Publicstory/prajayoga

ತುಮಕೂರು: ಇಂದು ಇಡೀ ವಿಶ್ವದಲ್ಲಿಯೇ ಭಾರತದ 75 ನೇ ಸ್ವಾತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ಉತ್ಸಾಹ ಮತ್ತಷ್ಟು ಇಮ್ಮಡಿಗೊಳ್ಳಬೇಕಾದರೆ ನಾವೆಲ್ಲರೂ ಸ್ವಾತಂತ್ರ ಹೋರಾಟಗಾರರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ತಿಳಿಸಿದರು.
ನಗರದ ಬಟವಾಡಿಯಲ್ಲಿರುವ ಸ್ಪಂದನ ಬುದ್ಧಿಮಾಂಧ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಸಿಹಿ ಹಂಚುವ ಮೂಲಕ ವಿಭಿನ್ನವಾಗಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಷ ವಾಕ್ಯವಿದೆ. ಆದರೆ ದೇಶದ ನೈಸರ್ಗಿಕ ಸಂಪತ್ತಾಗಲಿ, ಅರ್ಥಿಕ ಸಂಪತ್ತಿನಲ್ಲಾಗಲಿ ತಳ ಸಮುದಾಯಗಳು ಪಾಲು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ. ಮೀಸಲಾತಿಯನ್ನು ಭೀಕ್ಷೆ ಎಂಬಂತೆ ಕೆಲವರು ಭಾವಿಸಿ, ಅದರಲ್ಲಿ ಪಾಲು ಪಡೆಯಲು ನಾ ಮುಂದು, ತಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಯೋಜನೆಯಲ್ಲ. ಅದು ತಲತಲಾಂತರದಿಂದ ಶೋಷಿತ ಸಮುದಾಯಗಳು ಅನುಭವಿಸಿಕೊಂಡಿದ್ದ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಸಾಮಾಜಿಕ ಸಮಾನತೆಗಾಗಿ ತಂದ ಆಸ್ತç. ಇದನ್ನು ಯುವಜನತೆ ಅರ್ಥ ಮಾಡಿಕೊಂಡು ಮುನ್ನೆಡೆಯಬೇಕಾಗಿದೆ.ದಲಿತ ಯುವಕನೊಬ್ಬ ಕುಡಿಯುವ ನೀರಿನ ಪಾತ್ರೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕರೇ ಹೊಡೆದು ಕೊಂದಿರುವ ಘಟನೆ ನಮ್ಮ ಮುಂದಿದೆ.ಇAತಹ ಘಟನೆಗಳು ಮರುಕಳಿಸಬಾರದೆಂದರೆ ನಾವೆಲ್ಲರೂ ಒಗ್ಗೂಡಿ, ಜಾತಿಯ ವಿಷ ಬೀಜ ಬಿತ್ತುವ ವ್ಯಕ್ತಿಗಳ ವಿರುದ್ದ ಹೋರಾಡಬೇಕಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಮಧುಸೂಧನ್ ಮಾತನಾಡಿ, ಹಲವಾರು ಗಣ್ಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ನಮಗೆ ಲಭಿಸಿದೆ. ವ್ಯಾಪಾರಕ್ಕಾಗಿ ಬಂದ ವಿದೇಶಿ ಕಂಪನಿಗಳು ನಮ್ಮಲ್ಲಿರುವ ಒಡಕನ್ನೇ ಬಂಡವಾಳ ಮಾಡಿಕೊಂಡು, ದೇಶವನ್ನು ಇಂಚಿಂಚು ಕಬಳಿಸಿ, ದೇಶದ ಪ್ರಾಕೃತಿಕ ಸಂಪತ್ತನ್ನು ನಾಶ ಮಾಡಿದ್ದಲ್ಲದೆ, ಇಡೀ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಾಗ ಮಾಡಿ, ನೆಮ್ಮದಿ ಇಲ್ಲದಂತೆ ಮಾಡಿದರು. ಆದರೆ ಭಾರತ ಇಂದು ವಿಶ್ವದ ಐದನೇ ಅತಿ ದೊಡ್ಡ ಅರ್ಥಿಕ ಶಕ್ತಿಯಾಗಿದೆ. ಇದರ ಲಾಭ ಸಾಮಾನ್ಯ ಜನತೆಗೆ ತಲುಪಿದಾಗ ಮಾತ್ರ ನಿಜವಾದ ಸ್ವಾತಂತ್ರದ ಕನಸು ನನಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ನಗರ ಅಧ್ಯಕ್ಷ ಮನೋಜ್ ಟಿ.,ದಲಿತ ಕ್ರಿಯಾಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಸುರೇಶ್, ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶಾರು, ನಗರ ಗೌರವಾಧ್ಯಕ್ಷ ಗಂಗಾಧರ್ ಜಿ.ಆರ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಎನ್.ಶ್ರೀನಿವಾಸ್,ಗುರುಪ್ರಸಾದ್.ಟಿ.ಆರ್,ದಿವಾಕರ್,ಸ್ಪಂದನ ಬುದ್ದಿ ಮಾಂಧ್ಯ ಮಕ್ಕಳ ಸನಿವಾಸ ಶಾಲೆಯ ಶಿಕ್ಷಕರಾದ ಸುಜಾತ ಜಿ.ಆರ್, ಮಹಾಂತೇಶ್ ಎಂ, ನಟರಾಜ್.ಟಿ, ತೇಜಾನಂದ.ಎನ್., ನರಸಿಂಹರಾಜು ಟಿ.ಎನ್, ಪವಿತ್ರ ಎಸ್, ನಳಿನ ಕೆ.ಎಸ್, ಲಕ್ಷ್ಮಮ್ಮ ಜಿ.ಎಚ್ ಮತ್ತಿತರರು ಉಪಸ್ಥಿತರಿದ್ದರು.