Thursday, May 22, 2025
Google search engine
HomeUncategorizedಕಾರ್ಮಿಕರಿಗೆ ಅಂಬೇಡ್ಕರ್ ಮಾಡಿದ್ದೇನು?: ಇವು ಎಲ್ಲ ಕಾರ್ಮಿಕರಿಗೂ ತಿಳಿದಿರಬೇಕಾದ ವಿಷಯ...

ಕಾರ್ಮಿಕರಿಗೆ ಅಂಬೇಡ್ಕರ್ ಮಾಡಿದ್ದೇನು?: ಇವು ಎಲ್ಲ ಕಾರ್ಮಿಕರಿಗೂ ತಿಳಿದಿರಬೇಕಾದ ವಿಷಯ…

ಲೇಖನ: ಹೆತ್ತೇನಹಳ್ಳಿ ಮಂಜುನಾಥ್

ಅಂಬೇಡ್ಕರ್

ಮೇ 1 ರಂದು ವಿಶ್ವದೆಲ್ಲೆಡೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಕಾರ್ಮಿಕರೆಲ್ಲ ಒಂದಾಗಿರಿ ಎಂಬುದು ಈ ದಿನದ ಘೋಷ ವಾಕ್ಯ. ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಮಿಕರ ಪಾತ್ರವು ಮಹತ್ತರವಾದದ್ದು. ಸಾವಿರಾರು ವರ್ಷಗಳ ಕಾರ್ಮಿಕ ವರ್ಗವು ಜಗತ್ತಿನ ಕಲ್ಯಾಣಕ್ಕಾಗಿ ತ್ಯಾಗ ಮಾಡಿದೆ ಮಾಡುತ್ತಲೆ ಬಂದಿದೆ ಆದರೆ ಆ ವರ್ಗದ ಹಿತ ಕಾಯುವಲ್ಲಿ ಬಹುತೇಕ ರಾಷ್ಟ್ರಗಳು ಸೋತಿವೆ & ಹಿಂದಿವೆ.

ಭಾರತದಂತಹ ಬಹುತ್ವದ ರಾಷ್ಟ್ರದಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಎತ್ತಿ ಹಿಡಿದು ಕಾರ್ಮಿಕರ ಸುಭದ್ರತೆಗೆ ಭದ್ರ ಬುನಾದಿಯಾಕಿ ಸಂರಕ್ಷಿಸಿದ್ದು ಬಾಬಾ ಸಾಹೇಬರೆನ್ನುವುದನ್ನು ಈ ದೇಶ ಎಂದು ಮರೆಯುವಂತಿಲ್ಲಾ.

ಶೋಷಿತರ ಜೀವನವನ್ನು ಗುಲಾಮಗಿರಿಗೆ ತಳ್ಳಿದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಹೋರಾಡುವುದರೊಂದಿಗೆ ದೇಶದ ಬಹುದೊಡ್ಡ ಭಾಗವಾದ ಮಹಿಳೆಯರು, ಮಾನವ ಹಕ್ಕುಗಳು & ಕಾರ್ಮಿಕರ ಕಲ್ಯಾಣಕ್ಕೂ ಹೋರಾಡಿದ್ದು ಅವರಲ್ಲಿದ್ದ ಬದ್ಧತೆ & ದೇಶಪ್ರೇಮ ನಮ್ಮನ್ನು ಮತ್ತೆ ಮತ್ತೆ ಬಾಬಾ ಸಾಹೇಬರನ್ನ ಚಿಂತನೆಗಳತ್ತ ಕೊಂಡೊಯ್ಯಲು ಪ್ರೇರಿಪಿಸುತ್ತದೆ.

