Thursday, March 28, 2024
Google search engine
HomeಜನಮನTumukuru: 6 ಅಂತಸ್ತಿನ ಹೊಸ ಬಸ್ ನಿಲ್ದಾಣ ಹೇಗಿರಲಿದೆ ಗೊತ್ತಾ?

Tumukuru: 6 ಅಂತಸ್ತಿನ ಹೊಸ ಬಸ್ ನಿಲ್ದಾಣ ಹೇಗಿರಲಿದೆ ಗೊತ್ತಾ?

ಲೇಖನ: ಆರ್.ರೂಪಕಲಾ


Tumukuru: ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ತುಮಕೂರು ನಗರದಲ್ಲಿ ಈಗಿರುವ ಹಳೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಹೊಸ ಸ್ವರೂಪವನ್ನು ನೀಡುವ ಮೂಲಕ ಹೈಟೆಕ್ ಬಸ್ ನಿಲ್ದಾಣವನ್ನಾಗಿ ನಿರ್ಮಿಸಲು ಹೊರಟಿದೆ.

ಈ ಹೈಟೆಕ್ ಬಸ್ ನಿಲ್ದಾಣವು ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್, ನಗರ ಬಸ್ ಹಾಗೂ ಅಂತರ ನಗರ ಬಸ್‍ಗಳಿಗೆ ಪ್ರತ್ಯೇಕ ನಿಲ್ದಾಣ, ಕ್ಯಾಂಟೀನ್, ರೆಸ್ಟ್ ರೂಂ ಹೀಗೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದ್ದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ನಡುವೆ ಸುಲಭವಾಗಿ ಪ್ರಯಾಣಿಕರಿಗೆ ಸಂಪರ್ಕ ಸಾಧಿಸಲು ನೆರವಾಗುವಂತೆ ವಿನ್ಯಾಸವನ್ನು ರೂಪಿಸಲಾಗುತ್ತಿದೆ.

ನಗರದ ಮಧ್ಯ ಭಾಗದಲ್ಲಿರುವ ಈ ಉದ್ದೇಶಿತ ಸಂಯೋಜಿತ ಬಸ್ ನಿಲ್ದಾಣವು ವಾಣಿಜ್ಯ ಕೇಂದ್ರವಾಗಿ ಮಾರ್ಪಡಾಗಲಿದೆ.

ವಿಶ್ವ ದರ್ಜೆಯ ಬಸ್ ನಿಲ್ದಾಣವನ್ನಾಗಿಸುವ ಯೋಜನೆ:

ತುಮಕೂರು ಬಸ್ ನಿಲ್ದಾಣದಿಂದ ರಾಜ್ಯದ ವಿವಿಧೆಡೆಗೆ ಪ್ರತಿನಿತ್ಯ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗಧೂತ ಸಾರಿಗೆಗಳು ಸೇರಿ ಸುಮಾರು 2,992 ಬಸ್‍ಗಳು ಸಂಚರಿಸುತ್ತವೆ.


ಬಹುತೇಕ ಜಿಲ್ಲೆಗಳಿಗೆ ಈ ನಿಲ್ದಾಣ ಸಂಪರ್ಕ ಕೊಂಡಿಯಾಗಿದ್ದರೂ ಸಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿತ್ತು. ಸಮರ್ಪಕ ಶೌಚಾಲಯ ವ್ಯವಸ್ಥೆ, ತಂಗಲು ಕೊಠಡಿಗಳಿಲ್ಲದೆ ಮತ್ತು ಇತರೆ ಸೌಕರ್ಯಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.

ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಸಂಸ್ಥೆಯು ಹಳೆಯ ನಿಲ್ದಾಣವನ್ನು ವಿಶ್ವ ದರ್ಜೆಯ ನೂತನ ಇಂಟಿಗ್ರೇಟೆಡ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಿ ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರಿಗೆ ನೆರವಾಗುವ ಜೊತೆಗೆ ಪ್ರಯಾಣಿಕರು ಮತ್ತು ಸರಕುಗಳ ಸುಗಮ ಸಾಗಾಟಕ್ಕೆ ಅನುಕೂಲವಾಗುವಂತೆ ಒಳಾಂಗಣವನ್ನು ರೂಪಿಸಲು ಯೋಜಿಸಿದೆ.

