯದಿಂದ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರಿಗೆ ರಾಜಸ್ಥಾನ ರಾಜ್ಯದ ಉದಯಪುರದಲ್ಲಿ ನಮ್ಮ ಸಂಸ್ಕೃತಿಯಲ್ಲಿ ವಿವಿಧತೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ತರಬೇತಿ ಪಡೆಯಲು ಕರ್ನಾಟಕ ರಾಜ್ಯದಿಂದ 8 ಶಿಕ್ಷಕರು ಭಾಗವಹಿಸಿ, ವಿವಿಧ ಕಲೆಗಳನ್ನು ಅನಾವರಣಗೊಳಿಸಿ, ಹಲವು ರಾಜ್ಯಗಳ ಶಿಕ್ಷಕರಿಂದ ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದ ಪಡೆದಿದ್ದಾರೆ.
ಶಿರಾ ತಾಲ್ಲೂಕಿನ ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ಹಾಗೂ ಗೊಲ್ಲರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ನೂರ್‌ ಅಹಮದ್‌ ಸೇರಿದಂತೆ ರಾಜ್ಯದ ಚಿತ್ರದುರ್ಗ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಲಾ ಇಬ್ಬರು ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ನಮ್ಮ ನೆಲಮೂಲ ಸಂಸ್ಕೃತಿಯ ಬಗ್ಗೆ ಅಲ್ಲಿನ ಶಿಕ್ಷಕರಿಗೆ ಮಾಹಿತಿ ನೀಡಿ, ಬೇರೆ ಬೇರೆ ರಾಜ್ಯಗಳ ಕಲೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಧ್ಯಯನ ಮಾಡಿ ಬಂದಿದ್ದಾರೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆದ ಡಿ.11 ರಿಂದ ಪ್ರಾರಂಭವಾದ ಈ ತರಬೇತಿ ಕಾರ್ಯಾಗಾರದಲ್ಲಿ ಪ್ರತಿದಿನವೂ ಎರಡು ರಾಜ್ಯಗಳ ವಿಸ್ತೃತ ಮಾಹಿತಿಯೊಂದಿಗೆ ಅಲ್ಲಿನ ಭೌಗೋಳಿಕ ವೈವಿಧ್ಯತೆ, ಭಾಷಾ ವೈವಿಧ್ಯತೆ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಪ್ರಾದೇಶಿಕ ಕಲೆಗಳ ಅನಾವರಣ, ಸ್ಥಳೀಯ ನೃತ್ಯ ಪ್ರಕಾರಗಳು ಸೇರಿದಂತೆ ಹಲವು ವೈವಿಧ್ಯತೆಗಳನ್ನು ಪ್ರತಿ ಶಿಕ್ಷಕರು ಪ್ರದರ್ಶನ ನೀಡಿದರು.
ಕರ್ನಾಟಕದ ಜಾನಪದ ನೃತ್ಯ ಪ್ರಕಾರಗಳಾದ ಕಂಸಾಳೆ, ವೀರಗಾಸೆ, ಯಕ್ಷಗಾನ, ಡೊಳ್ಳು ಕುಣಿತ, ಹುಲಿ ಕುಣಿತ, ಗೊರವರ ಕುಣಿತ ಸೇರಿದಂತೆ ಹಲವು ಕಲಾಪ್ರಕಾರಗಳ ಪರಿಚಯ ಮಾಡಿಕೊಡಲಾಯಿತು. ರಾಜ್ಯದ ವಿವಿಧ ಭಾಗಗಳ ವೇಷ-ಭೂಷಣ, ಆಹಾರ ಪದ್ದತಿ, ನೃತ್ಯ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು.
ಶಿರಾ ತಾಲ್ಲೂಕು ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ದಕ್ಷಿಣ ಕರ್ನಾಟಕದ ಮೈಲಾರಲಿಂಗನ ಭಕ್ತರು ಪ್ರದರ್ಶಿಸುವ ಗೊರವರ ಕುಣಿತ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದು, ಎಲ್ಲರ ಮನ ಸೂರೆಗೊಂಡಿತು. ಹಿರಿಯೂರಿನ ಅರುಣ್‌, ಚಿದಾನಂದ್‌, ಚಿಕ್ಕಮಗಳೂರಿನ ಶಿವಕುಮಾರ್, ರಾಮನಗರ ಜಿಲ್ಲೆಯ ರಂಜಿತ ಸಂಗಡಿಗರು ಪ್ರದರ್ಶಿಸಿದ ಹುಲಿ ಕುಣಿತ ಆಕರ್ಷಣೀಯವಾಗಿತ್ತು. ನಂತರ ರಾಜ್ಯದ ವಿಶೇಷ ತಿನಿಸುಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೂ ಹಾಗೂ ಅಧಿಕಾರಿಗಳಿಗೂ ವಿತರಿಸಿ, ಅದರ ವೈಶಿಷ್ಟ್ಯತೆ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ದೇಗುಲಗಳ ಬಗ್ಗೆ ತಯಾರಿಸಿದ ಪ್ರಾಜೆಕ್ಟ್‌ ಗೆ ಪ್ರಥಮ ಬಹುಮಾನ ಲಭಿಸಿತು. ರಾಮನಗರದ ಲಾವಣ್ಯ, ಚಿಕ್ಕಮಗಳೂರಿನ ಶಕೀಲ ಭಾಗವಹಿಸಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಕುರಿತು ಮಾಹಿತಿ ಹಂಚಿಕೊಂಡರು.

ಫೋಟೋ-1 ಮತ್ತು 2
ಶಿರಾ ತಾಲ್ಲೂಕಿನ ಶಿಕ್ಷಕರಾದ ಆರ್.ತಿಪ್ಪೇಸ್ವಾಮಿ ಹಾಗೂ ನೂರ್‌ ಅಹಮದ್‌ ಸೇರಿದಂತೆ ರಾಜ್ಯದ 8 ಜನ ಶಿಕ್ಷಕರು ರಾಜಸ್ಥಾನದ ಉದಯಪುರದಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ಕಲೆಗಳ ಪ್ರದರ್ಶನ ನೀಡಿದರು.

ತಮ್ಮ ಲೇಖನಿಯ ಪರಿಣಾಮದಿಂದಲೇ ದೇಶ ಮುನ್ನಡೆಸಿದ ಡಾ.ಸಿಂಗ್ ; ಕೆ ಎಸ್ ಕಿರಣಕುಮಾರ್

0

(ಆಧಾರ್ ಪ್ರವರ್ತಕ ಡಾ ಸಿಂಗ್ ; ಸಿ ಡಿ ಚಂದ್ರಶೇಖರ್)

ಚಿಕ್ಕನಾಯಕನಹಳ್ಳಿ :‌ ಬ್ಲಾಕ್ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆ ನಡೆಸಲಾಯ್ತು.

ಮಹಾತ್ಮಗಾಂಧಿ ನರೇಗಾ ಕ್ರಾಂತಿಯ ಮೂಲಕ ಬಡವರ ಒಡಲಿಗೆ ಅನ್ನ ಕಲ್ಪಿಸಿಕೊಟ್ಟ ಜ್ಞಾನಮೌನಿ ಡಾ ಮನಮೋಹನ್ ಸಿಂಗ್’ರವರ ಗೌರವಾರ್ಥ ಎರಡು ನಿಮಿಗಳ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಾಜಿ ಶಾಸಕ ಕೆ ಎಸ್ ಕಿರಣಕುಮಾರ್ ಮಾತನಾಡಿ, ಅಬ್ಬರದ ಭಾಷಣ ಮಾಡುವವರು ಮಾತ್ರವೇ ದೇಶದ ನಾಯಕರಲ್ಲ. ತಮ್ಮ ಬಳಿಯಿರುವ ಲೇಖನಿಯ ಪರಿಣಾಮಕಾರಿ ಸದ್ಬಳಕೆಯಿಂದಲೇ ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿದವರೇ ನಿಜವಾದ ಜನನಾಯಕರು. ಹಳಿ ತಪ್ಪಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಮತ್ತೆ ಆರ್ಥಿಕ ಪ್ರಗತಿಯ ಗತಿಶೀಲತೆಯನ್ನು ತಂದುಕೊಟ್ಟಂಥವರು ಡಾ. ಮನಮೋಹನ್ ಸಿಂಗ್’ರವರು. ಪ್ರಧಾನಿಯಾಗಿದ್ದಾಗ, ಹೊರಗೆ ಅಡಮಾನ ಇಟ್ಟಿದ್ದ ದೇಶದ ಚಿನ್ನವನ್ನು ಮತ್ತೆ ದೇಶಕ್ಕೆ ಮರಳಿ ಗಳಿಸಿಕೊಟ್ಟವರು ಡಾ ಸಿಂಗ್. ಪ್ರಪ್ರಥಮವಾಗಿ, ಎಪ್ಪತ್ತೊಂದು ಸಾವಿರ ಕೋಟಿಗಳಷ್ಟು ರೈತರ ಸಾಲಮನ್ನಾ ಮಾಡಿದ ಮೌನದಿರಿಸಿನ ಧೀರ ವ್ಯಕ್ತಿತ್ವ ಡಾ ಮನಮೋಹನ್ ಸಿಂಗ್’ರವರದು. ಅಬ್ಬರದ ಭಾಷಣ ಮಾಡುತ್ತಾ, ಜನರನ್ನು ಮರುಳು ಮಾಡುತ್ತಾ ಕಾಲತಳ್ಳುವ ವ್ಯಕ್ತಿ ಅವರಾಗಿರಲಿಲ್ಲ. ಮಾತಾಡದೇ ಕೆಲಸ ಮಾಡುತ್ತಾ ದೇಶದ ಜನರ ಬದುಕು-ಭವಿಷ್ಯ ಎರಡನ್ನೂ ಸುಭದ್ರಗೊಳಿಸಲು ಅವಿರತ ಪ್ರಯತ್ನಿಸುತ್ತಿದ್ದವರು. ಅವರ ನಿಧನದಿಂದ ದೇಶ ನಿಜಕ್ಕೂ ಇಂದು ಬಡವಾಗಿದೆ ಎಂದು ವಿಷಾದಿಸಿದರು.

ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಆರೋಗ್ಯ ಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಗೆ ತಂದಂತಹ ಮಹಾವ್ಯಕ್ತಿ ಡಾ ಮನಮೋಹನ್ ಸಿಂಗ್’ರವರು. ಜನ-ಸಾಮಾನ್ಯರ ಕೈಗೆ ಅಸಾಮಾನ್ಯ ಬಲ ತಂದುಕೊಟ್ಟಂತಹ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ’ಗಳನ್ನು ದೇಶಕ್ಕೆ ಕೊಟ್ಟ ಶ್ರೇಯಸ್ಸು ಡಾ ಸಿಂಗ್’ರವರದ್ದು. ಬಡವರಿಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದು, ವರ್ಷವಿಡೀ ಯಾರಿಗೂ ಅನ್ನಾಹಾರಗಳ ಕೊರತೆ ಎದುರಾಗದಂತೆ ಕಾಳಜಿ ವಹಿಸಿದ್ದರು. ತಮ್ಮ ಅಧಿಕಾರಾವಧಿಯ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅವರೊಬ್ಬ ಮಹಾನ್ ಆರ್ಥಿಕ ತಜ್ಞರಾಗಿದ್ದರು. ಮಾರುತಿ ಕಾರ್ ಎಂದರೆ, ಅವರಿಗೆ ಅತಿಯಾದ ಪ್ರೀತಿ. ಆಗೆಲ್ಲ ಕೇವಲ ಮಾರುತಿ ಕಾರ್ ಮಾತ್ರ ಕಾಣಿಸುತ್ತಿದ್ದ ಇಂಡಿಯಾದ ರಸ್ತೆಗಳಲ್ಲಿ, ನೂರಾರು ಮಾದರಿಯ ಬೇರೆ ಬೇರೆ ಕಾರುಗಳೂ ಕಾಣುವಷ್ಟರ ಮಟ್ಟಿಗೆ, ದೇಶದ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಒತ್ತು ಕೊಟ್ಟವರು. ಕಂಪ್ಯೂಟರ್ರು, ಮೊಬೈಲು, ಟ್ಯಾಬು ಇತ್ಯಾದಿ ಗ್ಯಾಜೆಟ್ಟುಗಳು ದೇಶದ ಜನರಿಗೆ ಸುಲಭ ದರಗಳಲ್ಲಿ ದೊರೆಯುವಂತೆ ಮಾಡಿದ್ದ ಆರ್ಥಿಕ ಕ್ಷೇತ್ರದ ಅಪರೂಪದ ಸಾಧಕ. ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲುಗುತ್ತಿದ್ದಾಗ, ಆಯೆಲ್ಲ ಆರ್ಥಿಕ ಸಂಕಟಗಳಿಗೆ ದೇಶ ಬಲಿಯಾಗದಂತೆ ಎಚ್ಚರ ವಹಿಸಿ ಭಾರತವನ್ನು ಕಾಪಾಡಿಕೊಂಡ ಮೌನ ಕ್ರಾಂತಿಕಾರ. ದೇಶದ ಜನರಿಗೆ ಸುಗಮವಾಗಿ ಸಕಾಲದಲ್ಲಿ ಸೇವೆಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಆಧಾರ್ ಕಾರ್ಡ್ ತಂದ ಪ್ರವರ್ತಕರು ಅವರು. ಅವರನ್ನು ಮೌನಿ ಮೌನಿ ಎಂದು ಮೂದಲಿಸಿ ಜರೆಯುತ್ತಿದ್ದ ವಿರೋಧಿಗಳೂ ಕೂಡ ಇಂದು, ಡಾ. ಸಿಂಗ್ ಸಾಹೇಬರು, ದೇಶಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಎಣಿಸುತ್ತಾ ಕೂತಿದ್ದಾರೆ.

ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ, ಟಿ, ಚಿಕ್ಕಣ್ಣ, ರಾಜ್ಯ ಸೇವಾದಳದ ಕಾರ್ಯದರ್ಶಿ ಕೆ ಜಿ ಕೃಷ್ಣೆಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಸುಗಂದರಾಜು, ಕೆಂಪಮ್ಮ, ಪುರಸಭೆ ಆಶ್ರಯ ಸಮಿತಿಸದಸ್ಯ ರಾದ ಸಿ, ಕೆ, ಪೀರ್ ಪಾಷಾ, ಸೇವಾದಳ ಅಧ್ಯಕ್ಷರಾದ ಗೋವಿಂದರಾಜು, ಸಣ್ಣತಾಯಮ್ಮ, ಜಾಣೆಹಾರ್ ಬಸವರಾಜ್, ಕೆಡಿಪಿ ಸದಸ್ಯ ರಾಮಚಂದ್ರಯ್ಯ, ಗ್ಯಾರಂಟಿ ಸಮಿತಿ ಸದಸ್ಯರಾದ ರೇಣುಕಾಸ್ವಾಮಿ, ಚಂದ್ರಯ್ಯ, ಓಂಕಾರಮೂರ್ತಿ, ಸಿದ್ದರಾಮಯ್ಯ, ಅಗಸರಹಳ್ಳಿ ನರಸಿಂಮೂರ್ತಿ, ಸೇವಾದಳದ ಮಾಜಿ ಜಿಲ್ಲಾಧ್ಯಕ್ಷ ನಿಶಾನಿ ಕಿರಣ್, ರಾಜು ಕರಿಯಪ್ಪ, ನೀಲಕಂಠಯ್ಯ, ದರ್ಘಾ ಜಾವೇದ್, ಚಿ ನಾ ಹಳ್ಳಿ ಜ಼ಾಕಿರ್ ಹುಸೇನ್, ಹೊನ್ನೇಬಾಗಿ ಜಾಫರ್, ಪ್ರಸನ್ನಕುಮಾರ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಚಿಕ್ಕನಾಯಕನಹಳ್ಳಿಗೆ ತಿಂಡಿಗೆ ಬರಲಿದ್ದಾನೆ ತುಂಡೇರಾಯ

ಚಿಕ್ಕನಾಯಕನಹಳ್ಳಿ: ಇಲ್ಲಿಗೆ ಡಿಸೆಂಬರ್ 29ರಂದು ತುಂಡೇರಾಯ ತಿಂಡಿಗೆ ಬರಲಿದ್ದಾನೆ. ತುಂಡೇರಾಯನನ್ನು ನೋಡಲು ಯಾರೂ ಬೇಕಾದರೂ ಬರಬಹುದು.

ಜರ್ಮನ್ ನಾಟಕಕಾರ *ಬರ್ಟೋಲ್ಟ್ ಬ್ರೆಖ್ಟ್* ರಚಿಸಿದ ‘ದ ರೆಜ಼ಿಸ್ಟೆಬಲ್ ರೈಜ಼್ ಆಫ್ ಆರ್ಥುರೋ ಊಯಿ’ ನಾಟಕದ ಕನ್ನಡರೂಪ.
ನಿರ್ದೇಶನ, *ಶಕೀಲ್ ಅಹ್ಮದ್*. ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನವಾಗಿದೆ. ನಾಟಕಾಸಕ್ತರು ಭಾಗವಹಿಸಲು ಆಹ್ವಾನಿಸಲಾಗಿದೆ.

ದಿ.*29.12.2024*, ಭಾನುವಾರ
ಸಂಜೆ, *5.45*’ಕ್ಕೆ (ಛಳಿಗಾಲದ ಪ್ರಯುಕ್ತ)
ಸ್ಥಳ, ತೀ.ನಂ.ಶ್ರೀ.ಭವನ, ಚಿಕ್ಕನಾಯಕನಹಳ್ಳಿ ಆಯೋಜಿಸಲಾಗಿದೆ.
ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದಂವ. ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ, ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ.

ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು.

ಅವಧಿ, *120* ನಿಮಿಷಗಳು
ಟಿಕೆಟ್ ದರ, *50′ ರೂಪಾಯಿ ನಿಗದಿಪಡಿಸಲಾಗಿದೆ.

*ಸಂಚಲನ*(ರಿ)
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ
ಚಿಕ್ಕನಾಯಕನಹಳ್ಳಿ–ಇವರು ನಾಟಕ ಆಯೋಜಿಸಿದ್ದಾರೆ.*ಕುವೆಂಪು ಜನ್ಮದಿನ*’ದಂದು,
*ನಿರ್ದಿಗಂತ*, ಮೈಸೂರು ಇವರು ಪ್ರಸ್ತುತಿಪಡಿಸುತ್ತಿದ್ದಾರೆ.
____________________________________________

Publicstory ಸುದ್ದಿ ಪರಿಣಾಮ: ಅಲೆಮಾರಿಗಳ ಗಾಂಧಿನಗರದಲ್ಲಿ ಜನಸಂಪರ್ಕ ಸಭೆ

0

ಅಲೆಮಾರಿಗಳ ಮೂಲಭೂತ ಸೌಕರ್ಯ ಮತ್ತು ವಿಶ್ವಾಸ ವೃದ್ಧಿಯತ್ತ ದೃಢಹೆಜ್ಜೆ ; ತಹಸೀಲ್ದಾರ್ ಕೆ ಪುರಂದರ್

(

*ಪಬ್ಲಿಕ್ ಸ್ಟೋರಿ ಪರಿಣಾಮ*

ಚಿಕ್ಕನಾಯಕನಹಳ್ಳಿ : ಪಟ್ಟಣದ ರಾಯಪ್ಪನಪಾಳ್ಯ ರಸ್ತೆಯಲ್ಲಿರುವ ದಕ್ಕಲಿಗ ಅಲೆಮಾರಿ ಜನಾಂಗದ ಗಾಂಧಿನಗರಕ್ಕೆ ಮಂಗಳವಾರ ಭೇಟಿಕೊಟ್ಟ ತಹಸೀಲ್ದಾರ್ ಮತ್ತು ತಾಲ್ಲೂಕು ಆಡಳಿತದ ತಂಡ, ಅಲ್ಲಿನ ನಿವಾಸಿಗಳ ಕುಂದು-ಕೊರತೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ಅಲೆಮಾರಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಶೌಚಾಲಯ, ಆಧಾರ್ ಕಾರ್ಡ್, ಪಡಿತರ ಚೀಟಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವ ಸಲುವಾಗಿ ತಹಸೀಲ್ದಾರ್ ಕೆ ಪುರಂದರ್’ರವರು, ಪುರಸಭೆ ಮುಖ್ಯಾಧಿಕಾರಿ ಪಿ ಮಂಜಮ್ಮನವರಿಗೆ ಹಲವು ಸೂಚನೆಗಳನ್ನು ನೀಡಿದರು.

