ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿರುವ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಎನ್ಎಸ್ಯುಐ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ನಗರದ ಹೋಟೆಲ್ ವೃತ್ತದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು.
ಪೈ ಹೋಟೆಲ್ ವೃತ್ತದಲ್ಲಿ ನಗರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹಿಂದೆ ಇದ್ದಂತಹ ಸರ್ಕಾರಗಳು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸ್ಕಾಲರ್ ಶಿಪ್ ಗಳನ್ನು ಉಚಿತವಾಗಿ ನೀಡುತ್ತಿದ್ದವು. ಬಡ ಮಕ್ಕಳು ಓದಬೇಕು ಎಂಬ ಉದ್ದೇಶದಿಂದ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಶುಲ್ಕವನ್ನು ದಿಢೀರ್ 1ಸಾವಿರ ಹೆಚ್ಚಳ ಮಾಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಇದನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಆಗ್ರಹ ಮಾಡಿದರು ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕು ಉಪ ತಹಶಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನಾ ರ್ಯಾಲಿಯಲ್ಲಿ ಎನ್ ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಂತ್ ನಗರಸಭಾ ಮಾಜಿ ಅಧ್ಯಕ್ಷ ಪ್ರಕಾಶ್ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ತಿಪಟೂರು: ಜಿಲ್ಲಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶಾಲಾ ಕಾಲೇಜು, ಅಂಗನವಾಡಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ನಡುವೆ ತಾಲೂಕಿನ ತಮಿಳು ಕಾಲೊನಿಯ ಅಂಗನವಾಡಿ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಗನವಾಡಿ ಮಕ್ಕಳು ಕೃಷ್ಣನ ವೇಷ ಧರಿಸಿ ಎಲ್ಲರ ಗಮನ ಸೆಳೆದರು.
ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಮಕ್ಕಳು ಧರ್ಮ ಭೇದ ಮರೆತು ಶ್ರೀಕೃಷ್ಣನ ವೇಷಧರಿಸಿ ಭಾವೈಕ್ಯತೆ ಮೆರೆದಿದ್ದಾರೆ
ಮೊಹಮ್ಮದ್ ಹರಾಮಾನ್, ಅಬ್ದುಲ್ ನೂರ್ ಮಕ್ಕಳು ಕೃಷ್ಣನ ವೇಷ ಧರಿಸಿದ್ದರೆ, ನೂರ್ ಎಂಬ ಹೆಣ್ಣುಮಗು ರಾಧೆಯ ವೇಷ ಧರಿಸಿದ್ದು ವಿಶೇಷವಾಗಿತ್ತು.
ದೇವರಾಜು ಅರಸುರವರ ರಾಜ್ಯ ಕಂಡ ಅಪರೂಪದ ರಾಜಕೀಯ ಮುತ್ಸದಿ. ಅವರ ಆಡಳಿತ ದಕ್ಷತೆ, ಶುದ್ಧತೆ, ಶುಚಿತ್ವ ಮತ್ತು ಪ್ರಾಮಾಣಿಕತೆಯಿಂದ ಕೂಡಿತ್ತು. ಅಧಿಕಾರ ವಂಚಿತ ಸಮುದಾಯಕ್ಕೆ ಅಧಿಕಾರವನ್ನು ಅನುಭವಿಸುವ ಅಧಿಕಾರವನ್ನು ಕಲ್ಪಿಸಿಕೊಟ್ಟವರು. ಸಾಮಾಜಿಕ ಪರಿವರ್ತನೆಗೆ ಅರಸು ಕಾರಣಕರ್ತರಾದರು. ಅವರ ಚಿಂತನೆಗಳು, ಕಾರ್ಯಕ್ರಮಗಳು, ಆಡಳಿತಾತ್ಮಕ ನಿರ್ಧಾರಗಳು ಮುಂದಿನ ಜನಾಂಗಕ್ಕೂ ಮತ್ತು ಸರ್ಕಾರಕ್ಕೂ ದಿಕ್ಸೂಚಿಯಾಗಿದೆ.