82 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ:


ಸ್ಮಾರ್ಟ್ ಸಿಟಿ ಸಂಸ್ಥೆಯು ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯಡಿ ಈ ಬಹುಮಹಡಿಯ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ತುಮಕೂರು ಜನತೆಯ ನೂತನ ನಿಲ್ದಾಣದ ಬಹುದಿನದ ಬೇಡಿಕೆ ಕೆಲವೇ ವರ್ಷದಲ್ಲಿ ಈಡೇರಲಿದೆ.

ನಗರದ ಈಗಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಳೆಯ ಕಟ್ಟಡಗಳನ್ನು ಈಗಾಗಲೇ ನೆಲಸಮಗೊಳಿಸುವ ಕಾರ್ಯ ಚಾಲನೆಗೊಂಡಿದ್ದು, ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಕೆಎಸ್‍ಆರ್‍ಟಿಸಿ ಸಹಭಾಗಿತ್ವದಲ್ಲಿ 82 ಕೋಟಿ ರೂ.ಗಳ ವೆಚ್ಚದಲ್ಲಿ ಈ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣವಾಗಲಿದೆ.

ಹೈಟೆಕ್ ನಿಲ್ದಾಣವು ಒಟ್ಟು 6 ಅಂತಸ್ತುಗಳನ್ನು ಒಳಗೊಂಡಿದ್ದು, 4.39 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ.

ಹೈಟೆಕ್ ಬಸ್ ನಿಲ್ದಾಣದ ಎರಡು ಮಹಡಿಗಳಲ್ಲಿ ವಾಣಿಜ್ಯ ಪ್ರದೇಶವನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ಬರುವ ಆದಾಯವನ್ನು ಕೆಎಸ್‍ಆರ್‍ಟಿಸಿ ಹಾಗೂ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಸಂಸ್ಥೆಗಳು ಪಡೆಯಲಿವೆ.

ಕೆಳಗಿನ ಎರಡು ಅಂತಸ್ತುಗಳಲ್ಲಿ ಅಂದರೆ ಬಿ1 (ಬೇಸ್ಮೆಂಟ್ -1) ಮತ್ತು ಬಿ2 (ತಳ ಬೇಸ್ಮೆಂಟ್ ಮೇಲಿನ ಅಂತಸ್ತು) ಪ್ರದೇಶದಲ್ಲಿ ದ್ವಿಚಕ್ರ ಮತ್ತು ಕಾರು ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಲಾಗುವುದು.

ನಗರ ಸಾರಿಗೆ ಬಸ್ಸುಗಳು (30 ಸಂಖ್ಯೆ), ಉಪಹಾರ ಮಂದಿರ, ಬುಕ್ಕಿಂಗ್ ಆಫೀಸ್, ಕಂಟ್ರೋಲ್ ರೂಂ, ರೆಕರ್ಡ್ ರೂಂ, ಮತ್ತು ವಿಚಾರಣೆ ಕೇಂದ್ರ, ಮಹಿಳಾ ನಿರೀಕ್ಷಣಾ ಕೊಠಡಿ, ಮತ್ತು ಶೌಚಾಲಯಗಳು. ಅಂತರ್ ನಗರ ಸಾರಿಗೆ ಬಸ್ಸುಗಳು (35 ಸಂಖ್ಯೆ), ಉಪಹಾರ ಮಂದಿರ, ಬುಕ್ಕಿಂಗ್ ಆಫೀಸ್, ಕಂಟ್ರೋಲ್ ರೂಂ, ರೆಕಾರ್ಡ್ ರೂಂ, ಮತ್ತು ವಿಚಾರಣಾ ಕೇಂದ್ರ, ಮಹಿಳಾ ನಿರೀಕ್ಷಣಾ ಕೊಠಡಿ, , ಶೌಚಾಲಯಗಳನ್ನು ನಿರ್ಮಿಸಲಾಗುವುದು.