ಅನೇಕ ಕಾರ್ಮಿಕ ಹೋರಾಟಗಳು ಅನೇಕ ನಾಯಕರುಗಳ ನೇತೃತ್ವದಲ್ಲಿ ಇತಿಹಾಸದುದ್ದಕ್ಕೂ ನಡೆದಿವೆ, ಭಾರತದ ಕಾರ್ಮಿಕರ ವಿಚಾರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿರ್ವಹಿಸಿದ ಕಾರ್ಯ ಮಾತ್ರ ಅವಿಸ್ಮರಣೀಯವಾದದ್ದು. ದುಂಡು ಮೇಜಿನ ಸಮ್ಮೇಳನದಲ್ಲಿ ಶೋಷಿತ ವರ್ಗಗಳ ಪ್ರತಿನಿಧಿಯಾಗಿದ್ದ ಬಾಬಾ ಸಾಹೇಬರು ಕಾರ್ಮಿಕರ ಜೀವನ, ವೇತನ, ಕೆಲಸದ ಪರಿಸ್ಥಿತಿಗಳು & ಕ್ರೂರ ಭೂ-ಮಾಲೀಕರ ಹಿಡಿತದಿಂದ ರೈತರ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದರು.

ಬಾಬಾ ಸಾಹೇಬರು ಭೂರಹಿತ ಬಡ ಗೇಣಿದಾರರು, ಕೃಷಿಕರು, ಕಾರ್ಮಿಕರ ಅಗತ್ಯತೆಗಳು & ಕುಂದುಕೊರತೆಗಳನ್ನು ಪೂರೈಸುವ ಸಮಗ್ರ ಪ್ರಣಾಳಿಕೆಯೊಂದಿಗೆ/ಕಾರ್ಯಸೂಚಿಯೊಂದಿಗೆ 1936 ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ಸ್ವತಂತ್ರ ಕಾರ್ಮಿಕ ಪಕ್ಷವನ್ನು) ಸ್ಥಾಪಿಸಿದರು. ಕಾರ್ಮಿಕರ ಹಿತಕ್ಕಾಗಿ & ರಾಜಕೀಯ ಅಧಿಕಾರಕ್ಕಾಗಿ ಸ್ಥಾಪಿಸಲ್ಪಟ್ಟ ಮೊದಲ ಮತ್ತು ಏಕೈಕ ರಾಜಕೀಯ ಪಕ್ಷ ಇದಾಗಿದೆ.
1937 ರಲ್ಲಿ ನಡೆದ ಚುನಾವಣೆಯಲ್ಲಿ ಈ ಪಕ್ಷವು ಬಾಂಬೆ ವಿಧಾನಸಭೆಗೆ ಸ್ಪರ್ಧಿಸಿದ್ದ 17 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ಭುತ ಯಶಸ್ಸನ್ನು ಗಳಿಸಿತು. ಜಾತಿ ಧರ್ಮಾದಾರಿತ ಚುನಾವಣೆಗಳ ಮಧ್ಯೆ ಶ್ರಮಿಕ ಆಧಾರಿತ ಪಕ್ಷವನ್ನು ಕಟ್ಟಿ ಯಶಸ್ಸನ್ನು ಕಂಡವರು ಬಾಬಾ ಸಾಹೇಬರು..

ಬಾಬಾಸಾಹೇಬರು 1937 ರಲ್ಲಿ ಬಾಂಬೆ ಅಸೆಂಬ್ಲಿಯಲ್ಲಿ ಜಮೀನುದಾರಿ ಪದ್ಧತಿಯ ರದ್ದತಿ ಮಸೂದೆಯನ್ನು ಮಂಡಿಸಿದರು. ಕಾರ್ಮಿಕರ ಮುಷ್ಕರ ಹಕ್ಕನ್ನು ನಿರಾಕರಿಸುವ ಕೈಗಾರಿಕಾ ವಿವಾದಗಳ ಮಸೂದೆಯನ್ನು ಅವರು ವಿರೋಧಿಸಿದರು. 1942 ರಿಂದ 1946 ರವರೆಗೆ ವೈಸ್ರಾಯ್ ರವರ ಕಾರ್ಯನಿರ್ವಾಹಕ ಮಂಡಳಿಯ ಕಾರ್ಮಿಕ ಸದಸ್ಯರಾಗಿದ್ದ ಅವಧಿಯಲ್ಲಿ ಕಾರ್ಮಿಕ ವಿಷಯಗಳ ಬಗ್ಗೆ ಬಾಬಾ ಸಾಹೇಬರ ಅವರು ಹೊಂದಿದ್ದ ಆಳವಾದ ಜ್ಞಾನವನ್ನು ಒಮ್ಮತವಾಗಿ ಅಂಗೀಕರಿಸಲಾಯಿತು. ಸರ್ಕಾರದ ಕಾರ್ಮಿಕ ನೀತಿಯ ಮೂಲ ರಚನೆಗೆ ಅಡಿಪಾಯ ಹಾಕುವ ಮೂಲಕ ಕಾರ್ಮಿಕ ಕಲ್ಯಾಣಕ್ಕಾಗಿ ಹತ್ತು ಹಲವಾರು ಶಾಸನ ರೂಪಿಸಿದರು..

