Saturday, April 20, 2024
Google search engine
Homeತುಮಕೂರ್ ಲೈವ್ರೈತರ ಕೈ ಹಿಡಿಯುತ್ತಾ ತುಮಕೂರು ಸ್ಮಾರ್ಟ್ ಸಿಟಿ?

ರೈತರ ಕೈ ಹಿಡಿಯುತ್ತಾ ತುಮಕೂರು ಸ್ಮಾರ್ಟ್ ಸಿಟಿ?

publicstory.in team

ತುಮಕೂರು: ನಗರ ಜನರಿಗಷ್ಟೇ ಅಲ್ಲದೇ ರಾಜ್ಯದ ಅದರಲ್ಲೂ ಜಿಲ್ಲೆಯ ರೈತರಿಗೆ ಬೆನ್ನೆಲುಬಾಗಿ ನಿಲ್ಲುವತ್ತ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹೆಜ್ಜೆ ಇಟ್ಟಿರುವುದು ಇಡೀ ದೇಶವೇ ಇತ್ತ ತಿರುಗಿ ನೋಡುವಂತಾಗಿದೆ. ಇದಕ್ಕಾಗಿ ಗಾಂಧಿಯನ್ ಆರ್ಥಿಕತೆ ಮಾರ್ಗ ಆಯ್ದುಕೊಂಡು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಸ್ಮಾರ್ಟ್ ಸಿಟಿ ತುಮಕೂರು ನಗರ ವ್ಯಾಪ್ತಿಗಷ್ಟೇ ಅನುಷ್ಠಾನ ಆಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಆದರೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಈ ಹಿಂದೆ ಜಿ.ಎಸ್.ಲೋಕಸಭಾ ಸದಸ್ಯರಾಗಿದ್ದಾಗ ಚಿಗುರೊಡೆದಿದ್ದ ಆರ್ಟಿಜನ್ ಹಬ್ ಕಲ್ಪನೆಗೆ ಇದೀಗ ಸ್ಕಿಲ್ ಪಾರ್ಕ್ ಹೆಸರಿನಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ.

ಈ ಸಂಬಂಧ ಡಿಸೆಂಬರ್ 5ರಂದು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪ್ರಾಥಮಿಕ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆ ಆಯೋಜಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಈ ಸಭೆಗೆ ತಾವು ಬರುವುದಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರೂ ಆಗಿರುವ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದು, ಸಭೆಗೆ ಮತ್ತಷ್ಟು ಬಲಬಂದಂತಾಗಿದೆ. ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸೇರಿದಂತೆ ಸ್ಮಾರ್ಟ್ ಸಿಟಿಯ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

ಜಾಗತೀಕರಣ, ಉದಾರೀಕರಣ, ಮುಕ್ತ ವ್ಯಾಪಾರದ ಪೈಪೋಟಿಗೆ ಸಿಲುಕಿ ಭಾರತೀಯ ರೈತರು ಬಸವಳಿದಿದ್ದಾರೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಪ್ರಧಾನಿ ನರೇಂದ್ರಮೋದಿ ಕನಸಿಗೆ ಕೈಜೋಡಿಸುವ ಸಲುವಾಗಿ ಅದನ್ನು ಮಾದರಿಯಾಗಿ ಅನುಷ್ಠಾನಕ್ಕೆ ತುರುವ ನಿಟ್ಟಿನಲ್ಲಿ ಗಾಂಧಿಯನ್ ಮಾರ್ಗದತ್ತ ತುಮಕೂರು ಸ್ಮಾರ್ಟ್ ಸಿಟಿ ಹೆಜ್ಜೆ ಇಟ್ಟಿರುವುದು ಅಚ್ಚರಿಯಾಗಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸ್ಕಿಲ್ ಪಾರ್ಕ್ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸಭೆಗಳನ್ನು ಸಂಸದ ಜಿ.ಎಸ್.,ಬಸವರಾಜ್ ನಡೆಸಿದ್ದಾರೆ. ದಿಶಾ ಸಮಿತಿಯಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ತುಮಕೂರು ನಗರ ಸುತ್ತಮುತ್ತಲಿನ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಗುರುತಿಸುವ ಕೆಲಸವೂ ನಡೆದಿದೆ.

