Sunday, June 29, 2025
Google search engine
Homeಜಸ್ಟ್ ನ್ಯೂಸ್ತುಮಕೂರು ನ್ಯಾಯಾಲಯಕ್ಕೆ ಜಾಗ ಏಕೆ ಬೇಕು?

ತುಮಕೂರು ನ್ಯಾಯಾಲಯಕ್ಕೆ ಜಾಗ ಏಕೆ ಬೇಕು?


ಲೇಖನ:    ಡಾ.ಎಸ್.ರಮೇಶ್, LLM, Phd

ಹಿರಿಯ ನ್ಯಾಯವಾದಿಗಳು


ಎಸ್.ರಮೇಶ್

ತುಮಕೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಹೊಸದಾಗಿ ಜಾಗ ನೀಡುವ ವಿಷಯ ಈಗ ಜಿಲ್ಲಾಧಿಕಾರಿಯವರ ಮುಂದೆ ಇದೆ. ನಗರಕ್ಕೆ ಅಂಟಿಕೊಂಡಿರುವ ಅಮಾಲಪುರದಲ್ಲಿರುವ ನೂರಾರು ಎಕರೆ ಸರ್ಕಾರಿ ಜಾಗದಲ್ಲಿ 20 ಎಕರೆ ಜಾಗ ನೀಡುವಂತೆ ತುಮಕೂರು ವಕೀಲರ ಸಂಘ, ಕರ್ನಾಟಕದ ಲೋಕಾಯುಕ್ತದ ಉಪ ಲೋಕಾಯುಕ್ತರು ತುಮಕೂರು ಜಿಲ್ಲಾಧಿಕಾರಿ ಅವರ ಮುಂದೆ ಬೇಡಿಕೆ ಮಂಡಿಸಿದ್ದಾರೆ.

ಇನ್ನೂ, ನ್ಯಾಯಾಂಗದ ಆಸೆಯೂ ಇದೇ ಆಗಿದೆ. ಆದರೆ ಈವರೆಗೂ ಜಿಲ್ಲಾಧಿಕಾರಿಯವರು ನಿರ್ಧಾರ ಪ್ರಕಟಿಸಿಲ್ಲ ಎಂಬ ಮಾಹಿತಿ ಇದೆ.

ನಿಜಕ್ಕೂ, ನ್ಯಾಯಾಲಯಕ್ಕೆ ಜಾಗ ಏಕೆ ಬೇಕು ಎಂಬುದರತ್ತ ನಾವೀಗ ನೋಣೋಣ. ತುಮಕೂರು ನಗರದ ಜನಸಂಖ್ಯೆ ಬೆಳೆದಂತೆ, ನ್ಯಾಯಾಂಗದ ಆಡಳಿತದಲ್ಲಿ ಆಗಾಧ ಬದಲಾವಣೆಗಳಾಗಿವೆ. ಈಗಾಗಲೇ ಇದನ್ನು ಕಾಣಬಹುದಾಗಿದೆ. ಮುಂದೆ ಇದಕ್ಕೆ ತಕ್ಕಂತೆ ನ್ಯಾಯಾಲಯವೂ ಸನ್ನದ್ಧವಾಗಬೇಕಾಗಿದೆ. ‘ನ್ಯಾಯ ವ್ಯವಸ್ಥೆ’ಯ ಅಸ್ಥೆಯೇ ಆಡಳಿತವನ್ನು ಅಳೆಯುವ ಮೇರುಗೋಲಾಗಿದೆ.


