Saturday, July 20, 2024
Google search engine
HomeUncategorizedಏಕಾಏಕಿ ಸುರೇಶಗೌಡರ ರಾಜೀನಾಮೆಗೆ ಕಾರಣ ಏನು?

ಏಕಾಏಕಿ ಸುರೇಶಗೌಡರ ರಾಜೀನಾಮೆಗೆ ಕಾರಣ ಏನು?

Public story.in


ತುಮಕೂರು: ಕಲ್ಪತರುನಾಡಿನಲ್ಲಿ ಬಿಜೆಪಿಗೆ ಭದ್ರಬುನಾದಿ ಹಾಕಿಕೊಟ್ಟಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರು ಏಕಾಏಕಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಈ ನಡೆಯ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರವನ್ನು ಹೊರಹಾಕುತ್ತಿದ್ದಾರೆ.

ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಲ್ಲಿ ಸುರೇಶಗೌಡರು ಒಬ್ಬರು. ಸುರೇಶಗೌಡರನ್ನು ರಾಜೀನಾಮೆ ಕೊಡಿಸುವ ತಂತ್ರ ಹೆಣೆಯುವ ಮೂಲಕ ಪಕ್ಷದ ಮೇಲೆ ಬಿ.ಎಸ್.ಯಡಿಯೂರಪ್ಪ ಅವರ ಹಿಡಿತವನ್ನು ಕಳಚುವ ಪ್ರಯತ್ನಕ್ಕೆ ತುಮಕೂರಿನಿಂದಲೇ ಚಾಲನೆ ನೀಡಲಾಗಿದೆಯೇ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಕೇಳಿಬರತೊಡಗಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಕಷ್ಟ ಬಂದಾಗಲೆಲ್ಲ ಅವರು ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದರು. ಅಧಿಕಾರ ಸಿಗಲೀ, ಅಧಿಕಾರ ಕಳೆದುಕೊಳ್ಳಲಿ ಏನೇ ಆದರೂ ಮಠಕ್ಕೆ ಬಂದು ಆರ್ಶೀವಾದ ಪಡೆಯುವ ಕೆಲಸವನ್ನು ಯಡಿಯೂರಪ್ಪ ಮಾಡುತ್ತಾ ಬಂದಿದ್ದರು. ಯಡಿಯೂರಪ್ಪ ಅವರ ಧಾರ್ಮಿಕ ಶಕ್ತಿ ಕೇಂದ್ರವಾದ ತುಮಕೂರಿನಿಂದಲೇ ಅವರ ಬೆಂಬಲಿಗರಾದ ಸುರೇಶಗೌಡರ ರಾಜೀನಾಮೆ ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಯಡಿಯೂರಪ್ಪನವರೇ ಖುದ್ದು ಆಸಕ್ತಿವಹಿಸಿ ತುಮಕೂರು ಜಿಲ್ಲಾ ಘಟಕಕ್ಕೆ ಸುರೇಶಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು, ಸಂಸದ ಜಿ.ಎಸ್.ಬಸವರಾಜ್ ಅವರನ್ನು ಕರೆಸಿಕೊಂಡು ಇಬ್ಬರು ಜೊತೆಗೂಡಿ ಪಕ್ಷ ಕಟ್ಟುವಂತೆ ಹೇಳಿದ್ದರು. ಈಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗಾದೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಸುರೇಶಗೌಡ ಅವರು ಸಹ ಅಧಿಕಾರದಿಂದ ಕೆಳಗೆ ಇಳಿದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಪಕ್ಷದ ಕೆಲಸಗಳ ಕಾರಣ ತಮ್ಮ ಕ್ಷೇತ್ರದ ಜನರೊಂದಿಗೆ ಸದಾ ಕಾಲ ಇರಲು ಸಾಧ್ಯವಾಗುತ್ತಿರಲಿಲ್ಲ. ಕ್ಷೇತ್ರದ ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಸದಾ ಕಾಲ ಇರುವಂತೆ ಮನಸ್ಸು ಹೇಳುತ್ತಿದೆ. ಮನಸಿ‌ನ ಮಾತಿಗೆ ಓಗೊಟ್ಟು ರಾಜೀನಾಮೆ ನೀಡಿರುವುದಾಗಿ ಸುರೇಶಗೌಡರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದ ಕೆಲಸಗಳಿಂದ ಬಿಡುವು ಮಾಡಿಕೊಂಡು ಅವರು ಕ್ಷೇತ್ರದಲ್ಲಿ ಮತ್ತಷ್ಟು ಗಟ್ಟಿಯಾಗಲು ಇದರಿಂದ ಅವಕಾಶವೂ ಸಿಕ್ಕಿದಂತಾಗಿದೆ. ಆದರೆ ಸುರೇಶಗೌಡರ ರಾಜೀನಾಮೆ ಪಕ್ಷಕ್ಕೆ ಹಿನ್ನಡೆಯೇ ಆಗಲಿದೆ, ಮುಂದೆ ಬರುವ ವಿಧಾನ ಪರಿಷತ್ ಚುನಾವಣೆ, ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯ ಮೇಲೆ ಇದರ ಪರಿಣಾಮ ನಿಚ್ಚಳವಾಗಿ ಕಂಡುಬರಲಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ಲೆಕ್ಕಾಚಾರ ಮಂಡಿಸಿದರು.

ಬಿಜೆಪಿ ಜಿಲ್ಲಾ ಘಟಕದಲ್ಲಿ ಎಲ್ಲವೂ ಸರಿ ಇಲ್ಲ. ಮನೆಯೊಂದು ಮೂರು ಬಾಗಿಲು ಎಂಬಂಥ ಪರಿಸ್ಥಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ,ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಮಾಜಿ ಸಚಿವ ಸೊಗಡು ಶಿವಣ್ಣ ಹೀಗೆ ಗುಂಪು-ಗುಂಪಾಗಿ ಒಡೆದು ಹೋಗಿದೆ. ಇಂಥ ಸ್ಥಿತಿಯಲ್ಲಿ ಪಕ್ಷದ ನೂತನ ಸಾರಥ್ಯ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?