8 ನವೆಂಬರ್ 1943 ರಂದು ಅಂಬೇಡ್ಕರ್ ಮಂಡಿಸಿದ ಭಾರತೀಯ ಟ್ರೇಡ್ ಯೂನಿಯನ್ ತಿದ್ದುಪಡಿ ಮಸೂದೆ, ಕಾರ್ಮಿಕ ಸಂಘಗಳನ್ನು ಅಂಗೀಕರಿಸುವಂತೆ ಒತ್ತಾಯಿಸಿತು. 8 ಫೆಬ್ರವರಿ 1944 ರಂದು ಕಲ್ಲಿದ್ದಲು ಗಣಿಗಳಲ್ಲಿ ಮಹಿಳೆಯರ ಉದ್ಯೋಗದ ಮೇಲಿನ ನಿಷೇಧವನ್ನು ತೆಗೆದು ಹಾಕುವ ಚರ್ಚೆಯ ಸಂದರ್ಭದಲ್ಲಿ ಶಾಸಕಾಂಗ ಸಭೆಯಲ್ಲಿ ಅಂಬೇಡ್ಕರ್ ರವರು “ಲಿಂಗತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು” ಎಂದು ವಾದಿಸಿದರು.
ಇದು ಒಂದು ಐತಿಹಾಸಿಕ ಕ್ಷಣ. ಗಣಿ ಹೆರಿಗೆ ಪ್ರಯೋಜನ ಮಸೂದೆ ಮಂಡಿಸುವ ಮೂಲಕ ಅವರು ಮಹಿಳಾ ಕಾರ್ಮಿಕರಿಗೆ ಗೌರವ ಮಾತೃತ್ವ ಸೌಲಭ್ಯಗಳೊಂದಿಗೆ ಭದ್ರತೆ ನೀಡಿದರು.

26 ನವೆಂಬರ್ 1945 ರಂದು ನವದೆಹಲಿಯಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅಂಬೇಡ್ಕರ್, ಪ್ರಗತಿಪರ ಕಾರ್ಮಿಕ ಕಲ್ಯಾಣ ಶಾಸನವನ್ನು ತರುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು: “ಸರಿಯಾದ ಕಾರ್ಮಿಕ ಶಾಸನ ಸಂಹಿತೆಯನ್ನು ಹೊಂದಲು ಬ್ರಿಟಿಷರು 100 ವರ್ಷಗಳನ್ನು ತೆಗೆದುಕೊಂಡರು ಎಂದು ಹೇಳಬಹುದು. ನಾವು ಭಾರತದಲ್ಲಿಯೂ 100 ವರ್ಷಗಳನ್ನು ತೆಗೆದುಕೊಳ್ಳಬೇಕು ಎಂಬ ವಾದವಿಲ್ಲ. ಇತಿಹಾಸ ಯಾವಾಗಲೂ ಒಂದು ಉದಾಹರಣೆಯಲ್ಲ. ಹೆಚ್ಚಾಗಿ ಇದು ಒಂದು ಎಚ್ಚರಿಕೆ” ಎಂದು ಹೇಳಿದರು. ಖಾಸಗಿ ಆಸ್ತಿಯನ್ನು ರದ್ದುಪಡಿಸುವುದರಿಂದ ಬಡತನ ಮತ್ತು ಸಂಕಟಗಳು ಅಂತ್ಯವಾಗಲಿದೆ ಎಂಬ ಮಾರ್ಕ್ಸ್ ನಿಲುವನ್ನು ಡಾ. ಅಂಬೇಡ್ಕರ್ ಒಪ್ಪಲಿಲ್ಲ. ಭಗವಾನ್ ಬುದ್ಧರ ಆರ್ಥಿಕ ನೀತಿಯನ್ನು ಎತ್ತಿ ಹಿಡಿದು ಬಹುತ್ವದ ಭಾರತದಲ್ಲಿ ಬುದ್ಧನ ಚಿಂತನೆಗಳೆ ಅಂತಿಮವೆಂದು ಪ್ರತಿಪಾದಿಸಿದರು.