ಅಲ್ಲಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಚರ್ಚೆ ನಡೆಯಿತು. ಶೌಚಾಲಯವಿಲ್ಲದೆ ಬಯಲ ಶೌಚಾಲಯಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆಯಿಂದ ನಿತ್ಯ ಹಿಂಸೆಪಡುತ್ತಿರುವ ಅಲ್ಲಿನ ಮಹಿಳೆಯರ ಸಮಸ್ಯೆಯನ್ನು ಮುಖ್ಯವಾಗಿ ಚರ್ಚಿಸಿ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ತಹಸೀಲ್ದಾರ್ ಮುಖ್ಯಾಧಿಕಾರಿಗೆ ಸೂಚಿಸಿದರು.

ಆಧಾರ್ ಕಾರ್ಡ್ ಹೊಂದಿಲ್ಲದವರು ಅಥವಾ ಕಳೆದುಕೊಂಡಿರುವವರ ಪಟ್ಟಿಮಾಡಿ ಅವರಿಗೆ ಶೀಘ್ರವೇ ಆಧಾರ್ ಕಾರ್ಡ್ ಒದಗಿಸಿಕೊಡುವಂತೆ ಸೂಚಿಸಲಾಯಿತು.

ಮಕ್ಕಳು ಮತ್ತು ಮಹಿಳೆಯರ ಸುರಕ್ಷೆ ಹಾಗೂ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ‌ ನಿರ್ದೇಶನಗಳನ್ನು ನೀಡಲಾಯಿತು. ಪಡಿತರ ಮತ್ತು ಹಸಿವುಮುಕ್ತ ಅಲೆಮಾರಿ ಕಾಲೊನಿಗಾಗಿ ಕ್ರಮಗಳನ್ನು ವಹಿಸಲು ನಿರ್ದೇಶನಗಳನ್ನು ನೀಡಲಾಯಿತು.

ಪಬ್ಲಿಕ್ ಸ್ಟೋರಿ’ಯ ವರದಿಗಾರರ ಒತ್ತಾಸೆಗೆ ಮಣಿದು ಕಳೆದ ನವೆಂಬರ್ 30’ರಂದು ಸಂಜೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿಯವರು, ಅಲೆಮಾರಿಗಳ ಗಾಂಧಿನಗರ ಕಾಲೊನಿಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ತಾಲ್ಲೂಕು ಆಡಳಿತಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಿಹೋಗಿದ್ದರು. ಅಲ್ಲಿನ ನಿವಾಸಿಗಳ ಕುಂದು-ಕೊರತೆ ಪರಿಹರಿಸಲು ಶೀಘ್ರವೇ ಜನಸಂಪರ್ಕ ಸಭೆ ನಡೆಸಿ ವರದಿ ಕಳಿಸಿಕೊಡಿ ಎಂದು ತಾಲ್ಲೂಕು ಆಡಳಿತಕ್ಕೆ ತಾಕೀತು ಮಾಡಿ ಹೋಗಿದ್ದರು. ಅದರ ಪರಿಣಾಮವಾಗಿ, ಅಲೆಮಾರಿ ಜನಾಂಗದವರ ಕುಂದು-ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಅಲೆಮಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬದುಕುವ ಹಕ್ಕು ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಕಾರ್ಯಗಳನ್ನು ಜಾರಿ ಮಾಡುವತ್ತ ತಾಲ್ಲೂಕು ಆಡಳಿತ ಮುನ್ನಡೆಯುತ್ತಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹುಳಿಯಾರು ಕೆರೆ-ದಂಡೆ ನಿವಾಸಿಗಳು ಮತ್ತು ಗಾಂಧಿನಗರ ಕಾಲೊನಿಯ ಅಲೆಮಾರಿಗಳ ಕುಂದು-ಕೊರತೆ ಬಗ್ಗೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಬೇಗನೇ ಇಲ್ಲಿನ ಅಲೆಮಾರಿಗಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಕೆ ಪುರಂದರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು, ಪುರಸಭೆ ಮುಖ್ಯಾಧಿಕಾರಿ ಮಂಜಮ್ಮ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗಾಂಧಿನಗರ ಅಲೆಮಾರಿ ಜನಾಂಗದ ಕುಂದು-ಕೊರತೆ ನಿವಾರಣೆಯ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದರು.

ಸಭೆಯಲ್ಲಿ, ಗಾಂಧಿನಗರ ಕಾಲೊನಿಯ ಅಲೆಮಾರಿಗಳು ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಅನ್ನದಾತ ಎಂಬುದೊಂದೇ ಜಾತಿ ರೈತರದು ; ಶಾಸಕ ಸಿ ಬಿ ಸುರೇಶ್ ಬಾಬು

0

ಚಿಕ್ಕನಾಯಕನಹಳ್ಳಿ : ರಾಮನಹಳ್ಳಿ ಕುಮಾರಯ್ಯ ಮತ್ತು ಸೀಬಿ ಲಿಂಗಯ್ಯ’ರವರಂತಹ ಹಿರಿಯ ರೈತ ಮುಖಂಡರೊಂದಿಗೆ, ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಅಡಿಕೆ ಸಸಿ ನೆಡುವುದರ ಮೂಲಕ ಶಾಸಕ ಸಿ ಬಿ ಸುರೇಶ್ ಬಾಬು’ರವರು ರೈತ ದಿನಾಚರಣೆಯನ್ನು ರೈತರು ಮತ್ತು ಕೃಷಿ ಅಧಿಕಾರಿಗಳ ಜೊತೆಸೇರಿ ಆಚರಿಸಿದರು.

ಸೋಮವಾರ ಬೆಳಗ್ಗೆ ತಾಲ್ಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ ಪಟ್ಟದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2024-25 ನೇ ಸಾಲಿನ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್ ಎಸ್ ಶಿವರಾಜಕುಮಾರ್’ರವರು, ಈ ಬಾರಿ ತಾಲ್ಲೂಕಿನ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ರೈತರ ಎಲ್ಲ ಬೆಳೆಗಳಲ್ಲೂ ಉತ್ತಮ ಫಸಲು ಕಂಡುಬಂದಿದೆ. ಇಂಥ ಸಮೃದ್ಧಿಯ ಕಾಲದಲ್ಲಿ ಮತ್ತು ಈಗಿನ ಸುಗ್ಗಿ-ಸೀಜ಼ನ್’ನಲ್ಲಿ ರೈತ ದಿನಾಚರಣೆ ಅರ್ಥಪೂರ್ಣ ಮತ್ತು ಸಾರ್ಥಕ ಅನಿಸುತ್ತಿದೆ ಎಂದರು.

ಶಾಸಕ ಸಿ ಬಿ ಸುರೇಶ್ ಬಾಬು’ರವರು ಮಾತನಾಡಿ, ರೈತರಿಗೆ ಜಾತಿಯಿಲ್ಲ. ಪಕ್ಷವಿಲ್ಲ. ಅನ್ನದಾತ ಎಂಬುದೊಂದೇ ಜಾತಿ ರೈತರದು. ನೇಗಿಲಧರ್ಮ ಎಂಬುದೊಂದೇ ಧರ್ಮ ಅವರದು. ಹಾಗಾಗಿ, ನಾವೂ ಕೂಡ ಜಾತಿಬೇಧ, ಪಕ್ಷಬೇಧ ಬದಿಗಿಟ್ಟು ರೈತರ ಸೇವೆ ಮಾಡಬೇಕು. ತಾಲ್ಲೂಕು ಕೃಷಿ ಅಧಿಕಾರಿಗಳು ಅದನ್ನು ಸರ್ವಥಾ ನಿಭಾಯಿಸುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ.

ರೈತರ ಅನುಕೂಲಗಳಿಗಾಗಿ ಹತ್ತುಹಲವು ಯೋಜನೆಗಳನ್ನು ಸ್ಥಳೀಯವಾಗಿ ರೂಪಿಸುತ್ತಿರುವ ನಾವು, ರೈತರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಚಿತ ಸಿಇಟಿ ಕೋಚಿಂಗ್ ಮತ್ತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕ ಸಮಾಜದ ಮಕ್ಕಳು ಹೆಚ್ಚೆಚ್ಚು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ರಾಮನಹಳ್ಳಿ ಕುಮಾರಯ್ಯ ಮಾತನಾಡಿ, ರೈತ ಹೋರಾಟಗಳು ಕಸುವು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ರೈತ ದಿನಾಚರಣೆಯ ಮೂಲಕ ಮತ್ತೆ ಮತ್ತೆ ರೈತಹಕ್ಕುಗಳನ್ನು ಪ್ರತಿಪಾದಿಸುವ ಅವಕಾಶಗಳು ಸಿಗುತ್ತಿರುವುದು ಸಮಾಧಾನಕರ. ಕಿಷನ್ ಪಟ್ನಾಯಕ್, ಪ್ರೊ.ಎಂ ಡಿ ನಂಜುಂಡಸ್ವಾಮಿಯವರಂತಹ ಪ್ರಖರ ಚಿಂತಕರೂ, ದಿಟ್ಟ ಹೋರಾಟಗಾರರೂ ಕಟ್ಟಿಕೊಟ್ಟ ಚಳವಳಿಯ ಬಂಧ ಈಗಲೂ ಹಿರಿ ತಲಮಾರಿನ ಹೋರಾಟಗಾರರಲ್ಲಿ ಉಳಿದಿದೆ. ಅದೇರೀತಿ, ಕೇವಲ ಇದು ದಿನಾಚರಣೆಗಷ್ಟೇ ಸೀಮಿತವಾಗದೆ ಚೌಧರಿ ಚರಣ್ ಸಿಂಗ್’ರವರ ರೈತ ಆಶಯಗಳು ಈಡೇರುವಂತಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ, ರೈತ ಮುಖಂಡರು, ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ಸಾಂತ್ವನ ಕೇಂದ್ರದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಬಹುಜನ-ಪ್ರಜಾಪ್ರಭುತ್ವದ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ!!

0

(15 ವರ್ಷಗಳ ತರುವಾಯ ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ)

ಚಿಕ್ಕನಾಯಕನಹಳ್ಳಿ : ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಆಡಳಿತ ಮಂಡಳಿಯ ಚುನಾವಣೆ ಭಾನುವಾರ ಸಂಜೆಯವರೆಗೂ ನಡೆಯಿತು.