ತುಮಕೂರು ನಗರವನ್ನೇ ನೋಡುವುದಾದರೆ, ತುಮಕೂರು ನಗರಸಭೆಯಾಗಿತ್ತು. ನಂತರ ಮಹಾನಗರ ಪಾಲಿಕೆಯಾಗಿ 2016 ರಲ್ಲಿ ಸ್ಮಾರ್ಟ್‌ ಸಿಟಿಯಾಗಿಯೂ ರೂಪಾಂತರಗೊಂಡಿತು. ಇದಕ್ಕೆ ಅನುಗುಣವಾಗಿ ತುಮಕೂರು ಜಿಲ್ಲಾ ಕೇಂದ್ರದ ನ್ಯಾಯಾಲಯಗಳ ಸಂಖ್ಯೆಗಳಲ್ಲಿಯೂ ಬದಲಾವಣೆಯಾಗಿ 2010 ರಲ್ಲಿ ಇದ್ದ ಒಟ್ಟು 9 ನ್ಯಾಯಾಲಯಗಳಿಂದ ಈಗ 21 ನ್ಯಾಯಾಲಯಗಳಿಗೆ ವಿಸ್ತರಣೆಗೊಂಡಿದೆ. ಇನ್ನೂ ಮೂರು ನ್ಯಾಯಾಲಯಗಳು, ಜಾಗವಿಲ್ಲದ ಕಾರಣ ಆರಂಭಗೊಂಡಿಲ್ಲ.

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಹಾಲಿ 38,205 ಕೇಸುಗಳು ಎಲ್ಲಾ ಪ್ರಕಾರಗಳಿಂದ ಬಾಕಿ ಇವೆ. ಇವುಗಳಲ್ಲಿ 20496 ಸಿವಿಲ್ ಪ್ರಕರಣಗಳು,17709 ಕ್ರಿಮಿನಲ್ ಪ್ರಕರಣಗಳು ಸದ್ಯ ವಿಚಾರಣೆಗೆ ಬಾಕಿ ಉಳಿದಿವೆ. ಅದರಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ 6371 ಸಿವಿಲ್ ಪ್ರಕರಣಗಳು, 2315 ಸೆಷನ್ಸ್ ಪ್ರಕರಣಗಳು, ಹಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ 7462 ಸಿವಿಲ್ ಪ್ರಕರಣಗಳು, 1212 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ 6603 ಸಿವಿಲ್ ಪ್ರಕರಣಗಳು, 14182 ಕ್ರಿಮಿನಲ್ ಪ್ರಕರಣಗಳು ಹಾಗೂ ಲೇಬರ್ ಕೋರ್ಟ್ ನಲ್ಲಿ 136 ಲೇಬರ್ ಪ್ರಕರಣಗಳು ಬಾಕಿ ಇವೆ. ಅಲ್ಲದೇ ಪ್ರತಿ ತಿಂಗಳು 1400-1500 ಹೊಸ ಪ್ರಕರಣಗಳು ದಾಖಲಾಗುತ್ತಿವೆ.


ಈ ಒಟ್ಟು ಪ್ರಕರಣಗಳಿಗೆ ಹೋಲಿಸಿಕೊಂಡರೆ, ನ್ಯಾಯಾಲಯಗಳ ಸಂಖ್ಯೆ ಕಡಿಮೆ ಇರುವುದರಿಂದ ಈಗಿರುವ ನ್ಯಾಯಾಲಯಗಳ ಮೇಲೆ, ನ್ಯಾಯಾಧೀಶರ ಮೇಲೆ ಒತ್ತಡ ಹೆಚ್ಚಿ, ನ್ಯಾಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಲು ಕಷ್ಟವಾಗುತ್ತದೆ. ಈ ದೃಷ್ಟಿಕೋನದಿಂದ ಹಾಲಿ ಇರುವ ನ್ಯಾಯಾಲಯಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.

ಇ- ವ್ಯಾಜ್ಯ ವ್ಯವಸ್ಥೆ ಬಲಗೊಳ್ಳುತ್ತಿರುವ ಸನ್ನಿವೇಷದಲ್ಲಿ ನ್ಯಾಯಾಲಯವು ಇ- ವ್ಯಾಜ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಿದ್ದಲ್ಲಿ ಪ್ರತ್ಯೇಕವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು, ಪೈಲಿಂಗ್ ಕೌಂಟರ್ ಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಬೇಕಾಗುತ್ತದೆ. ಇದಕ್ಕಾಗಿ ವಿಶಾಲ ಜಾಗದ ಅಗತ್ಯವಿರುತ್ತದೆ.

ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪ್ರತ್ಯೇಕ ಫೈಲಿಂಗ್ ಕೌಂಟರ್ ಇರುವುದನ್ನು ಗಮನಿಸಬಹುದು. ತುಮಕೂರು ಬೆಳೆಯುತ್ತಿದ್ದರೂ ತುಮಕೂರು ನ್ಯಾಯಾಲಯದ ವ್ಯವಸ್ಥೆ ಮಾತ್ರ ಕಿಷ್ಕಿಂಧೆಯಂತೆಯೇ ಇದೆ. ತುಮಕೂರು ನಗರದ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ನ್ಯಾಯಾಲಯ ಸಂಕೀರ್ಣದ ಅವಶ್ಯಕತೆ ಇದೆ,

ಈಗಿರುವ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ ಈಗಾಗಲೇ ರಾಜ್ಯ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿದೆ. ತುಮಕೂರು ನಗರ ವ್ಯಾಪಿಯ ಸುತ್ತಳತೆ 12 ಕಿಲೋ ಮೀಟರ್ ವ್ಯಾಪ್ತಿಗೆ ಹಿಗ್ಗಿಸಲಾಗಿದೆ. ಈಗ ವಕೀಲರ ಸಂಘ ಕೇಳುತ್ತಿರುವ ಅಮಲಾಪುರದ ವಿಜ್ಞಾನಗುಡ್ಡ ಪ್ರದೇಶ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಲಿದೆ. ಇದು ನ್ಯಾಯಾಂಗದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇನ್ನು, ತುಮಕೂರು ನ್ಯಾಯಾಲಯದಲ್ಲಿ  ದಿನ ಪ್ರತಿ ನ್ಯಾಯಾಲಯವೊಂದರಲ್ಲಿ ಕನಿಷ್ಠ 100-150 ಪ್ರಕರಣಗಳನ್ನು ನಿರ್ವಹಿಸಲಾಗುತ್ತಿದೆ. ಒಟ್ಟು 21 ನ್ಯಾಯಾಲಯಗಳಿಂದ ಪ್ರತಿದಿನ ಕನಿಷ್ಠ 2300 ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಭಾಗವಹಿಸಲು ಪ್ರತಿ ದಿನ ನ್ಯಾಯಾಲಯಕ್ಕೆ ಕಕ್ಷಿದಾರರು, ಅವರ ಸಹಾಯಕರು, ಸಾಕ್ಷಿದಾರರು, ವಕೀಲರು ಸೇರಿದರೆ 6000 ಕ್ಕೂ ಹೆಚ್ಚು ಜನರು ಒಂದು ಹೋಗುತ್ತಾರೆ. ಇವರಲ್ಲದೇ ನ್ಯಾಯಾಲಯದ ಸಿಬ್ಬಂದಿಯೂ ಇರುತ್ತಾರೆ. ಇದು – ನ್ಯಾಯಾಲಯಕ್ಕೆ ಪ್ರತಿ ದಿನ ಎಷ್ಟು ಕಾರುಗಳು, ದ್ವಿಚಕ್ರವಾಹನಗಳು, ಪೊಲೀಸ್ ವಾಹನಗಳು ಬರಬಹುದು ಎಂಬುದರ ಊಹೆಯನ್ನು ನೀವುಗಳೇ ಮಾಡಿಕೊಳ್ಳಬಹುದು.

ಇನ್ನೂ ಮುಂದೆ, ಮುಂದೆ ವಾಹನಗಳ ಸಂಖ್ಯೆ ಇನ್ನೂ ಹೆಚ್ಚುತ್ತವೆ. ಇದು ನ್ಯಾಯಾಲಯದ ಕಾರ್ಯಕಲಾಪಗಳಿಗೆ, ಸುಗಮ ಸಂಚಾರಕ್ಕೆ ಈಗಾಗಲೇ ಸಾಕಷ್ಟು ತೊಡಕನ್ನು ಉಂಟು ಮಾಡುತ್ತಿದ್ದು, ನ್ಯಾಯಾಲಯದ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ವಕೀಲರಿಗೂ ನ್ಯಾಯದಾನ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅಡ್ಡಿಯುಂಟಾಗುತ್ತಿದೆ. ಈ ದೃಷ್ಟಿಯಿಂದ ವಿಶಾಲ ಜಾಗದ ಅಗತ್ಯವಿದೆ.

