Friday, July 26, 2024
Google search engine
Homeತುಮಕೂರು ಲೈವ್ತುಮಕೂರು; ಕೋವಿಡ್ ಪಾಸಿಟಿವ್ ದರ ಇಳಿಕೆ- ಮಾಧುಸ್ವಾಮಿ

ತುಮಕೂರು; ಕೋವಿಡ್ ಪಾಸಿಟಿವ್ ದರ ಇಳಿಕೆ- ಮಾಧುಸ್ವಾಮಿ

ತುಮಕೂರು: ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಶೇಕಡಾವಾರು ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಳಿಕೆಯಾಗುತ್ತಿದೆ. ಆರಂಭದಲ್ಲಿ ಶೇ.45ರಷ್ಟಿದ್ದ ಪಾಸಿಟಿವ್ ಪ್ರಮಾಣ 40ಕ್ಕೆ ತಗ್ಗಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅವರು ತಿಳಿಸಿದರು.

ನಗರದ‌ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,‌ ವ್ಯಾಪಕವಾಗಿ ಹರಡುತ್ತಿದ್ದ ಕೋವಿಡ್-19 ನಿಯಂತ್ರಣ‌ಕ್ಕಾಗಿ ಜಿಲ್ಲಾಡಳಿತದಿಂದ ಹಾಸಿಗೆ, ಆಮ್ಲಜನಕ ಹಾಗೂ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಂಡ ಪರಿಣಾಮ ಕೋವಿಡ್ ನಿಯಂತ್ರಣದಲ್ಲಿ ಸುಧಾರಣೆ ಕಂಡು ಬಂದಿದೆ. ಸೋಂಕಿತರ ಚೇತರಿಕೆ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದರು.

ಬೆಂಗಳೂರು-ತುಮಕೂರು ಓಡಾಡುವವರ ಸಂಖ್ಯೆ ಹೆಚ್ಚಿದ್ದ ಕಾರಣ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿತ್ತು. ಆದರೆ,‌ ಸರ್ಕಾರದ ಅನುಮತಿಯಿಲ್ಲದ ಕಾರಣ ಆರಂಭದಲ್ಲಿ ಈ ಸಂಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ರೀತಿಯಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸೋಂಕಿನ ಪ್ರಮಾಣ ತಗ್ಗಲಿದೆ ಎಂದು ತಿಳಿಸಿದರು.

ಕಳೆದ ಏಪ್ರಿಲ್ ತಿಂಗಳಲ್ಲಿ 18749 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವರಲ್ಲಿ 8812 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು ಹಾಗು 69 ಸೋಂಕಿತರು ಸಾವನ್ನಪ್ಪಿದರು. ಅದೇ ರೀತಿ ಮೇ 1ರಿಂದ 12ರವರೆಗೆ 26790 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 12650 ಸೋಂಕಿತರು ಬಿಡುಗಡೆಯಾಗಿದ್ದಾರೆ ಹಾಗೂ 162 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

*ಅಕ್ಸಿಜನ್ ಸಮಸ್ಯೆಯಾಗದಂತೆ ಕ್ರಮ:*


ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಘಟಕ ಸ್ಥಾಪನೆ ಅಡಿಪಾಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇದಲ್ಲದೆ 110‌ ಆಮ್ಲಜನಕ ಸಾಂದ್ರಕಗಳ ಮೂಲಕವೂ ಸೋಂಕಿತರಿಗೆ ಆಮ್ಲಜನಕ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ‌.

ಕೈಗಾರಿಕೋದ್ಯಮಿಗಳಿಂದ 250 ಆಮ್ಲಜನಕ ಸಾಂದ್ರಕಗಳ ನೆರವು ಸಿಗಲಿದೆ. ಈ ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಿಗೂ ನೀಡಿ ಸೋಂಕಿತರಿಗೆ ಸಮಸ್ಯೆಯಾಗದಂತೆ ಆಮ್ಲಜನಕ ಪೂರೈಕೆ ಮಾಡಲಾಗುವುದು ಎಂದರು.

ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಉತ್ತಮ ಕಾರ್ಯ ನಡೆಯುತ್ತಿದೆ‌. ಇದರಿಂದ ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ತಗ್ಗಿದೆ. ಜಿಲ್ಲೆಗೆ 23ಕೆಎಲ್ ಆಮ್ಲಜನಕದ ಅಗತ್ಯವಿದ್ದು, ಸದ್ಯ 16ಕೆಎಲ್ ಮಾತ್ರ ಲಭ್ಯವಿದೆ. ಕೊರತೆಯಿರುವ ಆಮ್ಲಜನಕದ ಬೇಡಿಕೆ ಪೂರೈಸುವಂತೆ ಮನವಿ ಮಾಡಿದ್ದರಿಂದ 23ಕೆಎಲ್ ಆಮ್ಲಜನಕ ಹಂಚಿಕೆಯಾಗಿದ್ದು, ಅಗತ್ಯಕ್ಕನುಗುಣವಾಗಿ ಜಿಲ್ಲಾಸ್ಪತ್ರೆ,ತಾಲೂಕು ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡಲಾಗುವುದು
ಎಂದು ತಿಳಿಸಿದರು.

