ತುಮಕೂರು: ಪ್ರಸ್ತಾವಿತ ವಿಜ್ಞಾನಗುಡ್ಡವಿರುವ ಅಮಾಲಪುರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಜಾಗ ನೀಡುವ ಸಂಬಂಧ ಸೋಮವಾರ ಸಭೆ ನಡೆಯಿತು.
ಸಭೆಯ ನೇತೃತ್ವವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶರಾದ ಜಯಂತಕುಮಾರ್ ಅವರು ವಹಿಸಿದ್ದರು.
ಉಪ ಲೋಕಾಯುಕ್ತರ ನಿರ್ದೇಶನವಿದ್ದಾಗ್ಯೂ ಜಿಲ್ಲಾಡಳಿತ ಜಾಗದ ಸರ್ವೆ ನಡೆಸಲು ತಮ್ಮನ್ನು ಕರೆದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಇದೇ ಜಾಗದಲ್ಲಿ ಎಂ.ಎಸ್ ಎಂ ಇ ಕೇಂದ್ರಕ್ಕೆ 15 ಎಕರೆ ಜಾಗ ನೀಡಲಾಗಿತ್ತು. ಎಂ.ಎಸ್ ಎಂ ಇ ಕೇಂದ್ರದವರು ಜಾಗ ವಾಪಸ್ ನೀಡಿದ್ದಾರೆ. ಆ ಜಾಗವನ್ನು ನ್ಯಾಯಾಲಯಕ್ಕೆ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು.
ಸಭೆಗೆ ಬರಬೇಕಾಗಿದ್ದ ಜಿಲ್ಲಾಧಿಕಾರಿ ಬದಲಿಗೆ ಅವರನ್ನು ಪ್ರತಿನಿಧಿಸಿ ಉಪ ವಿಭಾಗಾಧಿಕಾರಿ ಗೌರವ ಶೆಟ್ಟಿ, ತುಮಕೂರು ತಹಶೀಲ್ದಾರ್ ಅವರು ಬಂದಿದ್ದರು. ಪ್ರಧಾನ ನ್ಯಾಯಧೀಶರ ಅನೇಕ ಪ್ರಶ್ನೆಗಳಿಗೆ ಅವರು ತಲೆ ಕೆಳಗು ಹಾಕಿದರು. ಉತ್ತರ ನೀಡಲಾಗದೇ ಅಸಹಾಯಕವಾಗಿ ಮೌನವಾದರು.
ಇಲ್ಲಿರುವ ಜಾಗ ಕೊಡಲು ಯಾವ ಒತ್ತಡವಿದೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅರಣ್ಯ ಇಲಾಖೆಗೆ ಭೂ ಬ್ಯಾಂಕ್ ಗೆ ನೀಡಿರುವ ಜಾಗವನ್ನು ಯಾವಾಗ ಬೇಕಾದರೂ ವಾಪಸ್ ಪಡೆಯಬಹುದು ಎಂದು ಸರ್ಕಾರದ ಆದೇಶದಲ್ಲೇ ಇದೆ. ಆ ಭೂಮಿ ವಾಪಸ್ ಪಡೆಯಲು ಏಕೆ ಮೀನಮೇಷ ಎಣಿಸುತ್ತಿದ್ದೀರಿ ಎಂದು ಕೇಳಿದರು.
“ಜಾಗವನ್ನು ನಾನು ತೆಗೆದುಕೊಂಡು ಹೋಗುವುದಿಲ್ಲ. ನನ್ನ ವೈಯಕ್ತಿಕ ಹಿತಾಸಕ್ತಿಯೂ ಅಡಗಿಲ್ಲ. ಈಗಿರುವ ನ್ಯಾಯಾಲಯದ ಸಂಕೀರ್ಣದಲ್ಲಿ ಪಾರ್ಕಿಂಗ್ ಸಮಸ್ಯೆ ಜಾಸ್ತಿಯಾಗುತ್ತಿದೆ. ಕೋರ್ಟ್ ಹಾಲ್ ಗಳು ಸಾಲುತ್ತಿಲ್ಲ. ಪ್ರತಿ ತಿಂಗಳು ಒಂದೂವರೆ ಸಾವಿರ ಕೇಸ್ ಗಳು ದಾಖಲಾಗುತ್ತಿವೆ. ಹೀಗೆ ಆದರೆ ಕೋರ್ಟ್ ನಡೆಸುವುದೇ ಕಷ್ಟವಾಗಲಿದೆ. ಇದನ್ನು ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು.