ಇನ್ನೂ, ವಸಂತನರಾಸಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ತುಮಕೂರು ನ್ಯಾಯಾಲಯದ ಮೇಲೆ ನೇರ ಪರಿಣಾಮ ಬೀರಲಿವೆ. ಹೆಚ್ಚು ಹೆಚ್ಚು ಕ್ರಿಮಿನಲ್, ವಾಹನ ಅಫಘಾತ ಪ್ರಕರಣಗಳು. ಕೌಟುಂಬಿಕ ವಿವಾಹ ಪ್ರಕರಣಗಳು ಮೇರೆ ಮೀರಿ ಬೆಳೆಯಲಿವೆ. ಬಹುಭಾಷಿಕ, ಬಹುರಾಜ್ಯಗಳ ಜನರ ಪ್ರಕರಣಗಳ ನಿರ್ವಹಣೆಗೆ ನ್ಯಾಯಾಲಯ ಈಗಿನಿಂದಲೇ ಸನ್ನದ್ಧವಾಗಬೇಕಾಗಿದೆ. ತಿಂಗಳಿಗೆ ಏಳೆಂಟು ಸಾವಿರ ಪ್ರಕರಣಗಳು ದಾಖಲಾಗುವ ಕಾಲ ಹೆಚ್ಚೇನು ದೂರವಿಲ್ಲ ಎಂಬುದನ್ನು ನಾವುಗಳು ಈಗಿನಿಂದಲೇ ಗಮನಿಸಬೇಕಾಗಿದೆ.


ಈಗಿನ ನ್ಯಾಯಾಲಯದ ಕೊಠಡಿಗಳು ಹೇಗಿವೆ ಎಂದರೆ ವಕೀಲರು ಸಹ ಗಂಟೆಗಟ್ಟಲೆ ನಿಂತುಕೊಂಡೇ ಕಲಾಪದಲ್ಲಿ ಪಾಲ್ಗೊಳ್ಳಬೇಕಾದ ಸ್ಥಿತಿ ಇದೆ. ಕಕ್ಷಿದಾರರು ತಮ್ಮ ಪ್ರಕರಣಗಳನ್ನು ದಿನಗಟ್ಟಲೇ ನಿಂತುಕೊಂಡೇ ಕಾಯಬೇಕಾಗಿದೆ. ಈ ಪರಿಸ್ಥಿತಿಯನ್ನು ಗಮನಿಸಿದರೇ ಈಗಿರುವ ಇಡೀ ನ್ಯಾಯಾಲಯದ ಕಟ್ಟಡವೇ ಅಪ್ರಸ್ತುತವಾಗಿದೆ ಎಂದೇ ಹೇಳಬೇಕಾಗುತ್ತದೆ. ಇನ್ನೂ ಮುಂದಿನ ದಿನಗಳಲ್ಲಿ ಆಗುವ ದುಃಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯವಾಗಿದೆ.

ವಿಜ್ಜಾನಗುಡ್ಡವೇ ಏಕೆ ಬೇಕು?


ವಿಜ್ಞಾನಗುಡ್ಡದಲ್ಲೇ ಏಕೆ ಜಾಗ ಬೇಕು ಎಂದರೆ, ನಗರದೊಳಗೆ ಈ ಜಾಗ ಬಿಟ್ಟರೆ ಬೇರ ಜಾಗ ಇಲ್ಲವಾಗಿದೆ.
ಈಗಿನ ನ್ಯಾಯಲಯದಲ್ಲಿ ವಕೀಲರಿಗೆ ಛೇಂಬರಗಳೇ ಇಲ್ಲ. ಹೊಸ ಜಾಗದಲ್ಲಿ ನೂರಾರು ಛೇಂಬರ್ ಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಇದರಿಂದ ವಕೀಲರು ತಮ್ಮ ತಮ್ಮ ಕಕ್ಷಿದಾರರೊಂದಿಗೆ ವ್ಯವಹರಿಸಲು ಸಾಧ್ಯವಾಗಲಿದೆ. ಕೇಸುಗಳಿಗೆ ತಯಾರಾಗಲು ಸಹ ನೆರವಾಗಲಿದೆ. ಇದು ನ್ಯಾಯ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ.