ಚುನಾವಣಾಧಿಕಾರಿ ಹರೀಶ್ ಕುಮಾರ್ ಘೋಷಿಸಿದ ಫಲಿತಾಂಶದ ಪ್ರಕಾರ, ಚಲಾವಣೆಯಾಗಿರುವ ಒಟ್ಟು ಮತಗಳಲ್ಲಿ 12 ಮತಗಳು ತಿರಸ್ಕೃತಗೊಂಡಿವೆ. ಮಿಕ್ಕಂತೆ, ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳಲ್ಲಿ,
ರಮೇಶ್ ಬಾಬು 360 ಮತಗಳು, ಸಿಎಂ ರಂಗಸ್ವಾಮಿ 308 ಮತಗಳು, ಬೀರಪ್ಪ 304 ಮತಗಳು, ಸಿ ಎಸ್ ರಮೇಶ್ 284 ಮತಗಳು, ಮಂಜುನಾಥ್ 282 ಮತಗಳು, ಮಹಮ್ಮದ್ ಕಲಂದರ್ 280 ಮತಗಳು, ಸಿಬಿ ರೇಣುಕಸ್ವಾಮಿ 278 ಮತಗಳು, ಸಿ ಎಲ್ ದೊಡ್ಡಯ್ಯ 265 ಮತಗಳನ್ನು ಪಡೆಯುವ ಮೂಲಕ ಕೋ-ಆಪರೇಟಿವ್ ಬ್ಯಾಂಕ್’ನ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

*ರಾಜಕೀಯ ನವ ಚೈತನ್ಯ ; ರಮೇಶ್ ಬಾಬು*

ಅತಿಹೆಚ್ಚು ಮತಗಳನ್ನು ಪಡೆದು ಜಯ ಗಳಿಸಿರುವ ರಮೇಶ್ ಬಾಬು ಫಲಿತಾಂಶ ಹೊರಬಿದ್ದ ನಂತರ ಮಾತನಾಡಿ, ಶತಮಾನದ ಇತಿಹಾಸವಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಕಟ್ಟುವಲ್ಲಿ ಕೆ ಆರ್ ತಿಮ್ಮದಾಸಪ್ಪನವರು, ಪಟ್ಟಾಭಿರಾಮಶೆಟ್ಟರು, ರಾಜೇಶಶೆಟ್ಟರು ಮತ್ತು ಲಿಂಗದೇವರು ಮೊದಲಾದವರ ಶ್ರಮ ಅಗಣಿತವಾದುದು. ಹಿಂದೆ ದಿ-ಕೋ ಆಪರೇಟಿವ್ ಬ್ಯಾಂಕ್ ಎಂದು ಹೆಸರಿದ್ದ ಈ ಬ್ಯಾಂಕಿಗೆ ನಾನು ಅಧ್ಯಕ್ಷನಾಗಿದ್ದ ಕಾಲದಲ್ಲಿ ‘ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ ಎಂದು ಮರುನಾಮಕರಣ ಮಾಡಿದ್ದೆವು.

ಅದೇ ತರಹ ಈ ಬ್ಯಾಂಕಿನ ಪ್ರಗತಿ ಹಾಗೂ ಬ್ಯಾಂಕ್ ಮೂಲಕ ಬಡವ ಬಲ್ಲಿದರ ಸೇವೆಗೆ ನಾನು ಮತ್ತು ನನ್ನ ತಂಡ ಕಟಿಬದ್ಧವಾಗಿದೆ. ರಾಜ್ಯಮಟ್ಟದ ರಾಜಕಾರಣದಲ್ಲಿ ವ್ಯಸ್ತಗೊಂಡಿದ್ದ ನನಗೆ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಕಾರಣದತ್ತ ಹೊರಳಲು ಈ ಗೆಲುವು ನವ ಚೈತನ್ಯ ತಂದಿದೆ ಎಂದು ಹರ್ಷಿಸಿದರು.

*ಪ್ರಾಮುಖ್ಯತೆ*
ಕಳೆದೆರಡು ಮೂರು ಬಾರಿಯಿಂದ ಆಡಳಿತ ಮಂಡಳಿಯ ಚುನಾವಣೆ ನಡೆಯದೆ ಸದಸ್ಯ-ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯುತ್ತಿತ್ತು. 15 ವರ್ಷಗಳ ನಂತರ ಈಗ ಮತ್ತೆ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆಗೆ ತೆರೆದುಕೊಂಡಿದೆ. ಇದರ ಪರಿಣಾಮ, ಷೇರುದಾರ ಮತದಾರರಲ್ಲೂ ಉತ್ಸುಕತೆ ಕಾಣುತ್ತಿದೆ. ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಇತಿಹಾಸದಲ್ಲೇ ಶೇಕಡಾ 95’ರಷ್ಟು ಮತ ಚಲಾಯಿಸುವ ಮೂಲಕ ಬ್ಯಾಂಕಿನ ಷೇರುದಾರ-ಮತದಾರರು, ಪ್ರಜಾಪ್ರಭುತ್ವೀಯ ಪ್ರಕ್ರಿಯೆಯೇ ಅತ್ಯುತ್ತಮ ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.

ಒಟ್ಟು 582 ಷೇರುದಾರ ಮತಗಳಿದ್ದು, ಸಂಜೆಯ ಹೊತ್ತಿಗಾಗಲೇ 532 ಮತ ಚಲಾಯಿಸುವ ಮೂಲಕ ಶೇಕಡಾ 95% ಮತ ಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ, ಸಹಕಾರ ಸಂಘಗಳ ಸಹಕಾರನಿಬಂಧಕ ಹರೀಶ್ ಕುಮಾರ್ ತಿಳಿಸಿದರು. ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಮತ ಎಣಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಫಲಿತಾಂಶ‌ ಹೊರಬಿದ್ದಿದೆ.

*ಕಣದಲ್ಲಿ,,,,*
ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ ಎ’ಯಿಂದ ಶಶಿಧರ್, ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ ಬಿ’ಯಿಂದ ಸಿ ಜಿ ಮಂಜುನಾಥ್, ಪರಿಶಿಷ್ಟ ಪಂಗಡ (ಮೀಸಲು) ಸಿ ಎಚ್ ಲವಕುಮಾರ್, ಪರಿಶಿಷ್ಟ ಜಾತಿಯಿಂದ ಸಿ ಹೆಚ್ ಪ್ರಕಾಶ್, ಮಹಿಳಾ(ಮೀಸಲು) ಪುಷ್ಪಲತಾ ಹಾಗೂ ಸಿ ಎಸ್ ಶಿಲ್ಪ ಧರಣೇಶ್’ರವರುಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ 9 ಸ್ಥಾನಗಳಿಗೆ ಕೃಷ್ಣಯ್ಯ, ಖ್ವಾಜಾ ಅಹಮದ್, ಸಿ ಎಂ ಗಂಗಾಧರಯ್ಯ, ಸಿ ವಿ ಚಂದ್ರಶೇಖರಯ್ಯ, ಚಿದಾನಂದ ಬಾಬು, ಸಿ ಎ ಜಾವೆದ್ ಪಾಷಾ, ಸಿ ಎಲ್ ದೊಡ್ಡಯ್ಯ, ಸಿ ಎಚ್ ದೊರೆಮುದ್ದಯ್ಯ, ಬೀರಲಿಂಗಯ್ಯ ಸಿ ಎಂ, ಮಹಮ್ಮದ್ ಖಲಂದರ್, ಮಂಜುನಾಥ್, ಸಿ ಎಸ್ ರಮೇಶ್, ರಮೇಶ್ ಬಾಬು, ಸಿ ಬಿ ರೇಣುಕಸ್ವಾಮಿ, ಸಿ ಎಂ ರಂಗಸ್ವಾಮಯ್ಯ, ಸಿ ಜಿ ಸೋಮಶೇಖರ್, ಶ್ರೀನಿವಾಸಾಚಾರ್ಯ’ರವರುಗಳು ಅಂತಿಮ ಕಣದಲ್ಲಿ ಉಳಿದಿದ್ದರು. ಆದರೆ, ಭಾನುವಾರ ನಡೆದ ಚುನಾವಣೆಯಲ್ಲಿ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕಿಗೆ ಮೇಲೆ ಹೆಸರಿಸಿದ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ.

*ಇತಿಹಾಸ ::*
ಸುಮಾರು ಆರು ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿರುವ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕು, ಯಾವುದೇ ವಹಿವಾಟು ಮತ್ತು ವಾರ್ಷಿಕ ಸಭೆಗಳಿಗೆ ಹಾಜರಾಗದ ಷೇರುದಾರರ ನಿರಾಸಕ್ತಿಯ ಕಾರಣ, ಈಗ ಕೇವಲ 583 ಮಂದಿ ಷೇರುದಾರರನ್ನಷ್ಟೇ ಹೊಂದಿದೆ. ಷೇರುದಾರರ ಸಂಖ್ಯೆ ನಿರಂತರ ಘಟಿಸಿದ್ದು ಕೋ-ಆಪರೇಟಿವ್ ಬ್ಯಾಂಕ್’ನ ಭವಿಷ್ಯದ ಚಿಂತೆಯನ್ನು ತಂದೊಡ್ಡಿದೆ. ನೂರು ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿರುವ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಹಿಂದಿನಿಂದಲೂ ಸ್ಥಳೀಯ ಶಾಸಕರ ಹಿಡಿತದಲ್ಲೇ ಉಳಿದಿದೆ. ಹೀಗಾಗಿ, ಸ್ಥಳೀಯ ಶಾಸಕರ ರಾಜಕೀಯ ಗೆಲುವು ಮತ್ತು ಒಲವನ್ನು ಆಧರಿಸಿಯೇ ಬ್ಯಾಂಕಿನ ಏಳ್ಗೆ ಮತ್ತು ಅಭಿವೃದ್ಧಿಯ ಗತಿ ನಿರ್ಧಾರಗೊಳ್ಳುತ್ತಿದೆ.

