ತುಮಕೂರು: ಕರ್ನಾಟಕ ಸರ್ಕಾರವು ಜನನ ಮತ್ತು ಮರಣ ಸಮರ್ಥನಾ ಪತ್ರಗಳನ್ನು ಪಡೆಯಲು ಸಿವಿಲ್ ನ್ಯಾಯಾಲಯದ ಕಾರ್ಯವ್ಯಾಪ್ತಿಯಿಂದ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗೆ ಅಧಿಕಾರ ವಹಿಸಿರುವುದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿ ವಕೀಲರ ಸಂಘದಿಂದ ಪ್ರತಿಭಟನಾ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.
![](https://publicstory.in/wp-content/uploads/2022/07/img-20220725-wa00059196520825240295597.jpg)
![](https://publicstory.in/wp-content/uploads/2022/07/img-20220725-wa00052340625714400646278.jpg)
ಜತೆಗೆ ಮಧ್ಯವರ್ತಿಗಳ ಹಾವಳಿಗೆ ಸಾರ್ವಜನಿಕರು ತುತ್ತಾಗುವ ಸಾಧ್ಯತೆ ಇದ್ದು, ವಕೀಲರಿಗೂ ಈ ಕಾಯ್ದೆ ಮಾರಕವಾಗಲಿದೆ. ಕಾಯ್ದೆಯ ತಿದ್ದಪಡಿ ಅಧಿಸೂಚನೆಯನ್ನು ಸರ್ಕಾರ ಹಿಂಪಡೆಯುವಂತೆ ಜಿಲ್ಲಾ ವಕೀಲರ ಸಂಘ ತೀವ್ರವಾಗಿ ಒತ್ತಾಯಿಸಿದೆ.
ಈಗಾಗಲೇ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕಂದಾಯ ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ಬಾಕಿ ಇದ್ದು, ಅವುಗಳನ್ನು ಇತ್ಯರ್ಥಗೊಳಿಸಲು ವಿಳಂಬವಾಗುತ್ತಿದೆ. ಆದ್ದರಿಂದ ಸರ್ಕಾರವು ಹಸ್ತಕ್ಷೇಪ ಮಾಡದೆ ಜನನ ಮತ್ತು ಮರಣ ಸಮರ್ಥನಾ ಪತ್ರವನ್ನು ಪಡೆಯಲು ಕಾಯ್ದೆಯ ವ್ಯಾಪ್ತಿಯನ್ನು ಹಿಂದಿನಂತೆಯೇ ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿ ಉಳಿಸಿಕೊಳ್ಳಬೇಕೆಂದು ಜಿಲ್ಲಾ ವಕೀಲರ ಸಘ ಆಗ್ರಹಿಸಿದೆ.
ಪ್ರತಿಭಟನೆ ನೇತೃತ್ವವನ್ನು ಸಂಘದ ಅಧ್ಯಕ್ಷರಾದ ದೊಡ್ಮನೆ ಗೋಪಾಲಗೌಡ, ಪ್ರಧಾನ ಕಾರ್ಯದರ್ಶಿಯಾದ ಡಿ.ಸಿ.ಹಿಮಾನಂದ, ಉಪಾಧ್ಯಕ್ಷರಾದ ವೆಂಕಟೇಶ್, ಜಂಟಿ ಕಾರ್ಯದರ್ಶಿ ಕೆ.ಎಲ್.ಭಾರತಿ, ಖಚಾಂಚಿ ಎಸ್.ಸುರೇಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್.ಮಮತಾ, ಡಿ.ಎಚ್.ಮಾರುತಿ, ರಾಮಕೃಷ್ಣಯ್ಯ, ರಾಮಾಂಜನೇಯ, ಲಕ್ಷ್ಮೀಶ್, ಷಣ್ಮುಖ, ಎಸ್. ಮಂಜುನಾಥ್, ಇತರರು ಇದ್ದರು.