ಲೇಖಕ: ರವಿಗೌಡ, ಹಿರಿಯ ವಕೀಲರು, ಉಪಾಧ್ಯಕ್ಷರು, ಜಿಲ್ಲಾ ವಕೀಲರ ಸಂಘ
ತುಮಕೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಜಾಗದ ವಿಚಾರವಾಗಿ ನಡೆಯುತ್ತಿರುವ ಈ ಒಂದು ಹೋರಾಟ ತಾರ್ಕಿಕ ಅಂತ್ಯವನ್ನು ಕಾಣಬೇಕಾಗಿದೆ
. ನಾನಾದರೂ ಹೇಳುವುದು ಇಷ್ಟೇ, ಆಧುನಿಕತೆ ಬೆಳೆದಂತೆ ಮನುಷ್ಯನು ಸಹ ಆಧುನಿಕತೆಯ ಕಡೆಗೆ ಸಾಗಬೇಕಾಗುತ್ತದೆ, ಪ್ರಸ್ತುತ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ 21 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ, ಇನ್ನು ಮೂರು ನಾಲ್ಕು ನ್ಯಾಯಾಲಯಗಳು ಇಷ್ಟೊತ್ತಿಗಾಗಲೇ ಕಾರ್ಯನಿರ್ವಹಿಸಬೇಕಿತ್ತು.

ಜಾಗದ ಅನಿವಾರ್ಯತೆಯಿಂದ ಇದು ಸಾಧ್ಯವಾಗಿಲ್ಲ, ಪ್ರತಿದಿನವೂ ಸಹ ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಿರುತ್ತವೆ, ತುಮಕೂರು ನಗರ ಮಹಾನಗರ ಪಾಲಿಕೆಯಾಗಿ ಸ್ಮಾರ್ಟ್ ಸಿಟಿಯಾಗಿ ಮೇಲ್ದರ್ಜೆಗೇರಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿ ವರ್ಷವೂ ಸಹ ನೂರಾರು ಜನ ಯುವ ವಕೀಲರುಗಳು ಸಂಘದಲ್ಲಿ ಸದಸ್ಯರಾಗಿ ನೋಂದಾಯಿಸಿಕೊಳ್ಳುತ್ತಿದ್ದಾರೆ,
ಪ್ರಸ್ತುತ ಈಗಿರುವ ನ್ಯಾಯಾಲಯ ಸಂಕೀರ್ಣದ ಜಾಗ ಯಾವುದಕ್ಕೂ ಕೂಡ ಸಾಕಾಗುವುದಿಲ್ಲ, ಎಷ್ಟು ಸಮಸ್ಯೆಗಳಿವೆ ಎಂದರೆ ಬರುವ ಯುವ ವಕೀಲರುಗಳಿಗೆ ಲಾಕರ್ ಗಳನ್ನು ಇಡಲು ಸಂಘದಲ್ಲಿ ಜಾಗವನ್ನು ಒದಗಿಸಿಕೊಡಲು ಆಗುತ್ತಿಲ್ಲ,
ದೂರದ ಊರುಗಳಿಂದ ಬರುವ ವಕೀಲರುಗಳು ಮಧ್ಯಾಹ್ನದ ಊಟವನ್ನು ಡಬ್ಬಿ ಗಳಲ್ಲಿ ತರುತ್ತಾರೆ, ಹಾಗೆ ತರುವ ಡಬ್ಬದ ಊಟಗಳನ್ನು ಪ್ರಶಾಂತವಾಗಿ ಕುಳಿತುಕೊಂಡು ತಿನ್ನಲು ಜಾಗವಿಲ್ಲ,
ಪ್ರತಿದಿನ ಸಾವಿರಾರು ಜನ ಕಕ್ಷಿದಾರರು ಅವರುಗಳ ವಾಹನಗಳು, ಜಿಲ್ಲಾಧಿಕಾರಿಗಳ ಕಚೇರಿಗೆ ಉಪ ನೋಂದಣಾಧಿಕಾರಿಗಳ ಕಚೇರಿ, ಕೃಷಿ ಇಲಾಖೆ ಬರುವಂತ ನಾಗರಿಕರುಗಳು ತಮ್ಮ ವಾಹನಗಳನ್ನು ವಕೀಲರಗಳಿಗೆ ಮೀಸಲಾತಿರುವ ಜಾಗದಲ್ಲಿ ನಿಲ್ಲಿಸಿ ಹೋಗುತ್ತಾರೆ, ಹಾಗೂ ಅತ್ಯಂತ ಮುಖ್ಯವಾಗಿ ವಕೀಲರು ಅವರುಗಳ ಕಕ್ಷಿದಾರರುಗಳ ತಲೆತಲಾಂತರದಿಂದ ಬಗೆಹರಿಸಿಕೊಳ್ಳಲಾಗದ ಸಮಸ್ಯೆಗಳನ್ನ ತಮ್ಮ ಹೆಗಲುಗಳ ಮೇಲೆ ಹಾಕಿಕೊಂಡು ಕೇಸ್ ಗಳನ್ನು ನಡೆಸಬೇಕಾಗಿರುತ್ತದೆ.