*ಕೋವಿಡ್ ಪರೀಕ್ಷೆ ಸುಸೂತ್ರ*


ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ. ತುಮಕೂರು ಹಾಗೂ ತಿಪಟೂರಿನಲ್ಲಿ ಲ್ಯಾಬ್ ಗಳಿದ್ದು, ತುಮಕೂರಿನ ಲ್ಯಾಬ್ ನಲ್ಲಿ ಸುಮಾರು ಎರಡೂವರೆ ಸಾವಿರ ಮತ್ತು ತಿಪಟೂರು ಲ್ಯಾಬ್ ನಲ್ಲಿ ಒಂದೂವರೆ ಸಾವಿರ ಪರೀಕ್ಷೆ ಮಾಡಲಾಗುತ್ತಿದೆ.

ಇದಲ್ಲದೆ ಶಿರಾದಲ್ಲೂ ಲ್ಯಾಬ್ ತೆರೆಯಲು ಯೋಜನೆ ರೂಪಿಸಲಾಗಿದ್ದು, ಶೀಘ್ರ ಪ್ರಾರಂಭವಾಗಲಿದೆ. ಈ ಲ್ಯಾಬ್ ನಲ್ಲಿಯೂ ಒಂದು ಸಾವಿರ ಕೋವಿಡ್ ಪರೀಕ್ಷೆ ಮಾಡಬಹುದು.‌ ಇದಲ್ಲದೆ, ಲ್ಯಾಬ್ ಆನ್ ರೋಡ್ ವಾಹನದ ಮೂಲಕವೂ ಸ್ಥಳಕ್ಕೆ ಹೋಗಿ ಟೆಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

*ಕೋವಿಡ್ ಆರೈಕೆ ಕೇಂದ್ರಕ್ಕೆ ಬನ್ನಿ*


ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಸೋಂಕಿತರು ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರನ್ನು ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಸೋಂಕು ಕುಟುಂಬಕ್ಕೆ ಹಬ್ಬುವುದನ್ನು ತಡೆಯಬಹುದು.‌ ಹಾಗಾಗಿ ಸೋಂಕಿತರು ಹೋಂ ಐಸೋಲೇಷನ್ ಬದಲಿಗೆ ಕೋವಿಡ್ ಕೇರ್ ಗೆ ಬಂದು‌ ಚಿಕಿತ್ಸೆ ಪಡೆಯುವಂತೆ ಮನವಿ‌ ಮಾಡಿದರು.

*ಅಗತ್ಯ ವಸ್ತುಗಳ ನೆರವಿಗೆ ಕ್ರಮ*


ಕುಟುಂಬ ಸದಸ್ಯರೆಲ್ಲರಿಗೂ ಸೋಂಕು ತಗುಲಿದ್ದರೆ ಅವರಿಗೆ ಊಟ-ತಿಂಡಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೂ ಜಿಲ್ಲಾಡಳಿತದಿಂದ ಕ್ರ‌ಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸೇವೆಗೆ ಮುಂದಾಗಿರುವ 350 ಎನ್ ಜಿಒಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಶಾ-ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ದೊರಕಿದೆ ಎಂದು ಹೇಳಿದರು.

*ಮೂರನೇ ಅಲೆ ನಿಗ್ರಹಕ್ಕೆ ಶಕ್ತಿ*


ಆಮ್ಲಜನಕ ಸೇರಿದಂತೆ ಸೋಂಕಿತರ ಆರೈಕೆಗೆ ಕೈಗೊಂಡಿರುವ ಕ್ರಮಗಳು ಕೋವಿಡ್ ಮೂರನೇ ಅಲೆ ನಿಗ್ರಹಕ್ಕೆ ಶಕ್ತಿಯಾಗಲಿದೆ. ಮೂರನೇ ಅಲೆ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು‌ ತಿಳಿಸಿದರು.

*ಸಮಸ್ಯೆಗಳು ನಿವಾರಣೆ*


ಆಮ್ಲಜನಕ, ರೆಮ್ಡಿಸಿವರ್ ಸೇರಿದಂತೆ ಬಹುತೇಕ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವರ್ ಕೊರತೆಯಿಲ್ಲ. ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಮಾಡಲಾದ ಸೋಂಕಿತರಿಗೂ ರೆಮ್ಡಿಸಿವರ್ ಅಭಾವವಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೊಂಚ ಸಮಸ್ಯೆ ಉಂಟಾಗಿದೆ ಎಂಬ ಮಾತುಗಳು‌ ಕೇಳಿಬಂದಿವೆ. ಅದರ ನಿವಾರಣೆಗೂ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು.

*ಎಬಿಆರ್ ಕೆ‌ ಸೋಂಕಿತರು ಹಣ ಕಟ್ಟುವಂತಿಲ್ಲ* ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಆಗಿ ದಾಖಲಾದ ಸೋಂಕಿತರನ್ನು ಎಬಿಆರ್ ಕೆ ಅಡಿಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಣ ಪಡೆಯುವಂತಿಲ್ಲ.‌ ಚಿಕಿತ್ಸೆ ನೀಡಲು ಹಣ ಪಡೆದ ಬಗ್ಗೆ ದಾಖಲೆ ಸಮೇತ ಮಾಹಿತಿ ಒದಗಿಸಿದರೆ ಕ್ರ‌ಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ. ಡಾ.ಕೆ ವಿದ್ಯಾಕುಮಾರಿ, ಎಸ್ ಪಿ ಡಾ.ಕೆ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಡಿಎಚ್ಒ ಡಾ.ನಾಗೇಂದ್ರಪ್ಪ ಸೇರಿದಂತೆ ಇತರರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?