ಸಂಸದರ ಕನಸಿಗೆ ಕೈ ಜೋಡಿಸಿದ ನಗರ ಶಾಸಕರು



ಸಂಸದ ಜಿ.ಎಸ್.ಬಸವರಾಜ್ ಕನಸಿಗೆ ತುಮಕೂರು ನಗರ ಕ್ಷೇತ್ರದ ಶಾಸಕರಾದ ಜ್ಯೋತಿಗಣೇಶ್ ಸಹ ಕೈ ಜೋಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ನೀಡಿರುವ ಹಣದ ಜತೆಗೆ ಹೆಚ್ಚುವರಿಯಾಗಿ ವಿಶೇಷ ಅನುದಾನ ನೀಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಸ್ಕಿಲ್ ಸಿಟಿಗೆ ಪೂರಕವಾಗಿ ಕೆ-ಟೆಕ್ ಯೋಜನೆಯಡಿ 7 ಕೋಟಿ ರೂಪಾಯಿ ಅನುದಾನ ನಗರಕ್ಕೆ ಮಂಜೂರಾಗಿದೆ. ಈ ಅನುದಾನದಲ್ಲಿ ಹರಿಯಾಣದಲ್ಲಿರುವ ನೆಫ್ಟೆಂ ವಿಶ್ವವಿದ್ಯಾಲಯದ ಮಾದರಿಯಲ್ಲಿ ತುಮಕೂರು ನಗರದಲ್ಲೂ ಅಗ್ರೋ ಬೇಸ್ಡ್ ವಿಶ್ವವಿದ್ಯಾಲಯ ಸ್ಥಾಪನೆಗೆ ಆಸಕ್ತಿವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಸ್ಕಿಲ್ ಪಾರ್ಕ್: ಸ್ಮಾರ್ಟ್ ಸಿಟಿ ಇರುವುದು ತುಮಕೂರು ನಗರಕ್ಕೆ. ಇವರಿಗೂ ರೈತರಿಗೆ ಏನ್ನಪ್ಪ ಸಂಬಂಧ ಎಂದು ಹುಬ್ಬೇರಿಸುವಂತಿಲ್ಲ. ರೈತರಿಗಾಗಿ ಸ್ಮಾರ್ಟ್ ಸಿಟಿ ಲಿಮಿಟೆಡ್ 20 ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಈ ಹಣದಲ್ಲಿ ಸ್ಕಿಲ್ ಸಿಟಿ ನಿರ್ಮಾಣ ಮಾಡುತ್ತಿದೆ. ಈ ಸ್ಕಿಲ್ ಸಿಟಿಯಲ್ಲಿ ಕೃಷಿ, ಹೈನೋದ್ಯಮ, ಗುಡಿ ಕೈಗಾರಿಕೆಗೆ ಸಂಬಂಧಿಸಿದಂತೆ 340 ಇನ್ನೋವೇಷನ್ (ಸಂಶೋಧನಾ ಕೇಂದ್ರಗಳನ್ನು) ಹಬ್ ಗಳನ್ನು ಸ್ಥಾಪಿಸಲಿದೆ.

ಇದಕ್ಕಾಗಿ ಈಗಾಗಲೇ ರಾಜ್ಯದ ವಿವಿಧ ಕಡೆಗಳಿಂದ ಕೃಷಿ ತಜ್ಞರಿಂದ, ಸಾಮಾಜಿಕ ಕಾಳಜ ಉಳ್ಳವರಿಂದ, ವ್ಯಾಪಾರಿಗಳಿಂದ, ಉದ್ಯಮಿಗಳಿಂದ ಪಟ್ಟಿಯನ್ನು ತರಿಸಿಕೊಳ್ಳಲಾಗಿದೆ. ನೂರಾರು ವಿಧಧ ಕೃಷಿಗೆ ಸಂಬಂಧಿಸಿದ ಬೆಳೆಗಳ ಪಟ್ಟಿ ಇದ್ದಿದ್ದು, ಅಂತಿಮವಾಗಿ 342 ಆಹಾರ ಧಾನ್ಯ, ಹೈನೋದ್ಯಮ, ತೋಟಗಾರಿಕೆ ಉತ್ಪನ್ನಗಳ ಪಟ್ಟಿ ತಯಾರಿಸಿ ಈ ಎಲ್ಲವುಗಳಿಗೆ ಪ್ರತ್ಯೇಕವಾಗಿ ಒಂದೊಂದು ಸಂಶೋಧನಾ ಕೇಂದ್ರಗಳನ್ನು ಸ್ಕಿಲ್ ಸಿಟಿಯಲ್ಲಿ ಸ್ಥಾಪಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.