ಬಸವಣ್ಣರವರ ತತ್ವಗಳನ್ನು ಜಾರಿಗೆ ತಂದ ನಿಜವಾದ ನಾಯಕ ದೇವರಾಜ ಅರಸು. ಇಡೀ ಮಂತ್ರಿಮಂಡಲದ ಅನುಭವ ಮಂಟಪದಂತಿತ್ತು. ಆನಂತರ ಕಂಡಿದ್ದು ಸಿದ್ದರಾಮಯ್ಯನವರ ಮಂತ್ರಿಮಂಡಲದಲ್ಲಿ ಮಾತ್ರ. ನಿಜವಾದ ಪ್ರಜಾಪ್ರಭುತ್ವ ಜನರಿಂದ ಜನರಿಗಾಗಿ ಜನರಿಗೋಸ್ಕರ ಅಂದಹಾಗೆ ಅದರ ನಿದರ್ಶನವನ್ನು ಅರಸು ಕಾಲದಲ್ಲಿ ಕಾಣಬಹುದಿತ್ತು.
ಅರಸು ರವರಿಗೆ ಮುಖ್ಯಮಂತ್ರಿಗಳಿಗೆ ಆಪ್ತರಾಗುವುದಕ್ಕಿಂತ. ಜನರಿಗೆ ಹತ್ತಿರವಾಗಬೇಕು ಎಂಬುದಾಗಿ ಶಾಸಕರಿಗೆ, ಮಂತ್ರಿಗಳಿಗೆ ಮತ್ತು ಅಧಿಕಾರಿಗಳಿಗೆ ಕಿವಿಮಾತನ್ನು ಒತ್ತಿ ಹೇಳುತ್ತಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯನೊಳಗಿನ ಅವರ ಅಂತಃಕರಣ ಬಡವರ ಕೂಗು ಕೇಳಬಲ್ಲ ಸಂವೇದನಾಶೀಲ ವ್ಯಕ್ತಿತ್ವ ಅವರದ್ದಾಗಿತ್ತು.
ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಇವರು ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದು, ಇವರು ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದರು.
ಅವರು ಭೂಸುದಾರಣೆ ಮಲಹೊರುವ ಪದ್ಧತಿ ನಿಷೇಧ, ಹಾವನೂರು ಆಯೋಗ ಜಾರಿಗೆ, ಋಣ ಪರಿಹಾರ ಕಾಯ್ದೆ ಮತ್ತು ಅದರಲ್ಲೂ ಹಿಂದುಳಿದ ವರ್ಗಗಳ ಯುವಜನತೆಯನ್ನು ಬೆಳೆಸುವಂತಹ ಕೆಲಸ ಮಾಡಿದ್ದಾರೆ.
ದೇವರಾಜ ಅರಸು ಅವರ ಕಾರ್ಯಕ್ರಮಗಳು ಆಡಳಿತಾತ್ಮಕ ನಿಲುವುಗಳು ಕಾರ್ಯರೂಪಕ್ಕೆ ತಂದ ಕಾಯ್ದೆಗಳು. ಅದರಿಂದಾದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳು ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾರ್ಥರಹಿತ, ದ್ವೇಷರಹಿತ ರಾಜಕಾರಣ. ಅವರ ಜನಪರ ನಿಲುವು. ಬಡವರನ್ನು ಕಂಡರೆ ಅಯ್ಯೋ ಅನ್ನುವುದಲ್ಲ. ಅವರಿದ್ದಲ್ಲಿಗೇ ಹೋಗಿ ಧೈರ್ಯ, ಧೈರ್ಯ ತುಂಬಿ ಬದುಕುವ ಭರವಸೆ ನೀಡುತ್ತಿದ್ದರು, ಅದು ಅರಸರ ವಿಶಿಷ್ಟಗುಣ. ರಾಜ್ಯದ ಅಭಿವೃದ್ಧಿಯ ಬಗೆಗಿದ್ದ ದೂರದೃಷ್ಟಿ , ಸಾಮಾಜಿಕ ಬದಲಾವಣೆಗಳ ಬಗೆಗಿದ್ದ ಚಿಂತನೆಗಳನ್ನು ನಮ್ಮ ಈಗಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಿದೆ.