ವಿಜ್ಞಾನಗುಡ್ಡ ಪ್ರದೇಶ ನಗರದ ಹೆದ್ದಾರಿಗೆ ಅಂಟಿಕೊಂಡಿರುವುದರಿಂದ ಅಲ್ಲಿಗೆ ಸಿಟಿ ಬಸ್ ವ್ಯವಸ್ಥೆ ಇರುವುದರಿಂದ ಬಸ್ಸುಗಳಲ್ಲಿ ಓಡಾಡುವ ಕಕ್ಷಿದಾರರಿಗೆ, ವಕೀಲರುಗಳಿಗೆ ಕೋರ್ಟ್ ಗೆ ಓಡಾಡಲು ಕಷ್ಟವಾಗದು. ಎಷ್ಟೇ ಸಾವಿರ ಕಾರುಗಳು, ದ್ವಿಚಕ್ರ ವಾಹನಗಳು ಬಂದರೂ ತೊಂದರೆಯಾಗದು.


ಅಲ್ಲಿ ನೂರಾರು ಎಕರೆ ಸರ್ಕಾರಿ ಜಾಗ ಇರುವುದರಿಂದ ಅಲ್ಲಿಯೇ ನ್ಯಾಯಾಧೀಶರ ವಸತಿ ಸಮುಚ್ಛಯಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರ ವಸತಿ ಸಮುಚ್ಛಯಗಳ ನಿರ್ಮಾಣಕ್ಕೂ ಮುಂದಾಗಬಹುದಾಗಿದೆ.


ವಿಜ್ಞಾನಗುಡ್ಡದ ಮೇಲೆ ವಿಶಾಲವಾಗಿರುವ 5 ಎಕರೆ ಜಾಗದಲ್ಲಿ “ನ್ಯಾಯಾಂಗ ಮ್ಯೂಸಿಯಂ’ ನಿರ್ಮಾಣ ಮಾಡುವ ಮೂಲಕ ಇಡೀ ಜಗತ್ತಿನಲ್ಲಿ, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬೆಳೆದುಬಂದ ಬಗೆಯನ್ನು ಚಿತ್ರಿಸಿದರೆ, (ಗೋವಾದ ಬಿಗ್ ಫೂಟ್ ನಂತೆ) ನ್ಯಾಯಾಂಗ ಪ್ರವಾಸೋದ್ಯಮದ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ನಾವು ಕೊಟ್ಟಂತಾಗುತ್ತದೆ. ಇಡೀ ದೇಶದ ಕಾನೂನು ವಿದ್ಯಾರ್ಥಿಗಳು, ನ್ಯಾಯಾಧೀಶರು, ವಕೀಲರು, ಜನ ಸಾಮಾನ್ಯರು ಇಲ್ಲಿಗೆ ಭೇಟಿ ನೀಡಿ ನ್ಯಾಯ ವ್ಯವಸ್ಥೆಯ ಮಜಲುಗಳನ್ನು ಅರಿತುಕೊಳ್ಳಲು ಈ  ಜ್ಯೂಡಿಶಿಯಲ್ ಟೂರಿಸಂ ನೆರವಾಗಲಿದೆ. ಇದು ತುಮಕೂರು ನಗರದ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸುವುದಲ್ಲದೇ, ತುಮಕೂರಿನ ಖ್ಯಾತಿಯನ್ನು ದೇಶವ್ಯಾಪಿ, ವಿಶ್ವವ್ಯಾಪಿ ಹರಡಲಿದೆ. ಈ ಹಿನ್ನೆಲೆಯಲ್ಲಿ, ಈ ದೃಷ್ಟಿಕೋನದಲ್ಲಿ ಜಿಲ್ಲಾಡಳಿತ, ಇಲ್ಲಿನ ಉಸ್ತುವಾರಿ ಸಚಿವರು, ಸಚಿವರುಗಳು, ಶಾಸಕರುಗಳು, ಸಂಘಸಂಸ್ಥೆಗಳು ನ್ಯಾಯಾಂಗದ ಬೇಡಿಕೆಯನ್ನು ಸಹೃದತೆಯಿಂದ ನೋಡಬೇಕಾಗಿದೆ ಎನ್ನುವುದು ನನ್ನ ಅನಿಸಿಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?