  1. 1942 ರಲ್ಲಿ ವೈಸ್ ರಾಯ್ ಕೌನ್ಸಿಲ್ ನಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕೆಲಸದ ಸಮಯವನ್ನು 12 ಗಂಟೆಗಳಿಂದ 8 ಗಂಟೆಗಳ ವರೆಗೆ ಇಳಿಸಲು ಹೋರಾಡಿ ಯಶಸ್ಸು ಕಂಡರು.
  2. ಆರೋಗ್ಯ ವಿಮೆ ಯೋಜನೆ, ಕಾರ್ಮಿಕರ ರಾಜ್ಯ ವಿಮಾ, ತುಟ್ಟಿಭತ್ಯೆ, ಭವಿಷ್ಯ ನಿಧಿ, ಕನಿಷ್ಠ ವೇತನ ಸೌಲಭ್ಯ. ಕಾರ್ಮಿಕರಿಗೆ ವೈದ್ಯಕೀಯ ಆರೈಕೆ & ವೈದ್ಯಕೀಯ ರಜೆ ಸೌಲಭ್ಯ.
  3. ಮಹಿಳಾ ಮತ್ತು ಮಕ್ಕಳ ಕಾರ್ಮಿಕ ರಕ್ಷಣೆ ಕಾಯ್ದೆ ಮತ್ತು ಭಾರತೀಯ ಕಾರ್ಖಾನೆ ಕಾಯಿದೆ ಜಾರಿ ತಂದರು.
  4. ಗಣಿ ಹೆರಿಗೆ ಪ್ರಯೋಜನ ಕಾಯ್ದೆ, ಮಹಿಳಾ ಕಾರ್ಮಿಕ ಕಲ್ಯಾಣ ನಿಧಿ, ಮಹಿಳೆಯರು ಮತ್ತು ಮಕ್ಕಳ ಕಾರ್ಮಿಕ ಸಂರಕ್ಷಣಾ ಕಾಯ್ದೆ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ
  5. ಬ್ರಿಟಿಷ್ ಸರ್ಕಾರದಲ್ಲಿ ಕಾರ್ಮಿಕ ಸದಸ್ಯರಾಗಿದ್ದಾಗ ಭಾರತದಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳ ಸ್ಥಾಪನೆಯಲ್ಲಿ ಬಾಬಾಸಾಹೇಬರು ಪ್ರಮುಖ ಪಾತ್ರವಹಿಸಿದರು.
  6. 1942 ರಲ್ಲಿ ಭಾರತೀಯ ಕಾರ್ಮಿಕರ ಅಂಕಿ-ಅಂಶಗಳ ಕಾನೂನು ಜಾರಿಗೆ ತಂದರು.
  7. 31 ಜನವರಿ 1944 ರಲ್ಲಿ “ಕಲ್ಲಿದ್ದಲು ಗಣಿಗಾರಿಕೆ ಸುರಕ್ಷತೆ ತಿದ್ದುಪಡಿ ಬಿಲ್” ಜಾರಿಗೆ ತಂದರು.
  8. ಕೆಲಸದ ಸಮಯದಲ್ಲಿ ದೈಹಿಕವಾಗಿ ಅಂಗವಿಕಲರಾದರೆ ಅದಕ್ಕೆ ಪರಿಹಾರವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸುವ ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪನೆ. ಕಾರ್ಮಿಕ ಕಲ್ಯಾಣದ ವಿಷಯಗಳ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿಯ ರಚನೆಗೆ ಒತ್ತು ನೀಡಿದರು.
  9. 8 ಏಪ್ರಿಲ್ 1946 ರಂದು ಅಭ್ರಕ ಗಣಿ ಕಾರ್ಮಿಕ ಕಲ್ಯಾಣ ನಿಧಿಯನ್ನು ತಂದರು ಇದರಿಂದ ಕಾರ್ಮಿಕರಿಗೆ ವಸತಿ, ನೀರು ಸರಬರಾಜು, ಶಿಕ್ಷಣ, ಸಹಕಾರಿ ವ್ಯವಸ್ಥೆಗಳು ದೊರೆಯಿತು.
  10. 8 ನವೆಂಬರ್ 1943 ರಂದು ನೋಂದಣಿಯಾದ ಕಾರ್ಮಿಕ ಸಂಘಟನೆಗಳನ್ನು ಕಡ್ಡಾಯ ಗುರುತಿಸುವಿಕೆಗಾಗಿ ಭಾರತೀಯ ಟ್ರೇಡ್ ಯೂನಿಯನ್ಸ್ (ತಿದ್ದುಪಡಿ) ಜಾರಿಗೆ ತಂದರು.
  11. ಮಾರ್ಚ್ 1944 ರಲ್ಲಿ ಭಾರತದ ಅಭಿವೃದ್ಧಿಗೆ ಪ್ರಬಲ ತಾಂತ್ರಿಕ ಸಂಸ್ಥೆಯಾದ “ಸೆಂಟ್ರಲ್ ವಾಟರ್ ವೇ ಅಂಡ್ ಇರ್ರೀಗೇಷನ್ ಕಮಿಷನ್” ಅನುವೋದಿಸಿದರು. ಇಂದು ಕೃಷಿ ಪ್ರಧಾನವಾದ ನಮ್ಮ ರೈತ ಕುಟುಂಬದಲ್ಲಿ ಸಂತೋಷವಿರಲು ಮತ್ತು ನಮ್ಮ ಜಮೀನುಗಳು ಹಸಿರಿನಿಂದ ಕೂಡಿದ್ದರೆ ಅದಕ್ಕೆಲ್ಲ ಕಾರಣ ನೀರಾವರಿ, ವಿದ್ಯುತ್ ಯೋಜನೆಯಲ್ಲಿ ಬಾಬಾ ಸಾಹೇಬರು ತಗೆದುಕೊಂಡ ನಿರ್ಧಾರಗಳು..
  12. ಬಾಬಾ ಸಾಹೇಬರ ನೀರು ನಿರ್ವಹಣೆ ಪರಿಕಲ್ಪನೆ ಅತ್ಯದ್ಭುತವಾದದ್ದು. ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಸಮಥ೯ವಾಗಿ & ಸಮವಾಗಿ ಬಳಸಿಕೊಳ್ಳುವುದರಿಂದಷ್ಟೆ ದೇಶದ ಪ್ರಗತಿ ಸಾಧ್ಯವೆಂಬ ಪ್ರತಿಪಾದನೆ ಬಾಬಾ ಸಾಹೇಬರದ್ದಾಗಿತ್ತು.