ಅರಸರು ಚುನಾವಣೆಯ ಸೋಲು – ಗೆಲುವುಗಳಿಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ. ರಾಜಕಾರಣವೆಂದರೆ ಅದೆಲ್ಲ ಸಾಮಾನ್ಯ ಎಂದು ಭಾವಿಸಿದ್ದರು. ಆದರೆ ಇವತ್ತಿನ ರಾಜಕಾರಣಿಗಳಿಗೆ ಸಂಘಟನೆಯ ಕೌಶಲ್ಯತೆ ಇಲ್ಲ, ಕ್ರಿಯಾಶೀಲತೆ ಇಲ್ಲ, ಕಲಿಕಾ ಸಂಸ್ಕೃತಿ ಇಲ್ಲ, ಚುನಾವಣಾ ಸಂಸ್ಕೃತಿ ಬಿಟ್ಟರೆ ಇನ್ನೊಂದು ಮತ್ತೊಂದು ಗೊತ್ತಿಲ್ಲ.
ರಾಜಕಾರಣಿಯಲ್ಲಿ ಇರಲೇಬೇಕಾದ ವಿಶೇಷವಾದ ಗುಣವೊಂದು ಅರಸು ಅವರಲ್ಲಿತ್ತು. ರಾಜ್ಯದ ಯಾವುದೇ ಮೂಲೆಗೆ ಹೋಗಲಿ , ಜನರನ್ನು ಗುರುತು ಹಿಡಿದು ಮಾತನಾಡಿಸುತ್ತಿದ್ದರು. ಮತ್ತು ಹೆಗಲ ಮೇಲೆ ಕೈಹಾಕಿ ಕಷ್ಟಸುಖ ವಿಚಾರಿಸುತ್ತಿದ್ದರು. ದೇವರಾಜು ಅರಸು ರಲ್ಲಿ ಒಂದು ವಿಶೇಷ ಗುಣವಿತ್ತು. ನಿರ್ಲಕ್ಷಿತ ಸಮುದಾಯಗಳಿಂದ ಬಂದ ವಿದ್ಯಾವಂತ ಉತ್ಸಾಹಿ ತರುಣರನ್ನು ರಾಜಕೀಯ ರಂಗಕ್ಕೆ ಕರೆತಂದು, ಅಧಿಕಾರದ ಸ್ಥಾನಮಾನ ನೀಡುವುದು. ಅರಸು ಅವರಷ್ಟೇ ಅಧಿಕಾರ ಅನುಭವಿಸಲಿಲ್ಲ. ಸಮಾಜದ ಕಟ್ಟಕಡೆಯ ಜನರಿಗೂ ಅಧಿಕಾರವನ್ನು ಮತ್ತು ಸ್ಥಾನಮಾನ ಕಲ್ಪಿಸಿ ಕೊಟ್ಟಿದ್ದರು ಅರಸು.
ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು…
ಬರಹ ಲೇಖಕರ ಅಭಿಪ್ರಾಯವೇ ಹೊರತು ವೆಬ್ಸೈಟ್ನ ಅಭಿಪ್ರಾಯವಲ್ಲ
ತಿಪಟೂರು: ಬಿಎಸ್ ಯಡಿಯೂರಪ್ಪನವರನ್ನು ಕೆಲಸಕ್ಕೆ ಬಂದಾಗ ಉಪಯೋಗಿಸಿಕೊಳ್ಳಬಾರದು. ಚುನಾವಣೆ ವ್ಯವಸ್ಥೆ ಹತ್ತಿರ ಬಂದಾಗ ಅಧಿಕಾರ ಕೊಡುವುದು, ಚುನಾವಣೆ ನಂತರ ಅಧಿಕಾರ ಕಿತ್ತುಕೊಳ್ಳುವುದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ನಾಯಕರಿಗೆ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪಟ್ಟಣದ ವಿರಕ್ತ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪನವರನ್ನು ಭಾಜಪ ಪಕ್ಷದ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿರುವಂತಹ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಯಾವುದೇ ಹಗರಣ ನಡೆಸದ ಬೊಮ್ಮಾಯಿ ಸರ್ಕಾರ
ಒಂದು ವರ್ಷ ಪೂರ್ಣಗೊಂಡಿರುವ ಬೊಮ್ಮಾಯಿ ನೇತೃತ್ವ ಸರ್ಕಾರವು ಯಾವುದೇ ಹಗರಣಗಳನ್ನು ನಡೆಸದೆ ಜನ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ಲಿಂಗಾಯತ ಸಮಾಜದ ಮುಖ್ಯಮಂತ್ರಿ ಆಗಿರುವ ಅವರು ಅಧಿಕಾರ ಒಂದು ವರ್ಷ ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಕೆಲ ರಾಜಕಾರಣಿಗಳು ರಾಜಕೀಯ ಮಾಡಲು ರಾಜೀನಾಮೆ ವದಂತಿ ಮತ್ತು ಮುಖ್ಯಮಂತ್ರಿ ಬದಲಾವಣೆ ಎಂಬ ಸುಳ್ಳು ಮಾಹಿತಿಯನ್ನು ಹರಿದಾಡಿಸುತ್ತಿದ್ದಾರೆ. ಈ ಅಂಶವು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.
