ತುರುವೇಕೆರೆ: ಹೇಮಾವತಿ ಜಲಾಶಯದಿಂದ ಎನ್.ಬಿ.ಸಿ ನಾಲೆಯ ಮೂಲಕ ತಾಲ್ಲೂಕಿನ ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಗೆ ಕುಡಿಯುವ ನೀರು ಹರಿಸಬೇಕೆಂದು ಆಗ್ರಹಿಸಿ ಮಾ.25ರಂದು ಪಟ್ಟಣದ ಹೇಮಾವತಿ ಕಚೇರಿ ಎದುರು ಅಪಾರ ಸಂಖ್ಯೆಯ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್.ಬಿ.ಸಿ ನಾಲಾ ನೀರನ್ನು ಬಹು ಗಾಮ ಕುಡಿಯುವ ನೀರಿನ ಯೋಜನೆಯಡಿ ಮಾಯಸಂದ್ರ, ತಂಡಗ ಮತ್ತು ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಬೇಕಿತ್ತು ಆದರೆ 2023ರಿಂದ ಇಲ್ಲಿಯ ತನಕ ಎನ್.ಬಿ.ಸಿ ನಾಲೆಯಿಂದ ಒಂದು ಹನಿ ನೀರು ಹರಿಸಿಲ್ಲ. ಇದರಿಂದ ಜನ ಜಾನುವಾರುಗಳು ನೀರಿಗಾಗಿ ಹಾಹಾಕಾರ ಎದುರಿಸುತ್ತಿವೆ.
ಎನ್.ಬಿ.ಸಿ ನಾಲೆಯಿಂದ ನೀರು ಹರಿಸುವಂತೆ ಹಲವು ಬಾರಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣರಿಗೂ ಮನವಿ ಮಾಡಲಾಗಿದೆ ಆದರೂ ನೀರು ಹರಿಸಿಲ್ಲ. ಕೂಡಲೇ ನೀರನ್ನು ಸೋಮವಾರದೊಳಗೆ ಹರಿಸಬೇಕು ಇಲ್ಲವಾದರೆ ಮಾ.25ರಂದು ಪಟ್ಟಣದ ಜೆಡಿಎಸ್ ಕಚೇರಿಂದ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಮೇರವಣಿಗೆ ಹೊರಟು ಹೇಮಾವತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ನೀರು ಬಿಡುವವರೆವಿಗೂ ಧರಣಿ ಕೂರಲಾಗುವುದೆಂದು ಎಚ್ಚರಿಸಿದರು. ಈಗಾಗಲೇ ಟಿ.ಬಿ.ಸಿ ನಾಲೆಯಿಂದ ದಂಡಿನಶಿವರ ಮತ್ತು ಕಸಬಾ ಹೋಬಳಿಯ ಕೆರೆಗಳಿಗೆ 5.5 ಟಿಎಂಸಿ ನೀರು ಹರಿಸಿರುವುದು ಸಂತೋಷದಾಯಕ.
ಜೆಡಿಎಸ್- ಬಿಜೆಪಿ ಜಂಟಿ ಸಭೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ 11 ಗಂಟೆಗೆ ಜೆಡಿಎಸ್ ಕಚೇರಿಯಿಂದ ವಿರಕ್ತಮಠದವರೆಗೆ ಜೆಡಿಎಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ ಇದೆ. ಅಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಕಾರ್ಯಕರ್ತರ ಸಭೆ ಕರೆಯಲಾಗಿದ್ದು ಸಭೆಗೆ ಅಭ್ಯರ್ಥಿ ವಿ.ಸೋಮಣ್ಣ ಆಗಮಿಸಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಎಸ್.ಪಿ.ಎಂ ಸ್ಪಷ್ಟನೆ ನೀಡಲಿ: ಮೇಕೆದಾಟು ಯೋಜನೆ ಜಾರಿಗಾಗಿ ಈ ಹಿಂದೆ ಕಾಂಗ್ರೆಸ್ ನವರು ಪಾದಯಾತ್ರೆ ನಡೆಸಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ನವರು ತಮಿಳುನಾಡಿ ಸರ್ಕಾರದ ಜೊತೆ ಶಾಮೀಲಾಗಿ ಮೇಕೆದಾಟು ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಹಾಗಾಗಿ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದಾರೆ. ಅವರು ಐಎನ್.ಡಿಎಯಲ್ಲೇ ಇರುತ್ತಾರೆಯೇ ಅಥವಾ ಅದರಿಂದ ಹೊರಗೆ ಬರುತ್ತಾರೆಯೇ ಎಂಬು ನಿಲುವನ್ನು ಮೊದಲು ಜನತೆಯ ಎದುರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವೆಂಕಟಾಪುರ ಯೋಗೀಶ್, ಮುನಿಯೂರು ರಂಗಸ್ವಾಮಿ, ಹೊನ್ನೇನಹಳ್ಳಿ ಕೃಷ್ಣಪ್ಪ, ಹೆಡಗಿಹಳ್ಳಿವಿಶ್ವನಾಥ್ ಇತರರು ಇದ್ದರು.