ಈ 342 ಉತ್ಪನ್ನಗಳನ್ನು ಆಧರಿಸಿ ಸ್ಥಾಪನೆಯಾಗುವ ಸಂಶೋಧನಾ ಕೇಂದ್ರಗಳು ಈ ಉತ್ಪನ್ನಗಳ ಬೆಳೆ, ವೈಜ್ಞಾನಿಕ ಮಾಹಿತಿ, ಮಾರುಕಟ್ಟೆ, ರಫ್ತೋದ್ಯಮ, ಮೌಲ್ಯವರ್ಧನೆ ಮಾಡುವ ಬಗ್ಗೆ ಸಂಶೋಧನೆ ಮಾಡುತ್ತವೆ. ಪ್ರತಿ ಕೇಂದ್ರಗಳನ್ನು ಆಸಕ್ತ ರೈತರ ಗುಂಪುಗಳನ್ನು ರಚಿಸಿಕೊಂಡು ಆಯಾ ಉತ್ಪನ್ನಗಳನ್ನು ಬೆಳೆಸಿ ಅವುಗಳನ್ನೇ ಮೌಲ್ಯವರ್ಧನೆ ಮಾಡಿ ದೇಶಿ ಹಾಗೂ ವಿದೇಶಿ ಮಾರುಕಟ್ಟೆಯನ್ನು ಹಿಡಿಯಲು ರೈತರಿಗೆ ನೇರವಾಗಿ ನೆರವಾಗಲಿವೆ. ಈ ಕಲ್ಪನೆಯಲ್ಲಿ ಪ್ರತಿ ರೈತನು ಉದ್ಯಮಿಯೂ ಆಗಿರುತ್ತಾನೆ. ರೈತರ ಆದಾಯ ದುಪ್ಪಟ್ಟಿಗಿಂತಲೂ ಹೆಚ್ಚಾಗಲಿದೆ ಎಂದು ಅವರು ವಿವರಿಸಿದರು.

ದೇಶದಲ್ಲೇ ಮೊದಲ ಕಲ್ಪನೆ: ಸ್ಮಾರ್ಟ್ ಸಿಟಿಯ ಹಣವನ್ನು ಬಳಸಿಕೊಂಡು ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆ ದೇಶದಲ್ಲೇ ಇದೇ ಮೊದಲಾಗಿದ್ದು, ಇದೇ ದೇಶವೇ ಇತ್ತ ತಿರುಗಿನೋಡಲಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆ ಜಾರಿಯಾದ್ದಲ್ಲಿ ತುಮಕೂರು ನಗರದ ಹಾಗೂ ನಗರ ಸುತ್ತಮುತ್ತಲ ರೈತರಿಗೆ ಹೆಚ್ಚು ಅನುಕೂಲ ಸಿಗಲಿದೆ., ರಫ್ತೋದ್ಯಮದಿಂದ ಹಿಂದೆ ಬಿದ್ದಿರುವ ಜಿಲ್ಲೆ ಕೃಷಿ ಉತ್ಪನ್ನಗಳ ರಫ್ತೋದ್ಯಮದಲ್ಲಿ ಹೊಸ ಮೈಲುಗಲ್ಲು ಸಹ ಸಾಧಿಸಲಿದೆ. ಇದರಿಂದಾಗಿ ಇಡೀ ಜಿಲ್ಲೆಯ ಚಿತ್ರಣವೇ ಬದಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅತೀವ ಆಸಕ್ತಿ ತಳೆದ ಶಾಲಿನಿ ರಜನೀಶ್



ಸ್ಮಾರ್ಟ್ ಸಿಟಿ ಯೋಜನೆಯ ಮೂಲಕವೇ ತುಮಕೂರು ಜಿಲ್ಲೆಯನ್ನು ದೇಶದ ನಂ-1 ಕೃಷಿ ರಫ್ತೋಧ್ಯಮ ಜಿಲ್ಲೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾಗಿ ಶಾಲಿನಿ ರಜನೀಶ್ ತುಂಬಾ ಉತ್ಸುಕತೆ ತೋರಿದ್ದಾರೆ, ಇದಕ್ಕಾಗಿ ಅವರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಇದು ಸಂಸದ ಜಿ.ಎಸ್.ಬಸವರಾಜ್ ಅವರ ಕನಸು ಸಹ ಆಗಿದೆ ಎಂದು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಪಬ್ಲಿಕ್ ಸ್ಟೊರಿ.ಇನ್ ಗೆ ತಿಳಿಸಿದರು.
ಈ ನಿಟ್ಟಿನಲ್ಲಿ ಅಧಿಕಾರಿಗಳ ಹಂತದ ಪ್ರಾಥಮಿಕ ಮಟ್ಟದ ಸಭೆಯನ್ನು ಡಿಸೆಂಬರ್ 5ರಂದು ಕರೆಯಲಾಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತಾವೂ ಬರುವುದಾಗಿ ಶಾಲಿನಿ ರಜನೀಶ್ ತಿಳಿಸಿದ್ದಾರೆ. ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿರುವುದೇ ಇದಕ್ಕೆ ಕಾರಣ ಎಂದು ರಮೇಶ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?