ರಾಜ್ಯದ ಹಿಂದುಳಿದ ಮಠಗಳಿಗೆ ಅಭಿವೃದ್ಧಿಯನ್ನು ಕಾಣುವಂತೆ ಮಾಡಲು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಉನ್ನತಿಕರಣ ಹೊಂದಲು ಸರ್ಕಾರವು ಅನುದಾನ ನೀಡಿದೆ ಎಂದರು.
ಈ ವೇಳೆ ವಿರುಕ್ತಮಠ ಮಾಡಾಳು. ಶಶಿ ಶೇಖರ ಸಿದ್ದ ಬಸವ ಸ್ವಾಮಿಜಿ ದೊಡ್ಡ ಮೇಟಿಕುರ್ಕೆ, ಕಾರದೇಶ್ವರ ಸ್ವಾಮಿಜಿಯವರು ಬೆಳ್ಳಾವಿ, ಪ್ರಭು ಕುಮಾರ ಸ್ವಾಮೀಜಿ ಬಿದರೆ, ರಾಜೋಟೇಶ್ವರ ಸ್ವಾಮೀಜಿ ಬೀಳಗಿ , ರೇವಣಸಿದ್ದೇಶ್ವರ ಮಹಾ ಸ್ವಾಮೀಜಿ ದೊಡ್ಡಗುಣಿ, ಮಾದಿಹಳ್ಳಿ ಸ್ವಾಮೀಜಿ ಹಾಜರಿದ್ದರು.
ತುಮಕೂರು; ಪತ್ನಿ ವಿದೇಶಕ್ಕೆ ತೆರಳಿದ್ದರಿಂದ ಬೇಸತ್ತು ಪತಿ, ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆಯತ್ನಿಸಿದ್ದು, ಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದ ಪಿ.ಎಚ್ ಕಾಲೋನಿಯ ನಿವಾಸಿ ಸಮಿವುಲ್ಲಾ ಮೃತ ದುರ್ದೈವಿ, ಈತನೊಂದಿಗೆ ವಿಷ ಸೇವಿಸಿದ್ದ ಮೂವರು ಮಕ್ಕಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸಮಿವುಲ್ಲಾನ ಪತ್ನಿ ಸಾಹೆರಾಬಾನು ಪತಿಯ ವಿರೋಧದ ನಡುವೆಯೂ ಮನೆ ಕೆಲಸಕ್ಕೆಂದು ಸೌದಿ ಅರೆಬಿಯಾಕ್ಕೆ ತೆರಳಿದ್ದಳು. ವಿದೇಶಕ್ಕೆ ತೆರಳಿದ ಬಳಿಕ ಪತ್ನಿಯ ವರ್ತನೆ ಬದಲಾಗಿತ್ತು. ಮನೆ ಕೆಲಸಕ್ಕೆಂದು ಹೋಗಿದ್ದ ಪತ್ನಿ ಸಾಹೆರಾಬಾನು ವಾಪಸು ಭಾರತಕ್ಕೆ ಬರಲು ನಿರಾಕರಿಸಿದ್ದಳು. ಸಾಲದಕ್ಕೆ ಪತಿ ಕರೆ ಮಾಡಿದಾಗಲೆಲ್ಲಾ ಕರೆ ಸ್ವೀಕರಿಸುತ್ತಿರಲಿಲ್ಲ. ಅಲ್ಲದೇ ಮೋಜು ಮಸ್ತಿ ಮಾಡುತ್ತ ಪತಿಗೆ ವಿಡಿಯೋ ಕಾಲ್ ಮಾಡಿ ರೇಗಿಸುತ್ತಿದ್ದಳು ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ಪತಿ, ಹಲವು ಬಾರಿ ಕರೆದರೂ ಪತ್ನಿ ವಾಪಾಸು ಬರುತ್ತಿಲ್ಲವೆಂದು ನೊಂದು ತನ್ನ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ್ದಾನೆ. ಆಸ್ಪತ್ರೆಗೆ ಸಾಗಿಸುವ ವೇಳೆ ಸಮಿವುಲ್ಲಾ ಮೃತ ಪಟ್ಟಿದ್ದು, ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ಕಣ್ಣೀರಿಗೂ ಕರಗಲಿಲ್ಲ. ವಿಷ ಸೇವನೆಗೂ ಮುನ್ನ ಮಕ್ಕಳು ಸಾಹೆರಾಬಾನುಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ತಮ್ಮೊಂದಿಗೆ ಮಾತನಾಡುವಂತೆ ಗೋಗರೆದಿದ್ದಾರೆ. ಆದರೆ ತಾಯಿಯ ಕಲ್ಲು ಹೃದಯ ಕರಗಲಿಲ್ಲ. ಆತ್ಮಹತ್ಯೆಗೂ ಮುನ್ನ ಸಮಿವುಲ್ಲಾ ತನ್ನ ಪತ್ನಿಯ ನಡೆಯ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಕುರುಬರಹಳ್ಳಿ ಗ್ರಾಮದಲ್ಲಿ ಆಗಸ್ಟ್ 20ರ ಶನಿವಾರ ಜರುಗಲಿರುವ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಅಭಿಯಾನದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭಾಗವಹಿಸಲಿದ್ದಾರೆ ಎಂದು ತಹಶಿಲ್ದಾರ್ ಮಮತಾ.ಎಂ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮತ್ತು ಶಿರಾ ತಾಲೂಕು ತಹಶಿಲ್ದಾರ್ ಅವರು ಕುರುಬರಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಮುಂದುವರೆದು ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿ ಚಿಕ್ಕಸೀಬಿ ಗ್ರಾಮ, ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಕಂದಾಯ ಗ್ರಾಮ, ಮಾದೇನಹಳ್ಳಿ ಮಜರೆ, ಗಿಡ್ಡಚಿಕ್ಕನಹಳ್ಳಿ ಗ್ರಾಮ, ಗುಬ್ಬಿ ತಾಲೂಕು ಚೇಳೂರು ಹೋಬಳಿ ಚಿಂದಿಗೆರೆ ಗ್ರಾಮ, ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಮಾರ್ಕೋನಹಳ್ಳಿ ಗ್ರಾಮ, ತಿಪಟೂರು ತಾಲೂಕು ಕಸಬಾ ಹೋಬಳಿ ರಾಮಶೆಟ್ಟಿಹಳ್ಳಿ ಗ್ರಾಮ, ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ ಹೋಬಳಿ ದಬ್ಬೇಘಟ್ಟ ಗ್ರಾಮ, ಚಿ.ನಾ.ಹಳ್ಳಿ ತಾಲೂಕು ಕಂದಿಕೆರೆ ಹೋಬಳಿ ಬಡಕೆಗುಡ್ಲು ಗ್ರಾಮ, ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿ ಗ್ರಾಮ, ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಹೋಬಳಿ ಆರ್.ಡಿ.ರೊಪ್ಪ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಅಭಿಯಾನದಲ್ಲಿ ಆಯಾ ತಾಲೂಕು ತಹಶಿಲ್ದಾರ್ಗಳು ಭಾಗವಹಿಸಿ ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುರುವೇಕೆರೆ : ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ನಲ್ಲಿ ಆಗಸ್ಟ್ 25 ರಂದು ಚುಂಚಾದ್ರಿ ರೈತ ಸಂತೆ ಉಧ್ಘಾಟನೆ, ಆದಿ ಚುಂಚನಗಿರಿ ಸಮುದಾಯ ಭವನದ ಶಂಕು ಸ್ಥಾಪನೆ, ಹಾಗೂ ಮಾಜಿ ಶಾಸಕ ದಿ.