5,723’ರಷ್ಟು ಷೇರುಸದಸ್ಯತ್ವ ಹೊಂದಿದ್ದರೂ, ನಿಯಮಿತವಾಗಿ ಸಾಲ ವಸೂಲಿ ಮಾಡದ ಕಾರಣ, ಬ್ಯಾಂಕಿನ ನಿವ್ವಳ ಲಾಭ ಶೂನ್ಯವಾಗುತ್ತಾ ಬಂದಿತ್ತು. ಹೂಡಿಕೆ ಠೇವಣಾತಿಗಳು, ಆಪದ್ಧನ ಮತ್ತು ಇತರೇ ನಿಧಿಗಳು ದುಡಿಯುವ ಬಂಡವಾಳ‌ ಮತ್ತು ವಾರ್ಷಿಕ ವಹಿವಾಟಿನ ಮೌಲ್ಯ ಎಲ್ಲವೂ ನಿರಂತರ ಕುಸಿತ ಕಂಡ ಪರಿಣಾಮ ಬ್ಯಾಂಕಿಗೆ ತೀವ್ರ ಹಿನ್ನಡೆ ಉಂಟಾಗಿತ್ತು.

*ಇತ್ತೀಚೆಗೆ ಬಂದ ಅಧ್ಯಕ್ಷರುಗಳ ಸಾಧನೆ ::*
ಆಡಳಿತ ಮಂಡಳಿಗೆ ಈಚೀಚೆಗೆ ಅಧ್ಯಕ್ಷರಾಗಿ ಬಂದ ಸಿ ಎಸ್ ರಮೇಶ್, ಸಿ ಎಲ್ ದೊಡ್ಡಯ್ಯ, ಸಿ ಎಚ್ ದೊರೆಮುದ್ದಯ್ಯ, ರಮೇಶ್ ಬಾಬು, ಸಿ ಎಂ ರಂಗಸ್ವಾಮಯ್ಯ, ಸಿ ಬಿ ರೇಣುಕಸ್ವಾಮಿ, ಬೀರಲಿಂಗಯ್ಯ,
ಸಿ ಎಚ್ ಲವಕುಮಾರ್ ಮೊದಲಾದವರ ಪರಿಶ್ರಮದಿಂದಾಗಿ ಸಿ’ಗ್ರೇಡ್ ನಲ್ಲಿದ್ದ ಕೋ-ಆಪರೇಟಿವ್ ಬ್ಯಾಂಕನ್ನು ಎ’ಗ್ರೇಡ್’ನವರೆಗೆ ತರುವಲ್ಲಿ ಸಫಲತೆ ಲಭಿಸಿತ್ತು.

*ಕಳೆದ ಒಂದು ದಶಕದಿಂದ ಮತ್ತೆ ಪ್ರಗತಿ ಸಾಧಿಸಿದ ಬ್ಯಾಂಕು ::*
ಶೇಕಡಾ 72ರಷ್ಟು ಎನ್ ಪಿ ಎ ಏರಿಕೆಯಿದ್ದ ಸಮಯದಲ್ಲಿ ಸತತ ಪರಿಶ್ರಮ ವಹಿಸಿ 2018-19’ರ ಹೊತ್ತಿಗೆ ಅದು, ಶೇಕಡ 26.97ಕ್ಕೆ ಕುಸಿಯುವಷ್ಟರ ಮಟ್ಟಿಗೆ ವಸೂಲಾತಿ ಮಾಡಿ ನಿಧಿ ಸಂಗ್ರಹಿಸಲಾಯಿತು. 2020-21’ರ ಹೊತ್ತಿಗೆ ಶೇಕಡಾ -2.46’ರಷ್ಟಕ್ಕೆ ಎನ್‌ ಪಿ ಎ ಇಳಿಯುವಂತೆ ಮಾಡಿ, 2023-24’ರ ಹೊತ್ತಿಗೆ -10.84’ರಷ್ಟು ಎನ್ ಪಿ ಎ ಇಳಿಯುವಂತೆ ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಲ ಮರುಪಾವತಿ, ವಸೂಲಾತಿಯ ಆಕರ್ಷಕವಾದ ಹೊಸ ಹೊಸ ಯೋಜನೆಗಳ ಮೂಲಕ ಗಳಿಸಿದ ಸಾಧನೆ-ಸಂಪಾದನೆಯಲ್ಲಿ ತನ್ನ ಷೇರುದಾರರಿಗೆ ಶೇಕಡಾ 15’ರಷ್ಟು ಡಿವಿಡೆಂಟ್ ನೀಡುತ್ತಿರುವುದು ಬ್ಯಾಂಕಿನ ಹೆಮ್ಮೆಯಾಗಿದೆ. ಈ ಶೇಕಡಾ 15’ರ ಡಿವಿಡೆಂಟನ್ನು ಕಳೆದ ಮೂರು ವರ್ಷದಿಂದ ಷೇರುದಾರರಿಗೆ ನೀಡಲಾಗುತ್ತಿದೆ. ಈಗ ಎ’ಗ್ರೇಡ್ ತಲುಪಿರುವ ಕಲ್ಪವೃಕ್ಷ ಕೋಪರೇಟಿವ್ ಬ್ಯಾಂಕ್’ನ ಷೇರು ಬಂಡವಾಳ ಠೇವಣಾತಿಗಳು ಮತ್ತು ಹೂಡಿಕೆಗಳು ದುಡಿಯುವ ಬಂಡವಾಳದ ಮೌಲ್ಯವನ್ನು ಹೆಚ್ಚಿಸುವ ಮೂಲಕ, ಬ್ಯಾಂಕು ಎ-ಪ್ಲಸ್’ ಗ್ರೇಡ್ ಏರುವಂತೆ ಮಾಡುವ ಸಂಕಲ್ಪವನ್ನು ಈಗಿನ ಆಡಳಿತ ಮಂಡಳಿ ಹೊಂದಿದೆ. ಜೊತೆಗೆ, ಬ್ಯಾಂಕಿನ ಏಳ್ಗೆಯನ್ನು ಕಾಣುತ್ತಿರುವ ಷೇರುದಾರ ಮತದಾರರೂ ಹೂಡಿಕೆಗೆ ಈಗ ಉತ್ಸುಕರಾಗಿದ್ದಾರೆ. ತಾಲ್ಲೂಕಿನ ಇತರೆ ಭಾಗಗಳಲ್ಲಿ ಕೂಡ ಬ್ಯಾಂಕಿನ ಶಾಖೆಗಳನ್ನು ತೆರೆಯುವ ಮಹತ್ವಾಕಾಂಕ್ಷೆಯನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್’ನ ಆಡಳಿತ ಮಂಡಳಿ ಹೊಂದಿದೆ.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಸಮಾಜದ ಢೋಂಗಿ ರಾಜಕಾರಣಿಗಳಿಂದಾಗಿ ಅಂಬೇಡ್ಕರರಿಗೆ ಅವಮಾನ ; ಮುಖಂಡ ಹೆಸ್ರಳ್ಳಿ ಗೋಪಾಲ್

0

(ಅಮಿತ್ ಶಾ ವಜಾಗೊಳಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಪ್ರತಿಭಟನೆ)

ಚಿಕ್ಕನಾಯಕನಹಳ್ಳಿ : ಕರ್ನಾಟಕ ಮಾದಿಗ ದಂಡೋರ ಸಮಿತಿ,
ಜೈಭೀಮ್ ಛಲವಾದಿ ಮಹಾಸಭಾ, ಕರ್ನಾಟಕ ಛಲವಾದಿ ಮಹಾಸಭಾ, ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಸೋಮವಾರ ಪಟ್ಟಣದ ನೆಹರೂ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಲೋಕಸಭೆಯಲ್ಲಿ ಅಮಿತ್ ಶಾ ಮಾತನಾಡುತ್ತಾ, ಕೇವಲವಾಗಿ ವ್ಯಂಗ್ಯ ಮಾಡುತ್ತಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಈಯೆಲ್ಲ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ನೆಹರೂ ವೃತ್ತದಲ್ಲಿ ಅಮಿತ್ ಶಾ ಪ್ರತಿಕೃತಿಯನ್ನು ದಹನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತಪರ ಹೋರಾಟಗಾರ ಹೆಸ್ರಳ್ಳಿ ಗೋಪಾಲ್, ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ನಾರಾಯಣಸ್ವಾಮಿ ಹೆಸರಿನ ದಲಿತ ಸಮಾಜದ ಮುಖಂಡರಿಬ್ಬರು ಅಮಿತ್ ಶಾ ಪಕ್ಷದಲ್ಲೇ ಇದ್ದೂ ಕೂಡ, ಅಮಿತ್ ಶಾ’ರವರು ಬಾಬಾಸಾಹೇಬರ ಬಗ್ಗೆ ಆಡಿದ ಮಾತಿಗೆ ಕ್ಷಮೆ ಕೋರುವಂತೆ ಒತ್ತಾಯಿಸಲಿಲ್ಲ. ಅಮಿತ್ ಶಾ ಹೇಳಿಕೆಯನ್ನು ವಿರೋಧಿಸಿ ಅದನ್ನು ಖಂಡಿಸಲಿಲ್ಲ. ಬಾಬಾಸಾಹೇಬರ ಬಗ್ಗೆ ಅವರಿಗೆ ಸರಿಯಾದ ತಿಳುವಳಿಕೆ ಹೇಳಿಕೊಡಲಿಲ್ಲ. ಪದೇ ಪದೇ ಹೀಗೆ ಬಾಬಾ ಸಾಹೇಬರಿಗೇ ಅವಮಾನ ಮಾಡುತ್ತಿದ್ದರೂ ಇವರುಗಳು ಕನಿಷ್ಠ ತುಟಿಪಿಟಿಕ್ ಎನ್ನುತ್ತಿಲ್ಲ. ಮಹಾರಾಷ್ಟ್ರದ ಆ ರಾಮದಾಸ್ ಅಠಾವಳೆ, ಬಿಹಾರದ ಆ ಪಾಸ್ವಾನ್’ಗಳು, ಕರ್ನಾಟಕದ ಈ ನಾರಾಯಣಸ್ವಾಮಿಗಳು ಈ ಇಂಥ ಢೋಂಗಿ ಮತ್ತು ಅವಕಾಶವಾದಿ ಬಕೀಟು ರಾಜಕಾರಣಿಗಳಿಂದಲೇ ಈಗ ಅಂಬೇಡ್ಕರರನ್ನು ಯಾರು ಬೇಕಾದರೂ ಎಲ್ಲೆಂದರಲ್ಲಿ ಅವಮಾನಿಸುವ ಸ್ಥಿತಿ ಬಂದೊದಗಿದೆ. ಇಂತಹ ಢೋಂಗಿ ರಾಜಕಾರಣಿಗಳನ್ನು ತಮ್ಮ ನಾಯಕರು ಎಂದು ಒಪ್ಪಿಕೊಂಡು, ಅವರನ್ನು ಪೋಷಿಸುತ್ತಿರುವ ದೇಶದ ದಲಿತ ಸಮಾಜ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಹಿಂದುತ್ವದ ವಿರಾಟ್ ವಾತಾಪಿ ಗರ್ಭದಲ್ಲಿ ಅಂಬೇಡ್ಕರರನ್ನೂ ಜೀರ್ಣಿಸಿಕೊಂಡುಬಿಡಲು ಇವರು ಹವಣಿಸುತ್ತಾರೆ. ಇಲ್ಲೇ ಈಗಲೇ ಇವರ ದುಷ್ಟ ಹುನ್ನಾರಗಳಿಗೆ ನಿರ್ಬಂಧ ‌ಹಾಕಿ ನಿಲ್ಲಿಸಿ, ಶಾಶ್ವತವಾದ ತಡೆಗೋಡೆ ಹಾಕಿಬಿಡಬೇಕು ಎಂದು ಅಮಿತ್ ಶಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಮಾದಿಗ ದಂಡೋರ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ, ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್, ಜೈಭೀಮ್ ಛಲವಾದಿ ಮಹಾಸಭಾದ ಆನಂದ್ ಆಶ್ರಿಹಾಲ್, ಮುಖಂಡರ ಅಗಸರಹಳ್ಳಿ ನರಸಿಂಹಮೂರ್ತಿ, ಮುಖಂಡ ಚಿದಾನಂದ್ ಮತ್ತಿತರ ಮಾತನಾಡಿ, ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದರು.

