Publicstory/prajayoga
ತುರುವೇಕೆರೆ :ತಾಲೂಕಿನ ವ್ಯಾಪ್ತಿಯ ಕೊಂಡಜ್ಜಿ -ಸೊಪ್ಪನಹಳ್ಳಿ ನಡುವಿನ ಸೇತುವೆ ಬಳಿ ನೀರಿನ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಹೋದ ವ್ಯಕ್ತಿಗಾಗಿ ಅಗ್ನಿಶಾಮಕ ದಳ ಶೋಧನ ಕಾರ್ಯ ಮುಂದುವರೆಸಿದ್ದಾರೆ.
ತಿಪಟೂರು ತಾಲೂಕು ಗಡಬನಹಳ್ಳಿ ನಿವಾಸಿಗಳಾದ ಪುಟ್ಟಸಿದ್ದಯ್ಯ (65)) ಹಾಗೂ ಅವರ ಸೋದರ ಪಟೇಲ್ ಕುಮಾರಸ್ವಾಮಿ(68) ಸಂಬಂಧಿಕರ ಮದುವೆಗೆ ತೆರಳಲು ಕೊಂಡಜ್ಜಿ ಮಾರ್ಗವಾಗಿ ಬುಧವಾರ ರಾತ್ರಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಕೊಂಡಜ್ಜಿ ಹಳ್ಳದಲ್ಲಿ ಹರಿಯುತ್ತಿದ್ದ ಮಳೆಯ ನೀರಿನ ರಭಸಕ್ಕೆ ಕಾರು ಸಹಿತ ಪಟೇಲ್ ಕುಮಾರಸ್ವಾಮಿ ಕೊಚ್ಚೊಹೋಗುವ ಮೂಲಕ ಕತ್ತಲಲ್ಲೇ ಕಣ್ಮರೆಯಾಗಿದ್ದಾರೆ. ಅದೇ ಕಾರಿನಲ್ಲಿದ್ದ ಪುಟ್ಟಸಿದ್ದಯ್ಯ ಕಾರಿನಿಂದ ಜಿಗಿದು ನೀರು ಹರಿಯುತ್ತಿದ್ದ ದಿಕ್ಕಿನಲ್ಲಿ ಎದುರಾದ ಮರದ ಕೊಂಬೆಯನ್ನಿಡಿದು ಜೀವ ಉಳಿಸಿಕೊಂಡಿದ್ದಾರೆ.
ಹಳ್ಳದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವೆ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಧ್ವನಿಯನ್ನು ಆಲಿಸಿದ ಸ್ಥಳಿಯರಾದ ಕೊಂಡಜ್ಜಿವಿಶ್ವನಾಥ್, ಆನಂದ್ ಮತ್ತು ಗೆಳೆಯರು ಸಹಾಯಕ್ಕೆ ಮುಂದಾಗಿದ್ದಾರೆ. ಹಳ್ಳದಲ್ಲಿ ಕೊಂಬೆಯನ್ನಿಡಿದು ಜೀವ ರಕ್ಷಿಸುವಂತೆ ಕೂಗಿಕೊಳ್ಳುತ್ತಿದ್ದ ಪುಟ್ಟ ಸಿದ್ದಯ್ಯನನ್ನು ಪತ್ತೆ ಹಚ್ಚಿದ್ದಾರೆ. ಜೀವ ಭಯ ತೊರೆದು ಅಪಾಯದಲ್ಲಿದ್ದ ಪುಟ್ಟಸಿದ್ದಯ್ಯನ ಪ್ರಾಣವನ್ನು ರಕ್ಷಿಸಿದ್ದಾರೆ.
ಕಾರು ಸಹಿತ ಸಹೋದರ ಪಟೇಲ್ಕುಮಾರಸ್ವಾಮಿ ಕೊಚ್ಚಿಹೋದ ವಿಚಾರವನ್ನು ಪುಟ್ಟಸಿದ್ದಯ್ಯನಿಂದ ತಿಳಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಸಹಾಯದೊಂದಿಗೆ ಶೋಧನ ಕಾರ್ಯಕ್ಕೆ ಮುಂದಾಗಿದ್ದಾರೆ. ಬುಧವಾರ ಎಡೆಬಿಡದೇ ಸುರಿಯುತ್ತಿದ್ದ ಮಳೆ ಹಾಗೂ ಕತ್ತಲು ಶೋಧ ಕಾರ್ಯಕ್ಕೆ ತೊಡಕಾದ ಹಿನ್ನಲೆಯಲ್ಲಿ ಶೋಧ ಕಾರ್ಯ ಸ್ಥಗಿತಗೊಳಿಸಿದ್ದರು.
ಗುರುವಾರ ಬೆಳಿಗ್ಗಿನಿಂದ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮಹಾಲಿಂಗ ಎಸ್ ಅವರ ಮಾರ್ಗದರ್ಶನದಲ್ಲಿ ಬೋಟ್ ಹಾಗೂ ಕ್ರೇನ್ ಬಳಕೆ ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳದಲ್ಲಿ ಉಪವಿಭಾಗಾಧಿಕಾರಿ ಕಲ್ಪಶ್ರೀ,ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಇ.ಈ.ಸತೀಶ್ ಕುಮಾರ್ ತಂದ ಸ್ಥಳದಲ್ಲಿ ಬೀಡು ಬಿಟ್ಟಿದೆ.

ಘಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ , ಎಸ್.ಪಿ.ರಾಹುಲ್ ಕುಮಾರ್ ಶಹಾಪುರ್ ವಾಡ್ ಹಾಗೂ ಸಿ.ಇ.ಓ. ವಿದ್ಯಾಕುಮಾರಿ ರವರೊಂದಿಗೆ ಶಾಸಕ ಮಸಾಲಜಯರಾಮ್ ಭೇಟಿ ನೀಡಿ ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆಯೇ ಶೋಧ ಕಾರ್ಯ ಕುರಿತು ಸಮಲೋಚನೆ ನಡೆಸಿದರು.