ಬಿ.ಭೈರಪ್ಪಾಜಿಯವರ ಕಂಚಿನ ಪುತ್ಥಳಿ ಪುನರ್ ಪ್ರತಿಷ್ಠಾಪನಾ ಸಮಾರಂಭವು ನಡೆಯಲಿದೆ ಎಂದು ರಾಜ್ಯ ರೈತ ಸಂಘದ ವರಿಷ್ಟ ಕೆ.ಟಿ.ಗಂಗಾಧರ್ ತಿಳಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಮಾಯಸಂದ್ರ ಶಾಖೆ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಠಾನ ತುರುವೇಕೆರೆ ವತಿಯಿಂದ ಮಾಯಸಂದ್ರ ಟಿ.ಬಿ.ಕ್ರಾಸ್ನ ಕಾಲಭೈರವೇಶ್ವರ ಕಲ್ಪತರು ಆಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.25ರಂದು ಜೋಡುಗಟ್ಟೆಯಿಂದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಬೈಕ್ ರ್ಯಾಲಿಯ ಮೂಲಕ ತಾಲೂಕಿನ ಗಡಿ ಭಾಗದಲ್ಲಿ ಸ್ವಾಗತಿಸಲಾಗುವುದು. ಮಾಯಸಂದ್ರ ಟಿ.ಬಿ.ವೃತ್ತದಲ್ಲಿ ಮಾಜಿ ಶಾಸಕ ದಿ. ಬಿ.ಭೈರಪ್ಪಾಜಿಯವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸುವ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಚುಂಚಾದ್ರಿ ರೈತಸಂತೆಗೆ ಚಾಲನೆ ಹಾಗೂ ಆದಿಚುಂಚನಗಿರಿ ಸಮುದಾಯ ಭವನಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರೊ.ಪುಟ್ಟರಂಗಪ್ಪರವರು ರಚಿಸಿರುವ ರೈತಬಂಧು ಬೈರಪ್ಪಾಜಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಆದಿ ಚುಂಚನಗಿರಿ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿಗಳು, ಶಾಸಕ ಮಸಾಲಜಯರಾಮ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಮಾಜಿ ಶಾಸಕರುಗಳು, ರೈತರುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಸಸ್ಯ ಸಂಜೀವಿನಿ ಪ್ರತಿಷ್ಠಾನದ ಶ್ರೀಕಂಠಯ್ಯ, ಪ್ರೊ.ಪುಟ್ಟರಂಗಪ್ಪ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿ.ಪಂ.ಮಾಜಿ ಸದಸ್ಯ ಎನ್.ಆರ್.ಜಯರಾಮ್,ಕುಶಾಲ್ಕುಮಾರ್, ಬಿ. ಬೆಟ್ಟಸ್ವಾಮಿ, ಮತ್ತಿತರಿದ್ದರು.
