ತುಮಕೂರು: ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದ, ನಿವೃತ್ತ ಶಿಕ್ಷಕ ಕೆ.ಹುಚ್ಚಪ್ಪ ಅವರು ಬುಧವಾರ ಬೆಳಿಗ್ಗೆ 10ಕ್ಕೆ ಹೆಬ್ಬೂರು ಹೋಬಳಿ, ಕಂಬಾಳಪುರದ ಅವರ ಸ್ವಗ್ರಾಮದಲ್ಲಿ ನಿಧನರಾದರು.
ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು ಅವರ ಪುತ್ರ ಶಿವಕುಮಾರ್ ತಿಳಿಸಿದ್ದಾರೆ.
ಹುಚ್ಚಪ್ಪ ಅವರು 1948ರಲ್ಲಿ ರೈಪಾಪಿ ಕುಟುಂಬದಲ್ಲಿ ಹುಟ್ಟಿ ಹೆಬ್ಬೂರಿನಲ್ಲಿ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣ ಪಡೆದು ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಕುಣಿಗಲ್, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ದೇವಲಾಪುರ, ಚಿಕ್ಕತೊಟ್ಲುಕೆರೆ, ದಾಸರಹಳ್ಳಿ ಶಿಕ್ಷಕರಾಗಿದ್ದರು. ನಿಡವಳಲು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಅವರು ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಇದರಿಂದಾಗಿ ಅವರು ಜನಮೆಚ್ಚಿದ ಶಿಕ್ಷಣ ಪಶಸ್ತಿ ನೀಡಿ ಗೌರವಿಸಲಾಗಿತ್ತು.

ಮಾರುತಿ ಕೃಪಾ ಪೋಷಕ ನಾಟಕ ಮಂಡಳಿ ನೀಡುವ ಸನ್ಮಾನಕ್ಕೂ ಪಾತ್ರರಾಗಿದ್ದರು.
ಅವರ ಧರ್ಮಪತ್ನಿ ಲಿಂಗಮ್ಮ ಅವರ ಸಹಕಾರವನ್ನು ಯಾವಾಗಲೂ ನೆನೆಯುತ್ತಿದ್ದರು. ಲಿಂಗಮ್ಮ ಅವರ ಕಳೆದ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು.
ಶಿಕ್ಷಕ ವೃತ್ತಿಯಿಂದ ನಿವೃತ್ತಿ ಬಳಿಕ ತುಮಕೂರಿನ ಸದಾಶಿವನಗರದಲ್ಲಿ ತಮ್ಮ ಪುತ್ರ ಶಿವಕುಮಾರ್ ಅವರೊಂದಿಗೆ ವಾಸವಿದ್ದರು.
ಎರಡನೇ ಪುತ್ರ ಕರುಣಾಕರ್, ರಾಜ್ಯ ಸರ್ಕಾರದ ಅಧಿಕಾರಿಯೂ ಆಗಿರುವ ಪುತ್ರಿ ನೇತ್ರಾವತಿ ಅವರನ್ನು ಮೃತರು ಅಗಲಿದ್ದಾರೆ.
ಸಂತಾಪ: ಮೃತರ ನಿಧನಕ್ಕೆ ಬೈರವೇಶ್ವರ ಬ್ಯಾಂಕ್ ಅಧ್ಯಕ್ಷರಾದ ಚಿಕ್ಕರಂಗೇಗೌಡ, ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ, ವಕೀಲರಾದ ಸಿ.ಕೆ.ಮಹೇಂದ್ರ, ಬೆಳ್ಳಿ ಬ್ಲಡ್ ಬ್ಯಾಂಕ್ ನ ಬೆಳ್ಳಿ ಲೋಕೇಶ್ ಸಂತಾಪಸೂಚಿಸಿದ್ದಾರೆ.