ನವದೆಹಲಿ: ಕೇಂದ್ರ ಸಚಿವೆ ಸದನದಲ್ಲಿ ಈರುಳ್ಳಿ ಬಗ್ಗೆ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ‘ನಾನು ಈರುಳ್ಳಿ ಹೆಚ್ಚು ತಿನ್ನುವುದಿಲ್ಲ, ತಲೆಕೆಡಿಸಿಕೊಳ್ಳಬೇಡಿ. ಈರುಳ್ಳಿ ಮತ್ತು ಬೆಳ್ಳುಳ್ಳಿ ಉಪಯೋಗಿಸದ ಕುಟುಂಬದಿಂದ ಬಂದಿದ್ದೇನೆ’ ಎಂದು ಹೇಳಿದ್ದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
‘ನಿರ್ಮಲಾ ಅವರಿಗೆ ಜನರ ಪರಿಸ್ಥಿತಿ ಅರ್ಥವಾಗುತ್ತಿಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ. ಅವರು ತಮ್ಮ ಜಾತಿಯನ್ನು ಎತ್ತಿಹಿಡಿಯುವ ಮಾತು ಆಡಿದ್ದಾರೆ. ಯಾವ ಕುಟುಂಬದ ಹಿನ್ನೆಲೆಯಿಂದ ಬಂದರು ಎಂಬುದನ್ನು ಸದನದಲ್ಲಿ ತಿಳಿಸುವ ಅಗತ್ಯವಿಲ್ಲ. ಜನತೆಯ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದರೆ ಸಾಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿದೆ.
ಈರುಳ್ಳಿಯ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ವಿವರಿಸುತ್ತಿದ್ದರು. ಆಗ ದೇಶದಲ್ಲಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಈಜಿಪ್ಟ್ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.
ಅವರ ಮಾತನ್ನು ಅರ್ಧದಲ್ಲೇ ತಡೆದ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ‘ನೀವೂ ಈಜಿಪ್ಟ್ ಈರುಳ್ಳಿ ತಿನ್ನುತ್ತೀರಾ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಅವರು ಮೇಲಿನಂತೆ ಉತ್ತರ ನೀಡಿದ್ದರು.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿ, ತಾವು ಈರುಳ್ಳಿ ತಿನ್ನುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಹೇಳಿದ್ದಾರೆ. ಮತ್ತೇನು, ಅವರು ಬೆಣ್ಣೆಹಣ್ಣು ತಿನ್ನುತ್ತಾರೆಯೇ?
ಎಂದು ಪ್ರಶ್ನಿಸಿದ್ದಾರೆ.
Comment here