ಬಂಡವಾಳಶಾಹಿ ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ಭಾರತಕ್ಕೆ ಬಾಬಾ ಸಾಹೇಬರ ಕಾರ್ಮಿಕ ವರ್ಗಗಳ ಚಿಂತನೆಗಳ ಮುಲಾಮಿನ ಮೂಲಕ ಮತ್ತೆ ಬೆವರಿನ ಭಾರತದ ಮರು ನಿರ್ಮಾಣ ಮಾಡಬೇಕಾಗಿರುವುದು ಇಂದಿನ ಸವಾಲಾಗಿದೆ… ರಾಷ್ಟ್ರ ನಿರ್ಮಾಣದಲ್ಲಿ ಅಸಂಖ್ಯಾತ ಅಸಂಘಟಿತ ಕಾರ್ಮಿಕರಿಗೆ, ಸಂಘಟಿತ ರೂಪದಲ್ಲಿ ಹಲವಾರು ಕೊಡುಗೆಯನ್ನು ನೀಡಿದ ಭಾರತದ ಕಾರ್ಮಿಕ ನಾಯಕರು, ಕಾರ್ಮಿಕ ಕಲ್ಯಾಣದ ಚಿಂತಕರು, ಕಾರ್ಮಿಕ ವರ್ಗದ ವಿಮೋಚಕರಾದ ಬಾಬಾ ಸಾಹೇಬರ ಚಿಂತನೆಗಳನ್ನು ಮರೆಮಾಚುತ್ತ ಇಂದು ಕಾರ್ಮಿಕರಿಗೆ ತಮ್ಮ ಹಕ್ಕುಗಳಿವೆಯೆಂಬ ಕನಿಷ್ಟ ಅರಿವಿಲ್ಲದಂತೆ ಸತ್ಯವನ್ನು ಮುಚ್ಚಿಟ್ಟು ಇರುವ ಕಾನೂನು & ಹಕ್ಕುಗಳನ್ನು ಮುಗಿಸಲೊರಟ ಸರ್ಕಾರಗಳಿಗೆ ಹೋರಾಟದ ಬಿಸಿ ಮುಟ್ಟಿಸುವುದಿರಲಿ, ಸರ್ಕಾರಗಳಿಗೆ ಕನಿಷ್ಟ ಪ್ರಶ್ನೆ ಮಾಡದೇ ಇರೋ ಪರಿಸ್ಥಿತಿಗೆ ಕಾರ್ಮಿಕರ ತಲೆದಂಡ ಮಾಡಲೊರಟಿರುವ ಬಂಡವಾಳಶಾಹಿವಾದಿಗಳ, ಯಥಾಸ್ಥಿತಿವಾದಿಗಳ ಮತ್ತು ಜಾತಿಗ್ರಸ್ಥ ಮನಸ್ಥಿತಿಗಳು ಭಾರತಕ್ಕೆ ವಿಶ್ವ ಜ್ಞಾನದ ಕಿರೀಟ ತೊಡಿಸಿದ ಬಾಬಾ ಸಾಹೇಬರನ್ನು ಜಾತಿ ಕನ್ನಡಕದಲ್ಲಿ ನೊಡುವಂತೆ ಮಾಡುವಲ್ಲಿ ಯಶಸ್ಸನ್ನ ಕಂಡು ವಿಕೃತಿ ಮೆರೆದು ಭವ್ಯ ಭಾರತವಾಗಬೇಕಿದ್ದ ದೇಶವನ್ನು ವಿನಾಶದತ್ತ ಕೊಂಡೊಯ್ಯುತಿವೆ.

