Saturday, July 27, 2024
Google search engine
Homeತುಮಕೂರು ಲೈವ್ರೈತರು ಉತ್ಪಾದಿಸುವ ವಿದ್ಯುತ್‌ಗೆ ಸಹಾಯಧನ: ಡಿಸಿ ವೈ.ಎಸ್. ಪಾಟೀಲ್

ರೈತರು ಉತ್ಪಾದಿಸುವ ವಿದ್ಯುತ್‌ಗೆ ಸಹಾಯಧನ: ಡಿಸಿ ವೈ.ಎಸ್. ಪಾಟೀಲ್

ತುಮಕೂರು ಗ್ರಾಮಾಂತರ: ರೈತರು ತಮ್ಮ ಜಮೀನುಗಳಲ್ಲಿ ಪುನರ್ ನವೀಕರಿಸಬಹುದಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ ೨೦ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಗ್ರಾಮಾಂತರದ ನಾಗವಲ್ಲಿಯಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಉಜ್ವಲ ಭಾರತ- ಉಜ್ವಲ ಭವಿಷ್ಯ ವಿದ್ಯುಚ್ಚಕ್ತಿ ೨೦೪೭ ಎಂಬ ಶೀರ್ಷಿಕೆಯಡಿ ಗುರುವಾರ ನಡೆದ ವಿದ್ಯುತ್ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ೨೦೪೭ಕ್ಕೆ ಭಾರತಕ್ಕೆ ಸ್ವಾತಂತ್ರ‍್ಯ ಲಭಿಸಿ ೧೦೦ ವರ್ಷಗಳಾಗುವ ಹಿನ್ನೆಲೆಯಲ್ಲಿ ಭಾರತವು ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ ಮತ್ತು ಪವನ ಶಕ್ತಿಗಳ ಮೂಲಕ ವಿದ್ಯುತ್ ಸ್ವಾವಲಂಬನೆಯನ್ನು ಹೊಂದುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದರು.

ನಮ್ಮ ರಾಜ್ಯವು ೨೫-೩೦ ವರ್ಷಗಳ ಹಿಂದೆ ಬರೀ ೭೦೦ ಮೆಗಾವ್ಯಾಟ್ ವಿದ್ಯುತ್ತನ್ನಷ್ಟೇ ಉತ್ಪಾದಿಸಲು ಶಕ್ತವಾಗಿತ್ತು. ಇಂದು ೯೦೦೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಬಳಿ ೧೩ಸಾವಿರ ಎಕರೆ ಭೂ ಪ್ರದೇಶದಲ್ಲಿ ರಾಜ್ಯದಲ್ಲಿಯೇ ಬೃಹತ್ ಪ್ರಮಾಣದ ಸೋಲಾರ್ ಪಾರ್ಕ್ ಸ್ಥಾಪಿಸಲಾಗಿದೆ. ೪೦೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಈಗ ೨೧೦೦ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ. ವಿಜಯಪುರದ ಕೂಡಿಗಿ ಅಣು ವಿದ್ಯುತ್ ಸ್ಥಾವರದಲ್ಲಿ ೨೪೦೦ ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದರು.

ಸುಮಾರು ಏಳೆಂಟು ವರ್ಷಗಳ ಹಿಂದೆ ದಿನಕ್ಕೆ ೧೨ ಗಂಟೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇಂದು ೨೨ ಗಂಟೆಗಳ ಕಾಲ ಪೂರೈಸುವಷ್ಟು ವಿದ್ಯುತ್ ಲಭ್ಯವಿದೆ. ಆದರೆ ವಿದ್ಯುತ್ ಪೂರೈಸಲು ಡಿಸ್ಟ್ರಿಬ್ಯೂಶನ್ ಲೈನ್ ಮತ್ತು ವಿತರಣ ಕೇಂದ್ರಗಳಿಗೆ ರೈತರು ಜಾಗ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಇರುವ ಅಡಚಣೆಯಿದ್ದು, ರೈತರು ವಿದ್ಯುತ್ ಇಲಾಖೆಯವರಿಗೆ ಅಗತ್ಯ ಸಹಕಾರ ನೀಡಬೇಕೆಂದರು.