ತುಮಕೂರು: ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆಯಡಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಸೇವೆ ಒದಗಿಸಬೇಕಾದ ಏಜನ್ಸಿಗಳು ರೈತರಿಂದ ದುಪ್ಪಟ್ಟು ದರ ವಸೂಲಿ ಮಾಡಿ ಮೋಸ ಮಾಡುತ್ತಿರುವುದಲ್ಲದೆ, ಕಡಿಮೆ ಗುಣಮಟ್ಟದ ಯಂತ್ರಗಳನ್ನು ಖರೀದಿ ಮಾಡಿ ಕೋಟ್ಯಾಂತರ ರೂ. ಅವ್ಯವಹಾರದಲ್ಲಿ ತೊಡಗಿದ್ದು, ಇದರ ಕುರಿತು ಉನ್ನತ ಮಟ್ಟದ ತನಿಖೆಗೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಭಾರತೀಯ ಕೃಷಿಕ ಸಮಾಜದ ಕೋಡಿಹಳ್ಳಿ ಜಗದೀಶ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯ 60 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಏಜೆನ್ಸಿಗಳು ಕೆಲಸ ಮಾಡುತ್ತಿದ್ದು,ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ನಿಗಧಿಪಡಿಸಿದ ರಿಯಾಯಿತಿ ದರದಲ್ಲಿ ರೈತರಿಗೆ ಸೇವೆ ಒದಗಿಸಬೇಕಾದ ಏಜೆನ್ಸಿಯವರು ಒಂದಕ್ಕೆ ಒಂದುವರೆ ಪಟ್ಟು ಬಾಡಿಗೆ ವಸೂಲಿ ಮಾಡಿ, ರಸೀದಿಯನ್ನು ನೀಡದೆ ರೈತರಿಗೆ ಜೊತೆಗೆ ಸರ್ಕಾರಕ್ಕೂ ಮೋಸ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಸರಕಾರ 70;30ರ ಅನುಪಾತದಲ್ಲಿ ಸುಮಾರು ೮ ಕೋಟಿ ರೂಗಳ ಯಂತ್ರೋಪರಣಗಳನ್ನು ಈ ಯೋಜನೆಯಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಗೆ 11 ಹೋಬಳಿ,ವಿ.ಎಸ್.ಟಿ ಟ್ರಾಕ್ಟರ್ ಮತ್ತು ಟಿಲ್ಲರ್ಗೆ 20 ಹೋಬಳಿ ಮತ್ತು ವರ್ಷ ಅಸೋಸಿಯೇಟ್ಸ್ಗೆ 18 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ನಿರ್ವಹಣೆಯ ಹೊಣೆ ನೀಡಿದೆ.ಅಲ್ಲದೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಅಧ್ಯಕ್ಷತೆಯಲ್ಲಿ ಯಂತ್ರೋಪಕರಣಗಳ ಸ್ಥಳೀಯ ಬಾಡಿಗೆಯನ್ನು ಆಧರಿಸಿ, ಬಾಡಿಗೆ ದರವನ್ನು ನಿಗಧಿ ಮಾಡಿದೆ. ಹೀಗಿದ್ದರೂ ಹೆಬ್ಬೂರು ಹೋಬಳಿಯ ಧರ್ಮಸ್ಥಳ ಸಂಸ್ಥೆಯ ಕೃಷಿ ಯಂತ್ರಧಾರೆ ಏಜೆನ್ಸಿಯಿಂದ 42ಬ್ಲೆಡ್ನ ರೋಟೋ ವೆಟರ್ಗೆ ಒಂದು ಗಂಟೆಗೆ 700ರೂ ಬಾಡಿಗೆ ಬದಲು 1200 ರೂ ಪಡೆಯಲಾಗಿದೆ. ಕೆಲವು ಕಡೆಗಳಲ್ಲಿ ಕೃತಕ ಬೇಡಿಕೆ ಸೃಷ್ಟಿಸಿ 1500 ರೂ.ಗಳವರೆಗೆ ಬಾಡಿಗೆ ಪಡೆದು, ರಸೀದಿಯನ್ನು ನೀಡದೇ ವಂಚಿಸಲಾಗುತ್ತಿದೆ. ಇದ ಹಿಂದೆ ಕೃಷಿ ಅಧಿಕಾರಿಗಳು ಮತ್ತು ಏಜೆನ್ಸಿಯವರ ಪಾತ್ರವಿದ್ದು, ಸಮಗ್ರ ತನಿಖೆಗೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದರು.