ಮೊದಲನೇ, ಎರಡನೇ ಹಾಗೂ ಮೂರನೇ ಅಂತಸ್ತಿನಲ್ಲಿ ತಲಾ 4 ವಾಣಿಜ್ಯ ಮಳಿಗೆಗಳು, ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್ಸ್, ಲಿಫ್ಟ್ ಮತ್ತು (ಚಲಿಸುವ ಮೆಟ್ಟಿಲುಗಳು) ಗಳನ್ನು ಅಳವಡಿಸಲಾಗುವುದು. ನಿಲ್ದಾಣಕ್ಕೆ


ಡಿಜಿಟಲ್ ಟಚ್:


ಇದರ ಜೊತೆಗೆ ತುಮಕೂರು ನಗರ ಸಾರಿಗೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಇರುವ 49 ಸಿಟಿ ಬಸ್ ಗಳಿಗೆ ವಾಹನಗಳ ಟ್ರ್ಯಾಕಿಂಗ್ ವ್ಯವಸ್ಥೆ, ಸಾರ್ವಜನಿಕ ಪ್ರಯಾಣಿಕರ ಮಾಹಿತಿಗಾಗಿ ಎಲ್‍ಇಡಿ ಡಿಸ್‍ಪ್ಲೇ ಮತ್ತು ಸಿ.ಸಿ. ಟಿ.ವಿ. ಕ್ಯಾಮರಾ ಅಳವಡಿಕೆ, ಪ್ರಮುಖ ತಂಗುದಾಣಗಳಲ್ಲಿ ಡಿಸ್‍ಪ್ಲೇ ಅಳವಡಿಕೆ, ಮೊಬೈಲ್ ಅಪ್ಲಿಕೇಷನ್ ಮೂಲಕ ನಗರ ಸಾರಿಗೆ ಬಸ್‍ಗಳ ಮಾಹಿತಿ ಹಾಗೂ ಬಸ್ ನಿಲ್ದಾಣದಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪನೆ, ವೈಫೈ ಸೇರಿದಂತೆ ನಿಲ್ದಾಣಕ್ಕೆ ಡಿಜಿಟಲ್ ಟಚ್ ನೀಡುವ ಯೋಜನೆಯನ್ನು ರೂಪಿಸಲಾಗಿದೆ.



ಪ್ರಯಾಣಿಕರಿಗೆ ಸ್ಮಾರ್ಟ್ ಸೌಲಭ್ಯ:

ಬಸ್ ನಿಲ್ದಾಣ ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಗಡಿಭಾಗದಲ್ಲಿರುವ ಪ್ರಮುಖ ನಗರ ತುಮಕೂರಿಗೆ ಎಲ್ಲ ಬಗೆಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ ಜನರಿಗೆ ಗುಣಮಟ್ಟದ ಜೀವನ ನಡೆಸಲು ಅನುಕೂಲ ಕಲ್ಪಿಸುವುದು ಸ್ಮಾರ್ಟ್ ಸಿಟಿ ಸಂಸ್ಥೆಯ ಉದ್ದೇಶವಾಗಿದೆ. ಪ್ರಯಾಣಿಕರ ತಂಗುವಿಕೆ, ಫುಡ್ ಸ್ಟಾಲ್, ಹೈಟೆಕ್ ಆಸನದ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಆಧುನಿಕ ಶೌಚಾಲಯ, ಪ್ರಯಾಣಿಕರಿಗೆ ಸ್ಮಾರ್ಟ್ ಸೌಲಭ್ಯಗಳು ದೊರಕಲಿವೆ.

ಈ ನಿಟ್ಟಿನಲ್ಲಿ ತುಮಕೂರು ನಗರದ ಒಟ್ಟಾರೆ ಬೆಳವಣಿಗೆಗೆ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಆದ್ಯತೆ ನೀಡುತ್ತಿದ್ದು, ತಾತ್ಕಾಲಿಕವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಡಿಪೋಗೆ ಸ್ಥಳಾಂತರಿಸಲಾಗಿದೆ.

ನಗರದ ಜನತೆಗೆ ಈ ಕಾಮಗಾರಿಯಿಂದ ತೊಂದರೆಗಳಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದ್ದಾರೆ.


ಲೇಖಕರು ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?