ರೈತರು/ ನಾಗರೀಕರಿಗೆ ವಿದ್ಯುತ್ ಕುರಿತ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಸೂಕ್ತ ವೇದಿಕೆಯನ್ನು ಒದಗಿಸಿದ್ದು, ಪ್ರತಿ ತಿಂಗಳ ಮೂರನೇ ಶನಿವಾರದಂದು “ವಿದ್ಯುತ್ ಅದಾಲತ್” ನಡೆಸುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮುಂದೆ ಈ ದೇಶವನ್ನು ಮುನ್ನೆಡೆಸುವವರು ವಿದ್ಯಾರ್ಥಿಗಳು. ವಿದ್ಯುತ್ ಉತ್ಪಾದನೆ, ಉತ್ಪಾದನಾ ಮೂಲಗಳು, ವಿದ್ಯುತ್ ಸದ್ಬಳಕೆ, ಅಪವ್ಯಯವನ್ನು ತಡೆಗಟ್ಟುವ ಕುರಿತು ಅರಿವನ್ನು ಬೆಳೆಸಿಕೊಳ್ಳಬೇಕು. ಅವಶ್ಯಕತೆ ಇಲ್ಲದಿರುವ ಕಡೆ ವಿದ್ಯುತ್ ವ್ಯರ್ಥವಾಗುತ್ತಿದ್ದರೆ ಅದನ್ನು ಉಳಿಸುವುದನ್ನು ಕಲಿಯಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ ವಿದ್ಯುತ್ ನಿತ್ಯ ಜೀವನಕ್ಕೆ ಅತ್ಯವಶ್ಯಕ. ಭಾರತದಲ್ಲಿಯೇ ಮೊದಲ ಬಾರಿಗೆ ೧೯೦೪ರಲ್ಲಿ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಉತ್ಪಾದಿಸಿದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ. ಕೇಂದ್ರ ಸರ್ಕಾರವು ೨೦೪೭ರ ವೇಳೆಗೆ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದಿಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಲಾಗಿದೆ ಎಂದರು.

ಜಲವಿದ್ಯುತ್, ಥರ್ಮಲ್ ವಿದ್ಯುತ್ ಸ್ಥಾವರಗಳ ವಿದ್ಯುತ್ ಉತ್ಪಾದನೆ ದುಬಾರಿ ವೆಚ್ಚ ತಗಲುವುದರೊಂದಿಗೆ ಅದರಿಂದಾಗುವ ಅವಘಢಗಳು ಬೀಕರ ಪರಿಣಾಮವನ್ನುಂಟು ಮಾಡುತ್ತದೆ. ಜನರು ಮನೆಗಳ ತಾರಸಿ, ಕಟ್ಟಡಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆ ಮಾಡಬಹುದು. ಸರ್ಕಾರ ಸಹಾಯಧನವನ್ನು ನೀಡುತ್ತದೆ ಎಂದರು.

ನವೀಕರಿಸಬಹುದಾದ ಸಂಪನ್ಮೂಲಗಳಾದ ಸೌರ, ಪವನ ಶಕ್ತಿಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ನಮ್ಮ ದೇಶ, ರಾಜ್ಯ, ಜಿಲ್ಲೆ, ಗ್ರಾಮಗಳು ವಿದ್ಯುತ್ ಸ್ವಾವಲಂಬಿ ಆಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಮಹೋತ್ಸವ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಇನ್ನಷ್ಟು ಜನಕ್ಕೆ ತಲುಪಿಸಬೇಕೆಂದು ತಿಳಿಸಿದರು.
ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಎಲ್ ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರವು ೨೦೪೭ರ ವೇಳೆಗೆ ಪುನರ್ ನವೀಕರಿಸಬಹುದಾದ ಮೂಲಗಳಾದ, ಪರಿಸರಕ್ಕೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಸೌರ ಮತ್ತು ಪವನ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ. ಈಗಾಗಲೇ ಪಾವಗಡ ತಾಲೂಕಿನ ನಾಗಲಮಡಿಕೆಯಲ್ಲಿ ಬೃಹತ್ ಸೋಲಾರ್ ಪಾರ್ಕ್ ಕಾರ್ಯನಿರ್ವಹಿಸುತ್ತಿದೆ. ಇದನ್ನು ತಾಲೂಕುವಾರು ವಿಸ್ತರಿಸುವ ಯೋಜನೆಯಿದೆ ಎಂದರು.

ಕೇಂದ್ರ ಸರ್ಕಾರವು ಸಾರ್ವಜನಿಕ ಉಪಯೋಗಕ್ಕಾಗಿ ದೀನ ದಯಾಳ್ ಉಪಾಧ್ಯಾಯ್ ಗ್ರಾಮೀಣ್ ಜ್ಯೋತಿ ಯೋಜನೆಯನ್ನು ತಂದು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದೆ. ರಾಜ್ಯ ಸರ್ಕಾರ ಬೆಳಕು ಯೋಜನೆಯಡಿ ಬಿಪಿಎಲ್ ಪಡಿತರದಾರರ ಮನೆ-ಮನೆಗೆ ವಿದ್ಯುತ್ ಒದಗಿಸುವ ಯೋಜನೆಯಾಗಿದ್ದು, ೧೦ ಸಾವಿರ ಕುಟುಂಬಗಳಲ್ಲಿ ೬ ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು.

ದೀನ್ ದಯಾಳ್ ಉಪಾಧ್ಯಾಯ್ ಗ್ರಾಮೀಣ ಜ್ಯೋತಿ ಮತ್ತು ಬೆಳಕು ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಬೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ ಕುಮಾರ್, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಜಿ. ಸೇರಿದಂತೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?