Friday, April 26, 2024
Google search engine
Homeಜೀವನ ಚರಿತ್ರೆಶಿಸ್ತಿನ ಸಿಪಾಯಿ : ‌ವೂಡೇ ಪಿ ಕೃಷ್ಣ

ಶಿಸ್ತಿನ ಸಿಪಾಯಿ : ‌ವೂಡೇ ಪಿ ಕೃಷ್ಣ

ಕಳೆದ ಸಂಚಿಕೆಯಿಂದ……..

ಸದಾ ದೃಢ ಚಿತ್ತ, ದೃಢ ಸಂಕಲ್ಪ, ದೃಢ ವಿಶ್ವಾಸ ಹೊಂದಿದ ಹಸಿರು ಚೇತನವೂ, ಶಿಸ್ತಿನ ಸಿಪಾಯಿಯೂ ಆಗಿರುವ ಕೃಷ್ಣರು ಸದಾ ಕ್ರಿಯಾಶೀಲರು. ಅವರ ಮನೆ ಯಾವಾಗಲೂ ಕನ್ನಡಿಯಂತೆ ಹೊಳೆಯುತ್ತಿರುತ್ತದೆ. ಆದರೆ ಅವರ ಮನೆಯಲ್ಲಿ ಯಾರೂ ಕೆಲಸಗಾರರಿಲ್ಲ ! ಪತಿ-ಪತ್ನಿ ಇಬ್ಬರೇ ಮನೆಯನ್ನು ಶುಚಿ ಮಾಡುತ್ತಾರೆ ಎಂಬುದು ಆಶ್ಚರ್ಯವಾದರೂ ಸತ್ಯ.

ಒಂದು ಕಡೆ ಹಿರಿಯ ಸ್ವಾತಂತ್ರ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ ಹೇಳುತ್ತಾರೆ: ಕೃಷ್ಣರವರು ಬಂದು ‘ಚೆನ್ನಮ್ಮನವರ ಆತ್ಮಕತೆ’ ಪುಸ್ತಕಗಳನ್ನು ತಾವೇ ಎತ್ತಿಕೊಂಡು ಹೋಗಿ ಅವರ ಗಾಡಿಯಲ್ಲಿ ಇಟ್ಟರಂತೆ. ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಈ ಕೆಲಸ ಮಾಡಿದರಲ್ಲ, ಎಂತಹ ಉದಾತ್ತ ವ್ಯಕ್ತಿತ್ವ ಎಂದು ಮೂಕವಿಸ್ಮಿತರಾದರಂತೆ ಚೆನ್ನಮ್ಮನವರು.

ಪ್ರತಿದಿನ ತಾವು ಮಾಡಬೇಕಾದ ಕೆಲಸದ ಪಟ್ಟಿಯನ್ನು ಬೆಳಿಗ್ಗೆ-ಸಾಯಂಕಾಲ ತಾವೇ ಸಿದ್ಧಪಡಿಸುವ ಕೃಷ್ಣರ ಗುಣ ನಿಜಕ್ಕೂ ಅನುಕರಣೀಯ. ಮನುಷ್ಯ ಸುಖಾ ಸುಮ್ಮನೆ ಬದುಕಬಾರದು. ಆದರೆ ಬಾಳಬೇಕು, ಬಾಳಿದರೆ ಕೃಷ್ಣರ ರೀತಿ ಬಾಳಬೇಕೆಂಬುದು ಕೃಷ್ಣರ ಸ್ನೇಹ ವಲಯದ ಅಭಿಮತ.

ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಪೊಲೀಸ್ ಪಡೆ ವಿದ್ಯಾರ್ಥಿಮಿತ್ರರ ಮುಷ್ಕರ ಸದ್ದಡಗಿಸಲು ಪ್ರಯತ್ನಿಸಿದಾಗ ಕಾಲೇಜಿನ ಅಂದಿನ ಪ್ರಾಂಶುಪಾಲರು ಹಾಗೂ ಆಡಳಿತ ವರ್ಗದ ವಿರುದ್ಧ ಡಾ. ಕೃಷ್ಣರವರು ಧ್ವನಿ ಎತ್ತಿದ ಆ ದಿನವನ್ನು ಇವರ ಸ್ನೇಹ ಬಳಗ ಇಂದೂ ನೆನಪಿಸಿಕೊಳ್ಳುತ್ತದೆ.

