Friday, March 29, 2024
Google search engine
Homeಜಸ್ಟ್ ನ್ಯೂಸ್ಮೂಕ ಲೋಕಕ್ಕೆ ಮಾತು ನೀಡಿದ ಡಾ ಮಿರ್ಜಾ ಬಷೀರ್: ಚ ಹ ರಘುನಾಥ್ ಬಣ್ಣನೆ

ಮೂಕ ಲೋಕಕ್ಕೆ ಮಾತು ನೀಡಿದ ಡಾ ಮಿರ್ಜಾ ಬಷೀರ್: ಚ ಹ ರಘುನಾಥ್ ಬಣ್ಣನೆ

ಬಹುರೂಪಿ ಕೃತಿ ಬಿಡುಗಡೆ ಸಮಾರಂಭ

ತುಮಕೂರು: ಆಹಾರ ರಾಜಕಾರಣವನ್ನು ಪದೇ ಪದೇ ಮುಂದು ಮಾಡುತ್ತಿರುವ ಈ ದಿನಗಳಲ್ಲಿ ದನಗಳ ಜೀವವನ್ನು ವೃತ್ತಿಯುದ್ದಕ್ಕೂ ಕಾಪಾಡಿದ ಡಾ ಮಿರ್ಜಾ ಬಷೀರರ ಕೃತಿ ಹೊಸದೇ ಸತ್ಯವನ್ನು ನುಡಿಯುತ್ತಿದೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಚ ಹ ರಘುನಾಥ್ ಅವರು ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ, ಜೆಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಲೇಖಕಿಯರ ಸಂಘದ ಜೊತೆಗೂಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಡಾ ಮಿರ್ಜಾ ಬಷೀರ್ ಅವರ ‘ಗಂಗೆ ಬಾರೆ ಗೌರಿ ಬಾರೆ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ʼನೋಡಿ ಸಾಬರಾದರೂ ಬಷೀರ್‌ ಡಾಕ್ಟ್ರು ಅಂಥವರಲ್ಲʼ ಎನ್ನುವ ಒಂದು ಪ್ರಸಂಗ ಈ ಕೃತಿಯಲ್ಲಿ ಬರುತ್ತದೆ. ಅದನ್ನು ಹೇಳಿದಾತ ಅಮಾಯಕತೆಯಿಂದಲೇ ಅದನ್ನು ಹೇಳಿದ್ದರೂ ಅದನ್ನು ಗುಮಾನಿಯ ಮಾತಿನಂತೆಯೂ, ಪೂರ್ವಾಗ್ರಹದಂತೆಯೂ ನೋಡುವ ಸಾಧ್ಯತೆ ಇದೆ. ಇಂದು ಆಹಾರದ ವಿಷಯವಾಗಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ದನಗಳನ್ನು ಸಾಗಿಸಿದ ಕಾರಣಕ್ಕೆ ಹಲ್ಲೆಗೊಳಗಾದ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ದನಗಳ ಜೀವ ರಕ್ಷಿಸುತ್ತಾ ಬಂದಿರುವುದು ಈ ಪುಸ್ತಕವನ್ನು ಬೇರೆ ನೆಲೆಯಲ್ಲಿ ನೋಡಬೇಕು ಎಂದು ಸೂಚಿಸುತ್ತೆ.

