Saturday, July 27, 2024
Google search engine
Homeಜನಮನಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವೈಭವ

ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವೈಭವ

ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆ ವೈಭವಯುತ ಇತಿಹಾಸವನ್ನು ಹೊಂದಿದ್ದು ಇಂದಿನ ಕಾಲಮಾನದಲ್ಲಿ ನಮ್ಮ ನಾಡು ನುಡಿಗೆ ಅದೇ ವೈಭವವನ್ನು ತರಬೇಕಾಗಿದೆ. ಈ ಕಾರ್ಯಕ್ಕೆ ಕಾಯಕಲ್ಪ ದೊರೆಯಬೇಕಾದರೆ ನಾವು ಕೇವಲ ನವೆಂಬರ್ ಕನ್ನಡಿಗರಾಗಿದ್ದರೆ ಸಾಲದು, ನಂಬರ್‌ ಒನ್‌ ಕನ್ನಡಿಗರಾಗಬೇಕು ಎಂದು ಎಂಪ್ರೆಸ್‌ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.‌ ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.

ವಿಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ

ನಗರದ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣ ನಮ್ಮ ನಾಡಿನ ಇತಿಹಾಸದಲ್ಲಿ ಒಂದು ಅತ್ಯಂತ ಪ್ರಮುಖವಾದ ಘಟ್ಟ.

ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ನಮ್ಮ ರಾಜ್ಯವು ಮೈಸೂರು ರಾಜ್ಯವಾಗಿ ರೂಪುಗೊಳ್ಳುವ ಮತ್ತು ಕರ್ನಾಟಕ ಎಂದು ಮರುನಾಮಕರಣಗೊಳ್ಳುವ ಮೊದಲು ಕನ್ನಡ ಭಾಷೆಗಿದ್ದ ಸ್ಥಾನಮಾನವನ್ನು ಈಗಿನ ಪರಿಸ್ಥಿತಿಯೊಂದಿಗೆ ಹೋಲಿಸಿದರೆ ಕನ್ನಡ ಭಾಷೆಯ ಸ್ಥಾನಮಾನದಲ್ಲಿ ಗಣನೀಯ ಕುಸಿತವಾಗಿರುವುದು ವೇದ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಅನೇಕ ಕನ್ನಡಪರ ಹೋರಾಟಗಾರರು ತಮ್ಮ ತ್ಯಾಗ ಬಲಿದಾನದ ಮೂಲಕ ಕರ್ನಾಟಕದ ಅಸ್ಥಿತ್ವಕ್ಕೆ ಕೊಡುಗೆ ಸಲ್ಲಿಸಿದ್ದರೂ, ಇಂದಿಗೂ ಕನ್ನಡ ಮಾತೃಭಾಷೆಯಾಗಿ ಬಳಕೆಯಲ್ಲಿರುವ ಅನೇಕ ಪ್ರದೇಶಗಳು ಕರ್ನಾಟಕೇತರ ರಾಜ್ಯಗಳಿಗೆ ಸೇರಿರುವುದು ದುಃಖದ ಸಂಗತಿಯೆಂದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ನಮ್ಮ ಜೀವದ, ಜೀವನದ ಭಾಷೆ. ನಾವು ಯಾವುದೇ ಮಾಧ್ಯಮದಲ್ಲಿ ಓದಿದರೂ ನಮಗೆ ಅತ್ಯಂತ ಆಪ್ಯಾಯಮಾನವಾಗಿರುವುದು ಮಾತೃಭಾಷೆಯಾದ ಕನ್ನಡವೇ ಎಂದು ಹೇಳಿದರು. ಇಂದು ಕನ್ನಡ ಮತ್ತು ಆಂಗ್ಲ ಭಾಷೆಗಳನ್ನು ಪ್ರತ್ಯೇಕಿಸಿ ನೋಡುವ ಸ್ಥಿತಿಯೇ ಇಲ್ಲವಾಗಿದೆ.