ರೈತರಿಗೆ ಕೃಷಿ ಯಂತ್ರಧಾರೆ ಏಜೆನ್ಸಿಗಳಿಂದ ಆಗುತ್ತಿರುವ ಅನ್ಯಾಯವನ್ನು ಗುರುತಿಸುವ ನಿಟ್ಟಿನಲ್ಲಿ ಭಾರತೀಯ ಕೃಷಿಕ ಸಮಾಜ ಕೆಲ ಏಜೆನ್ಸಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಸರ್ಕಾರದಿಂದ ಮಾಡಿದ ಹೊಸ ಯಂತ್ರಗಳ ಬದಲು, ಐದಾರು ವರ್ಷಗಳ ಕಾಲ ಈಗಾಗಲೇ ಉಳುಮೆ ಮಾಡಿರುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಕಡೆ ಹೊಸ ಯಂತ್ರಗಳನ್ನು ರೈತರಿಗೆ ತಿಳಿಯದಂತೆ ಮುಚ್ಚಿಟ್ಟು, ಹಳೆಯ ಯಂತ್ರಗಳನ್ನು ದುಪ್ಪಟ್ಟು ಬಾಡಿಗೆ ಪಡೆದು ನೀಡಲಾಗುತ್ತಿದೆ. ಐದು ವರ್ಷಗಳ ನಂತರ ಹಾಲಿ ಯಂತ್ರಗಳ ಬದಲು ಹೊಸ ಯಂತ್ರ ಖರೀದಿ ನೆಪದಲ್ಲಿ ಈ ಹಿಂದೆ ಖರೀದ ಮಾಡಿದ್ದ ಯಂತ್ರಗಳನ್ನೇ ಪುನಃ ನಮೂದಿಸಿ, ಲಕ್ಷಾಂತರ ರೂ ಅವ್ಯವಹಾರ ನಡೆಸಿದ್ದಾರೆ. ಇದರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಆಗಬೇಕೆಂಬುದು ಭಾರತೀಯ ಕೃಷಿಕ ಸಮಾಜದ ಒತ್ತಾಯವಾಗಿದೆ ಎಂದು ಕೋಡಿಹಳ್ಳಿ ಜಗದೀಶ್ ತಿಳಿಸಿದರು.
ಭಾರತೀಯ ಕೃಷಿಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷ ಸಂಧ್ಯ.ಸಿ.ಟಿ ಮಾತನಾಡಿ, ಸರ್ಕಾರ ನಿಗಧಿ ಪಡಿಸಿರುವ ಕೃಷಿ ಯಂತ್ರಧಾರೆಯ ಬಾಡಿಗೆ ದರವನ್ನು ಪ್ರತಿ ರೈತ ಸಂಪರ್ಕ ಕೇಂದ್ರ ಹಾಗೂ ಏಜೆನ್ಸಿಯ ಮುಂದೆ ಪ್ರದರ್ಶಿಸಬೇಕು ಎಂಬ ನಿಯಮವಿದೆ. ಆದರೆ ಇದುವರೆಗೂ ಒಂದು ಆರ್.ಎಸ್.ಕೆ. ಮುಂದೆಯೂ ದರ ಪಟ್ಟಿ ಪ್ರಕಟಿಸಿಲ್ಲ.ಇದರಿಂದ ರೈತರು ವಿಧಿಯಿಲ್ಲದೆ ಹೆಚ್ಚಿನ ದರ ನೀಡಿ ಮೋಸ ಹೋಗುತ್ತಿದ್ದಾರೆ. ದರ ಪಟ್ಟಿ ಪ್ರದರ್ಶನಕ್ಕೆ ಕೃಷಿ ಇಲಾಖೆ ಮುಂದಾಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷ ಪುಟ್ಟರಾಜು, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ.ಎ.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಬಿ.ಎಂ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿರಾ: ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಸಮೀಪ ಪವನ್ ಡಾಬಾ ಹತ್ತಿರದ ಎನ್.ಎಚ್.48 ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತಗೊಂಡು ಆಗಸ್ಟ್ 15ರಂದು ಬೆಳಗಿನ ಜಾವ 3ಗಂಟೆ ಸಮಯದಲ್ಲಿ ಸುಮಾರು 35 ವರ್ಷದ ಅಪರಿಚಿತ ಗಂಡಸು ಸಾವನ್ನಪ್ಪಿದ್ದು, ಶವವನ್ನು ಶಿರಾ ಸರ್ಕಾರಿ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ.
ಮೃತನು ಸುಮಾರು 5.5 ಅಡಿ ಎತ್ತರ, ದುಂಡು ಮುಖ, ನೀಳವಾದ ಶರೀರ ಹೊಂದಿದ್ದು, ಮೃತನ ಮೈಮೇಲೆ ಬಿಳಿ ಮಾಸಲು ಬಣ್ಣದ ಷರ್ಟ್, ಸಿಮೆಂಟ್ ಕಲರ್ ಪ್ಯಾಂಟ್ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 08135-274738, ಮೊ.ಸಂ.9480802934ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.