ನಂತರ ತಾಲ್ಲೂಕು ಆಡಳಿತ ಸೌಧದವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಮಿತ್ ಶಾ’ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂಬ ಮನವಿ ಪತ್ರವನ್ನು ತಹಸೀಲ್ದಾರ್’ರವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಮುಂದಿನ ಕ್ರಮ ವಹಿಸುವುದಾಗಿ ತಹಸೀಲ್ದಾರ್ ಕೆ ಪುರಂದರ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

*ಸಂಚಲನ*
ಚಿಕ್ಕನಾಯಕನಹಳ್ಳಿ

ಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ

0

‘ವಿಧಾನ್ ಸೆ ಸಮಾಧಾನ್’ ಕಾನೂನು ಅರಿವು ಕಾರ್ಯಕ್ರಮ

(ಕಟ್ಟು-ಕಟ್ಟಳೆಗಳನ್ನು ಗಂಡುಮಕ್ಕಳ ಮೇಲೆ ವಿಧಿಸಿ ; ಹೆಣ್ಣುಮಕ್ಕಳ ಮೇಲಲ್ಲ ; ಪ್ರಧಾನ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ)

(ವಿಶಾಖಾ ಗೈಡ್’ಲೈನ್ಸ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು ; ಪ್ರಧಾನ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ)

ಚಿಕ್ಕನಾಯಕನಹಳ್ಳಿ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನುಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ವಕೀಲರ ಸಂಘದ ಸಹಯೋಗದೊಂದಿಗೆ, ಶುಕ್ರವಾರ ಬೆಳಗ್ಗೆ ಪಟ್ಟಣದ ತೀನಂಶ್ರೀ ಭವನದಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವ ಸಲುವಾಗಿ ‌’ವಿಧಾನ್ ಸೆ ಸಮಾಧಾನ್’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದಂತಹ ಶ್ರೀಮತಿ ನೂರುನ್ನೀಸ’ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ನಿತ್ಯ ಆಗುತ್ತಿರುವ ದಾಳಿ-ದೌರ್ಜನ್ಯಗಳನ್ನು ಪುರಾಣದ ಪಾತ್ರ, ಪ್ರಸಂಗ ಮತ್ತು ಕಥನಗಳನ್ನು ಉದಾಹರಿಸುತ್ತಾ ವಿವರಿಸಿದ ಶ್ರೀಮತಿ ನೂರುನ್ನೀಸಾ’ರವರು, ರಾವಣನ ಸೀತಾಪಹರಣ ಪ್ರಸಂಗವನ್ನು ಸಭೆಗೆ ನೆನಪಿಸಿ, ಅದರ ಮೂಲಕ ಕೆಡುಕು ಹೇಗೆ ಕೇಡಿನಲ್ಲೇ ಕೊನೆಯಾಗುತ್ತದೆ ಎಂದು ವಿವರಿಸಿದರು.

ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಪ್ರಸಂಗಗಳನ್ನು ಸೋದಾಹರಿಸಿ, ಪ್ರಸ್ತುತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಇರುವ ಸಾಮ್ಯತೆಯನ್ನು ಅವರು ಬಿಡಿಸಿ ತಿಳಿಸಿದರು.

ದಿಟ್ಟೆ ಭಂವರಿದೇವಿ ಮತ್ತು ವಿಶಾಖಾ ಗೈಡ್’ಲೈನ್ಸ್ ::

2013’ರಲ್ಲಿ ಜಾರಿಗೆ ಬಂದ ‘ಕೆಲಸದ ವೇಳೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ’ಯ ಬಗ್ಗೆ ಮತ್ತು ಅಂಥದೊಂದು ಚಾರಿತ್ರಿಕ ಕಾಯ್ದೆ (Sexual haraasment of Women at work place) ಬಗ್ಗೆ ಶ್ರೀಮತಿ ನೂರುನ್ನೀಸಾ’ರವರು ವಿವರಿಸಿದರು. ಮತ್ತೆ ಇಂತಹ ಈ ಚಾರಿತ್ರಿಕವಾದ ಕಾಯ್ದೆ ಜಾರಿಗೆ ಬರಲು ಕಾರಣಳಾದ ರಾಜಸ್ಥಾನದ ಭಂವರಿದೇವಿಯವರ ಹೋರಾಟ ಮತ್ತು ಹುತಾತ್ಮತೆಯ ಬಗ್ಗೆ ವಿಸ್ತಾರವಾಗಿ ಸಭೆಗೆ ತಿಳಿಸಿದರು.

70’ರ ದಶಕದಲ್ಲಿ ರಾಜಸ್ಥಾನದ ಗುಜ್ಜರರಲ್ಲಿ ಇದ್ದ ಬಾಲ್ಯವಿವಾಹ ಪದ್ಧತಿ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟ ಪ್ರಾರಂಭಿಸಿದ್ದ ಅಲ್ಲಿನ ಸಾಮಾಜಿಕ ಕಾರ್ಯಕರ್ತೆ ಮತ್ತು ದಿಟ್ಟ ಹೋರಾಟಗಾರ್ತಿ ಭಂವರಿದೇವಿ ತನ್ನ ಸ್ನೇಹಿತೆರೊಡನೆ ಸೇರಿಕೊಂಡು ಹಳ್ಳಳ್ಳಿಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹಗಳನ್ನು ತಡರಯುತ್ತಿದ್ದಳು. ಬಾಲ್ಯ ವಿವಾಹಗಳನ್ನು ತಡೆಯಲಿಕ್ಕಾಗಿಯೇ ‘ವಿಶಾಕಾ ಹೆಸರಿನ ಸಂಘಟನೆ’ಯನ್ನೇ ಕಟ್ಟಿಕೊಂಡು ಪುರುಷಪ್ರಧಾನ ಶೋಷಣೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಟ ನಡೆಸಿದ್ದಳು. ಆಕೆಯ ಹೋರಾಟವನ್ನು ಹತ್ತಿಕ್ಕಲಾಗದ ಪ್ರಭಾವಿ ಗುಜ್ಜರರು, ಕಡೆಗೊಂದು ದಿನ ಆಕೆಯ ಗಂಡನನ್ನು ಕಟ್ಟಿಹಾಕಿ ಆತನ ಎದುರಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಿಂಸಿಸಿದ್ದರು. ನಂತರ, ಹೋರಾಟಗಾರ್ತಿ ಭಂವರಿದೇವಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ದಾಖಲಾಯಿತು. ಆದರೆ, ಸಮರ್ಪಕವಾದ ತನಿಖೆ ನಡೆಸದ ಪೊಲೀಸ್ ವ್ಯವಸ್ಥೆ ಹಾಗೂ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ಪ್ರತಿಕೂಲ ಸಾಕ್ಷ್ಯಾಧಾರಗಳ ಕಾರಣದಿಂದಾಗಿ ಆಪಾದಿತರೆಲ್ಲರೂ ಆರೋಪಮುಕ್ತರಾಗಿ ಹೊರಬಂದರು. ಆಗ, ಭಂವರಿದೇವಿ ಕಟ್ಟಿಕೊಂಡಿದ್ದ ವಿಶಾಖಾ ಸಂಘದ ಸ್ನೇಹಿತೆಯರು ಮತ್ತು ದೇಶದ ಇತರ ಭಾಗಗಳ ಸಾಮಾಜಿಕ ಹೋರಾಟಗಾರರ ಬೆಂಬಲದಿಂದ ಪ್ರಕರಣದ ಸೂಕ್ತ ಮತ್ತು ಸಮಗ್ರ ತನಿಖೆಗಾಗಿ ಸುಪ್ರೀಂ ಕೋರ್ಟ್’ನಲ್ಲಿ ಮನವಿ ಸಲ್ಲಿಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮತ್ತೆ ತನಿಖೆ ನಡೆಸಿ, ಕಡೆಗೆ ಆಪಾದಿತರೆಲ್ಲರ ಅಪರಾಧ ಸಾಬೀತಾದ ಕಾರಣದಿಂದ ಅವರೆಲ್ಲರಿಗೂ ಶಿಕ್ಷೆಯಾಯಿತು. ಈ ತೀರ್ಪಿನಲ್ಲಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು, ಸುಪ್ರೀಂ ಕೋರ್ಟ್ ವಿಶಾಖಾ ಗೈಡ್’ಲೈನ್ಸ್ ನಿರ್ದೇಶನಗಳನ್ನು ನೀಡಿತ್ತು. ಅದು 2013’ರಲ್ಲಿ ಕಾಯ್ದೆಯಾಗಿ ಜಾರಿಯಾಯಿತು.

