ತುಮಕೂರು : ನಗರದ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್(ರಿ) ವತಿಯಿಂದ ಮೇ-1’ರ ಗುರುವಾರದಂದು ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಬಸವ-ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚುಮಂದಿ ವಿಶೇಷಚೇತನ-ಅಂಗವಿಕಲರು ಹಾಗೂ ಹತ್ತಾರು ಮಂದಿ ಪರಿತ್ಯಕ್ತ ವಯೋವೃದ್ಧರು ಉಪಸ್ಥಿತರಿದ್ದರು.
ಗಿಡಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ ಸಿ ಶೈಲಾ ನಾಗರಾಜ್’ರವರು, ವಿಶೇಷಚೇತನರ ಕ್ಷೇಮಾಭಿವೃದ್ಧಿಗಾಗಿ ಟ್ರಸ್ಟೊಂದನ್ನು ಸ್ಥಾಪಿಸಿ, ಸ್ವತಃ ಅಂಗವಿಕಲರಾಗಿದ್ದರೂ ಪರಿತ್ಯಕ್ತ ವಯೋವೃದ್ಧರು ಹಾಗೂ ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ಸಾಹಿ ಯುವಕವಿ ಮತ್ತು ಸಂಘಟಕ ಬಾಬುಟ ಮನಸೇ’ರವರ ಮಾನವೀಯ ಕಳಕಳಿಯನ್ನು ಮನಸಾರೆ ಶ್ಲಾಘಿಸಿದರು. ಬಾಬು ಮನಸೇ ತರಹದ ಯುವಕರ ಬದ್ಧತೆ ಮತ್ತು ಕಳಕಳಿಯಲ್ಲಿ ನಾವು ಬಸವ-ಸ್ಫೂರ್ತಿಯನ್ನು ಇಂದು ಕಾಣಬೇಕಾಗಿದೆ ಎಂದು ಹಾರೈಸಿದರು.
ಶೋಷಿತ ಹಾಗೂ ದುಃಖಿತ ಸಮಾಜದಲ್ಲಿ ಮಾನವೀಯ-ಚೈತನ್ಯದ ಅಪೂರ್ವ ಶಕ್ತಿಯಂತೆ ಹನ್ನೆರಡನೇ ಶತಮಾನದಲ್ಲಿ ಸಂಭವಿಸಿದ ಬಸವಣ್ಣ ಹಾಗೂ ಶರಣ ಚಳವಳಿಯ ಮಹತ್ತತೆಯನ್ನು ಅವರು ವಿವರಿಸಿದರು. ಮೇಲು-ಕೀಳು, ಪುರುಷ-ಮಹಿಳೆ, ಶ್ರೇಷ್ಠ-ಕನಿಷ್ಠ, ಜಾತಿ-ಧರ್ಮ ಎಲ್ಲದರ ಆಚೆಗೆ ಚಾಚಿಕೊಂಡು ಹಬ್ಬಿದ ಬಸವಣ್ಣನವರ ಜಾತ್ಯತೀತ ಜನಪರ ಆಂದೋಲನವನ್ನು ಅವರು ಸ್ಮರಿಸಿದರು. ಅದೇರೀತಿ, ಕಾಯಕಯೋಗಿಗಳ ಕುರಿತು ತತ್ವ ರೂಪಿಸಿದ ಬಸವಣ್ಣನವರ ಜಯಂತಿ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಎರಡನ್ನೂ ಒಟ್ಟಿಗೇ ಆಚರಿಸುತ್ತಿರುವುದರ ಪ್ರಸ್ತುತತೆಯನ್ನು ಅವರು ಮೆಚ್ಚಿ, ಬಾಬು ಮನಸೇ’ರವರ ಉತ್ಸಾಹವನ್ನು ಪ್ರಶಂಸಿಸಿದರು. ಕಡೆಯಲ್ಲಿ, ಕಾರ್ಮಿಕರ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಬಸವಣ್ಣನವರ ವಚನವನ್ನು ವಾಚಿಸಿದರು.