ಪಕ್ಕದ ರಾಜ್ಯಗಳಲ್ಲಿನ ಭಾಷಾಭಿಮಾನ ನಮ್ಮಲ್ಲಿ ಕ್ಷೀಣಿಸಿರುವುದು ಖೇದಕರ. ನಮ್ಮ ಭಾಷೆಯನ್ನು ನಾವೇ ಬಳಸಿ ಬೆಳೆಸದಿದ್ದರೆ ಇನ್ಯಾರು ಬೆಳೆಸುತ್ತಾರೆ ಎಂದು ಪ್ರಶ್ನಿಸಿದರು. ಕರ್ನಾಟಕದ ವ್ಯಾಪಾರ, ಉದ್ದಿಮೆ, ಶಿಕ್ಷಣ ಹಾಗೂ ಇತರೆ ಕ್ಷೇತ್ರಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗಿದ್ದು ಅಲ್ಲೆಲ್ಲಾ ಕನ್ನಡ ಭಾಷೆಯನ್ನು ಮತ್ತೆ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಭಾಷೆಯು ಬಳಕೆಯಿಂದ ದೂರವಾದರೆ ಆ ಭಾಷೆಯು ನಶಿಸುತ್ತದೆ. ಈ ದುಸ್ಥಿತಿ ನಮ್ಮ ಕನ್ನಡಕ್ಕೆ ಬರುವುದು ಬೇಡ ಎಂದು ಕಳಕಳಿ ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ಬಿ. ಮರುಳಯ್ಯ ಮಾತನಾಡಿ ಕನ್ನಡ ಭಾಷೆಗೆ ಸಮಾರು 2500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದ್ದು ವಿಶ್ವದ ಪ್ರಾಚೀನ ಭಾಷೆಗಳಲ್ಲೊಂದಾಗಿದೆ. ಇಡೀ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳು ಹೇಗೆ ರಾಷ್ಟ್ರೀಯ ಹಬ್ಬಗಳೋ ಹಾಗೆಯೇ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಒಂದು ನಾಡಹಬ್ಬವಾಗಿದೆ.

ಆದರೆ ಕರ್ನಾಟಕ ಏಕೀಕರಣ ಚಳುವಳಿಗಾಗಿ ದುಡಿದವರ ನೋವು ಸಂಕಟಗಳು ಇಂದಿನ ತಲೆಮಾರಿನವರಿಗೆ ತಿಳಿದಿಲ್ಲದಿರುವುದು ನೋವಿನ ಸಂಗತಿಯೆಂದರು. ಕರ್ನಾಟಕ ಏಕೀಕರಣಕ್ಕೆ ಜರ್ಮನಿಯ ಜಾರ್ಜ್‌ ಫರ್ಡಿನಾಂಡ್‌ ಕಿಟೆಲ್‌ ತಮ್ಮ ಕನ್ನಡ ನಿಘಂಟಿನ ಮೂಲಕ ಅಡಿಪಾಯ ಹಾಕಿದರು ಎಂದು ತಿಳಿಸಿದರು.

ಭಾರತದಲ್ಲಿಂದು ಸುಮಾರು 600ಕ್ಕೂ ಹೆಚ್ಚು ಭಾಷೆಗಳಿದ್ದು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ ಹೆಮ್ಮೆ ನಮ್ಮ ಕನ್ನಡ ಭಾಷೆಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕರ್ನಾಟಕ ಸರ್ಕಾರವು ಅನೇಕ ಸಂಘ-ಸಂಸ್ಥೆಗಳನ್ನು ಹುಟ್ಟುಹಾಕಿ ತನ್ಮೂಲಕ ಶ್ರಮಿಸುತ್ತಿದೆ. ಈ ಕಾರ್ಯ ಇನ್ನೂ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ. ಬಸವರಾಜು ಬಿ.ವಿ. ಮಾತನಾಡಿ ಇಂದಿನ ಯುವಜನಾಂಗ ಕನ್ನಡ ನಾಡು-ನುಡಿಯ ಬಗ್ಗೆ ತಾತ್ಸಾರವನ್ನು ಬೆಳೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಕನ್ನಡ ನಾವು ಕನಸು ಕಾಣುವ ಭಾಷೆ. ನಾವು ಎಲ್ಲಿಯೇ ಇದ್ದರೂ ಮಾತೃಭೂಮಿ ಮತ್ತು ಮಾತೃಭಾಷೆಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ ಜಿ.ಟಿ., ಕನ್ನಡ ವಿಭಾಗದ ಮುಖ್ಯಸ್ಥ ವಾಸುದೇವ ಬಿ.ಎ., ಡಾ. ಶ್ವೇತಾರಾಣಿ ಹೆಚ್.‌, ಉಪನ್ಯಾಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿಗಾರರು

ಶಶಿಕುಮಾರ್ ವೈ ಬಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?