ಸುಪ್ರೀಂಕೋರ್ಟ್ ನಿರ್ದೇಶಿಸಿದ ‘ವಿಶಾಖಾ ಗೈಡ್’ಲೈನ್ಸ್’ 2013’ರ ಕಾಯ್ದೆ ಪ್ರಕಾರ, 10 ಮಂದಿ’ಗಿಂತ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿರುವ ಯಾವುದೇ ಸ್ಥಳದಲ್ಲಿ,
ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರನ್ನು ಲೈಂಗಿಕ ಕಿರುಕುಳದಿಂದ ಪಾರುಮಾಡಲು ಆಂತರಿಕ ಕಮಿಟಿ ಹಾಗೂ ಭಯಾ ಕಮಿಟಿಗಳನ್ನು ಅಲ್ಲಿನ ಮಾಲೀಕ ಅಥವಾ ಮೇಲಿನ ಅಧಿಕಾರಿ ನೇಮಿಸಿಕೊಳ್ಳಬೇಕು.

ಯಾವುದೇ ಸಾರ್ವಜನಿಕ ಕೆಲಸದ ಜಾಗದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ವಿಶಾಖಾ ಗೈಡ್’ಲೈನ್ಸ್ ಪ್ರಬಲವಾದ ರಕ್ಷಾಕವಚದಂತಿದೆ. ಮಹಿಳೆಯರು ಇದರ ಬಗ್ಗೆ ತಿಳಿದುಕೊಂಡು, ಪ್ರಶ್ನಿಸುವಂತಾಗಬೇಕು ಎಂದರು.

ಹೆಣ್ಣುಮಕ್ಕಳ ಬಟ್ಟೆ-ಬರೆ, ಕತ್ತಲಾಗುವ ಮೊದಲು ಮನೆ ಸೇರಿಬಿಡುವ ಕಟ್ಟಳೆ, ಆಕೆಯ ಸಾರ್ವಜನಿಕ ವರ್ತನೆಗಳಿಗೆ ಸಂಬಂಧಿಸಿದ ನಿರ್ಬಂಧನೆಗಳು ಸೇರಿದಂತೆ ಹೆಣ್ಣುಮಕ್ಕಳಿಗೆ ಮಾತ್ರ ಇರುವ ಇತ್ಯಾದಿ ಕಟ್ಟುಕಟ್ಟಳೆಗಳನ್ನು ಪ್ರಶ್ನಿಸಿದ ಶ್ರೀಮತಿ ನೂರುನ್ನೀಸಾ’ರವರು, ಮನೆಯ ಗಂಡುಮಕ್ಕಳಿಗೂ ಈ ತರಹದ ನಿರ್ಬಂಧಗಳು ಮತ್ತು ಕಟ್ಟುಕಟ್ಟಳೆಗಳನ್ನು ಹಾಕಿ, ಅವರಿಗೆ ಇದರ ಬಗ್ಗೆ ಅರಿವು ಮೂಡಿಸಿದಾಗ ಸಮಾಜ ಇನ್ನಷ್ಟು ಸ್ವಸ್ಥಗೊಳ್ಳುತ್ತದೆ. ನಮ್ಮ ಮಗ, ನಮ್ಮ ತಮ್ಮ, ನಮ್ಮ ಮೊಮ್ಮಗ ಅಥವಾ ನಮ್ಮ ಗಂಡ ಹೊರಗೆ ಇದ್ದಾಗ ಆತ ಪರಸ್ತ್ರೀಯರನ್ನು ಕಾಣುವ ದೃಷ್ಟಿ ಬದಲಾಗುತ್ತದೆ. ಹೀಗಾದಾಗ ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ, ಲೈಂಗಿಕ ಶೋಷಣೆ, ಕೌಟುಂಬಿಕ ದೌರ್ಜನ್ಯ, ಕಳ್ಳ ಸಾಗಾಣಿಕೆ, ಅಪ್ರಾಪ್ತ ವಿವಾಹ ಇತ್ಯಾದಿ ಪಿಡುಗುಗಳು ತಂತಾನೆ ಕಳೆದುಹೋಗುತ್ತವೆ ಎಂದು ಅವರು ತಮ್ಮ ಮನೆಯ ಗಂಡುಮಕ್ಕಳನ್ನು ನಿಯಂತ್ರಿಸಿ ಎಂದು ಎಲ್ಲ ತಾಯಂದಿರಿಗೂ ಆಗ್ರಹಿಸಿದರು.

ಕಾಡುಗೊಲ್ಲರ ಹಟ್ಟಿಗಳಲ್ಲಿ ಆಚರಿಸಲ್ಪಡುವ ಹೆರಿಗೆ-ಮುಟ್ಟು ಅನಿಷ್ಟ ಪದ್ಧತಿಯ ಆಚರಣೆಯ ಬಗ್ಗೆ ನಿಷ್ಠುರವಾಗಿ ಮಾತನಾಡಿದ ನೂರುನ್ನೀಸಾ’ರವರು, ಸಮೀಪದ ಗೋಡೆಕೆರೆ ಗೊಲ್ಲರಹಟ್ಟಿಗೆ ಖುದ್ದಾಗಿ ಭೇಟಿ ನೀಡಿ, ಗ್ರಾಮದ ಪುರುಷರು ಮತ್ತು ಮಹಿಳೆಯರ ಜೊತೆ ಮಾತುಕತೆ ನಡೆಸಿದರು.

ದೇವರ ಹೆಸರಲ್ಲಿ ಮತ್ತು ಮಡಿ-ನೇಮ’ದ ಹೆಸರಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಸಲಾಗುವ ಅನಿಷ್ಟ ಪದ್ಧತಿಗಳ ಶೋಷಣೆಯ ಬಗ್ಗೆ ಆ ಹಟ್ಟಿಯ ಹೆಣ್ಣುಮಕ್ಕಳ ‌ಜೊತೆ ಮಾತನಾಡಿ ಅವರಲ್ಲಿ ಕಾನೂನು-ಸಂರಕ್ಷಣೆಯ ಸ್ಪಷ್ಟ ಅರಿವು ಮೂಡಿಸಿದರು. ಅಂತಹ ಆಚರಣೆಗಳನ್ನು ನೀವೇ ಮುಂದೆ ನಿಂತು ತಡೆಯಬೇಕು ಎಂದು ಗ್ರಾಮದ ಪುರುಷರಿಗೆ ತಾಕೀತು ಮಾಡಿದರು. ನಂತರ, ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು

. ಆಟಿಕೆಗಳನ್ನು ಅಂಗನವಾಡಿ ಮಕ್ಕಳು ಮುರಿದುಹಾಕಿದರೂ ಅಥವಾ ಚೆಲ್ಲಾಪಿಲ್ಲಿ ಮಾಡಿಟ್ಟರೂ ಸರಿ, ಮಕ್ಕಳಿಗೆ ಆಟಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಡಿ. ಅವರ ಕೈಗೆ ಮೊದಲು ಆಟಿಕೆಗಳನ್ನು ಕೊಡಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಒತ್ತಿ ಒತ್ತಿ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ವಿಚ್ಛೇದನ, ಫೋಕ್ಸೋ, ಸಮಾನ ವೇತನ, ಕಾರ್ಮಿಕ ಹಕ್ಕು, ಆಸಿಡ್ ದಾಳಿ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಶೋಷಣೆ, ಮಾನವ ಕಳ್ಳ ಸಾಗಾಣಿಕೆ ಸೇರಿದಂತೆ ಇನ್ನೂ ಹಲವು ಪ್ರಮುಖ ಕಾಯ್ದೆ-ಕಾನೂನುಗಳ ಬಗ್ಗೆ ಕಿರಿಯ ವಕೀಲ ಪ್ರತಾಪ್, ಪ್ಯಾನೆಲ್ ವಕೀಲರಾದ ನೇತ್ರಾವತಿ ಮತ್ತು ವೈ ಜಿ ಲೋಕೇಶ್ವರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ, ಚಿಕ್ಕನಾಯಕನಹಳ್ಳಿ ಜೆ ಎಮ್ ಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್ ಎ, ಅಧಿಕ ಸಿವಿಲ್ ನ್ಯಾಯಾಧೀಶರಾದ ಅಪರ್ಣ ಆರ್, ಸಹಾಯಕ ಸರ್ಕಾರಿ ಅಭಿಯೋಜಕರುಗಳಾದ ರಂಗನಾಥಪ್ಪ, ಬಸವರಾಜ ಕಾಂತಿಮಠ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಅಂಗನವಾಡಿ ಮೇಲ್ವಿಚಾರಣಾಧಿಕಾರಿ ಬಿ ರೇಖಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ ಕೆ ಸದಾಶಿವಯ್ಯ ಹಾಗೂ ತಾಲ್ಲೂಕಿನ ನೂರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಸರ್ಕಾರಿ ಶಾಲೆ ಮಕ್ಕಳಿಗೆ ವೇದಿಕೆಯಾದ ಆದಿಚುಂಚಗಿರಿ ವಿಶ್ವವಿದ್ಯಾನಿಲಯ

ರಸಾಯಶಾಸ್ತ್ರದ ಪ್ರಯೋಗಗಳಿಗೆ ಸಾಥ್ ನೀಡಿದ ಹಳ್ಳಿ ಮಕ್ಕಳು

 

 ಬಾಲಗಂಗಾಧರನಾಥ ಸ್ವಾಮೀಜಿ ನಗರ:  ಇಲ್ಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು(ACU) ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ (RSC) ಭಾರತ  ಘಟಕದ ಸಹಯೋಗದೊಂದಿಗೆ  ಆಯೋಜಿಸಿದ್ದ ಯೂಸೂಫ್  ಹಮೀದ್ ರಸಾಯನಶಾಸ್ತ್ರ ಶಿಬಿರ ಸರ್ಕಾರಿ ಶಾಲೆಯ ಮಕ್ಕಳಿಗೆ ರಸಾಯನಶಾಸ್ತ್ರದ ಹೊಸಲೋಕವನ್ನೇ ತೆರೆದಿಟ್ಟಿತು.

ಮಂಡ್ಯ, ಹಾಸನ, ತುಮಕೂರಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಸಾಯನಶಾಸ್ತ್ರದ ಪ್ರಯೋಗಗಳಿಗೆ ತೆರೆದುಕೊಂಡು ಬೆರಗುಮೂಡಿಸಿದರು. ಮಕ್ಕಳಲ್ಲಿನ ರಸಾಯನಶಾಸ್ತ್ರದ ಕುತೂಹಲ ತಣಿಸಿದ ಶಿಬಿರವು,  ಅವರಲ್ಲಿನ ರಸಾಯನಶಾಸ್ತ್ರದ ಕಡೆಗಿನ ಆಸಕ್ತಿಗೆ ಬೆಳಕಿಂಡಿಯಾಯಿತು. ಡಿ.4ರಿಂದ 6ರವರೆಗೆ ಶಿಬಿರ ನಡೆಯಿತು. 
 
