(ಆಧಾರ್ ಪ್ರವರ್ತಕ ಡಾ ಸಿಂಗ್ ; ಸಿ ಡಿ ಚಂದ್ರಶೇಖರ್)
ಚಿಕ್ಕನಾಯಕನಹಳ್ಳಿ : ಬ್ಲಾಕ್ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆ ನಡೆಸಲಾಯ್ತು.
ಮಹಾತ್ಮಗಾಂಧಿ ನರೇಗಾ ಕ್ರಾಂತಿಯ ಮೂಲಕ ಬಡವರ ಒಡಲಿಗೆ ಅನ್ನ ಕಲ್ಪಿಸಿಕೊಟ್ಟ ಜ್ಞಾನಮೌನಿ ಡಾ ಮನಮೋಹನ್ ಸಿಂಗ್’ರವರ ಗೌರವಾರ್ಥ ಎರಡು ನಿಮಿಗಳ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮಾಜಿ ಶಾಸಕ ಕೆ ಎಸ್ ಕಿರಣಕುಮಾರ್ ಮಾತನಾಡಿ, ಅಬ್ಬರದ ಭಾಷಣ ಮಾಡುವವರು ಮಾತ್ರವೇ ದೇಶದ ನಾಯಕರಲ್ಲ. ತಮ್ಮ ಬಳಿಯಿರುವ ಲೇಖನಿಯ ಪರಿಣಾಮಕಾರಿ ಸದ್ಬಳಕೆಯಿಂದಲೇ ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿದವರೇ ನಿಜವಾದ ಜನನಾಯಕರು. ಹಳಿ ತಪ್ಪಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಮತ್ತೆ ಆರ್ಥಿಕ ಪ್ರಗತಿಯ ಗತಿಶೀಲತೆಯನ್ನು ತಂದುಕೊಟ್ಟಂಥವರು ಡಾ. ಮನಮೋಹನ್ ಸಿಂಗ್’ರವರು. ಪ್ರಧಾನಿಯಾಗಿದ್ದಾಗ, ಹೊರಗೆ ಅಡಮಾನ ಇಟ್ಟಿದ್ದ ದೇಶದ ಚಿನ್ನವನ್ನು ಮತ್ತೆ ದೇಶಕ್ಕೆ ಮರಳಿ ಗಳಿಸಿಕೊಟ್ಟವರು ಡಾ ಸಿಂಗ್. ಪ್ರಪ್ರಥಮವಾಗಿ, ಎಪ್ಪತ್ತೊಂದು ಸಾವಿರ ಕೋಟಿಗಳಷ್ಟು ರೈತರ ಸಾಲಮನ್ನಾ ಮಾಡಿದ ಮೌನದಿರಿಸಿನ ಧೀರ ವ್ಯಕ್ತಿತ್ವ ಡಾ ಮನಮೋಹನ್ ಸಿಂಗ್’ರವರದು. ಅಬ್ಬರದ ಭಾಷಣ ಮಾಡುತ್ತಾ, ಜನರನ್ನು ಮರುಳು ಮಾಡುತ್ತಾ ಕಾಲತಳ್ಳುವ ವ್ಯಕ್ತಿ ಅವರಾಗಿರಲಿಲ್ಲ. ಮಾತಾಡದೇ ಕೆಲಸ ಮಾಡುತ್ತಾ ದೇಶದ ಜನರ ಬದುಕು-ಭವಿಷ್ಯ ಎರಡನ್ನೂ ಸುಭದ್ರಗೊಳಿಸಲು ಅವಿರತ ಪ್ರಯತ್ನಿಸುತ್ತಿದ್ದವರು. ಅವರ ನಿಧನದಿಂದ ದೇಶ ನಿಜಕ್ಕೂ ಇಂದು ಬಡವಾಗಿದೆ ಎಂದು ವಿಷಾದಿಸಿದರು.
ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಆರೋಗ್ಯ ಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಗೆ ತಂದಂತಹ ಮಹಾವ್ಯಕ್ತಿ ಡಾ ಮನಮೋಹನ್ ಸಿಂಗ್’ರವರು. ಜನ-ಸಾಮಾನ್ಯರ ಕೈಗೆ ಅಸಾಮಾನ್ಯ ಬಲ ತಂದುಕೊಟ್ಟಂತಹ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ’ಗಳನ್ನು ದೇಶಕ್ಕೆ ಕೊಟ್ಟ ಶ್ರೇಯಸ್ಸು ಡಾ ಸಿಂಗ್’ರವರದ್ದು. ಬಡವರಿಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದು, ವರ್ಷವಿಡೀ ಯಾರಿಗೂ ಅನ್ನಾಹಾರಗಳ ಕೊರತೆ ಎದುರಾಗದಂತೆ ಕಾಳಜಿ ವಹಿಸಿದ್ದರು. ತಮ್ಮ ಅಧಿಕಾರಾವಧಿಯ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅವರೊಬ್ಬ ಮಹಾನ್ ಆರ್ಥಿಕ ತಜ್ಞರಾಗಿದ್ದರು. ಮಾರುತಿ ಕಾರ್ ಎಂದರೆ, ಅವರಿಗೆ ಅತಿಯಾದ ಪ್ರೀತಿ. ಆಗೆಲ್ಲ ಕೇವಲ ಮಾರುತಿ ಕಾರ್ ಮಾತ್ರ ಕಾಣಿಸುತ್ತಿದ್ದ ಇಂಡಿಯಾದ ರಸ್ತೆಗಳಲ್ಲಿ, ನೂರಾರು ಮಾದರಿಯ ಬೇರೆ ಬೇರೆ ಕಾರುಗಳೂ ಕಾಣುವಷ್ಟರ ಮಟ್ಟಿಗೆ, ದೇಶದ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಒತ್ತು ಕೊಟ್ಟವರು. ಕಂಪ್ಯೂಟರ್ರು, ಮೊಬೈಲು, ಟ್ಯಾಬು ಇತ್ಯಾದಿ ಗ್ಯಾಜೆಟ್ಟುಗಳು ದೇಶದ ಜನರಿಗೆ ಸುಲಭ ದರಗಳಲ್ಲಿ ದೊರೆಯುವಂತೆ ಮಾಡಿದ್ದ ಆರ್ಥಿಕ ಕ್ಷೇತ್ರದ ಅಪರೂಪದ ಸಾಧಕ. ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲುಗುತ್ತಿದ್ದಾಗ, ಆಯೆಲ್ಲ ಆರ್ಥಿಕ ಸಂಕಟಗಳಿಗೆ ದೇಶ ಬಲಿಯಾಗದಂತೆ ಎಚ್ಚರ ವಹಿಸಿ ಭಾರತವನ್ನು ಕಾಪಾಡಿಕೊಂಡ ಮೌನ ಕ್ರಾಂತಿಕಾರ. ದೇಶದ ಜನರಿಗೆ ಸುಗಮವಾಗಿ ಸಕಾಲದಲ್ಲಿ ಸೇವೆಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಆಧಾರ್ ಕಾರ್ಡ್ ತಂದ ಪ್ರವರ್ತಕರು ಅವರು. ಅವರನ್ನು ಮೌನಿ ಮೌನಿ ಎಂದು ಮೂದಲಿಸಿ ಜರೆಯುತ್ತಿದ್ದ ವಿರೋಧಿಗಳೂ ಕೂಡ ಇಂದು, ಡಾ. ಸಿಂಗ್ ಸಾಹೇಬರು, ದೇಶಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಎಣಿಸುತ್ತಾ ಕೂತಿದ್ದಾರೆ.
ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ, ಟಿ, ಚಿಕ್ಕಣ್ಣ, ರಾಜ್ಯ ಸೇವಾದಳದ ಕಾರ್ಯದರ್ಶಿ ಕೆ ಜಿ ಕೃಷ್ಣೆಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಸುಗಂದರಾಜು, ಕೆಂಪಮ್ಮ, ಪುರಸಭೆ ಆಶ್ರಯ ಸಮಿತಿಸದಸ್ಯ ರಾದ ಸಿ, ಕೆ, ಪೀರ್ ಪಾಷಾ, ಸೇವಾದಳ ಅಧ್ಯಕ್ಷರಾದ ಗೋವಿಂದರಾಜು, ಸಣ್ಣತಾಯಮ್ಮ, ಜಾಣೆಹಾರ್ ಬಸವರಾಜ್, ಕೆಡಿಪಿ ಸದಸ್ಯ ರಾಮಚಂದ್ರಯ್ಯ, ಗ್ಯಾರಂಟಿ ಸಮಿತಿ ಸದಸ್ಯರಾದ ರೇಣುಕಾಸ್ವಾಮಿ, ಚಂದ್ರಯ್ಯ, ಓಂಕಾರಮೂರ್ತಿ, ಸಿದ್ದರಾಮಯ್ಯ, ಅಗಸರಹಳ್ಳಿ ನರಸಿಂಮೂರ್ತಿ, ಸೇವಾದಳದ ಮಾಜಿ ಜಿಲ್ಲಾಧ್ಯಕ್ಷ ನಿಶಾನಿ ಕಿರಣ್, ರಾಜು ಕರಿಯಪ್ಪ, ನೀಲಕಂಠಯ್ಯ, ದರ್ಘಾ ಜಾವೇದ್, ಚಿ ನಾ ಹಳ್ಳಿ ಜ಼ಾಕಿರ್ ಹುಸೇನ್, ಹೊನ್ನೇಬಾಗಿ ಜಾಫರ್, ಪ್ರಸನ್ನಕುಮಾರ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