ಕಾರ್ಮಿಕ ಕಾನೂನುಗಳು ಸಡಿಲಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ಮತ್ತೊಮ್ಮೆ ಬೆವರಿನ ಭಾರತ ಕಟ್ಟಲು ಶಾಲಾ-ಕಾಲೇಜುಗಳಲ್ಲಿ, ಯುವ ಜನರಲ್ಲಿ, ಕಾರ್ಮಿಕ ಸಂಘಟನೆಗಳಲ್ಲಿ ಬಾಬಾ ಸಾಹೇಬರು ಕಾರ್ಮಿಕರಿಗೆ & ಕಾರ್ಮಿಕ ಇಲಾಖೆಗೆ ನೀಡಿದ ಅನನ್ಯ ಕೊಡುಗೆಗಳ ಬಗ್ಗೆ ತಿಳಿಸಿ ಮತ್ತಷ್ಟು ಕಾರ್ಮಿಕ ಕಾನೂನುಗಳು ಗಟ್ಟಿಗೊಳ್ಳಲು ಹೋರಾಟಕ್ಕೆ ಪ್ರೇರೇಪಿಸಬೇಕಾಗಿರುವುದು ಕೂಡಾ ನಾಗರೀಕ ಸಮಾಜದ ಜವಬ್ದಾರಿಯೆಂದರಿತು ಈ ಲೇಖನವನ್ನು ತಮಗರ್ಪಿಸುತ್ತಿದ್ದೇನೆ.

ಜೈ ಭೀಮ್.. ನಮೋ ಬುದ್ಧಾಯಃ..

ಹೆತ್ತೇನಹಳ್ಳಿ ಮಂಜುನಾಥ್
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?