 ಶಿಬಿರದಲ್ಲಿ  ಮೂರು ಜಿಲ್ಲೆಗಳ 9ನೆ ತರಗತಿಯ 83 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಗೆ  ವಿಷಯದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ರಸಾಯನಶಾಸ್ತ್ರದ ಕಲಿಕೆಯನ್ನುಆನಂದದಿಂದ ಆಸ್ವಾದಿಸುವುದು ಹೇಗೆಂದು ವಿವಿಧ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ರಸಾಯನಶಾಸ್ತ್ರವನ್ನು ಅನ್ವೇಷಿಸಲು ಶಿಬಿರ ಅವಕಾಶ ಒದಗಿಸಿತು. ವಿಶ್ವವಿದ್ಯಾಲಯದ ಮಟ್ಟದಲ್ಲಿ ಮತ್ತು ಅದರಾಚೆಗೆ ರಸಾಯನಶಾಸ್ತ್ರವನ್ನು ಮುಂದುವರಿಸಲು ಮಕ್ಕಳನ್ನು  ಪ್ರೇರೇಪಿಸಿತು.
ಇದು ಯೂಸುಫ್ ಹಮೀದ್ 66ನೇ ರಸಾಯನಶಾಸ್ತ್ರ ಶಿಬಿರವಾಗಿತ್ತು.  ಯೂಸುಫ್ ಹಮೀದ್ ಸ್ಪೂರ್ತಿದಾಯಕ ವಿಜ್ಞಾನ ಕಾರ್ಯಕ್ರಮದ ಭಾಗವಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಈ ಶಿಬಿರ ಆಯೋಜಿಸಲಾಗಿತ್ತು.
 
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಸುರಕ್ಷತಾ ಪರಿಕರಗಳು ಮತ್ತು ಸಲಕರಣೆಗಳನ್ನು ಪರಿಚಯಿಸಲಾಯಿತು.  ಬಣ್ಣ ರಚನೆ, ಸ್ಫಟಿಕೀಕರಣ, ಫೋರೆನ್ಸಿಕ್ ಚಾಲೆಂಜ್, ಗಡಿಯಾರ ಪ್ರತಿಕ್ರಿಯೆಗಳು, ಲೋಳೆ ಪ್ರತಿಕ್ರಿಯೆ, ಜಾಗತಿಕ ಕಾಯಿನ್ ಬ್ಯಾಟರಿ ಪ್ರಯೋಗ ಮತ್ತು ಇತರ ಕಿರು ಪ್ರಯೋಗಗಳು ಸೇರಿದಂತೆ ವಿವಿಧ ಪ್ರಯೋಗಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಹಲವು ಪ್ರಯೋಗಗಳನ್ನು ಅವರಿಗೆ ಹೇಳಿಕೊಡಲಾಯಿತು,
ಕುಲಪತಿಗಳಾದ ಡಾ. ಎಂ ಎ ಶೇಖರ್
 ಎಸಿಯುನ ಉಪಕುಲಪತಿಗಳಾದ ಪ್ರೊ.ಎಂ.ಎ.ಶೇಖರ್ ಮಾತನಾಡಿ, “ರಸಾಯನಶಾಸ್ತ್ರವು ನಮ್ಮ ಸುತ್ತಲೂ ಇದೆ, ಮತ್ತು ಅದನ್ನು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಹಲವು ವಿಧಗಳಲ್ಲಿ ಬಳಸಿಕೊಳ್ಳ ಬಹುದು. ಇದು ಔಷಧಿಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ರಾಸಾಯನಿಕ ಜೀವಶಾಸ್ತ್ರದ ಪ್ರಗತಿಯೊಂದಿಗೆ, ವಿದ್ಯಾರ್ಥಿಗಳು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುವ ಮೂಲಕ ರಾಷ್ಟ್ರ-ನಿರ್ಮಾಣಕ್ಕೆ ಕೊಡುಗೆ ನೀಡಬಹುದು’ ಎಂದು ಹೇಳಿದರು.
ಕುಲಸಚಿವರಾದ ಡಾ. ಸಿ ಕೆ ಸುಬ್ರಾಯ
ಎಸಿಯುನ ಕುಲಸಚಿವರಾದ ಪ್ರೊ. ಸಿ.ಕೆ.ಸುಬ್ಬರಾಯ ಅವರು ಮಾತನಾಡಿ,  "ವಿಶ್ವವಿದ್ಯಾನಿಲಯ ಪ್ರಾರಂಭವಾದಗಿನಿಂದಲೂ  ನೆರೆಹೊರೆಯ ಶಾಲೆಗಳು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕ ಕಾರ್ಯಕ್ರಮಗಳ ಆಯೋಜಿಸುತ್ತಾ ಅಲ್ಲಿನ ಮಕ್ಕಳ  ಶಿಕ್ಷಣದ ಬೆಳವಣಿಗೆಗೂ ಒತ್ತು ನೀಡುತ್ತಿದೆ.  ಗ್ರಾಮೀಣ  ವಿದ್ಯಾರ್ಥಿಗಳಲ್ಲಿ ವಿಜ್ಞಾನ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಿ ಅವರು ವಿಜ್ಞಾನ ಶಿಕ್ಷಣ  ಅಧ್ಯಯನಕ್ಕೆ  ಪ್ರರೇಪಿಸುವುದು ವಿ.ವಿಯ ಗುರಿಯಾಗಿದೆ ಎಂದರು.

ಎಸಿಯುನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಡಾ. ಕೆ. ಪ್ರಶಾಂತ ಕಾಳಪ್ಪ ಅಚರ ಮಾತನಾಡಿ,  ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಭಾರದ ಘಟಕದ ಸಹದ್ಯೋಗಿಗಳು ದೇಶದಲ್ಲಿ ರಸಾಯನಶಾಸ್ತ್ರ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾರತದ ಶಿಕ್ಷಣ ಸಮುದಾಯದೊಂದಿಗೆ ಕೆಲಸ ಮಾಡುತ್ತಿದೆ. ಕೆಮಿಸ್ಟ್ರಿಯ ಅಧ್ಯಯನ ಬೆಂಬಲಿಸುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ರಾಸಾಯನಿಕ ವಿಜ್ಞಾನಗಳ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಪ್ರಯೋಜನ ದಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಎಸಿಯು ಪ್ರಾಧ್ಯಾಪಕರು ಪ್ರಯೋಗಾಲಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳಿಗೆ ಮಕ್ಕಳು ಭೇಟಿ ನೀಡಿದರು.  
ಹಿರೀಸಾವೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತಾ  ಶಿಬಿರದ ಕುರಿತು ತನ್ನ  ಅನುಭವ ಹಂಚಿಕೊಳ್ಳುತ್ತಾ, 
‘ಶಿಬಿರದ ದಿನಕ್ಕಾಗಿ ನಾನು ಕಾತುರಗಳಾಗಿದ್ದೆ, ಇಲ್ಲಿ ನಾವು   ರಾಸಾಯನಿಕಗಳ ಬಗ್ಗೆ ಅನೇಕ ಹೊಸ ವಿಷಯಗಳನ್ನು ಕಲಿತೆ. ಹೇಗೆ ವಿವಿಧ ಬಣ್ಣಗಳನ್ನು ಉತ್ಪಾದಿಸಬಹುದು ಎಂದು ನಾನು ಕಲಿತೆ.  ಸ್ಫಟಿಕೀಕರಣ ಪ್ರಕ್ರಿಯೆ ನನ್ನಲ್ಲಿ ಖುಷಿ ತರಿಸಿತು. ಇದೆಲ್ಲವನ್ನು ಹೇಳಿಕೊಳ್ಳಲು ನನ್ನ ಶಾಲೆಗೆ ಯಾವಾಗ ಹೋಗುತ್ತೇನೋ ಎಂದು ಕಾಯುತ್ತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.
 
  ‘ಕದಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ  ಚೈತ್ರ ಮಾತನಾಡಿ, ಇಂಥ ಪ್ರಯೋಗಗಳನ್ನು ನಾನು ಮಾಡಿರಲೇ ಇಲ್ಲ.  ಬ್ಯಾಟರಿ ತಂತ್ರಜ್ಞಾನ ನನ್ನಲ್ಲಿ ಅಚ್ಚರಿ ಮೂಡಿಸಿತು. ಇದನ್ನು ನನ್ನ ಶಾಲೆಯ ನನ್ನ ಸ್ನೇಹಿತೆಯರಿಗೂ ಹೇಳಿಕೊಡುವೆ.   ಹತ್ತನೇ ತರಗತಿ ನಂತರ ಕೆಮಿಸ್ಟ್ರಿ ಅಧ್ಯಯನವನ್ನೇ ಮಾಡುತ್ತೇನೆ’ ಎಂದರು. 
 
ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಹಿರಿಯ ವಿಜ್ಞಾನಿಯಾ್ದ ಪ್ರೊ.ಕೆ.ಪ್ರಶಾಂತ್ ಕಾಳಪ್ಪ ಕಾರ್ಯನಿರ್ವಹಿಸಿದ್ದರು. ಡಾ.ವೈ.ಆರ್.ಗಿರೀಶ್, ಡಾ.ಎಸ್.ಎಂ.ಅನುಷ್, ಡಾ.ಅವಿನಾಶ್, ಡಾ.ಕೆ.ಎನ್.ನಂದೀಶ್ ಸಹ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ  ಮೆಲಿಸ್ಸಾ ಮೆಂಡೋಜಾ  ಕಾರ್ಯಕ್ರಮದ ಕಾರ್ಯನಿರ್ವಾಹಕರಾಗಿ  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
 ಪ್ರಯೋಗಾಲಯದ ಪ್ರಯೋಗಗಳು ಹಾಗೂ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು   ಆದಿಚುಂಚನಗಿರಿ ವಿ ವಿಯ ಪ್ರಾಧ್ಯಾಪಕರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಅವರು ACU ಪರಿಸರವನ್ನು ಆನಂದಿಸಿದರು ಮತ್ತು ಭವಿಷ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಆಸಕ್ತಿಯನ್ನು ವ್ಯಕ್ತಪಡಿಸಿದರು.

 

 ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.