ಕಳೆದಸಂಚಿಕೆಯಿಂದ……..
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿದ್ದಾಳೆ ಎನ್ನುವುದು ಪ್ರತೀತಿ. ಆದರೆ ಕೃಷ್ಣರವರ ಯಶಸ್ಸಿನ ಹಿಂದೆ ನಿಲ್ಲದೆ ಜೊತೆಜೊತೆಯಲ್ಲೇ ಇವರ ಪತ್ನಿ ಸವಿತಾರವರು ಇದ್ದಾರೆ.
‘ಕೃಷ್ಣರವರು ಇತರರಿಗಿಂತ ವಿಭಿನ್ನ ಸ್ವಭಾವದವರು ಎನ್ನುವುದನ್ನು ಬಿಟ್ಟರೆ ನನಗೆ ಹೆಚ್ಚಿಗೆ ಗೊತ್ತಿರಲಿಲ್ಲ. ವಿವಾಹವಾದ ನಂತರ ಇವರ ವ್ಯಕ್ತಿತ್ವ ನಿಧಾನವಾಗಿ ನನ್ನೆದುರು ತೆರೆದುಕೊಳ್ಳುತ್ತಾ ಹೋಯಿತು. ಹಾಗೆಯೇ ಇವರ ಮೇಲೆ ನನಗಿರುವ ಗೌರವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ವಿವಾಹದ ನಂತರ ನನ್ನ ಪದವಿಯ ಜೊತೆಗೆ ಸ್ನಾತಕೋತ್ತರ ಪದವಿ ಪಡೆಯಲು ಮಾರ್ಗದರ್ಶನ ಮಾಡಿದರು. ಸ್ವತಂತ್ರವಾಗಿ ಏನನ್ನಾದರೂ ಸಾಧಿಸಲು ಹಾಗೂ ಮಹಿಳಾ ಉದ್ಯಮಿ ಆಗುವ ನಿಟ್ಟಿನಲ್ಲಿ ಮಂಡ್ಯದಲ್ಲಿ ಸಣ್ಣ ಉದ್ಯಮವೊಂದನ್ನು ಸ್ಥಾಪಿಸಿ, ಇದರ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ನನಗೆ ಜವಾಬ್ದಾರಿ ಕೊಟ್ಟರು. ಇದಲ್ಲದೆ ಶಾರದಾ ಮಠದವರು ನಡೆಸುವ ನಿವೇದಿತಾ ಶಾಲೆಯಲ್ಲಿ ನಾನು ಸ್ವಯಂಸೇವಕಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಪತಿ ಕೃಷ್ಣರವರ ಪ್ರೋತ್ಸಾಹವೇ ಕಾರಣ’ ಎನ್ನುವುದು ಸವಿತಾರವರ ಮನದಾಳದ ಮಾತು.
ಕೃಷ್ಣರವರ ವ್ಯಕ್ತಿತ್ವವನ್ನು ಶ್ರೀಮತಿ ಸವಿತಾರವರು ವಿವರಿಸುವಂತೆ “ಯಾವುದೇ ನಾಟಕೀಯವಿಲ್ಲದ ಸಹಜ ವ್ಯಕ್ತಿತ್ವ ಅವರದು. ಎಲ್ಲರೂ ಹೊರಗಡೆ ಸಮಾಜದಲ್ಲಿ ಅವರನ್ನು ಹೇಗೆ ನೋಡುತ್ತಾರೋ ಅದೇ ಅವರ ಮೂಲ ವ್ಯಕ್ತಿತ್ವ,
ಅಂದರೆ ಮೇಲ್ನೋಟಕ್ಕೆ ಒಂದು ತರಹ, ಒಳಗೆ ಇನ್ನೊಂದು ತರಹ ಇರುವವರಲ್ಲ. ಅವರ ವ್ಯಕ್ತಿತ್ವದ ಮುಖ್ಯ ಲಕ್ಷಣ ಎಂದರೆ ಅವರು ಬಹಳ ಸರಳ ಜೀವಿ, ಅನಗತ್ಯ ಆಡಂಬರ ಅವರಿಗೆ ಇಷ್ಟವಿಲ್ಲ. ಎಷ್ಟು ಅಗತ್ಯವೋ ಅಷ್ಟೇ ಸಾಕು ಎನ್ನುವ ಮನೋಭಾವದವರು. ಮುಖ್ಯವಾಗಿ ಅವರಿಗೆ ವಸ್ತುಗಳ ಮೇಲೆ ಅನಗತ್ಯ ಪ್ರೀತಿಯಿಲ್ಲ. ಅತಿ ಅವಶ್ಯವಾದ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುತ್ತಾರೆ. ಆಡಂಬರಕ್ಕಾಗಿ ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನೂ ಕೊಂಡವರಲ್ಲ. ಹಾಗೆಯೇ ಅವಶ್ಯವಿರುವ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಹಿಂದು ಮುಂದು ನೋಡಿದವರಲ್ಲ” ಎಂದು ಮುಕ್ತವಾಗಿ ಹೇಳುತ್ತಾರೆ.
ಡಾ. ಕೃಷ್ಣರವರ ನಡೆ-ನುಡಿ, ಊಟ, ಜೀವನ ಶೈಲಿ, ಎಲ್ಲವೂ ಸರಳ. ‘ಹಿತಮಿತ ಮೃದುವಚನ ಗಂಭೀರ ಸುಂದರ ವೇಷಂ’ ಎಂಬ ಮಾತಿಗೆ ಪ್ರತೀಕದಂತೆ ಬದುಕುತ್ತಿದ್ದಾರೆ.
ಖಾದಿ ಬಟ್ಟೆ ಬಿಟ್ಟರೆ ಬೇರೆ ಬಟ್ಟೆಯನ್ನು ಇವರು ಧರಿಸುವುದಿಲ್ಲ. ಬಿಳಿಯ ಅಂಗಿಯನ್ನು ಬಿಟ್ಟರೆ ಬೇರೆ ಬಣ್ಣದ ಅಂಗಿಗಳನ್ನು ಧರಿಸುವುದಿಲ್ಲ. ಇವರು ಎಂದೂ ಕಛೇರಿಯ ಕೆಲಸವನ್ನು ಮನೆಗೆ ತಂದವರಲ್ಲ. ಕುಟುಂಬದ ನೆಮ್ಮದಿಯನ್ನು ಕೆಡಿಸಿಕೊಂಡವರಲ್ಲ. ದೇಹಿ ಎಂದು ಸಹಾಯ ಕೇಳಿಕೊಂಡು ಬಳಿ ಬಂದವರನ್ನು ಇವರೆಂದೂ ನಿರಾಸೆಗೊಳಿಸಿಲ್ಲ ಎನ್ನುತ್ತಾರೆ ಸವಿತಾ.
ನಮ್ಮ ವಿವಾಹ 1991ರಲ್ಲಿ ನೆರವೇರಿದ್ದು, ಅಂದಿನಿಂದ ಇಲ್ಲಿ ಯವರೆಗಿನ ನಮ್ಮ ಬದುಕನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ ‘ಅವರಂತಹ ಉನ್ನತ ವ್ಯಕ್ತಿತ್ವ ದವರು ನನಗೆ ಪತಿಯಾಗಿ ದೊರಕಿದ್ದು ನನ್ನ ಭಾಗ್ಯ’ ಎಂದು ಗೌರವದಿಂದಲೇ ಹೇಳುತ್ತಾರೆ.
ಮುಂದುವರೆಯುವುದು…….