ತುಮಕೂರು: ಅಮಲಾಪುರದಲ್ಲಿ ಎಂಎಸ್ಇಎಂ ಗೆ ನೀಡಿದ್ದ ಜಾಗವನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ನೀಡುವ ಬಗ್ಗೆ ಇನ್ನೂ ಹದಿನೈದು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರವಸೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಕೀಲರು ಪಟ್ಟು ಹಿಡಿದ ಕಾರಣ ಕೊನೆಗೂ ಜಾಗದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು.
ಆರಂಭದಲ್ಲಿ ತಿಮ್ಮರಾಜನಹಳ್ಳಿ, ವಿಶ್ವವಿದ್ಯಾನಿಲಯದ ಜಾಗ ನೀಡುವ ಬಗ್ಗೆ ಜಿಲ್ಲಾಧಿಕಾರಿ ಹೇಳಿದರು. ತಿಮ್ಮರಾಜನಹಳ್ಳಿ ದೂರ ಇರುವುದರಿಂದ ಕಕ್ಷಿದಾರರಿಗೆ, ಸಾಕ್ಷಿದಾರರಿಗೆ ತೊಂದರೆಯಾಗಲಿದೆ. ಈ ಜಾಗ ಬೇಡ ಎಂದು ಮೊದಲ ಸಭೆಯಲ್ಲಿ ಹೇಳಿದ್ದೇವೆ. ಅಮಲಾಪುರದಲ್ಲಿರುವ ಜಾಗ ನೀಡಿ ಎಂದು ಜಿಲ್ಲಾ ಪ್ರಧಾನ ನ್ಯಾಯಾದೀಶರಾದ ಜಯಂತ್ ಕುಮಾರ್ ಹೇಳಿದರು.
ಇದಕ್ಕೆ ದನಿಗೂಡಿಸಿದ ಜಿಲ್ಲಾ ವಕೀಲರದ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ , ಆ ಜಾಗ ನಮಗೆ ಬೇಡ. ಅಮಲಾಪುರದ ಜಾಗ ನೀಡಿ ಎಂದು ಒತ್ತಾಯಿಸಿದರು.
ಅಮಲಾಪುರದಲ್ಲಿ ಜಾಗ ನೀಡಲು ಏನು ಸಮಸ್ಯೆ. ಅಲ್ಲಿ 15 ಎಕರೆ ಜಾಗವನ್ನು ಈ ಹಿಂದೆ ಎಂಎಸ್ ಎಇ ಗೆ ನೀಡಲಾಗಿತ್ತು. ಕೇಂದ್ರ ಸರ್ಕಾರ ಆ ಜಾಗ ವಾಪಸ್ ನೀಡಿದೆ. ಇನ್ನೂ ವಿಜ್ಞಾನ ಕೇಂದ್ರಕ್ಕೆ ನೀಡಿದ 5 ಎಕರೆಯೂ ಖಾಲಿ ಇದೆ. ವಿಜ್ಞಾನ ಕೇಂದ್ರಕ್ಕೆ ನೀವೆ ಅಧ್ಯಕ್ಷರು. ಈ ಎರಡನ್ನೂ ಸೇರಿಸಿ 20 ಎಕರೆ ಜಾಗವನ್ನು ನ್ಯಾಯಾಲಯಕ್ಕೆ ನೀಡಿ ಎಂದು ವಕೀಲರಾದ ಜಿ.ಎನ್. ನಾಗರಾಜ್, ಓಬಯ್ಯ, ಶಿವಕುಮಾರ್, ಸಿ.ಕೆ.ಮಹೇಂದ್ರ, ಸಿಂಧು ಮತ್ತಿತರರು ಒತ್ತಾಯಿಸಿದರು.
ಅರಣ್ಯಕ್ಕೆ ನೀಡಿರುವ ಜಾಗವನ್ನು ಸಹ ನ್ಯಾಯಾಲಯಕ್ಕೆ ನೀಡಬಹುದಾಗಿದೆ. ನ್ಯಾಯಾಲಯಕ್ಕೆ ಜಾಗ ಬೇಕಾಗಿದೆ. ಜಾಗ ನೀಡಲು ಏನಾದರೂ ಸಮಸ್ಯೆ ಇದ್ದರೆ ಹೇಳಿ ಎಂದು ಹಿರಿಯ ವಕೀಲರಾದ ಕೃಷ್ಣಶಾಸ್ತ್ರಿ ಹೇಳಿದರು.
ಸದ್ಯಕ್ಕೆ, ಕೃಷಿ ಇಲಾಖೆ, ಪೊಲೀಸ್ ಠಾಣೆ, ಲೇಬರ್ ಕಮಿಷನರ್ ಜಾಗ ಬಿಡಿಸಿಕೊಟ್ಟರೂ ಸಾಕು ಎಂದರು. ಆದರೆ ಈ ಜಾಗ ಬಿಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಮಗೆ ಅಮಲಾಪುರದ 20 ಎಕರೆ ಜಾಗ ಬೇಕೇಬೇಕು ಎಂದು ಕೆಂಪರಾಜಯ್ಯ ಹೇಳಿದರು.
ಜಿಲ್ಲಾಡಳಿತ ಜಾಗ ನೀಡದಿದ್ದರೆ ವಕೀಲರು, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಬೀದಿಗೆ ಇಳಿಯಲಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಒಳ್ಳೆಯ ನ್ಯಾಯಾಲಯ ಸಂಕೀರ್ಣ ಇದ್ದರೆ ಜಿಲ್ಲೆಗೆ ಹೆಸರು ಬರಲಿದೆ. ಜಿಲ್ಲಾಧಿಕಾರಿ ಅವರಿಗೂ ಹೆಸರು ಬರಲಿದೆ. ಜಾಗ ನೀಡಲು ಜಿಲ್ಲಾಧಿಕಾರಿ ಮುಂದಾಗಬೇಕು. ನಿರ್ಧಾರ ಪಾಸಿಟಿವ್ ಆಗಿರಲಿ ಎಂದು ಹಲವು ವಕೀಲರು ಹೇಳಿದರು.
ನನ್ನದು ಓ ಪಾಸಿಟಿವ್ ಬ್ಲಡ್. ಅಭಿವೃದ್ಧಿಯೇ ನನಗೆ ಬೇಕಿರುವುದು ಎಂದು ಶುಭಕಲ್ಯಾಣ್ ಮಾತಿಗೆ ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.
ಸಭೆಯಲ್ಲಿ ಹಿರಿಯ ವಕೀಲರಾದ ರಂಗನಾಥ ರೆಡ್ಡಿ, ಎಂ.ಬಿ.ಬಸವರಾಜ್, ಮಹೇಶ್, ನವೀನ್ ನಾಯ್ಕ, ತಿಪ್ಪೇಸ್ವಾಮಿ, ಸಂಘದ ಪದಾಧಿಕಾರಿಗಳಾದ ಧನಂಜಯ್, ಸುರೇಶ್, ಶ್ರೀನಿವಾಸ್, ಗೋವಿಂದರಾಜು, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್, ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುಳಾ, ಹಲವು ಅಧಿಕಾರಿಗಳು, ವಕೀಲರು ಹಾಜರಿದ್ದರು.