Sunday, September 8, 2024
Google search engine
Homeಜನಮನಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ : ಆಕ್ರೋಶ(ದಲಿತ-ಹಿಂದುಳಿದ ಬಡವರ ಸಾಗುವಳಿ ಭೂಮಿಗೂ ಸಂಚಕಾರ)

ಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ : ಆಕ್ರೋಶ(ದಲಿತ-ಹಿಂದುಳಿದ ಬಡವರ ಸಾಗುವಳಿ ಭೂಮಿಗೂ ಸಂಚಕಾರ)

ವರದಿ : ಸಂಚಲನ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದ ಸರ್ವೆ ನಂಬರ್ 30 ಮತ್ತು 28’ರಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜಾಣೆಹಾರ್ ರೈತರು, ತಮ್ಮ ಜಮೀನಿಗೆ ನುಗ್ಗಿದ್ದ ಜೆಸಿಬಿಗಳನ್ನು ತಡೆದು ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಶನಿವಾರದ ಬೆಳಗ್ಗೆ ಜಾಣೆಹಾರ್ ಗ್ರಾಮದ ಬಳಿ ರೈತರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ವಾದ-ವಾಗ್ವಾದಗಳು ನಡೆದವು. ಈ ಸಂದರ್ಭದಲ್ಲಿ, ಆರ್ ಎಫ್ಒ ಅರುಣ್ ಅಲ್ಲಿ ಸೇರಿದ್ದ ರೈತರ ಜೊತೆ ಮಾತುಕತೆ ನಡೆಸಿದರು. ಆಗ, ಅರಣ್ಯ ಇಲಾಖೆಯ ಬಳಿಯಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಸ್ತುತಪಡಿಸಿದ ನಂತರ ತಮ್ಮ ಕೆಲಸ ಮುಂದುವರೆಸಿ ಎಂದು ರೈತರು ಪಟ್ಟುಹಿಡಿದರು. ರೈತರ ಆಕ್ರೋಶಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಜೀಪ್ ಹತ್ತಿ ಸ್ಥಳದಿಂದ ಹೊರಟುಹೋದರು.

ಹಿನ್ನೆಲೆ :
ಆಶ್ರಿಹಾಲ್ ಸರ್ವೆ ನಂಬರ್ 30’ರಲ್ಲಿರುವ ಇನ್ನೂ ದುರಸ್ತಿಯಾಗದ ಉಳಿಕೆ 5 ಎಕರೆ ಹಾಗೂ ಸರ್ವೆ ನಂಬರ್ 28’ರಲ್ಲಿ ಇನ್ನೂ ದುರಸ್ತಿಯಾಗದ ಉಳಿಕೆ (ಎಕ್ಸ್ಟೆಂಟ್) ಜಮೀನು 2 ರಿಂದ ಎರಡೂವರೆ ಎಕರೆ ಮತ್ತು ಜಾಣೆಹಾರ್ ಗಡಿ’ಯಲ್ಲಿನ ಸರ್ವೆ ನಂಬರ್ 7 ರಲ್ಲಿ 1 ಒಂದೂವರೆ ಎಕರೆ, ಸರ್ವೆ ನಂಬರ್ 8 ರಲ್ಲಿ 2 ರಿಂದ ಎರಡೂವರೆ ಎಕರೆ ಹಾಗೂ ಸರ್ವೆ ನಂಬರ್ 9 ರಲ್ಲಿ ಮುಕ್ಕಾಲು ಎಕರೆಯಷ್ಟಿರುವ ಕಂದಾಯ ಭೂಮಿ ರೈತರಿಗೆ ಮಂಜೂರಾಗಿರುವ ಗ್ರಾಂಟೆಡ್ ಜಮೀನಾಗಿದೆ. ಈಯೆಲ್ಲ ಸರ್ವೆ ನಂಬರುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅವರ ಜಮೀನಿಗೆ ನಿರಂತರವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿದ್ದಾರೆ. ಸದರಿ, ಆಶ್ರಿಹಾಲ್ ಮತ್ತು ಜಾಣೆಹಾರ್ ಗಡಿ ಸರ್ವೆ ನಂಬರುಗಳಲ್ಲಿರುವ ಇದಿಷ್ಟೂ ಕಂದಾಯ ಜಮೀನು ಒಟ್ಟಾರೆ ಹತ್ತನ್ನೊಂದು ಎಕರೆಗಳಷ್ಟು ವಿಸ್ತೀರ್ಣದ್ದಾಗಿದೆ. ಈ ಸರ್ವೆ ನಂಬರುಗಳಲ್ಲಿರುವ ರೆವೆನ್ಯೂ ಜಮೀನು ರೈತರಿಗೆ ಮಂಜೂರಾಗಿರುವಂತಹ ಗ್ರಾಂಟೆಡ್ ಲ್ಯಾಂಡೇ ಆಗಿದೆ.