ಸಿಐಟಿಯು-ತುಮಕೂರು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಬೇಡುವುದು ಮತ್ತು ನೀಡುವುದು ಎಂಬುದಷ್ಟೇ ಮಾನವ-ಕಳಕಳಿಯ ಮಾನದಂಡವಾಗಬಾರದು. ಜೊತೆಗೆ ನಿಲ್ಲುವುದು ಮತ್ತು ಜೀವಂತ ಇರುವನಕ ಜೊತೆ ನಡೆಯುವುದು ಬದ್ಧತೆಯಾಗಬೇಕು. ನೀಡಿದ್ದನ್ನು ಫೋಟೊ-ವಿಡಿಯೋ ಮಾಡಿ ದಾಖಲಿಸಿಕೊಳ್ಳುವುದಷ್ಟೇ ಸೇವೆ ಆಗಬಾರದು. ದಾನ, ಸೇವೆ, ಸಹಾಯ ಎಂಬುದು ದಾಸ್ತಾನು ಮಾಡಿಡಬಹುದಾದ ಸರಕಲ್ಲ. ಅದು, ಎಂದಿಗೂ ಸಶೇಷ. ಹಾಗಾಗಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ನಿಲ್ಲುವುದೇ ನಿಜವಾದ ಮಾನವಸೇವೆ. ಬಸವಣ್ಣನವರು ನಿರೂಪಿಸಿ ಹೋದಂತೆ ‘ಕಾಯಕದಿಂದಲೇ ಕೈಲಾಸ’ದ ಅವಕಾಶಗಳು ತೆರೆದುಕೊಳ್ಳುವಂತಹ ಸಾಧ್ಯತೆಗಳಿಗೆ ಹೆಗಲೆಣೆಯಾಗಿ ನಿಲ್ಲಬೇಕು. ಕಾಯಕ-ಗುರುವಿನ ಜಯಂತಿ ಮತ್ತು ಕಾರ್ಮಿಕರ ದಿನ ಎರಡನ್ನೂ ಒಟ್ಟಿಗೇ ಆಚರಿಸುವ ಅಪರೂಪದ ಆಶಯಗಳನ್ನು ಹೊಂದಿರುವ ಬಾಬು ಮನಸೇ ಮತ್ತು ಪ್ರೇರಣಾ ಸಂಸ್ಥೆಯ ಜೊತೆ ತಾನಿರುವವರೆಗೂ ಸದಾಕಾಲ ನಿಲ್ಲುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಶ್ರೀಮತಿ ಶಮಂತ ಶ್ರೀಗಣೇಶ್’ರವರು ಮಾತನಾಡುತ್ತಾ, ಇಂದು ನಾವೆಲ್ಲರೂ ಇಲ್ಲಿ ಹೀಗೆ ಸೇರಲು ಬಸವಣ್ಣನವರೇ ಆದ್ಯಪುರುಷರು. ಮಹಿಳೆಯೂ ಜನರನ್ನು ಉದ್ದೇಶಿಸಿ ಮಾತನಾಡುವಷ್ಟು ಸಮಾನತೆಯನ್ನು ಸಮಾಜಕ್ಕೆ ಕಲ್ಪಿಸಿಕೊಟ್ಟ ಮಹಾನುಭಾವರು ಬಸವಣ್ಣ. ಅಂತಹ ಮಹಾನುಭಾವರ ಜಯಂತಿಯನ್ನು ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಜೊತೆಗೆ ಆಚರಿಸಿಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ ಎಂದರು. ಕಡೆಯಲ್ಲಿ, ಅವರು ವಚನವೊಂದನ್ನು ಹಾಡಿ ಸಭಿಕರನ್ನು ಗದ್ಗದಗೊಳಿಸಿದರು.
ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್’ನ ಸಂಸ್ಥಾಪಕ ಬಾಬು ಮನಸೇ ಮಾತನಾಡಿ, ತಮ್ಮ ಸಂಸ್ಥೆಯಲ್ಲಿರುವ ವಯೋವೃದ್ಧರು ಹಾಗೂ ವಿಕಲಚೇತನರಿಗೆ ಶ್ರೀಮತಿ ಶಮಂತ ಶ್ರೀಗಣೇಶ್’ರವರು ಬಟ್ಟೆಗಳನ್ನು ತಂದು ವಿತರಿಸುತ್ತಿರುವುದನ್ನು ಕೃತಙ್ಞತೆಯಿಂದ ನೆನೆದರು. ಶ್ರೀಮತಿ ಬಿ ಸಿ ಶೈಲಾ ನಾಗರಾಜ್ ಹಾಗೂ ಸೈಯದ್ ಮುಜೀಬ್’ರವರ ಸಹಾಯ-ಸಹಕಾರಗಳನ್ನು ನೆನೆದ ಅವರು, ಅಂಗವಿಕಲರ ಸ್ವಾವಲಂಬಿ ಬದುಕಿಗಾಗಿ ಕೂತಲ್ಲೇ ನಿರ್ವಹಿಸಬಹುದಾದ ಬಗೆಬಗೆಯ ಕೆಲಸ-ಕಾರ್ಯಗಳ ಕೌಶಲ್ಯ-ತರಬೇತಿ ಕೊಡಿಸುವ ಕಾರ್ಯಾಗಾರ ರೂಪಿಸಿಕೊಡುವ ಬಗ್ಗೆ ಕೇಳಿಕೊಂಡರು. ಹಾಗೂ ಸರ್ಕಾರಿ ಕಚೇರಿಗಳಲ್ಲಿ ನೇಮಕವಾಗುತ್ತಿರುವ ಡೇಟಾ-ಆಪರೇಟರ್ ತರಹದ ಕೆಲಸ-ಕಾರ್ಯಗಳಿಗೆ ನಮ್ಮ ವಿಕಲಚೇತನರನ್ನು ನೇಮಿಸಿಕೊಳ್ಳುವಂತಹ ಪ್ರಾತಿನಿಧ್ಯತೆ ಸಾಧ್ಯವಾಗಬೇಕಿದೆ, ಈ ದಿಸೆಯಲ್ಲಿ ನಮಗೆ ಸಹಾಯ ಮಾಡಿ ಎಂದು ಎಲ್ಲರಲ್ಲಿ ಕೇಳಿಕೊಂಡರು.
ಕಡೆಯಲ್ಲಿ, ಶ್ರೀಮತಿ ಶಮಂತ ಶ್ರೀಗಣೇಶ್’ರವರು ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ತಾವು ತಂದಿದ್ದ ಬಟ್ಟೆಗಳನ್ನು ವಿತರಿಸಿದರು. ಪ್ರೇರಣಾ ಸಂಸ್ಥೆಯ ವತಿಯಿಂದ ಎಲ್ಲರಿಗೂ ಸಿಹಿ ಹಂಚಲಾಯಿತು.
ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ಸಂಸ್ಥೆಯ ಇಂತಹ ಸತ್ಕಾರ್ಯಕ್ಕೆ
ಸಹಾಯ-ಸಹಕಾರಗಳನ್ನು ನೀಡಬಯಸುವವರು ನೇರವಾಗಿ ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದು. ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಬಿಸಿಎಂ ವುಮೆನ್ಸ್ ಹಾಸ್ಟೆಲ್ ಎದುರಿನ ಆಂತೋಣಿ-ಚರ್ಚ್ ಪಕ್ಕದ ಕಟ್ಟಡದಲ್ಲಿ ‘ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್(ರಿ) ಕಚೇರಿ ಹಾಗೂ ಆಶ್ರಮ’ ಎರಡೂ ಇವೆ. ಜೊತೆಗೆ, ಪ್ರೇರಣಾ ಬಾಬು(ಮನಸೇ) ರವರ +91 86601 78143 ಮೊಬೈಲ್ ಸಂಖ್ಯೆಯನ್ನೂ ಸಂಪರ್ಕಿಸಬಹುದು.
ಸಂಚಲನ