ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅಕ್ರಮವಾಗಿ ನಕಲಿ ಸ್ತ್ರೀ ಸಂಘಗಳನ್ನು ರಚಿಸಿ ಚುನಾವಣೆಯಲ್ಲಿ ಲಾಭ ಪಡೆಯಲು ಮುಂದಾಗಿದ್ದು, ಇವುಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸರ್ಕಾರವೇ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಬೇಕು. ಇಂಥ ಸಂಘಗಳಿಗೆ ಸರ್ಕಾರದ ಮಾನ್ಯತೆ ಸಿಗಲಿದೆ. ಆದರೆ ಶಾಸಕರು ಚುನಾವಣೆ ದೃಷ್ಠಿಯಿಂದ ಮಹಿಳೆಯರ ಕಣ್ಣಿಗೆ ಮಣ್ಣೆರಚಲು ಯತ್ನಿಸುತ್ತಿದ್ದಾರೆ. ಈ ಸಂಘಗಳಿಗೆ ಸರ್ಕಾರದಿಂದ ಸಾಲ ಕೊಡಿಸುತ್ತೇನೆ. ಸಂಘ ರಚಿಸಿಕೊಳ್ಳಿ ಎಂದು ದುಂಬಾಲು ಬೀಳುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಎಚ್ಚರವಹಿಸಬೇಕು. ಸರ್ಕಾರದ ಹೆಸರಿನಲ್ಲಿ ನಕಲಿ ಸಂಘಗಳ ರಚಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
![](https://publicstory.in/wp-content/uploads/2022/12/img-20221222-wa00147505203709182129195-1024x682.jpg)
ಈ ಶಾಸಕರು ಕಳೆದ ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಕಲಿ ಬಾಂಡ್ ವಿತರಿಸಿದ್ದರು. ನಕಲಿ ಕೊರೊನಾ ವ್ಯಾಕ್ಸೀನ್ ನೀಡಿಸಿದ್ದಾರೆ ಎಂಬ ಆರೋಪವೂ ಇದೆ. ಇವುಗಳ ತನಿಖೆಯೂ ನಡೆಯುತ್ತಿದೆ. ಅಮಾಯಕ ಮಹಿಳೆಯರು, ಎಳೆ ಮಕ್ಕಳಿಗೆ ಮೋಸ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಅಮಾಯಕ ಮಹಿಳೆಯರೇ ಈ ಶಾಸಕರ ಗುರಿಯಾಗಿದ್ದಾರೆ. ಯಾರೇ ಮಹಿಳಾ ಸಂಘಟನೆಗಳನ್ನು ರಚಿಸಿಕೊಳ್ಳಬೇಕಾದರೆ ಜಿಲ್ಲಾ ಪಂಚಾಯತಿ ಸಿಇಒ ಅವರನ್ನು ಕಾಣಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚಿಸಬೇಕು. ನಕಲಿ ಸಂಘ ರಚಿಸುವಂತೆ ಶಾಸಕರು ಅಥವಾ ಅವರ ಕಡೆಯವರು ಒತ್ತಡ ಹಾಕಿದರೆ ಕೂಡಲೇ ಜಿ.ಪಂ. ಸಿಇಒ ಅಥವಾ ಪೊಲೀಸರಿಗೆ ದೂರು ನೀಡಬೇಕು ಎಂದು ಕರೆ ನೀಡಿದರು.
![](https://publicstory.in/wp-content/uploads/2022/12/img-20221222-wa0019447688383375080833-1024x682.jpg)
ಬಿಜೆಪಿ ಮಹಿಳಾ ಸದಸ್ಯೆಯರು ಈ ಬಗ್ಗೆ ಗಮನ ಕೊಡಬೇಕು. ಮಹಿಳಾ ಸಂಘಗಳ ಹೆಸರಿನಲ್ಲಿ ಹಲವು ಕುಟುಂಬಗಳು ಒಡೆದಿವೆ. ಕೆಲವರು ಊರು ತೊರೆದಿದ್ದಾರೆ ಎಂದರು.
![](https://publicstory.in/wp-content/uploads/2022/12/img-20221222-wa00282533450627530394361-1024x682.jpg)
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶಗೌಡರು, ಮಹಿಳೆಯರಿಗೆ ಮೋಸ ಮಾಡಲು ಬಿಡಬಾರದು ಎಂದು ಕರೆ ನೀಡಿದರು.
ಕಳೆದ ಸಲ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಮಕ್ಕಳಿಗೆ ನಕಲಿ ಬಾಂಡ್ ನೀಡಿ ಚುನಾವಣಾ ಅಕ್ರಮ ನಡೆಸಲಾಯಿತು. ಈ ಸಲವೂ ಇಂಥ ನಕಲಿ ಆಟವನ್ನು ಶಾಸಕರು ಈಗಾಗಲೇ ಆರಂಭಿಸಿದ್ದಾರೆ. ಇದನ್ನು ತಾಯಂದಿರು ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
ಸಭೆಯಲ್ಲಿ ಮಹಿಳಾ ಮೋರ್ಚಾದ ಗ್ರಾಮಾಂತರದ ಅಧ್ಯಕ್ಷೆ ರೇಣುಕಮ್ಮ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾದ ನಾಗರತ್ನಮ್ಮ, ಊರು ಕೆರೆ ಜಿ.ಪಂ. ಮಾಜಿ ಸದಸ್ಯೆ ಶಿವಮ್ಮ ನಾಗರಾಜು, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ರತ್ನಮ್ಮ, ಕವಿತಾ ರಮೇಶ್, ಮಮತಾ ಕಾಂತರಾಜು, ಎಪಿಎಂಸಿ ಸದಸ್ಯೆಯರಾದ ಪುಟ್ಟಲಕ್ಷ್ಮಮ್ಮ, ರತ್ನಮ್ಮ, ಟೂಡಾ ಸದಸ್ಯೆ ವೀಣಾ ಶಿವಕುಮಾರ್, ವಿವಿಧ ಗ್ರಾ.ಪಂ. ಅಧ್ಯಕ್ಷೆಯರಾದ ಸಿದ್ದಗಂಗಮ್ಮ,, ಅನುಸೂಯಮ್ಮ, ರಾಜೇಶ್ವರಿ, ಮುದ್ದಮ್ಮ, ವಿಜಯಲಕ್ಷ್ಮಿ, ಕವಿತಾ, ಕಲ್ಪನಾ, ಧನಲಕ್ಷ್ಮಿ, ಶಶಿಕಲಾ, ಮಧು, ಯಮುನಾ, ಆರ್.ಮಂಜುಳಾ, ಕಲಾವತಿ, ಅನಿತಾ, ಭಾಗ್ಯಮ್ಮ, ಇತರರು ಇದ್ದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ಶಂಕರಣ್ಣ, ಮುಖಂಡರಾದ ಸಿದ್ದೇಗೌಡ ಇತರರು ಇದ್ದರು.