ಡಾ ಮಿರ್ಜಾ ಬಷೀರರ ಕೃತಿ ಒಬ್ಬ ವೈದ್ಯ, ಸಮಾಜ ವಿಜ್ಞಾನಿಯಾದಾಗ ರೂಪು ತಳೆಯುವ ವಿಶೇಷ ಕೃತಿ ಎಂದು ಅವರು ಪ್ರಶಂಶಿಸಿದರು. ಈ ಸಮಾಜ ವಿಜ್ಞಾನಿ ನಾವು ಗ್ರಾಮಭಾರತದ ಮರೆತಿರುವ ಚಿತ್ರಗಳನ್ನು ನಮ್ಮ ಕಣ್ಮುಂದೆ ತರುತ್ತಾರೆ. ಬಹುತ್ವದ ದರ್ಶನವನ್ನು ಮಾಡಿಸುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿದ್ದ ಖ್ಯಾತ ಕಲಾವಿದ ಬಿ ಜಿ ಗುಜ್ಜಾರಪ್ಪ ಅವರು ಮಾತನಾಡಿ ಗಂಗೆ ಬಾರೆ ಗೌರಿ ಬಾರೆ ಕೃತಿ ನನ್ನೊಳಗೆ ನೆನಪಿನ ಸರಮಾಲೆಯನ್ನೇ ಹರಡಿತು. ಬಷೀರ್‌ ಅವರ ಪುಸ್ತಕಕ್ಕೆ ಚಿತ್ರ ಬರೆಯುವಾಗ ಬಹಳ ಖುಷಿಯಾಯ್ತು. ಹನ್ನೆರಡು ವರ್ಷಗಳ ಕಾಲ ಹಳ್ಳಿಯಲ್ಲಿ ದನಗಳು, ಪ್ರಾಣಿಗಳ ನೋವು ನೋಡುತ್ತಲೇ ಬೆಳೆದಿದ್ದೆ. ಆ ಮೂಕ ಲೋಕದ ಸಂಕಷ್ಟಗಳು ನನ್ನ ಕಣ್ಣೆದುರು ಸುಳಿದವು ಎಂದರು.

ಪ್ರಕಾಶಕ, ಸಾಹಿತಿ ಜಿ ಎನ್ ಮೋಹನ್ ಅವರು ಮಾತನಾಡಿ ಪುಸ್ತಕಗಳನ್ನು ದ್ವೇಷಿಸುವ, ಅಕ್ಷರದ ಬಗ್ಗೆ ಅಸಹನೆ ಇರುವ ಪ್ರಭುತ್ವದ ಕಾಲದಲ್ಲಿ ನಾವು ಇದ್ದೇವೆ. ಪ್ರಕಾಶನ ಲೋಕ ಪರೋಕ್ಷ ತೆರಿಗೆಗಳ ಸಂಕಷ್ಟದಲ್ಲಿ ಸಿಲುಕಿದೆ. ಪುಸ್ತಕಗಳು ಸದಾ ಪ್ರಜ್ಞೆಯನ್ನು ಜಾಗೃತಗೊಳಿಸುವ, ಪ್ರಶ್ನಿಸಲು ಪ್ರೇರೇಪಿಸಿವ ಗುಣವನ್ನು ಹೊಂದಿವೆ. ಪ್ರಭುತ್ವಕ್ಕೆ ಇದೇ ಸಂಕಷ್ಟ ತಂದೊಡ್ಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ನೂತನ ರಾಜ್ಯ ಅಧ್ಯಕ್ಷೆಯಾದ ಡಾ ಎಚ್ ಎಲ್ ಪುಷ್ಪ ಅವರು ಮಾತನಾಡಿ ಡಾ ಮಿರ್ಜಾ ಬಷೀರ್ ಅವರ ಕೃತಿ ಅನೇಕ ಆಯಾಮಗಳನ್ನು ಹೊಂದಿರುವ ಕೃತಿ. ಮಾನವೀಯತೆಯನ್ನು ಎತ್ತಿ ಹಿಡಿಯುವ ಕೃತಿ. ಮೂಕ ಲೋಕಕ್ಕೆ ದನಿ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.

ಕೃತಿಕಾರರಾದ ಡಾ ಮಿರ್ಜಾ ಬಷೀರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಜಿ ಮಲ್ಲಿಕಾ ಬಸವರಾಜು, ಖ್ಯಾತ ಕಲಾವಿದರಾದ ಆರ್ ಸೂರಿ, ಪ್ರಥಮ್ ಬುಕ್ಸ್ ನ ಹೇಮಾ ಧ ಖುರ್ಸಾಪೂರ, ಕವಿ ಮೆಹಬೂಬ್ ಮಠದ ಕೊಪ್ಪಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
—-

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?