Publicstory/prajayoga
![](https://publicstory.in/wp-content/uploads/2022/08/save_20220822_1241186094014515874682062.jpg)
ಸಮಸ್ತ ಭಾರತೀಯರು 75ನೇ ಸವಿ ನೆನಪಿನ ದಿನಕ್ಕಾಗಿ ಆಚರಣೆಗಾಗಿ ಸಕಲ ಸಿದ್ಧತೆಗಳೊಂದಿಗೆ ಕಾದು ಕುಳಿತಿದ್ದರು. ಅದಕ್ಕೆ ಮುನ್ನ ದಿನ ಇಡೀ ದೇಶವೇ ತಲೆ ತಗ್ಗಿಸುವ ಘಟನೆ ನಡೆದುಹೋಗಿತ್ತು. ರಾಜಸ್ಥಾನದ ಜೋಧ್ ಪುರ್ ಸಮೀಪದ ಖಾಸಗಿ ಶಾಲೆಯಲ್ಲಿ ಚೈನ್ ಸಿಂಗ್ ಎಂಬ ಶಿಕ್ಷಕ ದಲಿತ ಬಾಲಕನನ್ನು ಅಮಾನುಷವಾಗಿ ಥಳಿಸಿ ಕೊಂದು ಹಾಕಿದ್ದು. ಕುಡಿಯುವ ನೀರಿನ ಕೊಡ ಮುಟ್ಟಿದ್ದೇ ಕೊಲೆಗೆ ಕಾರಣವಾಗಿಹೋಯ್ತು. ಈಗಿನ್ನು ಚಿಗುರುತ್ತಿದ್ದ ದೇಶದ ಭವಿಷ್ಯದ ಕುಡಿ ಅಸ್ಪೃಶ್ಯತೆಯ ಮಹಾಮಾರಿಗೆ ಸಿಲುಕಿ ಕಮರಿಹೋದದ್ದು ಮನುಕುಲಕ್ಕೆ ನಾಚಿಗೆಯ ಸಂಗತಿ.
ಈ ಘಟನೆ 500 ವರ್ಷಗಳ ಹಿಂದಿದ್ದ ಅಸ್ಪೃಶ್ಯತೆಯ ಕಾಲಘಟ್ಟ ಜೀವಂತವಾಗಿದೆ ಎಂಬುದನ್ನು ಕನ್ನಡೀಕರಿಸಿದೆ. ಮಕ್ಕಳ ಮುಗ್ಧತೆಗೆ ಎಂಥವರೂ ಕರಗುತ್ತಾರೆ. ಅಂತಹದ್ದರ ನಡುವೆ ಗುರುಬ್ರಹ್ಮ ಎನ್ನುವ ಪದನಾಮ ಸ್ಥಾನದಲ್ಲಿ ಕುಳಿತ ಶಿಕ್ಷನೊಬ್ಬ ಥಳಿಸಿ ಕೊಂದಿರುವುದು ಹೇಯ. ನಾನೊಬ್ಬ ಶಿಕ್ಷನಾಗಿ ಈ ಘಟನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಚೈನ್ ಸಿಂಗ್ ಎಂಬ ವ್ಯಕ್ತಿ ಶಿಕ್ಷಕನಾಗಲು ಯೋಗ್ಯನಲ್ಲ. ದೇಶದಲ್ಲಿ ಸುಶಿಕ್ಷಿತ ಸಮುದಾಯವೇ ಅಸ್ಪೃಶ್ಯತೆಯ ಆಚರಣೆ ಜೀವಂತವಾಗಿಸಿಟ್ಟರೆ, ಸಾಮಾಜಿಕ ಅರಿವಿರದವರ ಕಥೆ ಇನ್ನು ಹೇಳತಿರದು!
ನಾವೆಲ್ಲರೂ ಒಂದೇ ಎಂಬ ಭಾವನೆ ಬರುವುದು ಯಾವಾಗ? ತಾಯಿ ಗರ್ಭದಿಂದ ಜನಿಸುವಾಗ ಯಾವುದೇ ಧರ್ಮ, ಜಾತಿಯಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದು 75 ವಸಂತಗಳು ಕಳೆದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದನ್ನು ನೋಡಿದರೆ, ಶ್ರೇಷ್ಠ ಮತ್ತು ಕನಿಷ್ಠತೆ ಎಂಬ ರೋಗಕ್ಕೆ ಶಾಶ್ವತ ಚಿಕಿತ್ಸೆ ಬೇಕಿದೆ.
ಆ ಆಸಾಮಿ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆ ಕಾಯ್ದೆ 302 ಐಪಿಸಿ ಅಡಿ ಕೊಲೆ ಪ್ರಕರಣ ದಾಖಲಾಗಿದೆ. ಇದರಿಂದ ನ್ಯಾಯವೇನೂ ದೊರಕುವುದಿಲ್ಲ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವೆಲ್ಲವುಗಳಿಗೂ ಪರಿಹಾರವೆಂದರೆ “ಕುವೆಂಪು ಸಾರಿರುವ ವಿಶ್ವಮಾನವತೆ ಹಾಗೂ ಪಂಪನ ಮನುಜ ಜಾತಿ ತಾನೊಂದೆ ವಲಂ ಮಂತ್ರಗಳು ಮಾತ್ರ.
![](https://publicstory.in/wp-content/uploads/2022/08/img-20220822-wa0009445697754114039393-1024x919.jpg)
ಬರಹ ಲೇಖಕರದ್ದು, ವೆಬ್ಸೈಟ್ನ ಅಭಿಪ್ರಾಯವಲ್ಲ