Publicstory/prajayoga

ತುಮಕೂರು: ರಾಜ್ಯ ಮಟ್ಟದ ಆಹಾರ ಜಾಗೃತಿ ಮತ್ತು ತನಿಖಾ ದಳವು 2021ರ ಆಗಸ್ಟ್ 17ರಂದು ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಂಕರ್ ರೈಸ್ ಇಂಡಸ್ಟ್ರಿಯಲ್ಗೆ ಭೇಟಿ ನೀಡಿ ತನಿಖೆ ನಡೆಸಿದಾಗ ಲಾರಿ ಸಂಖ್ಯೆ ಕೆಎ-07-6598ರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 474 ಚೀಲ(2.7291 ಕ್ವಿಂಟಾಲ್) ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಅಕ್ಕಿಯನ್ನು ಆಗಸ್ಟ್ 5ರ ಬೆಳಿಗ್ಗೆ 11 ಗಂಟೆಗೆ ಶಿರಾ ರಸ್ತೆ ಡಿ.ಸಿ.ಬಂಗಲೆ ಬಳಿ ಇರುವ ಕೆಎಫ್ಸಿಎಸ್ಸಿ ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ತಹಶೀಲ್ದಾರ್ ಮೋಹನ್ ಕುಮಾರ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಕಾಯ್ದೆ 1955 ಕ್ಲಾಸ್ 6ಎ ಅಡಿ ಅಕ್ಕಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಕ್ಕಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶಿರಾ ರಸ್ತೆ ಡಿ.ಸಿ.ಬಂಗಲೆ ಬಳಿ ಇರುವ ಕೆಎಫ್ಸಿಎಸ್ಸಿ ಸಗಟು ಮಳಿಗೆಯಲ್ಲಿ ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದೆ.
ದಾಸ್ತಾನಿನ ಮಾದರಿಯನ್ನು ಹರಾಜಿನ ದಿನದಂದು ಹರಾಜಿನಲ್ಲಿ ಭಾಗವಹಿಸುವವರು ಪರಿಶೀಲಿಸಲು ಅವಕಾಶವಿದ್ದು, ಆಸಕ್ತರು ನಿಗಧಿತ ಸಮಯಕ್ಕೆ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಬಹಿರಂಗ ಹರಾಜು ದಿನ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಬಿಡ್ದಾರರು ಶೇ.50ರಷ್ಟು ಮೊತ್ತವನ್ನು ಪಾವತಿಸಬೇಕು. ಬಿಡ್ ದಿನ ಹೊರತುಪಡಿಸಿ 3 ದಿನಗಳೊಳಗಾಗಿ ಉಳಿದ ಮೊತ್ತವನ್ನು ಪಾವತಿಸಿ ಅಕ್ಕಿಯ ದಾಸ್ತಾನನ್ನು ಎತ್ತುವಳಿ ಮಾಡತಕ್ಕದ್ದು. ಇಲ್ಲವಾದಲ್ಲಿ ಶೇ. 50ರಷ್ಟು ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಬಿಡ್ದಾರರು ತಮ್ಮ ದಾಖಲೆ ಹಾಗೂ ಗುರುತಿನ ಚೀಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸತಕ್ಕದ್ದು ಎಂದು ಅವರು ತಿಳಿಸಿದ್ದಾರೆ.