ವಿದ್ಯಾರ್ಥಿಗಳ ತೊಂದರೆಗಳಿಗೆ ಸ್ಪಂದಿಸುವ ಇವರ ವಿನೂತನ ಗುಣವೇ ಇಂದು ಇವರನ್ನು ಶಿಕ್ಷಣ ಕ್ಷೇತ್ರದ ಒಬ್ಬ ಅಪ್ರತಿಮ ಆಡಳಿತಗಾರರನ್ನಾಗಿ ರೂಪಿಸಿದೆ.

ಇವರು ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದು ಯಶಸ್ಸನ್ನು ಕಾಣಲೇಬೇಕು ಎಂಬ ಛಲ ಇದೆ. ಇವರು ಆಯಾ ಸಂಘಸಂಸ್ಥೆಗಳಿಗೆ ಅಗತ್ಯವಾದ ಸೌಲಭ್ಯ, ಸಲಕರಣೆಗಳನ್ನು ತಕ್ಷಣವೇ ವ್ಯವಸ್ಥೆ ಮಾಡಿಕೊಡುವುದರಿಂದ ಇವರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಶೀಘ್ರ ಪ್ರಗತಿ ಸಾಧ್ಯವಾಗಿದೆ. ಸದಾ ಸಮಾಜಸೇವೆಗೆ ಹಾತೊರೆಯುವ ಇವರ ನಾಡಿಮಿಡಿತ ಅಡಗಿರುವುದೇ ಇವರ ಕ್ರಿಯಾಶೀಲತೆಯಲ್ಲಿ. ಒಬ್ಬ ಮಾದರಿ ಸ್ವಯಂ ಸೇವಕನ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಇವರು ತಮ್ಮ ಪೂರ್ವಜರ ಸಾಧನೆ, ಹಿರಿಮೆಗರಿಮೆಗಳ ಪ್ರತೀಕವಾಗಿದ್ದಾರೆ. ಸರ್. ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಅನೇಕ ಅಪರೂಪದ ಮಾಹಿತಿಗಳು, ಚಿತ್ರಗಳನ್ನೊಳಗೊಂಡ ಉತ್ತಮ ಜೀವನ ಚರಿತ್ರೆಯ ಪುಸ್ತಕ ಸೇರಿದಂತೆ ಹಲವಾರು ಪುಸ್ತಕಗಳನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬರೆದಿದ್ದಾರೆ. ಜೊತೆಗೆ 1988ರಿಂದ 1990ರವರೆಗೆ ‘ಬ್ರಹ್ಮವಾಣಿ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ತಮ್ಮ ವೈಚಾರಿಕ ಗುರು ರಾಜಾ ರಾಮ್‌ ಮೋಹನ್ ರಾಯ್‌ರ ನೆನಪನ್ನು ಶಾಶ್ವತವಾಗಿರಿಸಲು ಡಬ್ಲ್ಯೂ. ಹೆಚ್. ಹನುಮಂತಪ್ಪನವರು 1978ರಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ರಾಜಾ ರಾಮ್‌ ಮೋಹನ್ ರಾಯ್ ಅವರ ಅಮೃತಶಿಲೆಯ ಪ್ರತಿಮೆಯನ್ನು ಕಲ್ಕತ್ತಾದಲ್ಲಿ ಮಾಡಿಸಿ ತಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಆಗಿನ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ್‌ರಿಂದ ಅನಾವರಣ ಮಾಡಿಸಿದರು. ಮೇ 22ರಂದು ರಾಜಾ ರಾಮ್‌ಮೋಹನ್ ರಾಯ್‌ರವರ ಜನ್ಮ ದಿನಾಚರಣೆಯಂದು ಪ್ರತಿಮೆಗೆ ಹಾರ ಹಾಕಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ವೂಡೇ ಮನೆತನದ ಡಬ್ಲ್ಯೂ ಹೆಚ್. ಹನುಮಂತಪ್ಪ (ಜೂನಿಯರ್)ನವರಿಂದ ಹಿಡಿದು ಡಬ್ಲ್ಯೂ ಹೆಚ್. ದೇವಕುಮಾರ್, ಡಬ್ಲ್ಯೂ. ಹೆಚ್. ಪುಟ್ಟಯ್ಯನವರು ಮತ್ತು ಅವರ ಮಕ್ಕಳಾದ ಡಾ. ಕೃಷ್ಣರವರು ನಡೆಸಿಕೊಂಡೇ ಬರುತ್ತಿದ್ದಾರೆ.

ಮುಂದುವರೆಯುವುದು…….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?