ನ್ಯಾಯಾಲಯಕ್ಕೆ ಜಾಗ ನೀಡುವಲ್ಲಿ ಜಿಲ್ಲಾಡಳಿತ ಸುಖಾಸುಮ್ಮನೇ ವಿಳಂಬ ಧೋರಣೆ ತೋರುತ್ತಿದೆ. ಬೇಕಂತಲೇ ಏನೇನೋ ಸಬೂಬು ಹೇಳುತ್ತಿದೆ. ಇದು ಮನಸ್ಸಿಗೆ ನೋವು ತಂದಿದೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ, ವಕೀಲರಾದ ಓಬಯ್ಯ, ಶಿವಕುಮಾರ್, ಸಿ.ಕೆ.ಮಹೇಂದ್ರ ಮಾತನಾಡಿ. ಜಾಗದ ಕೊರತೆ ಇಲ್ಲ,. ಜಿಲ್ಲಾಡಳಿತಕ್ಕೆ ಮನಸ್ಸು ಇಲ್ಲ. ಈಗಾಗಲೇ ಮೋಹನ್ ರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದಾಗೇ ಸರ್ವೆ ಕೆಲಸ ಆಗಿದೆ. ಅರಣ್ಯಕ್ಕೆ ಮೀಸಲಿಟ್ಟಿರುವ ಜಾಗದ ಹೊರತಾಗಿಯೂ ಜಾಗವಿದೆ. ವಿಜ್ಞಾನಕೇಂದ್ರದ 5 ಎಕರೆ, ಎಂಎಸ್ ಎಂ ಇ ಕೇಂದ್ರಕ್ಕೆ ನೀಡಿ ವಾಪಸ್ಸಾಗಿರುವ 15 ಎಕರೆ ಜಾಗ ನೀಡಿದರೆ ಸಾಕಾಗಲಿದೆ. ಭವಿಷ್ಯದ ತುಮಕೂರಿನ ದೃಷ್ಟಿಯಿಂದ ಕೂಡಲೇ ಜಾಗ ನೀಡಬೇಕು. ಸುಖಾಸುಮ್ಮನೇ ಸರ್ವೆ ಹೆಸರಿನಲ್ಲಿ ಕಾಲಹರಣ ಮಾಡಬಾರದು ಎಂದು ಆಗ್ರಹಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಮಾತನಾಡಿ, ನಾವಿನ್ನೂ ಸುಮ್ಮನಿರಲು ಸಾಧ್ಯವಿಲ್ಲ. ಜಿಲ್ಲಾಡಳಿತ ತೀರ್ಮಾನ ಪ್ರಕಟಿಸಬೇಕು. ಜಿಲ್ಲಾಧಿಕಾರಿ ನ್ಯಾಯಾಂಗದ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ವಕೀಲರಾದ ಬಿ.ಜಿ.ನಾಗರಾಜ್. ಎಂ.ಬಿ.ಬಸವರಾಜ್, ಸಂಘದ ಹಲವು ಪದಾಧಿಕಾರಿಗಳು ಹಾಜರಿದ್ದು, ಜಿಲ್ಲಾಡಳಿತದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪರಮೇಶ್ವರ್ ಬಳಿಗೆ ನಿಯೋಗ
ತುಮಕೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಪ್ರಸ್ತಾವಿತ ವಿಜ್ಞಾನಗುಡ್ಡದ ಅಮಲಾಪುರದಲ್ಲಿ ಜಾಗ ನೀಡಬೇಕೆಂದು ಕೋರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಬಳಿ ನಿಯೋಗ ತೆರಳಲು ವಕೀಲರು ನಂತರ ನಡೆದ ಸಭೆಯಲ್ಲಿ ನಿರ್ಧರಿಸಿದರು.
ತುಮಕೂರು ವೇಗವಾಗಿ ಬೆಳೆಯುತ್ತಿದೆ. ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ನ್ಯಾಯಾಲಯ ಸಾಕಾಗದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಳ್ಳಲು ನಿರ್ಧರಿಸಲಾಯಿತು.
ಜಾಗವು ನಗರಕ್ಕೆ ಹತ್ತಿರವಿರುವುದರಿಂದ ವಕೀಲರು, ಕಕ್ಷಿದಾರರಿಬ್ಬರಿಗೂ ಅನುಕೂಲವಾಗಲಿದೆ. ಅಲ್ಲದೇ ಸಚಿವರು ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರವೂ ಜಾಗಕ್ಕೆ ಹತ್ತಿರವಿರುವ ಕಾರಣ ಕೊರಟಗೆರೆಯ ಅಭಿವೃದ್ಧಿಗೂ ಇದು ನೆರವಾಗಲಿದೆ. ಇದನ್ನು ಸಚಿವರ ಗಮನಕ್ಕೆ ತರಬೇಕು. ಅವರು ಜಾಗ ಕೊಡಿಸಲು ನೆರವಾಗಲಿದ್ದಾರೆ ಎಂಬ ವಿಶ್ವಾಸವನ್ನು ವಕೀಲರ ಸಂಘ ಪದಾಧಿಕಾರಿಗಳು ವ್ಯಕ್ತಪಡಿಸಿದರು.