ಮಾನವನು ಪ್ರಕೃತಿಯ ಒಂದು ಭಾಗವಾಗಬೇಕು. ಪ್ರತಿಯೊಬ್ಬರು ಸಹ ಪರಿಸರದೊಂದಿಗೆ ಬೆರೆತು ಸಹಜೀವನವನ್ನು ನಡೆಸುವುದರ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕು. ಪ್ರಕೃತಿಯು ಮಾನವನ ಅಗತ್ಯತೆಗಳನ್ನು ಪೂರೈಸುತ್ತದೆ ಹೊರತು ದುರಾಸೆಯನ್ನಲ್ಲ. ಆದ್ದರಿಂದ ನಾವುಗಳು ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ಸುಸ್ಥಿರ ಬದುಕಿನತ್ತ ದಾಪುಗಲುಗಳನ್ನು ಇಡಬೇಕಾಗುತ್ತದೆ. ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ ಕರಿಯಣ್ಣ ರವರು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸ್ನಾತಕ ಸಮಾಜಕ್ಕಾಗಿ ವಿಭಾಗ ಮತ್ತು ಚಿಗುರು ಯುವಜನ ಸಂಘದ ಸಂಯೋಜನೆಯಲ್ಲಿ ಆಯೋಜಿಸಲಾಗಿದ್ದ ಹವಾಗುಣ ಬದಲಾವಣೆ ಮತ್ತು ಯುವಜನರು ಎಂಬ ವಿಷಯದ ಕುರಿತು ಯುವಜನರೊಂದಿಗೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಯುವ ಸಮುದಾಯಕ್ಕೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅಮಲಗೊಂದಿ ರವರು ಮಾತನಾಡಿ, ಚಿಗುರು ಯುವಜನ ಸಂಘವು ಪರಿಸರಕ್ಕೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿದ್ದು, ಯುವಜನರಿಗೆ ಪರಿಸರದ ಬಗೆಗಿನ ಪ್ರಜ್ಞೆಯನ್ನು ಮೂಡಿಸುತ್ತಿದೆ. ರಾಷ್ಟ್ರೀಯ ದಿನದ ಅಂಗವಾಗಿ ಯುವಜನರಿಗೆ ಹವಾಗುಣ ಬದಲಾವಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅನೇಕ ಶಾಲಾಕಾಲೇಜುಗಳಲ್ಲಿ ಅಭಿಯಾನವನ್ನು ಮಾಡಲಾಗುತ್ತಿದೆ. ಮಾನವರ ಅನೇಕ ಚಟುವಟಿಕೆಗಳಿಂದ ಹಸಿರು ಮನೆ ಅನಿಲಗಳು ಹೆಚ್ಚಾದ ಪರಿಣಾಮವಾಗಿ ತಾಪಮಾನ ಹೆಚ್ಚಾಗಿ ಪ್ರಸ್ತುತವಾಗಿ ಭೂಮಿಗೆ ಜ್ವರ ಬಂದಿದೆ. ಇದು ಯುವಜನ ಆರೋಗ್ಯ ಉದ್ಯೋಗ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇಂದು ಜಾಗತಿಕ ತಾಪಮಾನದಿಂದ ಹವಾಗುಣದಲ್ಲಿ ಬದಲಾವಣೆಯು ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ವ್ಯಕ್ತಿಯಿಂದ ಹಿಡಿದು ವಿಶ್ವದವರೆಗೆ ವೈಯಕ್ತಿಕವಾಗಿ, ಸಂಘಟಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯ ಸ್ಥಿತಿ ಬಂದಿದೆ. ಮಾನವರ ಜೀವನಶೈಲಿಯಿಂದ ಕೊಳ್ಳುಬಾಕ ಸಂಸ್ಕೃತಿಯು ಹೆಚ್ಚುತ್ತಿದೆ. ಇದು ಪರಿಸರ ನಾಶಕ್ಕೆ ಮೂಲ ಕಾರಣವಾಗಿದೆ. ಭಾರತದಲ್ಲಿ ವ್ಯಕ್ತಿಗಳ ಇಂಗಾಲದ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ಪ್ರತಿ ವರ್ಷ ಪ್ರತಿ ವ್ಯಕ್ತಿಯ ಇಂಗಾಲದ ಉತ್ಪಾದನೆಯು 750 ಕೆಜಿಯಷ್ಟಿದೆ. ಇದನ್ನು ಕಡಿಮೆ ಮಾಡುವುದ ಜೊತೆ ಸುಸ್ಥಿರ ಅಭಿವೃದ್ಧಿಗಾಗಿ ಸರ್ಕಾರಗಳನ್ನು ಸಾಮೂಹಿಕವಾಗಿ ಒತ್ತಾಯಿಸಬೇಕಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಹವಾಗುಣ ಬದಲಾವಣೆಯ ಬಗ್ಗೆ ಕ್ವಿಜ್ ಮಾಡುವ ಮೂಲಕ ಹವಾಗುಣ ಬದಲಾವಣೆಗೆ ಕಾರಣಗಳು ಮತ್ತು ಅದರಿಂದಾಗುವ ಪರಿಣಾಮಗಳನ್ನು ಚರ್ಚಿಸಲಾಯಿತು. ಜೀವನಶೈಲಿ ಬದಲಾವಣೆಯಿಂದ ಜಾಗತೀಕ ತಾಪಮಾನವನ್ನು ಹೇಗೆಲ್ಲಾ ಕಡಿಮೆಮಾಡಬಹುದೆಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹೇಮಂತ್ ಕುಮಾರ್ ಕೆ ಪಿ, ಪ್ರಹ್ಲಾದ ಜಿ ಮತ್ತು ಸಮಾಜ ಕಾರ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.