ಈ ಭಾಗದ ರೈತರು 1970’ರಿಂದಲೂ ಇಲ್ಲಿ ಈ ಜಮೀನಿನ ಸಾಗುವಳಿ ನಡೆಸುತ್ತಿದ್ದಾರೆ. ಇದಕ್ಕೆ ಪುರಾವೆಯಾಗಿ 1978’ರಲ್ಲೇ ಭಾಗ್ಯಮ್ಮD/O ಲಕ್ಷ್ಮಯ್ಯ ಎಂಬ ಜಾಣೆಹಾರ್ ಗ್ರಾಮದ ರೈತ ಮಹಿಳೆಗೆ 3 ಎಕರೆಗಳಿಗೂ ಹೆಚ್ಚಿನ ಜಮೀನು ಇದೇ ಜಾಣೆಹಾರ್ ಸರ್ವೆ ನಂಬರಲ್ಲಿ ಮಂಜೂರಾಗಿದೆ. ನಾವೆಲ್ಲಾ ಇಲ್ಲಿ ಎಪ್ಪತ್ತರ ದಶಕದಿಂದಲೂ ಗೆಯ್ಮೆ ಮಾಡುತ್ತಿದ್ದೇವೆ. ಇದು ನಮ್ಮ ಜಮೀನು. ಇದು ಆಗ ಸರ್ಕಾರಿ ಬೀಳು ಆಗಿದ್ದಿರಬಹುದು. ಆದರೆ, ಸುಮಾರು ಐವತ್ತು ವರ್ಷಗಳಿಗೂ ಮುಂಚಿನಿಂದ ಜಾಣೆಹಾರ್ – ಆಶ್ರಿಹಾಲ್ ಗ್ರಾಮದ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇದು ಎಪ್ಪತ್ತು-ಎಂಭತ್ತರಲ್ಲೇ ರೈತರಿಗೆ ಮಂಜೂರಾಗಿರುವ ರೈತರ ಜಮೀನು.

ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಮೀರಿದ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರಗಳನ್ನು ಕಡಿದು, ಅದೇ ಮರಗಳ ಕೊರಡುಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ರೈತರ ಜಮೀನುಗಳಿಗೂ ಜೆಸಿಬಿ ನುಗ್ಗಿಸುತ್ತಿದ್ದಾರೆ. ಇದು ಅಕ್ಷಮ್ಯ.

ಈ ಹಿಂದೆ ಅಕೇಶಿಯಾ ಮರಗಳನ್ನು ಕಡಿಯಲು ಒಬ್ಬರಿಗೆ ಟೆಂಡರ್ ಕೊಡಲಾಗಿತ್ತು. ಮರಗಳನ್ನು ಕಡಿಯುವುದರ ಜೊತೆಗೆ ಅದರ ಬೊಡ್ಡೆಗಳನ್ನೂ ಬೇರುಮಟ್ಟದಿಂದ ಕೀಳಬೇಕಾದ ನಿಯಮವಿದ್ದರೂ, ಅದಕ್ಕಾಗುವ ಖರ್ಚುವೆಚ್ಚದ ಹಣ ಉಳಿಸುವ ದುರಾಸೆಯಿಂದ ಆ ಬೊಡ್ಡೆಗಳನ್ನು ಕೀಳದೆ ಹಾಗೇ ಬಿಟ್ಟುಹೋಗಿದ್ದರು. ಅವು ಕಾಲಾಂತರದಲ್ಲಿ ಮತ್ತೆ ಚಿಗುರಿ ಈಗ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರ ಬಳಿ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿರುವ ಅರಣ್ಯ ಅಧಿಕಾರಿಗಳು ತಮ್ಮ ಬಳಿ ಇರುವ ದಾಖಲೆ ಪ್ರಮಾಣಗಳನ್ನು ಯಾಕೆ ಸಾರ್ವಜನಿಕಗೊಳಿಸದೆ, ನಮ್ಮ ಅನಕ್ಷರಸ್ಥ ಬಡ ರೈತರ ಮೇಲೆ ಮಾತ್ರ ಜೋರು ಜಬರದಸ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಹೀಗೆಲ್ಲ ವರ್ತಿಸಲು ಅವಕಾಶವಿಲ್ಲ. ಪ್ರಜಾಪ್ರಭುತ್ವದಲ್ಲಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಆಸ್ಪದವಿಲ್ಲ ಎಂಬುದನ್ನು ಈ ಅಧಿಕಾರಿಗಳಿಗೆ ಬಡವರು ಮತ್ತು ರೈತರು ತಿಳಿಸಿಕೊಡಬೇಕೇ ಎಂದು ರೈತರು ಪ್ರಶ್ನಿಸಿದರು.

ಮುಖ್ಯಾಂಶಗಳು :
ಚಿಕ್ಕನಾಯಕನಹಳ್ಳಿ ಉಪ–ವಲಯ ಅರಣ್ಯಾಧಿಕಾರಿ ಗೌರಿಶಂಕರ್ (ಡೆಪ್ಯುಟಿ ರೇಂಜ್ ಆಫಿಸರ್)’ರವರು ರೈತರನ್ನು ಸಂಘಟಿಸುತ್ತಿರುವ ರೈತ ಕಾರ್ಯಕರ್ತರಿಗೆ ಕರೆಮಾಡಿ ಧಮಕಿ ಹಾಕುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಇದೆಲ್ಲದರ ನಡುವೆ ತಿಪಟೂರು ವಿಭಾಗದ ಎಸಿಎಫ್ ಮಲ್ಲಿಕಾರ್ಜುನ್’ರವರು ಸೋಮವಾರ ಸ್ಥಳಕ್ಕೆ ಭೇಟಿ ಕೊಟ್ಟು ರೈತರು ಮತ್ತು ಅರಣ್ಯಾಧಿಕಾರಿಗಳ ನಡುವಿನ ತಕರಾರನ್ನು ಆಲಿಸಿ, ಬಗೆಹರಿಸಲು ಪ್ರಯತ್ನಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅರಣ್ಯ ಇಲಾಖೆ ಹಾಗೂ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನುಗಳಿಗೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನಗಳಿವೆ. ಅರಣ್ಯ ಅಧಿಕಾರಿಗಳು ಅವನ್ನು ಅನೂಚಾನ ಪಾಲಿಸಬೇಕು. ಇಲ್ಲದಿದ್ದಲ್ಲಿ ಘನ ನ್ಯಾಯಾಲಯದ ಉಲ್ಲಂಘನೆಯಾದೀತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?