ಇಂಥಹ ಸನ್ನಿವೇಶದಲ್ಲಿ ವಕೀಲರುಗಳಿಗೆ (Peace of Mind ) ಪ್ರಶಾಂತವಾದ ಒಂದು ಪರಿಸರವನ್ನು ನಿರ್ಮಾಣ ಮಾಡಬೇಕಿದೆ, ಇಲ್ಲದಿದ್ದರೆ ಕೆಲವೊಮ್ಮೆ ಮಾನಸಿಕ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ನಾವು ಕೂಡ ವೈಜ್ಞಾನಿಕವಾಗಿ ಆಲೋಚನೆಯನ್ನು ಮಾಡಬೇಕಾಗುತ್ತದೆ.
ಈಗ ಬಾಕಿ ಇರುವ ಒಟ್ಟು ಪ್ರಕರಣಗಳು 38 ರಿಂದ 40,000, ಇನ್ನು ಮುಂದಿನ ಐದಾರು ವರ್ಷಗಳಲ್ಲಿ ಇದರ ಎರಡರಷ್ಟು ಪ್ರಕರಣಗಳು ಜಾಸ್ತಿಯಾಗುತ್ತವೆ ಹಾಗೂ ಇಂದಿನ ಎರಡರಷ್ಟು ವಕೀಲರುಗಳು ಜಾಸ್ತಿ ಆಗುತ್ತಾರೆ. ಹಾಗಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಈಗಿರುವ ವಕೀಲರುಗಳಿಗೆ ಜಾಗವಿಲ್ಲ. ಅವರ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲ.
ಹೇಮಾವತಿ, ಭಾರತೀಯ ರೈಲ್ವೆ, ಭಾರತೀಯ ಹೆದ್ದಾರಿಗಳ, ಎತ್ತಿನಹೊಳೆ KIADB ಯಿಂದ ಕೈಗಾರಿಕೆಗಳಿಗೆ ಭೂ ಸ್ವಾಧೀನ ಆಗುತ್ತಿರುವ ಪ್ರತಿದಿನವೂ ಸಾವಿರಾರು ಹೊಸ ಕೇಸ್ ಗಳು ದಾಖಲಾಗುತ್ತಿವೆ., ಹಾಗಾಗಿ ಸರ್ಕಾರ ಮೀನಮೇಮೇಷ ಎಣಿಸದೆ ಅತ್ಯಂತ ಜರೂರಾಗಿ ಜಿಲ್ಲಾ ವಕೀಲರ ಸಂಘ ಪ್ರಸ್ತಾಪಿಸಿರುವಂತೆ ಅಮಲಾಪುರದ ಜಾಗವನ್ನು ಈ ಕೂಡಲೇ ಕಾನೂನು ಇಲಾಖೆಗೆ ಹಸ್ತಾಂತರಿಸಬೇಕೆಂದು ಕೇಳಿಕೊಳ್ಳುತ್ತೇವೆ.